Tuesday 31 March 2015

ಬಡವನಾದರೆ ಏನು ಪ್ರಿಯೆ / Badavanaadare Enu Priye


ಬಡವನಾದರೆ ಏನು ಪ್ರಿಯೆ ಕೈ ತುತ್ತು ತಿನಿಸುವೆ
 ಎದೆಯ ತುಂಬ ಒತ್ತಿಕೊಂಡು ಮುತ್ತು ಮಳೆಯ ಸುರಿಸುವೆ
 ನನ್ನ ಎದೆಯ ರಾಜ್ಯದಲ್ಲಿ ನೀನು ರಾಣಿಯಾಗುವೆ
 ಪುಟ್ಟ ಗುಡಿಸಲಲ್ಲಿ ನಿನ್ನ ಪಟ್ಟದರಸಿ ಮಾಡುವೆ
 ಉಳ್ಳವರ ಎದೆಗೆ ಒದ್ದು ಮೈ ಮಾನ ಮುಚ್ಚುವೆ
 ರೆಟ್ಟೆ ಮೇಲೆ ಹೊತ್ತು ನಿನ್ನ ಜಗವ ಸುತ್ತಿ ತಣಿಸುವೆ
 ಬೆವರು ಹರಿಸಿ ಹೂವ ಬೆಳೆಸಿ ಮುಡಿಯಲಿಟ್ಟು ನಗಿಸುವೆ
 ಭುಜಕೆ ಭುಜವ ಹಚ್ಚಿ ನಿಂತು ತೋಳುಬಂಧಿ ತೊಡಿಸುವೆ
 ಹರಿವ ನದಿಗೆ ಅಡ್ಡ ನಿಂತು ನಿನಗೆ ದಾರಿ ಮಾಡುವೆ
 ಬಿಸಿಲು ಮಳೆಯ ಚಳಿಯ ನುಂಗಿ ನೆರಳು ಬೆಳಕು ಆಗುವೆ
...

Sunday 29 March 2015

ಕಟ್ಟುವೆವು ನಾವು

ಕಟ್ಟುವೆವು ನಾವು ಹೊಸ ನಾಡೊಂದನು, - ರಸದ
                                              ಬೀಡೊಂದನು
 ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ,
ಉತ್ಸಾಹಸಾಹಸದ ಉತ್ತುಂಗ ವೀಚಿಗಳ
 ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ
 ಕಟ್ಟುವೆವು ನಾವು ಹೊಸ ನಾಡೊಂದನು!
                       ನಮ್ಮೆದೆಯ ಕನಸುಗಳೇ ಕಾಮಧೇನು
                      ಆದಾವು, ಕರೆದಾವು ವಾ೦ಛಿತವನು;
                       ಕರೆವ ಕೈಗಿಹುದೋ ಕನಸುಗಳ ಹರಕೆ;
                       ಗುರಿ ತಪ್ಪದೊಮ್ಮುಖದ ಬಯಕೆ ಬೆಂಬಲಕೆ!
ಜಾತಿ ಮತ ಭೇದಗಳ ಕಂದಕವು ಸುತ್ತಲೂ,
ದುರ್ಭೇದ್ಯವೆನೆ ಕೋಟೆಕೊತ್ತಲಗಳು;
ರೂಢಿರಾಕ್ಷಸನರಸುಗೈಯುವನು, ತೊಳ್ತಟ್ಟಿ
 ತೊಡೆತಟ್ಟಿ, ಕರೆಯುವನು ಸಂಗ್ರಾಮಕೆ!
                       ನಾವು ಹಿಂದೆಗೆವೆವೇ? ವೀರ ತರುಣರು ನಾವು!
                       ಒಂದೆ ನೆಗೆತಕೆ ನೆಗೆವೆವೋ ಕಂದಕವನು,
                       ಕುಟ್ಟಿ ಪುಡಿಮಾಡುವೆವು ಕೋಟೆಗಳನು,
                       ಎದೆಯು ಮೆಟ್ಟಿ ಮುರಿಯುವೆವಸುರರಟ್ಟೆಗಳನು!
ಕೋಟೆಗೋಡೆಗೆ  ನಮ್ಮ  ಹೆಣಗಳೇ ಮೆಟ್ಟಿಲು,
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು
 ಆದಾವು; ಅಂಜುವೆದೆ ನಮ್ಮದಲ್ಲ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ!
                       ಎಡರುಗಳ ಕಡಲುಗಳನೀಸಿ ಬರುವೆವು, ಘೋರ
                      ನೈರಾಶ್ಯದಗ್ನಿಮುಖದಲ್ಲು ಕೂಡ
                      ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
                      ಬಿಡಿಸಿ, ಇಡಿಗೊಳಿಸಿ ಕಟ್ಟುವೆವು ನಾಡ!
ಇಂದು ಬಾಳಿದು ಕೂಳ ಕಾಳಗವು; ಹೊಟ್ಟೆಯೇ
 ಕೇಂದ್ರವಾಗಿದೆ ನರನ ಜೀವಿತಕ್ಕೆ;
ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ
 ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ!
                       ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
                      ಸಮಬಗೆಯ ಸಮಸುಖದ ಸಮದುಃಖದ
                      ಸಾಮರಸ್ಯದ ಸಾಮಗಾನಲಹರಿಯ ಮೇಲೆ
                      ತೇಲಿ ಬರಲಿದೆ ನೋಡು, ನಮ್ಮ ನಾಡು!
ಇಲ್ಲೇ ಈ ಎಡೆಯಲ್ಲೆ, ನಮ್ಮ ಮುಂಗಡೆಯಲ್ಲೆ,
ಅಳಲುಗಳ ಹೆಡೆಯಲ್ಲೆ,
ಸೋಲುಗಳ ತೊಡೆಯಲ್ಲೆ
 ಅರಳೀತು ನಮ್ಮ ನಾಡು;
ನಮ್ಮೆದೆಯ ತುಂಬಿರುವ ಅದರ ನರುಗಂಪು ಹೊರ
 ಹೊಮ್ಮುವುದ ಕಾದು ನೋಡು!
                       ಉತ್ಸಾಹ ಉದ್ವೇಗ ಉದ್ರೇಕಗಳ ವೀರ
                      ಯುವಜನದ ನಾಡ ಗುಡಿಯು;
                       ಅದರ ಹಾರಾಟಕ್ಕೆ ಬಾನೆ ಗಡಿಯು,
                       ಬರಲು ಬಿಡೆವೆಂದಿಗೂ ಅದಕೆ ತಡೆಯು!
                       ತಡೆವವರು ಬನ್ನಿರೋ, ಹೊಡೆವವರು ಬನ್ನಿರೋ
                      ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ!
                       ಕೊಟ್ಟೆವಿದೋ ವೀಳೆಯವನು;
                       ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ
                      ಕಟ್ಟುವೆವು ನಾವು ಹೊಸ ನಾಡೊಂದನು, - ಸುಖದ
                                                                     ಬೀಡೊಂದನು
                                                            - ಮೊಗೇರಿ ಗೋಪಾಲಕೃಷ್ಣ ಅಡಿಗ

Saturday 28 March 2015

Ello...hudukide

ಎಲ್ಲೋ ಹುಡುಕಿದೆ ಇಲ್ಲದ ದೇವರ
 ಕಲ್ಲು ಮಣ್ಣುಗಳ ಗುಡಿಯೊಳಗೆ
 ಇಲ್ಲೇ ಇರುವ ಪ್ರೀತಿ ಸ್ನೇಹಗಳ
 ಗುರುತಿಸದಾದೆನು ನಿಮ್ಮೊಳಗೆ ||
ಎಲ್ಲಿದೆ ನಂದನ, ಎಲ್ಲಿದೆ ಬಂಧನ
 ಎಲ್ಲಾ ಇದೆ ಈ ನಮ್ಮೊಳಗೆ
 ಒಳಗಿನ ತಿಳಿಯನು ಕಲಕದೆ ಇದ್ದರೆ
 ಅಮೃತದ ಸವಿಯಿದೆ ನಾಲಿಗೆಗೆ ||
ಹತ್ತಿರವಿದ್ದೂ ದೂರ ನಿಲ್ಲುವೆವು
 ನಮ್ಮ ಅಹಮ್ಮಿನ ಕೋಟೆಯಲಿ
 ಎಷ್ಟು ಕಷ್ಟವೋ ಹೊಂದಿಕೆಯೆಂಬುದು
 ನಾಲ್ಕುದಿನದ ಈ ಬದುಕಿನಲಿ ||
                                         - ಜಿ. ಎಸ್. ಶಿವರುದ್ರಪ್ಪ