Monday 25 January 2021

ಭರತನಾಟ್ಯ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಶ್ರೀದೇವಿ ಕೆ

 ಉಪ್ಪಳ: ಕರ್ನಾಟಕ ಫ್ರೌಢಶಿಕ್ಷಣ ಮಂಡಳಿಯು 2020ನೇ ಸಾಲಿನಲ್ಲಿ ನಡೆಸಿದ ಭರತನಾಟ್ಯ ಸೀನಿಯರ್ ವಿಭಾಗದಲ್ಲಿ ಬಾಯಾರಿನ ಶ್ರೀದೇವಿ ಕೆ. ಶೇ.86 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುವಳು. ವಿದುಷಿಃ ಯೋಗೀಶ್ವರಿ ಜಯಪ್ರಕಾಶ್ ಅವರ ನಾಟ್ಯಾಲಯ ಪುತ್ತೂರು ಸಂಸ್ಥೆಯ ಬಾಯಾರು ಶಾಖಾ ವಿದ್ಯಾರ್ಥಿನಿಯಾಗಿದ್ದು, ಸಜಂಕಿಲ ಶ್ರೀದುರ್ಗಾಪರಮೇಶ್ವರಿ ಕಿರಿಯ ಪ್ರಾಥಮಿಕ ಶಾಲಾ ಸಿಬ್ಬಂದಿ ಶ್ರೀಧರ ಕೆ.ಆವಳ ಕೆದುಕೋಡಿ-ಶ್ರೀವಿದ್ಯಾ ಎಡಮಲೆ ದಂಪತಿಯ ಸುಪುತ್ರಿ. ಪ್ರಸ್ತುತ ಉಜಿರೆಯ ಎಸ್.ಡಿ.ಎಂ.ಕಾಲೇಜಿನ ಪ್ರಥಮ ಪದವಿಪೂರ್ವ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ. 


ಪಂಚಕರ್ಮ ವಿಭಾಗದಲ್ಲಿ ಪಡ್ರೆಯ ಡಾ.ರಮ್ಯಶ್ರೀ ಗೆ ಪ್ರಥಮ ರಾಂಕ್

 


ಪೆರ್ಲ:ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು 2020 ಅಕ್ಟೋಬರ್ ತಿಂಗಳಲ್ಲಿ ನಡೆಸಿದ ಪ್ರಥಮ ವರ್ಷದ ಸ್ನಾತಕೋತ್ತರ ಪರೀಕ್ಷೆಯ ಪಂಚಕರ್ಮ ವಿಭಾಗದಲ್ಲಿ ಮೈಸೂರು ಸರಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಡಾ.ರಮ್ಯಶ್ರೀ ಶೇ.83.25 ಅಂಕಗಳೊಂದಿಗೆ ಪ್ರಥಮ ರಾಂಕ್ ಪಡೆದಿದ್ದಾರೆ.ಈಕೆ ಪೆರ್ಲ ಸಮೀಪ ಪಡ್ರೆ ಗ್ರಾಮದ ದರ್ಬೆ ರಾಮ ಭಟ್ ಮತ್ತು ಭಾಗ್ಯಲಕ್ಷ್ಮಿ ದಂಪತಿಗಳ ಪುತ್ರಿ.

Thursday 7 January 2021

ಯುವ ಪ್ರತಿಭೆ ಬಾಲಗೋಪಾಲ ಸಿ ಹೆಚ್

 


ಕಾಸರಗೋಡಿನ ಅಶ್ವಿನಿ ಕೋಳಿಕ್ಕಜೆ- ಶ್ರೀ ಶಂಕರ ಸೂಪರ್ ಸಿಂಗರ್‌ ರಿಯಾಲಿಟಿ ಶೋ ದ ವಿನ್ನರ್‌

 


ಮುಳ್ಳೇರಿಯಾ: ಕಾಸರಗೋಡು ಜಿಲ್ಲೆಯ ಕಾರಡ್ಕ ಗ್ರಾಮದ ಕೋಳಿಕ್ಕಜೆಯ ಅಶ್ವಿನಿ ಕೆ ಇವರು ಶ್ರೀಶಂಕರ ಟಿವಿಯ ಸೂಪರ್ ಸಿಂಗರ್‌ ರಿಯಾಲಿಟಿ ಶೋದ ಸೀಸನ್‌ 3ರಲ್ಲಿ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ.

ಕೋಳಿಕ್ಕಜೆಯ ಬಾಲಸುಬ್ರಹ್ಮಣ್ಯ ಭಟ್ ಹಾಗೂ ಶ್ರೀಮತಿ ಶುಭಾ ದಂಪತಿಗಳ ಪುತ್ರಿ ಅಶ್ವಿನಿ ಮುಳ್ಳೇರಿಯಾದ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ 12 ವರ್ಷ ವ್ಯಾಸಂಗ ನಡೆಸಿದ ಬಳಿಕ 2 ವರ್ಷ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ಬಳಿಕ ಇದೀಗ ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಸಂಗೀತ ಪದವಿ ಪರೀಕ್ಷೆ ಮುಗಿಸಿದ್ದಾರೆ.

ಸಂಗೀತದಲ್ಲಿ ಈಕೆಗೆ ತಂದೆಯೇ ಮೊದಲ ಗುರು. ಪ್ರಾಥಮಿಕ ಶಿಕ್ಷಣವನ್ನು ಅವರಿಂದಲೇ ಪಡೆದು ಮೈಸೂರಿನ ಖ್ಯಾತ ಕಲಾವಿದೆ ವಿದುಷಿ ಶ್ರೀಮತಿ ಕೋವಿಲಡಿ ಕಲಾ ಇವರ ಶಿಷ್ಯೆಯಾಗಿ ಈಗ ಸಂಗೀತ ಶಿಕ್ಷಣ ಮುಂದುವರಿಸುತ್ತಿದ್ದಾರೆ.

‘ರಾಗಸುಧಾರಸ’ ಕಾಸರಗೋಡು ಸಂಸ್ಥೆಯವರು ಹಲವು ಬಾರಿ ಏರ್ಪಡಿಸಿದ್ದ ಸಂಗೀತ ಶಿಬಿರಗಳಲ್ಲಿ ಭಾಗವಹಿಸಿ ವಿದ್ವಾನ್ ಶ್ರೀ ವಿಠಲ ರಾಮ ಮೂರ್ತಿ, ಚೆನ್ನೈ ಇವರ ಮಾರ್ಗದರ್ಶನ ಪಡೆದಿದ್ದಾರೆ.

ಶ್ರೀಶಂಕರ ಟಿವಿಯ ಸೂಪರ್ ಸಿಂಗರ್‌ ಸೀಸನ್‌ 3 ಯಲ್ಲಿ ಡಿ.12ರಂದು ಅಶ್ವಿನಿ ಅವರ ಫೈನಲ್ ಕಾರ್ಯಕ್ರಮ ಪ್ರಸಾರವಾಯಿತು. 7 ಸ್ಪರ್ಧಾಳುಗಳು ಫೈನಲ್‌ನಲ್ಲಿ ಸ್ಪರ್ಧಿಸಿದ್ದರು.

3 ಹಂತಗಳನ್ನು ದಾಟಿ ಫೈನಲ್‌ಗೆ ತಲುಪಿದ ಅಶ್ವಿನಿ ಕೆ ಸೀಮಹೇಂದ್ರ ಮಧ್ಯಮ ರಾಗದ ‘ಕಾಮಾಕ್ಷಿ’ ಎಂಬ ದೀಕ್ಷಿತರ ಕೃತಿಯನ್ನು ಆಯ್ಕೆ ಮಾಡಿದ್ದರು. ಪ್ರತಿದಿನ 3 ಗಂಟೆಗಳ ಕಾಲ ನಿರಂತರ ಸಾಧನೆ ಮಾಡಿದ ಈ ಕೃತಿಯನ್ನು ತೀರ್ಪುಗಾರರಾದ ವಿದ್ವಾನ್‌ ಶ್ರೀ ಓ.ಎಸ್ ತ್ಯಾಗರಾಜನ್‌, ಶ್ರೀ ಪಿ.ವಿ ಪ್ರಸನ್ನ, ಶ್ರೀಮತಿ ಮಹತಿ ಎಸ್, ಶ್ರೀ ಮಹೇಶ್ ವಿನಾಯಕರಾಂ ಹಾಗೂ ಶ್ರೀಮತಿ ಶಾಂತಿ ಮುಂತಾದ ಗಣ್ಯರು ಅಶ್ವಿನಿಯ ಸಾಧನೆ ಹಾಗೂ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

(ಉಪಯುಕ್ತ ನ್ಯೂಸ್)