Thursday 9 July 2015

ಪುರಾಣಗಳೆಂದು ಜರಿಯದಿರಿ!

ಶಿವ’ ಯಾವಾಗಲೂ ಕಾಡುವ ದೇವರೇ. ಅವನ ಆಕಾರ, ಬಣ್ಣ, ವೇಷ, ವಾಸ ಸ್ಥಳ, ಆಭರಣ ಇವ್ಯಾವುವೂ ಸರಳವಾದುದಲ್ಲ. ಅತ್ಯಂತ ಗೂಢವಾದುದೇನನ್ನೋ ವಿವರಿಸುವ ಪ್ರಯತ್ನ ಅದರ ಹಿಂದಿದೆ. ಕೊರಳಲ್ಲಿ ಹಾವು, ಮೈ ಪೂರಾ ಭಸ್ಮ, ಸೊಂಟಕ್ಕೆ ವ್ಯಾಘ್ರ ಚರ್ಮ, ಕತ್ತಲ್ಲಿ ರುಂಡ ಮಾಲೆ. ತಲೆಯ ಮೇಲೆ ಗಂಗೆ, ಹಣೆಯಲ್ಲಿ ಉರಿವ ಕಣ್ಣು. ಸ್ಮಶಾನ ವಾಸಿ, ಹಿಮಾಲಯದ ಒಡೆಯ. ಉಫ್.. ಎಲ್ಲವೂ ವಿಚಿತ್ರ. ಆತನ ಲಿಂಗ ರೂಪವಂತೂ ಅನೇಕ ವೈಜ್ಞಾನಿಕ ಸತ್ಯಗಳ ಮೂರ್ತ ರೂಪ.
ಅಲ್ಲದೆ ಮತ್ತೇನು? ಪ್ರಳಯ ಕಾಲದಲ್ಲಿ ಮಹಾ ಗುರುತ್ವಕ್ಕೆ ಒಳಗಾಗಿ ಬಿಗ್ ಕ್ರಂಚ್ ಆಗುವುದೆಂಬ ಕಲ್ಪನೆಯನ್ನು ಭೌತ ವಿಜ್ಞಾನಿಗಳು ಮುಂದಿಡುತ್ತಾರಲ್ಲ, ಅದು ನಡೆದಾಗ ಇಡಿಯ ವಿಶ್ವ ತಾಳಬಹುದಾದ ರೂಪ ಶಿವ ಲಿಂಗದ್ದೇ! ಅದಕ್ಕೇ ಆತನನ್ನು `ಮಹಾ ಕಾಲ’ ಅಂತ ಕರೆಯೋದು. `ಲಿಂಗ’ ಶೂನ್ಯದ ಕಲ್ಪನೆ. ಶೂನ್ಯ ಎಂದರೆ ಖಾಲಿ. ಖಾಲಿ ಎಂದರೆ ಅಕ್ಷರಶಃ ಪೂರ್ಣ ಖಾಲಿ. ಇದೆಷ್ಟು ವಿಚಿತ್ರ ಅಲ್ಲವೆ? ಪೂರ್ಣ ಮತ್ತು ಖಾಲಿ ಎರಡೂ ಸೇರಿಕೊಂಡದ್ದೇ ಲಿಂಗಾಕೃತಿ. ಹೀಗಾಗಿಯೇ ಅದಕ್ಕೆ ಪೂಜೆ.
ಹೋಗಲಿ ಲಿಂಗವಲ್ಲದ್ದು ಪ್ರಕೃತಿಯಲ್ಲಿ ಏನಿದೆ ಹೇಳಿ. ನಮ್ಮ ಗೆಲಾಕ್ಸಿ ಕ್ಷೀರಪಥ, ಗ್ರಹಗಳು ಸೂರ್ಯನ ಸುತ್ತ ಸುತ್ತುವ ಪರಿ, ಕೊನೆಗೆ ಕಣ್ಣೆದುರು ಕಾಣುವ ಬೆಟ್ಟ ಗುಡ್ಡಗಳೂ ಭೂಮ ಲಿಂಗವೇ. ಅದಕ್ಕೇ ದ.ರಾ.ಬೇಂದ್ರೆ ‘ಗುಡ್ಡ ಗುಡ್ಡ ಸ್ಥಾವರ ಲಿಂಗ / ಅದಕ್ಕೆ ಮುಗಿಲಿನ ಅಭ್ಯಂಗ’ ಅಂತ ಕುಣಿಕುಣಿದು ಹಾಡಿದ್ದು. ಕೈಲಾಸ ಪರ್ವತ ಬಿಡಿ, ಹಿಮಾಲಯದುದ್ದಕ್ಕೂ ಹರಡಿರುವ ಪರ್ವತ ಶ್ರೇಣಿಗಳು ಬೃಹತ್ತಾದ ಶಿವ ಲಿಂಗದ್ದೇ ನೆನಪು ತರುತ್ತವೆ. ಹೀಗಾಗಿಯೇ ಲಿಂಗ ಪೂಜೆಯ ಪರಿಕಲ್ಪನೆ ಭಾರತದಲ್ಲಿ ಅವತೀರ್ಣಗೊಂಡಿರಬಹುದು ಅನ್ನುತ್ತಾರೆ ಬಹುತೇಕ ವಿದ್ವಾಂಸರು. ಆದರೆ ಕ್ರಿಸ್ತಾನುಯಾಯಿ ಪಂಡಿತರನೇಕರು ಈ ಲಿಂಗ ಪೂಜೆಯನ್ನು ಶಿಶ್ನ ಪೂಜೆಯೆಂದು ಲೇವಡಿ ಮಾಡುತ್ತಾರೆ. ಅಷ್ಟೇ ಅಲ್ಲ, ಪೀಠವನ್ನು ಯೋನಿಯ ಸಂಕೇತವೆಂದು ಕರೆದು, ಲಿಂಗಪೂಜೆಯನ್ನು ಲೈಂಗಿಕ ಕ್ರಿಯೆಯ ಪ್ರತೀಕ ಎಂದುಬಿಡುತ್ತಾರೆ. ಒಂದು ಸಂಸ್ಕøತಿಯು ನಂಬಿಕೊಂಡು ಬಂದಿರುವ ಆಚರಣೆಯನ್ನು ಅವಹೇಳನ ಮಾಡುವಲ್ಲಿ ಅವರೆಂದಿಗೂ ಹಿಂದುಮುಂದು ನೋಡುವುದಿಲ್ಲ. ಆದರೆ ಭಾರತದ ಯಾವೊಬ್ಬ ಚಳವಳಿಕಾರನೂ ಶಿಲುಬೆಯೇರಿದ ಏಸುಕ್ರಿಸ್ತನನ್ನು ನಮಸ್ಕರಿಸುವ ಜನರಿಗೆ ಶವ ನಮಸ್ಕಾರ ಮಾಡುವಿರೇಕೆ ಎಂದು ಪ್ರಶ್ನಿಸುವುದಿಲ್ಲ, ಅಲ್ಲವೆ? ಅದು ಮತ್ತೆ ನಮ್ಮ ಪರಂಪರೆಯ ಪಾಠ. ಪರಮಾತ್ಮ ತತ್ತ್ವ ಎಲ್ಲೆಡೆಯೂ ಇರುವುದರಿಂದ ಎಲ್ಲ ಮಾರ್ಗಗಳೂ ಅವನನ್ನೇ ಸೇರುತ್ತವೆ ಅಂತ!
Cosmic womb
ಇರಲಿ. ಈಗ ಪ್ರಶ್ನೆ ಇರೋದು ಮಹಾಕಾಲ ಶಿವನದ್ದು. ವಿಜ್ಞಾನಿಗಳನೇಕರಿಗೆ ದೀರ್ಘಕಾಲ ಕಾಡಿದ ಮತ್ತು ಕಾಡುತ್ತಲೇ ಇರುವ ಎರಡು ಸಂಗತಿಗಳು: ಒಂದು – ಆಕಾಶ, ಮತ್ತೊಂದು- ಕಾಲ. ಭಾರತದಲ್ಲಿ ಇವೆರಡಕ್ಕೂ ಶಿವನೇ ಉತ್ತರ. ಒಂದೆಡೆ ಚಿದಂಬರದ ನಟರಾಜ ಆಕಾಶ ತತ್ತ್ವದ ಪ್ರತೀಕವಾಗಿ ನಿಂತರೆ, ಮತ್ತೊಂದೆಡೆ ಉಜ್ಜಯಿನಿಯ ಮಹಾಕಾಲ. ಜ್ಯೋತಿರ್ಲಿಂಗವೊಂದಕ್ಕೆ ಮಹಾಕಾಲವೆಂದು ಹೆಸರಿಡುವುದೇ ರೋಮಾಂಚಕಾರಿ. ಅದರಲ್ಲೂ ಅದನ್ನು ನೆಲೆಗೊಳಿಸಲಾಗಿರುವ ಉಜ್ಜಯಿನಿಗೂ ಕಾಲಕ್ಕೂ ಇರುವ ಸಂಬಂಧ ಖಗೋಳದ ದೃಷ್ಟಿಯಿಂದ ವಿಶಿಷ್ಟ. ಹೀಗಾಗಿ ಆಕಾಶ ಕಾಯಗಳ ಕುರಿತಂತೆ ಆರ್ಯಭಟ ನಡೆಸಿದ ಅಧ್ಯಯನಕ್ಕೆ ಉಜ್ಜಯಿನಿಯೇ ಕೇಂದ್ರವಾಗಿತ್ತು. ಪ್ರಾಚೀನ ಭಾರತದಲ್ಲಿ ಕಾಲ ಗಣನೆಯ ಕೇಂದ್ರವಾಗಿದ್ದೂ ಉಜ್ಜಯಿನಿಯೇ. ಇಂದು ನಾವು ನಮ್ಮ ಮೊಬೈಲುಗಳಲ್ಲಿ ಗಡಿಯಾರ ಹೊಂದಿಸುವಾಗ ಆರಂಭದಲ್ಲಿ ಕೋಲ್ಕೊತ್ತಾಕ್ಕೋ ದೆಹಲಿಗೋ ಐಎಸ್‍ಟಿ ಹೊಂದಾಣಿಕೆ ಮಾಡುವುದಿಲ್ಲವಾ? ಹಾಗೆ ಇಡಿಯ ಭರತ ವರ್ಷದ ಕಾಲ ನಿರ್ಣಯ ಉಜ್ಜಯಿನಿಯ ಸಮಯಕ್ಕೆ ಹೊಂದಾಣಿಕೆಯಾಗಿರುತ್ತಿತ್ತಂತೆ. ಹೀಗಾಗಿ ಆತ ಮಹಾಕಾಲ!
ಹೀಗೆ ಅಕ್ಷಾಂಶ – ರೇಖಾಂಶಗಳಿಗೆ ಅನುಗುಣವಾಗಿ ಸಮಯ ಬೇರೆಬೇರೆ ಇರುತ್ತದೆ ಎನ್ನುವುದು ನಮ್ಮ ಪೂರ್ವಜರಿಗೆ ಯಾವಾಗಲೋ ಗೊತ್ತಿತ್ತು. ಅಷ್ಟೇ ಅಲ್ಲ, ಈ ಕಾಲ ನಾವು ನಿರ್ಧರಿಸಿದಂತೆ ಎಲ್ಲೆಡೆ ಅನ್ವಯವಾಗುವುದಿಲ್ಲ, ಬೇರೆ ಬೇರೆ ಗ್ರಹಗಳಲ್ಲಿ ಕಾಲಗತಿ ಬೇರೆ ಬೇರೆಯಾಗಿರುತ್ತದೆ ಎನ್ನುವುದನ್ನೂ ನಮ್ಮವರು ಅರಿತಿದ್ದರು. ಸ್ವಲ್ಪ ಗೊಂದಲವೆನ್ನಿಸುತ್ತಿದೆಯೇ? ವಿವರಿಸುತ್ತೇನೆ ಇರಿ.
ಭೂಮಿ ತನ್ನ ಅಕ್ಷದ ಮೇಲೆ ಒಂದು ಸುತ್ತು ಬರಲು 24 ಗಂಟೆ ತೆಗೆದುಕೊಳ್ಳುತ್ತದೆ. ಇದರಲ್ಲಿ ಅರ್ಧದಷ್ಟು ಹಗಲು, ಉಳಿದದ್ದು ರಾತ್ರಿ ತಾನೆ? ಹಾಗೆ ಬೇರೆಬೇರೆ ಗ್ರಹಗಳು ತನ್ನ ಸುತ್ತ ಸುತ್ತಲು ತೆಗೆದುಕೊಳ್ಳುವ ಕಾಲಾವಧಿ ಬೇರೆಬೇರೆ. ಅಲ್ಲಿ ನಾವು ಕೈಗೆ ಕಟ್ಟಿಕೊಂಡ ಗಡಿಯಾರ ಉಪಯೋಗಕ್ಕೆ ಬರುವುದಿಲ್ಲ. ಬುಧ ತನ್ನ ಕಕ್ಷೆಯ ಮೇಲೆ ವೇಗವಾಗಿ ತಿರುಗಿದರೆ, ಶನಿ, ಯುರೇನಸ್, ನೆಪ್ಚೂನ್‍ಗಳೆಲ್ಲ ಬಲು ನಿಧಾನವಾಗಿ ಸುತ್ತುತ್ತವೆ. ಭೂಮಿಯ ಮೇಲೆ ನಿಮಗೆ 35 ವರ್ಷ ಅಂತ ಭಾವಿಸಿ. ನಿಮ್ಮೊಡನೆ ಶುಕ್ರನ ಮೇಲೆ ಹುಟ್ಟಿದವನಿಗೆ 57 ವರ್ಷವಾಗಿರುತ್ತದೆ. ಆಥ ನೀವು ಇಲ್ಲಿ ಹುಟ್ಟಿದಾಗ ಬುಧನ ಮೇಲೆ ಹುಟ್ಟಿದರೆ ಅವನ ಈಗಿನ ಆಯಸ್ಸು 145 ವರ್ಷಗಳು! ಚಕಿತಗೊಳಿಸುವ ಸಂಗತಿಯೆಂದರೆ, ಯುರೇನಸ್, ನೆಪ್ಚೂನ್, ಫ್ಲೂಟೋಗಳ ಮೇಲೆ ಅವನಿಗಿನ್ನೂ ಒಂದು ವರ್ಷವೂ ತುಂಬಿರುವುದಿಲ್ಲ! ಸೂರ್ಯನನ್ನು ಗ್ರಹಗಳು ಸುತ್ತುವ ಕಾಲವನ್ನು ವರ್ಷವೆಂದು ಕರೆದರೆ, ಪಾಫ, ಅತ್ಯಂತ ದೂರದಲ್ಲಿರುವ ಈ ಗ್ರಹಗಳು ಒಂದು ಸುತ್ತು ಬರುವುದರೊಳಗೆ ಅದೆಷ್ಟೋ ಭೂ ವರ್ಷಗಳು ಕಳೆದು ಬಿಟ್ಟಿರುತ್ತವೆ!
ಇನ್ನು, ಊಹಿಸಿಯೇ ರೋಮಾಂಚನಗೊಳ್ಳುವಂಥ ಸಂಗತಿಯೊಂದಿದೆ. ಅದೇನು ಗೊತ್ತಾ? ನೀವು ಹುಟ್ಟಿದಾಕ್ಷಣ ಹೇಗೋ ಯುರೇನಸ್ ತಲುಪಿಕೊಂಡುಬಿಟ್ಟರೆ, ನಿಮಗೆ ಎರಡು ವರ್ಷ ತುಂಬಿ ಮರಳಿದಾಗ ನಿಮ್ಮೊಡನೆ ಹುಟ್ಟಿದವರಿಗೆ ಇಲ್ಲಿ 70 ವರ್ಷವಾದರೂ ಆಗಿರುತ್ತದೆ. ಅಂದರೆ, ಅವರ 70 ವರ್ಷ ನಿಮ್ಮ ಎರಡು ವರ್ಷಕ್ಕೆ ಸಮ!
ಭಾರತೀಯ ಶಾಸ್ತ್ರಗಳು ಬಲು ಹಿಂದೆಯೇ ಇದನ್ನು ಅರಗಿಸಿಕೊಂಡು ಸಮರ್ಥವಾಗಿ ಪ್ರತಿಪಾದಿಸಿದ್ದವು. ಕೆಲವೊಂದು ಮತಗಳು ಭೂಮಿಯ ಹುಟ್ಟಿನ ನಿಖರ ದಿನಾಂಕ ಹೇಳಿ ಅಪಹಾಸ್ಯಕ್ಕೀಡಾದರೆ, ಇನ್ನೂ ಕೆಲವು ಕೊನೆಗಾಲ ಬಂತೆಂದು ಬೊಬ್ಬೆ ಹೊಡೆದು ಲೇವಡಿಗೊಳಗಾಗಿವೆ. ಆದರೆ ಸನಾತನ ಧರ್ಮ ಮಾತ್ರ ಮಹಾಕಾಲದ ಕಲ್ಪನೆಯನ್ನು ಬಲು ಚುರುಕಾಗಿ ಕಟ್ಟಿಕೊಟ್ಟಿದೆ.
ಮನುಷ್ಯನ ದಿನಮಾನಕ್ಕಿಂತಲೂ ದೀರ್ಘ ದೇವತೆಗಳ ದಿನಮಾನಗಳು. ಅವಕ್ಕಿಂತಲೂ ದೀರ್ಘ ಬ್ರಹ್ಮನ ದಿನ – ರಾತ್ರಿಗಳು. ಬ್ರಹ್ಮನಿಗೆ ನೂರು ವರ್ಷಗಳಾದಾಗ ಪ್ರಳಯವಂತೆ. ಅಲ್ಲಿಗೆ ಎಲ್ಲವೂ ಸ್ತಬ್ಧ. ಆದರೆ ಮಹಾಕಾಲನ ಚಟುವಟಿಕೆ ನಡೆದೇ ಇರುತ್ತದೆ. ಆತನ ಕಾರಣದಿಂದಾಗಿ ನಟರಾಜ ಜಾಗೃತವಾಗಿ ಢಮರು ನಿನಾದವಾಗುತ್ತದೆ. ಪರಬ್ರಹ್ಮ ತತ್ತ್ವ ಸೃಷ್ಟಿಕಾರ್ಯಕ್ಕೆ ಅಣಿಯಾಘುತ್ತದೆ! ಒಟ್ಟೂ ಸೃಷ್ಟಿ ರಹಸ್ಯದ ಅಸ್ಥಿಪಂಜರವಿದು.
ಈಗ ಕಾಲಗಣನೆಯತ್ತ ಹೊರಳೋಣ. ವಿಷ್ಣು ಪುರಾಣದ ಪ್ರಕಾರ ಕಣ್ಣಿನ ರೆಪ್ಪೆ ಮಿಟುಕಿಸುವಷ್ಟು ಸಮಯವನ್ನು ನಿಮೇಷ ಎನ್ನಲಾಗುತ್ತದೆ. ಹದಿನೈದು ನಿಮೇಷಗಳಿಗೆ ಒಂದು ಕಾಷ್ಠ. ಮೂವತ್ತು ಕಾಷ್ಠಗಳಿಂದ ಒಂದು ಕಾಲ. 30 ಕಾಲಗಳಿಂದ ಒಂದು ಮುಹೂರ್ತ. ಇಂತಹ 30 ಮುಹೂರ್ತಗಳಿಂದ ಒಂದು ದಿನ. ಅಂದರೆ ಒಟ್ಟಾರೆ ಹಗಲು ರಾತ್ರಿ. ಆಮೇಲಿನದ್ದು ನಾವಂದುಕೊಂಡಂತೆ 30 ದಿನಗಳಿಗೆ ಒಂದು ಮಾಸ, ಆರು ಮಾಸಗಳಿಗೊಂದು ಅಯನ (ಉತ್ತರಾಯಣ ಮತ್ತು ದಕ್ಷಿಣಾಯನ). ಈ ರೀತಿಯ ಎರಡೂ ಅಯನಗಳು ಸೇರಿ ನಮ್ಮ ಒಂದು ವರ್ಷ!
ನಮಗೆ ಒಂದು ವರ್ಷ , ದೇವತೆಗಳಿಗೆ ಒಂದು ದಿನ. ಉತ್ತರಾಯಣ ದೇವತೆಗಳ ಹಗಲು, ದಕ್ಷಿಣಾಯನ ಅವರ ರಾತ್ರಿ. ನಮಗೆ 360 ವರ್ಷಗಳಾದಾಗ ದೇವತೆಗಳಿಗೆ ಒಂದು ವರ್ಷ! ಅದನ್ನು ದಿವ್ಯ ವರ್ಷವೆಂದು ಕರೆಯಲಾಗಿದೆ.
ನನಗೆ ಗೊತ್ತು. ಅನೇಕರು ಅದಾಗಲೇ ಲೆಕ್ಕಾಚಾರ ಬಿಡುವ ಹಂತದಲ್ಲಿದ್ದಾರೆ. ಈ ಲೆಕ್ಕಗಳು ಸುಲಭವಾಗಲೆಂದೇ ದಿವ್ಯವರ್ಷ ಬಳಸಿದ್ದು. ನಾವು ನಾಲ್ಕು ಯುಗಗಳನ್ನು ಗುರುತಿಸುತ್ತೇವೆ. ಕೃತ, ತ್ರೇತಾ, ದ್ವಾಪರ ಮತ್ತು ಕಲಿ. ಕೃತಯುಗದ ಅವಧಿ ನಾಲ್ಕು ಸಾವಿರ ದಿವ್ಯ ವರ್ಷಗಳು. ಅದಕ್ಕೆ ಪೂರ್ವ ಸಂಧ್ಯೆ ಹಾಗೂ ಸಾಯಂ ಸಂಧ್ಯೆಗಳು ತಲಾ 400 ವರ್ಷಗಳದ್ದು. ಒಟ್ಟಾರೆ 4,800 ದಿವ್ಯ ವರ್ಷಗಳು. ಒಂದೊಂದು ಯುಗಕ್ಕೂ ಈ ಸಂಖ್ಯೆ ಕಡಿಮೆಯಾಗುತ್ತ ಬಂದು, ಕಲಿಯುಗಕ್ಕೆ ಈ ಪ್ರಮಾಣ ಒಂದು ಸಾವಿರ ದಿವ್ಯ ವರ್ಷಗಳು, ಜೊತೆಗೆ ನೂರು – ನೂರು ವರ್ಷಗಳ ಪೂರ್ವ ಹಾಗೂ ಸಾಯಂ ಸಂಧ್ಯೆಗಳು ಸೇರಿದರೆ ಒಟ್ಟಾರೆ 1,200 ದಿವ್ಯ ವರ್ಷಗಳು. ಬರೋಬ್ಬರಿ ನಮ್ಮ ಲೆಕ್ಕದ ನಾಲ್ಕು ಲಕ್ಷದ ಮೂವತ್ತೆರಡು ಸಾವಿರ ವರ್ಷಗಳು!! ಇವುಗಳಲ್ಲಿ ನಾವಿನ್ನೂ ಐದು ಸಾವಿರ ವರ್ಷ ದಾಟಿರಬಹುದಷ್ಟೇ. ಕಲಿಯುಗದ ದೀರ್ಘ ಪಯಣಬಾಕಿ ಇದೆ. ಸದ್ಯಕ್ಕಂತೂ ಪ್ರಳಯದ ಮುನ್ಸೂಚನೆ ಇಲ್ಲ!
ಹಾ! ಮತ್ತೆ ಲೆಕ್ಕಾಚಾರಕ್ಕೆ ಬನ್ನಿ. ನಾಲ್ಕು ಯುಗಗಳ ಒಂದು ಚಕ್ರ, 12 ಸಾವಿರ ದಿವ್ಯ ವರ್ಷಗಳದ್ದಲ್ಲವೆ? ಇದು ಸಾವಿರ ಬಾರಿ ತಿರುಗಿ ಬಂದರೆ ಬ್ರಹ್ಮನ ಒಂದು ಹಗಲು. ಎರಡು ಸಾವಿರ ಬಾರಿ ಆದರೆ ಆತನ ಒಟ್ಟಾರೆ ಒಂದು ದಿನ. ಇಂತಹ ದಿನಗಳು, ಮಾಸಗಳು, ವರ್ಷಗಳು ಕಳೆಯಬೇಕು. ಬ್ರಹ್ಮನಿಗೆ ಹೀಗೆ ನೂರು ವರ್ಷಗಳಾದಾಗ ಅದು ಪರಮಾಯಸ್ಸಂತೆ. ಮತ್ತೊಂದು ಹೊಸ ಸಋಷ್ಟಿಗೆ ಮುನ್ನದ ಮಹಾ ಪ್ರಳಯ ಕಾಲ ಅದು.
ಒಟ್ಟಾರೆ ಲೆಕ್ಕಾಚಾರ 8.64 ಟ್ರಿಲಿಯನ್ ವರ್ಷ ಭೂಮಿಯ ಆಯಸ್ಸು ಎಂದಾದರೆ, ಅದರಲ್ಲಿ ಈಗಾಗಲೇ ಪರಾರ್ಧವೆಂಬ ಬ್ರಹ್ಮನ ಅರ್ಧ ಆಯಸ್ಸು ಮುಗಿದಿದೆ. ಅಲ್ಲಿಗೆ, 4.32 ಅರಿಲಿಯನ್ ವರ್ಷಗಳು ಕಳೆದುಹೋಗಿವೆ. ನನಗೆ ಗೊತ್ತು. ಈ ಸಂಖ್ಯೆಯನ್ನು ನಮ್ಮಲ್ಲಿ ಕೆಲವರು ಗಾಬರಿಯಿಂದ ಗಮನಿಸುತ್ತಾರೆ. ಕೆಲವರು ಇದನ್ನು ಪುರಾಣವೆಂದು ತಳ್ಳಿ ಹಾಕಿದರೆ, ಇನ್ನೂ ಕೆಲವರು ಈ ಸಂಖ್ಯೆಯನ್ನು ಊಹಿಸಿಕೊಳ್ಳಲಾಗದೆ ಹೆಣಗುತ್ತಾರೆ.
ಇಷ್ಟೆಲ್ಲ ಓದಿಕೊಂಡ ಮೇಲೂ 2ಜಿ ಹಗರಣದ ಒಂದು ಲಕ್ಷದ ಎಪ್ಪತ್ತಾರು ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಇಂದಿನ ದಿನಮಾನದಲ್ಲೆ ಹೆಣಗಾಡುತ್ತಿರುವಾಗ, ಋಷಿಗಳ ಕಾಲದಲ್ಲಿ ಅಷ್ಟು ದೊಡ್ಡ ಸಂಖ್ಯೆಯನ್ನು ಲೀಲಾಜಾಲವಾಗಿ ಬಳಕೆ ಮಾಡಿ ಕಾಲ ಗಣನೆ ಮಾಡುತ್ತಿದ್ದರಲ್ಲ, ಆ ಸಾಮಥ್ರ್ಯದ ಕುರಿತು ಒಮ್ಮೆ ಆಲೋಚಿಸಿ. \
ಆಧುನಿಕ ವಿಜ್ಞಾನ ಇದಕ್ಕೆ ಹೊರತಾಗಿಲ್ಲ. ಸುಮಾರು ನೂರೈವತ್ತು ವರ್ಷಗಳ ಹಿಂದೆ ವಿಲಿಯಂ ಥಾಮ್ಸನ್ ತನ್ನ ಸಾಮಥ್ರ್ಯಕ್ಕೆ ತಕ್ಕಂತೆ, ಭೂಮಿ ಹುಟ್ಟಿ 20ರಿಂದ 400 ದಶಲಕ್ಷ ವರ್ಷಗಳಾಗಿರಬಹುದು ಎಂದು ಅಂದಾಜಿಸಿದ. ಬಹುಶಃ ಆಗಿನ ಕಾಲಕ್ಕೆ ಇದೇ ದೊಡ್ಡ ಗಣನೆಯಾಗಿರಲಿಕ್ಕೆ ಸಾಕು. ಭೂಗರ್ಭ ಶಾಸ್ತ್ರಜ್ಞ ಚಾಲ್ರ್ಸ ಲಿಲ್ ಇದನ್ನೊಪ್ಪಲು ಸಿದ್ಧವಿರಲಿಲ್ಲ. ಜೀವ ವಿಜ್ಞಾನಿಗಳಿಗಂತೂ ಇಷ್ಟು ಕಡಿಮೆ ಅವಧಿಯಲ್ಲಿ ಜೀವ ವಿಕಾಸ ಪ್ರಕ್ರಿಯೆ ನಡೆದಿರಬಹುದೆಂದು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ವಿಜ್ಞಾನ ಬೆಳೆದಂತೆ ಭೂಮಿಯ ಉಗಮದ ಕಲ್ಪನೆಯೂ ವಿಸ್ತಾರವಾಯಿತು. ವಿಕಿರಣ ಶಾಸ್ತ್ರದ ಅನ್ವಯಗಳಿಂದ ಭೂಮಿಯ ಹುಟ್ಟಿನ ಅಧ್ಯಯನ ಮಾಡಲಾಯ್ತು. ಆರ್ಥರ್ ಹೋಮ್ಸ್, ಪ್ರಾಚೀನವೆನ್ನುವ ಒಂದಷ್ಟು ಕಲ್ಲುಗಳ ಅಧ್ಯಯನ ನಡೆಸಿ, ಭೂಮಿ ಸುಮಾರು 1.6 ಬಿಲಿಯನ್ ವರ್ಷಗಳಷ್ಟು ಹಳೆಯದು ಎಂದ. ಮತ್ತೆ ಸಾಕಷ್ಟು ಸಂಶೋಧನೆಗಳು, ಚರ್ಚೆಗಳು ನಡೆದು ಆಧುನಿಕ ರೇಡಿಯೋ ಮೆಟ್ರಿಕ್ ವಿಧಾನದಿಂದ ಹಳೆಯ ಪರ್ವತ ಶ್ರೇಣಿಗಳ ಅಧ್ಯಯನ ನಡೆಸಿದಾಗ ನಾಲ್ಕೂವರೆ ಬಿಲಿಯನ್ ವರ್ಷಗಳೆಂದು ಅಂದಾಜಿಸಲಾಯ್ತು. ವಿಜ್ಞಾನದ ಹೊಸ ಶಾಖೆ ಅಧ್ಯಯನಕ್ಕೆ ಅತ್ಯಾಧುನಿಕ ಮಾರ್ಗ ತೋರುವವರೆಗೂ ಅವರೆಲ್ಲ ಇದನ್ನು ನಂಬುತ್ತಾರೆ.
ಹಾ! ಅಂದಹಾಗೆ ನಾವು ಪುರಾಣಗಳಲ್ಲಿ ಯಾವುದನ್ನು ಬ್ರಹ್ಮನ ಒಂದು ದಿನವೆಂದು ಕರೆದೆವೋ ಅದು ನಮ್ಮ ಮಿಲ್ಕಿ ವೇ ಗ್ಯಾಲಕ್ಸಿ ತನ್ನ ಅಕ್ಷದ ಸುತ್ತ ತಾನು ಒಮ್ಮೆ ಸುತ್ತಲು ತೆಗೆದುಕೊಳ್ಳುವ ಕಾಲವೆಂದು ವಿಜ್ಞಾನದ ಲೆಕ್ಕಾಚಾರವಂತೆ. ಹೀಗೇ ಅದು ವಿಶ್ವದ ಕೇಂದ್ರವಾದ ಪರಬ್ರಹ್ಮನನ್ನು ಒಂದು ಸುತ್ತು ಬಂದರೆ ಒಂದು ವರ್ಷ ಇರಬಹುದು. ಈ ರೀತಿಯ ನೂರು ವರ್ಷಗಳು ವಿಶ್ವದ ಆಯಸ್ಸೆಂಬುದು ನಮ್ಮ ಅಂದಾಜಾ? ಗೊತ್ತಿಲ್ಲ.
ವಿಜ್ಞಾನಕ್ಕೆ ಎಲ್ಲ ಗೊತ್ತಿದೆ. ಅದು ಹೇಳಿದ್ದು ಮಾತ್ರ ಸತ್ಯವೆಂದು ನಂಬುತ್ತೇವಲ್ಲ; ಮೂಢ ನಂಬಿಕೆಗಳಲ್ಲಿ ಅದೂ ದೊಡ್ಡದ್ದೇ. ವಿಜ್ಞಾನ ಅನೇಕ ವಿಚಾರಗಳಲ್ಲಿ ಕೈಚೆಲ್ಲಿ ಸುಮ್ಮನಾಗುತ್ತದೆಯಷ್ಟೇ ಅಲ್ಲ, ತಾನೇ ಹಿಂದೆ ಸಾಬೀತುಪಡಿಸಿ ಸತ್ಯವೆಂದು ಸಾರಿದ್ದನ್ನು ಅಲ್ಲಗಳೆದು ಗೊಂದಲವೆಬ್ಬಿಸಿಬಿಡುತ್ತದೆ.
ಅದಕ್ಕೇ ಹಳೆಯದನ್ನೆಲ್ಲ ಪುರಾಣವೆಂದು ಜರಿಯಬೇಡಿ. ಹೊಸತು ವಿಜ್ಞಾನವೆಂದು ಹಿಗ್ಗಿಬಿಡಬೇಡಿ. ಮಧ್ಯೆ ನಿಂತು ಹಂಸದಂತೆ ಹಾಲಿನಿಂದ ನೀರು ಬೇರೆ ಮಾಡಿ ಹಾಲನ್ನು ಸೇವಿಸಿ, ಅಷ್ಟೇ. ಭಾರತ ಅದನ್ನು ಹೇಳಿದ್ದಲ್ಲದೆ, ಆಚರಿಸಿತು ಕೂಡ. ಹೀಗಾಗಿಯೇ ಅದು ವಿಶ್ವಗುರು!

Tuesday 7 July 2015

ನಟರಾಜ ನರ್ತನದ ಚಿದಂಬರ ರಹಸ್ಯ!

‘ಕಣ್ಣಿನಿಂದ ನೋಡಿದ್ದು ಮಾತ್ರ ಸತ್ಯ’ – ಹಾಗಂತ ಅನೇಕರು ವಾದಿಸುತ್ತಾರೆ. ಅಚ್ಚರಿ ಏನು ಗೊತ್ತೆ? ಕಣ್ಣು ತನ್ನನ್ನು  ತಾನು ನೋಡಿಯೇ ಇಲ್ಲ! ಚರ್ಮಕ್ಕೆ ಸ್ಪರ್ಶಾನುಭೂತಿ ಬೇಕೆಂದರೆ ಮತ್ತೊಂದರ ಸಂಪರ್ಕ ಬೇಕೇಬೇಕು. ನಾಲಗೆಯ ರುಚಿ ಸ್ವತಃ ನಾಲಗೆಗೆ ಗೊತ್ತಿಲ್ಲ. ಹೀಗೆ ಐದು ಇಂದ್ರಿಯಗಳೂ ಒಟ್ಟಿಗೆ ಗ್ರಹಿಸಲಾಗದ ಅನೇಕ ಸಂಗತಿಗಳಿವೆ. ಅದರ ಹುಡುಕಾಟವೇ ಭಾರತದ ಶ್ರೇಷ್ಠತೆಯ ಮೂಲ ವಸ್ತು. ಕೇನೋಪನಿಷತ್ತಿನಲ್ಲಿ ಋಷಿಗಳು ಸ್ಪಷ್ಟಪಡಿಸುತ್ತಾರೆ – “ಅಲ್ಲಿಗೆ ಕಣ್ಣು ಹೋಗಲಾರದು, ಮಾತೂ ಇಲ್ಲ. ಮನಸ್ಸೂ ಹೋಗುವುದಿಲ್ಲವಾದ್ದರಿಂದ ಇದನ್ನು ಹೇಗೆ ತಿಳಿಸಿಕೊಡಬೇಕೋ ಗೊತ್ತಾಗುತ್ತಿಲ್ಲ” ಎಂದು. ಅದಕ್ಕೇ ಇಂದ್ರಿಯಗಳನ್ನು ನಿಗ್ರಹಿಸಿ, ಬುದ್ಧಿಯಡಿ ಮನಸ್ಸನ್ನು ತಂದು ಸಾಧನೆಗೆ ಅಣಿಯಾಗುವ ಮಾರ್ಗಗಳನ್ನು ಅವರು ಸಂಶೋಧಿಸಿದ್ದು. ಈ ಹುಡುಕಾಟದ ಹಿಂದೆ ಬಿದ್ದುದರಿಂದಲೇ ಸೃಷ್ಟಿಯ ಅಪರೂಪದ ಸತ್ಯಗಳು ಅವರೆದುರಿಗೆ ತೆರೆದುಕೊಂಡವು. ಈ ಸತ್ಯಗಳನ್ನು ಜಗದೆದುರಿಗೆ ಒಪ್ಪಿಸುವ ಪದಕೋಶಗಳೇ ಇರಲಿಲ್ಲ. ಹೇಳಿದರೆ ಅರ್ಥೈಸಿಕೊಳ್ಳುವವರೂ ಇರಲಿಲ್ಲ. ಎಲ್ಲಕ್ಕೂ ಮುಖ್ಯವಾಗಿ ಆ ಪರಮ ಸತ್ಯ ಗೋಚರವಾದೊಡನೆ ಅದರಲ್ಲಿ ಲೀನವಾದ ಪ್ರತಿಯೊಬ್ಬ ಋಷಿಯೂ ಮೌನಿಯಾಗಿಬಿಟ್ಟ. ಹಾಗೆಂದೇ ಅದನ್ನು ವಿವರಿಸಲಾಗದು; ಅನುಭವಿಸಬೇಕು ಎನ್ನಲಾಯ್ತು. ಕೇನೋಪನಿಷತ್ತು ಮುಂದುವರಿದು, “ಮಾತಿನಿಂದ ವಿವರಿಸಲಾಗದ್ದು, ಯಾವುದರಿಂದ ಮಾತು ಹುಟ್ಟಿತೋ ಅದು; ಯಾವುದನ್ನು ಮನಸ್ಸಿನಿಂದ ತಿಳಿಯಲಾಗದೋ, ಯಾವುದು ಮನಸ್ಸನ್ನೇ ಅರಿತುಕೊಂಡಿದೆಯೋ ಅದು ಬ್ರಹ್ಮ” ಎಂದಿತು.
ಸೃಷ್ಟಿಯ ಈ ರಹಸ್ಯವನ್ನು ಜನ ಸಾಮಾನ್ಯರೆದುರಿಗೆ ಮುಟ್ಟಿಸಬೇಕೆಂಬ ಪ್ರಯತ್ನಕ್ಕೇ ಭಾಷೆ ಹುಟ್ಟಿತು, ಪರಿಷ್ಕರಣಗೊಂಡಿತು. ಕಲೆ ಭಿನ್ನ ವಿಭಿನ್ನ ರೂಪ ಪಡಕೊಂಡಿತು. ಆಚರಣೆಗಳು ರೂಪುಗೊಂಡವು. ಮಂತ್ರಗಳು, ಅರ್ಥಗಳು, ವ್ಯಾಖ್ಯಾನಗಳು, ಆಚಾರ್ಯರು, ಗುರುಗಳು, ಮಂದಿರಗಳು, ಯೋಗ – ಪ್ರಾಣಾಯಾಮ ಮೊದಲಾದವೆಲ್ಲವೂ ಆ ಸೃಷ್ಟಿ ರಹಸ್ಯವನ್ನು, ಪರಬ್ರಹ್ಮ ತತ್ತ್ವವನ್ನೂ ಅರಿಯುವ ಮಹಾ ಪ್ರಯಾಸಕ್ಕಾಗಿ ರೂಪುಗೊಂಡಂಥವೇ.
ವಿಜ್ಞಾನಿಗಳು ದೊಡ್ಡ ದೊಡ್ಡ ಪ್ರಯೋಗ ಶಾಲೆಗಳನ್ನು ಕಟ್ಟಿದರು.  ಋಷಿಗಳು ಮನಸ್ಸನ್ನೆ ಪ್ರಯೋಗಶಾಲೆಯನ್ನಾಗಿಸಿ ಹುಡುಕಾಟ ನಡೆಸಿದರು. ವಿಜ್ಞಾನಿಗಳು ಇಂದ್ರಿಯಗಳ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಯಂತ್ರಗಳ ಆವಿಷ್ಕಾರ ಮಾಡಿದರು. ಋಷಿಗಳು ಇಂದ್ರಿಯಗಳನ್ನೇ ಹಿಡಿತಕ್ಕೆ ತಂದುಕೊಂಡು ಅಗೋಚರ ಸತ್ಯಗಳ ದರ್ಶನ ಮಾಡಿಕೊಂಡರು. ಹೀಗಾಗಿಯೇ ಭಾರತದ ವಿಚಾರ ಬಂದೊಡನೆ ಜಗತ್ತಿನ ಅನೇಕರು ನಿಬ್ಬೆರಗಾಗಿ ಕರಗಿ ಹೋಗುವುದು! cern-nataraja
ಪ್ರಯೋಗಾಲಯವೊಂದರಲ್ಲಿ ಆಕಾಶಕಾಯಗಳ ವೀಕ್ಷಣೆಗೆ ಬಳಸುವ ದೂರದರ್ಶಕವೊಂದರ ನಿರ್ಮಾಣಕ್ಕೆ, ಮಸೂರಗಳ ಜೋಡಣೆಗೆ ಎಷ್ಟು ಎಚ್ಚರಿಕೆ ವಹಿಸುತ್ತಾರೆ ಗೊತ್ತೆ? ಅತಿ ಸೂಕ್ಷ್ಮ ಬದಲಾವಣೆಯೂ ಲೆಕ್ಕಾಚಾರದಲ್ಲಿ ಬಲುದೊಡ್ಡ ಏರುಪೇರು ಉಂಟು ಮಾಡಬಲ್ಲದು. ಅದು ಬಿಡಿ. ಮನೆಯ ಮೇಲೆ ಬಗೆಬಗೆಯ ಚಾನೆಲ್ ವೀಕ್ಷಣೆಗೆಂದು ಕೂರಿಸಿರುವ ಡಿಶ್ – ಆಂಟೆನಾ ಒಂದು ಡಿಗ್ರಿಯಷ್ಟು ತಿರುಗಿದರೂ ಉಪಗ್ರಹ ಸಂದೇಶ ಸ್ವೀಕರಿಸಲಾರದು. ಅಂದಮೇಲೆ, ಋಷಿಗಳ ಪ್ರಯೋಗಶಾಲೆಯಾದ ಮನಸ್ಸೂ ಹಾಗೇ ತಾನೆ? ಅದಕ್ಕಾಗಿ ಅವರು ಒಂದಿನಿತೂ ವಿಚಲಿತವಾಗದಂತೆ ಮನಸ್ಸನ್ನು ರೂಪುಗೊಳಿಸುವ ಸಾಹಿತ್ಯ ರಚಿಸಿದರು. ಹಳಿ ತಪ್ಪಿದ್ದನ್ನು ಸರಿ ದಾರಿಗೆ ತರುವ ಮಾರ್ಗ ಹಾಕಿಕೊಟ್ಟರು. ಹೀಗಾಗಿಯೇ ಇಲ್ಲಿನ ಸಾಹಿತ್ಯಗಳಲ್ಲಿ ಜಗತ್ತಿನ ಬೇರೆಲ್ಲ ಮತಗ್ರಂಥಗಳಿಗಿಂತ ಹೆಚ್ಚು ನೈತಿಕ ಸಂಗತಿಗಳು ರಾರಾಜಿಸೋದು.
ಸುಮ್ಮನೆ ವಿಷ್ಣುಪುರಾಣದ ಏಳನೆ ಅಧ್ಯಾಯ ನೋಡಿ. ಧರ್ಮವನ್ನು ವರಿಸಿದ ಶ್ರದ್ಧೆಗೆ ಕಾಮವು ಸಂತಾನವಂತೆ; ಧರ್ಮವನ್ನು ಮದುವೆಯಾದ ಲಕ್ಷ್ಮಿಗೆ ದರ್ಪವು ಪುತ್ರನಂತೆ! ಅರ್ಥ ಬಲು ಸ್ಪಷ್ಟ. ಧರ್ಮ ಮಾರ್ಗದಲ್ಲಿ ನಡೆಯುವ ಶ್ರದ್ಧಾವಂತನ ಕಾಮನೆಗಳು ಪೂರ್ಣಗೊಳ್ಳುತ್ತವೆ. ಹಾಗೆಯೇ ಲಕ್ಷ್ಮಿ, ಧರ್ಮ ಮಾರ್ಗದಲ್ಲಿರುವವರಿಗೂ ದರ್ಪ ತರಿಸುತ್ತಾಳೆ. ಆದ್ದರಿಂದ ಎಚ್ಚರವಾಗಿರಬೇಕು ಎಂದು. ಧರ್ಮಕ್ಕೆ, ಶ್ರದ್ಧೆಗೆಲ್ಲ ಇಲ್ಲಿ ರೂಪವನ್ನು ಆರೋಪಿಸಿರುವುದು ಕೇಳುಗರಿಗೆ ಸದಾ ನೆನಪಿರಲಿ ಮತ್ತು ಅರ್ಥೈಸಿಕೊಳ್ಳಲು ಸುಲಭವಿರಲಿ ಎಂಬ ಕಾರಣದಿಂದಷ್ಟೇ. ಮುಂದೆ ಕಲೆಗಾರರು ಇದಕ್ಕೆ ಚಿತ್ರ ಬರೆದು, ಹಾಡುಗಾರ ಹಾಡು ಕಟ್ಟಿ ಹಾಡಿಬಿಟ್ಟರೆ ಮತ್ತೊಬ್ಬ ದೇವರು ಸೃಷ್ಟಿಯಾದಂತೆ. ಆದರೆ ವಾಸ್ತವದಲ್ಲಿ ಪ್ರತಿಯೊಬ್ಬ ದೇವರೂ ಇಂತಹದೇ ತತ್ತ್ವವೊಂದರ ವ್ಯಕ್ತ ರೂಪ. ಜ್ಞಾನ ಅನ್ನೋದಕ್ಕೆ ಸರಸ್ವತಿಯ ರೂಪ ಕೊಟ್ಟರು. ಆಕೆಯ ಕೈಲಿ ಜಪಮಣಿ, ಪುಸ್ತಕವಿಟ್ಟು ಬಂಡೆಗಲ್ಲಿನ ಮೇಲೆ ಕೂರಿಸಿದರು. ಜ್ಞಾನ ಸಂಪಾದನೆಗೆ ದೇಹ ಸುಖ ತ್ಯಾಗ ಮಾಡಬೇಕೆಂಬ ಕಲ್ಪನೆ ಅದು. ಎಲ್ಲ ಸೃಷ್ಟಿಯ ಮೂಲ ಸತ್ವಕ್ಕೆ ನಾರಾಯಣನ ರೂಪ ಕೊಟ್ಟರು. ಸೃಷ್ಟಿಯೇ ಅವನದ್ದಿರುವಾಗ ಇನ್ನು ಸಂಪತ್ತು – ಕೀರ್ತಿ ಎಲ್ಲವೂ ಅವನ ಕಾಲಬುಡದಲ್ಲಿಯೇ ತಾನೆ? ಅದಕ್ಕೆಂದೇ ಲಕ್ಷ್ಮಿಗೆ ನಾರಾಯಣನ ಪಾದಗಳ ಬಳಿ ಜಾಗವಾಯ್ತು.
ನಾವು ಕಲಾವಿದ ಚಿತ್ರಿಸಿದ ರೂಪವನ್ನು ಬಿಗಿಯಾಗಿ ಹಿಡಿದುಕೊಂಡೆವು; ವೇದಗಳು ಹೇಳಿದ ಸೃಷ್ಟಿ ತತ್ತ್ವವನ್ನು ನಮಗೆ ಅರ್ಥ ಮಾಡಿಸಲು ಹೆಣೆಯಲಾದ ಲೌಕಿಕ ಕಥೆಗಳನ್ನು ನೆಚ್ಚಿಕೊಂಡೆವು. ಮೂಲ ತತ್ತ್ವವನ್ನೆ ಮರೆತುಬಿಟ್ಟೆವು. ಹೀಗಾಗಿಯೇ ಅನೇಕ ಗೊಂದಲಗಳು ಸೃಷ್ಟಿಯಾದವು. ಈ ಗೊಂದಲಗಳ ಲಾಭವನ್ನು ಆಕ್ರಮಣಕಾರರಾಗಿ ಬಂದ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ಪಡೆದುಕೊಂಡರು ಅಷ್ಟೇ. ಆದರೆ ಈಗಲೂ ಸೃಷ್ಟಿ ರಚನೆಯ ವಿಜ್ಞಾನ ಅರಿಯಲು ಪ್ರಯತ್ನಿಸುವ ಪ್ರತಿಯೊಬ್ಬ ವಿಜ್ಞಾನಿಯೂ ಭಾರತೀಯ ಸಾಹಿತ್ಯಗಳಲ್ಲಿ ಹುದುಗಿ, ಹಾಸುಹೊಕ್ಕಾಗಿರುವ ತತ್ತ್ವಸಾರವನ್ನು ಗ್ರಹಿಸಿ ಹುಬ್ಬೇರಿಸುತ್ತಾನೆ.
ಯಾವುದನ್ನೂ ಆಧಾರವಿಲ್ಲದೆ ಹೇಳುತ್ತಲೇ ಇಲ್ಲ. ಕೆಲವು ವರ್ಷಗಳ ಹಿಂದೆ ದೇವಕಣದ ಬಗ್ಗೆ ಚರ್ಚೆ ವ್ಯಾಪಕವಾಗಿ ನಡೆದಿದ್ದು ನಿಮಗೆಲ್ಲ ನೆನಪಿರಬೇಕಲ್ಲ? ಅದಕ್ಕೆ ಪೂರಕವಾದ ಪ್ರಯೋಗ ನಡೆದ ಸ್ಥಳ ಸಿಇಆರ್‍ಎನ್ (ಯುರೋಪಿಯನ್ ಸೆಂಟರ್ ಫಾರ್ ನ್ಯೂಕ್ಲಿಯಾರ್ ರಿಸರ್ಚ್) ನ ಹೊರಗೆ 2003 – 2004ರಲ್ಲಿ ಭಾರತ ಸರ್ಕಾರ ಕೊಡುಗೆಯಾಗಿ ಕೊಟ್ಟ ಎರಡು ಮೀಟರ್ ಎತ್ತರದ ನಟರಾಜ ವಿಗ್ರಹ ಇಡಲಾಗಿದೆ. ನಮಗೆ ನಟರಾಜನ ಆ ವಿಗ್ರಹ ಬೇರೆಲ್ಲ ಮೂರ್ತಿಗಳಂತೆ ಸಾಮಾನ್ಯ. ಆದರೆ ವಿಜ್ಞಾನಿಗಳು ಅದರ ಹಿಂದಿನ ತತ್ತ್ವವನ್ನು ಅರಿತು ಅಚ್ಚರಿಯಿಂದ ದಿಟ್ಟಿಸುತ್ತಾರೆ.
ಫ್ರಿಟ್ಜೋ ಕಾಪ್ರಾ ಎನ್ನುವ ಭೌತ ವಿಜ್ಞಾನಿಯಂತೂ ತನ್ನ `ತಾವೋ ಆಫ್ ಫಿಸಿಕ್ಸ್’ ಕರತಿಯ ಒಂದಿಡೀ ಅಧ್ಯಾಯವನ್ನು ನಟರಾಜನ ನೃತ್ಯಕ್ಕೆ ಮೀಸಲಾಗಿಟ್ಟಿದ್ದಾನೆ. ಕ್ವಾಂಟಂ ಫಿಸಿಕ್ಸ್ ಶಾಖೆ ಬೆಳೆದಂತೆಲ್ಲ ವಿಜ್ಞಾನ ಅಣುವಿನೊಳಗೆ ಭಿನ್ನಭಿನ್ನ  ಕಣಗಳು ಪ್ರತಿಕ್ಷಣವೂ ನರ್ತಿಸುವುದನ್ನು ಗಮನಿಸಿದವು. ಭೌತ ವಿಜ್ಞಾನಿಗಳು ಇದನ್ನು ನರ್ತನಕ್ಕೆ ಹೋಲಿಸಿ ಭಾರತೀಯರು ಇದನ್ನೇ ನಟರಾಜನ ನರ್ತನದ ರೂಪದಲ್ಲಿ ಚಿತ್ರಿಸಿರುವುದನ್ನು ಗುರುತಿಸಿದರು.
ಅದಕ್ಕೂ ಹಿಂದೆಯೇ ಭೂಗರ್ಭ ಶಾಸ್ತ್ರಜ್ಞ ಮತ್ತು ಭಾರತೀಯ ದರ್ಶನಗಳ ಮೇಲೆ ವಿಸ್ತøತ ಪ್ರಬಂಧ ಬರೆದ ಆನಂದ ಕುಮಾರಸ್ವಾಮಿ ನಟರಾಜನ ಕುರಿತು ಸಂಶೋಧನಾ ಲೇಖನ ಬರೆದಿದ್ದರು. ಅವರು ಶಿವನ ಮೂರು ಬಗೆಯ ನೃತ್ಯಗಳ ಉಲ್ಲೇಖ ಮಾಡಿದ್ದರು – “ಶೂಲಪಾಣಿಯಾಗಿ ಸರಸ್ವತಿಯ ವೀಣೆಗೆ, ಇಂದ್ರನ ಕೊಳಲಿಗೆ, ಲಕ್ಷ್ಮಿಯ ಹಾಡಿಗೆ ದೇವ –ದೇವಿ – ಅಪ್ಸರೆಯರ ಮುಂದೆ ಕೈಲಾಸದಲ್ಲಿ ನಡೆಯುವ ನೃತ್ಯ ಒಂದಾದರೆ, ನಾಶದ ಮುನ್ಸೂಚನೆ ಕೊಟ್ಟು ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುವ ತಾಂಡವ ನೃತ್ಯ ಮತ್ತೊಂದು. ಮೂರನೆಯದು – ತಮಿಳುನಾಡಿನ ಚಿದಂಬರಂನಲ್ಲಿ ಆತ ನಡೆಸುವ ನಟರಾಜ ನರ್ತನ”
ನಟರಾಜ ಮಂದಿರದ ಸ್ಥಳ ಪುರಾಣ ಚಿದಂಬರ ಕ್ಷೇತ್ರವನ್ನು ವಿಶ್ವದ ಕೇಂದ್ರವೆನ್ನುತ್ತದೆ. ಈ ಮಾಹಿತಿಯನ್ನು ಮೂರ್ಖತನದ ಕಲ್ಪನೆಯೆಂದು ಜರೆಯೋಣವೆಂದರೆ, ಈ ದೇಶದ ಇನ್ಯಾವ ಮಂದಿರದ ಐತಿಹ್ಯವೂ ತಮ್ಮ ಸ್ಥಳವನ್ನು ಹೀಗೆ ಕರೆದುಕೊಳ್ಳುವುದಿಲ್ಲ. ಅಂದಮೇಲೆ, ಹೀಗೆ ಹೇಳುವಲ್ಲಿ ಒಂದಷ್ಟಾದರೂ ಸತ್ಯವಿರಲೇಬೇಕಲ್ಲ!
ಭೂಮಿಯ ಆಯಸ್ಕಾಂತೀಯ ಶಕ್ತಿಯ ಆಧಾರದ ಮೇಲೆ ಅಕ್ಷಾಂಶ – ರೇಖಾಂಶಗಳನ್ನು ಎಳೆದರೆ ಸಮಭಾಜಕ ರೇಖೆ ಈ ಸ್ಥಳದ ಮೂಲಕ ಹಾಯುತ್ತದೆ ಎಂಬುದನ್ನು ಸಿದ್ಧಪಡಿಸಿ ತೋರಲಾಗಿದೆ. ಹೀಗಾಗಿಯೇ ಶಿವ ಈ ಸ್ಥಳವನ್ನು ಸೃಷ್ಟಿಯ ಕಾರ್ಯಕ್ಷೇತ್ರವನ್ನಾಗಿ ಆಯ್ದುಕೊಂಡ, ಲಯ ಕಾರ್ಯಕ್ಕೂ ಇದನ್ನೇ ಕ್ಷೇತ್ರವಾಗಿ ಮಾಡಿಕೊಂಡ. “ಈ ನೃತ್ಯ ಶಿವನ ಐದು ಚಟುವಟಿಕೆಗಳನ್ನು ದಾಖಲಿಸುತ್ತದೆ. ಸೃಷ್ಟಿ, ಸ್ಥಿತಿ, ಲಯ, ಸಾಕಾರ ಮತ್ತು ಮುಕ್ತಿ. ಢಮರುವಿನಿಂದ ಸೃಷ್ಟಿಯಾಗುತ್ತದೆ. ಅಭಯ ಮುದ್ರೆಯಿಂದ ರಕ್ಷಣೆ; ಉರಿವ ಬೆಂಕಿಯಿಂದ ನಾಶ. ಮೇಲೆತ್ತಿ ನಿಂತ ಕಾಲು ನೆಮ್ಮದಿಯ ಸಂಕೇತವಾದರೆ, ಕೆಳಮುಖವಾಗಿರುವ ಕೈ ಆತ್ಮ ಮೋಕ್ಷದ ದ್ಯೋತಕ” – ಹಾಗೆಂದು ಕುಮಾರಸ್ವಾಮಿ ಅಭಿಪ್ರಾಯ ಪಡುತ್ತಾರೆ.
ನಮ್ಮ ವಾಸ್ತವ ಕಲ್ಪನೆಯೂ ಹಾಗೆಯೇ. ಬ್ರಹ್ಮನ ಹಗಲು ಕಳೆದು ರಾತ್ರಿಯಾದಾಗ ಬ್ರಹ್ಮ ನಿದ್ರೆಗೆ ಜಾರುತ್ತಾನಲ್ಲ, ಆಗ ಸೃಷ್ಟಿ ಜಡತ್ವಕ್ಕೆ ಹೋಗಿಬಿಡುತ್ತದೆ. ಆಗ ಡಮರು ನಿನಾದದಿಂದ ಮತ್ತೆ ಜಗತ್ತನ್ನು ಜಾಗೃತಾವಸ್ಥೆಗೆ ತಂದು ಸೃಷ್ಟಿ ಕಾರ್ಯಕ್ಕೆ ಪ್ರೇರಣೆ ಕೊಡುವವ ಶಿವನಂತೆ. ಹಾಗೆಂದು ಪುರಾಣಗಳ ಅಭಿಮತ. ಆತನ ನರ್ತನ ಶುರುವಾಗುತ್ತಿದ್ದಂತೆ ಜಗವೆಲ್ಲ ನರ್ತಿಸಲು ಶುರು ಮಾಡುತ್ತದೆಂಬುದು ನಮಗೆ ನಗು ತರಿಸುವ ಕಥೆಯೆನಿಸಿದರರೆ, ಭೌತ ವಿಜ್ಞಾನಿಗಳಿಗೆ ಅದು ಪರಮಾಣುಗಳಲ್ಲಿ ನಡೆಯುತ್ತಿರುವ ಎಲೆಕ್ಟ್ರಾನುಗಳ ಚಲನೆಯ ರುದ್ರ ನರ್ತನ!
ಫ್ರಿಟ್ಜೋ ಕಾಪ್ರಾನಂತೂ ನಟರಾಜನ ಸಮತೂಕದ ಭಂಗಿಯನ್ನು ಸೃಷ್ಟಿ ಮತ್ತು ಲಯದ ಸಮತೋಲನವೆಂದು ಕರೆದಿದ್ದಲ್ಲದೆ, ಮುಖ ಭಾವದ ಶಾಂತತೆಯನ್ನು ಸೃಷ್ಟಿ – ಲಯ ಮೀರಿದ ಅವಸ್ಥೆ ಎಂದಿದ್ದಾನೆ.
ಆಧುನಿಕ ಭೌತ ವಿಜ್ಞಾನದ ಪ್ರಕಾರ ಹುಟ್ಟು – ಸಾವುಗಳು ಜೀವ ಇರುವವುಗಳಿಗಷ್ಟೇ ಅಲ್ಲ, ನಿರ್ಜೀವ ವಸ್ತುಗಳಿಗೂ ಇವೆ. ಪ್ರತಿಯೊಂದು ಪರಮಾಣುವೂ ಗುರುತಿಗೆ ನಿಲುಕದ ಒಂದಷ್ಟು ಕಣಗಳ ಹುಟ್ಟು ಸಾವಿನೊಂದಿಗೇ ಇತರ ಪರಮಾಣುವಿನೊಂದಿಗೆ ಬೆಸೆದುಕೊಂಡಿವೆ. ಪ್ರತಿಯೊಂದು ಅಣುವಿನೊಳಗಿನ ಈ ಸೃಷ್ಟಿ ಲಯದ ನಿರಂತರ ಕ್ರಿಯೆಯೇ ನಟರಾಜನ ನಾಟ್ಯ ಎಂದು ಕಾಪ್ರಾ ಸ್ಪಷ್ಟವಾಗಿ ದಾಖಲಿಸುತ್ತಾನೆ. ಹೀಗಾಗಿ ಆತ ಇದನ್ನು ನಟರಾಜನ ನೃತ್ಯವೆಂದು ಕರೆಯದೆ ವಿಶ್ವಚೇತನದ ನೃತ್ಯವೆಂದು ಸಂಬೋಧಿಸುತ್ತಾನೆ.
ನಟರಾಜನಿಗೆ ಸಂಬಂಧಪಟ್ಟ ಈ ವಿವರಣೆಗಳೆಲ್ಲವನ್ನೂ ಸಿಇಆರ್‍ಎನ್‍ನ ಪ್ರಯೋಗಶಾಲೆಯ ಹೊರಗಿನ ಮೂರ್ತಿಯೆದುರಿಗೆ ಫಲಕದಲ್ಲಿ ದಾಖಲಿಸಲಾಗಿದೆ. ನಮಗೆ ಅದು ಬರಿಯ ವಿಗ್ರಹವಾಗಿರಬಹುದು; ದೇವ ಕಣದ ಹುಡುಕಾಟದಲ್ಲಿರುವ ವಿಜ್ಞಾನಿಗಳಿಗೆ ಅದರೊಳಗೆ ಪ್ರೋಟಾನ್, ನ್ಯೂಟ್ರಾನ್, ಎಲೆಕ್ಟ್ರಾನ್, ಫೋಟಾನುಗಳೆಲ್ಲ ಆಕರ್ಷಣೆಗೊಳಗಾಗಿ ನರ್ತಿಸುವುದು ಕಾಣುತ್ತದೆ. ಹಾಗೆ ನೋಡಿದರೆ ಆ ಮೂರ್ತಿಯನ್ನು ಅನುಸರಿಸಿ ಋಗ್ವೇದದ ಆಳಕ್ಕೆ ಹೋದವರು ಆ ವಿಜ್ಞಾನಿಗಳೇ, ನಾವಲ್ಲ. ನಾವಿಲ್ಲಿ ಶಿವ – ವಿಷ್ಣು ಇಬ್ಬರಲ್ಲಿ ಯಾರು ದೊಡ್ಡವರೆಂದು ಕಿತ್ತಾಡುತ್ತಾ ಕುಳಿತಿದ್ದೇವೆ.
ನನಗೆ ವಿಷಯದ ಆಳಕ್ಕೆ ಇಳಿದಂತೆಲ್ಲ ಅಚ್ಚರಿಯೂ, ಬೇಸರವೂ ಜೊತೆಜೊತೆಗೇ ಆಗುತ್ತದೆ. ಸಂಕೇತ ಭಾಷೆಯನ್ನು ಹುಟ್ಟುಹಾಕಿ ಸತ್ಯವನ್ನು ಕವಚದೊಳಗೆ ಹುದುಗಿಸಿಡುವಲ್ಲಿ ನಿಸ್ಸೀಮರಾಗಿದ್ದ ನಾವೇ ಕವಚ ಭೇದಿಸುವಲ್ಲಿ ಸೋತು ಹೋದೆವಲ್ಲ! ನಮ್ಮ ಹಿರಿಯರ ವೈಜ್ಞಾನಿಕ ಮನೋಭಾವನೆಯನ್ನು ಅರಿಯಲಾಗದೆ ತೊಳಲಾಡುತ್ತಿದ್ದೇವಲ್ಲ, ಛೇ!
ನಮ್ಮ ಸಾಹಿತ್ಯಗಳ ಪ್ರಕಾರ ಪಂಚಭೂತಗಳ ಶಕ್ತಿ ಆವಾಹನೆಗೆ ಐದು ದೇವಸ್ಥಾನಗಳು. ಜಲ ತತ್ತ್ವಕ್ಕೆ ತಿರುವಣ್ಣೈ ಕೋಯಲ್, ಅಗ್ನಿಗೆ ತಿರುವಣ್ಣಾಮಲೈ, ವಾಯುವಿಗೆ ಕಾಳಹಸ್ತಿ, ಪೃಥ್ವಿಗೆ ಕಾಂಚೀಪುರಂ ಮತ್ತು ಆಕಾಶಕ್ಕೆ ಚಿದಂಬರ. ಇಷ್ಟಕ್ಕೂ ಚಿದಂಬರ ಎಂದರೆ ಚಿತ್ತದ ಆಕಾಶ ಎಂದೇ ಅರ್ಥ. ಚಿತ್ತ ಎನ್ನುವುದು ಮನಸ್ಸಿಗಿಂತಲೂ ಆಳದ, ವಿಶ್ವದ ಎಲ್ಲ ಆಗುಹೋಗುಗಳನ್ನೂ ದಾಖಲಿಸುವ ನಮ್ಮೊಳಗಿನ ಕಾಲ್ಪನಿಕ ವಸ್ತು. ಅದನ್ನು ಪಂಚಭೂತಗಳಿಂದ ಸಾಕ್ಷಾತ್ಕರಿಸಿಕೊಳ್ಳಲಾಗದು. ಆದರೆ ಅನುಭವಿಸಬಹುದು, ಅಷ್ಟೇ. ದ್ವಂದ್ವ, ಏಳುಬೀಳುಗಳಿಲ್ಲದ ಈ ಚಿತ್ತಾಕಾಶದಲ್ಲಿ ನಟರಾಜ ನರ್ತಿಸಲಾರಂಭಿಸಿದರೆ ಅದು ಪರಮಾನಂದವೇ. ಅದರ ಸಂಕೇತವೇ ಚಿದಂಬರಂ ಮಂದಿರ. ಅಂದಹಾಗೆ, ಹುಬ್ಬೇರಿಸುವಂಥ ಮತ್ತೊಂದು ವಿಷಯ ಏನು ಗೊತ್ತಾ? ಕಾಂಚೀಪುರ, ಕಾಳಹಸ್ತಿ, ಚಿದಂಬರ – ಈ ಮೂರೂ ಮಂದಿರಗಳೂ ಆಯಸ್ಕಾಂತೀಯ ಸಮಭಾಜಕ ರೇಖೆಯ ಮೇಲೇ ನಿರ್ಮಾಣಗೊಂಡಿರೋದು!
ಹೌದು. ವಿಜ್ಞಾನಕ್ಕೂ ನಿಲುಕದ ಇನ್ನೂ ಯಾವುದೋ ಸಂಗತಿ ನಿಗೂಢವಾಗಿ ಅಡಗಿ ಕುಳಿತಿದೆ. ಅದೇ ಚಿದಂಬರ ರಹಸ್ಯ.

Friday 3 July 2015

ಆಡಮ್ ವೇದಗಳಿಗೆ ತಲೆ ಬಾಗಿದ್ದು ಯಾಕೆ ಗೊತ್ತಾ?

ಭಾರತದ ಇತಿಹಾಸ ಅಂದರೆ ಅದು ಬರಿಯ ಜನಜೀವನ ಅಷ್ಟೇ ಅಲ್ಲ, ಅದು ರೋಚಕ ಕಥಾನಕಗಳ ಆಗರ. ಅಲ್ಲಿ ಅಧ್ಯಾತ್ಮವಿದೆ, ಪುರಾಣವಿದೆ, ಶಾಂತಿಮಂತ್ರಗಳಿವೆ, ಕ್ರಾಂತಿ ಬೀಜಗಳೂ ಇವೆ. ಹೆಣ್ಣು – ಗಂಡು ಸಮಸಮವಾಗಿ ಇಲ್ಲಿ ಬೀಗಿದ್ದಾರೆ. ನದಿ ಬೆಟ್ಟ ಮರುಭೂಮಿಗಳೂ ತಮ್ಮ ಕೊಡುಗೆ ನೀಡಿವೆ. ಹಿಮಾಲಯ – ಸಾಗರವೂ ಇಲ್ಲಿನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಅಸಂಖ್ಯ ಸಂತರು; ಲೆಕ್ಕವಿಲ್ಲದಷ್ಟು ಋಷಿಮುನಿಗಳು ಪರಣಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಇವೆಲ್ಲವನ್ನೂ ನಾಶಗೈಯುವ ಷಡ್ಯಂತ್ರಗಳೂ ಆಗಿವೆ. ಮಿಡತೆಯ ಹಿಂಡಿನಂತೆ ಅನ್ಯರ ಆಕ್ರಮಣಗಳೂ ಆಗಿವೆ!
‘ಮ್ಯಾಕ್ಸ್ ಮುಲ್ಲರ್’!
ಕೆಲವರಿಗೆ ಭಾರತದ ಇತಿಹಾಸ ೧೨ನೇ ಶತಮಾನದಿಂದ ಆರಂಭವಾದರೆ, ಇನ್ನು ಕೆಲವರಿಗೆ ಶಂಕರರ ಹುಟ್ಟಿನೊಂದಿಗೆ. ಕೆಲವರು ಬುದ್ಧನ ಜನನದಿಂದಲೇ ಭಾರತದ ಇತಿಹಾಸ ಗಣನೆ ಶುರು ಮಾಡಿದರೆ, ಇನ್ನೂ ಕೆಲವರು ರಾಮ – ಕೃಷ್ಣ – ಉಪನಿಷತ್ತು ಎನ್ನುತ್ತಾರೆ. ಆದರೆ ಈ ದೇಶದ ಮತ್ತು ಜಗತ್ತಿನ ಕೆಲವು ‘ಪಂಡಿತೋತ್ತಮರಿಗೆ’ ಭಾರತದ ಇತಿಹಾಸವೆಂದರೆ ಅದು ಮ್ಯಾಕ್ಸ್ ಮುಲ್ಲರ್ ಮಾತ್ರ. ಅವನ ಹೇಳಿಕೆಗಳು, ಬರಹಗಳು, ಪತ್ರಗಳೇ ಭಾರತವನ್ನು ನೋಡುವ ದೃಷ್ಟಿಕೋನ ಅವರಿಗೆ. ಅನೇಕರ ಪಾಲಿಗೆ ಆತ ಋಷಿ, ಯೋಗಿ, ಸಂಸ್ಕೃತ ಪಂಡಿತ ಎಲ್ಲವೂ ಕೂಡ.Friedrich_Max-Müller_by_George_Frederic_Watts
ಆದರೆ ವಾಸ್ತವವಾಗಿ ಆತ ಭಾರತದ ಕುರಿತಂತೆ ಅನೇಕ ಗೊಂದಲಗಳಿಗೆ ಕಾರಣನಾದ ವ್ಯಕ್ತಿ. ಆರ‍್ಯರ ಆಕ್ರಮಣ ವಾದದಿಂದ ಹಿಡಿದು ಕಾಲ ಗಣನೆಯವರೆಗೆ ಆತ ಮಾಡಿದ ಊಹೆಗಳು ಇಂದು ಸಾಕಷ್ಟು ಕಿರಿಕಿರಿಗೆ ಕಾರಣವಾಗಿವೆ. ಕ್ರಿಶ್ಚಿಯನ್ ಮಿಷನರಿಗಳ ಆಕಾಂಕ್ಷೆ ಪೂರೈಸಲು ತನ್ನಿಚ್ಛೆಗೂ ವಿರುದ್ಧವಾಗಿ, ವೈಚಾರಿಕ ತಳಹದಿಯೇ ಇಲ್ಲದ ಸಿದ್ಧಾಂತಗಳನ್ನು ಒಂದಾದಮೇಲೊಂದರಂತೆ ಹರಿಬಿಟ್ಟವ ಮ್ಯಾಕ್ಸ್ ಮುಲ್ಲರ್. ಹೌದು. ಹಣ ಕೊಟ್ಟವರ ಮನಸ್ಸಿನ ಆಕಾಂಕ್ಷೆ ಪೂರೈಕೆಗೆ ಆತ ಋಗ್ವೇದದ ಸಾಹಿತ್ಯವನ್ನೇ ವಿರೂಪಗೊಳಿಸಿಬಿಟ್ಟ.
ಕ್ರಿಶ್ಚಿಯನ್ ಮಿಷನರಿಗಳೇ ಹಾಗೆ. ಚೀನಾಕ್ಕೆ ಹೋದ ಮ್ಯಾಥ್ಯೂರಿಕ್ಕಿ ಬುದ್ಧಿಸಮ್ ಮತ್ತು ಕನ್‌ಫ್ಯೂಷಿಯನಿಸಮ್ ನಡುವೆ ಇರುವ ಗಲಾಟೆ ಗಮನಿಸಿ ಕನ್‌ಫ್ಯೂಷಿಯನಿಸಮ್ ಪರವಾಗಿ ನಿಂತು ಬುದ್ಧನ ಅನುಯಾಯಿಗಳನ್ನು ಹಳಿದ. ಕ್ರಿಸ್ತ ತತ್ತ್ವಗಳಿಗೆ ಕನ್‌ಫ್ಯೂಷಿಯನಿಸಮ್ ಹತ್ತಿರವಾಗಿದೆ ಎಂದು ನಂಬಿಸಿ ಅವರನ್ನು ತನ್ನತ್ತ ಸೆಳೆದ. ಈ ಕುಟಿಲ ನೀತಿಯನ್ನೇ ಬಳಸಿ ಇಟಲಿಯ ಯಹೋವಾ ಮತಪ್ರಚಾರಕ ರಾಬರ್ಟ್ ನೋಬಿಲಿ ೧೬೦೬ರಲ್ಲಿ ಮಧುರೈಗೆ ಬಂದು ಹಿಂದೂಗಳಂತೆ ಬಟ್ಟೆ ಧರಿಸಿದ. ಶಿಖೆ ಬಿಟ್ಟ. ಜನಿವಾರವನ್ನೂ ಧರಿಸಿ, ತುದಿಗೆ ಶಿಲುಬೆ ಸಿಕ್ಕಿಸಿಕೊಂಡ. ಅಗತ್ಯ ಬಿದ್ದೆಡೆ ವೇದಗಳನ್ನು ತಿರುಚಿ ಜನರ ಮುಂದಿಟ್ಟ. ಮಧುರೈನ ಕೆಲವರನ್ನು ಮತಾಂತರಿಸುವಲ್ಲಿ ಆತ ಯಶಸ್ವಿಯೂ ಆದ. ಅವನ ಹಿಂದೆ ಅಬ್ಬೆ ಡುಬೋಯಿಸ್ ಮತಾಂತರಿಯಾಗಿ ಕಾಲಿಟ್ಟ. ಅವನ ಕೆಲಸ ಅಂದುಕೊಂಡಷ್ಟು ಸಲೀಸಾಗಿರಲಿಲ್ಲ. ಕರ್ನಾಟಕ ಅವನ ಕ್ಷೇತ್ರವಾಗಿತ್ತು. ಸಾಮೂಹಿಕ ಮತಾಂತರ ಮಾಡುವಲ್ಲಿ ಆತ ಸೋತುಹೋದ. ಬ್ಯಾಪ್ಟಿಸ್ಟರು ಬಂಗಾಳಕ್ಕೆ ೧೭೯೩ರಲ್ಲಿ ಕಾಲಿಟ್ಟರು. ಅಲ್ಲಿ ಬ್ರಹ್ಮ ಸಮಾಜದ ತೀವ್ರ ವಿರೋಧದಿಂದ ವಿಲಿಯಮ್ ಕ್ಯಾರೆಯ ಯತ್ನ ಕೈಗೂಡಲಿಲ್ಲ.
ಇಷ್ಟೂ ಹೇಳಬೇಕಾಗಿಬಂದ ಅಗತ್ಯವೆಂದರೆ, ಕ್ರಿಶ್ಚಿಯನ್ನರ ಆಕ್ರಮಣ ಶೈಲಿಯನ್ನು ಮನದಟ್ಟು ಮಾಡುವುದು. ಹೊಸ ಭೂಪ್ರದೇಶಕ್ಕೆ ಮೊದಲು ಸೈನ್ಯ ನುಗ್ಗುತ್ತದೆ.  ಅದರ ಹಿಂದುಹಿಂದೆಯೇ ಮಿಷನರಿಗಳ ದಂಡು. ಸೈನ್ಯದ ಮೂಲಕ ಸಂಪತ್ತಿನ ಲೂಟಿಯಾದರೆ, ಮಿಷನರಿಗಳು ಪರಂಪರೆಯನ್ನು ಸೂರೆಗೈದುಬಿಡುತ್ತಾರೆ. ಆಕ್ರಮಣಕ್ಕೊಳಗಾದವರು ಹಳೆಯ ನೆನಪನ್ನು ಕಳಕೊಂಡು ಹೊಸ ಮತವನ್ನು ಒತ್ತಾಯವಾಗಿಯಾದರೂ ಒಪ್ಪಿಕೊಳ್ಳುವಂತೆ ಮಾಡಿಬಿಡುತ್ತಾರೆ! ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡುಗಳಲ್ಲೆಲ್ಲ ಆಗಿದ್ದು ಇದೇ. ಇಂದು ಆಸ್ಟ್ರೇಲಿಯನ್ನರಿಗೆ ತಮ್ಮ ಪರಂಪರೆ ನೆನಪಿರೋದು ಅನುಮಾನವೇ. ಅದಾಗಲೇ ಲೂಟಿಯಾಗಿಬಿಟ್ಟಿದೆ. ಅಮೆರಿಕದ ರೆಡ್ ಇಂಡಿಯನ್ನರ ಕಥೆಯೂ ಇದಕ್ಕಿಂತ ಭಿನ್ನವಿಲ್ಲ.
ಹೀಗೇಕೆ? ಇದನ್ನು ತಿಳಿಯಲು ಯುರೋಪಿನ ಇತಿಹಾಸವನ್ನೊಮ್ಮೆ ಅವಲೋಕಿಸಬೇಕು. ಹದಿನಾಲ್ಕು – ಹದಿನೈದನೇ ಶತಮಾನದ ವೇಳೆಗೆ ಯುರೋಪಿನ ದೇಶಗಳು ಜಗತ್ತಿನುದ್ದಗಲ ಸಮುದ್ರಯಾನ ಮಾಡಲು ಉಪಕ್ರಮಿಸಿದರಲ್ಲ, ಆಗತಾನೇ ಅಲ್ಲಿ ಕ್ರಿಶ್ಚಿಯನ್ ಪುನರುತ್ಥಾನದ ಕಲ್ಪನೆ ಟಿಸಿಲೊಡೆದಿತ್ತು. ಬೈಬಲ್ಲಿನ ಹಳೆಯ ಒಡಂಬಡಿಕೆಗೆ ಮೆತ್ತಿರುವ ಯಹೂದ್ಯರ ಲೇಪವನ್ನು ತೊಳೆದುಕೊಳ್ಳಲು ಹೊಸ ಒಡಂಬಡಿಕೆಗೆ ಸೂಕ್ತ ಹಿನ್ನೆಲೆಗೆ ಹುಡುಕಾಟ ನಡೆದಿತ್ತು. ಈ ಹುಡುಕಾಟದ ಕೊನೆ ಪೂರ್ವ ದಿಕ್ಕು ಆಗಿರಬೇಕೆಂಬ ನಿಶ್ಚಯವೂ ಕ್ರಿಶ್ಚಿಯನ್ನರಿಗಿತ್ತು.
ಭಾರತ ಮತ್ತು ಚೀನಾ – ಈ ಎರಡು ನಾಗರಿಕತೆಗಳಲ್ಲಿ ಅವರು ಆರಿಸಿಕೊಂಡಿದ್ದು ಭಾರತವನ್ನು. ಲೇಕಕ ಜಿಮ್ ಶೆಫರ್ ಅಭಿಪ್ರಾಯದಂತೆ ‘ಕ್ಯಾಂಟ್ ಹರ್ಡರ್‌ನಂತಹ ಪಂಡಿತರೂ ಪುರಾತನ ಭಾರತ ಮತ್ತು ಪಶ್ಚಿಮದ ಪುರಾಣಕತೆಗಳಲ್ಲಿ ಸಾಮ್ಯವನ್ನು ಗುರುತಿಸಿ ಯಹೂದ್ಯ ಪರಂಪರೆಯಿಂದ ಪಶ್ಚಿಮ ಯುರೋಪ್ ಸಂಸ್ಕೃತಿಯನ್ನು ಬೇರ್ಪಡಿಸಿದರು; ಪ್ರಾಚೀನ ಭಾರತದಲ್ಲಿ ಅದರ ಕುರುಹುಗಳನ್ನು ಶೋಧಿಸಲಾರಂಭಿಸಿದರು’.
ಯುರೋಪಿನ ಈ ಕ್ರಿಶ್ಚಿಯನ್ನರಿಗೆ ತಾವು ಜಗತ್ತನ್ನು ಲೂಟಿಗೈಯ್ಯಲು ಸೈದ್ಧಾಂತಿಕ ಪರವಾನಗಯೊಂದು ಬೇಕಿತ್ತು. ಆಗ ಅವರ ನಡುವೆ ವ್ಯಾಪಕವಾಗಿ ಚಾಲ್ತಿಗೆ ಬಂದಿದ್ದು ಜನಾಂಗಗಳ ಕಲ್ಪನೆ. ಬಿಳಿಯರ ಜನಾಂಗ ಅತ್ಯಂತ ಶ್ರೇಷ್ಠವಾದದ್ದು, ಹೀಗಾಗಿ ಅವರಿಗೆ ಜಗತ್ತನ್ನು ಉದ್ಧಾರ ಮಾಡುವ ಪರವಾನಗಿಯನ್ನು ಭಗವಂತ ಅದಾಗಲೇ ಕೊಟ್ಟುಬಿಟ್ಟಿದ್ದಾನೆಂದು ಅವರು ನಂಬಿಸಿಬಿಟ್ಟಿದ್ದರು!
ಅವರ ಪ್ರಕಾರ, ‘ಯುರೋಪಿನ ಬಿಳಿಯರು ಜನಾಂಗ ಸ್ತರದಲ್ಲಿ ಮೇಲ್ದರ್ಜೆಯವರಾದರೆ, ಆಫ್ರಿಕಾದ ಕರಿಯರು ಕೆಳ ದರ್ಜೆಯವರು. ಉಳಿದೆಲ್ಲ ಜನಾಂಗಗಳು ಇವೆರಡರ ನಡುವೆ ಅಲ್ಲಲ್ಲಿ ಹರಡಿಕೊಂಡಿವೆ’.
ತಮಗಿಂತ ಕೆಳಗಿರುವವರನ್ನು ಮೇಲತ್ತೆಲೆಂದೇ ಭಗವಂತ ನಮ್ಮನ್ನು ಕಳಿಸಿದ್ದಾನೆಂದು ಅವರು ಸ್ವತಃ ನಂಬಿಬಿಟ್ಟಿದ್ದರು, ಇತರರನ್ನೂ ನಂಬಿಸಿದ್ದರು. ಭಾರತದ ಬುದ್ಧಿವಂತರೂ ಬ್ರಿಟಿಷರು ದೇವರೇ ಕಳಿಸಿದ ದೂತರೆಂದು ಅನೇಕ ಕಡೆ ಉಲ್ಲೇಖ ಮಾಡುತ್ತಾರಲ್ಲ, ಅದರ ಹಿಂದಿನ ಸಿದ್ಧಾಂತವೇ ಇದು. ತಮ್ಮ ಈ ಸಿದ್ಧಾಂತಕ್ಕೆ ಪೂರಕವಾಗುವ ಎಲ್ಲವನ್ನೂ ಅವರು ಸಮರ್ಥವಾಗಿ ಬಳಸಿಕೊಂಡರು. ‘ಆಳುವವರು ಸಹಜವಾಗಿಯೇ ನಾಗರಿಕರು. ಆಳಿಸಿಕೊಳ್ಳುವವರು ಅನಾಗರಿಕರು’ ಎಂಬ ಪ್ಲೇಟೋ ಮಾತುಗಳು ಅವರಿಗೆ ಪೂರಕವಾದವು.
ಇವೆಲ್ಲವನ್ನೂ ಹೊತ್ತುಕೊಂಡೇ ಮಿಷನರಿಗಳು ಭಾರತಕ್ಕೆ ಕಾಲಿಟ್ಟಿದ್ದರು. ಆದರೆ ನಿರಂತರ ಆಕ್ರಮಣಗಳಿಗೆ ಒಳಗಾಗಿ ಭಾರತೀಯ ಸಮುದಾಯಗಳು ತಮ್ಮ ಹೊರಪದರವನ್ನು ಅದೆಷ್ಟು ಗಟ್ಟಿಗೊಳಿಸಿಕೊಂಡಿದ್ದವೆಂದರೆ, ಅದನ್ನು ಮುರಿದು ಒಳಗೆ ಹೋಗುವುದು ಕ್ರಿಶ್ಚಿಯನ್ನರಿಗೆ ಸುಲಭದ ಮಾತಾಗಿರಲಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಭಾರತ ಅವರ ಪಾಲಿಗೆ ಸಲೀಸಾದ ತುತ್ತಾಗಲಿಲ್ಲ.
ಬಂಗಾಳದಲ್ಲಿ ಬಲವಾಗಿ ಬೇರೂರುವ ಪ್ರಯತ್ನ ನಡೆಸಿದ ಮಿಷನರಿಗಳು ಅದಾಗಲೇ ಬ್ರಹ್ಮ ಸಮಾಜದ ಮೂಲಕ ಸಾಕಷ್ಟು ಹೆಸರಾಗಿದ್ದ ರಾಜಾ ರಾಮ್‌ಮೋಹನ್ ರಾಯ್ ರನ್ನು ಸಂಧಿಸಿದರು. ಬುದ್ಧಿವಂತ, ಮೇಲ್ವರ್ಗಕ್ಕೆ ಸೇರಿದ ರಾಮ್‌ಮೋಹನರನ್ನು ಕ್ರಿಸ್ತನ ಬುಡಕ್ಕೆಳೆತಂದರೆ ಹಿಂದೂಗಳಿಗೊಂದು ಬಲವಾದ ಪೆಟ್ಟು ಕೊಟ್ಟಂತೆ ಆಗುವುದೆಂದು ಚರ್ಚು ಚಿಂತಿಸಿತ್ತು. ೧೮೧೮ರ ಮಾರ್ಚ್ ತಿಂಗಳಲ್ಲಿ ವಿಲಿಯಂ ಆಡಮ್ ಬಂಗಾಳಕ್ಕೆ ಬಂದ. ರಾಜಾರಾಮರನ್ನು ಮತಾಂತರಿಸುವ ಹೊಣೆ ಅವರದಾಗಿತ್ತು. ಸಂಪರ್ಕ ಬಲವಾಯ್ತು. ಬೈಬಲ್ ಮೇಲಿನ ಚರ್ಚೆಗಳೂ ಜೋರಾದವು. ರಾಜಾ ರಾಮ್‌ಮೋಹನ್ ರಾಯರು ಬೈಬಲ್ಲನ್ನು ಅರೆದು ಕುಡಿದದ್ದಷ್ಟೇ ಅಲ್ಲ, ವೇದಗಳ ಮೇಲೂ ಚೆನ್ನಾದ ಹಿಡಿತ ಹೊಂದಿದ್ದರು. ಇವರೆದುರು ವಿಲಿಯಂ ಆಡಮ್ ಕುರಿಯಂತಾಗಿದ್ದ.
ಹಿಂದೂಗಳ ಬಹುದೇವತಾವಾದದ ಚರ್ಚೆ ನಡೆಯುವಾಗ ರಾಜಾ ರಾಮ್‌ಮೋಹನ ರಾಯರು ವೇದಗಳ ಏಕ ದೇವತಾವಾದವನ್ನು ಎತ್ತಿ ಹಿಡಿದುದಷ್ಟೇ ಅಲ್ಲ, ಬೈಬಲ್ಲಿನ ತ್ರಿದೇವತಾ (ಭಗವಂತ ತಂದೆ, ಭಗವಂತನ ಮಗ ಏಸು ಕ್ರಿಸ್ತ ಮತ್ತು ಪವಿತ್ರ ಸೈತಾನ – ಟ್ರಿನಿಟಿ) ವಾದವನ್ನು ಅಪಹಾಸ್ಯ ಮಾಡಿದರು. ಮೂರು ದೇವರನ್ನು ನಂಬುವವರಿಗೆ ನೂರು ದೇವರಿಂದ ತೊಂದರೆ ಏಕಾಗಬೇಕೆಂದು ಪ್ರಶ್ನಿಸಿದರು. ವಿಲಿಯಂ ಆಡಮ್‌ನ ನಂಬಿಕೆಗಳಿಗೆ ತೀವ್ರತರ ಆಘಾತ ಉಂಟಾಯ್ತು. ಆತ ಬೈಬಲ್ ಮೇಲೆ, ತನ್ನ ಆರಾಧ್ಯ ದೈವ ಏಸುಕ್ರಿಸ್ತನ ಕುರಿತಂತೆ ಅನೇಕ ಪ್ರಶ್ನೆಗಳನ್ನೆತ್ತಿದ. ತನ್ನ ಪ್ರಿಯಮಿತ್ರನಿಗೆ  ಬರೆದ ಪತ್ರದಲ್ಲಿ, ‘ಕಳೆದ ಕೆಲವಾರು ತಿಂಗಳಿಂದ ಕ್ರಿಸ್ತನ ಬಗ್ಗೆ ಒಂದಷ್ಟು ಪ್ರಶ್ನೆಗಳು ನನ್ನೊಳಗೆ ತಲೆ ಎತ್ತುತ್ತಿವೆ. ರಾಮ್‌ಮೋಹನ ರಾಯ್‌ರನ್ನು ಕ್ರಿಸ್ತಾನುಯಾಯಿಯಾಗಿಸುವ ಪ್ರಯತ್ನದಲ್ಲಿ ಅವರೊಂದಿಗೆ ನಡೆಸಿದ ಚರ್ಚೆ ನನ್ನ ಸಿದ್ಧಾಂತದಲ್ಲಿನ ನನ್ನ ನಂಬಿಕೆಯನ್ನು ಅಲುಗಾಡಿಸಿಬಿಟ್ಟಿದೆ. ಸಿದ್ಧಾಂತದ ಪರವಿರುವ ವಿಚಾರಗಳು ಗುಡ್ಡದಷ್ಟಿದ್ದರೆ, ಅದಕ್ಕೆ ವಿರುದ್ಧವಾದ ಅಂಶಗಳು ಮಹಾಪರ್ವತದಷ್ಟಿದೆ ಎಂಬುದನ್ನು ನಾನು ನಿಸ್ಸಂಶಯವಾಗಿ ಒಪ್ಪಿಕೊಳ್ತೇನೆ’ ಎಂದಿದ್ದರು.
ಆಡಮ್‌ನ ತಲೆ ಎಷ್ಟು ಕೆಟ್ಟಿತ್ತೆಂದರೆ, ಮೂರು ವರ್ಷಗಳ ಕಾಲ ವೇದ ಮತ್ತು ಬೈಬಲ್ಲುಗಳ ಅಧ್ಯಯನ ಮಾಡುತ್ತ, ತುಲನೆ ಮಾಡುತ್ತ ಕೊನೆಗೊಮ್ಮೆ ವೇದಧರ್ಮವೇ ಶ್ರೇಷ್ಟವೆಂದು ಗ್ರಹಿಸಿದ. ತಾನು ಮತಾಂತರಗೊಂಡ! ರಾಜಾ ರಾಮಮೋಹನ ರಾಯ್‌ರನ್ನು ತನ್ನ ಮತಕ್ಕೆ ಸೆಳೆಯಲು ಹೋಗಿ ತಾನೇ ವೇದಧರ್ಮಕ್ಕೆ ಶರಣಾಗಿಬಿಟ್ಟ. ಇದು ಚರ್ಚನ್ನು ಕೆಂಡಾಮಂಡಲವಾಗಿಸಿತು. ಚರ್ಚು ವಿಲಿಯಮ್ ಆಡಮ್‌ಗೆ ಧರ್ಮದ್ರೋಹಿಯ ಪಟ್ಟ ಕಟ್ಟಿತು. ಲಂಡನ್ ಮತ್ತು ಅಮೆರಿಕಾದ ಮಿಷನರಿ ವಲಯಗಳಲ್ಲಿ ತುಮುಲವೇರ್ಪಟ್ಟಿತು. ಅನೇಕ ದಿನಗಳ ಕಾಲ ಅಲ್ಲಿ ಮೌನ ಸಾಮ್ರಾಜ್ಯ. ಚರ್ಚು ಮಾನಸಿಕವಾಗಿ ಕುಗ್ಗಿಹೋಗಿತ್ತು.
ಈ ಘಟನೆಯನ್ನು ಮುಂದೆ ಎಂದಿಗೂ ನೆನೆಸಿಕೊಳ್ಳಬಾರದೆಂದು ನಿಶ್ಚಯಿಸಿದ ಮಿಷನರಿ ಪಡೆ ಸಾವರಿಸಿಕೊಂಡು ಮುಂದಡಿಯಿಡತೊಡಗಿತು.  ಅವರ ವಾರ್ಷಿಕ ವರದಿಯಲ್ಲಿ ‘ಈ ಹಿಂದಿನ ಒಬ್ಬ ಸದಸ್ಯ ವಿಲಿಯಮ್ ಆಡಮ್ ಕ್ರಿಸ್ತನ ವಿರುದ್ಧವಾಗಿರುವ ಸಂದೇಶಗಳನ್ನು ಒಪ್ಪಿಕೊಂಡು ಕ್ರಿಸ್ತನ ದೈವಿಕತೆಯನ್ನು ಧಿಕ್ಕರಿಸಿದ್ದರಿಂದ ಸೆರಾಮ್‌ಪೋರ್ ಮಿಷನ್‌ಗೂ ಆತನಿಗೂ ಇದ್ದ ಸಂಬಂಧ ಕಡಿಯಲಾಗಿದೆ’ ಎಂದಷ್ಟೇ ಬರೆದು ಸುಮ್ಮನಾದರು. ಮಿಷನರಿಗಳ ಇತಿಹಾಸವುಳ್ಳ ಪುಸ್ತಕದಲ್ಲಿ ಆಡಮನಿಗೆ ಸ್ಥಾನ ನಿರಾಕರಿಸಲಾಯ್ತು. ಅವರಿಗೆ ಇದು ಒಗ್ಗಿ ಬಂದ ಚಾಳಿ. ತಾವು ಮಾಡಿದ ಕಾರ್ಯಗಳ, ತಮಗಾದ ಆಘಾತಗಳ ಪಡಿಯಚ್ಚನ್ನು ಅಳಿಸುವುದು ಅವರಿಗೆ ಹೊಸತಲ್ಲ.
ಮಿಷನರಿಗಳು ಈಗ ಎಚ್ಚೆತ್ತುಕೊಂಡರು. ವೇದಗಳಲ್ಲಿರುವ ಸಾರವನ್ನು ತಮಗೆ ಬೇಕಾದ ರೀತಿಯಲ್ಲಿ ಅರ್ಥೈಸಿ ಭಾರತೀಯರಿಗೆ ಉಣಿಸುವುದು ಈಗ ಅವರಿಗೆ ಅನಿವಾರ್ಯವಾಯ್ತು. ಅವರು ಚಡಪಡಿಸಲಾರಂಭಿಸಿದರು.
ಅತ್ತ ಅಬೆ ಡುಬೋಯಿಸ್ ಮಿಷನರಿಯಾಗಿ ಭಾರತದಲ್ಲಿ ಪೂರಾ ಸೋತರೂ ಇಲ್ಲಿ ನೆಲೆ ನಿಂತು ಇಲ್ಲಿನ ಜನರನ್ನು ಅರ್ಥೈಸಿಕೊಂಡಿದ್ದ. ಇಲ್ಲಿನ ಹಬ್ಬಗಳಲ್ಲಿ, ಜಾತ್ರೆಗಳಲ್ಲಿ ಪಾಲ್ಗೊಂಡಿದ್ದ. ಮದುವೆ ಮುಂಜಿಗಳನ್ನು ಗಮನಿಸಿದ್ದ. ಜಾತಿ ಜಾತಿಗಳ ನಡುವಣ ಗೊಂದಲ ಕಣ್ಣು ಕುಕ್ಕಿತ್ತು. ತಾನು ಸೋತರೇನು, ಮುಂದೆ ಬರುವ ಮಿಷನರಿಗಳಿಗೆ ತನ್ನ ಅನುಭವ ಲಾಭದಾಯಕವಾಗಲೆಂದು ‘ಹಿಂದೂ ಮಮೆರಿ, ಕಸ್ಟಮ್ಸ್ ಅಂಡ್ ಸೆರಮನೀಸ್’ ಎಂಬ ಪುಸ್ತಕ ಬರೆದು ತರುಣ ಮಿಷನರಿಗಳ ಕೈಗಿಟ್ಟ. ಇಂದಿಗೂ ಭಾರತಕ್ಕೆ ಹೊರಡುವ ಪ್ರತಿಯೊಬ್ಬ ಮಿಷನರಿಗೂ ಇದು ವೇದವೇ ಸರಿ!
ಅಬೆ ಮಿಷನರಿಗಳಿಗೆಲ್ಲ ಒಂದು ಕಿವಿಮಾತು ಹೇಳಿದ, ೧ಹಿಂದೂಗಳ ಬಹುದೇವತಾ ವಾದ ಮತ್ತು ಮೂರ್ತಿಪೂಜೆಗಳೇ ಅವರನ್ನು ಕ್ರಿಸ್ತ ಮತದತ್ತ ಸೆಳೆಯಲು ನಮಗೆ ಶ್ರೇಷ್ಟ ಅಸ್ತ್ರ’.
ಚರ್ಚ್‌ನ ಚಡಪಡಿಕೆ ತೀವ್ರವಾಗುತ್ತಿತ್ತು. ಭಾರತ ಕೈತಪ್ಪಿಹೋಗುವ ಪ್ರಮೇಯ ಬಿಡಿ, ವೇದ ಧರ್ಮಕ್ಕೆ ಒಣಗಿದ ಎಲೆಗಳಂತೆ ತಾನೇ ಉದುರಿಹೋಗುವ ಭಯವೂ ಅವರನ್ನು ಕಾಡಲಾರಂಭಿಸಿತು. ವೇದಗಳ ಏಕದೇವತಾವಾದವನ್ನು ಧಿಕ್ಕರಿಸಿ ಅದರೊಳಗೆ ಬಹುದೇವತಾವಾದದ ಎಳೆಯನ್ನು ಹುಡುಕಬಲ್ಲ ಒಬ್ಬ ಸಂಸ್ಕೃತ ವಿದ್ವಾಂಸನನ್ನು ಅರಸಲಾರಂಭಿಸಿದರು. ಆತ ಇಂಗ್ಲೆಂಡಿಗೆ ಹೊರಗಿನವನಾಗಿದ್ದರೆ ಒಳಿತೆಂಬ ಅಭಿಪ್ರಾಯವೂ ಇತ್ತು. ಆ ಒಬ್ಬ ವ್ಯಕ್ತಿ ಹಿಂದೂ ಧರ್ಮದ ಬುಡವನ್ನೇ ಅಲುಗಾಡಿಸಿ ಕ್ರಿಸ್ತನ ಸಂದೇಶ ಹರಡಿಸಲು ರಾಜಮಾರ್ಗ ನಿರ್ಮಿಸಿಕೊಡುವನೆಂಬ  ನಿರೀಕ್ಷೆ ಚರ್ಚಿಗಿತ್ತು.
ಹೌದು. ಆ ‘ಒಬ್ಬ’ ಅವರಿಗೀಗ ಬೇಕೇಬೇಕಾಗಿತ್ತು.
ಆಗ ಅವರಿಗೆ ಸಿಕ್ಕವನೇ ಫ್ರೆಡ್ರಿಕ್ ಮಾಕ್ಸ್‌ಮಿಲಿಯನ್ ಮುಲ್ಲರ್’ ಅಥವಾ ನಮ್ಮೆಲ್ಲರ ಪಠ್ಯಪುಸ್ತಕಗಳನ್ನು, ಬುದ್ಧಿಜೀವಿಗಳ ತಲೆಯನ್ನೂ ಅಲಂಕರಿಸಿದ ‘ಮ್ಯಾಕ್ಸ್ ಮುಲ್ಲರ್’.