Monday 16 November 2020

ದೀಪಾವಳಿ: ಕತ್ತಲೆಯಿಂದ ಬೆಳಕಿನೆಡೆಗೆ

 ‘ತಮಸೋ ಮಾ ಜ್ಯೋರ್ತಿಗಮಯ’ – ‘ಕತ್ತಲೆಯಿಂದ, ಅಜ್ಞಾನದಿಂದ ನನ್ನನ್ನು ಬೆಳಕಿನೆಡೆಗೆ, ಜ್ಞಾನದೆಡೆಗೆ ಕರೆದುಕೊಂಡು ಹೋಗು’ ಎಂದು ಸಾವಿರಾರು ವರ್ಷಗಳ ಹಿಂದೆ ಭಗವಂತನನ್ನು ಋಷಿ-ಮುನಿಗಳು ಪ್ರಾರ್ಥಿಸಿದ್ದಾರೆ. ನಮ್ಮ ಹಿರಿಯರು ಮಾಡಿರುವ ಹಬ್ಬಗಳ ಹಿಂದೆ ಆಳವಾದ ತಾತ್ವಿಕ ರಹಸ್ಯಗಳಿವೆ. ಅದನ್ನು ನಾವು ತಿಳಿಯಬೇಕಷ್ಟೇ. ಪೌರಾಣಿಕ, ವೈಜ್ಞಾನಿಕ, ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಹಿನ್ನಲೆಗಳನ್ನು ನಮ್ಮ ಹಬ್ಬಗಳು ಒಳ ಗೊಂಡಿವೆ. ಅಲ್ಲದೆ ಹಬ್ಬಗಳಲ್ಲಿನ ಆಚಾರ-ವಿಚಾರಗಳು ಋತುಧರ್ಮಕ್ಕೆ ಅನುಗುಣವಾಗಿದೆ. ದೇಹದ ಆರೋಗ್ಯಕ್ಕೆ ಹೊಂದುವಂತಹವು. ನಮ್ಮ ಹಬ್ಬಗಳಲ್ಲಿ ವೈವಿಧ್ಯತೆಯಿದೆ.

ಆಚರಣೆಗಳಿಗೆ ಅನುಗುಣವಾಗಿ ದೀಪಾವಳಿ ಹಬ್ಬವನ್ನು ಸುಖರಾತ್ರಿ, ಯಕ್ಷರಾತ್ರಿ, ಸುಖಸುಪ್ತಿಕಾ, ಕೌಮುದೀ ಮಹೋತ್ಸವ, ಭಗಿನೀದ್ವಿತೀಯಾ, ಸೋದ ರಬಿದಿಗೆ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ.

ಉಪಶಮಿತ ಮೇಘನಾದಂ ಪ್ರಜ್ವಲಿತ ದಶಾನನಂ ರಮಿತರಾಮಮ್ |

ರಾಮಾಯಣಮಿವ ಸುಭಗಂ ದೀಪದಿನಂ ಹರತು ಮೇ ದುರಿತಮ್ ||

‘ರಾಮಾಯಣದಲ್ಲಿ ಮೇಘನಾದನು (ಇಂದ್ರಜಿತ್) ಶಾಂತನಾಗುವಂತೆ ಈ ದೀಪಾವಳಿ ಮಹೋತ್ಸವದಲ್ಲಿ ಮೇಘನಾದವು (ಗುಡುಗು) ಶಾಂತವಾಗುತ್ತದೆ. ರಾಮಾಯಣದಲ್ಲಿ ದಶಮುಖ ರಾವಣನನ್ನು ಸುಡಲ್ಪ ಡುವಂತೆ (ನಾಶ), ಇದರಲ್ಲಿ ದಶೆ (ಬತ್ತಿ)ಗಳು ಮುಖವು (ಹಣತೆಗಳ ಮೂಲಕ) ಉರಿಸಲ್ಪಡುತ್ತವೆ. ಹೀಗೆ ರಾಮಾಯಣದಂತೆ ರಮಣೀಯವಾಗಿರುವ ದೀಪಾವಳಿ ಮಹೋತ್ಸವವು ದಿನವೂ ನಮ್ಮ ನಿಮ್ಮೆಲ್ಲರ ಪಾಪಗಳನ್ನು ಹೋಗಲಾಡಿಸಲಿ.’

ಅಂದರೆ ನಮ್ಮಲ್ಲಿರುವ ಅಜ್ಞಾನ, ಅರಿಷಡ್ವರ್ಗಗಳು ನಾಶವಾಗಿ, ಸಾತ್ವಿಕರು, ಜ್ಞಾನಿಗಳು ಆಗುವಂತೆ ದೀಪಾವಳಿ ಹಬ್ಬವು ನಮಗೆ ನೆರವನ್ನು ನೀಡಲಿ ಎಂದು ಈ ಹಬ್ಬದ ಆಶಯ.

ನರಕಚರ್ತುದಶಿ

ನರಕಾಸುರನು ಅನೇಕ ರಾಜರನ್ನು, ದೇವತೆಗಳನ್ನು ಗೆದ್ದು ಹದಿನಾರು ಸಾವಿರ ಸ್ತ್ರೀಯರನ್ನು ಸೆರೆಮನೆಯಲ್ಲಿ ಹಾಕಿದ್ದ. ಶ್ರೀಕೃಷ್ಣನು ನರಕಾಸುರನನ್ನು ಕೊಂದು ಅವರೆಲ್ಲರನ್ನು ಬಿಡುಗಡೆ ಮಾಡಿದನು. ಸ್ತ್ರೀಯರು ಮುಕ್ತರಾದ ಕಾರಣ ಶ್ರೀಕೃಷ್ಣನನ್ನು ಅರ್ಚಿಸಿ ದೀಪ ಬೆಳಗಿದರು ಎಂಬುದು ಪ್ರತೀತಿ. ಆ ದಿನದ ಸವಿನೆನಪಿಗಾಗಿ ನಾವು ನರಕಚತುರ್ದಶಿಯನ್ನು ಆಚರಿಸುತ್ತೇವೆ.

ಇನ್ನು ನಾವು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದಾಗ, ಇದರಲ್ಲಿ ಗಹನವಾದ ಒಳಾರ್ಥವೂ ಇದೆ. ನರಕಾಸುರನೆಂದರೆ ನರಕಕ್ಕೆ ನಮ್ಮನ್ನು ಎಳೆದೊಯ್ಯುವ ರಾಕ್ಷಸೀಪ್ರವೃತ್ತಿ ಎಂದು. ರತ್ನಾಕರವರ್ಣಿಯು ಭರತೇಶವೈಭವದಲ್ಲಿ ‘ಹೊನ್ನು ಹೆಣ್ಣು ಮಣ್ಣು ಪಿಡಿದಾತ್ಮರೆಲ್ಲರೂ | ಮಣ್ಣು ಹಿಡಿದ ಲೋಹದಂತೆ’ ಎಂದು ಹೇಳುತ್ತಾನೆ. ನಾವು ನೈಜವಾಗಿ ದಿವ್ಯಾತ್ಮರಾಗಿದ್ದರೂ, ಅಜ್ಞಾನದ ಫಲವಾಗಿ ಅನೇಕ ಕಲ್ಮಶಗಳನ್ನು ಹೊಂದಿದ್ದೇವೆ. ಅದರಿಂದ ದುಃಖವನ್ನು ಅನುಭವಿಸುತ್ತಿದ್ದೇವೆ. ಅದನ್ನೇ ನರಕ ಎಂದು ಕರೆಯುತ್ತಾರೆ. ಕಲ್ಮಶಗಳು ಹೆಚ್ಚಾದಾಗ, ಮನುಷ್ಯ ದೇಹವನ್ನು ಹೊಂದಿದ್ದರೂ ರಾಕ್ಷಸೀಪ್ರವೃತ್ತಿಯನ್ನು ತೋರಿಸುತ್ತೇವೆ. ಆದ್ದರಿಂದ ನಾವು ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ, ಮಾಡಬಾರದ ಕೆಲಸಗಳನ್ನು ಮಾಡಿ ನರಕಕ್ಕೆ ಹೋಗುವುದು ಅಥವಾ ನರಕಯಾತನೆಯನ್ನು ಅನುಭವಿಸುವುದು ನಿಶ್ಚಿತ.

ಚತುರ್ದಶಿ ಎಂದರೆ ‘ವಿದ್ಯೆ’ ಎಂಬ ಅರ್ಥವಿದೆ. ಶಿಕ್ಷಣದ ಮೂಲಕ ನಿಜವಾದ ವಿದ್ಯೆಯನ್ನು ಪಡೆದಾಗ ನಾವು ಸುಸಂಸ್ಕೃತರಾಗುತ್ತೇವೆ. ಸುಸಂಸ್ಕೃತರಾಗಬೇಕಾದರೆ ನಮ್ಮಲ್ಲಿರುವ ಕೀಳುಮಟ್ಟದ ಸ್ವಭಾವಗಳನ್ನು ಬಿಡಬೇಕಾಗುತ್ತದೆ. ತಮಸ್ಸು ಮತ್ತು ರಜಸ್ಸನ್ನು ಬಿಟ್ಟು, ಸಾತ್ವಿಕ ಪುರುಷರಾದಾಗ ಮಾತ್ರ ನಾವು ನಿಜವಾದ ವಿದ್ಯಾವಂತರಾಗಲು ಸಾಧ್ಯ. ನಮ್ಮಲ್ಲಿರುವ ಆಸುರೀ ಗುಣಗಳನ್ನು ನಿರ್ಮೂಲನೆ ಮಾಡುತ್ತಾ, ಬ್ರಹ್ಮವಿದ್ಯೆಯನ್ನು ಪಡೆಯಬೇಕು ಎಂಬುದು ನರಕಚತುರ್ದಶಿಯ ಅಂತರ್ಗತ ಅರ್ಥವಾಗಿದೆ. ಹೊಸ ವಸ್ತ್ರಗಳನ್ನು ಧರಿಸಿ, ಹಣತೆಗಳನ್ನು ಹಚ್ಚಿ, ಪಟಾಕಿಗಳನ್ನು ಸಿಡಿಸುವುದರಲ್ಲಿ ನಮ್ಮ ದೀಪಾವಳಿಯ ಆಚರಣೆಯು ಮುಗಿಯದೆ, ನಿಜವಾದ ಅರ್ಥದಲ್ಲಿ ನಾವು ವಿದ್ಯಾವಂತರಾಗೋಣ. ಆಗ ನಿಜವಾದ ದೀಪಾವಳಿ ಹಬ್ಬದ ಆಚರಣೆಯಾಗುತ್ತದೆ.

ಹಲವು ಪೂಜೆಗಳು

ದೀಪಾವಳಿ ಹೆಸರೇ ಸೂಚಿಸುವಂತೆ ಇದು ದೀಪಗಳ ಹಬ್ಬ. ‘ದೀಪ + ಆವಳಿ’ – ಅಂದರೆ ದೀಪಗಳ ಸಾಲು ಎಂದು. ಅಂತಹ ದೀಪಗಳ ಪರಂಪರೆಯನ್ನು ಹೊಂದಿರುವುದರಿಂದ ಈ ಹಬ್ಬಕ್ಕೆ ಈ ನಾಮಧೇಯ. ಈ ಹಬ್ಬ ಒಂದು ದಿನದ ಆಚರಣೆಗೆ ಸೀಮಿತವಾಗಿಲ್ಲ. ನರಕಚತುರ್ದಶಿ, ಬಲಿಪಾಡ್ಯ, ಲಕ್ಷ್ಮೀಪೂಜೆ, ಕಾಳೀಪೂಜೆ, ಕುಬೇರಪೂಜೆ, ಯಮಧರ್ಮರಾಜನ ಪೂಜೆ, ಯಮುನಾಪೂಜೆ, ಇತ್ಯಾದಿ ಅನೇಕ ಪೂಜೆಗಳನ್ನು ದೀಪಾವಳಿ ಒಳಗೊಂಡಿದೆ.

CONTENT COPY RIGHT: https://www.prajavani.net/community/religion/deepavali-naraka-chaturdashi-celebrations-traditional-pooja-779056.html

ದಿನದ ಸೂಕ್ತಿ: ಬಲಿಪಾಡ್ಯಮಿ

 


ಅಶ್ವತ್ಥಾಮಾ ಬಲಿರ್ವ್ಯಾಸೋ ಹನುಮಾಂಶ್ಚ ವಿಭೀಷಣಃ ।
ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ ।।

ಇದರ ತಾತ್ಪರ್ಯ ಹೀಗೆ:

‘ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ, ಪರಶುರಾಮ – ಇವರು ಏಳು ಜನರು ಚಿರಂಜೀವಿಗಳು.’

ಚಿರಂಜೀವಿಗಳು ಎಂದರೆ ಸಾವೇ ಇಲ್ಲದವರು. ಸಾವನ್ನು ಗೆಲ್ಲುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲವಷ್ಟೆ! ಹುಟ್ಟು ಇದ್ದಮೇಲೆ ಸಾವು ಇರಲೇಬೇಕು. ಆದರೆ ಏಳು ಜನರು ಸಾವನ್ನು ಗೆದ್ದಿದ್ದಾರೆ; ಅವರಿಗೆ ಸಾವೇ ಇಲ್ಲ – ಎನ್ನುವುದು ಪರಂಪರೆಯ ನಂಬಿಕೆ. ಈ ಏಳು ಜನರು ಯಾರೆಂಬುದನ್ನು ಮೇಲಿನ ಶ್ಲೋಕ ಪಟ್ಟಿಮಾಡಿ ಹೇಳಿದೆ. ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ, ಪರಶುರಾಮ – ಇವರೇ ಆ ಏಳು ಚಿರಂಜೀವಿಗಳು.

ಚಿರಂಜೀವಿಗಳೆಂದು ಗುರುತಿಸಲ್ಪಟ್ಟಿರುವ ಏಳು ಜನರೂ ಪುರಾಣವ್ಯಕ್ತಿಗಳು; ಬಲಿಯನ್ನು ಹೊರತು ಪಡಿಸಿದರೆ, ಉಳಿದ ಅಷ್ಟು ಮಂದಿಯೂ ರಾಮಾಯಣ ಮತ್ತು ಮಹಾಭಾರತಗಳಲ್ಲಿರುವ ಪ್ರಮುಖ ಪಾತ್ರಗಳು ಎನ್ನಬಹುದು; ಬಲಿಯ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖವಿದ್ದರೂ ಬೇರೆ ಪುರಾಣಗಳಲ್ಲಿಯೇ ಹೆಚ್ಚಿನ ವಿವರಗಳು ಸಿಗುವುದು. ಈ ಏಳು ಜನರಿಗೆ ಚಿರಂಜೀವತ್ವ ಹೇಗೆ ದೊರೆಯಿತು ಎನ್ನುವುದು ಕೂಡ ಸ್ವಾರಸ್ಯಕರವಾಗಿದೆ. ಸದ್ಯಕ್ಕೆ ನಮಗೆ ಇಲ್ಲಿ ಪ್ರಸ್ತುತ ವ್ಯಕ್ತಿ ಎಂದರೆ ಬಲಿ. 

ಬಲಿಯು ಪ್ರಹ್ಲಾದನ ಮೊಮ್ಮಗ; ವಿರೋಚನನ ಮಗ. ಇವನು ರಾಕ್ಷಸರಾಜ. ಇವನ ದಾನಬುದ್ಧಿ ಎಲ್ಲ ಲೋಕಗಳಲ್ಲೂ ಪ್ರಸಿದ್ಧಿಯನ್ನು ಪಡೆದಿತ್ತು. ಆದರೆ ಅವನಿಗೆ ತನ್ನ ದಾನಶೀಲತೆಯ ಬಗ್ಗೆ ತುಂಬ ಹೆಮ್ಮೆಯೂ ಇತ್ತು. ಇವನ ಅಹಂಕಾರವನ್ನು ತಗ್ಗಿಸಲೆಂದೇ ಮಹಾವಿಷ್ಣು ಇವನಲ್ಲಿಗೆ ಬಂದ; ಆದರೆ ವಾಮನರೂಪದಲ್ಲಿ ಬಂದ; ಬಂದು ದಾನವನ್ನು ಬೇಡಿದ. ಪುಟ್ಟ ಆಕೃತಿಯ ಈ ಬಾಲಕ ಏನನ್ನು ತಾನೆ ಕೇಳಿಯಾನು – ಎಂಬ ಎಣಿಕೆ ಬಲಿಚಕ್ರವರ್ತಿಯದ್ದು. ಮೇಲ್ನೋಟಕ್ಕೆ ಸಣ್ಣ ಕೋರಿಕೆಯಾಗಿಯೇ ಕಾಣುವಂಥ ದಾನವನ್ನೇ ಕೇಳಿದ ವಾಮನ; ಮೂರು ಹೆಜ್ಜೆಗಳಷ್ಟು ಭೂಮಿ ಅವನು ಕೇಳಿದ ದಾನ. ಹುಚ್ಚ, ಇಷ್ಟೇ ಸಾಕೇ, ಬೇರೆ ಏನನ್ನಾದರೂ ಕೇಳಿಕೋ – ಎಂದ ಬಲಿ. ಆದರೆ ಮೂರು ಹೆಜ್ಜೆಗಳಷ್ಟು ಭೂಮಿಯನ್ನೇ ಅವನು ಕೊಡಲು ಸಾಧ್ಯವಾಗಲಿಲ್ಲ. ವಾಮನ ತ್ರಿವಿಕ್ರಮನಾಗಿ ಬೆಳೆದು, ಒಂದು ಹೆಜ್ಜೆಯಿಂದ ಭೂಮಿಯನ್ನೂ, ಮತ್ತೊಂದರಿಂದ ಆಗಸವನ್ನೂ ಅಳೆದುಬಿಟ್ಟ! ಮೂರನೆಯ ಹೆಜ್ಜೆಗೆ ಬಲಿಯ ತಲೆಯೇ ಸ್ಥಾನವಾಯಿತು. ವಿಷ್ಣು ಅವನನ್ನು ಮೆಟ್ಟಿ, ಪಾತಾಳಕ್ಕೆ ತಳ್ಳಿದ. ಆದರೂ ಅವನ ದಾನಬುದ್ಧಿಯಿಂದ ಪ್ರಸನ್ನನಾಗಿ ಅವನಿಗೆ ಚಿರಂಜೀವಿಯಾಗಿರು ಎಂದು ಹರಸಿದ; ಮಾತ್ರವಲ್ಲ, ವರ್ಷಕ್ಕೊಮ್ಮೆ ಅವನು ತನ್ನ ರಾಜ್ಯವಾದ ಈ ಭೂಲೋಕಕ್ಕೆ ಬಂದುಹೋಗುವ ಅವಕಾಶವನ್ನೂ ಒದಗಿಸಿದ.

ಇಂದು ಬಲಿಪಾಡ್ಯಮಿ. ನಾವೆಲ್ಲರೂ ಬಲಿಯನ್ನು ಸ್ವಾಗತಿಸುವ ದಿನ. ಜೊತೆಗೆ ಅವನಿಂದ ಪಾಠವನ್ನು ಕಲಿಯುವ ಸಮಯ ಕೂಡ. ನಮ್ಮ ಗುಣಗಳ ಬಗ್ಗೆಯೂ ನಾವು ಎಚ್ಚರದಿಂದ ಇರಬೇಕು. ದುಡುಕಿನಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಅಹಂಕಾರ ನಮ್ಮನ್ನು ಸವಾರಿಮಾಡತೊಡಗಿದರೆ ನಮ್ಮ ಗುಣಗಳೇ ನಮ್ಮ ಶತ್ರುಗಳೂ ಆಗಬಹುದು. ಎಲ್ಲ ಗುಣಗಳಲ್ಲೂ ಮಹಾಗುಣ ಎಂದರೆ ವಿನಯವೇ. ಇದನ್ನು ನಾವು ಮರೆಯಬಾರದು.

content copy right: https://www.prajavani.net/community/religion/balipadyami-deepavali-festival-religion-god-spiritual-morality-779481.html

ದಿನದ ಸೂಕ್ತಿ: ಲಕ್ಷ್ಮೀಪೂಜೆ

ಪರಸ್ಪರವಿರೋಧಿನ್ಯೋರೇಕಸಂಶ್ರಯದುರ್ಲಭಮ್‌

ಸಂಗತಂ ಶ್ರೀಸರಸ್ವತ್ಯೋರ್ಭೂತಯೇsಸ್ತು ಸದಾ ಸತಾಮ್‌ ।।

ಇದರ ತಾತ್ಪರ್ಯ ಹೀಗೆ:

‘ಲಕ್ಷ್ಮಿಯೂ ಸರಸ್ವತಿಯೂ ಒಂದು ಕಡೆ ಇರುವುದು ವಿರಳ. ಅವರಿಬ್ಬರೂ ವಿರೋಧವಿಲ್ಲದೆ ಯಾವಾಗಲೂ ಸಜ್ಜನರಲ್ಲಿ ಇರಲಿ ಎಂದು ಆಶಿಸುತ್ತೇನೆ.’

ಇಂದು ದೀಪಾವಳಿಯ ಎರಡನೆಯ ದಿನ; ಲಕ್ಷ್ಮಿಯನ್ನು ಪೂಜಿಸುವ ದಿನ. ಈ ಸಂದರ್ಭದಲ್ಲಿ  ಕಾಳಿದಾಸ ಮಹಾಕವಿಯ ಈ ಶ್ಲೋಕದ ಅನುಸಂಧಾನ ಅರ್ಥಪೂರ್ಣವಾಗುತ್ತದೆ.

ನಮ್ಮ ಸಮಾಜದಲ್ಲಿ ಇರುವ ನಂಬಿಕೆಯೊಂದನ್ನೇ ಮಹಾಕವಿ ಇಲ್ಲಿ ಹೇಳುತ್ತಿರುವುದು ಸ್ಪಷ್ಟ. ಲಕ್ಷ್ಮಿ ಮತ್ತು ಸರಸ್ವತಿ – ಈ ಇಬ್ಬರೂ ಒಂದೇ ಸ್ಥಳದಲ್ಲಿ ಇರುವುದಿಲ್ಲ ಎಂಬ ನಂಬಿಕೆ ಇದೆಯಷ್ಟೆ. ಎಂದರೆ ದುಡ್ಡು ಮತ್ತು ವಿದ್ಯೆ – ಇವೆರಡೂ ಒಂದು ಸ್ಥಳದಲ್ಲಿ ಅಥವಾ ಒಬ್ಬ ವ್ಯಕ್ತಿಯಲ್ಲಿ ಇರುವುದಿಲ್ಲ ಎಂಬುದು ಇದರ ತಾತ್ಪರ್ಯ. ಈ ನಂಬಿಕೆ ದಿಟವೋ ಸಟೆಯೋ – ಅದು ಬೇರೆ ಮಾತು. ಅದರೆ ಇಂಥದೊಂದು ನಂಬಿಕೆ ಜನರಲ್ಲಿ ಇದೆ ಎನ್ನುವುದಂತೂ ನಿಜ. ಇಂಥದೊಂದು ನಂಬಿಕೆಗೆ ಕಾರಣವಾದರೂ ಏನು – ಎಂಬ ಪ್ರಶ್ನೆ ಬರದೇ ಇರದು. ಕಾರಣ ಏನಾದರೂ ಇರಲಿ; ಒಂದನ್ನಂತೂ ಊಹಿಸಬಹುದು. ಅದೆಂದರೆ, ದುಡ್ಡನ್ನು ಸಂಪಾದಿಸಲು ಬೇಕಾದ ಮಾನಸಿಕತೆ ಮತ್ತು ಸಾಧನೆ–ಸಲಕರಣೆಗಳು ಬೇರೆ, ವಿದ್ಯೆಯನ್ನು ಸಂಪಾದಿಸಲು ಬೇಕಾದ ಮಾನಸಿಕತೆ ಮತ್ತು ಸಾಧನೆ–ಸಲಕರಣೆಗಳು ಬೇರೆ. ದುಡ್ಡಿನಲ್ಲಿಯೇ ಸಂತೋಷ ಇದೆ ಎಂದುಕೊಳ್ಳುವವರು ವಿದ್ಯೆಯ ಕಡೆಗೆ ಮುಖಮಾಡುವುದು ಕಡಿಮೆ; ಹೀಗೆಯೇ ಕಲಿಕೆಯಲ್ಲಿಯೇ ಸಂತೋಷವನ್ನು ಕಂಡುಕೊಂಡವರು ದುಡ್ಡಿನ ಬಗ್ಗೆ ವ್ಯಾಮೋಹ ಬೆಳೆಸಿಕೊಳ್ಳುವುದು ಕಡಿಮೆ.

ಲಕ್ಷ್ಮಿ ಮತ್ತು ಸರಸ್ವತಿಗಳ ಈ ವಿಮುಖತೆಗೆ ಇನ್ನೂ ಹಲವು ಕಾರಣಗಳು ಇವೆಯೆನ್ನಿ! ಆದರೆ ಇವರಿಬ್ಬರೂ ಒಂದೆಡೆ ಇರಲೇ ಬಾರದು ಎಂದೇನೂ ಇಲ್ಲವಷ್ಟೆ. ಮಹಾಕವಿ ಅಂಥ ಸಂಗಮ ಸಾಧ್ಯವಾಗಲಿ ಎಂದು ಆಶಿಸುತ್ತಿದ್ದಾನೆ; ಆದರೆ ಸಜ್ಜನರಲ್ಲಿ ಅಂಥ ಸಮಾಗಮವಾಗಲಿ ಎಂದು ಹಾರೈಸುತ್ತಿದ್ದಾನೆ. ಏಕೆಂದರೆ ವಿದ್ಯೆ ಅಥವಾ ದುಡ್ಡು – ಇವೆರಡರಲ್ಲಿ ಯಾವುದಾದರೂ ಒಂದೇ ಇದ್ದರೂ ಸಾಕು, ಆ ವ್ಯಕ್ತಿಯ ತಲೆ ಕೆಡಿಸಲು; ಇನ್ನು ಎರಡೂ ಇದ್ದರೆ ಏನು ಹೇಳುವುದು? ಹೀಗಾಗಿಯೇ ಇವೆರಡೂ ಸಜ್ಜನರಲ್ಲಿ ಮಾತ್ರವೇ ಒಂದಾಗಿ ನೆಲಸಲಿ ಎಂದು ಕವಿ ಆಶಿಸಿರುವುದು.

ಆದರೆ ಇಲ್ಲಿ ಇನ್ನೊಂದು ವಿಷಯವನ್ನು ಕೂಡ ಗಮನಿಸಬೇಕು. ನಾವು ಲಕ್ಷ್ಮಿ ಮತ್ತು ಸರಸ್ವತಿಯನ್ನು ಬೇರೆ ಬೇರೆ ಎಂದು ಗ್ರಹಿಸುತ್ತಿರುವುದರಲ್ಲಿಯೇ ಸಮಸ್ಯೆ ಇದೆ. ಲಕ್ಷ್ಮಿ ಎಂದರೆ ವಿದ್ಯೆಯೂ ಹೌದು, ಸರಸ್ವತಿ ಎಂದರೆ ಸಂಪತ್ತೂ ಹೌದು. ಇದನ್ನು ಮನಗಂಡು ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಇದೇ ನಿಜವಾದ ಲಕ್ಷ್ಮೀಪೂಜೆ.

Content From: https://www.prajavani.net/community/motivation/laxmi-pooja-a-religious-performance-during-deepavali-festival-779252.html