IMPORTANT NOTICE
Thursday, 7 January 2021
ಕಾಸರಗೋಡಿನ ಅಶ್ವಿನಿ ಕೋಳಿಕ್ಕಜೆ- ಶ್ರೀ ಶಂಕರ ಸೂಪರ್ ಸಿಂಗರ್ ರಿಯಾಲಿಟಿ ಶೋ ದ ವಿನ್ನರ್
ಮುಳ್ಳೇರಿಯಾ: ಕಾಸರಗೋಡು ಜಿಲ್ಲೆಯ ಕಾರಡ್ಕ ಗ್ರಾಮದ ಕೋಳಿಕ್ಕಜೆಯ ಅಶ್ವಿನಿ ಕೆ ಇವರು ಶ್ರೀಶಂಕರ ಟಿವಿಯ ಸೂಪರ್ ಸಿಂಗರ್ ರಿಯಾಲಿಟಿ ಶೋದ ಸೀಸನ್ 3ರಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಕೋಳಿಕ್ಕಜೆಯ ಬಾಲಸುಬ್ರಹ್ಮಣ್ಯ ಭಟ್ ಹಾಗೂ ಶ್ರೀಮತಿ ಶುಭಾ ದಂಪತಿಗಳ ಪುತ್ರಿ ಅಶ್ವಿನಿ ಮುಳ್ಳೇರಿಯಾದ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ 12 ವರ್ಷ ವ್ಯಾಸಂಗ ನಡೆಸಿದ ಬಳಿಕ 2 ವರ್ಷ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ಬಳಿಕ ಇದೀಗ ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಸಂಗೀತ ಪದವಿ ಪರೀಕ್ಷೆ ಮುಗಿಸಿದ್ದಾರೆ.
ಸಂಗೀತದಲ್ಲಿ ಈಕೆಗೆ ತಂದೆಯೇ ಮೊದಲ ಗುರು. ಪ್ರಾಥಮಿಕ ಶಿಕ್ಷಣವನ್ನು ಅವರಿಂದಲೇ ಪಡೆದು ಮೈಸೂರಿನ ಖ್ಯಾತ ಕಲಾವಿದೆ ವಿದುಷಿ ಶ್ರೀಮತಿ ಕೋವಿಲಡಿ ಕಲಾ ಇವರ ಶಿಷ್ಯೆಯಾಗಿ ಈಗ ಸಂಗೀತ ಶಿಕ್ಷಣ ಮುಂದುವರಿಸುತ್ತಿದ್ದಾರೆ.
‘ರಾಗಸುಧಾರಸ’ ಕಾಸರಗೋಡು ಸಂಸ್ಥೆಯವರು ಹಲವು ಬಾರಿ ಏರ್ಪಡಿಸಿದ್ದ ಸಂಗೀತ ಶಿಬಿರಗಳಲ್ಲಿ ಭಾಗವಹಿಸಿ ವಿದ್ವಾನ್ ಶ್ರೀ ವಿಠಲ ರಾಮ ಮೂರ್ತಿ, ಚೆನ್ನೈ ಇವರ ಮಾರ್ಗದರ್ಶನ ಪಡೆದಿದ್ದಾರೆ.
ಶ್ರೀಶಂಕರ ಟಿವಿಯ ಸೂಪರ್ ಸಿಂಗರ್ ಸೀಸನ್ 3 ಯಲ್ಲಿ ಡಿ.12ರಂದು ಅಶ್ವಿನಿ ಅವರ ಫೈನಲ್ ಕಾರ್ಯಕ್ರಮ ಪ್ರಸಾರವಾಯಿತು. 7 ಸ್ಪರ್ಧಾಳುಗಳು ಫೈನಲ್ನಲ್ಲಿ ಸ್ಪರ್ಧಿಸಿದ್ದರು.
3 ಹಂತಗಳನ್ನು ದಾಟಿ ಫೈನಲ್ಗೆ ತಲುಪಿದ ಅಶ್ವಿನಿ ಕೆ ಸೀಮಹೇಂದ್ರ ಮಧ್ಯಮ ರಾಗದ ‘ಕಾಮಾಕ್ಷಿ’ ಎಂಬ ದೀಕ್ಷಿತರ ಕೃತಿಯನ್ನು ಆಯ್ಕೆ ಮಾಡಿದ್ದರು. ಪ್ರತಿದಿನ 3 ಗಂಟೆಗಳ ಕಾಲ ನಿರಂತರ ಸಾಧನೆ ಮಾಡಿದ ಈ ಕೃತಿಯನ್ನು ತೀರ್ಪುಗಾರರಾದ ವಿದ್ವಾನ್ ಶ್ರೀ ಓ.ಎಸ್ ತ್ಯಾಗರಾಜನ್, ಶ್ರೀ ಪಿ.ವಿ ಪ್ರಸನ್ನ, ಶ್ರೀಮತಿ ಮಹತಿ ಎಸ್, ಶ್ರೀ ಮಹೇಶ್ ವಿನಾಯಕರಾಂ ಹಾಗೂ ಶ್ರೀಮತಿ ಶಾಂತಿ ಮುಂತಾದ ಗಣ್ಯರು ಅಶ್ವಿನಿಯ ಸಾಧನೆ ಹಾಗೂ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
(ಉಪಯುಕ್ತ ನ್ಯೂಸ್)