IMPORTANT NOTICE

New official website is launched for Karada Community. Please visit www.karadavishwa.com for more details.
Showing posts with label ರವೀ ಸಜಂಗದ್ದೆ. Show all posts
Showing posts with label ರವೀ ಸಜಂಗದ್ದೆ. Show all posts

Saturday, 1 August 2026

ನಾಕದೆಡೆಗೆ ಸೇತುವೆ ದಾಟಿದ 'ಪದ್ಮಶ್ರೀ', 'ಸೇತುಬಂಧು' ಶ್ರೀ ಗಿರೀಶ್ ಭಾರದ್ವಾಜ್ : ರವೀ ಸಜಂಗದ್ದೆ

 ಅಕ್ಷರ ನಮನ

ಗ್ರಾಮೀಣ ಭಾರತದ ಸಂಪರ್ಕ ಕ್ರಾಂತಿಯ ಹರಿಕಾರ, 'ಸೇತುಬಂಧು' (bridge man) ಎಂದೇ ಜಗತ್ಪ್ರಸಿದ್ಧರಾಗಿದ್ದ ಪದ್ಮಶ್ರೀ ಶ್ರೀ ಗಿರೀಶ್ ಭಾರದ್ವಾಜ್ ಅವರು ಇಂದು ನಿಧನರಾಗಿದ್ದಾರೆ. ಸಮಾಜಮುಖಿ ಚಿಂತನೆಯ, ಸರಳತೆಯ ಮತ್ತು ನಿಸ್ವಾರ್ಥ ಸೇವೆಯ ಒಂದು ಯುಗದ ಅಂತ್ಯವಾಗಿದೆ. ನದಿ, ತೊರೆಗಳಿಂದ ಕೂಡಿದ ಹಳ್ಳಿಗಾಡಿನ ಪ್ರದೇಶಗಳನ್ನು, ನೂರಾರು ಹಳ್ಳಿಗಳನ್ನು ತಮ್ಮ ತೂಗು ಸೇತುವೆಗಳ ಮೂಲಕ ಬೆಸೆದ ಆ ಮಹಾನ್ ಚೇತನ ಇಂದು ಇಹಲೋಕ ತ್ಯಜಿಸಿದೆ. ಅವರ ಬದುಕು, ಸಾಧನೆ, ಸಮಾಜಸೇವೆ ಮತ್ತು ಅವರು ಸಮಾಜಕ್ಕೆ ನೀಡಿದ ಅಪ್ರತಿಮ ಕೊಡುಗೆಗಳ ಒಂದು ಸಣ್ಣ ನೆನಪಿನ ಬುತ್ತಿ ಇಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಜಗದ್ವಿಖ್ಯಾತ ಎಂಜಿನಿಯರ್ ಆಗಿದ್ದ ಗಿರೀಶ್ ಭಾರದ್ವಾಜ್ ಅವರು ಹುಟ್ಟಿದ್ದು ಬೆಳೆದದ್ದು ಎಲ್ಲವೂ ಗ್ರಾಮೀಣ ಪರಿಸರದಲ್ಲಿ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ನಂತರ ಅವರು ಪಟ್ಟಣದ ಐಷಾರಾಮಿ ಬದುಕನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಆದರೆ, ಅವರ ಮನಸ್ಸು ತುಡಿದದ್ದು ಗ್ರಾಮೀಣ ಜನರ ಕಷ್ಟಗಳಿಗೆ ಸ್ಪಂದಿಸಲು! ಮಳೆಗಾಲ ಬಂತೆಂದರೆ ಹಳ್ಳಿಗಳ ಜನರು, ಶಾಲಾ ಮಕ್ಕಳು ನದಿ ದಾಟಲು ಪಡುವ ಪಾಡನ್ನು ಅವರು ಕಣ್ಣಾರೆ ಕಂಡಿದ್ದರು. ಆಧುನಿಕ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಜ್ಞಾನವನ್ನು ಕೇವಲ ಕಾಗದದ ಮೇಲಷ್ಟೇ ಇಡದೆ, ಅದನ್ನು ತಳಮಟ್ಟದ ಜನರ ಬದುಕನ್ನು ಸುಗಮಗೊಳಿಸಲು ಬಳಸಬೇಕೆಂದು ಅವರು ನಿರ್ಧರಿಸಿದರು. ಇದೇ ಅವರ ಬದುಕಿನ ಮಹತ್ತರ ತಿರುವಿಗೆ ಕಾರಣವಾಯಿತು.

ಗಿರೀಶ್ ಭಾರದ್ವಾಜ್ ಎಂದರೆ ತಕ್ಷಣ ನೆನಪಿಗೆ ಬರುವುದು ತೂಗುಸೇತುವೆಗಳು. ಸರ್ಕಾರದ ಕೋಟ್ಯಂತರ ರೂಪಾಯಿ ವೆಚ್ಚದ ಬೃಹತ್ ಯೋಜನೆಗಳಿಗೆ ಪರ್ಯಾಯವಾಗಿ, ಅತ್ಯಂತ ಕಡಿಮೆ ವೆಚ್ಚದಲ್ಲಿ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸುಲಭವಾಗಿ ನಿರ್ಮಿಸಬಹುದಾದ ತೂಗುಸೇತುವೆಗಳ ವಿನ್ಯಾಸವನ್ನು ಅವರು ರೂಪಿಸಿದರು.

ಮೊದಲ ಹೆಜ್ಜೆ: 1989ರಲ್ಲಿ ಸುಳ್ಯದ ಪಯಸ್ವಿನಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಮೊದಲ ತೂಗುಸೇತುವೆ ಇವರ ಯಶಸ್ಸಿನ ಪಯಣಕ್ಕೆ ಮುನ್ನುಡಿ ಬರೆಯಿತು.

ಸಾಧನೆಯ ಶಿಖರ: ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಒಡಿಶಾ ಸೇರಿದಂತೆ ಭಾರತದಾದ್ಯಂತ ಸುಮಾರು 150ಕ್ಕೂ ಹೆಚ್ಚು ತೂಗುಸೇತುವೆಗಳನ್ನು ಇವರು ಯಶಸ್ವಿಯಾಗಿ ನಿರ್ಮಿಸಿದ್ದಾರೆ.

ಸಂಪರ್ಕ ಕ್ರಾಂತಿ: ಇವರು ನಿರ್ಮಿಸಿದ ಸೇತುವೆಗಳು ಹರಿಯುವ ನೀರಿನ‌ ನದಿ ತಟದ ಎರಡು ದಂಡೆಗಳ ನಡುವಿನ ಜನರ ಭಾವನಾತ್ಮಕ ಬೆಸುಗೆಯ ಬಂಧಗಳಾಗಿದ್ದವು. ಶಿಕ್ಷಣ, ವೈದ್ಯಕೀಯ ನೆರವು ಮತ್ತು ವ್ಯಾಪಾರಕ್ಕಾಗಿ ಹತ್ತಿರದ ಪಟ್ಟಣಗಳನ್ನು ಸೇರಲು ಈ ಸೇತುವೆಗಳು ಲಕ್ಷಾಂತರ ಜನರಿಗೆ ಆಸರೆಯಾದವು.

ಸರ್ಕಾರದ ನೆರವಿಗಾಗಿ ಕಾಯುತ್ತಾ ಕೂರದೆ, ಜನರ ಸಹಭಾಗಿತ್ವದೊಂದಿಗೆ ಕೆಲಸ ಮಾಡಿದರೆ ಎಂತಹ ದೊಡ್ಡ ಸಾಧನೆಯನ್ನಾದರೂ ಮಾಡಬಹುದು ಎಂಬುದನ್ನು ಗಿರೀಶ್ ಭಾರದ್ವಾಜ್ ಅವರು ನಿರೂಪಿಸಿದ್ದರು. ಅಪ್ರತಿಮ ಸಾಧನೆ ಮಾಡಿದರೂ ಗಿರೀಶ್ ಭಾರದ್ವಾಜ್ ಅವರು ಎಂದಿಗೂ ಅಹಂಕಾರ ಪಟ್ಟವರಲ್ಲ - ತುಂಬಿದ ಕೊಡ ತುಳುಕದು! ಅವರ ಸರಳತೆ, ಸೌಮ್ಯ ಸ್ವಭಾವ ಮತ್ತು ಸದಾ ನಗುವ ಮುಖ ಎಲ್ಲರನ್ನೂ ಆಕರ್ಷಿಸುತ್ತಿತ್ತು. ತಮಗೆ ಸಿಕ್ಕ ಪ್ರಚಾರ ಅಥವಾ ಪ್ರಶಸ್ತಿಗಳಿಗಿಂತಲೂ ಜನರ ಮುಖದಲ್ಲಿ ಮೂಡುವ ಸಂತಸವೇ ತಮಗೆ ಸಾವಿರ ಪಾಲು ದೊಡ್ಡ ಬಹುಮಾನ ಎಂದು ಅವರು ನಂಬಿದ್ದರು.

ಸೇತುವೆ ನಿರ್ಮಾಣದ ಜಾಗದಲ್ಲಿ ಅವರು ಸ್ಥಳೀಯ ಕಾರ್ಮಿಕರ ಜೊತೆ ಕುಳಿತು ಊಟ ಮಾಡುತ್ತಿದ್ದರು, ಅವರಲ್ಲೊಬ್ಬರಾಗಿ ಶ್ರಮಿಸುತ್ತಿದ್ದರು. ಯಾವುದೇ ಹಳ್ಳಿಗೆ ಹೋದರೂ ಅಲ್ಲಿನ ಜನರ ಪ್ರೀತಿಯ 'ಗಿರೀಶಣ್ಣ' ಆಗಿಬಿಡುತ್ತಿದ್ದರು! ಕಳಂಕ ರಹಿತ, ಪ್ರಾಮಾಣಿಕ ಮತ್ತು ಉತ್ಕೃಷ್ಟ ಕೆಲಸಕ್ಕೆ ಅವರು ಹೆಸರಾಗಿದ್ದರು. ಹಣ ಗಳಿಸುವುದು ಅವರ ಉದ್ದೇಶ ಆಗಿರದೆ, ಜನರ ಕಣ್ಣೀರನ್ನು ಒರೆಸುವ ಮತ್ತು ಹಳ್ಳಿಗಾಡಿನ ಜನರ ಅಗತ್ಯವಾದ ಸಂಪರ್ಕ ಕೊಂಡಿಗಳನ್ನು ನಿರ್ಮಿಸುವುದೇ ಅವರ ಪರಮ ಧೇಯವಾಗಿತ್ತು.

ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಭಾರತ ಸರ್ಕಾರವು 2017ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಪ್ರಶಸ್ತಿ ಬಂದಾಗಲೂ ಅವರು, 'ಇದು ನನ್ನೊಬ್ಬನ ಸಾಧನೆಯಲ್ಲ, ನನ್ನ ಜೊತೆ ಶ್ರಮಿಸಿದ ಕಾರ್ಮಿಕರು ಮತ್ತು ಗ್ರಾಮಸ್ಥರ ಶ್ರಮಕ್ಕೆ ಸಂದ ಗೌರವ' ಎಂದು ಹೇಳುವ ಮೂಲಕ ತಮ್ಮ ವಿನಮ್ರತೆಯನ್ನು, ಬದುಕಿನ ಸಾರ್ಥಕತೆಯನ್ನು ಮೆರೆದಿದ್ದರು. ಜನರು ಪ್ರೀತ್ಯಾದರಗಳಿಂದ ಇವರನ್ನು ಭಾರತದ ಸೇತುವೆಗಳ ಸರದಾರ (Bridge Man of India) ಎಂದು ಕರೆಯುತ್ತಾರೆ.

ನನಗಿನ್ನೂ ನೆನಪಿದೆ! ಶ್ರೀಯುತರಿಗೆ ಪದ್ಮ ಪ್ರಶಸ್ತಿ ಘೋಷಣೆಯಾದಾಗ ಅಭಿನಂದನೆ ಸಲ್ಲಿಸಲು ಸಾಯಂಕಾಲ ಏಳೂವರೆ ಅಂದಾಜು ಫೋನಾಯಿಸಿದ್ದೆ. ತುಂಬಾ ವಿನಮ್ರತೆಯಿಂದ ನನ್ನ ಅಭಿನಂದನೆ ಸ್ವೀಕರಿಸಿದರು ಮತ್ತು ತಾನು ಅಲ್ಲೆಲ್ಲೊ ಹಳ್ಳಿಯ ಕಾಡಿನ ಮಧ್ಯೆ ಒಂದು ತೂಗು ಸೇತುವೆಯ ಕಾರ್ಯದಲ್ಲಿ ನಿರತರಾಗಿದ್ದೇನೆ ಮತ್ತು ಇಲ್ಲಿ ನೆಟ್ವರ್ಕ್ ಸಮಸ್ಯೆ ಇದೆ ಕ್ಷಮಿಸಿ ಎಂದು ಸರಳತೆ ಮೆರೆದಿದ್ದರು. ಅವರ ಕೆಲಸ ಮತ್ತು ಸಾಧನೆ ಮಾತನಾಡುತ್ತಿತ್ತು! ಸಂದ ಬಿರುದು ಸನ್ಮಾನಗಳನ್ನು ಸ್ವೀಕರಿಸಿ, ಇನ್ನಷ್ಟು ಮತ್ತಷ್ಟು ಹುರುಪಿನಿಂದ ಜನಸೇವೆಗೆ ಅಣಿಯಾಗುತ್ತಿದ್ದ ಅಪರೂಪದ ವ್ಯಕ್ತಿ-ವ್ಯಕ್ತಿತ್ವ!

ಇತ್ತೀಚೆಗೆ ಬಂಧು ಮಿತ್ರರೊಡನೆ ಸೇರಿ ಉತ್ತರಭಾರತದ ಪ್ರವಾಸ ಮುಗಿಸಿ ವಾಪಸಾಗಿದ್ದರು. ಹಠಾತ್ ಆರೋಗ್ಯದಲ್ಲಿ ಏರುಪೇರಾಗಿ ನಿಧನರಾದರು. ಗಿರೀಶ್ ಭಾರದ್ವಾಜ್ ಅವರು ಇಂದು ದೈಹಿಕವಾಗಿ ನಮ್ಮನ್ನು ಅಗಲಿದರೂ ಅವರು ನಿರ್ಮಿಸಿದ ನೂರಾರು ಸೇತುವೆಗಳು, ಅವುಗಳ ಮೇಲೆ ಪ್ರತಿದಿನ ನಡೆದಾಡುವ-ಓಡಾಡುವ ಲಕ್ಷಾಂತರ ಜನರ ಹೆಜ್ಜೆಗುರುತುಗಳು ಮತ್ತು ಕೃತಜ್ಞತಾ ಭಾವಗಳು ಅವರನ್ನು ಸದಾ ಜೀವಂತವಾಗಿಡುತ್ತವೆ. ನದಿ ದಾಟಲು ದೋಣಿಯನ್ನೋ, ತೆಪ್ಪವನ್ನೋ ಕಾಯುತ್ತಿದ್ದ, ಸದಾ ಭೀತಿಯಿಂದ ನೀರಿನ ತೊರೆಗಳನ್ನು ದಾಟುತ್ತಿದ್ದ ಹಳ್ಳಿಯ ಜನರಿಗೆ ಧೈರ್ಯ ಮತ್ತು ಸ್ವಾತಂತ್ರ್ಯ ತಂದುಕೊಟ್ಟ ಮಹಾಶಿಲ್ಪಿ.

ಗಿರೀಶಣ್ಣನವರ ನಿಸ್ವಾರ್ಥ ಬದುಕು ಯುವ ಎಂಜಿನಿಯರ್‌ಗಳಿಗೆ ಮತ್ತು ಇಡೀ ಸಮಾಜಕ್ಕೆ ಒಂದು ದಾರಿದೀಪ. ತಂತ್ರಜ್ಞಾನವನ್ನು ಮಾನವೀಯತೆಯೊಂದಿಗೆ ಬೆಸೆದ ಆ ಮಹಾ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿಗಳು. ಅವರ ಆತ್ಮಕ್ಕೆ ಸದ್ಗತಿ ದೊರಕಲಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ.

ಶ್ರೇಷ್ಠ ಜನಸೇವಾ ಪರಂಪರೆಯನ್ನು ಹಾಕಿಕೊಟ್ಟ ದಾರ್ಶನಿಕರು ನೀವು. ಸಮಾಜ ಸದಾಕಾಲ ನಿಮ್ಮ ನೆನಪನ್ನು ಇಡಲಿದೆ. ನೀವು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗುವೆವು. ಹೋಗಿ ಬನ್ನಿ.

ಓಂ ಶಾಂತಿ ಶಾಂತಿ ಶಾಂತಿಃ 🙏🏻

--ರವೀ ಸಜಂಗದ್ದೆ
(ಕರಾಡ ವಿಶ್ವ )

Source : https://www.karadavishwa.com/pages/pb0m53-k4mc2a-cx3cjg

Monday, 5 January 2026

ಕನಸುಗಳನ್ನು ನನಸಾಗಿಸಿದ ನಿಟ್ಟೆಯ ವಿನಯವಂತ! : ರವೀ ಸಜಂಗದ್ದೆ

 


ಕರಾವಳಿ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ, ಕ್ರಾಂತಿಕಾರಿ ಬದಲಾವಣೆಗಳ ಹರಿಕಾರ,‌ ಶಿಕ್ಷಣ ತಜ್ಞ ಡಾ. ಎನ್. ವಿನಯ ಹೆಗ್ಡೆ ಜನವರಿ 1ರ ಮುಂಜಾನೆ ಇಹದ ಯಾತ್ರೆ ಮುಗಿಸಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಶ್ರೀಯುತರು ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಮತ್ತು ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರು. ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ, ಬದುಕು ಕಟ್ಟಿಕೊಟ್ಟ, ಕರಾವಳಿಯ ಶ್ರೇಷ್ಠ ಶಿಕ್ಷಣ ತಜ್ಞರ ಸಾಲಿನಲ್ಲಿ ಅಗ್ರಜರಾಗಿ ನಿಲ್ಲುತ್ತಾರೆ. ಶ್ರೀಯುತರಿಗೆ ಕಂಬನಿಪೂರ್ಣ ನುಡಿ ನಮನವಿದು.

ಹೆಚ್ಚಿನವರ ಬಾಯಿಯಲ್ಲಿ ವಿನಯಣ್ಣ ಎಂದೇ ಪ್ರೀತ್ಯಾದರಗಳಿಂದ ಕರೆಸಿಕೊಳ್ಳುವ ಶ್ರೀಯುತರು ಐವತ್ತು ವರ್ಷಗಳ ಹಿಂದೆ ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ,‌ ಹುಟ್ಟೂರು ನಿಟ್ಟೆಯನ್ನು ಶಿಕ್ಷಣ ಕಾಶಿ ಮತ್ತು ಕೈಗಾರಿಕಾ ವಲಯವಾಗಿ ಅಭಿವೃದ್ಧಿಪಡಿಸಿ ಸೈ ಎನಿಸಿಕೊಂಡಿದ್ದಾರೆ. ಬಿಎಸ್‌ಸಿ ಪದವಿ ಪೂರೈಸಿದ ಅನಂತರ 'ಊರಿನವರಿಗಾಗಿ ಹುಟ್ಟೂರಿನಲ್ಲಿಯೇ ಏನಾದರೊಂದು ಮಾಡಿ-ಸಾಧಿಸಿ ತೋರಿಸಬೇಕು' ಎನ್ನುವ ಮಹದಾಸೆಯಿಂದ 1975ರಲ್ಲಿ 'ಲಮಿನಾ ಸಸ್ಪೆನ್ಷನ್ ಪ್ರೈವೇಟ್ ಲಿಮಿಟೆಡ್' ಹೆಸರಿನ ಅಟೋಮೊಬೈಲ್‌ನ ವಿವಿಧ ಬಿಡಿಭಾಗಗಳ ತಯಾರಿಕಾ ಸಂಸ್ಥೆ ಆರಂಭಿಸಿದರು. ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಿಶ್ವಾಸಾರ್ಹ ಸಂಸ್ಥೆಯಾಗಿ ಹೆಸರು ಗಳಿಸಿದ್ದು ISO 9001:2008 ಪ್ರಮಾಣೀಕೃತವಾಗಿದೆ. ಉತ್ಪನ್ನಗಳ ಗುಣಮಟ್ಟದ ಕುರಿತು ಹೆಚ್ಚಿನ ಗಮನ ಹರಿಸುವ ಈ ಸಂಸ್ಥೆ ಯುರೋಪ್ ಸೇರಿದಂತೆ ಪ್ರಪಂಚದ ಅನೇಕ‌ ಭಾಗಗಳಿಗೆ ತನ್ನ ಉತ್ಪನ್ನಗಳನ್ನು ರಫ್ತು ಮಾಡುವ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ವಾರ್ಷಿಕ ಅಂದಾಜು ನೂರೈವತ್ತು ಕೋಟಿ ವ್ಯವಹಾರ ನಡೆಸುವ ಸಂಸ್ಥೆಯಲ್ಲಿ ಸಾವಿರಕ್ಕೂ ಮಿಕ್ಕಿ ಉದ್ಯೋಗಿಗಳಿದ್ದಾರೆ.

ತಂದೆಯವರಾದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮತ್ತು ಮಾಜಿ ಲೋಕಸಭಾ ಸ್ಪೀಕರ್ ದಿ. ಜಸ್ಪಿಸ್ ಕೆ. ಎಸ್. ಹೆಗ್ಡೆಯವರ 'ತನ್ನ ಊರಿನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸ್ಥಳೀಯವಾಗಿ ದೊರಕುವಂತಾಗಬೇಕು' ಎನ್ನುವ ಶ್ರೇಷ್ಠ ಆಶಯದಂತೆ, 1979ರಲ್ಲಿ ಹುಟ್ಟೂರು ಕಾರ್ಕಳದ ನಿಟ್ಟೆ ಗ್ರಾಮದಲ್ಲಿ ಶಾಲೆ ಮತ್ತು ಕಾಲೇಜುಗಳನ್ನು ವಿನಯ ಹೆಗ್ಡೆ ಸ್ಥಾಪಿಸಿದರು. 'ನಿಟ್ಟೆ ಎಜ್ಯುಕೇಶನ್ ಟ್ರಸ್ಟ್' (ಎನ್ಇಟಿ) ಹೆಸರಿನ ಸೇವಾಸಂಸ್ಥೆ ಸ್ಥಾಪಿಸಿ, ಕೆಲವೇ ವಿದ್ಯಾರ್ಥಿಗಳು ಮತ್ತು ಸಣ್ಣ ಕಟ್ಟಡದೊಂದಿಗೆ ಆರಂಭವಾದ ಈ ಶಿಕ್ಷಣ ಕ್ರಾಂತಿ ಕಳೆದ ನಾಲ್ಕೂವರೆ ದಶಕಗಳಿಂದ ಬೆಳೆದು ನಿಂತ ಪರಿ, ವ್ಯಾಪಿಸಿದ ಪ್ರದೇಶ ನೋಡಿದರೆ ನಿಜಕ್ಕೂ ಅಚ್ಚರಿ!

ಎನ್ಇಟಿ ಅಡಿಯಲ್ಲಿ ನಿಟ್ಟೆ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಪ್ರಸ್ತುತ ನಲುವತ್ತಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ! ಎಲ್‌ಕೆಜಿಯಿಂದ ತೊಡಗಿ ಉನ್ನತ ಶಿಕ್ಷಣದವರೆಗಿನ ಶಿಕ್ಷಣವು ಈ‌ ವಿವಿಧ ಸಂ‌ಸ್ಥೆಗಳಲ್ಲಿ ಲಭ್ಯವಿದೆ. ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್,‌‌ ಇಂಜಿನಿಯರಿಂಗ್, ದಂತ, ವೈದ್ಯಕೀಯ, ಫಾರ್ಮಸಿ,‌ ನರ್ಸಿಂಗ್, ಹೊಟೆಲ್ ಮ್ಯಾನೇಜ್‌ಮೆಂಟ್ ಶಿಕ್ಷಣ ನೀಡುವ‌ 40ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ದೇಶದ ಮುಂದಿನ, ಜವಾಬ್ದಾರಿಯುತ, ಸುಶಿಕ್ಷಿತ ಜನಾಂಗವನ್ನು ರೂಪಿಸುವ ಕೈಂಕರ್ಯದಲ್ಲಿ ನಿರತವಾಗಿವೆ. ಐದು ಸಾವಿರಕ್ಕೂ ಹೆಚ್ಚು ಪಾಠ ಮತ್ತು ಪಾಠೇತರ ಸಿಬ್ಬಂದಿಗಳು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 'ಒಬ್ಬ ಸಾಮಾನ್ಯ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು, ತನ್ಮೂಲಕ ಆತ ಸಮಾಜದ ಆಸ್ತಿಯಾಗಬೇಕು' ಎನ್ನುವ ತನ್ನದೇ ಕನಸನ್ನು ಸಾಕಾರಗೊಳಿಸಿದರು. ತೀರ್ಥರೂಪರಾದ ಕೆ. ಎಸ್. ಹೆಗ್ಡೆಯವರ ಹೆಸರಿನ ಸುಸಜ್ಜಿತ,‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಿ, ಮೆಡಿಕಲ್ ಕಾಲೇಜುಗಳ ಮೂಲಕ  ಹುಟ್ಟೂರಿನವರಿಗೆ ಉನ್ನತ ಶಿಕ್ಷಣ ಮತ್ತು ಕಡಿಮೆ ದರದಲ್ಲಿ ಆರೋಗ್ಯ ಸೇವೆಗಳನ್ನು ನಿರಂತರ ನೀಡಿಕೊಂಡು ಬಂದ‌ ಹೆಗ್ಗಳಿಕೆ ವಿನಯ ಹೆಗ್ಡೆ ಅವರದ್ದು. 86ರ ಇಳಿ ವಯಸ್ಸಿನಲ್ಲೂ ತನ್ನ‌ ಕನಸಿನ ಕೂಸಾದ ವಿವಿಧ ಸಂಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸುತ್ತಾ ಇತ್ತೀಚಿನವರೆಗೂ ಸದಾ ಲವಲವಿಕೆಯಿಂದಲೇ ಇದ್ದರು. ಆರೋಗ್ಯದ ವಿಚಾರದಲ್ಲಿ ಮತ್ತು ಆಹಾರದ ವಿಷಯದಲ್ಲಿ ಅಪರಿಮಿತ ಶಿಸ್ತು ಬೆಳೆಸಿಕೊಂಡಿದ್ದರು. ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಪ್ರಸ್ತುತ ಕುಲಪತಿಗಳಾಗಿದ್ದರು. ಶಿಕ್ಷಣವನ್ನು ವ್ಯವಹಾರವಾಗಿ ನೋಡಿದೆ, 'ಸೇವೆ'ಯಾಗಿ ಸ್ವೀಕರಿಸಿದ ದೊಡ್ಡ ಗುಣ ಅವರನ್ನು ಜನನಾಯಕರನ್ನಾಗಿ ರೂಪಿಸಿತು ಎಂದರೆ ತಪ್ಪಾಗಲಾರದು. ನಿಟ್ಟೆ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ಲಕ್ಷಾಂತರ ಮಂದಿ ಇಂದು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. 

ಸಹಾಯ ಅಪೇಕ್ಷಿಸಿ ತನ್ನನ್ನು ಸಂಪರ್ಕಿಸಿದ ಪ್ರತಿಯೊಬ್ಬರಿಗೂ‌‌ ಕೈಲಾದ ಸಹಾಯ-ಸಹಕಾರ ನೀಡಿ ಜನಾನುರಾಗಿ ಎನಿಸಿಕೊಂಡ ಶ್ರೇಯಸ್ಸು ವಿನಯ ಹೆಗ್ಡೆಯವರಿಗೆ ಸಲ್ಲುತ್ತದೆ. ರಾಜ್ಯದ ಶಿಕ್ಷಣಕ್ಕೆ ಸಂಬಂಧಿಸಿದ ಹಲವಾರು ಸಮಿತಿಗಳಲ್ಲಿ ಮತ್ತು ಕೈಗಾರಿಕಾ ಒಕ್ಕೂಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಲಹೆ,‌ ಸೂಚನೆ, ಮಾರ್ಗದರ್ಶನ ನೀಡುತ್ತಿದ್ದರು. ದಶಕಗಳ ಹಿಂದೆ ಸಣ್ಣ ಗ್ರಾಮೀಣ ಪ್ರದೇಶವಾಗಿದ್ದ 'ನಿಟ್ಟೆ'ಯ ಹೆಸರು‌ ಮತ್ತು ಪ್ರದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗಾರಿಕೆ-ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸುವಂತೆ ಮಾಡಿದ ಅನನ್ಯ ಸಾಧಕರು ವಿನಯ ಹೆಗ್ಡೆ. ಧಾರ್ಮಿಕ,‌ ಸಾಂಸ್ಕೃತಿಕ  ಮತ್ತು ಸಾಮಾಜಿಕ ಕ್ಷೇತ್ರಗಳಲ್ಲೂ‌ ಗುರುತಿಸಿಕೊಂಡು‌, ತನ್ನ ಕೊಡುಗೆಯನ್ನು ಆ ಕ್ಷೇತ್ರಗಳಿಗೂ ವಿಸ್ತರಿಸಿದ ಮಹಾನುಭಾವರು. ಕ್ರಿಕೆಟ್ ಮತ್ತಿತರ ಆಟಗಳ ಬಗ್ಗೆಯೂ ಶ್ರೀಯುತರಿಗೆ ವಿಶೇಷ ಆಸಕ್ತಿಯಿತ್ತು. ಅದರ ಭಾಗವಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಮೂಲತಃ ಕರಾವಳಿಯವರಾದ ಬಿ. ಸಿ. ಆಳ್ವರ ಹೆಸರಿನಲ್ಲಿ ಕ್ರೀಡಾಂಗಣವೊಂದನ್ನು ನಿರ್ಮಿಸಿ, ಪ್ರತಿವರ್ಷ ಕ್ರೀಡಾ ಕೂಟಗಳನ್ನು ಆಯೋಜಿಸಿ ಪಾಠೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿದ್ದರು.

ಹೆಸರಿಗೆ ಒಪ್ಪುವಂತೆ ವಿನಯವಂತ ವ್ಯಕ್ತಿ. ಗಟ್ಟಿಯಾದ-ದೃಢ ಮನಸ್ಥಿತಿಯುಳ್ಳ ವ್ಯಕ್ತಿತ್ವ. ಉತ್ತಮ ಯೋಜನೆಗಳನ್ನು ಹಾಕಿಕೊಂಡು, ಸ್ಪಷ್ಟತೆಯಿಂದ ನಿಖರವಾದ ಹೆಜ್ಜೆಗಳನ್ನು ಇಡಬಲ್ಲ, ಇಟ್ಟು ಯಶಸ್ವಿಯಾದ ದಾರ್ಶನಿಕ ಜೀವ. ಸ್ಥಳೀಯರಿಗೆ ಉದ್ಯೋಗ ಕೊಟ್ಟು, ಊರಿನ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿ, ನಿಟ್ಟೆಯ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿದವರು. ಜೀವನಪರ್ಯಂತ ಮೌಲ್ಯಾಧಾರಿತ ಬದುಕು ಬಾಳಿದವರು.

ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳು ಇವರ ಮುಡಿಗೇರಿ ತಂತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ! ಬದುಕಿನಲ್ಲಿ ಶ್ವಾಸ ನಿಂತಾಗ ನಮ್ಮ ಅಸ್ತಿತ್ವ ಕೊನೆಯಾಗುತ್ತದೆ; ಓರ್ವ ಮಹಾನ್ ವ್ಯಕ್ತಿ ಜೀವಮಾನದ ಸಾಧನೆಗಾಗಿ ಗಳಿಸಿದ ವಿಶ್ವಾಸ ಮತ್ತು ಸಮಾಜದ ಅಭಿವೃದ್ಧಿಗೆ ನೀಡಿದ ಅನೇಕ ಕೊಡುಗೆಗಳು ಅಂಥವರನ್ನು ಚಿರಂಜೀವಿಯಾಗಿಸುತ್ತವೆ. ಹಲವಾರು ಸಾವಿರ ಮಂದಿಗೆ ಉದ್ಯೋಗ ನೀಡಿ, ಆ ಎಲ್ಲಾ ಕುಟುಂಬಗಳು ನೆಮ್ಮದಿಯ ಜೀವನ ನಡೆಸಲು ಕಾರಣೀಭೂತರಾದ, ಬಡವರ, ಆರ್ಥಿಕವಾಗಿ ಹಿಂದುಳಿದ ಅಸಹಾಯಕರ ನೋವುಗಳಿಗೆ ಪೂರಕವಾಗಿ ಮಿಡಿದು, ಹುಟ್ಟೂರು ಮತ್ತು ಸಮಾಜದ ಏಳಿಗೆಗೆ ದುಡಿದ ವಿನಯ ಹೆಗ್ಡೆಯವರಂಥಾ ಮಹಾನುಭಾವರು ಎಂದೆಂದಿಗೂ ಸ್ಪೂರ್ತಿ ಚಿಲುಮೆ! 

ಕೈಗಾರಿಕೋದ್ಯಮಿ, ವಿದ್ಯಾರ್ಜನೆಯ ದೇಗುಲಗಳ ಸಾರಥಿ, ಶಿಕ್ಷಣ ಭೀಷ್ಮ ಇಂದು ದೈಹಿಕವಾಗಿ ನಮ್ಮನ್ನಗಲಿದ್ದರೂ ಅವರು ಹಚ್ಚಿಹೋದ ಜ್ಞಾನ ದೀವಿಗೆ ಲಕ್ಷಾಂತರ ಮನೆ-ಮನಗಳಲ್ಲಿ ಸದಾ ಶುಭ್ರವಾಗಿ, ಕಾಂತಿಯುತವಾಗಿ ಬೆಳಗುತ್ತಿರುತ್ತದೆ. ಓರ್ವ ವ್ಯಕ್ತಿ 'ಎಷ್ಟು ವರುಷ ಬದುಕಿದ್ದರು‌‌?' ಎನ್ನುವುದಕ್ಕಿಂತ 'ಎಷ್ಟು ಜನರ‌ ಬದುಕಿಗೆ ನೆರವಾದರು-ಬೆಳಕಾದರು?' ಎನ್ನುವುದು ಬಹುಮುಖ್ಯ. ಆ ದೃಷ್ಟಿಯಿಂದ ಡಾ. ಎನ್. ವಿನಯ ಹೆಗ್ಡೆಯವರು ಸಾರ್ಥಕ ಜೀವನವನ್ನು ಬಾಳಿ ತೋರಿಸಿದರು. ಅವರು ಸೃಷ್ಟಿಸಿದ ವಿದ್ಯಾ ದೇಗುಲಗಳು, ನೀರೆರೆದು ಪೋಷಿಸಿದ ಸಂಬಂಧಗಳು, ಗಳಿಸಿದ ಪ್ರೀತಿ,‌ ವಿಶ್ವಾಸ, ಗೌರವ, ಅಭಿಮಾನ ಚಿರಾಯು!

ಅವರ ನಿಧನ ಒಂದು ಯುಗ ಅಂತ್ಯವಾದ ಸಂಕೇತವಾಗಿ ಕಾಣಿಸುತ್ತದೆ. ಹೆಗ್ಡೆಯವರ ನಾಯಕತ್ವ, ನಮ್ರತೆ, ದೂರದೃಷ್ಟಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು, ಅತುಲ್ಯ, ಶಾಶ್ವತ ಮತ್ತು ಚಿರಸ್ಮರಣೀಯ. 'ಯೋಗೇನಾಂತೇ ತನುತ್ಯಜಾಮ್...' ಎನ್ನುವ ಗೀತೆಯ ಸಾರದಂತೆ ಸರ್ವವಂದ್ಯ ತನ್ನ ಪಾಲಿಗೆ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಬಾರದ ಲೋಕಕ್ಕೆ ಪಯಣಿಸಿದ್ದಾರೆ. 'ಕಾಯಕವೇ ಕೈಲಾಸ' ಎಂದು ನಂಬಿ ಬದುಕಿದ ಧೀಮಂತ-ಶ್ರೀಮಂತ ವ್ಯಕ್ತಿ-ವ್ಯಕ್ತಿತ್ವಕ್ಕೆ ಕೋಟಿ ನಮನಗಳು. ಅವರು ಹಾಕಿಕೊಟ್ಟ ಆದರ್ಶ-ಸನ್ಮಾರ್ಗದಲ್ಲಿ ಸಾಗುವುದರ ಮೂಲಕ ಅವರಿಗೆ ನಿಜಾರ್ಥದಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. 

'ನಿಟ್ಟೆ' ಒಂದು ಬೃಹತ್ ಬ್ರ್ಯಾಂಡ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲು ನಿಮ್ಮ ದೃಷ್ಟಾಲ ಕಾರಣ. ಪ್ರಿಯ ವಿನಯಣ್ಣಾ, ಹೋಗಿ ಬನ್ನಿ. ನೀವು ಶಾಶ್ವತವಾಗಿ ನಮ್ಮೆಲ್ಲರ ಹೃದಯವಾಸಿ. ಪ್ರಣಾಮಂ.

✒️ ರವೀ ಸಜಂಗದ್ದೆ

(02/01/2026ರಂದು ವಿಶ್ವವಾಣಿ ದಿನಪತ್ರಿಕೆ‌ಯಲ್ಲಿ ಪ್ರಕಟವಾದ ನುಡಿನಮನ ಬರಹ)