Sunday 26 September 2021

ತೂಗು ಸೇತುವೆಯ ಹರಿಕಾರ ಗಿರೀಶ್ ಭಾರಧ್ವಾಜ್‌ಗೆ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ

ಉಡುಪಿ: ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದಿಂದ ಕೊಡಮಾಡುವ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗಿರೀಶ್ ಭಾರದ್ವಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಯು.ಎಸ್‌.ಶೆಣೈ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವರಾಮ ಕಾರಂತರ ಆಸಕ್ತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕಳೆದ 16 ವರ್ಷಗಳಿಂದ ಪ್ರತಿಷ್ಠಾನದಿಂದ ಪ್ರಶಸ್ತಿ ನೀಡಲಾಗುತ್ತಿದೆ.


ಸಾಧಕರಾದ ವೀರಪ್ಪ ಮೊಯ್ಲಿ, ಎಂ.ಎನ್.ವೆಂಕಟಾಚಲಯ್ಯ, ಕೆ.ರಾಮಕೃಷ್ಣ ಹಂದೆ, ರವಿ ಬೆಳಗೆರೆ, ಗಿರೀಶ ಕಾಸರವಳ್ಳಿ, ಬಿ. ಜಯಶ್ರೀ, ಮೋಹನ ಆಳ್ವ, ಸಾಲುಮರದ ತಿಮ್ಮಕ್ಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಯಂತ ಕಾಯ್ಕಿಣಿ, ಸದಾನಂದ ಸುವರ್ಣ, ಡಾ. ಬಿ. ಎಂ ಹೆಗ್ಡೆ, ಪ್ರಕಾಶ್ ರೈ, ಶ್ರೀಪಡ್ರೆ, ಕವಿತಾ ಮಿಶ್ರಾ, ಡಾ.ಎಸ್.ಎಲ್.ಭೈರಪ್ಪ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ‌. 2021ನೇ ಸಾಲಿನ ಪ್ರಶಸ್ತಿಯನ್ನು ಗಿರೀಶ್ ಭಾರದ್ವಾಜ್ ಅವರಿಗೆ ನೀಡಲಾಗುತ್ತಿದೆ ಎಂದರು.


ಶಿವರಾಮ ಕಾರಂತರ ಜನ್ಮದಿನವಾದ ಅ.10 ರಂದು ಮಧ್ಯಾಹ್ನ 3 ಗಂಟೆಗೆ ಕೋಟದ ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರಂತರ ಜನ್ಮ ದಿನದ ಅಂಗವಾಗಿ ಅ.1ರಿಂದ 10ರವರೆಗೆ ಸಾಂಸ್ಕೃತಿಕ- ಸಾಹಿತ್ಯಿಕ ಕಾರ್ಯಕ್ರಮಗಳು ಆನ್‌ಲೈನ್‌ನಲ್ಲಿ ನಡೆಯಲಿವೆ. ಆಸಕ್ತರು ಕಾರಂತ ಥೀಂ ಪಾರ್ಕ್‌ನ ಫೇಸ್‌ಬುಕ್ ಹಾಗೂ ಯೂಟ್ಯೂಬ್‌ ಪುಟಗಳಲ್ಲಿ ವೀಕ್ಷಿಸಬಹುದು ಎಂದರು.


ಸೇತುಬಂಧು ಗಿರೀಶ್ ಭಾರದ್ವಾಜ್ ಗ್ರಾಮೀಣ ಪ್ರದೇಶಗಳಲ್ಲಿ 130 ತೂಗು ಸೇತುವೆಗಳನ್ನು ನಿರ್ಮಾಣ ಮಾಡಿದ್ದಾರೆ. ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ ಎಂದರು.


News Reference : https://m.dailyhunt.in/news/india/kannada/prajavani-epaper-praj/tugu+setuveya+harikaara+girish+bhaaradhvaajge+shivaraama+kaaranta+huttura+prashasti-newsid-n317923292?ss=wsp&s=pa

Sunday 12 September 2021

ನಮ್ಮೂರಿನ ಸಂಗೀತ ಕಲಾ ಪ್ರತಿಭೆ ಅಶ್ವಿನಿ ಕೋಳಿಕ್ಕಜೆ

ಮೈಸೂರು ವಿಶ್ವವಿದ್ಯಾಲಯದ 101ನೇ ವಾರ್ಷಿಕ ಘಟಿಕೋತ್ಸವದ ಸಂದರ್ಭದಲ್ಲಿ ಇದೇ ಸೆಪ್ಟೆಂಬರ್ 7 ರಂದು ನಡೆದ ಸಂಗೀತ ಪದವಿ ಪ್ರದಾನ ಸಮಾರಂಭದಲ್ಲಿ(B- music 2017-2020)ವಿಶ್ವವಿದ್ಯಾಲಯಕ್ಕೇ ಪ್ರಥಮ ಶ್ರೇಣಿಯನ್ನು ಕೇರಳ ರಾಜ್ಯದ ಕಾಸರಗೋಡಿನ ಮುಳ್ಳೇರಿಯ ಸಮೀಪದ ಕುಮಾರಿ ಅಶ್ವಿನಿ ಕೋಳಿಕ್ಕಜೆ ಅವರಿಗೆ ಕೊಡಮಾಡಲಾಯಿತು.ಈ ಸಮಯದಲ್ಲಿ ಇವರು ಬಾಚಿಕ್ಕೊಂಡ ಚಿನ್ನದ ಪದಕಗಳು 6 ಮತ್ತು ನಗದು ಪುರಸ್ಕಾರಗಳು 3.

ಅಶ್ವಿನಿ ಕೋಳಿಕ್ಕಜೆ ಅವರು ಈ ಮೊದಲು ಪ್ರಸಿದ್ಧ ಆಕಾಶವಾಣಿ ಕಲಾವಿದರಾಗಿದ್ದ(1960-1980 ರ ಅವಧಿಯಲ್ಲಿ)ದಿವಂಗತ ಕೋಳಿಕ್ಕಜೆ ವಿಷ್ಣು ಭಟ್ ಅವರ ಮೊಮ್ಮಗಳು,ಸಂಗೀತ ಕಲಾವಿದ ಹಾಗೂ ಶಿಕ್ಷಕ ಶೀಯುತ ಬಾಲಸುಬ್ರಹ್ಮಣ್ಯ ಭಟ್ ಮತ್ತು ಶೀಮತಿ ಶುಭಾ ದಂಪತಿಗಳ ಸುಪುತ್ರಿ.

ಅಶ್ವಿನಿ ಯಲ್ಲಿನ ರಕ್ತಗತ ಸಂಗೀತ ಕಲಾ ಜಾಗೃತಿ ಅವಳ 4ನೆಯ ವಯಸ್ಸಿನಲ್ಲಿ,ಸಾರ್ವಜನಿಕ ಶಾರದೊತ್ಸವದ ಸಂದರ್ಭದಲ್ಲಿ ಮಕ್ಕಳು ಹಾಡಿದ ದೇವರ ಕೀರ್ತನೆಗಳನ್ನು ತಾನೂ ಹಾಡಬೇಕೆಂಬ ಹಂಬಲದೊಂದಿಗೆ ಚಿಗುರೊಡೆಯಿತು.ಇವಳ ಸುಪ್ತ ಪ್ರತಿಭೆಗೆ ತಂದೆಯವರಾದ ಬಾಲಸುಬ್ರಹ್ಮಣ್ಯ ಭಟ್ ಅವರು ನೀರೆರೆಯಲು ಶುರುವಿಟ್ಟರು. ಇದರಿಂದಾಗಿ ಪ್ರಪ್ರಥಮವಾಗಿ ನಾಲ್ಕನೇ ತರಗತಿಯಲ್ಲಿದ್ದಾಗಲೇ ಪ್ರಸಿದ್ಧ ಮಲಯಾಳಂ ಸಂಗೀತ ನಿರ್ದೇಶಕರಾದ ಸುದರ್ಶನ್ ಪಯ್ಯನ್ನೂರ್ ಅವರ "ಮತ್ತಪ್ಪ ಪ್ರಸಾದಂ" ಎಂಬ ಧ್ವನಿ ಸುರುಳಿಯಲ್ಲಿ ಈಕೆಯ ಕಂಠ ಸಿರಿಯು ಅನಾವರಣಗೊಂಡಿತು.ಸಂಗೀತದ ಪ್ರಾಥಮಿಕ ಶಿಕ್ಷಣವನ್ನು ಸ್ವತಃ ತಂದೆಯವರಿಂದ ಕಲಿತು ನಂತರ ಅದನ್ನು  KOVILADI R KALA ಮೈಸೂರು ಇಲ್ಲಿ ಮುಂದುವೆಸಿದಳು.ಡಾಕ್ಟರ್ ಶಂಕರ್ ರಾಜ್ ಅವರ ಅಧ್ಯಕ್ಷತೆಯಲ್ಲಿ ಹುಟ್ಟು ಹಾಕಿದ "ರಾಗಸುಧಾರಸ"ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ ಶ್ರೀಯುತ ಗೋವಿಂದ ಭಟ್ ಕೊಚ್ಚಿ,ಶ್ರೀಯುತ ಬಾಲರಾಜ್ ಬೆದ್ರಡಿ,ಶ್ರೀಯುತ ಶ್ರೀಧರ ಭಟ್ ಬಡ್ಕೇಕರೆ,ಶ್ರೀಯುತ ಪ್ರಭಾಕರ ಕುಂಜಾರು ಮೊದಲಾದವರ ಶ್ರಮದಿಂದ ಮುಳ್ಳೆರಿಯ ಶ್ರೀ ಗಣೇಶ ಕಲಾಮಂದಿರದಲ್ಲಿ ಹಲವು ವರ್ಷಗಳಿಂದ ನಡೆಸಿದ ಸಂಗೀತ ಶಿಬಿರದಿಂದ ಲಾಗಿ ಕಲೈ ಮಾಮಣಿ ಶ್ರೀಯುತ ವಿಠ್ಠಲ್ ಮೂರ್ತಿ ಚೆನ್ನೈ ಇವರ ಮಾರ್ಗದರ್ಶನ ಅಶ್ವಿನಿ ಗೆ ಸಂಗೀತದ ಆಳ ಮತ್ತು ಹಿರಿಮೆಯ ಅರಿವಿಗೆ ಒಂದು ಕಾರಣವಾಯಿತು.  ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ವಿದ್ಯಾಶ್ರೀ ಶಿಕ್ಷಣ ಕೇಂದ್ರ ಮುಳ್ಳೇರಿಯ,ಪದವಿಪೂರ್ವ ಶಿಕ್ಷಣವನ್ನು ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಅಗಲ್ಪಾಡಿ ಹಾಗೂ ಸಂಗೀತ ಪದವಿಯನ್ನು(B-music) ಮಾನಸಗಂಗೋತ್ರಿ ಮೈಸೂರು ಇಲ್ಲಿ ಪೂರೈಸಿರುತ್ತಾಳೆ.

ಅಶ್ವಿನಿ ಯ ಈ ವರೆಗಿನ ಸಾಧನೆಗಳನ್ನು ಪಟ್ಟಿ ಮಾಡಿದಲ್ಲಿ

೧.   100 ಕ್ಕಿಂತಲೂ ಹೆಚ್ಚಿನ ಕಲಾಮೇಳ ಗಳಲ್ಲಿ ಪ್ರಥಮ ಶ್ರೇಣಿ.

೨.   ಶ್ರೀ ಶಂಕರ ಸೂಪರ್ ಸಿಂಗರ್ ವಿನ್ನರ್ 2020 ಇದರಲ್ಲಿ ಪ್ರಥಮ ಶ್ರೇಣಿ ಯೊಂದಿಗೆ ಒಂದು ಲಕ್ಷ ರೂ ಗಳ ನಗದು ಪುರಸ್ಕಾರ.

೩.  ಅಖಿಲ ಭಾರತ ಸಂಗೀತ ವಿಶ್ವ ವಿದ್ಯಾಲಯಗಳ ಸಂಗೀತ ಸ್ಪರ್ಧೆಯಲ್ಲಿ ಸತತ 2 ಬಾರಿ (2019ಮತ್ತು2020) ಪ್ರಥಮ ಸ್ಥಾನ ಹಾಗೂ ಅಂತರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ.

೪.  ಪ್ರಕೃತ ಅಶ್ವಿನಿ ಮಾನಸಗಂಗೋತ್ರಿ ಮೈಸೂರು ಇಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು(M-music) ಮುಂದುವರಿಸುತ್ತಿದ್ದಾರೆ.

೫.     ಪ್ರಸ್ತುತ ಈಕೆ ಅನಿವಾಸಿ ಭಾರತೀಯರಿಗೆ ಸಂಗೀತ ಶಿಕ್ಷಣವನ್ನು ನೀಡುತ್ತಿದ್ದಾರೆ.

೬. ರಜಾದಿನಗಳಲ್ಲಿ ಈಕೆ ಕೋಳಿಕ್ಕಜೆ ಯ ಸ್ವಾವಲಂಬನಾ ತಂಡ "ಶ್ರಮದಾನ ಕೋಳಿಕ್ಕಜೆ" ಇದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.

ವಿದ್ಯಾಶ್ರೀ ಶಿಕ್ಷಣ ಕೇಂದ್ರ ಮುಳ್ಳೇರಿಯ,ಶ್ರೀ ಅನ್ನಪೂರ್ಣೆಶ್ವರಿ ಹೈಯರ್ ಸೆಕೆಂಡರಿ ಶಾಲೆ ಇವುಗಳ ಆಡಳಿತ ಹಾಗೂ ಬೋಧಕ ವರ್ಗ ಹಾಗೂ ಊರ - ಪರವೂರ ಸಂಗೀತ ಅಭಿಮಾನಿಗಳು ಈಕೆಯ ಸಾಧನೆಗೆ ಹರ್ಷವನ್ನುವಕ್ತಪಡಿಸಿರುತ್ತಾರೆ.

✍️Dr ಕಾರ್ತಿಕ್ ಕೋಳಿಕ್ಕಜೆ.