Tuesday 7 July 2015

ನಟರಾಜ ನರ್ತನದ ಚಿದಂಬರ ರಹಸ್ಯ!

‘ಕಣ್ಣಿನಿಂದ ನೋಡಿದ್ದು ಮಾತ್ರ ಸತ್ಯ’ – ಹಾಗಂತ ಅನೇಕರು ವಾದಿಸುತ್ತಾರೆ. ಅಚ್ಚರಿ ಏನು ಗೊತ್ತೆ? ಕಣ್ಣು ತನ್ನನ್ನು  ತಾನು ನೋಡಿಯೇ ಇಲ್ಲ! ಚರ್ಮಕ್ಕೆ ಸ್ಪರ್ಶಾನುಭೂತಿ ಬೇಕೆಂದರೆ ಮತ್ತೊಂದರ ಸಂಪರ್ಕ ಬೇಕೇಬೇಕು. ನಾಲಗೆಯ ರುಚಿ ಸ್ವತಃ ನಾಲಗೆಗೆ ಗೊತ್ತಿಲ್ಲ. ಹೀಗೆ ಐದು ಇಂದ್ರಿಯಗಳೂ ಒಟ್ಟಿಗೆ ಗ್ರಹಿಸಲಾಗದ ಅನೇಕ ಸಂಗತಿಗಳಿವೆ. ಅದರ ಹುಡುಕಾಟವೇ ಭಾರತದ ಶ್ರೇಷ್ಠತೆಯ ಮೂಲ ವಸ್ತು. ಕೇನೋಪನಿಷತ್ತಿನಲ್ಲಿ ಋಷಿಗಳು ಸ್ಪಷ್ಟಪಡಿಸುತ್ತಾರೆ – “ಅಲ್ಲಿಗೆ ಕಣ್ಣು ಹೋಗಲಾರದು, ಮಾತೂ ಇಲ್ಲ. ಮನಸ್ಸೂ ಹೋಗುವುದಿಲ್ಲವಾದ್ದರಿಂದ ಇದನ್ನು ಹೇಗೆ ತಿಳಿಸಿಕೊಡಬೇಕೋ ಗೊತ್ತಾಗುತ್ತಿಲ್ಲ” ಎಂದು. ಅದಕ್ಕೇ ಇಂದ್ರಿಯಗಳನ್ನು ನಿಗ್ರಹಿಸಿ, ಬುದ್ಧಿಯಡಿ ಮನಸ್ಸನ್ನು ತಂದು ಸಾಧನೆಗೆ ಅಣಿಯಾಗುವ ಮಾರ್ಗಗಳನ್ನು ಅವರು ಸಂಶೋಧಿಸಿದ್ದು. ಈ ಹುಡುಕಾಟದ ಹಿಂದೆ ಬಿದ್ದುದರಿಂದಲೇ ಸೃಷ್ಟಿಯ ಅಪರೂಪದ ಸತ್ಯಗಳು ಅವರೆದುರಿಗೆ ತೆರೆದುಕೊಂಡವು. ಈ ಸತ್ಯಗಳನ್ನು ಜಗದೆದುರಿಗೆ ಒಪ್ಪಿಸುವ ಪದಕೋಶಗಳೇ ಇರಲಿಲ್ಲ. ಹೇಳಿದರೆ ಅರ್ಥೈಸಿಕೊಳ್ಳುವವರೂ ಇರಲಿಲ್ಲ. ಎಲ್ಲಕ್ಕೂ ಮುಖ್ಯವಾಗಿ ಆ ಪರಮ ಸತ್ಯ ಗೋಚರವಾದೊಡನೆ ಅದರಲ್ಲಿ ಲೀನವಾದ ಪ್ರತಿಯೊಬ್ಬ ಋಷಿಯೂ ಮೌನಿಯಾಗಿಬಿಟ್ಟ. ಹಾಗೆಂದೇ ಅದನ್ನು ವಿವರಿಸಲಾಗದು; ಅನುಭವಿಸಬೇಕು ಎನ್ನಲಾಯ್ತು. ಕೇನೋಪನಿಷತ್ತು ಮುಂದುವರಿದು, “ಮಾತಿನಿಂದ ವಿವರಿಸಲಾಗದ್ದು, ಯಾವುದರಿಂದ ಮಾತು ಹುಟ್ಟಿತೋ ಅದು; ಯಾವುದನ್ನು ಮನಸ್ಸಿನಿಂದ ತಿಳಿಯಲಾಗದೋ, ಯಾವುದು ಮನಸ್ಸನ್ನೇ ಅರಿತುಕೊಂಡಿದೆಯೋ ಅದು ಬ್ರಹ್ಮ” ಎಂದಿತು.
ಸೃಷ್ಟಿಯ ಈ ರಹಸ್ಯವನ್ನು ಜನ ಸಾಮಾನ್ಯರೆದುರಿಗೆ ಮುಟ್ಟಿಸಬೇಕೆಂಬ ಪ್ರಯತ್ನಕ್ಕೇ ಭಾಷೆ ಹುಟ್ಟಿತು, ಪರಿಷ್ಕರಣಗೊಂಡಿತು. ಕಲೆ ಭಿನ್ನ ವಿಭಿನ್ನ ರೂಪ ಪಡಕೊಂಡಿತು. ಆಚರಣೆಗಳು ರೂಪುಗೊಂಡವು. ಮಂತ್ರಗಳು, ಅರ್ಥಗಳು, ವ್ಯಾಖ್ಯಾನಗಳು, ಆಚಾರ್ಯರು, ಗುರುಗಳು, ಮಂದಿರಗಳು, ಯೋಗ – ಪ್ರಾಣಾಯಾಮ ಮೊದಲಾದವೆಲ್ಲವೂ ಆ ಸೃಷ್ಟಿ ರಹಸ್ಯವನ್ನು, ಪರಬ್ರಹ್ಮ ತತ್ತ್ವವನ್ನೂ ಅರಿಯುವ ಮಹಾ ಪ್ರಯಾಸಕ್ಕಾಗಿ ರೂಪುಗೊಂಡಂಥವೇ.
ವಿಜ್ಞಾನಿಗಳು ದೊಡ್ಡ ದೊಡ್ಡ ಪ್ರಯೋಗ ಶಾಲೆಗಳನ್ನು ಕಟ್ಟಿದರು.  ಋಷಿಗಳು ಮನಸ್ಸನ್ನೆ ಪ್ರಯೋಗಶಾಲೆಯನ್ನಾಗಿಸಿ ಹುಡುಕಾಟ ನಡೆಸಿದರು. ವಿಜ್ಞಾನಿಗಳು ಇಂದ್ರಿಯಗಳ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಯಂತ್ರಗಳ ಆವಿಷ್ಕಾರ ಮಾಡಿದರು. ಋಷಿಗಳು ಇಂದ್ರಿಯಗಳನ್ನೇ ಹಿಡಿತಕ್ಕೆ ತಂದುಕೊಂಡು ಅಗೋಚರ ಸತ್ಯಗಳ ದರ್ಶನ ಮಾಡಿಕೊಂಡರು. ಹೀಗಾಗಿಯೇ ಭಾರತದ ವಿಚಾರ ಬಂದೊಡನೆ ಜಗತ್ತಿನ ಅನೇಕರು ನಿಬ್ಬೆರಗಾಗಿ ಕರಗಿ ಹೋಗುವುದು! cern-nataraja
ಪ್ರಯೋಗಾಲಯವೊಂದರಲ್ಲಿ ಆಕಾಶಕಾಯಗಳ ವೀಕ್ಷಣೆಗೆ ಬಳಸುವ ದೂರದರ್ಶಕವೊಂದರ ನಿರ್ಮಾಣಕ್ಕೆ, ಮಸೂರಗಳ ಜೋಡಣೆಗೆ ಎಷ್ಟು ಎಚ್ಚರಿಕೆ ವಹಿಸುತ್ತಾರೆ ಗೊತ್ತೆ? ಅತಿ ಸೂಕ್ಷ್ಮ ಬದಲಾವಣೆಯೂ ಲೆಕ್ಕಾಚಾರದಲ್ಲಿ ಬಲುದೊಡ್ಡ ಏರುಪೇರು ಉಂಟು ಮಾಡಬಲ್ಲದು. ಅದು ಬಿಡಿ. ಮನೆಯ ಮೇಲೆ ಬಗೆಬಗೆಯ ಚಾನೆಲ್ ವೀಕ್ಷಣೆಗೆಂದು ಕೂರಿಸಿರುವ ಡಿಶ್ – ಆಂಟೆನಾ ಒಂದು ಡಿಗ್ರಿಯಷ್ಟು ತಿರುಗಿದರೂ ಉಪಗ್ರಹ ಸಂದೇಶ ಸ್ವೀಕರಿಸಲಾರದು. ಅಂದಮೇಲೆ, ಋಷಿಗಳ ಪ್ರಯೋಗಶಾಲೆಯಾದ ಮನಸ್ಸೂ ಹಾಗೇ ತಾನೆ? ಅದಕ್ಕಾಗಿ ಅವರು ಒಂದಿನಿತೂ ವಿಚಲಿತವಾಗದಂತೆ ಮನಸ್ಸನ್ನು ರೂಪುಗೊಳಿಸುವ ಸಾಹಿತ್ಯ ರಚಿಸಿದರು. ಹಳಿ ತಪ್ಪಿದ್ದನ್ನು ಸರಿ ದಾರಿಗೆ ತರುವ ಮಾರ್ಗ ಹಾಕಿಕೊಟ್ಟರು. ಹೀಗಾಗಿಯೇ ಇಲ್ಲಿನ ಸಾಹಿತ್ಯಗಳಲ್ಲಿ ಜಗತ್ತಿನ ಬೇರೆಲ್ಲ ಮತಗ್ರಂಥಗಳಿಗಿಂತ ಹೆಚ್ಚು ನೈತಿಕ ಸಂಗತಿಗಳು ರಾರಾಜಿಸೋದು.
ಸುಮ್ಮನೆ ವಿಷ್ಣುಪುರಾಣದ ಏಳನೆ ಅಧ್ಯಾಯ ನೋಡಿ. ಧರ್ಮವನ್ನು ವರಿಸಿದ ಶ್ರದ್ಧೆಗೆ ಕಾಮವು ಸಂತಾನವಂತೆ; ಧರ್ಮವನ್ನು ಮದುವೆಯಾದ ಲಕ್ಷ್ಮಿಗೆ ದರ್ಪವು ಪುತ್ರನಂತೆ! ಅರ್ಥ ಬಲು ಸ್ಪಷ್ಟ. ಧರ್ಮ ಮಾರ್ಗದಲ್ಲಿ ನಡೆಯುವ ಶ್ರದ್ಧಾವಂತನ ಕಾಮನೆಗಳು ಪೂರ್ಣಗೊಳ್ಳುತ್ತವೆ. ಹಾಗೆಯೇ ಲಕ್ಷ್ಮಿ, ಧರ್ಮ ಮಾರ್ಗದಲ್ಲಿರುವವರಿಗೂ ದರ್ಪ ತರಿಸುತ್ತಾಳೆ. ಆದ್ದರಿಂದ ಎಚ್ಚರವಾಗಿರಬೇಕು ಎಂದು. ಧರ್ಮಕ್ಕೆ, ಶ್ರದ್ಧೆಗೆಲ್ಲ ಇಲ್ಲಿ ರೂಪವನ್ನು ಆರೋಪಿಸಿರುವುದು ಕೇಳುಗರಿಗೆ ಸದಾ ನೆನಪಿರಲಿ ಮತ್ತು ಅರ್ಥೈಸಿಕೊಳ್ಳಲು ಸುಲಭವಿರಲಿ ಎಂಬ ಕಾರಣದಿಂದಷ್ಟೇ. ಮುಂದೆ ಕಲೆಗಾರರು ಇದಕ್ಕೆ ಚಿತ್ರ ಬರೆದು, ಹಾಡುಗಾರ ಹಾಡು ಕಟ್ಟಿ ಹಾಡಿಬಿಟ್ಟರೆ ಮತ್ತೊಬ್ಬ ದೇವರು ಸೃಷ್ಟಿಯಾದಂತೆ. ಆದರೆ ವಾಸ್ತವದಲ್ಲಿ ಪ್ರತಿಯೊಬ್ಬ ದೇವರೂ ಇಂತಹದೇ ತತ್ತ್ವವೊಂದರ ವ್ಯಕ್ತ ರೂಪ. ಜ್ಞಾನ ಅನ್ನೋದಕ್ಕೆ ಸರಸ್ವತಿಯ ರೂಪ ಕೊಟ್ಟರು. ಆಕೆಯ ಕೈಲಿ ಜಪಮಣಿ, ಪುಸ್ತಕವಿಟ್ಟು ಬಂಡೆಗಲ್ಲಿನ ಮೇಲೆ ಕೂರಿಸಿದರು. ಜ್ಞಾನ ಸಂಪಾದನೆಗೆ ದೇಹ ಸುಖ ತ್ಯಾಗ ಮಾಡಬೇಕೆಂಬ ಕಲ್ಪನೆ ಅದು. ಎಲ್ಲ ಸೃಷ್ಟಿಯ ಮೂಲ ಸತ್ವಕ್ಕೆ ನಾರಾಯಣನ ರೂಪ ಕೊಟ್ಟರು. ಸೃಷ್ಟಿಯೇ ಅವನದ್ದಿರುವಾಗ ಇನ್ನು ಸಂಪತ್ತು – ಕೀರ್ತಿ ಎಲ್ಲವೂ ಅವನ ಕಾಲಬುಡದಲ್ಲಿಯೇ ತಾನೆ? ಅದಕ್ಕೆಂದೇ ಲಕ್ಷ್ಮಿಗೆ ನಾರಾಯಣನ ಪಾದಗಳ ಬಳಿ ಜಾಗವಾಯ್ತು.
ನಾವು ಕಲಾವಿದ ಚಿತ್ರಿಸಿದ ರೂಪವನ್ನು ಬಿಗಿಯಾಗಿ ಹಿಡಿದುಕೊಂಡೆವು; ವೇದಗಳು ಹೇಳಿದ ಸೃಷ್ಟಿ ತತ್ತ್ವವನ್ನು ನಮಗೆ ಅರ್ಥ ಮಾಡಿಸಲು ಹೆಣೆಯಲಾದ ಲೌಕಿಕ ಕಥೆಗಳನ್ನು ನೆಚ್ಚಿಕೊಂಡೆವು. ಮೂಲ ತತ್ತ್ವವನ್ನೆ ಮರೆತುಬಿಟ್ಟೆವು. ಹೀಗಾಗಿಯೇ ಅನೇಕ ಗೊಂದಲಗಳು ಸೃಷ್ಟಿಯಾದವು. ಈ ಗೊಂದಲಗಳ ಲಾಭವನ್ನು ಆಕ್ರಮಣಕಾರರಾಗಿ ಬಂದ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ಪಡೆದುಕೊಂಡರು ಅಷ್ಟೇ. ಆದರೆ ಈಗಲೂ ಸೃಷ್ಟಿ ರಚನೆಯ ವಿಜ್ಞಾನ ಅರಿಯಲು ಪ್ರಯತ್ನಿಸುವ ಪ್ರತಿಯೊಬ್ಬ ವಿಜ್ಞಾನಿಯೂ ಭಾರತೀಯ ಸಾಹಿತ್ಯಗಳಲ್ಲಿ ಹುದುಗಿ, ಹಾಸುಹೊಕ್ಕಾಗಿರುವ ತತ್ತ್ವಸಾರವನ್ನು ಗ್ರಹಿಸಿ ಹುಬ್ಬೇರಿಸುತ್ತಾನೆ.
ಯಾವುದನ್ನೂ ಆಧಾರವಿಲ್ಲದೆ ಹೇಳುತ್ತಲೇ ಇಲ್ಲ. ಕೆಲವು ವರ್ಷಗಳ ಹಿಂದೆ ದೇವಕಣದ ಬಗ್ಗೆ ಚರ್ಚೆ ವ್ಯಾಪಕವಾಗಿ ನಡೆದಿದ್ದು ನಿಮಗೆಲ್ಲ ನೆನಪಿರಬೇಕಲ್ಲ? ಅದಕ್ಕೆ ಪೂರಕವಾದ ಪ್ರಯೋಗ ನಡೆದ ಸ್ಥಳ ಸಿಇಆರ್‍ಎನ್ (ಯುರೋಪಿಯನ್ ಸೆಂಟರ್ ಫಾರ್ ನ್ಯೂಕ್ಲಿಯಾರ್ ರಿಸರ್ಚ್) ನ ಹೊರಗೆ 2003 – 2004ರಲ್ಲಿ ಭಾರತ ಸರ್ಕಾರ ಕೊಡುಗೆಯಾಗಿ ಕೊಟ್ಟ ಎರಡು ಮೀಟರ್ ಎತ್ತರದ ನಟರಾಜ ವಿಗ್ರಹ ಇಡಲಾಗಿದೆ. ನಮಗೆ ನಟರಾಜನ ಆ ವಿಗ್ರಹ ಬೇರೆಲ್ಲ ಮೂರ್ತಿಗಳಂತೆ ಸಾಮಾನ್ಯ. ಆದರೆ ವಿಜ್ಞಾನಿಗಳು ಅದರ ಹಿಂದಿನ ತತ್ತ್ವವನ್ನು ಅರಿತು ಅಚ್ಚರಿಯಿಂದ ದಿಟ್ಟಿಸುತ್ತಾರೆ.
ಫ್ರಿಟ್ಜೋ ಕಾಪ್ರಾ ಎನ್ನುವ ಭೌತ ವಿಜ್ಞಾನಿಯಂತೂ ತನ್ನ `ತಾವೋ ಆಫ್ ಫಿಸಿಕ್ಸ್’ ಕರತಿಯ ಒಂದಿಡೀ ಅಧ್ಯಾಯವನ್ನು ನಟರಾಜನ ನೃತ್ಯಕ್ಕೆ ಮೀಸಲಾಗಿಟ್ಟಿದ್ದಾನೆ. ಕ್ವಾಂಟಂ ಫಿಸಿಕ್ಸ್ ಶಾಖೆ ಬೆಳೆದಂತೆಲ್ಲ ವಿಜ್ಞಾನ ಅಣುವಿನೊಳಗೆ ಭಿನ್ನಭಿನ್ನ  ಕಣಗಳು ಪ್ರತಿಕ್ಷಣವೂ ನರ್ತಿಸುವುದನ್ನು ಗಮನಿಸಿದವು. ಭೌತ ವಿಜ್ಞಾನಿಗಳು ಇದನ್ನು ನರ್ತನಕ್ಕೆ ಹೋಲಿಸಿ ಭಾರತೀಯರು ಇದನ್ನೇ ನಟರಾಜನ ನರ್ತನದ ರೂಪದಲ್ಲಿ ಚಿತ್ರಿಸಿರುವುದನ್ನು ಗುರುತಿಸಿದರು.
ಅದಕ್ಕೂ ಹಿಂದೆಯೇ ಭೂಗರ್ಭ ಶಾಸ್ತ್ರಜ್ಞ ಮತ್ತು ಭಾರತೀಯ ದರ್ಶನಗಳ ಮೇಲೆ ವಿಸ್ತøತ ಪ್ರಬಂಧ ಬರೆದ ಆನಂದ ಕುಮಾರಸ್ವಾಮಿ ನಟರಾಜನ ಕುರಿತು ಸಂಶೋಧನಾ ಲೇಖನ ಬರೆದಿದ್ದರು. ಅವರು ಶಿವನ ಮೂರು ಬಗೆಯ ನೃತ್ಯಗಳ ಉಲ್ಲೇಖ ಮಾಡಿದ್ದರು – “ಶೂಲಪಾಣಿಯಾಗಿ ಸರಸ್ವತಿಯ ವೀಣೆಗೆ, ಇಂದ್ರನ ಕೊಳಲಿಗೆ, ಲಕ್ಷ್ಮಿಯ ಹಾಡಿಗೆ ದೇವ –ದೇವಿ – ಅಪ್ಸರೆಯರ ಮುಂದೆ ಕೈಲಾಸದಲ್ಲಿ ನಡೆಯುವ ನೃತ್ಯ ಒಂದಾದರೆ, ನಾಶದ ಮುನ್ಸೂಚನೆ ಕೊಟ್ಟು ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುವ ತಾಂಡವ ನೃತ್ಯ ಮತ್ತೊಂದು. ಮೂರನೆಯದು – ತಮಿಳುನಾಡಿನ ಚಿದಂಬರಂನಲ್ಲಿ ಆತ ನಡೆಸುವ ನಟರಾಜ ನರ್ತನ”
ನಟರಾಜ ಮಂದಿರದ ಸ್ಥಳ ಪುರಾಣ ಚಿದಂಬರ ಕ್ಷೇತ್ರವನ್ನು ವಿಶ್ವದ ಕೇಂದ್ರವೆನ್ನುತ್ತದೆ. ಈ ಮಾಹಿತಿಯನ್ನು ಮೂರ್ಖತನದ ಕಲ್ಪನೆಯೆಂದು ಜರೆಯೋಣವೆಂದರೆ, ಈ ದೇಶದ ಇನ್ಯಾವ ಮಂದಿರದ ಐತಿಹ್ಯವೂ ತಮ್ಮ ಸ್ಥಳವನ್ನು ಹೀಗೆ ಕರೆದುಕೊಳ್ಳುವುದಿಲ್ಲ. ಅಂದಮೇಲೆ, ಹೀಗೆ ಹೇಳುವಲ್ಲಿ ಒಂದಷ್ಟಾದರೂ ಸತ್ಯವಿರಲೇಬೇಕಲ್ಲ!
ಭೂಮಿಯ ಆಯಸ್ಕಾಂತೀಯ ಶಕ್ತಿಯ ಆಧಾರದ ಮೇಲೆ ಅಕ್ಷಾಂಶ – ರೇಖಾಂಶಗಳನ್ನು ಎಳೆದರೆ ಸಮಭಾಜಕ ರೇಖೆ ಈ ಸ್ಥಳದ ಮೂಲಕ ಹಾಯುತ್ತದೆ ಎಂಬುದನ್ನು ಸಿದ್ಧಪಡಿಸಿ ತೋರಲಾಗಿದೆ. ಹೀಗಾಗಿಯೇ ಶಿವ ಈ ಸ್ಥಳವನ್ನು ಸೃಷ್ಟಿಯ ಕಾರ್ಯಕ್ಷೇತ್ರವನ್ನಾಗಿ ಆಯ್ದುಕೊಂಡ, ಲಯ ಕಾರ್ಯಕ್ಕೂ ಇದನ್ನೇ ಕ್ಷೇತ್ರವಾಗಿ ಮಾಡಿಕೊಂಡ. “ಈ ನೃತ್ಯ ಶಿವನ ಐದು ಚಟುವಟಿಕೆಗಳನ್ನು ದಾಖಲಿಸುತ್ತದೆ. ಸೃಷ್ಟಿ, ಸ್ಥಿತಿ, ಲಯ, ಸಾಕಾರ ಮತ್ತು ಮುಕ್ತಿ. ಢಮರುವಿನಿಂದ ಸೃಷ್ಟಿಯಾಗುತ್ತದೆ. ಅಭಯ ಮುದ್ರೆಯಿಂದ ರಕ್ಷಣೆ; ಉರಿವ ಬೆಂಕಿಯಿಂದ ನಾಶ. ಮೇಲೆತ್ತಿ ನಿಂತ ಕಾಲು ನೆಮ್ಮದಿಯ ಸಂಕೇತವಾದರೆ, ಕೆಳಮುಖವಾಗಿರುವ ಕೈ ಆತ್ಮ ಮೋಕ್ಷದ ದ್ಯೋತಕ” – ಹಾಗೆಂದು ಕುಮಾರಸ್ವಾಮಿ ಅಭಿಪ್ರಾಯ ಪಡುತ್ತಾರೆ.
ನಮ್ಮ ವಾಸ್ತವ ಕಲ್ಪನೆಯೂ ಹಾಗೆಯೇ. ಬ್ರಹ್ಮನ ಹಗಲು ಕಳೆದು ರಾತ್ರಿಯಾದಾಗ ಬ್ರಹ್ಮ ನಿದ್ರೆಗೆ ಜಾರುತ್ತಾನಲ್ಲ, ಆಗ ಸೃಷ್ಟಿ ಜಡತ್ವಕ್ಕೆ ಹೋಗಿಬಿಡುತ್ತದೆ. ಆಗ ಡಮರು ನಿನಾದದಿಂದ ಮತ್ತೆ ಜಗತ್ತನ್ನು ಜಾಗೃತಾವಸ್ಥೆಗೆ ತಂದು ಸೃಷ್ಟಿ ಕಾರ್ಯಕ್ಕೆ ಪ್ರೇರಣೆ ಕೊಡುವವ ಶಿವನಂತೆ. ಹಾಗೆಂದು ಪುರಾಣಗಳ ಅಭಿಮತ. ಆತನ ನರ್ತನ ಶುರುವಾಗುತ್ತಿದ್ದಂತೆ ಜಗವೆಲ್ಲ ನರ್ತಿಸಲು ಶುರು ಮಾಡುತ್ತದೆಂಬುದು ನಮಗೆ ನಗು ತರಿಸುವ ಕಥೆಯೆನಿಸಿದರರೆ, ಭೌತ ವಿಜ್ಞಾನಿಗಳಿಗೆ ಅದು ಪರಮಾಣುಗಳಲ್ಲಿ ನಡೆಯುತ್ತಿರುವ ಎಲೆಕ್ಟ್ರಾನುಗಳ ಚಲನೆಯ ರುದ್ರ ನರ್ತನ!
ಫ್ರಿಟ್ಜೋ ಕಾಪ್ರಾನಂತೂ ನಟರಾಜನ ಸಮತೂಕದ ಭಂಗಿಯನ್ನು ಸೃಷ್ಟಿ ಮತ್ತು ಲಯದ ಸಮತೋಲನವೆಂದು ಕರೆದಿದ್ದಲ್ಲದೆ, ಮುಖ ಭಾವದ ಶಾಂತತೆಯನ್ನು ಸೃಷ್ಟಿ – ಲಯ ಮೀರಿದ ಅವಸ್ಥೆ ಎಂದಿದ್ದಾನೆ.
ಆಧುನಿಕ ಭೌತ ವಿಜ್ಞಾನದ ಪ್ರಕಾರ ಹುಟ್ಟು – ಸಾವುಗಳು ಜೀವ ಇರುವವುಗಳಿಗಷ್ಟೇ ಅಲ್ಲ, ನಿರ್ಜೀವ ವಸ್ತುಗಳಿಗೂ ಇವೆ. ಪ್ರತಿಯೊಂದು ಪರಮಾಣುವೂ ಗುರುತಿಗೆ ನಿಲುಕದ ಒಂದಷ್ಟು ಕಣಗಳ ಹುಟ್ಟು ಸಾವಿನೊಂದಿಗೇ ಇತರ ಪರಮಾಣುವಿನೊಂದಿಗೆ ಬೆಸೆದುಕೊಂಡಿವೆ. ಪ್ರತಿಯೊಂದು ಅಣುವಿನೊಳಗಿನ ಈ ಸೃಷ್ಟಿ ಲಯದ ನಿರಂತರ ಕ್ರಿಯೆಯೇ ನಟರಾಜನ ನಾಟ್ಯ ಎಂದು ಕಾಪ್ರಾ ಸ್ಪಷ್ಟವಾಗಿ ದಾಖಲಿಸುತ್ತಾನೆ. ಹೀಗಾಗಿ ಆತ ಇದನ್ನು ನಟರಾಜನ ನೃತ್ಯವೆಂದು ಕರೆಯದೆ ವಿಶ್ವಚೇತನದ ನೃತ್ಯವೆಂದು ಸಂಬೋಧಿಸುತ್ತಾನೆ.
ನಟರಾಜನಿಗೆ ಸಂಬಂಧಪಟ್ಟ ಈ ವಿವರಣೆಗಳೆಲ್ಲವನ್ನೂ ಸಿಇಆರ್‍ಎನ್‍ನ ಪ್ರಯೋಗಶಾಲೆಯ ಹೊರಗಿನ ಮೂರ್ತಿಯೆದುರಿಗೆ ಫಲಕದಲ್ಲಿ ದಾಖಲಿಸಲಾಗಿದೆ. ನಮಗೆ ಅದು ಬರಿಯ ವಿಗ್ರಹವಾಗಿರಬಹುದು; ದೇವ ಕಣದ ಹುಡುಕಾಟದಲ್ಲಿರುವ ವಿಜ್ಞಾನಿಗಳಿಗೆ ಅದರೊಳಗೆ ಪ್ರೋಟಾನ್, ನ್ಯೂಟ್ರಾನ್, ಎಲೆಕ್ಟ್ರಾನ್, ಫೋಟಾನುಗಳೆಲ್ಲ ಆಕರ್ಷಣೆಗೊಳಗಾಗಿ ನರ್ತಿಸುವುದು ಕಾಣುತ್ತದೆ. ಹಾಗೆ ನೋಡಿದರೆ ಆ ಮೂರ್ತಿಯನ್ನು ಅನುಸರಿಸಿ ಋಗ್ವೇದದ ಆಳಕ್ಕೆ ಹೋದವರು ಆ ವಿಜ್ಞಾನಿಗಳೇ, ನಾವಲ್ಲ. ನಾವಿಲ್ಲಿ ಶಿವ – ವಿಷ್ಣು ಇಬ್ಬರಲ್ಲಿ ಯಾರು ದೊಡ್ಡವರೆಂದು ಕಿತ್ತಾಡುತ್ತಾ ಕುಳಿತಿದ್ದೇವೆ.
ನನಗೆ ವಿಷಯದ ಆಳಕ್ಕೆ ಇಳಿದಂತೆಲ್ಲ ಅಚ್ಚರಿಯೂ, ಬೇಸರವೂ ಜೊತೆಜೊತೆಗೇ ಆಗುತ್ತದೆ. ಸಂಕೇತ ಭಾಷೆಯನ್ನು ಹುಟ್ಟುಹಾಕಿ ಸತ್ಯವನ್ನು ಕವಚದೊಳಗೆ ಹುದುಗಿಸಿಡುವಲ್ಲಿ ನಿಸ್ಸೀಮರಾಗಿದ್ದ ನಾವೇ ಕವಚ ಭೇದಿಸುವಲ್ಲಿ ಸೋತು ಹೋದೆವಲ್ಲ! ನಮ್ಮ ಹಿರಿಯರ ವೈಜ್ಞಾನಿಕ ಮನೋಭಾವನೆಯನ್ನು ಅರಿಯಲಾಗದೆ ತೊಳಲಾಡುತ್ತಿದ್ದೇವಲ್ಲ, ಛೇ!
ನಮ್ಮ ಸಾಹಿತ್ಯಗಳ ಪ್ರಕಾರ ಪಂಚಭೂತಗಳ ಶಕ್ತಿ ಆವಾಹನೆಗೆ ಐದು ದೇವಸ್ಥಾನಗಳು. ಜಲ ತತ್ತ್ವಕ್ಕೆ ತಿರುವಣ್ಣೈ ಕೋಯಲ್, ಅಗ್ನಿಗೆ ತಿರುವಣ್ಣಾಮಲೈ, ವಾಯುವಿಗೆ ಕಾಳಹಸ್ತಿ, ಪೃಥ್ವಿಗೆ ಕಾಂಚೀಪುರಂ ಮತ್ತು ಆಕಾಶಕ್ಕೆ ಚಿದಂಬರ. ಇಷ್ಟಕ್ಕೂ ಚಿದಂಬರ ಎಂದರೆ ಚಿತ್ತದ ಆಕಾಶ ಎಂದೇ ಅರ್ಥ. ಚಿತ್ತ ಎನ್ನುವುದು ಮನಸ್ಸಿಗಿಂತಲೂ ಆಳದ, ವಿಶ್ವದ ಎಲ್ಲ ಆಗುಹೋಗುಗಳನ್ನೂ ದಾಖಲಿಸುವ ನಮ್ಮೊಳಗಿನ ಕಾಲ್ಪನಿಕ ವಸ್ತು. ಅದನ್ನು ಪಂಚಭೂತಗಳಿಂದ ಸಾಕ್ಷಾತ್ಕರಿಸಿಕೊಳ್ಳಲಾಗದು. ಆದರೆ ಅನುಭವಿಸಬಹುದು, ಅಷ್ಟೇ. ದ್ವಂದ್ವ, ಏಳುಬೀಳುಗಳಿಲ್ಲದ ಈ ಚಿತ್ತಾಕಾಶದಲ್ಲಿ ನಟರಾಜ ನರ್ತಿಸಲಾರಂಭಿಸಿದರೆ ಅದು ಪರಮಾನಂದವೇ. ಅದರ ಸಂಕೇತವೇ ಚಿದಂಬರಂ ಮಂದಿರ. ಅಂದಹಾಗೆ, ಹುಬ್ಬೇರಿಸುವಂಥ ಮತ್ತೊಂದು ವಿಷಯ ಏನು ಗೊತ್ತಾ? ಕಾಂಚೀಪುರ, ಕಾಳಹಸ್ತಿ, ಚಿದಂಬರ – ಈ ಮೂರೂ ಮಂದಿರಗಳೂ ಆಯಸ್ಕಾಂತೀಯ ಸಮಭಾಜಕ ರೇಖೆಯ ಮೇಲೇ ನಿರ್ಮಾಣಗೊಂಡಿರೋದು!
ಹೌದು. ವಿಜ್ಞಾನಕ್ಕೂ ನಿಲುಕದ ಇನ್ನೂ ಯಾವುದೋ ಸಂಗತಿ ನಿಗೂಢವಾಗಿ ಅಡಗಿ ಕುಳಿತಿದೆ. ಅದೇ ಚಿದಂಬರ ರಹಸ್ಯ.

Friday 3 July 2015

ಆಡಮ್ ವೇದಗಳಿಗೆ ತಲೆ ಬಾಗಿದ್ದು ಯಾಕೆ ಗೊತ್ತಾ?

ಭಾರತದ ಇತಿಹಾಸ ಅಂದರೆ ಅದು ಬರಿಯ ಜನಜೀವನ ಅಷ್ಟೇ ಅಲ್ಲ, ಅದು ರೋಚಕ ಕಥಾನಕಗಳ ಆಗರ. ಅಲ್ಲಿ ಅಧ್ಯಾತ್ಮವಿದೆ, ಪುರಾಣವಿದೆ, ಶಾಂತಿಮಂತ್ರಗಳಿವೆ, ಕ್ರಾಂತಿ ಬೀಜಗಳೂ ಇವೆ. ಹೆಣ್ಣು – ಗಂಡು ಸಮಸಮವಾಗಿ ಇಲ್ಲಿ ಬೀಗಿದ್ದಾರೆ. ನದಿ ಬೆಟ್ಟ ಮರುಭೂಮಿಗಳೂ ತಮ್ಮ ಕೊಡುಗೆ ನೀಡಿವೆ. ಹಿಮಾಲಯ – ಸಾಗರವೂ ಇಲ್ಲಿನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಅಸಂಖ್ಯ ಸಂತರು; ಲೆಕ್ಕವಿಲ್ಲದಷ್ಟು ಋಷಿಮುನಿಗಳು ಪರಣಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಇವೆಲ್ಲವನ್ನೂ ನಾಶಗೈಯುವ ಷಡ್ಯಂತ್ರಗಳೂ ಆಗಿವೆ. ಮಿಡತೆಯ ಹಿಂಡಿನಂತೆ ಅನ್ಯರ ಆಕ್ರಮಣಗಳೂ ಆಗಿವೆ!
‘ಮ್ಯಾಕ್ಸ್ ಮುಲ್ಲರ್’!
ಕೆಲವರಿಗೆ ಭಾರತದ ಇತಿಹಾಸ ೧೨ನೇ ಶತಮಾನದಿಂದ ಆರಂಭವಾದರೆ, ಇನ್ನು ಕೆಲವರಿಗೆ ಶಂಕರರ ಹುಟ್ಟಿನೊಂದಿಗೆ. ಕೆಲವರು ಬುದ್ಧನ ಜನನದಿಂದಲೇ ಭಾರತದ ಇತಿಹಾಸ ಗಣನೆ ಶುರು ಮಾಡಿದರೆ, ಇನ್ನೂ ಕೆಲವರು ರಾಮ – ಕೃಷ್ಣ – ಉಪನಿಷತ್ತು ಎನ್ನುತ್ತಾರೆ. ಆದರೆ ಈ ದೇಶದ ಮತ್ತು ಜಗತ್ತಿನ ಕೆಲವು ‘ಪಂಡಿತೋತ್ತಮರಿಗೆ’ ಭಾರತದ ಇತಿಹಾಸವೆಂದರೆ ಅದು ಮ್ಯಾಕ್ಸ್ ಮುಲ್ಲರ್ ಮಾತ್ರ. ಅವನ ಹೇಳಿಕೆಗಳು, ಬರಹಗಳು, ಪತ್ರಗಳೇ ಭಾರತವನ್ನು ನೋಡುವ ದೃಷ್ಟಿಕೋನ ಅವರಿಗೆ. ಅನೇಕರ ಪಾಲಿಗೆ ಆತ ಋಷಿ, ಯೋಗಿ, ಸಂಸ್ಕೃತ ಪಂಡಿತ ಎಲ್ಲವೂ ಕೂಡ.Friedrich_Max-Müller_by_George_Frederic_Watts
ಆದರೆ ವಾಸ್ತವವಾಗಿ ಆತ ಭಾರತದ ಕುರಿತಂತೆ ಅನೇಕ ಗೊಂದಲಗಳಿಗೆ ಕಾರಣನಾದ ವ್ಯಕ್ತಿ. ಆರ‍್ಯರ ಆಕ್ರಮಣ ವಾದದಿಂದ ಹಿಡಿದು ಕಾಲ ಗಣನೆಯವರೆಗೆ ಆತ ಮಾಡಿದ ಊಹೆಗಳು ಇಂದು ಸಾಕಷ್ಟು ಕಿರಿಕಿರಿಗೆ ಕಾರಣವಾಗಿವೆ. ಕ್ರಿಶ್ಚಿಯನ್ ಮಿಷನರಿಗಳ ಆಕಾಂಕ್ಷೆ ಪೂರೈಸಲು ತನ್ನಿಚ್ಛೆಗೂ ವಿರುದ್ಧವಾಗಿ, ವೈಚಾರಿಕ ತಳಹದಿಯೇ ಇಲ್ಲದ ಸಿದ್ಧಾಂತಗಳನ್ನು ಒಂದಾದಮೇಲೊಂದರಂತೆ ಹರಿಬಿಟ್ಟವ ಮ್ಯಾಕ್ಸ್ ಮುಲ್ಲರ್. ಹೌದು. ಹಣ ಕೊಟ್ಟವರ ಮನಸ್ಸಿನ ಆಕಾಂಕ್ಷೆ ಪೂರೈಕೆಗೆ ಆತ ಋಗ್ವೇದದ ಸಾಹಿತ್ಯವನ್ನೇ ವಿರೂಪಗೊಳಿಸಿಬಿಟ್ಟ.
ಕ್ರಿಶ್ಚಿಯನ್ ಮಿಷನರಿಗಳೇ ಹಾಗೆ. ಚೀನಾಕ್ಕೆ ಹೋದ ಮ್ಯಾಥ್ಯೂರಿಕ್ಕಿ ಬುದ್ಧಿಸಮ್ ಮತ್ತು ಕನ್‌ಫ್ಯೂಷಿಯನಿಸಮ್ ನಡುವೆ ಇರುವ ಗಲಾಟೆ ಗಮನಿಸಿ ಕನ್‌ಫ್ಯೂಷಿಯನಿಸಮ್ ಪರವಾಗಿ ನಿಂತು ಬುದ್ಧನ ಅನುಯಾಯಿಗಳನ್ನು ಹಳಿದ. ಕ್ರಿಸ್ತ ತತ್ತ್ವಗಳಿಗೆ ಕನ್‌ಫ್ಯೂಷಿಯನಿಸಮ್ ಹತ್ತಿರವಾಗಿದೆ ಎಂದು ನಂಬಿಸಿ ಅವರನ್ನು ತನ್ನತ್ತ ಸೆಳೆದ. ಈ ಕುಟಿಲ ನೀತಿಯನ್ನೇ ಬಳಸಿ ಇಟಲಿಯ ಯಹೋವಾ ಮತಪ್ರಚಾರಕ ರಾಬರ್ಟ್ ನೋಬಿಲಿ ೧೬೦೬ರಲ್ಲಿ ಮಧುರೈಗೆ ಬಂದು ಹಿಂದೂಗಳಂತೆ ಬಟ್ಟೆ ಧರಿಸಿದ. ಶಿಖೆ ಬಿಟ್ಟ. ಜನಿವಾರವನ್ನೂ ಧರಿಸಿ, ತುದಿಗೆ ಶಿಲುಬೆ ಸಿಕ್ಕಿಸಿಕೊಂಡ. ಅಗತ್ಯ ಬಿದ್ದೆಡೆ ವೇದಗಳನ್ನು ತಿರುಚಿ ಜನರ ಮುಂದಿಟ್ಟ. ಮಧುರೈನ ಕೆಲವರನ್ನು ಮತಾಂತರಿಸುವಲ್ಲಿ ಆತ ಯಶಸ್ವಿಯೂ ಆದ. ಅವನ ಹಿಂದೆ ಅಬ್ಬೆ ಡುಬೋಯಿಸ್ ಮತಾಂತರಿಯಾಗಿ ಕಾಲಿಟ್ಟ. ಅವನ ಕೆಲಸ ಅಂದುಕೊಂಡಷ್ಟು ಸಲೀಸಾಗಿರಲಿಲ್ಲ. ಕರ್ನಾಟಕ ಅವನ ಕ್ಷೇತ್ರವಾಗಿತ್ತು. ಸಾಮೂಹಿಕ ಮತಾಂತರ ಮಾಡುವಲ್ಲಿ ಆತ ಸೋತುಹೋದ. ಬ್ಯಾಪ್ಟಿಸ್ಟರು ಬಂಗಾಳಕ್ಕೆ ೧೭೯೩ರಲ್ಲಿ ಕಾಲಿಟ್ಟರು. ಅಲ್ಲಿ ಬ್ರಹ್ಮ ಸಮಾಜದ ತೀವ್ರ ವಿರೋಧದಿಂದ ವಿಲಿಯಮ್ ಕ್ಯಾರೆಯ ಯತ್ನ ಕೈಗೂಡಲಿಲ್ಲ.
ಇಷ್ಟೂ ಹೇಳಬೇಕಾಗಿಬಂದ ಅಗತ್ಯವೆಂದರೆ, ಕ್ರಿಶ್ಚಿಯನ್ನರ ಆಕ್ರಮಣ ಶೈಲಿಯನ್ನು ಮನದಟ್ಟು ಮಾಡುವುದು. ಹೊಸ ಭೂಪ್ರದೇಶಕ್ಕೆ ಮೊದಲು ಸೈನ್ಯ ನುಗ್ಗುತ್ತದೆ.  ಅದರ ಹಿಂದುಹಿಂದೆಯೇ ಮಿಷನರಿಗಳ ದಂಡು. ಸೈನ್ಯದ ಮೂಲಕ ಸಂಪತ್ತಿನ ಲೂಟಿಯಾದರೆ, ಮಿಷನರಿಗಳು ಪರಂಪರೆಯನ್ನು ಸೂರೆಗೈದುಬಿಡುತ್ತಾರೆ. ಆಕ್ರಮಣಕ್ಕೊಳಗಾದವರು ಹಳೆಯ ನೆನಪನ್ನು ಕಳಕೊಂಡು ಹೊಸ ಮತವನ್ನು ಒತ್ತಾಯವಾಗಿಯಾದರೂ ಒಪ್ಪಿಕೊಳ್ಳುವಂತೆ ಮಾಡಿಬಿಡುತ್ತಾರೆ! ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡುಗಳಲ್ಲೆಲ್ಲ ಆಗಿದ್ದು ಇದೇ. ಇಂದು ಆಸ್ಟ್ರೇಲಿಯನ್ನರಿಗೆ ತಮ್ಮ ಪರಂಪರೆ ನೆನಪಿರೋದು ಅನುಮಾನವೇ. ಅದಾಗಲೇ ಲೂಟಿಯಾಗಿಬಿಟ್ಟಿದೆ. ಅಮೆರಿಕದ ರೆಡ್ ಇಂಡಿಯನ್ನರ ಕಥೆಯೂ ಇದಕ್ಕಿಂತ ಭಿನ್ನವಿಲ್ಲ.
ಹೀಗೇಕೆ? ಇದನ್ನು ತಿಳಿಯಲು ಯುರೋಪಿನ ಇತಿಹಾಸವನ್ನೊಮ್ಮೆ ಅವಲೋಕಿಸಬೇಕು. ಹದಿನಾಲ್ಕು – ಹದಿನೈದನೇ ಶತಮಾನದ ವೇಳೆಗೆ ಯುರೋಪಿನ ದೇಶಗಳು ಜಗತ್ತಿನುದ್ದಗಲ ಸಮುದ್ರಯಾನ ಮಾಡಲು ಉಪಕ್ರಮಿಸಿದರಲ್ಲ, ಆಗತಾನೇ ಅಲ್ಲಿ ಕ್ರಿಶ್ಚಿಯನ್ ಪುನರುತ್ಥಾನದ ಕಲ್ಪನೆ ಟಿಸಿಲೊಡೆದಿತ್ತು. ಬೈಬಲ್ಲಿನ ಹಳೆಯ ಒಡಂಬಡಿಕೆಗೆ ಮೆತ್ತಿರುವ ಯಹೂದ್ಯರ ಲೇಪವನ್ನು ತೊಳೆದುಕೊಳ್ಳಲು ಹೊಸ ಒಡಂಬಡಿಕೆಗೆ ಸೂಕ್ತ ಹಿನ್ನೆಲೆಗೆ ಹುಡುಕಾಟ ನಡೆದಿತ್ತು. ಈ ಹುಡುಕಾಟದ ಕೊನೆ ಪೂರ್ವ ದಿಕ್ಕು ಆಗಿರಬೇಕೆಂಬ ನಿಶ್ಚಯವೂ ಕ್ರಿಶ್ಚಿಯನ್ನರಿಗಿತ್ತು.
ಭಾರತ ಮತ್ತು ಚೀನಾ – ಈ ಎರಡು ನಾಗರಿಕತೆಗಳಲ್ಲಿ ಅವರು ಆರಿಸಿಕೊಂಡಿದ್ದು ಭಾರತವನ್ನು. ಲೇಕಕ ಜಿಮ್ ಶೆಫರ್ ಅಭಿಪ್ರಾಯದಂತೆ ‘ಕ್ಯಾಂಟ್ ಹರ್ಡರ್‌ನಂತಹ ಪಂಡಿತರೂ ಪುರಾತನ ಭಾರತ ಮತ್ತು ಪಶ್ಚಿಮದ ಪುರಾಣಕತೆಗಳಲ್ಲಿ ಸಾಮ್ಯವನ್ನು ಗುರುತಿಸಿ ಯಹೂದ್ಯ ಪರಂಪರೆಯಿಂದ ಪಶ್ಚಿಮ ಯುರೋಪ್ ಸಂಸ್ಕೃತಿಯನ್ನು ಬೇರ್ಪಡಿಸಿದರು; ಪ್ರಾಚೀನ ಭಾರತದಲ್ಲಿ ಅದರ ಕುರುಹುಗಳನ್ನು ಶೋಧಿಸಲಾರಂಭಿಸಿದರು’.
ಯುರೋಪಿನ ಈ ಕ್ರಿಶ್ಚಿಯನ್ನರಿಗೆ ತಾವು ಜಗತ್ತನ್ನು ಲೂಟಿಗೈಯ್ಯಲು ಸೈದ್ಧಾಂತಿಕ ಪರವಾನಗಯೊಂದು ಬೇಕಿತ್ತು. ಆಗ ಅವರ ನಡುವೆ ವ್ಯಾಪಕವಾಗಿ ಚಾಲ್ತಿಗೆ ಬಂದಿದ್ದು ಜನಾಂಗಗಳ ಕಲ್ಪನೆ. ಬಿಳಿಯರ ಜನಾಂಗ ಅತ್ಯಂತ ಶ್ರೇಷ್ಠವಾದದ್ದು, ಹೀಗಾಗಿ ಅವರಿಗೆ ಜಗತ್ತನ್ನು ಉದ್ಧಾರ ಮಾಡುವ ಪರವಾನಗಿಯನ್ನು ಭಗವಂತ ಅದಾಗಲೇ ಕೊಟ್ಟುಬಿಟ್ಟಿದ್ದಾನೆಂದು ಅವರು ನಂಬಿಸಿಬಿಟ್ಟಿದ್ದರು!
ಅವರ ಪ್ರಕಾರ, ‘ಯುರೋಪಿನ ಬಿಳಿಯರು ಜನಾಂಗ ಸ್ತರದಲ್ಲಿ ಮೇಲ್ದರ್ಜೆಯವರಾದರೆ, ಆಫ್ರಿಕಾದ ಕರಿಯರು ಕೆಳ ದರ್ಜೆಯವರು. ಉಳಿದೆಲ್ಲ ಜನಾಂಗಗಳು ಇವೆರಡರ ನಡುವೆ ಅಲ್ಲಲ್ಲಿ ಹರಡಿಕೊಂಡಿವೆ’.
ತಮಗಿಂತ ಕೆಳಗಿರುವವರನ್ನು ಮೇಲತ್ತೆಲೆಂದೇ ಭಗವಂತ ನಮ್ಮನ್ನು ಕಳಿಸಿದ್ದಾನೆಂದು ಅವರು ಸ್ವತಃ ನಂಬಿಬಿಟ್ಟಿದ್ದರು, ಇತರರನ್ನೂ ನಂಬಿಸಿದ್ದರು. ಭಾರತದ ಬುದ್ಧಿವಂತರೂ ಬ್ರಿಟಿಷರು ದೇವರೇ ಕಳಿಸಿದ ದೂತರೆಂದು ಅನೇಕ ಕಡೆ ಉಲ್ಲೇಖ ಮಾಡುತ್ತಾರಲ್ಲ, ಅದರ ಹಿಂದಿನ ಸಿದ್ಧಾಂತವೇ ಇದು. ತಮ್ಮ ಈ ಸಿದ್ಧಾಂತಕ್ಕೆ ಪೂರಕವಾಗುವ ಎಲ್ಲವನ್ನೂ ಅವರು ಸಮರ್ಥವಾಗಿ ಬಳಸಿಕೊಂಡರು. ‘ಆಳುವವರು ಸಹಜವಾಗಿಯೇ ನಾಗರಿಕರು. ಆಳಿಸಿಕೊಳ್ಳುವವರು ಅನಾಗರಿಕರು’ ಎಂಬ ಪ್ಲೇಟೋ ಮಾತುಗಳು ಅವರಿಗೆ ಪೂರಕವಾದವು.
ಇವೆಲ್ಲವನ್ನೂ ಹೊತ್ತುಕೊಂಡೇ ಮಿಷನರಿಗಳು ಭಾರತಕ್ಕೆ ಕಾಲಿಟ್ಟಿದ್ದರು. ಆದರೆ ನಿರಂತರ ಆಕ್ರಮಣಗಳಿಗೆ ಒಳಗಾಗಿ ಭಾರತೀಯ ಸಮುದಾಯಗಳು ತಮ್ಮ ಹೊರಪದರವನ್ನು ಅದೆಷ್ಟು ಗಟ್ಟಿಗೊಳಿಸಿಕೊಂಡಿದ್ದವೆಂದರೆ, ಅದನ್ನು ಮುರಿದು ಒಳಗೆ ಹೋಗುವುದು ಕ್ರಿಶ್ಚಿಯನ್ನರಿಗೆ ಸುಲಭದ ಮಾತಾಗಿರಲಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಭಾರತ ಅವರ ಪಾಲಿಗೆ ಸಲೀಸಾದ ತುತ್ತಾಗಲಿಲ್ಲ.
ಬಂಗಾಳದಲ್ಲಿ ಬಲವಾಗಿ ಬೇರೂರುವ ಪ್ರಯತ್ನ ನಡೆಸಿದ ಮಿಷನರಿಗಳು ಅದಾಗಲೇ ಬ್ರಹ್ಮ ಸಮಾಜದ ಮೂಲಕ ಸಾಕಷ್ಟು ಹೆಸರಾಗಿದ್ದ ರಾಜಾ ರಾಮ್‌ಮೋಹನ್ ರಾಯ್ ರನ್ನು ಸಂಧಿಸಿದರು. ಬುದ್ಧಿವಂತ, ಮೇಲ್ವರ್ಗಕ್ಕೆ ಸೇರಿದ ರಾಮ್‌ಮೋಹನರನ್ನು ಕ್ರಿಸ್ತನ ಬುಡಕ್ಕೆಳೆತಂದರೆ ಹಿಂದೂಗಳಿಗೊಂದು ಬಲವಾದ ಪೆಟ್ಟು ಕೊಟ್ಟಂತೆ ಆಗುವುದೆಂದು ಚರ್ಚು ಚಿಂತಿಸಿತ್ತು. ೧೮೧೮ರ ಮಾರ್ಚ್ ತಿಂಗಳಲ್ಲಿ ವಿಲಿಯಂ ಆಡಮ್ ಬಂಗಾಳಕ್ಕೆ ಬಂದ. ರಾಜಾರಾಮರನ್ನು ಮತಾಂತರಿಸುವ ಹೊಣೆ ಅವರದಾಗಿತ್ತು. ಸಂಪರ್ಕ ಬಲವಾಯ್ತು. ಬೈಬಲ್ ಮೇಲಿನ ಚರ್ಚೆಗಳೂ ಜೋರಾದವು. ರಾಜಾ ರಾಮ್‌ಮೋಹನ್ ರಾಯರು ಬೈಬಲ್ಲನ್ನು ಅರೆದು ಕುಡಿದದ್ದಷ್ಟೇ ಅಲ್ಲ, ವೇದಗಳ ಮೇಲೂ ಚೆನ್ನಾದ ಹಿಡಿತ ಹೊಂದಿದ್ದರು. ಇವರೆದುರು ವಿಲಿಯಂ ಆಡಮ್ ಕುರಿಯಂತಾಗಿದ್ದ.
ಹಿಂದೂಗಳ ಬಹುದೇವತಾವಾದದ ಚರ್ಚೆ ನಡೆಯುವಾಗ ರಾಜಾ ರಾಮ್‌ಮೋಹನ ರಾಯರು ವೇದಗಳ ಏಕ ದೇವತಾವಾದವನ್ನು ಎತ್ತಿ ಹಿಡಿದುದಷ್ಟೇ ಅಲ್ಲ, ಬೈಬಲ್ಲಿನ ತ್ರಿದೇವತಾ (ಭಗವಂತ ತಂದೆ, ಭಗವಂತನ ಮಗ ಏಸು ಕ್ರಿಸ್ತ ಮತ್ತು ಪವಿತ್ರ ಸೈತಾನ – ಟ್ರಿನಿಟಿ) ವಾದವನ್ನು ಅಪಹಾಸ್ಯ ಮಾಡಿದರು. ಮೂರು ದೇವರನ್ನು ನಂಬುವವರಿಗೆ ನೂರು ದೇವರಿಂದ ತೊಂದರೆ ಏಕಾಗಬೇಕೆಂದು ಪ್ರಶ್ನಿಸಿದರು. ವಿಲಿಯಂ ಆಡಮ್‌ನ ನಂಬಿಕೆಗಳಿಗೆ ತೀವ್ರತರ ಆಘಾತ ಉಂಟಾಯ್ತು. ಆತ ಬೈಬಲ್ ಮೇಲೆ, ತನ್ನ ಆರಾಧ್ಯ ದೈವ ಏಸುಕ್ರಿಸ್ತನ ಕುರಿತಂತೆ ಅನೇಕ ಪ್ರಶ್ನೆಗಳನ್ನೆತ್ತಿದ. ತನ್ನ ಪ್ರಿಯಮಿತ್ರನಿಗೆ  ಬರೆದ ಪತ್ರದಲ್ಲಿ, ‘ಕಳೆದ ಕೆಲವಾರು ತಿಂಗಳಿಂದ ಕ್ರಿಸ್ತನ ಬಗ್ಗೆ ಒಂದಷ್ಟು ಪ್ರಶ್ನೆಗಳು ನನ್ನೊಳಗೆ ತಲೆ ಎತ್ತುತ್ತಿವೆ. ರಾಮ್‌ಮೋಹನ ರಾಯ್‌ರನ್ನು ಕ್ರಿಸ್ತಾನುಯಾಯಿಯಾಗಿಸುವ ಪ್ರಯತ್ನದಲ್ಲಿ ಅವರೊಂದಿಗೆ ನಡೆಸಿದ ಚರ್ಚೆ ನನ್ನ ಸಿದ್ಧಾಂತದಲ್ಲಿನ ನನ್ನ ನಂಬಿಕೆಯನ್ನು ಅಲುಗಾಡಿಸಿಬಿಟ್ಟಿದೆ. ಸಿದ್ಧಾಂತದ ಪರವಿರುವ ವಿಚಾರಗಳು ಗುಡ್ಡದಷ್ಟಿದ್ದರೆ, ಅದಕ್ಕೆ ವಿರುದ್ಧವಾದ ಅಂಶಗಳು ಮಹಾಪರ್ವತದಷ್ಟಿದೆ ಎಂಬುದನ್ನು ನಾನು ನಿಸ್ಸಂಶಯವಾಗಿ ಒಪ್ಪಿಕೊಳ್ತೇನೆ’ ಎಂದಿದ್ದರು.
ಆಡಮ್‌ನ ತಲೆ ಎಷ್ಟು ಕೆಟ್ಟಿತ್ತೆಂದರೆ, ಮೂರು ವರ್ಷಗಳ ಕಾಲ ವೇದ ಮತ್ತು ಬೈಬಲ್ಲುಗಳ ಅಧ್ಯಯನ ಮಾಡುತ್ತ, ತುಲನೆ ಮಾಡುತ್ತ ಕೊನೆಗೊಮ್ಮೆ ವೇದಧರ್ಮವೇ ಶ್ರೇಷ್ಟವೆಂದು ಗ್ರಹಿಸಿದ. ತಾನು ಮತಾಂತರಗೊಂಡ! ರಾಜಾ ರಾಮಮೋಹನ ರಾಯ್‌ರನ್ನು ತನ್ನ ಮತಕ್ಕೆ ಸೆಳೆಯಲು ಹೋಗಿ ತಾನೇ ವೇದಧರ್ಮಕ್ಕೆ ಶರಣಾಗಿಬಿಟ್ಟ. ಇದು ಚರ್ಚನ್ನು ಕೆಂಡಾಮಂಡಲವಾಗಿಸಿತು. ಚರ್ಚು ವಿಲಿಯಮ್ ಆಡಮ್‌ಗೆ ಧರ್ಮದ್ರೋಹಿಯ ಪಟ್ಟ ಕಟ್ಟಿತು. ಲಂಡನ್ ಮತ್ತು ಅಮೆರಿಕಾದ ಮಿಷನರಿ ವಲಯಗಳಲ್ಲಿ ತುಮುಲವೇರ್ಪಟ್ಟಿತು. ಅನೇಕ ದಿನಗಳ ಕಾಲ ಅಲ್ಲಿ ಮೌನ ಸಾಮ್ರಾಜ್ಯ. ಚರ್ಚು ಮಾನಸಿಕವಾಗಿ ಕುಗ್ಗಿಹೋಗಿತ್ತು.
ಈ ಘಟನೆಯನ್ನು ಮುಂದೆ ಎಂದಿಗೂ ನೆನೆಸಿಕೊಳ್ಳಬಾರದೆಂದು ನಿಶ್ಚಯಿಸಿದ ಮಿಷನರಿ ಪಡೆ ಸಾವರಿಸಿಕೊಂಡು ಮುಂದಡಿಯಿಡತೊಡಗಿತು.  ಅವರ ವಾರ್ಷಿಕ ವರದಿಯಲ್ಲಿ ‘ಈ ಹಿಂದಿನ ಒಬ್ಬ ಸದಸ್ಯ ವಿಲಿಯಮ್ ಆಡಮ್ ಕ್ರಿಸ್ತನ ವಿರುದ್ಧವಾಗಿರುವ ಸಂದೇಶಗಳನ್ನು ಒಪ್ಪಿಕೊಂಡು ಕ್ರಿಸ್ತನ ದೈವಿಕತೆಯನ್ನು ಧಿಕ್ಕರಿಸಿದ್ದರಿಂದ ಸೆರಾಮ್‌ಪೋರ್ ಮಿಷನ್‌ಗೂ ಆತನಿಗೂ ಇದ್ದ ಸಂಬಂಧ ಕಡಿಯಲಾಗಿದೆ’ ಎಂದಷ್ಟೇ ಬರೆದು ಸುಮ್ಮನಾದರು. ಮಿಷನರಿಗಳ ಇತಿಹಾಸವುಳ್ಳ ಪುಸ್ತಕದಲ್ಲಿ ಆಡಮನಿಗೆ ಸ್ಥಾನ ನಿರಾಕರಿಸಲಾಯ್ತು. ಅವರಿಗೆ ಇದು ಒಗ್ಗಿ ಬಂದ ಚಾಳಿ. ತಾವು ಮಾಡಿದ ಕಾರ್ಯಗಳ, ತಮಗಾದ ಆಘಾತಗಳ ಪಡಿಯಚ್ಚನ್ನು ಅಳಿಸುವುದು ಅವರಿಗೆ ಹೊಸತಲ್ಲ.
ಮಿಷನರಿಗಳು ಈಗ ಎಚ್ಚೆತ್ತುಕೊಂಡರು. ವೇದಗಳಲ್ಲಿರುವ ಸಾರವನ್ನು ತಮಗೆ ಬೇಕಾದ ರೀತಿಯಲ್ಲಿ ಅರ್ಥೈಸಿ ಭಾರತೀಯರಿಗೆ ಉಣಿಸುವುದು ಈಗ ಅವರಿಗೆ ಅನಿವಾರ್ಯವಾಯ್ತು. ಅವರು ಚಡಪಡಿಸಲಾರಂಭಿಸಿದರು.
ಅತ್ತ ಅಬೆ ಡುಬೋಯಿಸ್ ಮಿಷನರಿಯಾಗಿ ಭಾರತದಲ್ಲಿ ಪೂರಾ ಸೋತರೂ ಇಲ್ಲಿ ನೆಲೆ ನಿಂತು ಇಲ್ಲಿನ ಜನರನ್ನು ಅರ್ಥೈಸಿಕೊಂಡಿದ್ದ. ಇಲ್ಲಿನ ಹಬ್ಬಗಳಲ್ಲಿ, ಜಾತ್ರೆಗಳಲ್ಲಿ ಪಾಲ್ಗೊಂಡಿದ್ದ. ಮದುವೆ ಮುಂಜಿಗಳನ್ನು ಗಮನಿಸಿದ್ದ. ಜಾತಿ ಜಾತಿಗಳ ನಡುವಣ ಗೊಂದಲ ಕಣ್ಣು ಕುಕ್ಕಿತ್ತು. ತಾನು ಸೋತರೇನು, ಮುಂದೆ ಬರುವ ಮಿಷನರಿಗಳಿಗೆ ತನ್ನ ಅನುಭವ ಲಾಭದಾಯಕವಾಗಲೆಂದು ‘ಹಿಂದೂ ಮಮೆರಿ, ಕಸ್ಟಮ್ಸ್ ಅಂಡ್ ಸೆರಮನೀಸ್’ ಎಂಬ ಪುಸ್ತಕ ಬರೆದು ತರುಣ ಮಿಷನರಿಗಳ ಕೈಗಿಟ್ಟ. ಇಂದಿಗೂ ಭಾರತಕ್ಕೆ ಹೊರಡುವ ಪ್ರತಿಯೊಬ್ಬ ಮಿಷನರಿಗೂ ಇದು ವೇದವೇ ಸರಿ!
ಅಬೆ ಮಿಷನರಿಗಳಿಗೆಲ್ಲ ಒಂದು ಕಿವಿಮಾತು ಹೇಳಿದ, ೧ಹಿಂದೂಗಳ ಬಹುದೇವತಾ ವಾದ ಮತ್ತು ಮೂರ್ತಿಪೂಜೆಗಳೇ ಅವರನ್ನು ಕ್ರಿಸ್ತ ಮತದತ್ತ ಸೆಳೆಯಲು ನಮಗೆ ಶ್ರೇಷ್ಟ ಅಸ್ತ್ರ’.
ಚರ್ಚ್‌ನ ಚಡಪಡಿಕೆ ತೀವ್ರವಾಗುತ್ತಿತ್ತು. ಭಾರತ ಕೈತಪ್ಪಿಹೋಗುವ ಪ್ರಮೇಯ ಬಿಡಿ, ವೇದ ಧರ್ಮಕ್ಕೆ ಒಣಗಿದ ಎಲೆಗಳಂತೆ ತಾನೇ ಉದುರಿಹೋಗುವ ಭಯವೂ ಅವರನ್ನು ಕಾಡಲಾರಂಭಿಸಿತು. ವೇದಗಳ ಏಕದೇವತಾವಾದವನ್ನು ಧಿಕ್ಕರಿಸಿ ಅದರೊಳಗೆ ಬಹುದೇವತಾವಾದದ ಎಳೆಯನ್ನು ಹುಡುಕಬಲ್ಲ ಒಬ್ಬ ಸಂಸ್ಕೃತ ವಿದ್ವಾಂಸನನ್ನು ಅರಸಲಾರಂಭಿಸಿದರು. ಆತ ಇಂಗ್ಲೆಂಡಿಗೆ ಹೊರಗಿನವನಾಗಿದ್ದರೆ ಒಳಿತೆಂಬ ಅಭಿಪ್ರಾಯವೂ ಇತ್ತು. ಆ ಒಬ್ಬ ವ್ಯಕ್ತಿ ಹಿಂದೂ ಧರ್ಮದ ಬುಡವನ್ನೇ ಅಲುಗಾಡಿಸಿ ಕ್ರಿಸ್ತನ ಸಂದೇಶ ಹರಡಿಸಲು ರಾಜಮಾರ್ಗ ನಿರ್ಮಿಸಿಕೊಡುವನೆಂಬ  ನಿರೀಕ್ಷೆ ಚರ್ಚಿಗಿತ್ತು.
ಹೌದು. ಆ ‘ಒಬ್ಬ’ ಅವರಿಗೀಗ ಬೇಕೇಬೇಕಾಗಿತ್ತು.
ಆಗ ಅವರಿಗೆ ಸಿಕ್ಕವನೇ ಫ್ರೆಡ್ರಿಕ್ ಮಾಕ್ಸ್‌ಮಿಲಿಯನ್ ಮುಲ್ಲರ್’ ಅಥವಾ ನಮ್ಮೆಲ್ಲರ ಪಠ್ಯಪುಸ್ತಕಗಳನ್ನು, ಬುದ್ಧಿಜೀವಿಗಳ ತಲೆಯನ್ನೂ ಅಲಂಕರಿಸಿದ ‘ಮ್ಯಾಕ್ಸ್ ಮುಲ್ಲರ್’.

Wednesday 1 July 2015

ಭಾರತಕ್ಕೆ ಹೊರಡುವ ಮುನ್ನ ಮೆಕಾಲೆ ಹೇಳಿದ್ದೇನು ಗೊತ್ತಾ?

ಕಲ್ಕತ್ತಾಕ್ಕೆ ಬಂದು ಮೆಕಾಲೆ ನೆಲೆ ನಿಂತ.ಇಲ್ಲಿನ ಯಾವುದರಲ್ಲೂ ಒಳಿತನ್ನು ಕಾಣಬಾರದೆಂದು ಅವನು ನಿಶ್ಚಯಿಸಿದ್ದ.ಭಾರತೀಯರು ಅನಾಗರಿಕರು,ದುಷ್ಟರು ಎಂಬ ವಿಲ್ಬರ್ ಫೋರ್ಸ್ ನ ಮಾತುಗಳು ಅವನನ್ನು ಚೆನ್ನಾಗಿ ರೂಪಿಸಿಬಿಟ್ಟಿದ್ದವು.
’ಇಲ್ಲಿ ಕೆಲಸ ಮಾಡುವುದರ ಲಾಭ ಸಾಕಷ್ಟಿದೆ. ಗೌರವವೂ ಹೆಚ್ಚಿದೆ. ಸಂಬಳವೂ ವಾರ್ಷಿಕ ಹತ್ತು ಸಾವಿರ ಪೌಂಡುಗಳಷ್ಟು. ವರ್ಷಕ್ಕೆ ೫ ಸಾವಿರ ಪೌಂಡುಗಳಷ್ಟು ಖರ್ಚು ಮಾಡಿದರೆ ಇಲ್ಲಿ ರಾಜನಂತೆ ಬದುಕಬಹುದು. ಉಳಿದಷ್ಟನ್ನೂ ಉಳಿಸಿ ಬಡ್ಡಿಯನ್ನೂ ಗಳಿಸಬಹುದು. ನನಗೆ 39 ವರ್ಷಗಳಾಗುವಾಗ ನಾನು ೩೦ ಸಾವಿರ ಪೌಂಡುಗಳೊಂದಿಗೆ ಉತ್ಸಾಹಿತನಾಗಿ ಮರಳುತ್ತೇನೆ’.
ಹೀಗೊಂದು ಪತ್ರವನ್ನು ಯಾರು ಬರೆದಿರಬಹುದೆಂಬ ಪ್ರಶ್ನೆ ನಿಮ್ಮನ್ನು ಕೇಳಿದರೆ ಉತ್ತರ ಅದೇನು ಬರಬಹುದು ಹೇಳಿ ! ಹಳ್ಳಿಯಿಂದ ಹೊರಟ ಬಡ ಭಾರತದ ಉದ್ಯೋಗಿ ಶ್ರೀಮಂತ ಅಮೇರಿಕದಿಂದಲೋ -ಯೂರೋಪಿನಿಂದಲೋ ಬರೆದಿರಬೇಕೆಂದು ಊಹಿಸುತ್ತೀರಿ ತಾನೇ ? ನಿಮ್ಮ ಊಹೆ ಅಕ್ಷರಶಃ ಸುಳ್ಳು.
ಇದು ಮೆಕಾಲೆ 1833 ರಲ್ಲಿ ತನ್ನ ಸೋದರಿ ಹನ್ನಾಹ್ ಳಿಗೆ ಬರೆದ ಪತ್ರ.ತಾನು ಭಾರತಕ್ಕೆ ಹೊರಟು ನಿಂತಾಗ! ಬಡ ಇಂಗ್ಲೇಂಡಿನಿಂದ ಶ್ರೀಮಂತ ಭಾರತಕ್ಕೆ ಹೊರಟಾಗ!!.
ಮೆಕಾಲೆ. ಹೌದು ಅಕ್ಷರಶಃ ಥಾಮಸ್ ಬ್ಯಾಬಿಂಗ್ಟನ್ ಮೆಕಾಲೆಯೇ. ಜಾಕರಿ ಮೆಕಾಲೆ ಮತ್ತು ಸೆಲಿನಾ ಮಿಲ್ಟ್ ರ ಮಗನಾಗಿ 1800 ರಲ್ಲಿ ಜನಿಸಿದವ. ಚಿಕ್ಕಂದಿನಿಂದಲೂ ಕ್ರಿಶ್ಚಿಯಾನಿಟಿಯ ಮೇಲೆ ಅಖಂಡ ಭಕ್ತಿ ಅವನಿಗೆ, ತಾತ ಪ್ರೆಸ್ಟಿಟೇರಿಯನ್ ಚರ್ಚ್ ಗೆ ಸೇರಿದವರು. ತಂದೆ-ತಾಯಿಯರೂ ಸಾಕಷ್ಟು ಮತೀಯ ಭಾವನೆಗಳಿದ್ದವರೇ. ಲಂಡನ್ ನ ಹೌಸ್ ಆಫ಼್ ಕಾಮನ್ಸ್ ನಲ್ಲಿ ಇವ್ಯಾಂಜಲಿಕಲ್ ಪಕ್ಷದ ನಾಯಕನಾಗಿದ್ದ ಕಟ್ಟರ್ ಪಂಥಿಯಾಗಿದ್ದ ವಿಲಿಯಂ ವಿಲ್ಟರ್ ಫೋರ್ಸ್ ತಂದೆಗೆ ಆಪ್ತನಾಗಿದ್ದರಿಂದ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಮೆಕಾಲೆಗೆ ಬಾಲ್ಯದಿಂದಲೂ ಮತದ ವಿಷಪ್ರಾಶನ ಜೋರಾಗಿಯೇ ಆಗುತ್ತಿತ್ತು. ಹೀಗಾಗಿಯೇ ಆತ ಕ್ರಿಸ್ತಮತವೇ ಶ್ರೇಷ್ಟ ಎಂಬ ನಿಷ್ಕರ್ಷೆಗೆ ಬಂದು ಬಿಟ್ಟಿದ್ದ. ಅದು ತಪ್ಪಲ್ಲ, ಆದರೆ ಭುವಿಯ ಮೇಲೆ ಕ್ರೈಸ್ತರಲ್ಲದವರು ಬದುಕಲು ಅಯೋಗ್ಯರೆಂಬ ನಿರ್ಣಯವನ್ನೂ ಮಾಡಿಯಾಗಿತ್ತು. ಯೌವ್ವನದಲ್ಲಿ ಕೆಲಸಕ್ಕೆ ಪರದಾಡಿದ, ಕೈತುಂಬಾ ಸಂಬಳ ಸಿಗುವ ಕೆಲಸ ಅನುಮಾನವಾಗಿತ್ತು. ಬಡತನವೂ ಸಾಕಷ್ಟಿತ್ತು.
1833 ರಲ್ಲಿ ಈಸ್ಟ್ ಇಂಡಿಯಾ ಕಂಪನಿಗೆ ಭಾರತದಲ್ಲಿ ವ್ಯಾಪಾರ ಮಾಡುವ ಹಕ್ಕನ್ನು ನವೀಕರಿಸುವ ವಿಚಾರ ಸಂಸತ್ತಿನಲ್ಲಿ ಚರ್ಚೆಗೆ ಬಂತು. ಭಾರತದಲ್ಲಿ ಕಾನೂನು ರೂಪಿಸುವ ಸರ್ವೋಚ್ಚ ಸಮಿತಿಯೊಂದಕ್ಕೆ ಮೆಕಾಲೆಯನ್ನು ಹೆಸರಿಸಲಾಯ್ತು, ಇಂತಹ ಸಮಿತಿಗಳ ಕಿರಿಕಿರಿಗಳಿಂದ ನಲುಗಿಹೋಗಿದ್ದ ಕಂಪನಿ ಈಗ ಹೊಸ ಸದಸ್ಯ ಮೆಕಾಲೆಯನ್ನು ವಿರೋಧಿಸಿತು, ಇನ್ನೂ ಮೂವತ್ಮೂರರ ಹರೆಯದ ಮೆಕಾಲೆ ಅದೆಂತಹ ನಿರ್ಣಯ ಕೈಗೊಳ್ಳಬಲ್ಲ ಎಂಬ ಸಹಜ ವಾದ ಅವರದ್ದು. ಸಂಸತ್ತಿನ ಸದಸ್ಯರನೇಕರು ವಿರೋಧ ಮಾಡಿದರು. ವಿರೋಧಕ್ಕೆ ಕಾರಣವೂ ಇತ್ತು. ಮೆಕಾಲೆಗೆ ಕಾನೂನಿನ ಜ್ಞಾನ ನಿರ್ಣಯ ತೆಗೆದುಕೊಳ್ಳುವುದಕ್ಕೆ ಬೇಕಾದಷ್ಟು ಇರಲಿಲ್ಲ.ಅತ್ತ ಅವನಿಗೆ ಕಾನೂನು ರೂಪಿಸುವಷ್ಟು ಭಾರತದ ಪರಿಚಯವೂ ಇರಲಿಲ್ಲ. ಅವನಿಗೆ ಇದ್ದ ಒಂದೇ ಒಂದು ’ಸದ್ಗುಣ’ ಆತ ಮಿಶನರಿಗಳಿಗೆ ಪೂರಕನಾಗಿದ್ದು ಮತ್ತು ಅವರ ಚಿಂತನೆಗಳನ್ನು ಭಾರತದಲ್ಲಿ ಚಾಲ್ತಿಗೆ ತರಲು ಸಮರ್ಥನಿದ್ದ ಎಂಬುದು ಮಾತ್ರ! ಮಿಶನರಿಗಳನೇಕರು ಸರ್ಕಾರದ ಮೇಲೆ ಒತ್ತಡ ತಂದರು. ಮೆಕಾಲೆಯ ಪಕ್ಷ ಗೆದ್ದಿತು. ಆತ 1834 ರ ಜೂನ್ 10 ಕ್ಕೆ ಮದ್ರಾಸಿಗೆ ಬಂದಿಳಿದ.
Thomas_Babington_Macaulay,_Baron_Macaulay_by_Sir_Francis_Grant
ಹಾಗೆ ಭಾರತಕ್ಕೆ ಹೊರಡುವ ಮುನ್ನ ತನ್ನ ಆಪ್ತರನ್ನೆಲ್ಲಾ ಸೇರಿಸಿ ಮಾಡಿದ ಭಾಷಣದಲ್ಲಿ ’ನನ್ನನ್ನು ಮಾಡಿದವರ ಘನತೆಯನ್ನು ನನ್ನೊಂದಿಗೆ ಒಯ್ಯುತ್ತಿದ್ದೇನೆ. ಅಷ್ಟೇ ಅಲ್ಲ ಹೊಸ ಜವಾಬ್ದಾರಿ ನಿರ್ವಹಿಸುವಾಗ ಅವರ ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತೇನೆ.ಯೂರೋಪಿನಲ್ಲಿ ಕೆಲಸ ಮಾಡುವಾಗ ಇದ್ದಂತೆಯೇ ಏಷಿಯಾದಲ್ಲಿಯೂ ನೀವು ಹೇಳಿದ ಆದರ್ಶಗಳು ನನ್ನ ಮನಸಿನೊಳಗೆ ಇದ್ದೇ ಇರುತ್ತವೆ. ನಮ್ಮ ಸಂವಿಧಾನದ ಚೌಕಟ್ಟಿಗೆ ಸುಲಭಕ್ಕೆ ತರಲಾಗದ, ನಮ್ಮ ಮತದ ಮಹತ್ವವನ್ನು ಅರಿಯದ, ನಮ್ಮ ದಾಸ್ಯದಲ್ಲಿರುವ ಜನರ ನಡುವೆ ನಾನು ಕೆಲಸ ಮಾಡಬೇಕಿದೆ. ಹೀಗೆ ಮಾಡುವಾಗ ನಾನು,ಒತ್ತಡ ಹೇರದ, ಭ್ರಷ್ಟರಲ್ಲದ, ಜ್ಞಾನಿಗಳೂ, ಶ್ರೇಷ್ಟರೂ ಆದ ಕ್ರಿಶ್ಚನ್ನರು ನನ್ನನ್ನು ಕಾನೂನು ರೂಪಿಸಲು ಆರಿಸಿದ್ದಾರೆ ಎಂಬುದನ್ನು ಮರೆಯಲಾರೆ’ ಎಂದಿದ್ದ.
ಹ್ಞಾಂ, ಮುಂದಕ್ಕೆ ಸಾಗುವ ಮುನ್ನ ಒಮ್ಮೆ ಮೆಕಾಲೆಯ ಮೇಲೆ ಬಾಲ್ಯದಿಂದಲೂ ಪ್ರಭಾವ ಬೀರಿದ್ದ ವಿಲ್ಬರ್ ಫೋರ್ಸ್ ನ  ಬಗ್ಗೆ ತಿಳಿಯುವುದೊಳಿತು. ಆತ 1793 ರಲ್ಲಿಯೇ ಭಾರತದಲ್ಲಿ ಕ್ರೈಸ್ತ ಮತ ಪ್ರಚಾರ ತೀವ್ರಗೊಳ್ಳಬೇಕೆಂಬ ಠರಾವು ಮಂಡಿಸಿದ್ದ. ಜೊತೆಯಲ್ಲಿದ್ದವರು ಅದಕ್ಕೆ ತೀವ್ರ ಗಮನ ಕೊಟ್ಟಿರಲಿಲ್ಲ. ಹಠ ಬಿಡದಂತೆ ಆತ ಸತತ ಪ್ರಯತ್ನಗಳ ನಂತರ 1813 ರಲ್ಲಿ ಹೌಸ್ ಆಫ಼್ ಕಾಮನ್ಸ್ ನಲ್ಲಿ ಮತ್ತೆ ಈ ಪ್ರಶ್ನೆ ಎತ್ತಿದ. ಈ ಬಾರಿ ಜೊತೆಗಾರರನೇಕರಿಗೆ ಮೊದಲೇ ಪತ್ರ ಬರೆದು ತನ್ನ ಪರವಾಗಿರುವಂತೆ ಕೇಳಿಕೊಂಡಿದ್ದ. ಈ ಪ್ರಶ್ನೆಯ ಕುರಿತಂತೆ ಬಲು ಜೋರಾದ ಚರ್ಚೆಯೇ ನಡೆಯಿತು. ಅನೇಕ ಸಜ್ಜನರೂ ಅಲ್ಲಿದ್ದರು. ಭಾರತದಲ್ಲಿ 20 ವರ್ಷ ಅಧಿಕಾರಿಯಾಗಿದ್ದ ಸರ್ ಥಾಮಸ್ ಹೆನ್ರಿ ಮಾಂಟೆಗೊಮೆರಿ ತಾನು ಕೆಲಸ ಮಾಡಿದ ದಕ್ಷಿಣ ಭಾರತಕ್ಕಿಂತ ಲಂಡನ್ ಒಂದರಲ್ಲಿ ೧೫೦-೨೦೦ ಪಟ್ಟು ಹೆಚ್ಚು ಅಪರಾಧಗಳು ನಡೆಯುತ್ತವೆ ಎಂದಿದ್ದ. ಮೂರೆ, ಭಾರತೀಯರಿಗಿಂತ ಬುದ್ದಿವಂತರೂ, ಪರಿಶುದ್ದರೂ ಮತ್ಯಾರಿಲ್ಲ ಎಂದಿದ್ದ. ಲುಷಿಂಗ್ಟನ್ ನಂತೂ ಭಾರತ ಸಾಹಿತ್ಯ, ನೀತಿಗಳ ಆಗರ, ನೀತಿವಾಕ್ಯಗಳು ಪದೇ ಪದೇ ಇಣುಕುತ್ತವೆ, ಇಲ್ಲಿ ಕುನೀತಿ ಬೋದನೆಯ ಪುಸ್ತಕವನ್ನು ನಾನು ನೋಡಿಯೇ ಇಲ್ಲವೆಂದಲ್ಲ ಹೇಳಿದ್ದ.
ಆದರೆ ವಿಲ್ಬರ್ ಫೋರ್ಸ್ ತನ್ನ ನಿರ್ಧಾರಕ್ಕೆ ಕಟಿಬದ್ದನಾಗಿದ್ದ .ಆತ ಲಂಡನ್ನಿನಲ್ಲಿ ಕುಳಿತೇ ಭಾರತವನ್ನು ಅಧ್ಯಯನ ಮಾಡಿಬಿಟ್ಟಿದ್ದ ! ಸುದೀರ್ಘವಾದ ಭಾಷಣ ಮಾಡಿದ. ಮಾತಿನುದ್ದಕ್ಕೂ ಈ ದೇಶವನ್ನು-ಹಿಂದೂಗಳನ್ನು ಹಳಿದ. ನೀತಿಗೆಟ್ಟವರು, ಮೂಡನಂಬಿಕೆಗಳ ದಾಸರು, ಅಜ್ಞಾನಿಗಳು ಎಂದೆಲ್ಲಾ ಜರಿದ. ಜಗನ್ನಾಥನ ರಥದ ಚಕ್ರಕ್ಕೆ ತಲೆ ಕೊಡುವ, ಗಂಡ ಸತ್ತರೆ ಆತನೊಂದಿಗೆ ಹೆಂಡತಿಯನ್ನು ಸುಡುವ, ಭ್ರೂಣ ಹತ್ಯೆ ಮಾಡುವ ಜನ ಎಂಬೆಲ್ಲಾ ಅಂಶಗಳನ್ನು ಇಟ್ಟುಕೊಡು ಬಲವಾದ ವಾದ ಮಂಡಿಸಿದ, ಚರ್ಚೆ ತೀವ್ರವಾಯಿತು.
ಒಂದು ಹಂತದಲ್ಲಿ ವಿಲ್ಬರ್ ಫೋರ್ಸ್, ಭಾರತೀಯರು ಧರ್ಮದ ವಿಷಯದಲ್ಲಿ ಅದೆಷ್ಟು ಸಹನಶೀಲರೆಂದರೆ ನಮ್ಮಿಂದಾದ ತೀವ್ರ ಅಚಾತುರ್ಯವೂ ಅವರನ್ನು ರೊಚ್ಚಿಗೆಬ್ಬಿಸದು ಎನ್ನುತ್ತಾ ತನ್ನ ವಾದವನ್ನು ಮುಂದುವರೆಸಿದ. ಎಂತಹ ಪುಸ್ತಕಗಳು ಪ್ರಕಾಶನಗೊಳ್ಳಬೇಕು? ಅದನ್ನು ಯಾರು ಗಮನಿಸಬೇಕು ಎಂಬೆಲ್ಲಾ ನೀಲಿ ನಕಾಶೆಯನ್ನು ಮುಂದಿಟ್ಟ. ಕೊನೆಗೆ ಭಾರತೀಯರ ಪೂರ್ವಾಗ್ರಹಿಕೆಗಳನ್ನು ಮುಟ್ಟದೇ ಅವರನ್ನು ಜ್ಞಾನವಂತರನ್ನಾಗಿಸಬೇಕೆಂಬ ತನ್ನ ಹಂಬಲ ತೋಡಿಕೊಂಡ. ಅವನ ದ್ರಷ್ಟಿಯಲ್ಲಿ ಜ್ಞಾನವಂತರನ್ನಾಗಿಸುವುದೆಂದರೆ ಪಶ್ಚಿಮದ ರೀತಿ ರಿವಾಜುಗಳ ಶಿಕ್ಷಣ ಕೊಡುವುದಾಗಿತ್ತು. ಈ ಶಿಕ್ಷಣ ಪಡೆದ ಹಿಂದೂ ತನ್ನ ರಾಕ್ಷಸೀಯ  ವ್ಯವಸ್ಥೆಯನ್ನು ತೊರೆದು ಕ್ರಿಸ್ತನನ್ನು ಅಪ್ಪಿಕೊಂಡುಬಿಡುತ್ತಾನೆ ಎಂಬ ದೃಢ ವಿಶ್ವಾಸ ಅವನದಾಗಿತ್ತು.
ವಿಲ್ಬರ್ ಫೋರ್ಸ್ ನ ಕುರಿತಂತೆ ಇಷ್ಟು ತಿಳಿದ ಮೇಲೆ( ಸದ್ಯಕ್ಕಿಷ್ಟು ಮಾತ್ರ) ಮೆಕಾಲೆಯ ಹೇಳಿಕೆಗಳನ್ನು ಮತ್ತೊಮ್ಮೆ ಓದಿ ನೋಡಿ ’ನೀವು ಹೇಳಿದ ಆದರ್ಶವನ್ನು ಏಷಿಯಾದಲ್ಲಿ ಪಾಲಿಸುತ್ತೇನೆ ಎಂದಿದ್ದ. ಯಾವುವು ಆ ಆದರ್ಶಗಳು ಬಹುಶಃ ಈಗ ಅನುಮಾನಕ್ಕೆಡೆಯಿರಲಿಕ್ಕಿಲ್ಲ. ಅಷ್ಟೇ ಅಲ್ಲ ನನ್ನನ್ನು ಕಳುಹಿಸಿರುವವರು ಶ್ರೇಷ್ಠ ಕ್ರಿಶ್ಚನ್ನರು ಎಂಬುದನ್ನು ಮರೆಯಲಾರೆ ಎಂದಿದ್ದ. ಅದರರ್ಥ ,ಆತ ಭಾರತೀಯತೆಯ ನಾಶದ ತಯಾರಿಯನ್ನು ಚೆನ್ನಾಗಿ ಮಾಡಿಕೊಂಡಿದ್ದ.
ಸೆಪ್ಟೆಂಬರ್ ನಲ್ಲಿ ಕಲ್ಕತ್ತಾಕ್ಕೆ ಬಂದು ಮೆಕಾಲೆ ನೆಲೆ ನಿಂತ. ವಿಲ್ಬರ್ ಫೋರ್ಸ್ ನ ಮಾತುಗಳು ಅವನನ್ನು ಕೊರೆಯುತ್ತಿದ್ದವು. ಇಲ್ಲಿನ ಯಾವುದರಲ್ಲೂ ಒಳಿತನ್ನು ಕಾಣಬಾರದೆಂದು ಅವನು ನಿಶ್ಚಯಿಸಿದ್ದ. ಹೀಗಾಗಿಯೇ ಅವನ ಮೊದಲ ಆಕ್ರೋಶ ತಿರುಗಿದ್ದು ಬಂಗಾಳದ ಬ್ರಾಹ್ಮಣರ ಮೇಲೆ. ಪರಂಪರೆಯನ್ನು, ಧರ್ಮವನ್ನು ಉಳಿಸುವುದರಲ್ಲಿ ಅವರ ಪಾತ್ರ ಬಲು ದೊಡ್ಡದೆಂದು ಅವನಿಗೆ ಖಂಡಿತಾ ಗೊತ್ತಿತ್ತು. ಅದರೊಟ್ಟಿಗೆ ಅವರಾಡುವ ಸಂಸ್ಕೃತ ಭಾಷೆಯ ಮೇಲೆ ಅವನ ಆಕ್ರೋಶ, ಇನ್ನು ಸಹಜವಾಗಿಯೇ, ಸಹಜತೆಗೆ ಹತ್ತಿರವಾಗಿದ್ದ ಗುರುಕುಲಗಳನ್ನು ಕಂಡರೆ ಕೆಂಡಾಮಂಡಲನಾಗುತ್ತಿದ್ದ. ಭಾರತೀಯರು ಅನಾಗರೀಕರು, ದುಷ್ಟರು ಎಂಬ ವಿಲ್ಬರ್ ಫೋರ್ಸ್ ನ ಮಾತುಗಳು ಅವನನ್ನು ಚೆನ್ನಾಗಿ ರೂಪಿಸಿಬಿಟ್ಟಿದ್ದವು.
ಕಲ್ಕತ್ತಾಗೆ ಬಂದ ನಾಲ್ಕೇ ತಿಂಗಳಲ್ಲಿ ಅವನು ತನ್ನ ಸಮಿತಿಗೆ ಬರೆದ ಪತ್ರದಲ್ಲಿ ತನ್ನ ಅಭಿಪ್ರಾಯಗಳನ್ನು ವಿಸ್ತಾರವಾಗಿ ಮಂಡಿಸಿದ. ’ಭಾರತೀಯರು ಮಾತನಾಡುವ ಭಾಷೆಯಲ್ಲಿ ಸಾಹಿತ್ಯವಾಗಲೀ, ವೈಜ್ಞಾನಿಕ ಅಂಶಗಳಾಗಲೀ ಇಲ್ಲ. ಈ ಭಾಷೆಗಳು ಅದೆಷ್ಟು ಬಡಕಲು ಮತ್ತು ಒರಟೆಂದರೆ ಅದನ್ನು ಯಾವುದಾದರೂ ರೂಪದಲ್ಲಿ ಶ್ರೀಮಂತಗೊಳಿಸದಿದ್ದರೆ ಶ್ರೇಷ್ಠ ಸಾಹಿತ್ಯಗಳನ್ನು ಈ ನೆಲದ ಭಾಷೆಗಳಿಗೆ ಅನುವಾದ ಮಾಡಿಸುವುದೂ ಸಾಧ್ಯವಿಲ್ಲ’. ಎಂಬುದು ಇಲ್ಲಿನ ಭಾಷೆಗಳನ್ನು ಕುರಿತ ಅವನ ಅಭಿಪ್ರಾಯವಾಗಿತ್ತು. ನಿಸ್ಸಂಶಯವಾಗಿ ಅವನು ಸಂಸ್ಕೃತವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಅಥವಾ ಹೆಚ್ಚೆಂದರೆ ನಾಲ್ಕು ತಿಂಗಳಲ್ಲಿ ಆತ ಬಂಗಾಳಿ ಭಾಷಿಗರನ್ನು ಕಂಡಿರಬಹುದು ಅಷ್ಟೇ. ಎರಡೂ ಭಾಷೆಗಳ ಕುರಿತಂತೆ ಅವನಾಡಿರುವ ಮಾತುಗಳು ಅಕ್ಷರಶಃ ಅಪದ್ಧ. ಅಮೇರಿಕಾದ ಪಂಡಿತ ಹ್ಯೂಸ್ಟನ್ ಋಗ್ವೇದ ಸಾಹಿತ್ಯ ಮತ್ತು ಅಂದಿನ ಸಂಸ್ಕ್ರತ ಭಾಷೆಯ ಕುರಿತಂತೆ ’ನಮ್ಮ ಆಧುನಿಕ ಭಾಷೆಗಳಿಗಿಂತ ಸೂಕ್ಷ್ಮಾಭಿರುಚಿಯುಳ್ಳದ್ದಾಗಿದೆ, ಪ್ರಾಚೀನ ಕಾಲದಲ್ಲಿಯೇ ಇಷ್ಟು ಶುದ್ಧವಾದ ಭಾಷೆಯ ನಿರ್ಮಾಣ ಹೇಗೆ ಸಾಧ್ಯವಾಯಿತು?’ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ.
ಮೆಕಾಲೆ ತನ್ನ ಹೇಳಿಕೆಗಳಿಗೆ ಯಾವ ಆಧಾರಗಳನ್ನೂ ಒದಗಿಸಲಿಲ್ಲ. ಅವನದು ಆಳುವವರಿಗಿರುವ ಸಹಜ ಪಿತ್ಥವಾಗಿತ್ತು ಅಷ್ಟೇ. ಆಳುವವರು ಆಳಿಸಿಕೊಳ್ಳುವವರಿಗಿಂತ ಶ್ರೇಷ್ಠರಾಗಿರಲೇಬೇಕೆಂಬ ನಂಬಿಕೆ!
ಮೆಕಾಲೆ ಇಲ್ಲಿಗೇ ನಿಲ್ಲಲಿಲ್ಲ.ನಾಲ್ಕು ತಿಂಗಳ ತನ್ನ ಅನುಭವವನ್ನು ಹೆಮ್ಮೆಯಿಂದ ಹಂಚಿಕೊಂಡ.’ಒಂದು ಒಳ್ಳೆಯ ಯೂರೋಪಿಯನ್ ಗ್ರಂಥಾಲಯದ ಒಂದು ಸಾಲು ಪುಸ್ತಕಗಳಿಗೆ, ಭಾರತ ಮತ್ತು ಅರೇಬಿಯಾದ ಅಷ್ಟೂ ಸಾಹಿತ್ಯ ಸರಿಸಾಟಿಯಾಗಲಾರದು’ ಎಂದಿದ್ದ. ಭಾರತದ ಅಷ್ಟೂ ಸಾಹಿತ್ಯವೆಂದಾಗ ವೇದ, ವೇದಾಂತ, ಸ್ಮೃತಿ ,ಶ್ರುತಿ ವಾಕ್ಯಗಳು,ರಾಮಾಯಣ -ಮಹಾಭಾರತದಂತಹ ಪುರಾಣ ಗ್ರಂಥಗಳು,ಭಗವದ್ಗೀತೆ,ಭಾಗವತ,ಅಲ್ಲದೇ ಬುದ್ಧ,ಶಂಕರ,ರಾಮಾನುಜ,ಮಧ್ವರ ಸಾಹಿತ್ಯಗಳು ಎಲ್ಲಾ ಅಂದರೆ ಎಲ್ಲವೂ ಸೇರಿತ್ತು.
ಬಹಳ ಉಲ್ಲೇಖ ಬೇಡ, ಜಗತ್ತಿನ ಇತಿಹಾಸವನ್ನು ಕುರಿತಂತೆ ಬಲು ನಿರ್ಧಾರದಿಂದ ಮಾತಾಡಬಲ್ಲ  ವಿಲ್ ಡ್ಯುರೆಂಟ್ ’ದ ಸ್ಟೋರಿ ಆಫ಼್ ಸಿವಿಲೈಸೇಷನ್’ ಗೂ ಮುನ್ನ ಬರೆದ ’ದ ಕೇಸ್ ಫ಼ಾರ್ ಇಂಡಿಯಾ ದಲ್ಲಿ ’ ಮರೆಯಬೇಡಿ ,ಭಾರತ ನಮ್ಮ ಜನಾಂಗದ ತವರೂರು, ಸಂಸ್ಕೃತ ಯೂರೋಪಿನ ಭಾಷೆಗಳ ಜನನಿ,ಆಕೆ ನಮ್ಮ ತತ್ವ ಶಾಸ್ತ್ರಗಳ ಜನನಿ, ಅರಬ್ಬರ ಮೂಲಕ ನಮ್ಮ ಬಹುಪಾಲು ಗಣಿತದ ತಾಯಿ ಆಕೆ. ಕ್ರೈಸ್ತ ಮತದಲ್ಲಿ ಹುದುಗಿರುವ ಆದರ್ಶಗಳಿಗೆ ಬುದ್ಧನ ಮೂಲಕ ನಮ್ಮಮ್ಮ ಅವಳು. ಹಳ್ಳಿಗಳ ಸಮುದಾಯ, ಸ್ವಯಂ ಸರಕಾರ, ಪ್ರಜಾಪ್ರಭುತ್ವಗಳ ಮೂಲಕ ಅವಳೇ ಅಮ್ಮ. ನೆನಪಿಡಿ, ತಾಯಿ ಭಾರತಿ ಅನೇಕ ಬಗೆಯಲ್ಲಿ ನಮ್ಮೆಲ್ಲರಿಗೂ ತಾಯಿಯೇ’ ಎಂದು ಬಲು ಸುಂದರವಾಗಿ ಭಾರತವನ್ನು ಚಿತ್ರಿಸಿದ್ದಾರೆ. ಒಂದೊಂದು ಸಾಲು ಓದುತ್ತಾ ಹೋದಂತೆಯೂ ರೊಮಾಂಚನಕಾರಿ ಅನುಭವವಾಗುವುದು.