IMPORTANT NOTICE

New official website is launched for Karada Community. Please visit www.karadavishwa.com for more details.

Friday, 17 April 2015

ತೆರೆದಿದೆ ಮನ ಓ/ Teredide mana oo...

ತೆರೆದಿದೆ ಮನ ಓ ಬಾ ಅತಿಥಿ
ಹೊಸಬೆಳಕಿನ ಹೊಸ ಗಾಳಿಯಾ
ಹೊಸ ಬಾಳನು ತಾ ಅತಿಥಿ

ಆವ ರೂಪದೊಳು ಬಂದರು ಸರಿಯೇ

ಆವ ವೇಷದೊಳು ನಿಂದರು ಸರಿಯೇ
ನೀಸೆರುದಯದೊಳು ಬಹೆಯಾ ಬಾ
ತಿಂಗಳಂದದಲಿ ಬಹೆಯಾ ಬಾ ||

ಇಂತಾದರು ಬಾ ಅಂತಾದರೂ ಬಾ

ಎಂತಾದರು ಬಾ ಬಾ ಬಾ
ಬೇಸರ ವಿದನು ರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ ||

ಕಡಲಾಗಿ ಬಾ ಬಾನಾಗಿ ಬಾ

ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿ ಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ ಬಾ
ಹೊಸ ತಾನದ ಹೊಸ ಗಾನದ
ಹೊಸ ತಾನದ ಹೊಸ ಗಾನದ
ರಸ ಜೀವವ ತಾ ತಾ ತಾ ||

ಮೂಡಲ ಮನೆಯಾ ಮುತ್ತಿನ ನೀರಿನ/ Moodala maneya muttina neerina


ಮೂಡಲ ಮನೆಯಾ ಮುತ್ತಿನ ನೀರಿನ
ಎರಕSವ ಹೊಯ್ದಾ
ನುಣ್ಣ-ನ್ನೆರಕSವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ.
ಹೋಯ್ತೋ-ಜಗವೆಲ್ಲಾ ತೊಯ್ದಾ


ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು.


ಎಲೆಗಳ ಮೇಲೆ ಹೂಗಳ ಒಳಗೆ
ಅಮೃತSದ ಬಿಂದು
ಕಂಡವು-ಅಮೃತದ ಬಿಂದು
ಯಾರಿರಿಸಿರುವರು ಮುಗಿಲS ಮೇಲಿಂ-
ದಿಲ್ಲಿಗೇ ತಂದು.
ಈಗ-ಇಲ್ಲಿಗೇ ತಂದು.


ತಂಗಾಳಿಯಾ ಕೈಯೊಳಗಿರಿಸೀ
ಎಸಳೀನಾ ಚವರಿ
ಹೂವಿನ- ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧ-ಮೈಯೆಲ್ಲಾ ಸವರಿ.


ಗಿಡಗಂಟೆಗಳಾ ಕೊರಳೊಳಗಿಂದ
ಹಕ್ಕಿಗಳ ಹಾಡು
ಹೊರಟಿತು-ಹಕ್ಕಿಗಳ ಹಾಡು.
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು.


ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ.
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ.


ಅರಿಯದು ಅಳವು ತಿಳಿಯದು ಮನವು
ಕಾಣSದೋ ಬಣ್ಣಾ
ಕಣ್ಣಿಗೆ-ಕಾಣSದೋ ಬಣ್ಣಾ.
ಶಾಂತಿರಸವೇ ಪ್ರೀತಿಯಿಂದಾ
ಮೈದೊರೀತಣ್ಣಾ
ಇದು ಬರಿ-ಬೆಳಗಲ್ಲೋ ಅಣ್ಣಾ.         
                                                      - ಅಂಬಿಕಾತನಯದತ್ತ (ದ. ರಾ. ಬೇಂದ್ರೆ)

Thursday, 16 April 2015

ಯುಗ ಯುಗಾದಿ ಕಳೆದರೂ / Yuga yugadi kaledaru...

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

                    ಹೊಂಗೆ ಹೂವ ತೊಂಗಳಲಿ,
                    ಭೃಂಗದ ಸಂಗೀತ ಕೇಳಿ
                    ಮತ್ತೆ ಕೇಳ ಬರುತಿದೆ.
                    ಬೇವಿನ ಕಹಿ ಬಾಳಿನಲಿ
                    ಹೂವಿನ ನಸುಗಂಪು ಸೂಸಿ
                    ಜೀವಕಳೆಯ ತರುತಿದೆ.

ವರುಷಕೊಂದು ಹೊಸತು ಜನ್ಮ,
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ.
ಒಂದೇ ಒಂದು ಜನ್ಮದಲಿ
ಒಂದೇ ಬಾಲ್ಯ, ಒಂದೇ ಹರೆಯ
ನಮಗದಷ್ಟೇ ಏತಕೋ.

                    ನಿದ್ದೆಗೊಮ್ಮೆ ನಿತ್ಯ ಮರಣ,
                    ಎದ್ದ ಸಲ ನವೀನ ಜನನ,
                    ನಮಗೆ ಏಕೆ ಬಾರದು?
                    ಎಲೆ ಸನತ್ಕುಮಾರ ದೇವ,
                    ಎಲೆ ಸಾಹಸಿ ಚಿರಂಜೀವ,
                    ನಿನಗೆ ಲೀಲೆ ಸೇರದೂ.

ಯುಗ ಯುಗಗಳು ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

                                                  - ಅಂಬಿಕಾತನಯದತ್ತ

ಘಮ ಘಮ ಘಮ್ಮಾಡಸ್ತಾವ/ Ghamma Ghamma Ghammadasthava...


ಘಮ ಘಮಾ ಘಮ್ಮಾಡಿಸ್ತಾವ ಮಲ್ಲಿಗಿ  | ನೀ ಹೊರಟಿದ್ದೀಗ ಎಲ್ಲಿಗೀ ?
ಘಮ ಘಮಾ..................... || ಪಲ್ಲವಿ ||

ತುಳುಕ್ಯಾಡತಾವ ತೂಕಡಿಕಿ 
ಎವಿ ಅಪ್ಪತಾವ ಕಣ್ಣ ದುಡುಕಿ 
ಕನಸು ತೇಲಿ ಬರತಾವ ಹುಡುಕಿ ||
ನೀ ಹೊರಟಿದ್ದೀಗ ಎಲ್ಲಿಗೀ ?

ಚಿಕ್ಕಿ ತೋರಿಸ್ತಾವ ಚಾಚಿ ಬೆರಳ 
ಚಂದ್ರಮ ಕನ್ನಡಿ ಹರಳ 
ಮನ ಸೋತು ಆಯಿತು ಮರುಳ ||
ನೀ ಹೊರಟಿದ್ದೀಗ ಎಲ್ಲಿಗೀ ?

ನೆರಳಲ್ಲಾಡತಾವ ಮರದ ಬುಡsಕ
ಕೆರಿ ತೆರಿ ನೂಗತಾವ ದಡಕs 
ಹೀಂಗ ಬಿಟ್ಟು ಎಲ್ಲಿ ನನ್ನ ನಡsಕ 
ನೀ ಹೊರಟಿದ್ದೀಗ ಎಲ್ಲಿಗೀ ?

ನನ್ನ ನಿನ್ನ ಒಂದತನದಾಗ 
ಹಾಡು ಹುಟ್ಟಿ ಒಂದು ಮನದಾಗ 
ಬೆಳದಿಂಗಳಾತು ಬನದಾಗ || 
ನೀ ಹೊರಟಿದ್ದೀಗ ಎಲ್ಲಿಗೀ ?

ಬಂತ್ಯಾಕ ನಿನಗ ಇಂದ ಮುನಿಸು 
ಬೀಳಲಿಲ್ಲ ನನಗ ಇದರ ಕನಸು 
ರಾಯ ತಿಳಿಯಲಿಲ್ಲ ನಿನ್ನ ಮನಸು ||
ನೀ ಹೊರಟಿದ್ದೀಗ ಎಲ್ಲಿಗೀ ?


                                 -ಅಂಬಿಕಾತನಯದತ್ತ

Video link : www.youtube.com/watch?v=vF8qKYJAUlo