Thursday 30 April 2015

ರೆಕ್ಕೆ ಇದ್ದರೆ ಸಾಕೆ... / Rekke iddare sake..

ರೆಕ್ಕೆ ಇದ್ದರೆ ಸಾಕೆ? ಹಕ್ಕಿಗೆ ಬೇಕು ಬಾನು 
ಬಯಲಲಿ ತೇಲುತ ತಾನು  ಮ್ಯಾಲೆ ಹಾರೋಕೆ।।
ಕಲೊಂದಿದ್ದರೆ ಸಾಕೆ? ಚಿಗರೆಗೆ ಬೇಕು ಕಾನು 
ಗಾಳಿಯ ಮೇಲೆ ತಾನು  ಜಿಗಿದು ಓಡೋಕೆ 

ಹೂ ಒಂದಿದ್ದರೆ ಸಾಕೆ, ಬ್ಯಾಡವೆ ಗಾಳಿ?
ನೀವೆ ಹೇಳಿ ಕಂಪ ಬೀರೋಕೆ 
ಮುಖ ಒಂದಿದ್ದರೆ ಸಾಕೆ, ದುಂಬಿಯ ತಾವ 
ಬ್ಯಾಡವೆ ಹೂವ? ಜೇನ ಹೀರೋಕೆ 

ನೀರೊಂದಿದ್ದರೆ ಸಾಕೆ, ಬ್ಯಾಡವೆ ಹಳ್ಳ 
ಬಲ್ಲವ ಬಲ್ಲ ತೊರೆಯು ಹರಿಯೋಕೆ 
ಮೋಡ ಇದ್ದರೆ  ಸಾಕೆ, ಬ್ಯಾಡವೆ ಭೂಮಿ?
ಹೇಳಿ ಸ್ವಾಮಿ ಮಳೆಯು ಸುರಿಯೋಕೆ 

ಕಣ್ಣೊಂದಿದ್ದರೆ ಸಾಕೆ, ಬ್ಯಾಡವೆ ಮಂದೆ?
ಕಣ್ಣಿನ ಮುಂದೆ ನಿಮಗೆ ಕಾಣೋಕೆ 
ಕೊರಳೊಂದಿದ್ದರೆ ಸಾಕೆ, ಬ್ಯಾಡವೆ ಹಾಡು?
ಎಲ್ಲರ ಜೋಡಿ ಕೂಡಿ ಹಾಡೋಕೆ 


- ಎಚ್. ಎಸ್. ವೆಂಕಟೇಶಮೂರ್ತಿ 

 

Wednesday 29 April 2015

ಎದೆ ತುಂಬಿ ಹಾಡಿದೆನು.../ Ede tumbi hadidenu..

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು||

ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ 

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ

ಕೇಳುವವರಿಹರೆಂದು ನಾ ಬಲ್ಲೆ ಅದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ

- ಜಿ. ಎಸ್. ಶಿವರುದ್ರಪ್ಪ

Video link:
http://www.youtube.com/watch?v=utvDlz7lhIM

Tuesday 28 April 2015

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ... / Nee sigade balondu baale krishna

ಕೃಷ್ಣ ..... ಕೃಷ್ಣ .... ಕೃಷ್ಣ .... ಕೃಷ್ಣ ..........
ಕೃಷ್ಣಾ .......

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ... (೨)
ನಾ ತಾಳಲಾರೆ ಈ ವಿರಹ ಕೃಷ್ಣ .. (೨)
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ...

ಕಮಲವಿಲ್ಲದ ಕೆರೆ ನನ್ನ ಬಾಳು 
ಚಂದ್ರ ಇಲ್ಲದಾ ರಾತ್ರಿ ಬೀಳು (೨)
ನೀ ಸಿಗದೇ ಉರಿ ಉರಿ ಕಳೆದೆ ಇರುಳ... (೨)
ಮಾತೆಲ್ಲ ಬಿಗಿದಿದೆ ದುಃಖ ಕೊರಳ.....
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ... (೨)

ಅನ್ನ ಸೇರದು ನಿದ್ದೆ ಬಂದುದೆಂದು 
ಕುದಿವೆ ಒಂದೇ ಸಮ ಕೃಷ್ಣ ಎಂದು... (೨)
ಯಾರು ಅರಿವರು ಹೇಳು ನನ್ನ ನೋವ ...(೨)
ತಲ್ಲಣಿಸಿ ಕೂಗುತಿದೆ ದಾಸಿ ಜೀವ 

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ.. (೨)

ಒಳಗಿರುವ ಗಿರಿಧರನೇ ಹೊರಗೆ ಬಾರೋ 
ಕಣ್ಣೆದುರು ನಿಂತು ಆ ರೂಪ ತೋರೋ (೨)
ಜನುಮ ಜನುಮದಾ ರಾಗ ನನ್ನ ಪ್ರೀತಿ .. ಕೃಷ್ಣ .. ಕೃಷ್ಣ ... ಕೃಷ್ಣಾ ...
ಕೃಷ್ಣ ...
ಜನುಮ ಜನುಮದಾ ರಾಗ ನನ್ನ ಪ್ರೀತಿ
ನಿನ್ನೊಳಗೆ ಹರಿವುದೇ ಅದರಾ ರೀತಿ

ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ... (೨)
ನಾ ತಾಳಲಾರೆ ಈ ವಿರಹ ಕೃಷ್ಣ .. (೨)
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ... ಕೃಷ್ಣ .. ಕೃಷ್ಣ .. ಕೃಷ್ಣಾ ..
 
ಡಾ. ಎನ್. ಎಸ್. ಲಕ್ಷ್ಮಿ ನಾರಾಯಣ ಭಟ್ಟ 

Monday 27 April 2015

ಅಕೋ ಶ್ಯಾಮ ಅವಳೇ ರಾಧೆ.../ Ako Shyama Avale Radhe

ಅಕೋ ಶ್ಯಾಮ ಅವಳೇ ರಾಧೆ
ನಲಿಯುತಿಹರು ಕಾಣಿರೇ ||
ನಾವೆ ರಾಧೆ ಅವನೇ ಶ್ಶಾಮ
ಬೇರೆ ಬಗೆಯ ಮಾಣಿರೇ

ಕಲರವದೊಳು ಯಮುನೆ ಹರಿಯೆ
ಸೋಬಾನೆಯ ತರುಗಳುಲಿಯೆ
ತೆನೆತೆನೆಯೊಳು ಹರಸಿದಂತೆ
ಬಾನಿಂ ಜೊನ್ನ ಭೂಮಿಗಿಳಿಯೆ

ಕಂಪ ಬಿಡುವ ದಳಗಳಂತೆ
ಸುತ್ತಲರಳಿ ಕೊಳ್ಳಿರೇ
ಒಲುಮೆಗಿಡುವ ಪ್ರಭಾವಳಿಯ
ತೆರದಿ ಬಳಸಿ ನಿಲ್ಲಿರೇ

ಕಡಗ ಕಂಕಣ ಕಿನಿಕಿನಿಯೆನೆ
ಅಡಿಗೆಯಿರುಲೆ ಝಣರೆನೆ
ಎದೆ ನುಡಿತಕೆ ಚುಕ್ಕಿ ಮಿಡಿಯೆ
ಕೊಳಲನೂದಿ ಕುಣಿವನೆ

ನಮ್ಮ ಮನವ ಕೋದು
ಮಾಲೆ ಗೈದು ಮುಡಿಯುತಿಹನೆನೆ
ಮಾಧವನೂದುವ ಮಧುರ ಗಾನ
ಎದೆಯ ಹಾಯ್ವುದಾಯೆನೆ

ನೋಡಿ ತಣಿಯೆ ಹಾಡಿ ತಣೆಯೆ
ಲೇಸನಾಡಿ ತಣಿಯೆನೆ
ಕುಣಿದು ತಣಿಯೆ ದಣಿದು ತಣಿಯೆ
ದಣಿವಿಲ್ಲದೆ ನಲಿವೆನೆ

- ಪು.ತಿ. ನರಸಿಂಹಾಚಾರ್

Video link:
http://www.youtube.com/watch?v=2clr2JEw41k

ಕಟ್ಟುವೆವು ನಾವು / Kattuvevu Naavu

ಕಟ್ಟುವೆವು ನಾವು ಹೊಸ ನಾಡೊಂದನು, - ರಸದ ಬೀಡೊಂದನು

ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ,
ಉತ್ಸಾಹಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!

                      ನಮ್ಮೆದೆಯ ಕನಸುಗಳೇ ಕಾಮಧೇನು
                      ಆದಾವು, ಕರೆದಾವು ವಾ೦ಛಿತವನು;
                      ಕರೆವ ಕೈಗಿಹುದೋ ಕನಸುಗಳ ಹರಕೆ;
                      ಗುರಿ ತಪ್ಪದೊಮ್ಮುಖದ ಬಯಕೆ ಬೆಂಬಲಕೆ!

ಜಾತಿ ಮತ ಭೇದಗಳ ಕಂದಕವು ಸುತ್ತಲೂ,
ದುರ್ಭೇದ್ಯವೆನೆ ಕೋಟೆಕೊತ್ತಲಗಳು;
ರೂಢಿರಾಕ್ಷಸನರಸುಗೈಯುವನು, ತೊಳ್ತಟ್ಟಿ
ತೊಡೆತಟ್ಟಿ, ಕರೆಯುವನು ಸಂಗ್ರಾಮಕೆ!

                      ನಾವು ಹಿಂದೆಗೆವೆವೇ? ವೀರ ತರುಣರು ನಾವು!
                      ಒಂದೆ ನೆಗೆತಕೆ ನೆಗೆವೆವೋ ಕಂದಕವನು,
                      ಕುಟ್ಟಿ ಪುಡಿಮಾಡುವೆವು ಕೋಟೆಗಳನು,
                      ಎದೆಯು ಮೆಟ್ಟಿ ಮುರಿಯುವೆವಸುರರಟ್ಟೆಗಳನು!

ಕೋಟೆಗೋಡೆಗೆ  ನಮ್ಮ  ಹೆಣಗಳೇ ಮೆಟ್ಟಿಲು,
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು
ಆದಾವು; ಅಂಜುವೆದೆ ನಮ್ಮದಲ್ಲ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ!

                      ಎಡರುಗಳ ಕಡಲುಗಳನೀಸಿ ಬರುವೆವು, ಘೋರ
                      ನೈರಾಶ್ಯದಗ್ನಿಮುಖದಲ್ಲು ಕೂಡ
                      ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
                      ಬಿಡಿಸಿ, ಇಡಿಗೊಳಿಸಿ ಕಟ್ಟುವೆವು ನಾಡ!

ಇಂದು ಬಾಳಿದು ಕೂಳ ಕಾಳಗವು; ಹೊಟ್ಟೆಯೇ
ಕೇಂದ್ರವಾಗಿದೆ ನರನ ಜೀವಿತಕ್ಕೆ;
ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ
ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ!

                      ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
                      ಸಮಬಗೆಯ ಸಮಸುಖದ ಸಮದುಃಖದ
                      ಸಾಮರಸ್ಯದ ಸಾಮಗಾನಲಹರಿಯ ಮೇಲೆ
                      ತೇಲಿ ಬರಲಿದೆ ನೋಡು, ನಮ್ಮ ನಾಡು!

ಇಲ್ಲೇ ಈ ಎಡೆಯಲ್ಲೆ, ನಮ್ಮ ಮುಂಗಡೆಯಲ್ಲೆ,
ಅಳಲುಗಳ ಹೆಡೆಯಲ್ಲೆ,
ಸೋಲುಗಳ ತೊಡೆಯಲ್ಲೆ
ಅರಳೀತು ನಮ್ಮ ನಾಡು;
ನಮ್ಮೆದೆಯ ತುಂಬಿರುವ ಅದರ ನರುಗಂಪು ಹೊರ
ಹೊಮ್ಮುವುದ ಕಾದು ನೋಡು!

                      ಉತ್ಸಾಹ ಉದ್ವೇಗ ಉದ್ರೇಕಗಳ ವೀರ
                      ಯುವಜನದ ನಾಡ ಗುಡಿಯು;
                      ಅದರ ಹಾರಾಟಕ್ಕೆ ಬಾನೆ ಗಡಿಯು,
                      ಬರಲು ಬಿಡೆವೆಂದಿಗೂ ಅದಕೆ ತಡೆಯು!
                      ತಡೆವವರು ಬನ್ನಿರೋ, ಹೊಡೆವವರು ಬನ್ನಿರೋ
                      ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ!
                      ಕೊಟ್ಟೆವಿದೋ ವೀಳೆಯವನು;
                      ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ
                      ಕಟ್ಟುವೆವು ನಾವು ಹೊಸ ನಾಡೊಂದನು, - ಸುಖದ
                                                                     ಬೀಡೊಂದನು

                                                            - ಮೊಗೇರಿ ಗೋಪಾಲಕೃಷ್ಣ ಅಡಿಗ

Saturday 25 April 2015

ಎಲೆಗಳು ನೂರಾರು... / Elegalu nooraaru...

ಎಲೆಗಳು ನೂರಾರು ಭಾವದ ಎಳೆಗಳು ನೂರಾರು
ಎಲೆಗಳ ಬಣ್ಣ ಒಂದೇ ಹಸಿರು
ಜಾತಿ, ಭಾಷೆ, ಪಂಥ ಹಲವು 
ಅವುಗಳ ಹಿಂದೆ ಮಾತ್ರ ಒಂದೇ ಒಲವು 
ಸಾಗೋಣ ಒಟ್ಟಿಗೆ ಸಾಗೋಣ
ನಾವು ನೀವು ಸೇರಿ ಒಂದಾಗಿ 
ನೀಗೋಣ ಭಿನ್ನತೆ ನೀಗೋಣ 
ಸಾವಿರ ಹೆಜ್ಜೆ ಒಂದೇ ಗುರಿಗಾಗಿ ||

ಕಿಡಿಗಳು ನೂರಾರು ಬೆಳಕಿನ ಕುಡಿಗಳು ನೂರಾರು 
ಬೆಳಕಿನ ಪರಿಗೆ ಒಂದೇ ಹೆಸರು 
ಸೂರ್ಯ, ಚಂದ್ರ, ಲಾಂದ್ರ, ಹಣತೆ,
ಅವುಗಳ ಹಿಂದೆ ಮಾತ್ರ ಒಂದೇ ಘನತೆ 
ತೆರೆಯೋಣ ಹೃದಯ ತೆರೆಯೋಣ 
ನಾವು ನೀವು ಸೇರಿ ಒಂದಾಗಿ 
ಮರೆಯೋಣ ಭೇದ ಮರೆಯೋಣ 
ನದಿಗಳು ಕೂಡಿದ ಪ್ರೀತಿಯ ಕಡಲಾಗಿ ||

ಪದಗಳು ನೂರಾರು ಬದುಕಿನ ಹದಗಳು ನೂರಾರು 
ಪದಗಳ ಹಿಂದೆ ಒಂದೇ ಉಸಿರು 
ಅಕ್ಕರೆಯಿಂದ ಒಟ್ಟಿಗೆ ಬಾಳೋಣ 
ಭಾರತ ಮಾತೆಗೆ ನಮ್ಮ ಪ್ರೀತಿಯ ತೋರೋಣ 
ಕಟ್ಟೋಣ ನಾಡನು ಕಟ್ಟೋಣ 
ನಾವು ನೀವು ಸೇರಿ ಒಂದಾಗಿ 
ಮುಟ್ಟೋಣ ಬಾನನು* ಮುಟ್ಟೋಣ
ತಾರೆಗಳೇ ಈ ನಾಡಿನ ಸೂರಾಗಿ ||

                                                            - ಹೆಚ್. ಎಸ್. ವೆಂಕಟೇಶ ಮೂರ್ತಿ

ಶ್ರೀ ಶಂಕರಾಚಾರ್ಯ ಜೀವನ ಸಂದೇಶ../ Shri Shankaracharya Jeevana Sandesha..


ಭಾರತದಲ್ಲಿ ಹಿಂದೂ ಧರ್ಮವು ಸಂಕಷ್ಟದಲ್ಲಿದ್ದ ಎಂಟನೇ ಶತಮಾನದ ಕಾಲಘಟ್ಟದಲ್ಲಿ, ಹಿಂದೂಗಳಲ್ಲಿದ್ದ ಜಾತಿ ಪದ್ದತಿ, ಮೂಢ ಆಚರಣೆಗಳ ಬಗ್ಗೆ ಆಗ ಪ್ರಬಲರಾಗಿದ್ದ ಬೌದ್ದ ಸನ್ಯಾಸಿಗಳು ಸಾಕಷ್ಟು ನಿಂದನೆಗಳನ್ನು ಮಾಡುತ್ತಿದ್ದ ಕಾಲದಲ್ಲಿ ಹಿಂದೂ ಧರ್ಮೀಯರಲ್ಲಿ ಮತ್ತೆ ಆತ್ಮವಿಶ್ವಾಸ ಹುಟ್ಟಿಸಿ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ತಮ್ಮ ಅದ್ವೈತ ತತ್ವದ ಮೂಲಕ ಧರ್ಮ ಜಾಗೃತಿಯನ್ನುಂಟುಮಾಡಿ ಹಿಂದೂ ಧರ್ಮವನ್ನು ಪುನರುತ್ತಾನಗೊಳಿಸಿದವರು ಶ್ರೀ ಶಂಕರಾಚಾರ್ಯರು. ತಾವು ಬದುಕಿದ್ದು ಕೇವಲ 32 ವರ್ಷಗಳಷ್ಟೇ ಆದರೂ ಆದಿ ಶಂಕರರು ತಾವು ಮಾಡಿದ ಕಾರ್ಯ, ಗಳಿಸಿದ ಕೀರ್ತಿ , ಅಪಾರವಾದುದು. ಶ್ರೀಮದ್ಭಗವದ್ಗೀತೆ, ಉಪನಿಷತ್ತುಗಳು, ಬ್ರಹ್ಮಸೂತ್ರಗಳಿಗೆ ಭಾಷ್ಪಗಳನ್ನು ಬರೆದ ಮೊದಲಿಗರು ಶ್ರೀ ಶಂಕರಾಚಾರ್ಯರು. ಶಂಕರಾಚಾರ್ಯರು ಭಾರತೀಯ ವೈಚಾರಿಕ ರಂಗದಲ್ಲಿ ಕ್ರಾಂತಿಯನ್ನೇ ಮಾಡಿದ್ದವರು. ಇವರು ಯಾವೊಂದು ಹೊಸತಾದ ಮತ, ಪಂಥಗಳನ್ನು ಸ್ಥಾಪಿಸಿಲ್ಲವಾದರೂ ಹಿಂದೂ ಧರ್ಮದಲ್ಲಿನ ವೇದಸಂಪ್ರದಾಯವನ್ನೇ ಎತ್ತಿಹಿಡಿದರು. ವೇದಗಳಲ್ಲಿನ ಸತ್ವವನ್ನೂ, ಸಾರವನ್ನು ತಮ್ಮದೇ ಆದ ನೆಲೆಯಲ್ಲಿ ನಿಷ್ಕರ್ಷಿಸುವ ಮೂಲಕ ಜಗತ್ತಿಗೆ ಪ್ರಕಾಶಪಡಿಸಿದವರು ಆಚಾರ್ಯ ಶಂಕರರು ಎಂದರೆ ತಪ್ಪಾಗಲಾರದು.

ಜೀವನ

ಅದು ಎಂಟು-ಒಂಭತ್ತನೇ ಶತಮಾನಗಳ ಮಧ್ಯದ ಅವಧಿ. ಭಾರತ ದಕ್ಷಿಣ ಸಮುದ್ರ ತೀರದ ಕೇರಳ ರಾಜ್ಯದ ಕಾಲಟಿ ಎಂಬೊಂದು ಸಣ್ಣ ಹಳ್ಳಿ. ಆ ಹಳ್ಳಿಯಲ್ಲಿ ಶಿವಗುರು ಹಾಗೂ ಆರ್ಯಾಂಬರೆನ್ನುವ ಬಡ ಬ್ರಾಹ್ಮಣಾ ದಂಪತಿಗಳು ವಾಸವಾಗಿದ್ದರು. ಊಟ, ವಸತಿಗಳಎಲ್ಲಾ ಅದು ಹೇಗೋ ದಿನನಿತ್ಯವೂ ನಡೆಯುತ್ತಿದ್ದರೂ ಆ ದಂಪತಿಗಳೈಗೆ ‘ತಮ್ಮದಾದ ಒಂದು ಮಗುವಿಲ್ಲ, ತಮಗೆ ಸಂತಾನಭಾಗ್ಯವಿಲ್ಲ’ ಎನ್ನುವ ಚಿಂತೆಯು ಬಲವಾಗಿ ಕಾಡುತ್ತಿತ್ತು. ಹೀಗಿರಲು ಇದೇ ಚಿಂತೆಯಲ್ಲಿ ಆ ಈರ್ವರೂ ತಾವು ಈ ಕುರಿತು ಪರಮೇಶ್ವರನ ಮೊರೆಹೋಗಲು ತೀರ್ಮಾನಿಸಿ ಅದರಂತೆ ಪರಮೇಶ್ವರನನ್ನು ಶ್ರದ್ದಾ ಭಕ್ತಿಗಳಿಂದ ಆರಾಧಿಸಿಲು ಮುಂದಾದಾರು. ಅದೊಂದು ದಿನ ಪರಮೇಶ್ವರನು ತಾನು ಶಿವಗುರುವಿನ ಕನಸಿನಲ್ಲಿ ಕಾಣಿಸಿಕೊಂಡು- “ಭಕ್ತಾ, ನಿನ್ನ ಪೂಜೆಗೆ ಮೆಚ್ಚಿದ್ದೇನೆ. ನಿನ್ನ ಕೋರಿಕೆಯನ್ನು ನಾನು ಈಡೇರಿಸಲಿದ್ದೇನೆ, ನಿನಗೆಂತಹಾ ಮಗನು ಬೇಕು? ಮಹಾನ್ ಜ್ಞಾನಿಯಾದ, ಆದರೆ ಅಲ್ಪಾಯುವದ ಮಗನು ಬೇಕೋ, ಇಲ್ಲವೇ ಅಲ್ಪ ಜ್ಞಾನಿಯಾದ ದೀರ್ಘಾಯುವಾದ ಮಗನು ಬೇಕೋ?” ಎಂದೆನ್ನಲು ಶಿವಗುರುವು ತಾನು ಕ್ಷಣಕಾಲವೂ ಯೋಚಿಸದೆ- “ನನಗೆ ಮಹಾಜ್ಞಾನಿಯಾದ ಮಗನು ಬೇಕು” ಎಂದೆನ್ನಲು “ತಥಾಸ್ತು” ಎಂದ ಪರಮೇಶ್ವರನು ತಾನು ಅಂತರ್ಧಾನನಾದನು. ಅದಾದ ಕೆಲ ತಿಂಗಳಿನಲ್ಲಿಯೇ ಮಾತೆ ಆರ್ಯಾಂಬಾ ಜನ್ಮತಃ ಮಹಾಜ್ಞಾನಿಯಾದ ಶಂಕರನಿಗೆ ಜನ್ಮವಿತ್ತಳು.

ಕೆಲ ಕಾಲಾ ನಂತರದಲ್ಲಿ ಶಂಕರನಿಗೆ ಮೂರು ವರ್ಷಗಳಿರಲು ಅವನ ತಂದೆ ಶಿವಗುರುವು ತಾನು ಇಹದ ಯಾತ್ರೆಯನ್ನು ಪೂರೈಸಿದನು. ಮುಂದೆ ಶಂಕರನು ಪೂರ್ಣವಾಗಿ ತಾಯಿಯ ಆರೈಕೆಯಲ್ಲಿಯೇ ಬೆಳೆಯುವಂತಾಯಿತು. ಹುಟ್ಟು ಜ್ಞಾನಿಯಾಗಿದ್ದ ಶಂಕರನಿಗೆ ವಿದ್ಯಾಭ್ಯಾಸದ ಹಂಗಿರಲಿಲ್ಲ. ಆದರೂ ತಾನು ಕೆಲ ಕಾಲ ವೇದ ಶಾಸ್ತ್ರಗಳ ಅಧ್ಯಯನದಲ್ಲಿ ತೊಡಗಿದ್ದನು. ಹೀಗೆ ತಾನು ವಿದ್ಯಾಭ್ಯಾಸಕ್ಕೆಂದು ಹೋಗುವ ದಾರಿಯಲ್ಲಿ ಇದ್ದ ಒಬ್ಬ ಹಳೆಯ ಮುದುಕಿಯ ಮನೆಯಿತ್ತು. ಆ ಮುದುಕಿ ಬಾಲಕ ಶಂಕರ ಬಂದಾಗ ತಿನ್ನಬಹುದಾದ ವಸ್ತು ತನ್ನಲ್ಲೇನಿರುತ್ತಿತ್ತೋ ಅದರಲ್ಲೊಂದು ಭಾಗವನ್ನು ಅವನಿಗೆ ತಪ್ಪದೇ ನೀಡುತ್ತಿದ್ದಳು. ಅದೊಂದು ದಿನ ಶಂಕರ ಬಂದ ಸಮಯದಲ್ಲಿ ಮುದುಕಿಗೆ ಅವನಿಗಾಗಿ ನೀಡಲು ಏನೇನೂ ಇರಲಿಲ್ಲ. ಅದನ್ನು ಆಕೆಯು ತಾನು ವಿನಮ್ರಳಾಗಿ ಶಂಕರನಿಗೆ ತಿಳಿಸಲು ಶಂಕರನು ತಾನು ಅದೇ ಸ್ಥಳದಲ್ಲಿ ‘ಶ್ರೀ ಕನಕಧಾರಾ ಸ್ತೋತ್ರ’ವನ್ನು ಪಠಿಸಿ ಸಾಕ್ಷಾತ್ ಲಕ್ಷ್ಮಿದೇವಿಯಿಂದ ಬಂಗಾರದ ನಾಣ್ಯಗಳ ಮಳೆಯನ್ನು ಸುರಿಸಿದನು.
ಸುಮಾರು ಇದೇ ಸಮಯದಲ್ಲಿ ಬಾಲಕ ಶಂಕರನ ಜ್ಞಾನ ಮಹತ್ತಿನ ಅರಿವುಂಟುಮಾಡುವ ಘಟನೆಯೊಂದು ಜರುಗಿತು. ಆ ಸಮಯದಲ್ಲಿ ಕೇರಳವನ್ನಾಳುತ್ತಿದ್ದ ರಾಜಾ ರಾಜಶೇಖರನು ತಾನೊಮ್ಮೆ ಶಂಕರನನ್ನು ಆಸ್ಥಾನಕ್ಕೆ ಕರೆತರಲು ಆದೇಶಿಸಿದಮು. ಮತ್ತು ಆ ಬಾಲಕನ ಅಗಾಧವಾದ ಪಾಂಡಿತ್ಯವನ್ನು ಪರೀಕ್ಷಿಸಲು ಬಯಸಿದನು. ಶಂಕರನನ್ನು ಆಸ್ಥಾನಕ್ಕೆ ಕರೆದು ತರಲು ತನ್ನ ಪ್ರಧಾನ ಮತ್ತು ಆನೆಯ ಜೊತೆಗೆ ಆಮಂತ್ರಣವನ್ನು ಕಳುಹಿಸಿದನು. ಆಮಂತ್ರಣವನ್ನು ನೋಡಿದ ಬಾಲಕ ಶಂಕರನು “ಉಪಜೀವನ ಮಾಡಲು ಭಿಕ್ಷೆಯೇ ಯಾರ ಸಾಧನೆಯಾಗಿದೆಯೋ, ತ್ರಿಕಾಲ ಸಂಧ್ಯಾ ಈಶ್ವರ ಚಿಂತನ, ಪೂಜೆ-ಅರ್ಚನೆ ಮತ್ತು ಗುರುಸೇವೆಯೇ ಯಾರ ಜೀವನದ ನಿತ್ಯ ವ್ರತವಾಗಿದೆಯೋ ಅವರಿಗೆ ಈ ಆನೆಯ ಸವಾರಿ ಯಾಕೆ? ನಾಲ್ಕು ವರ್ಣದ ಸರ್ವ ಕರ್ತವ್ಯಗಳ ಪಾಲನೆ ಮಾಡಿ ಬ್ರಾಹ್ಮಣಾದಿ ಧರ್ಮಮಯ ಜೀವನ ಜೀವಿಸಲು ವ್ಯವಸ್ತೆ ಮಾಡುವುದು ರಾಜನ ಕರ್ತವ್ಯವಾಗಿದೆ. ನನ್ನ ಈ ಸಂದೇಶವನ್ನು ನಿನ್ನ ಸ್ವಾಮಿಗೆ ಹೇಳು”, ಎನ್ನುವ ಮೂಲಕ ಆಮಂತ್ರಣವನ್ನು ನಿರಾಕರಿಸಿದನು.
ಇದಾದ ನಂತರ ರಾಜನು ತಾನೇ ಸ್ವತಃ ಶಂಕರನನ್ನು ಭಾಟಿಯಾಗಲು ನಿರ್ಧರಿಸಿ ಹೊರಟನು. ಹಾಗೆ ಆದಂತಹಾ ಭಾಟಿ ಮತ್ತು ಆ ವೇಳೆಯಲ್ಲಿ ನಡೆಸಿದ ಧಾರ್ಮಿಕ ಚರ್ಚೆಗಳಿಂದ ಮಹಾರಾಜನಲ್ಲಿ ವಿಶೇಷವಾದ ವಿಚಾರ ಶಕ್ತಿಯ ಅನುಭವವಾಯಿತು. ರಾಜನು ತನ್ನ ಭಾಟಿಯ ಅಂತ್ಯದಲ್ಲಿ ರತ್ನದ ಮುದ್ರೆಗಳನ್ನು ಶಂಕರನಿಗೆ ಕೊಡುಗೆ ನೀದಲು ಮುಂದಾದಾಗ ಬಾಲಕನು ಅವುಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾ- “ಮಹಾರಾಜರೇ, ನಾನು ಬ್ರಾಹ್ಮಣ ಮತ್ತು ಬ್ರಹ್ಮಚಾರಿಯಾಗಿದ್ದೇನೆ, ಇದರಿಂದ ನನಗೇನು ಉಪಯೋಗವಿದೆ? ನೀವು ದೇವರ ಪೂಜೆಗೆ ಕೊಟ್ಟಿರುವ ಭೂಮಿ ನನಗೆ ಮತ್ತು ನನ್ನ ತಾಯಿಗೆ ಸಾಕು. ನಿಮ್ಮ ಕೃಪೆಯಿಂದ ನನಗೆ ಯಾವ ಪ್ರಕಾರದ ಅಭಾವವಾಗಿಲ್ಲ” ಎಂದುತ್ತರಿಸಿದನು.  ಶಂಕರನ ಉತ್ತರ ರಾಜನಿಗೆ ತಿಳಿಯಲಿಲ್ಲ. ಕೊನೆಗೆ ರಾಜನು ಶಂಕರನಿಗೆ ಕೈಮುಗಿದು “ನಿಮ್ಮ ದರ್ಶನದಿಂದ ನಾನು ಧನ್ಯನಾದೆ”, ಎಂದು ಹೇಳಿ ಅವರಿಗೆ ದುಡ್ಡನ್ನು ಅರ್ಪಣೆಮಾಡಿ “ಒಂದು ಸಲ ಅರ್ಪಣೆ ನೀಡಿ ಅದನ್ನು ಮತ್ತೆ ನಾನು ತೆಗೆದುಕೊಳ್ಳುವುದು ಸರಿಯಲ್ಲ, ಅದಕ್ಕೆ ನೀವೇ ಆ ಹಣವನ್ನು ಯೋಗ್ಯ ವ್ಯಕ್ತಿಗೆ ಕೊಡಿರಿ”, ಎಂದನು. ಮುಗುಳ್ನಗುತ್ತಾ ಶಂಕರರು “ಮಹಾರಾಜರೆ, ನೀವು ರಾಜರಾಗಿದ್ದು ಯಾರು ಸುಪಾತ್ರರು, ಯಾರು ಯೋಗ್ಯರಂದು ನಿಮಗೆ ತಿಳಿದಿರಬೇಕು, ನನ್ನಂಥ ಬ್ರಹ್ಮಚಾರಿಗೇನು ಇಂಥಹ ಜ್ಞಾನ ಇರಬಹುದು? ವಿದ್ಯಾದಾನವೇ ಬ್ರಾಹ್ಮಣನ ಧರ್ಮ ಮತ್ತು ಸತ್ಪಾತ್ರೆದಾನವೇ ರಾಜಧರ್ಮವಾಗಿದೆ. ನೀವೆ ಯೋಗ್ಯ ಸತ್ಪಾತ್ರನಿಗೆ ಈ ಧನವನ್ನು ನೀಡಿ”, ಎಂದರು. ರಾಜನು ನಿರುತ್ತರನಾಗಿ ಶಂಕರನಿಗೆ ವಂದಿಸಿ ಅಲ್ಲಿರುವ ಬ್ರಾಹ್ಮಣರಿಗೆ ಆ ಧನವನ್ನು ಹಂಚಿದನು.
ಇದಾಗಿ ಶಂಕರನು ತಾನು ವಿದ್ಯಾಭ್ಯಾಸಗಳನ್ನೆಲ್ಲಾ ಪೂರೈಸುತ್ತಲೂ ತಾನು ಸನ್ಯಾಸ ಸ್ವೀಕರಿಸುವುದಾಗಿ ತಾಯುಯಲ್ಲಿ ಅಪ್ಪಣೆ ಬೇಡಿದರು. ಆದರೆ ತಾಯಿಗೆ ಮಗನು ಸನ್ಯಾಸಿಯಾಗುವುದು ಇಷ್ಟವಿರಲಿಲ್ಲ. ‘ಇದ್ದ ಒಬ್ಬನೇ ಮಗನು ಸನ್ಯಾಸಿಯಾದರೆ ನಮ್ಮ್ ಅವಂಶಗ ಗತಿಯೇನು, ನಾನು ಒಮ್ಮೆ ತೀರಿಹೋದಲ್ಲಿ ನನಗೆ ಮೋಕ್ಷ ಕೊಡಿಸುವವರಾರು?’ ಎಂಬ ಚಿಂತೆ ಅವಳ ಮನವನ್ನು ಕೊರೆಯುತ್ತಿರಲು ತಾಯಿಯು ಮಗನ ಸನ್ಯಾಸ ದೀಕ್ಷೆಯ ಅಭಿಲಾಷೆಯನ್ನು ಮುಂದೂಡುತ್ತಾ ಬಂದಳು.
ಶಂಕರರು ತಾವು ಸನ್ಯಾಸಿಯಾಗುವುದಾಗಿ ನಿರ್ಧರಿಸಿಯಾಗಿತ್ತು. ಅದಕ್ಕಾಗಿ ತಾಯಿಯ ಮನವೊಲಿಸಲು ಪರಿಪರಿಯಾಗಿ ಪ್ರಯತ್ನಿಸಿದರೂ ಸಾಧ್ಯವಾಗದಿರಲು ಅದೊಂದು ದಿನ ತಾವು ನದಿಯಲ್ಲಿ ಸ್ನಾನಕ್ಕಾಗಿ ಇಳಿದಿರಲು ಅಲ್ಲಿದ್ದ ಒಂದು ಮೊಸಳೆಯು ಶಂಕರರ ಕಾಲನ್ನು ಬಲವಾಗಿ ಹಿಡಿದುಕೊಂಡಿತು. ಅದಾಗ ರಕ್ಷಣೆಗಾಗಿ ಎಂಬಂತೆ ತಾಯಿಯನ್ನು ಕೂಗಿದ ಶಂಕರರು ತಾಯಿಗೆ- “ಅಮ್ಮಾ ಈ ಮೊಸಳೆಯು ನನ್ನನ್ನು ನುಂಗಿ ಹಾಕುವುದರಲ್ಲಿದೆ, ನೀನೇನಾದರೂ ನಾನು ಸನ್ಯಾಸಿಯಾಗುವುದಕ್ಕೆ ಒಪ್ಪಿಕೊಳ್ಳುವುದಾದಲ್ಲಿ ಮಾತ್ರವೇ ನಾನು ಈ ಮೊಸಳೆಯ ಹಿಡಿತದಿಂದ ಪಾರಾಗಬಲ್ಲೆ, ಇಲ್ಲವಾದಲ್ಲಿ ನಿನ್ನ ಮಗ ಇದೇ ಕ್ಷಣ ಮೊಸಳೆಯ ಪಾಲಾಗುತ್ತಾನೆ”, ಎಂದಾಗ ಮಾತೆ ಆರ್ಯಾಂಬಾ ತಾನು ವಿಧಿಯಿಲ್ಲದೆ ಮಗನ ಸನ್ಯಾಸಕ್ಕೆ ಅಪ್ಪಣೆ ಕೊಡಬೇಕಾಯಿತು. ತಕ್ಷಣವೇ ಮೊಸಳೆಯು ಶಂಕರರ ಕಾಲನ್ನು ಬಿಟ್ಟಿತು. ಶಂಕರರು ತಾಯಿಯ ಆಶೀರ್ವಾದವನ್ನು ಪಡೆದು ಸನ್ಯಾಸಿಯಾಗಿ ದೇಶಪರ್ಯಟನೆಗೆ ಹೊರಟರು. ಹಾಗೆ ಹೊರಡುವ ಮುನ್ನ ತಾಯಿಗೆ- “ನಾನೆಲ್ಲೇ ಇದ್ದರೂ ನಿನ್ನ ಅಂತಿಮ ಕ್ಷಣಗಳಲ್ಲಿ ನಿನ್ನೊಂದಿಗಿರುತ್ತೇನೆ” ಎನ್ನುವ ವಚನವನ್ನಿತ್ತರು. ಮತ್ತು ಮುಂದೊಂದು ದಿನ ಮಾತೆ ಆರ್ಯಾಂಬಾರವರು ಸಾವಿನ ನಿರೀಕ್ಷೆಯಲ್ಲಿದ್ದಾಗ ಅಲ್ಲಿಗಾಗಮಿಸಿದ ಶಂಕರರು ತಾವು ತಾಯಿಯವರ ಅಂತಿಮ ಕ್ಶಣಗಳಲ್ಲಿ ಅವರೊಡನಿದ್ದುದಲ್ಲದೆ ಅವರ ಅಂತಿಮ ವಿದ್ಜಿಗಳನ್ನೂ ಸಹ ನೆರವೇರಿಸಿ ಅವರ ಶಾಶ್ವತ ಮೋಕ್ಷಕ್ಕೆ ಕಾರಣರಾದರು.
ಶ್ರೀ ಶಂಕರರು ಸನ್ಯಾಸ ಸ್ವೀಕರಿಸುವುದರೊಡನೆ ಅವರ ಜೀವನವು ನೂತನ ತಿರುವನ್ನು ಪಡೆಯಿತು. ಅಷ್ತರ ಬಳಿಕ ಶಂಕರರು ದೇಶ ದೇಶಗಳನ್ನು ತಿರುಗುತ್ತಾ ನರ್ಮದಾ ನದಿ ತೀರಕ್ಕೆ ಬಂದರು. ಅಲ್ಲಿ ನೆಲೆಯಾಗಿದ್ದ ಶ್ರೀ ಗೋವಿಂದ ಭಗವತ್ಪಾದರನ್ನು ತಮ್ಮ ಗುರುವಾಗಿ ಸ್ವೀಕರಿಸಿದ ಶಂಕರರು ಅವರಲ್ಲಿ ಯೋಗ, ವೇದ, ಉಪನಿಷತ್, ವೇದಾಂತ ಶಾಸ್ತ್ರಗಳನ್ನು ಅಭ್ಯಾಸ ನಡೆಸಿದರು. ನರ್ಮದೆ ತಟದಲ್ಲಿನ ಗುಹೆಯೊಂದರಲ್ಲಿ ಧ್ಯಾನದಲ್ಲಿದ್ದಾಗಲೇ ಶಂಕರರು ತಮ್ಮ `ಅದ್ವೈತ’ ತತ್ವ ಸ್ವರೂಪದ ಜ್ಞಾನವನ್ನು ಕಂಡುಕೊಂಡರು. ಮತ್ತು ಅದನ್ನು ದೇಶದಾದ್ಯಂತ ಪ್ರಚುರಪಡಿಸಲಿಕ್ಕಾಗಿ ದೇಶಾತನೆಗೈಯ್ಯಲು ನಿರ್ಧರಿಸಿದರು. ಶಂಕರರು ಗುರುಗಳ ಆಶೀರ್ವಾದ ಪಡೆದು ಕಾಶಿಗೆ ಹೊರಟರು. ಅಲ್ಲಿ ಸನಂದನನೆಂಬ ತಮಿಳು ದೇಶದ  ಯುವ ಸಂನ್ಯಾಸಿ ಇವರ ಶ್ಯಿಷ್ಯನಾದನು. ಕಾಶಿಗೆ ತೆರಳಿದ ಶ್ರೀ ಶಂಕರರು ಅಲ್ಲಿ ಕೆಲ ಶಿಷ್ಯರನ್ನು ಸೇರಿಸಿಕೊಂಡು ಅವರಿಗೆ ವೇದ ಶಾಸ್ತ್ರಗಳ ಪಾಠವನ್ನು ಬೋಧಿಸಿದರು.
ಕಾಶಿಯಲ್ಲಿ ವಿಶ್ವೇಶ್ವರ ದೇವಾಲಯಕ್ಕೆ ಹೋಗುವಾಗ ನಡೆದ ಒಂದು ಘಟನೆ ಹೀಗಿದೆ-  ಒಬ್ಬ ಅಸ್ಪೃಷ್ಯ ವ್ಯಕ್ತಿಯು ನಾಲ್ಕೈದು ಕುರಿಗಳೊಡನೆ ಅಡ್ಡವಾಗುತ್ತಾನೆ. ಆಗ ಶಂಕರರು ಅವನನ್ನು ಕುರಿತು “ಪಕ್ಕಕ್ಕೆ ಸರಿದು ದಾರಿ ಮಾಡಿಕೊಡು, ನಾನು ದೇವರ ದರ್ಶನಕ್ಕೆ ಹೋಗಬೇಕಿದೆ” ಎನ್ನಲು ಆ ವ್ಯಕ್ತಿಯು ತಕ್ಷಣಕ್ಕೆ “ನೀವು ಹೇಳಿದ್ದು ಯಾರಿಗೆ, ನನ್ನ ದೇಹಕ್ಕೋ? ಆತ್ಮಕ್ಕೋ?” ಎಂದು ಪ್ರಶ್ನಿಸುತ್ತಾನೆ. ಇದರಿಂದ ಎಚ್ಚರಗೊಂಡ ಶಂಕರರು ತಾವೇ ಕಂಡುಕೊಂಡ ಅದ್ವೈತ ಸಿದ್ದಾಂತವನ್ನು ನಮ್ಮದೇ ಜೀವನದಲ್ಲಿ ಕಾರ್ಯಗತಗೊಳಿಸುವುದಕ್ಕಾಗಿ ಸಾಕ್ಷಾತ್ ಪರಮೇಶ್ವರನು ಈ ರೂಪದಲ್ಲಿ ಬಂದಿರುವನೆನ್ನುವುದನ್ನು ಅರಿತು ‘ಮನೀಷಿ ಪಂಚಕ’ ಎಂಬ ಸ್ತೋತ್ರದೊಡನೆ ಪರಮೇಶ್ವರನನ್ನು ಸ್ತುತಿಸುತ್ತಾರೆ.
ಶ್ರೀ ಶಂಕರಾಚಾರ್ಯರಿಗೆ ಹದಿನಾರರ ವಯಸ್ಸಿನಲ್ಲಿರುವಾಗ, ಅವರಿಗೆ ವೇದವ್ಯಾಸರ ಅನುಗ್ರಹವಾಯಿತು. ಅದೊಂದು ದಿನ ಒಬ್ಬ ಹಳೆಯ ವೃದ್ದರೋರ್ವರು ಶಂಕರರು ರಚಿಸಿದ್ದ ‘ಬ್ರಹ್ಮಸೂತ್ರ ಬಾಷ್ಯ’ದ ಕುರಿತಾಗಿ ವಿಮರ್ಶಾತ್ಮಕ ಚರ್ಚೆಗೆ ತೊಡಗಿದರು. ಶಂಕರ ಹಾಗೂ ಆ ವಯೋವೃದ್ದ್ರ ನಡುವಿನ ಚರ್ಚೆಯು ದಿನಗಳನ್ನು ಪೂರೈಸಿತು. ಹೀಗಿರಲು ಶಂಕರಾಚಾರ್ಯರಿಗೆ ಒಮ್ಮೆಲೇ ತಾನು ವಾದ ಹೂಡಿರುವುದು ಸ್ವತಃ ಬ್ರಹ್ಮಸೂತ್ರದ ಕತೃವಾದ ವೇದವ್ಯಾಸ ಮಹರ್ಷಿಗಳೊಡನೆ ಎನ್ನುವುದು ಅರಿವಿಗೆ ಬಂದಿತು. ತಕ್ಷಣವೇ ತನ್ನಿಂದಾದ ತಪ್ಪಿಗಾಗಿ ವ್ಯಾಸಮಹರ್ಷಿಗಳ ಚರಣಗಳಿಗೆರಗಿದ ಶಂಕರರು ಅವರಲ್ಲಿ ಕ್ಷಮೆಯನ್ನು ಯಾಚಿಸಿದರು. ಇದಕ್ಕೆ ಪ್ರತಿಕ್ರಯಿಸಿದ ವ್ಯಾಸರು ಶಂಕರರಿಗೆ ಮತ್ತೆ 16 ವರ್ಷಗಳ ಆಯಸ್ಸನ್ನು ವರವಾಗಿ ನೀಡಿ “ನೀನು ನಿನ್ನಲ್ಲಿರುವ ಜ್ಞಾನವನ್ನು ಇಡೀ ದೇಶಕ್ಕೆ ಪಸರಿಸು. ಇದರಿಂದ ಒಳಿತಾಗುತ್ತದೆ. ನೀನು ರಚಿಸಿದ ಈ ಬ್ರಹ್ಮಸೂತ್ರ ಬಾಷ್ಯಕ್ಕೆ ನನ್ನ ಸಂಪೂರ್ಣ ಸಹಮತವಿದೆ” ಎನ್ನುವುದಾಗಿ ಅನುಗ್ರಹಿಸಿದರು.
ಮುಂದೆ ಶ್ರೀ ಶಂಕರಾಚಾರ್ಯರು ದೇಶದ ನಾನಾ ಮೂಲೆಗಳಾನ್ನು ತಿರುಗಿ ವಿವಿಧ ಪಂಗಡಗಳಾ ಮುಖಂಡರ್ನ್ನೂ ವಿವಿಧ ಧಾರ್ಮಿಕ ವಿಚಾರವಾದಿಗಳನ್ನೂ ಸಂಧಿಸಿದ್ದಲ್ಲದೆ ಹಲವಾರು ಜನರನ್ನು ಆಧ್ಯಾತ್ಮಕ್ಕೆ ಸಂಬಂಧಪಟ್ಟ ವಾದದಲ್ಲಿ ಸೋಲಿಸಿದರು. ಕುಮಾರಿಲ ಭಟ್ಟ, ಮಂಡನ ಮಿಶ್ರರಾದಿಯಾಗಿ ನಾನಾ ವಿದ್ವಾಂಶರನ್ನು ವಾದದಲ್ಲಿ ಮಣಿಸಿದ ಶಂಕರರು ತಾವು ಸರ್ವಜ್ಞಪೀಠವನ್ನೇರಿದರು. ಹಾಗೆಯೇ ಮುಂದೆ ಹಿಂದೂ ಧರ್ಮ ಜಾಗೃತಿ ಮೂಡಿಸುವ ಸಲುವಾಗಿ, ತಾವು ಕಂಡುಕೊಂಡ ‘ಅದ್ವೈತ’ ತತ್ವದ ಪ್ರಚಾರಕ್ಕಾಗಿ ದೇಶದ ನಾಲ್ಕು ಮೂಲೆಗಳಲ್ಲೆ ನಾಲ್ಕು ಆಮ್ನಾಯ ಪೀಠ (ಉತ್ತರದಲ್ಲಿ ಬದರಿ ಉತ್ತರಾಮ್ನಾಯ ಜ್ಯೋತಿರ್ಪೀಠ, ದಕ್ಷಿಣದಲ್ಲಿ ಶೃಂಗೇರಿ ದಕ್ಷಿಣಾಮ್ನಾಯ ಶಾರದಾ ಪೀಠ, ಪೂರ್ವದಲ್ಲಿ ಪುರಿ ಪೂರ್ವಾಮ್ನಾಯ ಪೀಠ ಹಾಗೂ ಪಶ್ಚಿಮದಲ್ಲಿ ದ್ವಾರಕೆ ಪಶ್ಚಿಮಾಮ್ನಾಯ ಪೀಠ)ಗಳನ್ನು ಸ್ಥಾಪಿಸಿದರು. ಆ ನಾಲ್ಕೂ ಮಠಗಳು ಇಂದಿಗೂ ತಮ್ಮ ಪರಂಪರೆಯನ್ನು ಮುಂದುವರಿಸಿದ್ದು ಅಸಂಖ್ಯಾತ ಶಿಷ್ಯವರ್ಗವನ್ನು ಹೊಂದಿವೆ. ಮುಂದೆ ಶ್ರೀ ಶಂಕರಾಚಾರ್ಯರು ತಾವು ಬ್ರಹ್ಮಸೂತ್ರ, ಉಪನಿಷತ್ತು, ಭಗವದ್ಗೀತೆಗಳಿಗೆ ಬಾಷ್ಯಗಳನ್ನು ಬರೆದರು. ಇವರು ರಚಿಸಿದ ‘ಭಜಗೋವಿಂದಂ’, ‘ಸೌಂದರ್ಯ ಲಹರೀ’, ‘ಕನಕಧಾರಾ ಸ್ತೋತ್ರ’ ಗಳು ಬಹು ಪ್ರಸಿದ್ದವಾಗಿವೆ.
ಹೀಗೆ ಹಿಂದೂ ಧರ್ಮದ ಉದ್ದಾರಕರಾಗಿ, ಧರ್ಮ ಸಂಸ್ಥಾಪನೆಗಾಗಿ ಮಠಗಳ ಮೂಲಕ ಧಾರ್ಮಿಕ ಜಾಗೃತಿಯನ್ನುಂಟುಮಾಡಿದ ದಿವ್ಯ ಚೇತನ ಶ್ರೀ ಶಂಕರಾಚಾರ್ಯರು ತಾವು ತಮ್ಮ 32 ನೇ ವಯಸ್ಸಿನಲ್ಲಿ ಶ್ರೀ ಬದರೀ ಕ್ಷೇತ್ರದಲ್ಲಿ ಮಹಾಸಮಾಧಿಯನ್ನು ಹೊಂದಿದರು.

ಸಂದೇಶ

ಸಂಸ್ಕೃತದಲ್ಲಿ “ದ್ವಿ” ಎಂದರೆ ಎರಡು ಎಂದರ್ಥ. ಹಾಗಾಗಿ “ಅ”+”ದ್ವೈತ” ಅಂದರೆ “ಎರಡಲ್ಲದ್ದು” ಎಂದು ಅರ್ಥೈಸಬಹುದು. ಅದ್ವೈತ ಸಿದ್ದಾಂತದ ಸಾರವೇ ಇದು. ಆತ್ಮನಲ್ಲಿಯೇ ಪರಮಾತ್ಮನಿದ್ದಾನೆ. ಆತ್ಮನಿಗೂ ಪರಮಾತ್ಮನಿಗೂ ಭೇಧವಿಲ್ಲ. “ಅಹಂ ಬ್ರಹ್ಮಾಸ್ಮಿ”(ನನ್ನೊಳಗೇ ಬ್ರಹ್ಮನಿದ್ದಾನೆ/ನಾನೇ ಬ್ರಹ್ಮನಾಗಿದ್ದೇನೆ) “ತತ್ ತ್ವಮ್ ಅಸೀ”(ನೀನು ಸಹ ಅದೇ ಆತ್ಮನ ಅಂಶದಿಂದ ಕೂಡಿದ್ದೀಯೆ)-ಇವು ‘ಅದ್ವೈತ’ಸಿದ್ದಾಂತದ ಮೂಲ ಸಾರವನ್ನು ತಿಳಿಸುವ ಉಕ್ತಿಗಳು. ಶ್ರೀ ಆದಿಶಂಕರಾಚಾರ್ಯರು ಹೇಳುವಂತೆ “ಸರ್ವಂ ಬ್ರಹ್ಮಮಯಂ ಜಗತ್”- ಜಗತ್ತೆಲ್ಲವೂ ಬ್ರಹ್ಮನಿಂದ ಆಗಲ್ಪಟ್ಟಿದೆ. ಆತ್ಮನೇ ಪರಮಾತ್ಮನೂ ಆಗಿದ್ದಾನೆ, ಅದು ಮಾತ್ರವೇ ಸತ್ಯವಾದುದು. ವಿಶ್ವದಲ್ಲಿನ ಮಿಕ್ಕೆಲ್ಲವೂ ಮಿಥ್ಯ.

ಅದ್ವೈತ ಸಿದ್ಧಾಂತದ ಎಂಟು ಮೂಲ ತತ್ವಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದು-

1. ಬ್ರಹ್ಮ ಒಂದೇ ಸತ್ಯ ; ಈಜಗತ್ತು ಮಿಥ್ಯ ; ಜೀವನು ಬ್ರಹ್ಮನಿಂದ ಬೇರೆಯಲ್ಲ.
2.ಆತ್ಮವು ಸ್ವತಃ ಸಿದ್ಧವಾಗಿದೆ. ಅದು ಇದೆ ಎಂದು ಸಾಧಿಸಲು ಬೇರೆ ಪ್ರಮಾಣಗಳು ಬೇಕಾಗಿಲ್ಲ ; ಕಾರಣ ನಿರಾಕರಿಸುವವನೇ ಆತ್ಮ ಸ್ವರೂಪನಾಗಿದ್ದಾನೆ. ನಾನು ಇಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. .
3.ಬ್ರಹ್ಮವು ಜ್ಞಾನಕ್ಕೆ ವಿಷಯವಾಗಲಾರದು
4 ಬ್ರಹ್ಮವು ಸತ್ ಚಿತ್ ಆನಂದ ಸ್ವರೂಪ ವಾಗಿದೆ ..
5. ಬ್ರಹ್ಮವು ನಿರಾಕಾರ ನಿರ್ಗುಣ ; ಅದು ಇಂದ್ರಿಯ ಮನಸ್ಸುಗಳ ಆಚೆ ಇರುವಂತಹದು. ಇಂದ್ರಿಯ ಗೋಚರವಾದವು ಅನಿತ್ಯವಾಗಿದೆ.
6. ತ್ರಿವಿಧ ಸತ್ತೆಗಳು :
 1.ಪ್ರಾಪಂಚಿಕ ಸತ್ತೆ : ಅನುಭವಕ್ಕೆ ಬರುವುದು ಸತ್ಯವೇ ಆಗಿರುತ್ತದೆ. ಸ್ವಲ್ಪ ಕಾಲ ಇದ್ದು,ಆನಂತರ ಇಲ್ಲವಾಗುವುದು ಅನಿತ್ಯವಾದವುಗಳು;ಅದು ಈ ನಮ್ಮ ಅನುಭವಕ್ಕೆ ಬರುವ ಪ್ರಪಂಚಕ್ಕೆ ಅನ್ವಯಿಸುತ್ತದೆ. ಇದು ಪ್ರಾಪಂಚಿಕ ಸತ್ಯ ಅಥವಾ ವ್ಯವಹಾರಿಕ ಸತ್ಯ. ಆದ್ದರಿಂದ ನಾವು ಕಾಣವ ಈ ಜಗತ್ತು ಮತ್ತು ಅದರ ಅನುಭವ ಪೂರ್ಣ ಬ್ರಮೆಯಲ್ಲ.ಪೂರ್ಣ ಸತ್ಯವೂ ಅಲ್ಲ.ಅವು ಅನಿತ್ಯವಾದುದರಿಂದ ಮಿಥ್ಯೆ.ಭೂ, ಭವಿಷ್ಯತ್,ವರ್ತಮಾನ ಈ ತ್ರಿಕಾಲದಲ್ಲೂ ಇರುವುದಲ್ಲ.ಮಿಥ್ಯೆ ಎಂದರೆ ಬಂಜೆಯ ಮಗನಂತೆ ಪೂರ್ಣ ಸುಳ್ಳಲ್ಲ
2.ಪ್ರಾತಿಭಾಸಿಕ ಸತ್ತೆ : ಇದು ತಿರಾ ಕೆಳಗಿನ ಹಂತದ ಸತ್ಯ. ನಂಬುಗೆ ಇರುವ ವರೆಗೆ ಮಾತ್ರ ಇರುತ್ತದೆ. ಉದಾಹರಣೆಗೆ ಹಗ್ಗವನ್ನು ಹಾವೆಂದು ತಿಳಿಯುವುದು. ಹಾವು ಅನುಭವಕ್ಕೆ ಬರುವುದರಿಂದ ಇಲ್ಲವೆನ್ನುವಂತಿಲ್ಲ; ಅನುಭವ ಇರುವವರೆಗೂ ಸತ್ಯವಾಗೇ ಇರುತ್ತದೆ.ಇದು ಪ್ರಾತಿಭಾಸಿಕ ಸತ್ಯ
3.ಪಾರಮಾರ್ಥಿಕ ಸತ್ತೆ : ಇದು ತ್ರಿಕಾಲಾಬಾಧಿತ ಸತ್ಯ. ಭೂತ ಭವಿಷ್ಯತ್ ವರ್ತಮಾನಗಳಲ್ಲೂ ಬಾಧಿತವಾಗದೆ ಇರುವುದು.ಎಚ್ಚರ,ಕನಸು,ನಿದ್ದೆ ಈ ಮೂರೂ ಅವಸ್ಥೆಗಳಲ್ಲೂ ಸಾಕ್ಷಿರೂಪದಲ್ಲಿ ಒಂದೇ ರೀತಿಯಾಗಿರುವುದು.ಮೂರೂ ಕಾಲಗಳಲ್ಲಿ ಮೂರೂ ಅವಸ್ಥೆಗಳಲ್ಲಿ ಬದಲಾವಣೆ ಆಗುವುದಿಲ್ಲ ;ಒಂದೇ ರೀತಿ ಇರುತ್ತದೆ.ಇದು ಪಾರಮಾರ್ಥಿಕ ಸತ್ಯ. ಈ ಗುಣವನ್ನು ಹೊಂದಿರುವುದು,ಈ ತತ್ವಕ್ಕೆ ಅರ್ಹವಾದುದು ಬ್ರಹ್ಮವೊಂದೇ. ಆದ್ದರಿಂದ ಬ್ರಹ್ಮ ವೊಂದೇ ಪಾರಮಾರ್ಥಿಕ ಸತ್ಯವಾಗಿದೆ.
7.ಮನ, ಬುದ್ಧಿ, ಅಹಂಕಾರ, ಚಿತ್ತ, ಈ ಅಂತಃಕರಣ ದಿಂದ ಆವರಿಸಲ್ಪಟ್ಟ ಮೂಲ ಚೈತನ್ಯವೇ ಜೀವ. ಮಾಯೆಯಿಂದ ಆವರಿಸಲ್ಪಟ್ಟ ಬ್ರಹ್ಮ ಮಾಯೆಯ ಉಪಾದಿಯಿಂದ ಈಶ್ವರನೆನಿಸಿ ಕೊಳ್ಳುತ್ತಾನೆ. ಅದೇ ಅಜ್ಜ್ಞಾನದ ಉಪಾದಿಯಿಂದ ಜೀವನೆನಿಸುತ್ತಾನೆ. ಜೀವನಿಗೆ ಈ ಉಪಾದಿಗಳಿಂದ ಸ್ಥೂಲ, ಸೂಕ್ಷ್ಮ, ಕಾರಣಗಳೆಂಬ ಮೂರು ಶರೀರಗಳು. ಜಗ್ರತ್, ಸ್ವಪ್ನ, ಸುಷುಪ್ತಿ ಗಳೆಂಬ ಮೂರು ಅವಸ್ಥೆಗಳು. ಅವಿದ್ಯೆಯಿಂದ ಅಥವಾ ಅಜ್ಞಾನದಿಂದ ಬಿಡುಗಡೆಯಾದರೆ ಜೀವವು ಬ್ರಹ್ಮದಲ್ಲಿ ಲೀನವಾಗುವುದು- ಅಪರೋಕ್ಷಾನುಭೂತಿಯಾದಾಗ ತಾನೇ ಬ್ರಹ್ಮ ವೆಂಬ ಅನುಭವವಾಗುವುದು ; ತಾನು ಸಚ್ಚಿದಾನಂದ ರೂಪವೆಂಬ ಅನುಭವವಾಗುವುದು. ಇದು ಪಾರಮಾರ್ಥಿಕ ಸತ್ಯ.
8.ಈ ಸಂಸಾರವು ಅಥವಾ ಬೇರೆ ಬೇರೆ, ಅನೇಕ, ಎಂಬ ಭಾವವು ಅವಿದ್ಯೆ [ಅಜ್ಞಾನ]ಯಿಂದ ಉಂಟಾದುದು. ಜ್ಞಾನದಿಂದ ಮಾತ್ರ ತನ್ನ ನಿಜವಾದ ರೂಪವನ್ನು ಅರಿಯಬಹುದು. ಕರ್ಮಯೋಗ, ರಾಜಯೋಗ, ಭಕ್ತಿಯೊಗ ಇವು ಸಾಧಕನ ಮನಸ್ಸನ್ನು ಶುದ್ಧಿಗೋಳಿಸಲು ಪ್ರಯೋಜನ. ಅವಿದ್ಯೆ ಅಥವ ಅಜ್ಞಾನ ದೂರವಾದರೆ ತಾನೇ ಜ್ಞಾನವಾಗುವುದು.
“ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಂ”

ಅದ್ವೈತ ವೇದಾಂತದ ಸಾರವು ಈ ಉಕ್ತಿಯಲ್ಲಿದೆ.ಜಗತ್ತು ಅನುಭವಗಮ್ಯ.ಅನುಭವದ ಆಧಾರದಲ್ಲಿ ಜಗತ್ತಿನ ವ್ಯವಹಾರಗಳು ಪ್ರವಹಿಸುತ್ತದೆ. ಆತ್ಮನ ಸತ್ಯತ್ವವು ಅನುಭವದ  ಆಧಾರದ ಮೇಲೆ ಇರುತ್ತದೆ. ಜ್ಞಾತರೂಪದಲ್ಲಿ ಆತ್ಮನ ಉಪಲಬ್ಧಿಯನ್ನು ತೋರಿಸಲಿಕ್ಕಾಗುವುದಿಲ್ಲ. ವಿಷಯದ ರೂಪದಿಂದ ಇದನ್ನು ತಿಳಿಸಲಾಗುತ್ತದೆ, ಎನ್ನುತ್ತದೆ ಅದ್ವೈತ ಸಿದ್ದಾಂತ. ಆತ್ಮನ ಅಸ್ತಿತ್ವ ವಿಷಯದಲ್ಲಿ ಯಾರಿಗೂ ಸಂದೇಹವಿರುವುದಿಲ್ಲ. ಆತ್ಮನ ಅಸ್ತಿತ್ವವು ಪ್ರಸಿದ್ದವಿಲ್ಲದಿದ್ದಲ್ಲಿ ಸರ್ವರೂ ತಮ್ಮ ಅಸ್ತಿತ್ವದಲ್ಲಿ ನಂಬಿಕೆ ತಾಳುತ್ತಿರಲಿಲ್ಲ. ಆದರೆ ಲೋಕದಲ್ಲಿ ಹೀಗೆ ಆಗಲ್ಲಿಲ್ಲ ಆದ್ದರಿಂದ ಆತ್ಮನ ಅಸ್ತಿತ್ವವು ಸ್ಪಷ್ಟವಾಗಿ ಪ್ರಾಮಾಣಿಕವಾಗುತ್ತದೆ. ಈ ಆತ್ಮಾಸ್ತಿತ್ವದ ವಿಷಯದಲ್ಲಿ ಯಾರೂ ಸಂದೇಹಪಡಲು ಕಾರಣವಿಲ್ಲ. ಇದುವೇ ಉಪನಿಷತ್ತುಗಳು ಹೇಳಿದ ತತ್ವವಾಗಿದೆ. ಬ್ರಹ್ಮವು ಅಖಂಡವಾದುದು, ಅದನ್ನು ತುಂಡು ತುಂಡಾಗಿಸಲು ಬರುವುದಿಲ್ಲ. ಭೇದಗಳು ವ್ಯವಹಾರಕ್ಕಾಗಿ ಕಲ್ಪಿತವಾದವುಗಳು.
ಉಪನಿಷತ್ತು ಬ್ರಹ್ಮವನ್ನು ನಿರ್ಗುಣ ಮತ್ತು ಸಗುಣವೆಂದು ಎರಡು ರೂಪಗಳಲ್ಲಿ ವರ್ಣಿಸಿದೆ. ಬ್ರಹ್ಮವು ಜಗತ್ತಿಗೆ ಸಮಾನವಾಗಿ ಮಾಯಾವಿಶಿಷ್ಟವಾಗಿ ಮಾಯಿಕ ತತ್ವವನ್ನು ಧಾರಣೆ ಮಾಡುತ್ತದೆ. ಬ್ರಹ್ಮನು ಜಗತ್ತಿಗೆ ಕಾರಣನು ಮತ್ತು ಪದಾರ್ಥಾಂತರಗಳಿಂದ ಅವಿಭಕ್ತನಾಗಿದ್ದಾನೆ. ಸತ್, ಚಿತ್, ಆನಂದಸ್ವರೂಪಿಯಾಗಿದ್ದಾನೆ. ಇದೇ ಬ್ರಹ್ಮನ ಸ್ವರೂಪಲಕ್ಷಣ. ಆದರೆ ಮಾಯೆಯಿಂದ ಆವೃತನಾದರೆ ಸಗುಣಸ್ವರೂಪವನ್ನು ತಾಳುತ್ತಾನೆ. ಈ ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನಾಗಿ ಅಪರಬ್ರಹ್ಮ ಇಲ್ಲವೆ ಈಶ್ವರನೆಂದು ಕರೆಯಲ್ಪಡುತ್ತಾನೆ.
ಜಗತ್ತಿನಲ್ಲಿನ ಸಾಮಾನ್ಯ ಜೀವಿಗಳ ಉಪಾಸನೆಗಾಗಿ ನಿರ್ವಿಶೇಷ ಬ್ರಹ್ಮನು ಸವಿಶೇಷರೂಪವನ್ನು ಧರಿಸುತ್ತಾನೆ. ಎಲ್ಲಿ ನಿರ್ವಿಶೇಷ ಬ್ರಹ್ಮನನ್ನು ಆತ್ಮರೂಪವೆಂದು ಹೇಳಿದೆಯೋ ಅಲ್ಲಿ ಏಕತ್ವರೂಪವಾದ ಮೋಕ್ಷವೇ ಫಲವಾಗಿದೆ. ಆದರೆ ಎಲ್ಲಿ  ವಿಗ್ರಹಗಳ ಉಪಾಸನೆಯ ಪ್ರಸಂಗಬರುವುದೋ ಅಲ್ಲಿ ಸಂಸಾರಗೋಚರವಾದ ಫಲವು ಭಿನ್ನ ಭಿನ್ನವಾದ ಉಪಾಸ್ಯ ಉಪಾಸಕ ಭೇದದ ದೃಷ್ಟಿಯಿಂದ ಕಲ್ಪಿತಗಳಾಗಿವೆ. ಜೀವ ಮತ್ತು ಈಶ್ವರರೊಳಗೆ ಅಂಶ-ಅಂಶೀ ಕಲ್ಪನೆಯನ್ನು ಅದ್ವೈತ ಸಿದ್ದಾಂತವು ಪ್ರತಿಪಾದಿಸುತ್ತದೆ. ಇವುಗಳಲ್ಲಿ ಸಮಾನಧರ್ಮಗಳು ವಿದ್ಯಮಾನವಾಗಿದ್ದರೂ ಅವಿದ್ಯಾದಿವ್ಯವಧಾನದಿಂದ ತಿರೋಹಿತವಾಗಿದೆ. ಈಶ್ವರನನ್ನು ಧ್ಯಾನ ಮಾಡುವುದರಿಂದ ಸಾಧಕರಲ್ಲಿ ಅಲೌಕಿಕ ಶಕ್ತಿಗಳು ಪ್ರಾಪ್ತವಾಗುತ್ತವೆ. ಆದರಿಂದ ಅವರು ಹೊಸ ಸೃಷ್ಟಿಯನ್ನು ಮಾಡಲು ಸಮರ್ಥರಾಗುತ್ತಾರೆ. ತಿರೋಹಿತವಾದ ಶಕ್ತಿಯು ಉದಯವಾಗುವುದೇ ಜಪ, ತಪ ಮತ್ತು ಯೋಗಗಳ ಫಲ. ಈಶ್ವರನ ಸ್ವರೂಪದ ಅಜ್ಞಾನದಿಂದ ಜೀವನಿಗೆ ಬಂಧನವಾಗುತ್ತದೆ. ಎನ್ನುವುದು ಆದಿಶಂಕರಾಚಾರ್ಯರ ಅಭಿಪ್ರಾಯ.
“ಮುಮುಕ್ಷೋ ಸತ್ತ್ವ ಶುದ್ದ್ಯರ್ಥಂ”
ಮೋಕ್ಷದಲ್ಲಿ ಕಾತುರವುಳ್ಲವನ ಮನಸನ್ನು ಕರ್ಮಗಳು ಶುದ್ದಗೊಳಿಸುತ್ತವೆ, ನಾವು ಸಾಮಾನ್ಯವಾಗಿ ಮಾಡುವ ಕೆಲಸಗಳಾಲ್ಲಿ ಅಹಂಕಾರವು ಜಾಗೃತವಾಗಿರುತ್ತದೆ- ಎಂದರೆ ಯಾವೊಂದು ಕೆಲಸವನ್ನಾಗಲೀ ಮಾಡಿ ಮುಗಿಸಿದಾಗ ಸಾಮಾನ್ಯ ವ್ಯಕ್ತಿಯೋರ್ವನಿಗೆ ‘ನಾನು ಈ ಕೆಲಸವನ್ನು ಮಾಡಿದೆ’ ಎನ್ನುವ ಭಾವನೆ ಮೂಡುತ್ತದೆ. ಆದರೆ ಯಾರು ಜ್ಞಾನಿಗಳಿರುತ್ತಾರೋ ಅವರಲ್ಲಿ ಅಂತಹಾ ಭ್ರಮೆಯು ಇರುವುದಕ್ಕೆ ಸಾಧ್ಯವಿಲ್ಲ. ಕರ್ಮವು ಜ್ಞಾನದ ಪ್ರಾಪ್ತಿಗಾಗಿರುವ ಸಾಧನವಾಗಿದೆ.
“ಯದಿ ಅನಾತ್ಮಜ್ಞಸತ್ತ್ವಂ ತದಾ ಆತ್ಮಶುದ್ದರ್ಥಂ ತತ್ತ್ವವಿತ್ ಚೇತ್ ಲೋಕಸಂಗ್ರಹಾರ್ಥಂ”
ಯಾವೊಬ್ಬ ವ್ಯಕ್ತಿಯು ಆತ್ಮಜ್ಞಾನವನ್ನು ಪಡೆದವನಲ್ಲವೋ ಆತನು ತನ್ನ ಚಿತ್ತ ಶುದ್ದಿಗಾಗಿ ಕರ್ಮಗಳನ್ನು ಮಾಡಬೇಕು, ಯಾರು ಆತ್ಮಜ್ಞಾನವನ್ನು ಹೊಂದಿರುತ್ತಾರೆಯೋ ಅಂತಹವರು ಲೋಕಸಂಗ್ರಹಕ್ಕಾಗಿ ಕರ್ಮಗಳನ್ನು ಮಾಡತಕ್ಕುದು, ಎಂದರೆ ಯಾರೊಬ್ಬರೂ ಕರ್ಮಗಳನ್ನು ನಿರಾಕರಿಸುವಂತಿಲ್ಲ. ಅವರವರಿಗೆ ಅವರವರ ಕರ್ಮಗಳು ವಿಧಿಸಲ್ಪಡುತ್ತವೆ, ಆ ಕರ್ಮಗಳ ಹಿಂದೆ ಅದರದೇ ಆದ ಉದ್ದೇಶಗಳೂ ಇರುತ್ತವೆ. ಆದುದರಿಂದ ಪ್ರತಿಯೊಬ್ಬರೂ ಕರ್ಮಗಳನ್ನು ಮಾಡಬೇಕು.
ಮಾಯೆ ಮತ್ತು ಅವಿದ್ಯೆಗಳು ಸಮಾನ ಅರ್ಥವನ್ನು ಕೊಡುವ ಶಬ್ದಗಳಾಗಿವೆ. ಅಗ್ನಿಯಿಂದ ಬೇರೆಯಾಗದ ದಾಹಶಕ್ತಿಗೆ ಅನುರೂಪವಾಗಿ ಮಾಯೆಯು ಬ್ರಹ್ಮನ ಅನ್ವರ್ಥಭೂತವಾದ ಶಕ್ತಿ. ತ್ರಿಗುಣಾತ್ಮಕವಾದ ಮಾಯೆಯು ಜ್ಞಾನವಿರೋಧಿಯಾದ ಭಾವರೂಪವಾಗಿದೆ. ಮಾಯೆಯು ಸದ್ ರೂಪ ಅಸದ್ ರೂಪವೆರಡನ್ನೂ ಮೀರಿದೆ. ಅದನ್ನು ವರ್ಣಿಸಲು ಸಾಧ್ಯವಿಲ್ಲದುದರಿಂದ ಅನಿರ್ವಚನೀಯವೆನ್ನುತ್ತಾರೆ. ಮಾಯೆಯು ಪರಮಾತ್ಮನ ಅವ್ಯಕ್ತ ಶಕ್ತಿ. ಅದಕ್ಕೆ ಆದಿಯಿಲ್ಲ. ಗುಣತ್ರಯದಿಂದ ಅವಿದ್ಯೆ. ಅವರ ಕಾರ್ಯದಿಂದ ಅದು ತಿಳಿಯಲ್ಪಡುತ್ತದೆ. ಅದು ಜಗತ್ತನ್ನು ಸೃಷ್ಟಿಸುತ್ತದೆ. ಮಾಯೆಗೆ ಎರಡು ಶಕ್ತಿಗಳಿವೆ. ಆವರಣ ಮತ್ತು ವಿಕ್ಷೇಪ. ಇದರಿಂದ ಬ್ರಹ್ಮನ ಅಮೃತವಾದ ವಾಸ್ತವರೂಪವು ಅದರಲ್ಲಿ ಅವಸ್ಥಾರೂಪವಾದ ಜಗತ್ತಿನ ಪ್ರತೀತಿಯು ಉದಯವಾಗುತ್ತದೆ.
ಹೀಗೆ ಶಂಕರಾಚಾರ್ಯ ಪ್ರತಿಪಾದಿತ ಅದ್ವೈತ ತತ್ವವು ಮಾನವರಲ್ಲಿನ ಸಾವಿನ ಭಯವನ್ನು ದೂರಮಾಡಬಲ್ಲ ಶಕ್ತಿಯನ್ನು ಹೊಂದಿದೆ. ಯಾರು ಈ ಮೂಲ ತತ್ವವನ್ನು ಅರ್ಥೈಸಿಕೊಳ್ಳುತ್ತಾರೋ ಅಂತಹವರು ಎಂದಿಗೂ ಯಾವುದಕ್ಕೂ ಅಳುಕುವುದಿಲ್ಲ. ಸೃಷ್ಟಿಯ ಪ್ರತಿಯೊಂದು ಅಣು ಅಣುವಿನಲ್ಲಿಯೂ ಪರಮಾತ್ಮ ಸ್ವರೂಪಿಯಾದ ಬ್ರಹ್ಮವು ತಾನು ಇರುವುದರಿಂದಲೂ, ಆತ್ಮನೂ ಬ್ರಹ್ಮನೂ ಏಕವಾದುದರಿಂದಲೂ ನನ್ನೊಳಗೇ ಪರಬ್ರಹ್ಮದ ಅಂಶವಿರುವುದರಿಂದಲೂ ಯಾವ ಜೀವಿಯೂ ತಾನು ಮೇಲು, ಕೀಳು ಎನ್ನುವ ಹಾಗಿಲ್ಲ. ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವೂ ಅಲ್ಲ. ಜಗತ್ತೆಲ್ಲವೂ ಏಕಸ್ವರೂಪವಾಗಿದ್ದರೂ ಮಾಯೆಯಿಂದಾವೃತರಾದವರ ಕಣ್ಣುಗಳಿಗೆ ನಾನಾ ವಿಧಗಳಲ್ಲಿ ಕಾಣಿಸುತ್ತದೆ ಎನ್ನುವುದು ಅದ್ವೈತ ತತ್ವ. ಹೀಗಾಗಿ ಮಾನವರಾದಿಯಾಗಿ ಯಾರೂ ಸಾವಿಗೆ ಭಯಪಡಬೇಕಿಲ್ಲ. ಸಾವು ಅಂತ್ಯವಲ್ಲ, ಏಕೆಂದರೆ ಬ್ರಹ್ಮಕ್ಕೆ ಯಾವುದೇ ಅಂತ್ಯವಿಲ್ಲ. ಅದು ಅನಂತವಾದುದು

Friday 24 April 2015

ಮೂಡಲ್ ಕುಣಿಗಲ್ ಕೆರೆ./ Moodal kunigal kere..

ಮೂಡಲ್ ಕುಣಿಗಲ್ ಕೆರೆ ನೋಡೋರ್ಗೊಂದೈ ಭೋಗ
ಮೂಡಿ ಬರ್ತಾನೆ ಚಂದಿರಾಮ, ತಾನಂದನೋ
ಮೂಡಿ ಬರ್ತಾನೆ ಚಂದಿರಾಮ
ಆ ತಂತ್ರಿಸಿ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ
ಸಂತೆ ಹಾದಿಲಿ ಕಲ್ಲು ಕಟ್ಟೆ, ತಾನಂದನೋ
ಸಂತೆ ಹಾದಿಲಿ ಕಲ್ಲು ಕಟ್ಟೆ
ಬಾಳೆಯ ಹಣ್ಣಿನಂತೆ ಬಾಗಿದ ಕುಣಿಗಲ್ ಕೆರೆ
ಭಾವ ತಂದಾವನೆ ಬಣ್ಣದ್ ಸೀರೆ, ತಾನಂದನೋ
ಭಾವ ತಂದಾವನೆ ಬಣ್ಣದ್ ಸೀರೆ
ನಿಂಬೆಯ ಹಣ್ಣೀನಂತೆ ತುಂಬಿ ಕುಣಿಗಲ್ ಕೆರೆ
ಅಂದಾ ನೋಡಲು ಶಿವ ಬಂದ್ರು, ತಾನಂದನೋ
ಅಂದಾ ನೋಡಲು ಶಿವ ಬಂದ್ರು
ಅಂದಾವ ನೋಡಲು ಶಿವ ಬಂದ್ರು ಶಿವಮೊಗ್ಗಿ
ಕಬ್ಬಕ್ಕಿ ಬಾಯ ಬೀಡುತಾವೆ, ತಾನಂದನೋ
ಕಬ್ಬಕ್ಕಿ ಬಾಯ ಬೀಡುತಾವೆ
ಕಬ್ಬಕ್ಕಿನೇ ಬಾಯ ಬೀಡುತಾವೆ ಇಬ್ಬಿಡ
ಗಬ್ಬಾದ್ ಹೊಂಬಾಳೆ ನಡುಗ್ಯಾವೆ, ತಾನಂದನೋ
ಗಬ್ಬಾದ್ ಹೊಂಬಾಳೆ ನಡುಗ್ಯಾವೆ
ಹಾಕಾಕ್ಕೊಂದ್ ಆರೆಗೋಲು ನೂಕಾಕ್ಕೊಂದ್ ಊರುಗೋಲು
ಬೊಬ್ಬೆ ಹೊಡೆದಾವು ಬಾಳೆಮೀನು, ತಾನಂದನೋ
ಬೊಬ್ಬೆ ಹೊಡೆದಾವು ಬಾಳೆಮೀನು
ಬೊಬ್ಬೆಯ ಹೊಡೆದಾವು ಬಾಳೆಮೀನ್ ಕೆರೆಯಾಗೆ
ಗುಬ್ಬಿ ಸಾರಂಗ ನಗುತಾವೆ, ತಾನಂದನೋ
ಗುಬ್ಬಿ ಸಾರಂಗ ನಗುತಾವೆ.


- ಜನಪದ
                


Video link:
http://www.youtube.com/watch?v=o53wJCyoiiY (P. Kalinga Rao)
http://www.youtube.com/watch?v=ngG3YT7toK0  (B.R. Chaya)

Thursday 23 April 2015

ಅಂತರಂಗದ ಮೃದಂಗ.. / Antarangada Mrudanga

ಅಂತರಂಗದ ಮೃದಂಗ ಅಂತು ತೊಂ ತನಾನ
ಚಿತ್ತ ತಾಳ ಬಾರಿಸುತಲಿತ್ತು ಝಂ ಝಣಣ ನಾನಾ
ನೆನಪು ತಂತಿ ಮೀಟುತಿತ್ತು ತೊಂತನನ ತಾನ, ತೊಂತನನ ತಾನ,
ತೊಂತನನ ತಾನ 

ಹಲವು ಜನ್ಮದಿಂದ ಬಂದ ಯಾವುದೋನೋ ಧ್ಯಾನ
ಏಕನಾದದಂದದೊಂದು ತಾನದ ವಿತಾನ
ತನಗೆ ತಾನೇ ಸೋಲುತಿಹುದು ನೂಲುತಿಹುದು ಗಾನ ||

ಕಲ್ಪದಾದಿಯಲ್ಲೆ ನನ್ನ ನಿನ್ನ ವಿರಹವಾಗಿ 
ಎಲ್ಲೋ ಏನೋ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ
ಮರೆವೆಗೊಂಡು ಬಿದ್ದೆ ನಾನು ನೆಲದ ಮಣ್ಣು ತಾಗಿ || 

ಕತ್ತಲಲ್ಲೆ ಬೆಳಕು ಮಿಂಚಿ ಪಡೆದೀತೇಳು ಬಣ್ಣ
ಮೂಕ ಮೌನ ತೂಕ ಮೀರಿ ದನಿಯು ಹುಟ್ಟಿ ಸಣ್ಣ
ಕಣ್ಣ ಮಣ್ಣ ಕೂಡಲಲ್ಲಿ ಹಾಡು ಕಟ್ಟಿತಣ್ಣ ||

                                                        - ಅಂಬಿಕಾತನಯದತ್ತ 

Wednesday 22 April 2015

ಮೆರೆಯಬೇಡವೋ ಮನುಜ / Mereyabedavo Manuja


ಮೆರೆಯಬೇಡವೋ ಮನುಜ....
ಅಂತರಾಳದ ಅಂಕೆ ಮೀರಿ,
ಕೊಂಕು ಬೀರಿದೆ ಸುಂಕ ಕಾದಿದೆ...
ನೀತಿ ಮೀರದೆ, ನೀನು ಭ್ರಾಂತಿ ಕಾಣದೆ,
ಹಾದಿ ಸಾಗಯ್ಯ ಮುಂದೆ ಬಿಂಕ ಮಾಡದೆ.
ಡಂಭಾಚಾರವು ಏಕೋ ಏಕೋ?
ತುಂಬಾ ತೋರಿಕೆ ಏಕೋ ಏಕೋ?
ಸಹಜವಾಗಿ ಬಾಳಿ ಬದುಕಯ್ಯ...
                                                          ಮೆರೆಯಬೇಡವೋ ಮನುಜ....
ಡೌಲು ತೋರದೆ, ಎಂದು ಕೇಡು ಹೊಂಚದೆ,
ಪ್ರೀತಿ ಕಾಣಯ್ಯ ಬಂಧು ದ್ವೇಷ ಕಾರದೆ.
ಪೊಳ್ಳು ಜಂಭವು ಸಾಕೋ ಸಾಕೊ
 ಸುಳ್ಳು ವಂಚನೆ ಸಾಕೋ ಸಾಕೊ
 ಸ್ನೇಹದಿಂದ ಲೋಕ ನೋಡಯ್ಯ...
                                                          ಮೆರೆಯಬೇಡವೋ ಮನುಜ....

                                                                                         - ಪ್ರೊ. ದೊಡ್ಡರಂಗೇಗೌಡ

Tuesday 21 April 2015

ತಂಬುಲದ ತುಟಿಯ ತೋರಿ/ Tambulada tutiya tori

ತಂಬುಲದ ತುಟಿಯ ತೋರಿ ಮಲ್ಲಿಗೆಯ ಮುಡಿದುಕೊಂಡು
ಮೆಲ್ಲಗಾಗಿ ಬರುವವಳ್ಯಾರ ಸಂಜಿ ಏನ?

ಮೇಲ ಸೆರಗು ಮೆಲ್ಲಗ ಸರಿಸಿ ವಾರಿ ನೋಟ ಮೇಲಕ್ಕೆತ್ತಿ
ಮಳ್ಳಿಯಂತೆ ಮುರುಕುವಳ್ಯಾರ ಇರುಳು ಏನ?

ಅಲಿದು ಗಿಲಿದು ಒಲಿದು ಒಲಿದು ನೆಟ್ಟ ನೋಟ ಕೀಳಲಾರ್ದ 
ತಣ್ಣಗಾಗಿ ನಿಂತವಳ್ಯಾರ ನಸುಕು ಏನ?

ಹೊತ್ತೊತ್ತಿಗೆ ಹೊಂದಿಕೆಯಾಗಿ ಹಲವಾಡಿ ಒಕಾಟೆಯಾಗಿ
ಹೌದ ಚೆನ್ನಿ ಹೌದ ಚೆಲುವಿ ನನ್ನವಳೇನ? 

                                                             - ಅಂಬಿಕಾತನಯದತ್ತ

Saturday 18 April 2015

ಎಲ್ಲ ಓಕೆ,,ಮದುವೆ ಲೇಟ್ ಯಾಕೆ ?


ನಮ್ಮ ಜೀವನದಲ್ಲಿ ಮಾಡಿಕೊಳ್ಳುವುದು ಒಂದು ಮದುವೆ , ಅಂದ ಮೇಲೆ ಅದು ಸರಿಯಾಗಿ ಆಗಬೇಡವೇ ? ಇದು ಇಂದಿನ ಬಹುತೇಕ ಯುವಜನರು ವ್ಯಕ್ತಪಡಿಸುವ ಅಭಿಪ್ರಾಯ ? ಹೌದು ಮದುವೆಯೆನ್ನುವದು ಒಂದು ಸಂಸ್ಕಾರ , ಅದೊಂದು ಶುಭಕಾರ್ಯ, ಎರಡು ಆತ್ಮಗಳ ಪವಿತ್ರ ಮಿಲನ ಜೀವನದಲ್ಲಿ ಮದುವೆ ಎನ್ನುವುದು ಒಂದು ಮುಖ್ಯ ಘಟ್ಟ , ಹದಿನಾರು ಸಂಸ್ಕಾರಗಳಲ್ಲಿ ಒಂದು ಎರಡು ಆತ್ಮಗಳನ್ನು ಹತ್ತಿರ ತಂದು ಜೀನವವಿಡೀ ಒಟ್ಟಾಗಿ ಬಾಳುವಂತೆ ಪ್ರಚೋದಿಸುವ ಒಂದು ಸಾಮಾಜಿಕ ಕಟ್ಟಳೆ ಇದು, ಆದರೆ ಈ ಸಂಸ್ಕಾರ ದ ಆಚರಣೆಗೆ ಈ ದಾರ್ಮಿಕ ವಿದಿ ಪೂರೈಕೆಗೆ ಇಂದಿನ ಯುವಜನತೆ ಮೊದಲ ಪ್ರಾಶಸ್ತ್ಯ ಕೊಡುತ್ತಿಲ್ಲ, ಮದುವೆ ಭಾರತೀಯ ಶಿಕ್ಷಿತ ಹಾಗೂ ನಗರವಾಸಿ ಯುವಕ ,ಯುವತಿಯರ ಬದುಕಿನ ಪ್ರಥಮ ಆದ್ಯತೆಗುಳಿದಿಲ್ಲ , ಉದ್ಯೋಗ ಅಂದರೆ ತಮ್ಮ ಆರ್ಥಿಕ ಸಬಲತೆಗೆ ಅವರು ಪ್ರಥಮ ಆದ್ಯತೆ ನೀಡುತ್ತಿದ್ದಾರೆ .
ಓದಿದ್ದಾಯಿತು ವರ್ಷ ಇಪ್ಪತ್ತೊಂದಾಯಿತು ಇನ್ನೂ ಮದುವೆಯಾಗಿ ಹಿರಿಯರು ಮಾಡಿಟ್ಟ ಆಸ್ತಿ ಪಾಸ್ತಿ ನೋಡಿಕೊಂಡು ಅಥವಾ ಅವರ ಉದ್ಯೋಗ ಮುಂದುವರೆಸಿಕೋಡು ಹೋಗುವ ಮನೋಬಾವ ಇಂದಿನ ಯುವಕರರಲಿಲ್ಲ , ಇನ್ನು ಯುವತಿಯರತ್ತ ದೃಷ್ಟಿ ಹರಿಸಿದರೆ ಹೆಣ್ಣಿಗೆ ಮನೆ ಗಂಡಿಗೆ ಜಗತ್ತು ಎಂಬ ಕಾಲದಿಂದ ಹತ್ತಿರ ಬಂದಿದ್ದಾರೆ, ಹುಡುಗಿಗೆ ಹದಿನೈದಾದರು ಇನ್ನು ಮದುವೆ ಯಾಗಿಲ್ಲ ಎಂಬ ಅಂದಿನ ಮಾತುಗಳಿಗೆ ಇಂದು ಬೆಲೆಯಿಲ್ಲ, ತಮ್ಮ ಮದುವೆಯ ಸಮಯಕ್ಕೆ ಯುವಕರಿಗೆ ಇಪ್ಪತ್ತವೋಂದು ವರ್ಷ ತುಂಬಿರಲೇಬೇಕು ಎನ್ನುತೆ ಕಾನೂನು,
ವಯಸ್ಸಿನ ಮಾತು ಹಾಗಿರಲಿ ಮದುವೆಗಿಂತ ನಮ್ಮ ಬದುಕು ,ಭವಿಷ್ಯ ಮುಖ್ಯ ಎನ್ನುವ ಯುವಜನೆತೆಯ ನಂಬಿಕೆ .ಈಗ ಅಧಿಕವಾಗಿದೆ ೩೦ ಮೀರಿದರೂ ಮದುವೆಯ ಬಗ್ಗೆ ಚಿಂತಿಸದೆ ಉದ್ಯೋಗ ಬದುಕಿನ ಸ್ಥಿರತೆ ಸಾಮಜಿಕ ಸ್ತಾನಮಾನ ಮುಂತಾದವುಗಳ ಬಗ್ಗೆ ಯೋಚಿಸುವ ಯುವಜನರ ಸಂಖ್ಯೆ ಹೆಚ್ಚಿದೆ , ಬದುಕಿನ ಆರ್ಥಿಕ ಬದ್ರತೆ ಹಿನ್ನಲೆಯಲ್ಲಿ ಮದುವೆ ಮುಂದೂಡುವ ಸುಶಿಕ್ಷಿತ ಯುವಕ ,ಯುವತಿಯರ ಸಂಖ್ಯಯಲ್ಲಿ ಹೆಚ್ಚಳ ಕಂಡುಬಂದಿದೆ ,
ಮದುವೆ ಎಂಬ ದಾರ್ಮಿಕ ವಿಧಿಯ ಆಚರಣೆಯನ್ನು ಇಂದಿನ ಯುವಜನತೆ ಬಹು ಅದ್ದೂರಿಯಾಗಿ ವಿಜೃಂಬಣೇಯಿಂದ ನೆರವೇರಿಸಲು ಅಪೇಕ್ಚೆ ವ್ಯಕ್ತಪಡಿಸಿದರೂ ಯುವಕ , ಯುವತಿಯರು ತಮ್ಮ ಉದ್ಯೋಗ ಸಂಪಾದನೆಗಳತ್ತ ಒಲವು ತೋರಿ ವಿವಾಹಗಳನ್ನು ಮುಂದೂಡುತ್ತಾರೆ
ಈಗಿನ ಕಾಲಮಾನ ಸಾಕಷ್ಟು ಬದಲಾವಣೆ ಕಂಡಿವೆ , ಜನಸಂಖ್ಯೆ ಹೆಚ್ಚಳ ಸಂಪನ್ಮೂಲಗಳ ಕೊರತೆ ನಿರುದ್ಯೋಗದ ಸಮಸ್ಯೆಗಳನ್ನು ಸೃಷ್ಟಿಸಿದೆ , ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾಗುವ ಅವಶ್ಯಕತೆ ಇಂದು ಹೆಚ್ಚಿದೆ ಓದಿದ ಮಾತ್ರಕ್ಕೆ ಉದ್ಯೋಗ ದೊರಕದೆ ಆರ್ಥಿಕ ಸಂಪಾದನೆಯಾಗದು ಅಂತೆಯೇ ಅದ್ದೂರಿಯ ಮದುವೆ ಆ ಬಳಿಕ ಜೀವನ ನಿರ್ವಹಣೆ ಎಲ್ಲವೂ ಇಷ್ಟ ಸಾಧ್ಯವೇ ? ಹೀಗಾಗಿ ಬಹುಪಾಲು ಯುವ ಜನತೆ ತಮ್ಮ ಆರ್ಥಿಕ ನೆಲೆಗಟ್ಟು ಭದ್ರವಾಗುವ ತನಕ ಮದುವೆಯನ್ನು ಮುಂದೂಡುತ್ತಾರೆ ಇದು ಯುವಕರ ಮಾತಾದರೆ , ಯುವತಿಯರೂ ಅದೇ ನಿಟ್ಟಿನಲ್ಲಿ ಯೋಚಿಸುತ್ತಾರೆ.
ಮದುವೆಗೆ ಮುಂಚೆ ಮನೆಯಲ್ಲಿ ಸುಮ್ಮನೆ ಕುಳಿತಿರುವ ಯುವತಿಯರಿಲ್ಲ, ಮದುವೆಗೆ ಮುಂಚೆ ಹುಡುಗಿ ಉದ್ಯೋಗ ದಲ್ಲಿದ್ದರೆ ಅವಳು ಹೆತ್ತವರಿಗೆ ಬಾರವಾಗುವುದಿಲ್ಲ , ಅವಳ ಸಂಪಾದನೆಯಿಂದ ಮನೆಗೂ ಸಹಾಯವಾಗುತ್ತದೆ , ಮುಂದಾಗಲಿರುವ ಮದುವಗಾಗಿ ಹಣ ಒಡವೆ ಮಾಡಿಟ್ಟು ಕೊಳ್ಳುತ್ತಾರೆ , ಹಿಂದೆ ಯುವಕರು ಹೇಳುತ್ತಿದ್ದ ಮೊದಲು ಉದ್ಯೋಗ ನಂತರ ಮದುವೆ ಎಂಬ ಮಾತನ್ನು ಇಂದು ಯುವತಿಯರು ಹೇಳುತ್ತಿದ್ದಾರೆ.
ಆದುನಿಕ ಕಾಲಕ್ಕೆ ತಕ್ಕಂತೆ ಯುವಕ ಯವತಿಯರ ಮನೋಭಾವವೂ ಬದಲಾಗಿರುವುದು ಮದುವೆಗಳನ್ನು ಮುಂದೂಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇಂದಿನ ತರುಣಿಯರು ಮದುವೆಯಾಗಿ ಮನೆಯಲ್ಲೇ ಉಳಿಯಲು ಬಯಸರು , ಆದುನಿಕತೆ ಸೌಕರ್ಯಗಳು ಇರುವ ಗಂಡ-ಹೆಂಡತಿ ಮಾತ್ರ ವಾಸವಾಗಿರಲು ಅವಕಾಶವಿರುವ ನಗರದಲ್ಲಿರಬಹುದಾದ ಕಡೆಗೆ ಹೆಚ್ಚಾಗಿ ಒಲವು ತೋರುತ್ತಾರೆ .
ಕೃಷಿಯನ್ನು ನಂಬಿಕೊಂಡು ತಂದೆ ತಾಯಿಗಳೊಂದಿಗೆ ವಾಸವಾಗಿರುವ ಯುವಕರಿಗೆ ಮದುವೆಯ ಸಂದರ್ಬಗಳು ಒದಗಿಬರುವುದು ತಡವಾಗಿಯೇ , ಹಿಂದಿನಂತೆ ಮನೆಗೆಲಸಗಳನ್ನು ಮಾಡುತ್ತಾ, ಮನೆಯಲ್ಲೇ ಕುಳಿತಿರಲು ಈ ಗಿನ ಯುವತಿಯರು ಬಯಸರು , ಯುವಕರೂ ಅಷ್ಟೇ , ಆದೆಷ್ಟು ನಗರ ಪ್ರದೇಶಗಳ ಕಡೆಗೆ ಉದ್ಯೋಗ ವನ್ನರಸುತ್ತಾ ಸಾಗುತ್ತಾರೆ.
ತಮ್ಮ ಜೀವನ ನಿರ್ವಹಣೆಗೆ ಅಗತ್ಯವಾದ ವರಮಾನಕ್ಕೆ ಸಂಪಾದನೆಗೆ ಸೂಕ್ತ ಅವಕಾಶ ಸಿಗುವ ತನಕ , ಮದುವೆಯ ಬಗ್ಗೆಯೇ ಯೋಚನೆ , ಮದುವೆ ಎಂಬುದು ಒಂದು ಬಂದನ , ಎಂಬ ಅರಿವು ಯುಜನತೆಯಲ್ಲಿ ಆದಾಗಲೇ ಮೂಡಿದೆ. ಪ್ರಸ್ತುತ ಆದುನಿಕ ಬದುಕಿನ ದಾಂಪತ್ಯ ಕಹಿ ಪ್ರಕರಣಗಳನ್ನು ನೆರೆಹೊರೆಯವರಲ್ಲಿ ಪತ್ರಿಕೆಗಳಲ್ಲಿ ನೋಡಿ ಕೇಳೀ ತಿಳಿದುಕೊಳ್ಳು ವ ಇಂದಿನ ಯುವ ಜನರು ಆದೆಷ್ಟು ಮದುವೆಯನ್ನು ಮುಂದೂಡಲು ಪ್ರಯತ್ನಿಸುತ್ತಿದ್ದಾರೆ,
ಮೊದಲೆಲ್ಲ ವಿವಾಹದ ವಯಸ್ಸು ಬಂತೆಂದರೆ ಹೆತ್ತವರಿಗೆ ತಲೆಬಿಸಿ ಸಾವಿರ ಸುಳ್ಳೂ ಹೇಳಿ ಮದುವೆ ಮಾಡಬೇಕಾದ ಅನಿವಾರ್ಯತೆ ಇತ್ತು, ಮಗಳ ಕನ್ಯಾ - ಸೆರೆ ಬಿಡಿಸಲು ಆಸ್ತಿ-ಪಾಸ್ತಿ ಮಾರುವ ಅಗತ್ಯತೆ ಅನಿವಾರ್ಯವಾಗಿತ್ತು, ಜೀವನ ನಿರ್ವಹಣೆಯನ್ನು ಬದಿಗೊತ್ತಿ ಕೇವಲ ವಿದಿಯೊಂದರ ಆಚರಣೆಗೆ ಮಾಡಬೇಕಾದ ಖರ್ಚು , ಅದಕ್ಕಿಂತ ತೊಳಲಾಟ, ಪರದಾಟ , ಇಷ್ಟೆಲ್ಲವೂ ದಾಂಪತ್ಯ ಬದುಕಿಗೆ ಅಡ್ಡಿಯಾಗದಿರುವುದು ವೈಶಿಷ್ಟವೇ ಆದರೂ ಇಂದು ಕೈಗಾರೀಕರಣ ಆರ್ಥಿಕ ಮುನ್ನಡೆ, ಹಳೆಯ ನೈತಿಕ ಮೌಲ್ಯಗಳನ್ನು ಒರೆಗೆ ಹಚ್ಚಿ ನೋಡುವ ಆದುನಿಕ ವಿಚಾರದಾರೆ ತ್ರೀವವಾಗಿರುವ ಮಹಿಳಾ ವಿಮೋಚನಾ ಒತ್ತಾಸೆ , ಸಮಾನ ಮನಸ್ಸಿನ ಅಭಾವ, ಸಂಶಯ , ಪ್ರೇಮ ವಂಚನೆ ಪ್ರಕರಣಗಳು ಹಾಗೂ ಕೇವಲ ಪಾರಂಪರಿಕ ಕಾರಣಗಳಿಂದಾಗಿ ಇಂದು ಬಾರತೀಯ ದಾಂಪತ್ಯ ಬದುಕು ಕಳೆಗುಂದಿದೆ.
ಇಂದು ಸಮಾನ ಮನಸ್ಸಿನ ಅಭಾವ ಆದುನಿಕ ದಂಪತಿಗಳಲ್ಲಿ ಎದ್ದು ಕಾಣುವ ಪ್ರಧಾನ ಅಂಶವಾಗಿದೆ, ಇತ್ತೀಚೆಗೆ ಹೆಚ್ಚುತಿರುವ ವಿವಾಹ ವಿಚ್ಚೇದನೆ ಪ್ರಕರಣಗಳು ದಾಂಪತ್ಯ ಜೀವನದಲ್ಲಿರುವ ಬಿರುಕುಗಳನ್ನು ಎತ್ತಿ ತೋರಿಸುತ್ತದೆ.
ಔದ್ಯೋಗಿಕ ಕಾರಣದಿಂದಾಗಿ ಹುಟ್ಟಿಕೊಂಡ ನಮ್ಮ ಬೃಹತ್ ನಗರಗಳ ಯುವಜನತೆಗೆ ಇಂದು ಮದುವೆ ಪ್ರಥಮ ಆದ್ಯಯತೆಯಲ್ಲಿ , ಆಶಾಶ್ವತವಾದ ಈ ಬದುಕಿನಲ್ಲಿ ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವಲ್ಲಿ ಯುವಜನತೆ ನಿರತರಾಗಿದ್ದಾರೆ, ಬದುಕಿನಲ್ಲಿ ಒಂದು ಸ್ಥಾನಮಾನ ಗಳಿಸಿಕೊಂಡಿರುವ ಮೇಲೆಯೇ ಮದುವೆಯ ಮಾತು ಎಂಬುದು ಇವರ ನಿರ್ದಾರವಾಗಿದೆ .
ಒಟ್ಟಿನಲ್ಲಿ ಹೇಳುವುದಾದರೆ ಎರಡು ಆತ್ಮಗಳನ್ನು ಹತ್ತಿರ ತಂದು ಜೀವನವಿಡೀ ಒಟ್ಟಾಗಿ ಬಾಳುವಂತೆ ಪ್ರಚೋದಿಸುವ ಈ ಸಾಮಾಜಿಕ ಕಟ್ಟು ಕಟ್ಟಳೆಯಾದ ಮದುವೆಯನ್ನು ಮುಂದೂಡುವುದರಿಂದ ಮುಂದಿನ ಬದುಕಿನಲ್ಲಿ ಬಂದರೆಗುವ ನಾನಾ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ , ಓದು ಸೇರಿದಂತೆ ಉದ್ಯೋಗ ಆ ಮೂಲಕ ಆರ್ಥಿಕ ಸಬಲತೆಗೆ ಪ್ರಮುಖ ಪ್ರಾಶಸ್ಯ ಕೊಡಬೇಕಾಗಿದ್ದು ಇಂದಿನ ಅಗತ್ಯ ಹಾಗೆ ಮಾಡದೆ ಮೊದಲೇ ಮುದುವೆಯಂಬ ಬಂದನಕ್ಕೆ ಒಳಗಾಗಿ ಜೀವನ ರಥವನ್ನು ಸಾಗಿಸಲಾಗದೆ ಹೆತ್ತವರಿಗೆ ಹೊರೆಯಾಗಿ ಸಮಾಜಕ್ಕೂ ತೊಂದರೆ ಕೊಡುವಂತಾಗಬಾರದು ,
ಸಂಸಾರವೆಂಬ ಸಾಗರದ ಈಜಿ ದಾಟಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವುದು , ಅತ್ಯಗತ್ಯ ಅಂತಹ ಪೂರ್ವ ಸಿದ್ದತೆಗಳೊಂದಿಗೆ ಮದುವೆಯಂಬ ಧಾರ್ಮಿಕ ವಿದಿಗೆ ಅಡಿ ಇಟ್ಟರೆ ಮುಂದೆ ಸಂಸಾರಿಕ ಜೀವನ ಸುಗಮವಾಗಿ ಸಾಗಲು ಸಾದ್ಯ ನೀವೇನಂತೀರ ?

ಓ ನನ್ನ ಚೇತನ / O nanna Chetana

ಓ ನನ್ನ ಚೇತನ
ಆಗು ನೀ ಅನಿಕೇತನ ||

ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ ||

ನೂರುಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ ||

ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು ||

ಅನಂತ ತಾನನಂತವಾಗಿ
ಆಗುತಿಹನೆ ನಿತ್ಯ ಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು ||

                                           - ಕುವೆಂಪು

Friday 17 April 2015

ತೆರೆದಿದೆ ಮನ ಓ/ Teredide mana oo...

ತೆರೆದಿದೆ ಮನ ಓ ಬಾ ಅತಿಥಿ
ಹೊಸಬೆಳಕಿನ ಹೊಸ ಗಾಳಿಯಾ
ಹೊಸ ಬಾಳನು ತಾ ಅತಿಥಿ

ಆವ ರೂಪದೊಳು ಬಂದರು ಸರಿಯೇ

ಆವ ವೇಷದೊಳು ನಿಂದರು ಸರಿಯೇ
ನೀಸೆರುದಯದೊಳು ಬಹೆಯಾ ಬಾ
ತಿಂಗಳಂದದಲಿ ಬಹೆಯಾ ಬಾ ||

ಇಂತಾದರು ಬಾ ಅಂತಾದರೂ ಬಾ

ಎಂತಾದರು ಬಾ ಬಾ ಬಾ
ಬೇಸರ ವಿದನು ರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ ||

ಕಡಲಾಗಿ ಬಾ ಬಾನಾಗಿ ಬಾ

ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿ ಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ ಬಾ
ಹೊಸ ತಾನದ ಹೊಸ ಗಾನದ
ಹೊಸ ತಾನದ ಹೊಸ ಗಾನದ
ರಸ ಜೀವವ ತಾ ತಾ ತಾ ||

ಮೂಡಲ ಮನೆಯಾ ಮುತ್ತಿನ ನೀರಿನ/ Moodala maneya muttina neerina


ಮೂಡಲ ಮನೆಯಾ ಮುತ್ತಿನ ನೀರಿನ
ಎರಕSವ ಹೊಯ್ದಾ
ನುಣ್ಣ-ನ್ನೆರಕSವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ.
ಹೋಯ್ತೋ-ಜಗವೆಲ್ಲಾ ತೊಯ್ದಾ


ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು.


ಎಲೆಗಳ ಮೇಲೆ ಹೂಗಳ ಒಳಗೆ
ಅಮೃತSದ ಬಿಂದು
ಕಂಡವು-ಅಮೃತದ ಬಿಂದು
ಯಾರಿರಿಸಿರುವರು ಮುಗಿಲS ಮೇಲಿಂ-
ದಿಲ್ಲಿಗೇ ತಂದು.
ಈಗ-ಇಲ್ಲಿಗೇ ತಂದು.


ತಂಗಾಳಿಯಾ ಕೈಯೊಳಗಿರಿಸೀ
ಎಸಳೀನಾ ಚವರಿ
ಹೂವಿನ- ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧ-ಮೈಯೆಲ್ಲಾ ಸವರಿ.


ಗಿಡಗಂಟೆಗಳಾ ಕೊರಳೊಳಗಿಂದ
ಹಕ್ಕಿಗಳ ಹಾಡು
ಹೊರಟಿತು-ಹಕ್ಕಿಗಳ ಹಾಡು.
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು.


ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ.
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ.


ಅರಿಯದು ಅಳವು ತಿಳಿಯದು ಮನವು
ಕಾಣSದೋ ಬಣ್ಣಾ
ಕಣ್ಣಿಗೆ-ಕಾಣSದೋ ಬಣ್ಣಾ.
ಶಾಂತಿರಸವೇ ಪ್ರೀತಿಯಿಂದಾ
ಮೈದೊರೀತಣ್ಣಾ
ಇದು ಬರಿ-ಬೆಳಗಲ್ಲೋ ಅಣ್ಣಾ.         
                                                      - ಅಂಬಿಕಾತನಯದತ್ತ (ದ. ರಾ. ಬೇಂದ್ರೆ)

Thursday 16 April 2015

ಯುಗ ಯುಗಾದಿ ಕಳೆದರೂ / Yuga yugadi kaledaru...

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

                    ಹೊಂಗೆ ಹೂವ ತೊಂಗಳಲಿ,
                    ಭೃಂಗದ ಸಂಗೀತ ಕೇಳಿ
                    ಮತ್ತೆ ಕೇಳ ಬರುತಿದೆ.
                    ಬೇವಿನ ಕಹಿ ಬಾಳಿನಲಿ
                    ಹೂವಿನ ನಸುಗಂಪು ಸೂಸಿ
                    ಜೀವಕಳೆಯ ತರುತಿದೆ.

ವರುಷಕೊಂದು ಹೊಸತು ಜನ್ಮ,
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ.
ಒಂದೇ ಒಂದು ಜನ್ಮದಲಿ
ಒಂದೇ ಬಾಲ್ಯ, ಒಂದೇ ಹರೆಯ
ನಮಗದಷ್ಟೇ ಏತಕೋ.

                    ನಿದ್ದೆಗೊಮ್ಮೆ ನಿತ್ಯ ಮರಣ,
                    ಎದ್ದ ಸಲ ನವೀನ ಜನನ,
                    ನಮಗೆ ಏಕೆ ಬಾರದು?
                    ಎಲೆ ಸನತ್ಕುಮಾರ ದೇವ,
                    ಎಲೆ ಸಾಹಸಿ ಚಿರಂಜೀವ,
                    ನಿನಗೆ ಲೀಲೆ ಸೇರದೂ.

ಯುಗ ಯುಗಗಳು ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

                                                  - ಅಂಬಿಕಾತನಯದತ್ತ

ಘಮ ಘಮ ಘಮ್ಮಾಡಸ್ತಾವ/ Ghamma Ghamma Ghammadasthava...


ಘಮ ಘಮಾ ಘಮ್ಮಾಡಿಸ್ತಾವ ಮಲ್ಲಿಗಿ  | ನೀ ಹೊರಟಿದ್ದೀಗ ಎಲ್ಲಿಗೀ ?
ಘಮ ಘಮಾ..................... || ಪಲ್ಲವಿ ||

ತುಳುಕ್ಯಾಡತಾವ ತೂಕಡಿಕಿ 
ಎವಿ ಅಪ್ಪತಾವ ಕಣ್ಣ ದುಡುಕಿ 
ಕನಸು ತೇಲಿ ಬರತಾವ ಹುಡುಕಿ ||
ನೀ ಹೊರಟಿದ್ದೀಗ ಎಲ್ಲಿಗೀ ?

ಚಿಕ್ಕಿ ತೋರಿಸ್ತಾವ ಚಾಚಿ ಬೆರಳ 
ಚಂದ್ರಮ ಕನ್ನಡಿ ಹರಳ 
ಮನ ಸೋತು ಆಯಿತು ಮರುಳ ||
ನೀ ಹೊರಟಿದ್ದೀಗ ಎಲ್ಲಿಗೀ ?

ನೆರಳಲ್ಲಾಡತಾವ ಮರದ ಬುಡsಕ
ಕೆರಿ ತೆರಿ ನೂಗತಾವ ದಡಕs 
ಹೀಂಗ ಬಿಟ್ಟು ಎಲ್ಲಿ ನನ್ನ ನಡsಕ 
ನೀ ಹೊರಟಿದ್ದೀಗ ಎಲ್ಲಿಗೀ ?

ನನ್ನ ನಿನ್ನ ಒಂದತನದಾಗ 
ಹಾಡು ಹುಟ್ಟಿ ಒಂದು ಮನದಾಗ 
ಬೆಳದಿಂಗಳಾತು ಬನದಾಗ || 
ನೀ ಹೊರಟಿದ್ದೀಗ ಎಲ್ಲಿಗೀ ?

ಬಂತ್ಯಾಕ ನಿನಗ ಇಂದ ಮುನಿಸು 
ಬೀಳಲಿಲ್ಲ ನನಗ ಇದರ ಕನಸು 
ರಾಯ ತಿಳಿಯಲಿಲ್ಲ ನಿನ್ನ ಮನಸು ||
ನೀ ಹೊರಟಿದ್ದೀಗ ಎಲ್ಲಿಗೀ ?


                                 -ಅಂಬಿಕಾತನಯದತ್ತ

Video link : www.youtube.com/watch?v=vF8qKYJAUlo

Wednesday 15 April 2015

ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು / Athitha nodadiru

ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು, ಮಗುವೆ;
ಜೋ ಜೋಜೋ ಜೋ ಜೋ ಜೋಜೋ ಜೋ

ಸುತ್ತಿ ಹೊರಳಾಡದಿರು, ಮತ್ತೆ ಹಠ ಹೂಡದಿರು.
ನಿದ್ದೆ ಬರುವಳು ಕದ್ದು ಮಲಗು ಮಗುವೆ
ಜೋ ಜೋಜೋ ಜೋ ಜೋ ಜೋಜೋ ಜೋ.

ಮಲಗು ಚೆಲ್ವಿನ ತೆರೆಯೆ, ಮಲಗು ಒಲ್ಮೆಯ ಸೆರೆಯೆ,
ಮಲಗು ತೊಟ್ಟಿಲ ಸಿರಿಯೆ, ದೇವರಂತೆ;
ಮಲಗು ಮುದ್ದಿನ ಗಿಣಿಯೆ, ಮಲಗು ಮುತ್ತಿನ ಮಣಿಯೆ,
ಮಲಗು ಚಂದಿರನೂರ ಹೋಗುವೆಯಂತೆ .

ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ
ಚಂದಿರನ ತಂಗಿಯರು ನಿನ್ನ ಕರೆದು;
ಹೂವ ಮುಡಿಸುವರಂತೆ, ಹಾಲ ಕುಡಿಸುವರಂತೆ,
ವೀಣೆ ನುಡಿಸುವರಂತೆ ಸುತ್ತ ನೆರೆದು.

ಬಣ್ಣ ಬಣ್ಣದ ಕನಸು ಕರಗುವುದು ಬಲುಬೇಗ;
ಹಗಲು ಬರುವನು ಬೆಳ್ಳಿ ಮುಗಿಲ ನಡುವೆ
ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ
ಪಟ್ಟದಾನೆಯ ಮೇಲೆ ಪುಟ್ಟ ಮಗುವೆ.

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೆ
ಜೋ ಜೋಜೋ ಜೋ ಜೋ ಜೋಜೋ ಜೋ
ಜೋ ಜೋಜೋ ಜೋ ಜೋ ಜೋಜೋ ಜೋ

ಸಾಹಿತ್ಯ – ಕೆ.ಎಸ್. ನರಸಿಂಹಸ್ವಾಮಿ
ಸಂಗೀತ – ಮೈಸೂರು ಅನಂತಸ್ವಾಮಿ
ಗಾಯನ – ಸುಲೋಚನ

Download video:- www.youtube.com/watch?v=3Qm0ULr3FmE

Tuesday 14 April 2015

ಇಳಿದು ಬಾ ತಾಯೆ ಇಳಿದು ಬಾ.. / ilidu baa taaye ilidu baa

ಇಳಿದು ಬಾ ತಾಯಿ ಇಳಿದು ಬಾ...
ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ
 ದೇವದೇವರನು ತಣಿಸಿ ಬಾ | ದಿಗ್ದಿಗಂತದಲಿ ಹನಿಸಿ ಬಾ | ಚರಾಚರಗಳಿಗೆ ಉಣಿಸಿ ಬಾ
 ಇಳಿದು ಬಾ ತಾಯಿ ಇಳಿದು ಬಾ...
ನಿನಗೆ ಪೊಡಮಡುವೆ ನಿನ್ನನುಡುಕೊಡುವೆ ಏಕೆ ಎಡೆತಡೆವೆ ಸುರಿದು ಬಾ
 ಸ್ವರ್ಗ ತೊರೆದು ಬಾ | ಬಯಲ ಜರೆದು ಬಾ | ನೆಲದಿ ಹರಿದು ಬಾ
 ಬಾರೆ ಬಾ ತಾಯಿ ಇಳಿದು ಬಾ | ಇಳಿದು ಬಾ ತಾಯಿ ಇಳಿದು ಬಾ
 ನನ್ನ ತಲೆಯೊಳಗೆ ನನ್ನ ಬೆಂಬಳಿಗೆ ನನ್ನ ಒಳಕೆಳಗೆ ನುಗ್ಗಿ ಬಾ
 ಕಣ್ಣ ಕಣ್ತೊಳಿಸಿ ಉಸಿರ ಎಳೆ ಎಳಸಿ ನುಡಿಯ ಸೊಸಿ ಮೊಳೆಸಿ ಹಿಗ್ಗಿ ಬಾ
 ಎದೆಯ ನೆಲೆಯಲ್ಲಿ ನಿಲಿಸಿ ಬಾ | ಜೀವ ಜಲದಲ್ಲಿ ಚಲಿಸಿ ಬಾ | ಮೂಲ ಹೊಲದಲ್ಲಿ ನೆಲೆಸಿ ಬಾ
 ಕಮ್ಚು ಮಿಂಚಾಗಿ ತೆರಳಿ ಬಾ | ನೀರು ನೀರಾಗಿ ಉರುಳಿ ಬಾ | ಮಾತೆ ಹೊಡಮರಳಿ ಬಾ
 ಇಳಿದು ಬಾ ತಾಯಿ ಇಳಿದು ಬಾ
 ದಯೆಯಿರದ ದೀನ ಹರೆಯಳಿದ ಹೀನ ನೀರಿರದ ಮೀನ ಕರೆಕರೆವ ಬಾ
 ಕರು ಕಂಡ ಕರುಳೆ ಮನ ಉಂಡ ಮರುಳೆ ಉದ್ದಂಡ ಅರುಳೆ ಸುಳಿ ಸುಳಿದು ಬಾ
 ಶಿವ ಶುಭ್ರ ಕರುಣೆ ಅತಿ ಕಿಂಚದರುಣೆ ವಾತ್ಸಲ್ಯ ವರಣೆ ಇಳಿ ಇಳಿದು ಬಾ
 ಇಳಿದು ಬಾ ತಾಯಿ ಇಳಿದು ಬಾ
 ಕೊಳೆಯ ತೊಳೆವವರು ಇಲ್ಲ ಬಾ | ಬೇರೆ ಶಕ್ತಿಗಳು ಹೊಲ್ಲ ಬಾ | ಹೇಗೆ ಮಾಡಿದರು ಅಲ್ಲ ಬಾ
 ನಾಡಿ ನಾಡಿಯನು ತುತ್ತ ಬಾ | ನಮ್ಮ ನಾಡನ್ನೆ ಸುತ್ತ ಬಾ | ಸತ್ತ ಜನರನ್ನು ಎತ್ತ ಬಾ
 ಇಳಿದು ಬಾ ತಾಯಿ ಇಳಿದು ಬಾ
 ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುಧ ಶುದ್ದ ನೀರೆ
 ಎಚ್ಚೆತ್ತು ಎದ್ದ ಆಕಾಶದುದ್ದ ದರೆಗಿಳಿಯಲಿದ್ದ ದೀರೆ
 ಸಿರಿವಾರಿಜಾತ ವರಪಾರಿಜಾತ ತಾರಾ ಕುಸುಮದಿಂದೆ
 ವೃಂದಾರ ವಂದ್ಯೆ ಮಂದಾರ ಗಂಧೆ ನೀನೇ ತಾಯಿ ತಂದೆ
 ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ
 ಬಂದಾರೆ ಬಾರೆ ಒಂದಾರೆ ಸಾರೆ ಕಂಡಾರೆ ತಡೆವರೇನೆ
 ಅವತಾರವೆಂದೆ ಎಂದಾರೆ ತಾಯೆ ಈ ಅಧಃಪಾತವನ್ನೆ
 ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ
 ದಮ್ ದಮ್ ಎಂದಂತೆ ದುಡುಕಿ ಬಾ | ನಿನ್ನ ಕಂದನ್ನ ಹುಡುಕಿ ಬಾ | ಹುಡುಕಿ ಬಾ ತಾಯೆ ದುಡುಕಿ ಬಾ
 ಹರನ ಹೊಸತಾಗಿ ಹೊಳೆದು ಬಾ | ಬಾಳು ಬೆಳಕಾಗಿ ಬೆಳೆದು ಬಾ | ಕೈ ತೊಳೆದು ಬಾ ಮೈ ತೊಳೆದು ಬಾ
 ಇಳಿದು ಬಾ ತಾಯಿ ಇಳಿದು ಬಾ | ಇಳೆಗಿಳಿದು ಬಾ ತಾಯಿ ಇಳಿದು ಬಾ
 ಶಂಭು ಶಿವಹರನ ಚಿತ್ತೆ ಬಾ | ದತ್ತ ನರಹರಿಯ ಮುತ್ತೆ ಬಾ | ಅಂಬಿಕಾತನಯನತ್ತೆ ಬಾ
 ಇಳಿದು ಬಾ ತಾಯಿ ಇಳಿದು ಬಾ

                                                                                         - ಅಂಬಿಕಾತನಯದತ್ತ 

 * ಅಂಬಿಕಾತನಯದತ್ತರ ಗಂಗಾವತರಣ ಸಂಕಲನದ ಖ್ಯಾತ ಕವನ. ಅರಿಶಿನ-ಕುಂಕುಮ ಚಿತ್ರದಲ್ಲಿ ಪಿ.ಬಿ. ಶ್ರೀನಿವಾಸ್ ರ ಕಂಠದಲ್ಲಿ ಮತ್ತು ಭಾವಗೀತೆಯಾಗಿ ಮೈಸೂರು ಅನಂತಸ್ವಾಮಿ, ಪಿ. ಕಾಳಿಂಗರಾಯರ ಸ್ವರದಲ್ಲರಳಿದೆ. ಇದು ಮೂಲ ಕವನದ ಪೂರ್ಣಪಾಠ. ಗೀತೆಯಲ್ಲಿ ಕೆಲವೊಂದು ಚರಣಗಳನ್ನು ಮಾತ್ರ ಬಳಸಲಾಗಿದೆ. ಹಾ, ಇದೆ ಹೆಸರಿನ ಮತ್ತೊಂದು ಭಾವಗೀತೆಯೂ ಕನ್ನಡದಲ್ಲಿದೆ.

ಇಳಿದು ಬಾ ತಾಯೆ ಇಳಿದು ಬಾ. / ilidu baa taaye ilidu baa...

ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ
ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ
ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ
ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥ್ವಿಯಲ್ಲಿ.
 
ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡೆಸುತಿಹ ಶಕ್ತಿಯೆ
ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ ಯುಕ್ತಿಯೆ
ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೆ
ನಿನ್ನ ಅವತಾರವೆನ್ನ ಉದ್ಧಾರ ಬಾ ದಿವ್ಯ ಮುಕ್ತಿಯೆ
ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆ ಎಲ್ಲವಾದೆ
ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ
ಎನಿತು ಕರೆದರೂ ಓಕೊಳ್ಳದಿರುವಚಿನ್ನಿದ್ರೆಯಾದೆ
ಬೆಳಗಿ ನನ್ನಾತ್ಮಕಿಳಿದು ಬಾ ತಾಯೆ ನೀನೆ ಬ್ರಹ್ಮ ಬೋಧೆ
ಇಳಿದು ಬಾ ತಾಯೆ ಇಳಿದು ಬಾ.
ಗಾಳಿಗುಸಿರು ನೀ ಬೆಂಕಿಗುರಿಯು ನೀನುದಕಕದರ ಜೀವ
ಅಗ್ನಿ ಇಂದ್ರ ವರುಣಾರ್ಕ ದೇವರನು ಮಾಡಿ ನೋಡಿ ಕಾವ
ಶಿವನ ಶಕ್ತಿ ನೀ, ವಿಷ್ಣು ಲಕ್ಷ್ಮೀ ನೀ, ಚತುರ್ಮುಖನ ರಾಣಿ
ದಿವ್ಯ ವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು, ವಾಣಿ
ಹೃದಯ ಪದ್ಮ ತಾನರಳೆ ಕರೆವೆ ಬಾರಮ್ಮ ಬಾ, ಇಳಿದು ಬಾ
ಮನೋದ್ವಾರ ತಾ ಬಿರಿಯೆ ಕರೆವೆ ಜಗದಂಬೆ ಬಾ, ಇಳಿದು ಬಾ
ಅಗ್ನಿ ಹಂಸ ಗರಿಗೆದರೆ ಕರೆವೆ ಬಾ ತಾಯೆ ಬಾ, ಇಳಿದು ಬಾ
ಚೈತ್ಯ ಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು, ಬಾ, ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ.
                                                                              -  ಕುವೆಂಪು

Monday 13 April 2015

ನಾ ಮೇಲಿನವನು ಬಲು ದೊಡ್ಡವನು / Naa melinavanu balu doddavanu...

ನಾ ಮೇಲಿನವನು ಬಲು ದೊಡ್ಡವನು ಎಂದು,
ಮೆರೆದಾಡ ಬೇಡ ಗೆಳೆಯ.
ನಿನಗಿಂತ ಮಿಗಿಲವರು ಇದ್ದಾರೂ ಬುವಿಯಲ್ಲಿ,
ಸುಳ್ಳು ಭ್ರಮೆಯಲ್ಲಿ ನೀ ಮುಳುಗಬೇಡ.

ಬಲುದೊಡ್ಡ ಚಂದಿರನು ಇರುಳೆಲ್ಲ ಬೆಳಗುವನು
ಮರೆಯಾಗುವನು ಹಗಲ ಕಿರಣದಲ್ಲಿ.
ಉರಿಯುವನು ಸೂರ್ಯ ಅವನಿಗಿಂತ ಹಿರಿಯ
ಕಳೆದು ಹೋಗುವನು ಇರುಳ ಸೆರಗಿನಲ್ಲಿ.

ಗ್ರಹತಾರೆಗಳ ಹೊತ್ತ ಗಗನಕೆ ಮರೆಯುಂಟೆ
ಸಾರಿ ಹೇಳಿತೆ ತಾ ಮಿಗಿಲು ಎಂದು.
ಅಣುವಲ್ಲಿ ಅಣುವಾದ ಕಣ್ಣಿದ್ದೂ ಕುರುಡಾದ
ನೀ ಕೂಗಬಹುದು ಹಾಗೆಂದು.

ಮಣ್ಣು ಮೊಳಕೆಯ ಹುಟ್ಟು ಬೀಜವೃಕ್ಷದ ಗುಟ್ಟು
ಬೆರಗುಗೊಳಿಸುವುದಿಲ್ಲವೇನು
ಗಿರಿ ಝರಿಯ ಒರತೆ ಜೀವರಾಶಿಯ ಚರಿತೆ
ರೋಮಾಂಚನಗೊಳಿಸದೇನು.

ಜನನ ಮರಣದ ಒಗಟ ಬಿಚ್ಚಿ ಹೇಳುವೆಯೇನು
ಲೋಕದೊಳಿತಿಗೆ ನಿನ್ನ ಕಾಣಿಕೆ ಏನು?
ಹೇಳು ಗೆಳೆಯನೆ ಈಗ ಎದೆ ತಟ್ಟಿ ನೀ ಹೇಳು
ಪ್ರಕೃತಿಯ ಹಿರಿತನಕೆ ನೀ ಸಾಟಿಯೇನು??

                                                                     - ಬಿ. ಟಿ. ಲಲಿತಾ ನಾಯಕ್ 

ಕುರಿಗಳು, ಸಾರ್, ಕುರಿಗಳು ..... / Kurigalu Saar Kurigalu.....

           - 1 - 

ಕುರಿಗಳು, ಸಾರ್, ಕುರಿಗಳು;
ಸಾಗಿದ್ದೇ
ಗುರಿಗಳು.

ಮಂದೆಯಲ್ಲಿ ಒಂದಾಗಿ, ಸ್ವಂತತೆಯೇ ಬಂದಾಗಿ
ಇದರ ಬಾಲ ಅದು, ಮತ್ತೆ ಅದರ ಬಾಲ ಇದು ಮೂಸಿ,
ದನಿ ಕುಗ್ಗಿಸಿ, ತಲೆ ತಗ್ಗಿಸಿ
ಹುಡುಕಿ ಹುಲ್ಲುಕಡ್ಡಿ ಮೇವು, ಅಂಡಲೆಯುವ ನಾವು ನೀವು,
ಕುರಿಗಳು, ಸಾರ್, ಕುರಿಗಳು;
ನಮಗೋ ನೂರು ಗುರಿಗಳು.

ಎಡ ದಿಕ್ಕಿಗೆ, ಬಲ ದಿಕ್ಕಿಗೆ, ಒಮ್ಮೆ ದಿಕ್ಕುಪಾಲಾಗಿ,
ಒಮ್ಮೆ ಅದೂ ಕಳೆದುಕೊಂಡು ತಾಟಸ್ಥ್ಯದಿ ದಿಕ್ಕೆಟ್ಟು
ಹೇಗೆ ಹೇಗೋ ಏಗುತಿರುವ,
ಬರೀ ಕಿರುಚಿ ರೇಗುತಿರುವ,
ನೊಣ ಕೂತರೆ ಬಾಗುತಿರುವ,
ತಿನದಿದ್ದರು ತೇಗುತಿರುವ,
ಹಿಂದೆ ಬಂದರೊದೆಯದ, ಮುಂದೆ ಬರಲು ಹಾಯದ
ಅವರು, ಇವರು, ನಾವುಗಳು
ಕುರಿಗಳು, ಸಾರ್, ಕುರಿಗಳು,


                      - 2 -

ಮಂದೆಯಲ್ಲಿ ಎಲ್ಲವೊಂದೆ ಆದಾಗಲೇ ಸ್ವರ್ಗ ಮುಂದೆ --
ಅದಕಿಲ್ಲವೆ ನಾವುತ್ತರ?
ಮೆದುಳಿನಲ್ಲಿ ತಗ್ಗೆತ್ತರ,
ಹಿರಿದು ಕಿರಿದು ಮಾಯಿಸಿ,
ಒಬ್ಬೊಬ್ಬರಿಗಿರುವ ಮೆದುಳ ಸ್ವಾರ್ಥದ ಉಪಯೋಗದಿಂದ
ಇಡಿ ಮಂದೆಗೆ ಹಾಯಿಸಿ,
ಹೊಟ್ಟೆ ಬಟ್ಟೆಗೊಗ್ಗದಂಥ ಕಲೆಯ ಕರ್ಮಕಿಳಿಯದಂತೆ
ತಲೆ ಬೆಲೆಯ ಸುಧಾರಿಸಿ,
ಬಿಳಿಕಪ್ಪಿನ ದ್ವಂದ್ವಗಳಿಗೆ ಮಾಡಿಸಿ ಸಮಜಾಯಿಷಿ,
ನಮ್ಮ ಮೆದುಳು ಶುದ್ಧಿಯಾಗಿ, ಬುದ್ಧಿ ನಿರ್ಬುದ್ಧಿಯಾಗಿ,
ಕೆಂಬಣ್ಣವನೊಂದೆ ಪೂಸಿ,
ಅದರ ಬಾಲ ಇದು, ಮತ್ತೆ ಇದರ ಬಾಲ ಅದು ಮೂಸಿ
ನಡೆವ ನಮ್ಮೊಳೆಲ್ಲಿ ಬಿರುಕು? 


                   - 3 -

ನಮ್ಮ ಕಾಯ್ವ ಕುರುಬರು:
ಪುಟಗೋಸಿಯ ಮೊನ್ನೆ ತಾನೆ ಕಿತ್ತು ಪಂಚೆಯುಟ್ಟವರು,
ಶಾನುಭೋಗ ಗೀಚಿದ್ದಕ್ಕೆ ಹೆಬ್ಬೆಟ್ಟನ್ನು ಒತ್ತುವವರು;
ಜಮಾಬಂದಿಗಮಲ್ದಾರ ಬರಲು ನಮ್ಮೊಳೊಬ್ಬನನ್ನ
ಮೆಚ್ಚಿ, ಮಸೆದ ಮಚ್ಚ ಹಿರಿದು ಕಚಕ್ಕೆಂದು ಕೊಚ್ಚಿ ಕತ್ತ,
ಬಿರಿಯಾನಿಯ ಮೆಹರುಬಾನಿ ಮಾಡಿ ಕೈಯ ಜೋಡಿಸುತ್ತ,
ಕಿಸೆಗೆ ಹಸಿರು ನೋಟು ತುರುಕಿ, ನುಡಿಗೆ ಬೆಣ್ಣೆ ಹಚ್ಚುವವರು.
ಬಿಸಿಲಿನಲ್ಲಿ ನಮ್ಮ ದೂಡಿ, ಮರದಡಿಯಲಿ ತಾವು ಕೂತು
ಮಾತು, ಮಾತು, ಮಾತು, ಮಾತು,
ಮಾತಿನ ಗೈರತ್ತಿನಲ್ಲೆ ಕರಾಮತ್ತು ನಡೆಸುವವರು.
ನಮ್ಮ ಮೈಯ ತುಪ್ಪಟವ ರವಷ್ಟು ಬಿಡದ ಹಾಗೆ ಸವರಿ
ಕಂಬಳಿಗಳ ನೇಯುವಂಥ ಯೋಜನೆಗಳ ಹಾಕುವವರು.
ಮಾರಮ್ಮನ ಮುಡಿಗೆ ಕೆಂಪು ದಾಸವಾಳ ಆಯುವವರು.
ಬೆಟ್ಟ ದಾಟಿ ಕಿರುಬ ನುಗ್ಗಿ, ನಮ್ಮೊಳಿಬ್ಬರನ್ನ ಮುಗಿಸಿ,
ನಾವು 'ಬ್ಯಾ, ಬ್ಯಾ' ಎಂದು ಬಾಯಿ ಬಾಯಿ ಬಡಿದುಕೊಂಡು
ಬೊಬ್ಬೆ ಹಾಕುತಿದ್ದರೂ  --
ಚಕ್ಕಭಾರ ಆಟದಲ್ಲೆ ಮಗ್ನರು ಇವರೆಲ್ಲರು,
ನಮ್ಮ ಕಾಯ್ವ ಗೊಲ್ಲರು.


                      - 4 -


ದೊಡ್ಡಿಯಲ್ಲಿ ಕೂಡಿಹಾಕಿ ನಿಲ್ಲಲಿಲ್ಲ, ಕೂರಲಿಲ್ಲ,
ಎದ್ದರೆ ಸರಿದಾಡಲಿಲ್ಲ, ಬಿದ್ದರೆ ಹರಿದಾಡಲಿಲ್ಲ,
ದೀಪದ ದೌಲತ್ತು ಇಲ್ಲ,
ಗಾಳಿಯ ಗಮ್ಮತ್ತು ಇಲ್ಲ.

ಕಿಂಡಿಯಿಂದ ತೆವಳಿ ಬಂದ ಗಾಳಿ ಕೂಡ ನಮ್ಮದೇನೆ;
ನಮ್ಮ ಮುಂದೆ ಕುರಿಯ ಸುಲಿದು, ಆಚೆ ಅಲ್ಲಿ ಉಪ್ಪು ಸವರಿ
ಒಣಗಲಿಟ್ಟ ಹಸಿ ತೊಗಲಿನ ಬಿಸಿಬಿಸಿ ಹಬೆ ವಾಸನೆ,
ಇರಿಯುತಿಹುದು ಮೂಗನೆ!
ಕೊಬ್ಬಿರುವೀ ಮಬ್ಬಿನಲ್ಲಿ, ಮೈ ನಾತದ ಗಬ್ಬಿನಲ್ಲಿ,
ಇದರ ಉಸಿರು ಅದು, ಮತ್ತೆ ಅದರ ಉಸಿರು ಇದು ಮೂಸಿ --
ಹೇಸಿದರು ನಿಭಾಯಿಸಿ,
ತಾಳ್ಮೆಯನೆ ದಬಾಯಿಸಿ,
ನಮ್ಮ ನಾವೆ ಅಂದುಕೊಂಡೊ, ಉಗುಳು ನುಂಗಿ ನೊಂದುಕೊಂಡೊ,
ನಂಬಿಕೊಂಡು ಏಗುತಿರುವ ನಾವು, ನೀವು, ಇಡೀ ಹಿಂಡು --
ಕುರಿಗಳು, ಸಾರ್, ಕುರಿಗಳು.

ತಳವೂರಿದ ಕುರುಬ ಕಟುಕನಾದ; ಅವನ ಮಚ್ಚೋ ಆಹ!
ಏನು ಝಳಪು, ಏನು ಹೊಳಪು, ಏನು ಜಾದು, ಏನು ಮೋಹ!
ಆ ಹೊಳಪಿಗೆ ದಂಗಾಗಿ, ಕಣ್ಣಿಗದೇ ರಂಗಾಗಿ,
ಒಳಗೊಳಗೇ ಜಂಗಾಗಿ,
ಕಣ್ಣು ಕುಕ್ಕಿ ಸೊಕ್ಕಿರುವ, ಹೋಗಿ ಹೋಗಿ ನೆಕ್ಕಿರುವ,
ಕತ್ತನದಕೆ ತಿಕ್ಕಿರುವ,
ನಾವು, ನೀವು, ಅವರು, ಇವರು
ಕುರಿಗಳು, ಸಾರ್, ಕುರಿಗಳು!

ಮಚ್ಚಿನ ಆ ಮೆಚ್ಚಿನಲ್ಲಿ, ಅದರಾಳದ ಕಿಚ್ಚಿನಲ್ಲಿ,
ಮನೆಮಾಡಿವೆ ಹುಚ್ಚಿನಲ್ಲಿ
ನಮ್ಮೆಲ್ಲರ ಗುರಿಗಳು!
ಕುರಿಗಳು, ಸಾರ್, ಕುರಿಗಳು .....

                                                                       - ಕೆ. ಎಸ್. ನಿಸಾರ್ ಅಹಮದ್

ವಿಶ್ವ ವಿನೂತನ ವಿದ್ಯಾಚೇತನ / Vishwa vinootana

ವಿಶ್ವ ವಿನೂತನ ವಿದ್ಯಾಚೇತನ
ಸರ್ವಹೃದಯ ಸಂಸ್ಕಾರಿ | ಜಯ ಭಾರತಿ ||

ಕರುನಾಡ ಸರಸ್ವತಿ ಗುಡಿಗೋಪುರ ಸುರಶಿಲ್ಪ ಕಲಾಕೃತಿ
ಕೃಷ್ಣೆ ತುಂಗೆ ಕಾವೇರಿ | ಪವಿತ್ರಿತ ಕ್ಷೇತ್ರ ಮನೋಹಾರಿ ||

ಗಂಗಕದಂಬ ರಾಷ್ಟ್ರಕೂಟ ಚಾಲುಕ್ಯ ಹೊಯ್ಸಳ ಬಲ್ಲಾಳ
ಹಕ್ಕಬುಕ್ಕ ಪುಲಿಕೇಶಿ ವಿಕ್ರಮರ ಚೆನ್ನಮ್ಮಾಜಿಯ ವೀರಶ್ರೀ ||

ಅರಿವೇ ಗುರುನುಡಿ ಜ್ಯೋತಿರ್ಲಿಂಗ ದಯವೇ ಧರ್ಮದ ಮೂಲತರಂಗ
ವಿಶ್ವ ಭಾರತಿಗೆ ಕನ್ನಡದಾರತಿ | ಮೊಳಗಲಿ ಮಂಗಳ ಜಯಭೇರಿ ||

                                                             - ಚೆನ್ನವೀರ ಕಣವಿ

Saturday 11 April 2015

ಹಕ್ಕಿಯ ಹಾಡಿಗೆ ತಲೆದೂಗುವ ಹೂ.. / hakkiya haadige taledooguva hoo

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ.

ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ.
ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ.

ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ.
ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ.

ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ.
ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ.

ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ.
ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ.

                                                                                    - ಕೆ. ಎಸ್. ನರಸಿಂಹ ಸ್ವಾಮಿ 

Friday 10 April 2015

ನೀ ಹೀಂಗ ನೋಡಬ್ಯಾಡ ನನ್ನ / Nee hinga nodabyada nanna

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ.
ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ
 ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
 ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
 ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ಇತ್ತ?
ತಂಬಲs ಹಾಕದ ತುಂಬ ಕೆಂಪು ಗಿಡಗಡಕಹಣ್ಣಿನ ಹಾಂಗ
 ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ
 ಈ ಗದ್ದ, ಗಲ್ಲ, ಹಣಿ, ಕಣ್ಣುಕಂಡು ಮಾರೀಗೆ ಮಾರಿಯ ರೀತಿ
 ಸಾವನs ತನ್ನ ಕೈ ಸವರಿತಲ್ಲಿ, ಬಂತೆsನಗ ಇಲ್ಲದ ಭೀತಿ
 ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತ ತಿಳಿದು
 ಬಿಡವೊಲ್ಲಿ ಇನ್ನುನೂ, ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
 ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ.
ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
 ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ!
ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡ ನಡಕ ಹುಚ್ಚನಗಿ ಯಾಕ?
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
 ಅತ್ತಾರ ಅತ್ತುಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ?
ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ
                                                                                       - ಅಂಬಿಕಾತನಯದತ್ತ

Thursday 9 April 2015

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು / Udayavagali namma cheluva kannada nadu

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
 ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು |
ರಾಜನ್ಯರಿಪು ಪರಶುರಾಮನಾಳಿದ ನಾಡು
 ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
 ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
 ತೇಜವನು ನಮಗೀವ ವೀರ ವೃಂದದ ನಾಡು |
ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
 ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
 ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು
 ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು ||
ಪಾವನೆಯರಾ ಕೃಷ್ಣ ಭೀಮೆಯರ ತಾಯ್ನಾಡು
 ಕಾವೇರಿ ಗೋದೆಯರು ಮೈದೊಳೆವ ನಲುನಾಡು
 ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು
 ಕಾವ ಗದುಗಿನ ವೀರ ನಾರಾಯಣನ ಬೀಡು ||  
                                                           - ಹುಯಿಲುಗೋಳ ನಾರಾಯಣ ರಾವ್

ರಾಯರು ಬಂದರು ಮಾವನ ಮನೆಗೆ / Raayaru bandaru maavana manege

ರಾಯರು ಬಂದರು ಮಾವನ ಮನೆಗೆ
     ರಾತ್ರಿಯಾಗಿತ್ತು;
ಹುಣ್ಣಿಮೆ ಹರಸಿದ ಬಾನಿನ ನಡುವೆ
     ಚಂದಿರ ಬಂದಿತ್ತು. - ತುಂಬಿದ
     ಚಂದಿರ ಬಂದಿತ್ತು.

ಮಾವನ ಮನೆಯಲಿ ಮಲ್ಲಿಗೆ ಹೂಗಳ
     ಪರಿಮಳ ತುಂಬಿತ್ತು.
ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ
     ತಂಬಿಗೆ ಬಂದಿತ್ತು - ಒಳಗಡೆ
     ದೀಪದ ಬೆಳಕಿತ್ತು.

ಘಮಘಮಿಸುವ ಮೃಷ್ಟಾನ್ನದ ಭೋಜನ
     ರಾಯರ ಕಾದಿತ್ತು.
ಬೆಳ್ಳಿಯ ಬಟ್ಟಲ ಗಸಗಸೆ ಪಾಯಸ
     ರಾಯರ ಕರೆದಿತ್ತು - ಭೂಮಿಗೆ
     ಸ್ವರ್ಗವೆ ಇಳಿದಿತ್ತು.

ಚಪ್ಪರಗಾಲಿನ ಮಂಚದ ಮೇಗಡೆ
     ಮೆತ್ತನೆ ಹಾಸಿತ್ತು.
ಅಪ್ಪಟ ರೆಸಿಮೆ ದಿಂಬಿನ ಅಂಚಿಗೆ
     ಚಿತ್ರದ ಹೂವಿತ್ತು. - ಪದುಮಳು
     ಹಾಕಿದ ಹೂವಿತ್ತು.

ಚಿಗುರೆಲೆ ಬಣ್ಣದ ಅಡಕೆಯ ತಂದಳು
    ನಾದಿನಿ ನಗುನಗುತ;
ಬಿಸಿಬಿಸಿ ಹಾಲಿನ ಬಟ್ಟಲ ತಂದರು
    ಅಕ್ಕರೆಯಲಿ ಮಾವ - ಮಡದಿಯ
    ಸದ್ದೇ ಇರಲಿಲ್ಲ.

ಮಡದಿಯ ತಂಗಿಯ ಕರೆದಿಂತೆಂದರು;
    "ಅಕ್ಕನ ಕರೆಯಮ್ಮ"
ಮೆಲುದನಿಯಲಿ ನಾದಿನಿ ಇಂತೆಂದಳು;
    "ಪದುಮಳು ಒಳಗಿಲ್ಲ" - ನಕ್ಕಳು.
    ರಾಯರು ನಗಲಿಲ್ಲ.

ಏರುತ ಇಳಿಯುತ ಬಂದರು ರಾಯರು
    ದೂರದ ಊರಿಂದ.
ಕಣ್ಣನು ಕಡಿದರು ನಿದ್ದೆಯು ಬಾರದು
    ಪದುಮಳು ಒಳಗಿಲ್ಲ - ಪದುಮಳ
    ಬಳೆಗಳ ದನಿಯಿಲ್ಲ.

ಬೆಳಗಾಯಿತು; "ಸರಿ, ಹೊರಡುವೆ"ನೆಂದರು
    ರಾಯರು ಮುನಿಸಿನಲಿ.
ಒಳಮನೆಯಲಿ "ನೀರಾಯಿತು!" ಎಂದಳು
    ನಾದಿನಿ ರಾಗದಲಿ. "ಯಾರಿಗೆ?"
    ಎನ್ನಲು ಹರುಷದಲಿ.
ಪದುಮಳು ಬಂದಳು ಹೂವನು ಮುಡಿಯುತ
    ರಾಯರ ಕೋಣೆಯಲಿ.

                                                        - ಕೆ. ಎಸ್. ನರಸಿಂಹ ಸ್ವಾಮಿ

Wednesday 8 April 2015

ನನ್ನವಳು ನನ್ನೆದೆಯ ಹೊನ್ನಾಡನಾಳುವಳು / Nannavalu nannedeya honnadanaaluvalu

ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ||ಪ||

ಹೊಳೆಯ ಸುಳಿಗಳಿಗಿಂತ ಆಳಗಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರಿ ಕಪ್ಪುಗುರುಳನ್ನು
ಬೆನ್ನ ಮೇಲೆಲ್ಲ ಹರಡಿದರೆ…
ದೂರದಲಿ, ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ
ಇಳಿದಂತೆ ಇರುಳ ಮಾಲೆ.

ಕರೆದಾಗ ತೌರು ಮನೆ, ನೆನೆದಾಗ ನನ್ನ ಮನೆ
ಹಳ್ಳಿಯೆರಡರ ಮುದ್ದು ಬಳ್ಳಿ ಅವಳು
ಮುಚ್ಚು ಮರೆ ಇಲ್ಲದೆ ಅಚ್ಚ ಮಲ್ಲಿಗೆಯಂತೆ
ಅರಳುತಿಹುದು ಅವಳ ಬದುಕು
ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ
ಬಂಗಾರದಂತ ಹುಡುಗಿ
ನನ್ನೊಡವೆ, ನನ್ನ ಬೆಡಗಿ.

ಹಸಿರು ಸೀರೆಯನುಟ್ಟು, ಕೆಂಪು ಬಳೆಗಳ ತೊಟ್ಟು
ತುಂಬು ದನಿಯಲಿ ಕರೆವಳೆನ್ನ ಚೆಲುವೆ
ಹಣೆಯನಾಳುವುದು ಅವಳ ಕುಂಕುಮದ ನಿಡುವಟ್ಟು
ಲಕ್ಷ್ಮಿ ಅವಳೆನ್ನ ಮನೆಗೆ
ನಮಗಿದುವೇ ಸೊಗಸು ಬದುಕಿನ ಬಣ್ಣಗಳಾ ಸಂತೆ
ನಮಗಿಲ್ಲ ನೂರು ಚಿಂತೆ,ನಾವು ಗಂಧರ್ವರಂತೆ
ನಾವು ಗಂಧರ್ವರಂತೆ.

                                                                          - ಕೆ. ಎಸ್. ನರಸಿಂಹ ಸ್ವಾಮಿ 

* ಕೆ.ಎಸ್.ನ ಅವರ ಇರುವಂತಿಗೆ ಕವನಸಂಕಲನದ ಒಂದು ಮಾರ್ದವತೆ ತುಂಬಿದ ಕವನ. 1968 ರಲ್ಲಿ ಬಂದ ಸರ್ವಮಂಗಳ ಚಿತ್ರಕ್ಕೆ ಬಳಕೆಯಾಗಿದೆ.

Monday 6 April 2015

ಅಂಥಿಂಥ ಹೆಣ್ಣು ನೀನಲ್ಲ / Anthintha hennu neenalla

ಅಂಥಿಂಥ ಹೆಣ್ಣು ನೀನಲ್ಲ;
ನಿನ್ನಂಥ ಹೆಣ್ಣು ಇನ್ನಿಲ್ಲ.

ಹೆಡೆಹೆಡೆಯ ಸಾಲು ತುರುಬೆಲ್ಲ,
ಗುಡಿನಿಂದ ಹೂವು ಮೇಲೆಲ್ಲ,
ತೆರೆತೆರೆಯ ಹೊರಳು ಕುರುಳೆಲ್ಲ,
ಸುಳಿಮಿಂಚು ಕಣ್ಣ ಹೊರಳೆಲ್ಲ!

ಮಣಿಮಲೆ ಕೊರಳ ದನಿಯೆಲ್ಲ,
ಹೊಂಬಾಳೆ ಆಸೆ ಒಳಗೆಲ್ಲ.
ಒತ್ತಾಯವಿಲ್ಲ: ಒಲವೆಲ್ಲ!
ನಿನ್ನಂಥ ಹೆಣ್ಣು ಹಲವಿಲ್ಲ.

ಎದೆಮಟ್ಟ ನಿಂತ ಹೂ ಬಳ್ಳಿ;
ಎಷ್ಟೊಂದು ಹೂವು ಅದರಲ್ಲಿ!
ಉಸಿರುಸಿರು ಮೊಗ್ಗು ಹೂವೆಲ್ಲ;
ನೀ ಬಳ್ಳಿ ಬೆಳಕು ಬದುಕೆಲ್ಲ!

ನಡುಬೆಟ್ಟದಲ್ಲಿ ನಿನ್ನೂರು;
ಅಲ್ಲಿಹವು ನವಿಲು ಮುನ್ನೂರು.
ಮುನ್ನೂರು ನವಿಲು ಬಂದಂತೆ
ನೀ ಬಂದರೆನಗೆ; ಸಿರಿವಂತೆ.

ನಡುದಾರಿಯಲ್ಲಿ ನನ್ನೂರು;
ಕುಡಿಮಿಂಚಿನೂರು ಹೊನ್ನೂರು
ಮುನ್ನೂರು ಮೆಂಚು ಹೊಳೆದಂತೆ
ನೀ ಬಂದರೆನಗೆ, ಸಿರಿವಂತೆ.

ಬಲುದೂರ ದೂರ ನೀನಾಗಿ,
ಹೊಂಗನಸು ನಡುವೆ ದನಿತೂಗಿ,
ಕಾದಿರಲು ನಾನು ನಿನಗಾಗಿ
ನೀ ಬರುವೆ ಚೆಲುವೆ ಹೊಳೆಯಾಗಿ.

ಏನಂಥ ಚೆಲುವೆ ನೀನಲ್ಲ.
ನೀನಲ್ಲ? ಚೆಲುವೆ ಇನ್ನಿಲ್ಲ!
ಹಾಡಲ್ಲ, ನೀನು ಕನಸಲ್ಲ;
ನಿನ್ನಿಂದ ಹಾಡು ಕನಸೆಲ್ಲ.

                                                    - ಕೆ. ಎಸ್. ನರಸಿಂಹಸ್ವಾಮಿ

Sunday 5 April 2015

ಹಾಡು ಹಳೆಯದಾದರೇನು / Haadu haleyadaadarenu

ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ..
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ....
ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
 ಹಳೆಯ ಹಾಡಿನಿಂದ ಹೊಸತು ಜೀವನಾ ಕಟ್ಟುವೆ.....
ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
 ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ......
                                                                                 - ಜಿ.ಎಸ್.ಶಿವರುದ್ರಪ್ಪ

Saturday 4 April 2015

ನವೋದಯದ ಕಿರಣಲೀಲೆ / Navodayada kiranaleele

ನವೋದಯದ ಕಿರಣಲೀಲೆ
 ಕನ್ನಡದೀ ನೆಲದ ಮೇಲೆ
 ಶುಭೋದಯವ ತೆರೆದಿದೆ.
                                   ನದನದಿಗಳ ನೀರಿನಲ್ಲಿ
                                  ಗಿರಿವನಗಳ ಮುಡಿಗಳಲ್ಲಿ
                                  ಗಾನ ಕಲಾ ಕಾವ್ಯ ಶಿಲ್ಪ
                                  ಗುಡಿಗೋಪುರ ಶಿಖರದಲ್ಲಿ
                                  ಶುಭೋದಯವ ತೆರೆದಿದೆ.
ಮುಗ್ಧ ಜಾನಪದಗಳಲ್ಲಿ
 ದಗ್ಧ ನಗರ ಗೊಂದಲದಲಿ
 ಯಂತ್ರತಂತ್ರದ ಅಟ್ಟಹಾಸ
 ಚಕ್ರಗತಿಯ ಪ್ರಗತಿಯಲ್ಲಿ
 ಶುಭೋದಯವ ತೆರೆದಿದೆ.
                                   ಹಿರಿಯರಲ್ಲಿ ಕಿರಿಯರಲ್ಲಿ
                                  ಹಳಬರಲ್ಲಿ ಹೊಸಬರಲ್ಲಿ
                                  ನವಚೇತನದುತ್ಸಾಹದ
                                  ಚಿಲುಮೆಚಿಮ್ಮುವೆದೆಗಳಲ್ಲಿ
                                  ಶುಭೋದಯವ ತೆರೆದಿದೆ.
                                                                           - ಜಿ. ಎಸ್. ಶಿವರುದ್ರಪ್ಪ

Friday 3 April 2015

ಯಾವ ರಾಗಕೊ ಏನೊ / yaava raagako eno

ಯಾವ ರಾಗಕೊ ಏನೊ ನನ್ನೆದೆ ವೀಣೆ ಮಿಡಿಯುತ ನರಳಿದೆ
ಬಯಸುತಿರುವಾ ರಾಗ ಹೊಮ್ಮದೆ ಬೇರೆ ನಾದಗಳೆದ್ದಿವೆ

ಉದಯ ಅಸ್ತಗಳೆದೆಯ ಆಳಕೆ ಮುಳುಗಿ ಹುಡುಕಿತು ರಾಗವ
ಬಿಸಿಲ ಬೇಗೆಗೆ ತಣಿಲ ತಂಪಿಗೆ ಧುಮುಕಿ ಶೋಧಿಸಿ ಬಳಲಿತು
ಬೀಸಿಬಹ ಬಿರುಗಾಳಿಯಬ್ಬರದೆದೆಗೆ ತಂತಿಯ ಜೋಡಿಸಿ
ಅದರ ರಾಗವ ತನ್ನ ಎದೆಯಲಿ ಹಿಡಿಯಲೆಳಸುತ ಸೋತಿತು

ಮುಗಿಲ ತಾರೆಯ ರಜತನಂದನದಲ್ಲಿ ದನಿಯನು ಹುಡುಕಿತು
ಸರ್ವ ಋತುಗಳ ಕೋಶಕೋಶಕೆ ನುಗ್ಗಿ ತೃಪ್ತಿಯನರಸಿತು
ಏನು ಆದರು ದೊರೆಯದಾದುದು ಮನದ ಬಯಕೆಯ ರಾಗವು
ಬರಿಯ ವೇದನೆ ಎದೆಯ ತುಂಬಿದೆ, ಮೂಕವಾಗಿದೆ ಹೃದಯವು.

                                                   

– ಜಿ. ಎಸ್. ಶಿವರುದ್ರಪ್ಪ

Wednesday 1 April 2015

ಪಾತರಗಿತ್ತೀ ಪಕ್ಕಾ / paataragitti pakka

ಪಾತರಗಿತ್ತೀ ಪಕ್ಕಾ
 ನೋಡೀದೇನS  ಅಕ್ಕಾ!  ॥ ಪ ॥
 ೧
 ಹಸಿರು ಹಚ್ಚಿ ಚುಚ್ಚಿ
 ಮೇಲSಕರಿಸಿಣ ಹಚ್ಚಿ,

 ಹೊನ್ನ ಚಿಕ್ಕಿ ಚಿಕ್ಕಿ
 ಇಟ್ಟು ಬೆಳ್ಳೀ ಅಕ್ಕಿ,

 ಸುತ್ತೂ ಕುಂಕುಮದೆಳಿ
 ಎಳೆದು ಕಾಡಿಗೆ ಸುಳಿ,

 ಗಾಳೀ ಕೆನೀಲೇನS
ಮಾಡಿದ್ದಾರ ತಾನ!
೫  
ನೂರು ಆರು ಪಾರು
 ಯಾರು ಮಾಡಿದ್ದಾರು!

 ಏನು ಬಣ್ಣ ಬಣ್ಣ
 ನಡುವೆ ನವಿಲಗಣ್ಣ!

 ರೇಶಿಮೆ ಪಕ್ಕ ನಯ
 ಮುಟ್ಟಲಾರೆ ಭಯ!

 ಹೂವಿನ ಪಕಳಿಗಿಂತ
 ತಿಳಿವು ತಿಳಿವು ಅಂತ?

 ಹೂವಿಗೆ ಹೋಗಿ ತಾವ
 ಗಲ್ಲಾ ತಿವಿತಾವ,
೧೦
 ಬನ ಬನದಾಗ ಆಡಿ
 ಪಕ್ಕಾ ಹುಡಿ ಹುಡಿ;
೧೧
 ಹುಲ್ಲುಗಾವುಲದಾಗ
 ಹಳ್ಳೀಹುಡುಗೀ ಹಾಂಗ -
೧೨
 ಹುಡದೀ ಹುಡದೀ ಭಾಳ
 ಆಟಕ್ಕಿಲ್ಲ ತಾಳ.
೧೩
 ಕಿರೇ ಸೂರೇ ಪಾನ.
ದಲ್ಲಿ ಧೂಳಿಸ್ನಾನ.
೧೪
 ತುರುಬಿ ತುಂಬಿ ತೋಟ -
ದಲ್ಲಿ ದಿನದ ಊಟ.
೧೫
 ಕಳ್ಳಿ ಹೂವ ಕಡಿದು
 ಹೂತುಟಿನೀರ ಕುಡಿದು;
೧೬
 ನಾಯಿ ಛತ್ತರಿಗ್ಯಾಗ
 ಕೂತು ಮೊಜಿನ್ಯಾಗ,
೧೭
 ರುದ್ರಗಂಟಿ ಮೂಸಿ
 ವಿಷ್ಣುಗಂಟಿ ಹಾಸಿ,
೧೮
 ಹೇಸಿಗೆ ಹೂವ ಬಳಿಗೆ
 ಹೋಗಿ ಒಂದSಗಳಿಗೆ,
೧೯
ಮದಗುಣಿಕಿಯ ಮದ್ದು
ಹುರುಪಿಗಿಷ್ಟು ಮೆದ್ದು,
೨೦
ಕಾಡ ಗಿಡ ಗಂಟಿ
ಅಂಚಿಗಂಟಿ ಗಿಂಟಿ,
೨೧
ಸೀಗಿಬಳ್ಳಿ ತಾಗಿ
ಪಕ್ಕಾ ಬೆಳ್ಳಗಾಗಿ,
೨೨ 
ಗೊರಟಿಗೆಗೆ ಶರಣ
ಮಾಡಿ ದೂರಿಂದSನ
೨೩
ಮಾಲಿಂಗನ ಬಳ್ಳಿ
ತೂಗೂ ಮಂಚದಲ್ಲಿ,
೨೪ 
ತೂಗಿ ತೂಗಿ ತೂಗಿ
ದಣಿದ್ಹಾಂಗ ಆಗಿ,
೨೫
ಬೇಲೀ ಬಳ್ಳಿಯೊಳಗ
ಅದರ ನೆರಳ ತೆಳಗ
೨೬
ನಿದ್ದಿಗುಳ್ಯಾಡಿ
ಪಗಡಿ ಪಕ್ಕಾ ಆಡಿ,
೨೭ 
ಗುಲಬಾಕ್ಷಿಯ ಹೂವ
ಕುಶಲ ಕೇಳತಾವ;
೨೮
ಹುಡಿಯ ನೀರಿನ್ಯಾಗ
ತುಳಕಿಸುತ್ತ ಬ್ಯಾಗ
೨೯
ಹಡಿಯೆ ಬೀಜ ಗಂಡು
ಹಾರಹರಿಕಿ ಅಂದು,
೩೦ 
ಅಡವಿ ಮಲ್ಲಿಗಿ ಕಂಡು
ಅದರ ಕಂಪನುಂಡು,
೩೧ 
ಹುಲ್ಲ ಹೊಲಕ ಬಂದು
ಗುಬ್ಬಿ ಬೆಳಸಿ ತಿಂದು,
೩೨
ಇಷ್ಟು ಎಲ್ಲಾ ಮಾಡಿ
ಸಪ್ಪಳಿಲ್ಲದಾಡಿ,
೩೩
ತಾಳ ಚವ್ವ ಚಕ್ಕ
ಕುಣಿತ ತಕ್ಕ ತಕ್ಕ;
೩೪
ಆಸಿ ಹಚ್ಚಿ ಹ್ಯಾಂಗ
ಕಂಡು ಸಿಕ್ಕಧಾಂಗ
೩೫
ಸಿಕ್ಕಲ್ಲೋಡತಾವ
ಅಲ್ಯೂ ಇಲ್ಯೂ ಅವS.
೩೬
ಕಾಣದೆಲ್ಲೋ ಮೂಡಿ
ಬಂದು ಗಾಳಿ ಗೂಡಿ,
೩೭
ಇನ್ನು ಎಲ್ಲಿಗೋಟ?
ನಂದನದ ತೋಟ!

                                                   - ಅಂಬಿಕಾತನಯದತ್ತ