IMPORTANT NOTICE

New official website is launched for Karada Community. Please visit www.karadavishwa.com for more details.
Showing posts with label ರವೀ ಸಜಂಗದ್ದೆ. Show all posts
Showing posts with label ರವೀ ಸಜಂಗದ್ದೆ. Show all posts

Monday, 5 January 2026

ಕನಸುಗಳನ್ನು ನನಸಾಗಿಸಿದ ನಿಟ್ಟೆಯ ವಿನಯವಂತ! : ರವೀ ಸಜಂಗದ್ದೆ

 


ಕರಾವಳಿ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ, ಕ್ರಾಂತಿಕಾರಿ ಬದಲಾವಣೆಗಳ ಹರಿಕಾರ,‌ ಶಿಕ್ಷಣ ತಜ್ಞ ಡಾ. ಎನ್. ವಿನಯ ಹೆಗ್ಡೆ ಜನವರಿ 1ರ ಮುಂಜಾನೆ ಇಹದ ಯಾತ್ರೆ ಮುಗಿಸಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಶ್ರೀಯುತರು ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಮತ್ತು ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರು. ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ, ಬದುಕು ಕಟ್ಟಿಕೊಟ್ಟ, ಕರಾವಳಿಯ ಶ್ರೇಷ್ಠ ಶಿಕ್ಷಣ ತಜ್ಞರ ಸಾಲಿನಲ್ಲಿ ಅಗ್ರಜರಾಗಿ ನಿಲ್ಲುತ್ತಾರೆ. ಶ್ರೀಯುತರಿಗೆ ಕಂಬನಿಪೂರ್ಣ ನುಡಿ ನಮನವಿದು.

ಹೆಚ್ಚಿನವರ ಬಾಯಿಯಲ್ಲಿ ವಿನಯಣ್ಣ ಎಂದೇ ಪ್ರೀತ್ಯಾದರಗಳಿಂದ ಕರೆಸಿಕೊಳ್ಳುವ ಶ್ರೀಯುತರು ಐವತ್ತು ವರ್ಷಗಳ ಹಿಂದೆ ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ,‌ ಹುಟ್ಟೂರು ನಿಟ್ಟೆಯನ್ನು ಶಿಕ್ಷಣ ಕಾಶಿ ಮತ್ತು ಕೈಗಾರಿಕಾ ವಲಯವಾಗಿ ಅಭಿವೃದ್ಧಿಪಡಿಸಿ ಸೈ ಎನಿಸಿಕೊಂಡಿದ್ದಾರೆ. ಬಿಎಸ್‌ಸಿ ಪದವಿ ಪೂರೈಸಿದ ಅನಂತರ 'ಊರಿನವರಿಗಾಗಿ ಹುಟ್ಟೂರಿನಲ್ಲಿಯೇ ಏನಾದರೊಂದು ಮಾಡಿ-ಸಾಧಿಸಿ ತೋರಿಸಬೇಕು' ಎನ್ನುವ ಮಹದಾಸೆಯಿಂದ 1975ರಲ್ಲಿ 'ಲಮಿನಾ ಸಸ್ಪೆನ್ಷನ್ ಪ್ರೈವೇಟ್ ಲಿಮಿಟೆಡ್' ಹೆಸರಿನ ಅಟೋಮೊಬೈಲ್‌ನ ವಿವಿಧ ಬಿಡಿಭಾಗಗಳ ತಯಾರಿಕಾ ಸಂಸ್ಥೆ ಆರಂಭಿಸಿದರು. ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಿಶ್ವಾಸಾರ್ಹ ಸಂಸ್ಥೆಯಾಗಿ ಹೆಸರು ಗಳಿಸಿದ್ದು ISO 9001:2008 ಪ್ರಮಾಣೀಕೃತವಾಗಿದೆ. ಉತ್ಪನ್ನಗಳ ಗುಣಮಟ್ಟದ ಕುರಿತು ಹೆಚ್ಚಿನ ಗಮನ ಹರಿಸುವ ಈ ಸಂಸ್ಥೆ ಯುರೋಪ್ ಸೇರಿದಂತೆ ಪ್ರಪಂಚದ ಅನೇಕ‌ ಭಾಗಗಳಿಗೆ ತನ್ನ ಉತ್ಪನ್ನಗಳನ್ನು ರಫ್ತು ಮಾಡುವ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ವಾರ್ಷಿಕ ಅಂದಾಜು ನೂರೈವತ್ತು ಕೋಟಿ ವ್ಯವಹಾರ ನಡೆಸುವ ಸಂಸ್ಥೆಯಲ್ಲಿ ಸಾವಿರಕ್ಕೂ ಮಿಕ್ಕಿ ಉದ್ಯೋಗಿಗಳಿದ್ದಾರೆ.

ತಂದೆಯವರಾದ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮತ್ತು ಮಾಜಿ ಲೋಕಸಭಾ ಸ್ಪೀಕರ್ ದಿ. ಜಸ್ಪಿಸ್ ಕೆ. ಎಸ್. ಹೆಗ್ಡೆಯವರ 'ತನ್ನ ಊರಿನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸ್ಥಳೀಯವಾಗಿ ದೊರಕುವಂತಾಗಬೇಕು' ಎನ್ನುವ ಶ್ರೇಷ್ಠ ಆಶಯದಂತೆ, 1979ರಲ್ಲಿ ಹುಟ್ಟೂರು ಕಾರ್ಕಳದ ನಿಟ್ಟೆ ಗ್ರಾಮದಲ್ಲಿ ಶಾಲೆ ಮತ್ತು ಕಾಲೇಜುಗಳನ್ನು ವಿನಯ ಹೆಗ್ಡೆ ಸ್ಥಾಪಿಸಿದರು. 'ನಿಟ್ಟೆ ಎಜ್ಯುಕೇಶನ್ ಟ್ರಸ್ಟ್' (ಎನ್ಇಟಿ) ಹೆಸರಿನ ಸೇವಾಸಂಸ್ಥೆ ಸ್ಥಾಪಿಸಿ, ಕೆಲವೇ ವಿದ್ಯಾರ್ಥಿಗಳು ಮತ್ತು ಸಣ್ಣ ಕಟ್ಟಡದೊಂದಿಗೆ ಆರಂಭವಾದ ಈ ಶಿಕ್ಷಣ ಕ್ರಾಂತಿ ಕಳೆದ ನಾಲ್ಕೂವರೆ ದಶಕಗಳಿಂದ ಬೆಳೆದು ನಿಂತ ಪರಿ, ವ್ಯಾಪಿಸಿದ ಪ್ರದೇಶ ನೋಡಿದರೆ ನಿಜಕ್ಕೂ ಅಚ್ಚರಿ!

ಎನ್ಇಟಿ ಅಡಿಯಲ್ಲಿ ನಿಟ್ಟೆ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಪ್ರಸ್ತುತ ನಲುವತ್ತಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ! ಎಲ್‌ಕೆಜಿಯಿಂದ ತೊಡಗಿ ಉನ್ನತ ಶಿಕ್ಷಣದವರೆಗಿನ ಶಿಕ್ಷಣವು ಈ‌ ವಿವಿಧ ಸಂ‌ಸ್ಥೆಗಳಲ್ಲಿ ಲಭ್ಯವಿದೆ. ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್,‌‌ ಇಂಜಿನಿಯರಿಂಗ್, ದಂತ, ವೈದ್ಯಕೀಯ, ಫಾರ್ಮಸಿ,‌ ನರ್ಸಿಂಗ್, ಹೊಟೆಲ್ ಮ್ಯಾನೇಜ್‌ಮೆಂಟ್ ಶಿಕ್ಷಣ ನೀಡುವ‌ 40ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ದೇಶದ ಮುಂದಿನ, ಜವಾಬ್ದಾರಿಯುತ, ಸುಶಿಕ್ಷಿತ ಜನಾಂಗವನ್ನು ರೂಪಿಸುವ ಕೈಂಕರ್ಯದಲ್ಲಿ ನಿರತವಾಗಿವೆ. ಐದು ಸಾವಿರಕ್ಕೂ ಹೆಚ್ಚು ಪಾಠ ಮತ್ತು ಪಾಠೇತರ ಸಿಬ್ಬಂದಿಗಳು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 'ಒಬ್ಬ ಸಾಮಾನ್ಯ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು, ತನ್ಮೂಲಕ ಆತ ಸಮಾಜದ ಆಸ್ತಿಯಾಗಬೇಕು' ಎನ್ನುವ ತನ್ನದೇ ಕನಸನ್ನು ಸಾಕಾರಗೊಳಿಸಿದರು. ತೀರ್ಥರೂಪರಾದ ಕೆ. ಎಸ್. ಹೆಗ್ಡೆಯವರ ಹೆಸರಿನ ಸುಸಜ್ಜಿತ,‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಿ, ಮೆಡಿಕಲ್ ಕಾಲೇಜುಗಳ ಮೂಲಕ  ಹುಟ್ಟೂರಿನವರಿಗೆ ಉನ್ನತ ಶಿಕ್ಷಣ ಮತ್ತು ಕಡಿಮೆ ದರದಲ್ಲಿ ಆರೋಗ್ಯ ಸೇವೆಗಳನ್ನು ನಿರಂತರ ನೀಡಿಕೊಂಡು ಬಂದ‌ ಹೆಗ್ಗಳಿಕೆ ವಿನಯ ಹೆಗ್ಡೆ ಅವರದ್ದು. 86ರ ಇಳಿ ವಯಸ್ಸಿನಲ್ಲೂ ತನ್ನ‌ ಕನಸಿನ ಕೂಸಾದ ವಿವಿಧ ಸಂಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸುತ್ತಾ ಇತ್ತೀಚಿನವರೆಗೂ ಸದಾ ಲವಲವಿಕೆಯಿಂದಲೇ ಇದ್ದರು. ಆರೋಗ್ಯದ ವಿಚಾರದಲ್ಲಿ ಮತ್ತು ಆಹಾರದ ವಿಷಯದಲ್ಲಿ ಅಪರಿಮಿತ ಶಿಸ್ತು ಬೆಳೆಸಿಕೊಂಡಿದ್ದರು. ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಪ್ರಸ್ತುತ ಕುಲಪತಿಗಳಾಗಿದ್ದರು. ಶಿಕ್ಷಣವನ್ನು ವ್ಯವಹಾರವಾಗಿ ನೋಡಿದೆ, 'ಸೇವೆ'ಯಾಗಿ ಸ್ವೀಕರಿಸಿದ ದೊಡ್ಡ ಗುಣ ಅವರನ್ನು ಜನನಾಯಕರನ್ನಾಗಿ ರೂಪಿಸಿತು ಎಂದರೆ ತಪ್ಪಾಗಲಾರದು. ನಿಟ್ಟೆ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ಲಕ್ಷಾಂತರ ಮಂದಿ ಇಂದು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. 

ಸಹಾಯ ಅಪೇಕ್ಷಿಸಿ ತನ್ನನ್ನು ಸಂಪರ್ಕಿಸಿದ ಪ್ರತಿಯೊಬ್ಬರಿಗೂ‌‌ ಕೈಲಾದ ಸಹಾಯ-ಸಹಕಾರ ನೀಡಿ ಜನಾನುರಾಗಿ ಎನಿಸಿಕೊಂಡ ಶ್ರೇಯಸ್ಸು ವಿನಯ ಹೆಗ್ಡೆಯವರಿಗೆ ಸಲ್ಲುತ್ತದೆ. ರಾಜ್ಯದ ಶಿಕ್ಷಣಕ್ಕೆ ಸಂಬಂಧಿಸಿದ ಹಲವಾರು ಸಮಿತಿಗಳಲ್ಲಿ ಮತ್ತು ಕೈಗಾರಿಕಾ ಒಕ್ಕೂಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಲಹೆ,‌ ಸೂಚನೆ, ಮಾರ್ಗದರ್ಶನ ನೀಡುತ್ತಿದ್ದರು. ದಶಕಗಳ ಹಿಂದೆ ಸಣ್ಣ ಗ್ರಾಮೀಣ ಪ್ರದೇಶವಾಗಿದ್ದ 'ನಿಟ್ಟೆ'ಯ ಹೆಸರು‌ ಮತ್ತು ಪ್ರದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗಾರಿಕೆ-ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸುವಂತೆ ಮಾಡಿದ ಅನನ್ಯ ಸಾಧಕರು ವಿನಯ ಹೆಗ್ಡೆ. ಧಾರ್ಮಿಕ,‌ ಸಾಂಸ್ಕೃತಿಕ  ಮತ್ತು ಸಾಮಾಜಿಕ ಕ್ಷೇತ್ರಗಳಲ್ಲೂ‌ ಗುರುತಿಸಿಕೊಂಡು‌, ತನ್ನ ಕೊಡುಗೆಯನ್ನು ಆ ಕ್ಷೇತ್ರಗಳಿಗೂ ವಿಸ್ತರಿಸಿದ ಮಹಾನುಭಾವರು. ಕ್ರಿಕೆಟ್ ಮತ್ತಿತರ ಆಟಗಳ ಬಗ್ಗೆಯೂ ಶ್ರೀಯುತರಿಗೆ ವಿಶೇಷ ಆಸಕ್ತಿಯಿತ್ತು. ಅದರ ಭಾಗವಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಮೂಲತಃ ಕರಾವಳಿಯವರಾದ ಬಿ. ಸಿ. ಆಳ್ವರ ಹೆಸರಿನಲ್ಲಿ ಕ್ರೀಡಾಂಗಣವೊಂದನ್ನು ನಿರ್ಮಿಸಿ, ಪ್ರತಿವರ್ಷ ಕ್ರೀಡಾ ಕೂಟಗಳನ್ನು ಆಯೋಜಿಸಿ ಪಾಠೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿದ್ದರು.

ಹೆಸರಿಗೆ ಒಪ್ಪುವಂತೆ ವಿನಯವಂತ ವ್ಯಕ್ತಿ. ಗಟ್ಟಿಯಾದ-ದೃಢ ಮನಸ್ಥಿತಿಯುಳ್ಳ ವ್ಯಕ್ತಿತ್ವ. ಉತ್ತಮ ಯೋಜನೆಗಳನ್ನು ಹಾಕಿಕೊಂಡು, ಸ್ಪಷ್ಟತೆಯಿಂದ ನಿಖರವಾದ ಹೆಜ್ಜೆಗಳನ್ನು ಇಡಬಲ್ಲ, ಇಟ್ಟು ಯಶಸ್ವಿಯಾದ ದಾರ್ಶನಿಕ ಜೀವ. ಸ್ಥಳೀಯರಿಗೆ ಉದ್ಯೋಗ ಕೊಟ್ಟು, ಊರಿನ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿ, ನಿಟ್ಟೆಯ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿದವರು. ಜೀವನಪರ್ಯಂತ ಮೌಲ್ಯಾಧಾರಿತ ಬದುಕು ಬಾಳಿದವರು.

ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳು ಇವರ ಮುಡಿಗೇರಿ ತಂತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ! ಬದುಕಿನಲ್ಲಿ ಶ್ವಾಸ ನಿಂತಾಗ ನಮ್ಮ ಅಸ್ತಿತ್ವ ಕೊನೆಯಾಗುತ್ತದೆ; ಓರ್ವ ಮಹಾನ್ ವ್ಯಕ್ತಿ ಜೀವಮಾನದ ಸಾಧನೆಗಾಗಿ ಗಳಿಸಿದ ವಿಶ್ವಾಸ ಮತ್ತು ಸಮಾಜದ ಅಭಿವೃದ್ಧಿಗೆ ನೀಡಿದ ಅನೇಕ ಕೊಡುಗೆಗಳು ಅಂಥವರನ್ನು ಚಿರಂಜೀವಿಯಾಗಿಸುತ್ತವೆ. ಹಲವಾರು ಸಾವಿರ ಮಂದಿಗೆ ಉದ್ಯೋಗ ನೀಡಿ, ಆ ಎಲ್ಲಾ ಕುಟುಂಬಗಳು ನೆಮ್ಮದಿಯ ಜೀವನ ನಡೆಸಲು ಕಾರಣೀಭೂತರಾದ, ಬಡವರ, ಆರ್ಥಿಕವಾಗಿ ಹಿಂದುಳಿದ ಅಸಹಾಯಕರ ನೋವುಗಳಿಗೆ ಪೂರಕವಾಗಿ ಮಿಡಿದು, ಹುಟ್ಟೂರು ಮತ್ತು ಸಮಾಜದ ಏಳಿಗೆಗೆ ದುಡಿದ ವಿನಯ ಹೆಗ್ಡೆಯವರಂಥಾ ಮಹಾನುಭಾವರು ಎಂದೆಂದಿಗೂ ಸ್ಪೂರ್ತಿ ಚಿಲುಮೆ! 

ಕೈಗಾರಿಕೋದ್ಯಮಿ, ವಿದ್ಯಾರ್ಜನೆಯ ದೇಗುಲಗಳ ಸಾರಥಿ, ಶಿಕ್ಷಣ ಭೀಷ್ಮ ಇಂದು ದೈಹಿಕವಾಗಿ ನಮ್ಮನ್ನಗಲಿದ್ದರೂ ಅವರು ಹಚ್ಚಿಹೋದ ಜ್ಞಾನ ದೀವಿಗೆ ಲಕ್ಷಾಂತರ ಮನೆ-ಮನಗಳಲ್ಲಿ ಸದಾ ಶುಭ್ರವಾಗಿ, ಕಾಂತಿಯುತವಾಗಿ ಬೆಳಗುತ್ತಿರುತ್ತದೆ. ಓರ್ವ ವ್ಯಕ್ತಿ 'ಎಷ್ಟು ವರುಷ ಬದುಕಿದ್ದರು‌‌?' ಎನ್ನುವುದಕ್ಕಿಂತ 'ಎಷ್ಟು ಜನರ‌ ಬದುಕಿಗೆ ನೆರವಾದರು-ಬೆಳಕಾದರು?' ಎನ್ನುವುದು ಬಹುಮುಖ್ಯ. ಆ ದೃಷ್ಟಿಯಿಂದ ಡಾ. ಎನ್. ವಿನಯ ಹೆಗ್ಡೆಯವರು ಸಾರ್ಥಕ ಜೀವನವನ್ನು ಬಾಳಿ ತೋರಿಸಿದರು. ಅವರು ಸೃಷ್ಟಿಸಿದ ವಿದ್ಯಾ ದೇಗುಲಗಳು, ನೀರೆರೆದು ಪೋಷಿಸಿದ ಸಂಬಂಧಗಳು, ಗಳಿಸಿದ ಪ್ರೀತಿ,‌ ವಿಶ್ವಾಸ, ಗೌರವ, ಅಭಿಮಾನ ಚಿರಾಯು!

ಅವರ ನಿಧನ ಒಂದು ಯುಗ ಅಂತ್ಯವಾದ ಸಂಕೇತವಾಗಿ ಕಾಣಿಸುತ್ತದೆ. ಹೆಗ್ಡೆಯವರ ನಾಯಕತ್ವ, ನಮ್ರತೆ, ದೂರದೃಷ್ಟಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು, ಅತುಲ್ಯ, ಶಾಶ್ವತ ಮತ್ತು ಚಿರಸ್ಮರಣೀಯ. 'ಯೋಗೇನಾಂತೇ ತನುತ್ಯಜಾಮ್...' ಎನ್ನುವ ಗೀತೆಯ ಸಾರದಂತೆ ಸರ್ವವಂದ್ಯ ತನ್ನ ಪಾಲಿಗೆ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಬಾರದ ಲೋಕಕ್ಕೆ ಪಯಣಿಸಿದ್ದಾರೆ. 'ಕಾಯಕವೇ ಕೈಲಾಸ' ಎಂದು ನಂಬಿ ಬದುಕಿದ ಧೀಮಂತ-ಶ್ರೀಮಂತ ವ್ಯಕ್ತಿ-ವ್ಯಕ್ತಿತ್ವಕ್ಕೆ ಕೋಟಿ ನಮನಗಳು. ಅವರು ಹಾಕಿಕೊಟ್ಟ ಆದರ್ಶ-ಸನ್ಮಾರ್ಗದಲ್ಲಿ ಸಾಗುವುದರ ಮೂಲಕ ಅವರಿಗೆ ನಿಜಾರ್ಥದಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. 

'ನಿಟ್ಟೆ' ಒಂದು ಬೃಹತ್ ಬ್ರ್ಯಾಂಡ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲು ನಿಮ್ಮ ದೃಷ್ಟಾಲ ಕಾರಣ. ಪ್ರಿಯ ವಿನಯಣ್ಣಾ, ಹೋಗಿ ಬನ್ನಿ. ನೀವು ಶಾಶ್ವತವಾಗಿ ನಮ್ಮೆಲ್ಲರ ಹೃದಯವಾಸಿ. ಪ್ರಣಾಮಂ.

✒️ ರವೀ ಸಜಂಗದ್ದೆ

(02/01/2026ರಂದು ವಿಶ್ವವಾಣಿ ದಿನಪತ್ರಿಕೆ‌ಯಲ್ಲಿ ಪ್ರಕಟವಾದ ನುಡಿನಮನ ಬರಹ)

Saturday, 12 July 2025

'ಆಕಾಶ ದೀಪ'ವು ನೀನು, ನಿನ್ನ ಕಂಡಾಗ ಸಂತೋಷವೇನು... : ರವೀ ಸಜಂಗದ್ದೆ

 ಅದು ಇಂಗ್ಲೆಂಡಿನ ಎಡ್ಜ್'ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣ. ಭಾರತ-ಇಂಗ್ಲೆಂಡ್ ಎರಡನೆಯ ಟೆಸ್ಟ್ ಪಂದ್ಯದ ಕೊನೆಯ ದಿನ. ಭಾರತ ಗೆಲ್ಲುವ ಹುಮ್ಮಸ್ಸಿನಿಂದ ಅಂಗಣಕ್ಕಿಳಿಯಿತು. ಆ ದಿನದ ಕೊನೆಯ ಸೆಶ್ಶನ್. ಭಾರತ ಗೆಲುವಿನ ದಡದಲ್ಲಿತ್ತು. ಇಂಗ್ಲೆಂಡಿನ ಆಕಾಶದಲ್ಲಿ ಸೂರ್ಯ ಮುಳುಗಲು ಒಂದೆರಡು ಗಂಟೆಗಳು ಬಾಕಿ ಇದ್ದರೆ ಭಾರತೀಯ ಕಾಲಮಾನ ರಾತ್ರಿ 9.40. ಇಲ್ಲಿ ಸೂರ್ಯ ಮುಳುಗಿ ರಾತ್ರಿಯು ತನ್ನ ಎರಡನೆಯ ಪಾಳಿಯೆಡೆಗೆ ನಿಧಾನವಾಗಿ ಹೊರಳುತ್ತಿತ್ತು. ಬೌಲರ್ ಎಸೆದ‌ ಎಸೆತವನ್ನು ಜೋರಾಗಿ ಹೊಡೆಯಲು ಬ್ಯಾಟ್ಸ್ಮನ್ ಯತ್ನಿಸಿದಾಗ ಚೆಂಡು ಆಕಾಶದೆತ್ತರಕ್ಕೆ ಚಿಮ್ಮಿತು. ಅದನ್ನು ಹಿಡಿದು ಪಂದ್ಯ ಗೆಲ್ಲಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದವನು ಮೊದಲ ಇನ್ನಿಂಗ್ಸಿನಲ್ಲಿ ದ್ವಿಶತಕ, ಎರಡನೆಯ ಇನ್ನಿಂಗ್ಸಿನಲ್ಲಿ ಶತಕ ಗಳಿಸಿದ ಯುವ ಕಪ್ತಾನ ಶುಭ್ಮನ್ ಗಿಲ್. ಕ್ಯಾಚ್ ಹಿಡಿದು ಥೇಟ್ ಸಿಂಹದಂತೆ ಘರ್ಜಿಸಿ ಸಂಭ್ರಮಿಸಿದನು. ಪಂದ್ಯ ಗೆದ್ದು ಭಾರತದ ಸಂಭ್ರಮ ಮುಗಿಲು ಮುಟ್ಟಿತ್ತು. ಪಂದ್ಯದಲ್ಲಿ ಹತ್ತನೆಯ ವಿಕೆಟ್ ಪಡೆದ ಆ ಪೋರನೇ ಆಕಾಶ್ ದೀಪ್! ಜೀವನದ ಏರಿಳಿತಗ ನಡುವೆ, ತನ್ನ ಎಲ್ಲಾ ಪ್ರಯತ್ನಕ್ಕೆ ಫಲ ಸಿಕ್ಕಿದ ಅಂದಿನ ಕ್ಷಣದಲ್ಲಿ ಕಟ್ಟೆಯೊಡೆದ ಕಣ್ಣೀರನ್ನು ನಿಯಂತ್ರಿಸಿ ಗೆಲುವಿನ ರೂವಾರಿ ಎನಿಸಿ ನಗೆ ಬೀರಿ, ಆದಿತ್ಯವಾರದ ರಾತ್ರಿಯಲ್ಲಿ ಭಾರತದ ಪಾಲಿನ ಕ್ರಿಕೆಟ್ 'ಆಕಾಶದೀಪ'ವಾಗಿ ಪ್ರಜ್ವಲಿಸಿ ಹೊಸ ಇತಿಹಾಸ ರಚಿಸಿಯೇ ಬಿಟ್ಟನಲ್ಲ!

ಆಕಾಶ ದೀಪ್ ಮೂಲತಃ ಬಿಹಾರ ರಾಜ್ಯದ ವಾಯುವ್ಯದಲ್ಲಿರುವ ಸಾಸರಾಮ್ ಪ್ರದೇಶದ 'ಬಡ್ಡಿ' ಹೆಸರಿನ ಸಣ್ಣ ಹಳ್ಳಿಯ ಬಡ ಕುಟುಂಬದ ಹುಡುಗ. ಇತರ ತನ್ನ ವಯಸ್ಸಿನ ಹುಡುಗರಂತೆ ಇವನಿಗೂ ವಿಪರೀತ ಕ್ರಿಕೆಟ್ ಹುಚ್ಚು. ಮಹಮ್ಮದ್ ಶಮಿ ಮತ್ತು ಆಶಿಶ್ ನೆಹ್ರಾ ಬೌಲಿಂಗ್ ಶೈಲಿ ಈತನಿಗೆ ಅಚ್ಚುಮೆಚ್ಚು. ಕ್ರಿಕೆಟ್ ಎನ್ನುವ ಶಬ್ದ ಕೇಳಿದರೆ ಅಪ್ಪ ಕೆಂಡಾಮಂಡಲ! ಆಕಾಶನಿಗೆ ಅದುವೇ ಉಸಿರು. 'ಕ್ರಿಕೆಟ್ ಆಟ ನಮ್ಮಂಥ ಬಡವರಿಗೆ ಹೇಳಿದ್ದಲ್ಲಾ, ಅದೇನಿದ್ದರೂ ಶ್ರೀಮಂತರಿಗೆ. ಕ್ರಿಕೆಟ್ ಆಡಿ ಉದ್ಧಾರ ಆದವರು ತೀರಾ ಕಡಿಮೆ. ನೀನು ಕ್ರಿಕೆಟ್ ಆಡಿ ನಮ್ಮನ್ನು-ನಮ್ಮೂರನ್ನು ಉದ್ಧಾರ ಮಾಡಬೇಕಿಲ್ಲ. ಮೊದಲು ಒಂದಷ್ಟು ಕಲಿತು, ಅನಂತರ ಒಂದು ಕೆಲಸ ಹುಡುಕಿಕೊಂಡು ನಿನ್ನ ಜೀವನ ನೋಡಿಕೋ. ಕ್ರಿಕೆಟ್ ನಮಗೆ ಅನ್ನ ಹಾಕಲಾರದು' ಎಂದು ತಂದೆಯವರ ಖಡಕ್ ಆಜ್ಞೆ.

ಮನೆಯವರು ಮತ್ತು ತಂದೆಯ ಬುದ್ಧಿಮಾತಿಗೆ ಕ್ಯಾರೇ ಎನ್ನದೆ,‌ ಅವರ ವಿರೋಧದ ನಡುವೆ ಕ್ರಿಕೆಟಿನಲ್ಲಿಯೇ ಬದುಕನ್ನು ಕಟ್ಟಿಕೊಳ್ಳಲು ನಿರ್ಧರಿಸಿ ತನ್ನೂರು ಬಡ್ಡಿಯನ್ನು ತೊರೆದು ದೂರದ ಬಂಗಾಳದ ದುರ್ಗಾಪುರಕ್ಕೆ ರೈಲಿನಲ್ಲಿ ಬಂದಿಳಿದ. ಕಿಸೆ ಖಾಲಿಯಿದ್ದರೂ ತಲೆ ತುಂಬಾ ಕ್ರಿಕೆಟ್ ತುಂಬಿತ್ತು! ಅಲ್ಲಿ ಸಣ್ಣ ಕೆಲಸ ಹುಡುಕಿಕೊಂಡು, ಬಿಡುವು ಮಾಡಿಕೊಂಡು ಸ್ಥಳೀಯ ಕ್ರಿಕೆಟ್ ಸಂಸ್ಥೆಯಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಾ ಜೀವನ ಸಾಗುತ್ತಿತ್ತು. ಕಂಗಳಲ್ಲಿ ದೇಶಕ್ಕಾಗಿ ಆಡಬೇಕೆನ್ನುವ ತವಕ ಜಾಸ್ತಿಯಾಗುತ್ತಿತ್ತು.

ಊರು ಬಿಟ್ಟ‌ ಕೆಲ ತಿಂಗಳಲ್ಲಿ ಪಾರ್ಶ್ವವಾಯು ಹೊಡೆತಕ್ಕೆ ಒಳಗಾದ ತಂದೆಯವರ ಆರೋಗ್ಯ ಕ್ಷೀಣಿಸಿ ಇಹಲೋಕ ತ್ಯಜಿಸಿದ ಸುದ್ದಿ ಬೌನ್ಸರಿನಂತೆ ಬಂತು. ಈ ದುಃಖದಲ್ಲಿದ್ದಾಗಲೇ ಮನೆಯ ಆಧಾರಸ್ತಂಭವಾಗಿದ್ದ ಅಣ್ಣನೂ ಹಠಾತ್ ತೀರಿಕೊಂಡ ಮತ್ತೊಂದು ಡೆಡ್ಲಿ ಬೌನ್ಸರ್! ಆಕಾಶನಿಗೆ ಆಕಾಶವೇ ತಲೆಯ ಮೇಲೆ ಬಿದ್ದ, ಭೂಮಿ ಬಾಯ್ತೆರೆದ ಅನುಭವ. ಬದುಕು ಯಾಕೋ ತುಂಬಾ ಕಷ್ಟ ಕೊಡುತ್ತಿದೆ, ಏನೇನನ್ನೋ ಕಲಿಸುತ್ತಿದೆ. ಇದರ ಜೊತೆಗೆ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ನನ್ನೊಳಗೆ ತುಂಬುತ್ತಿದೆ ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡನು. ಅಪ್ಪ, ಅಣ್ಣ ತೀರಿಕೊಂಡ ಪರಿಣಾಮ ಮನೆಯಲ್ಲಿ ಒಂಟಿ ತಾಯಿ. ಅವಳಿಗೋಸ್ಕರ ಎಲ್ಲ ಬಿಟ್ಟು ಊರಿಗೆ ವಾಪಸಾದ. ಮೂರು ವರ್ಷ ಕ್ರಿಕೆಟ್ ಆಟವು ಅವನ ಬದುಕಿನಿಂದ 'ರಿಟೈರ್ಡ್ ಹರ್ಟ್' ಆಗಿತ್ತು!

ಹೊಂಡಗಳೇ ತುಂಬಿರುವ ರಸ್ತೆಯಲ್ಲಿ ಬ್ರೇಕಿಲ್ಲದ ವಾಹನದಂತಾಗಿದ್ದ ಬದುಕನ್ನು ಮತ್ತೆ ಹಳಿಗೆ ತರುವ ನಿರಂತರ ಪ್ರಯತ್ನ ನಡೆಯುತ್ತಿತ್ತು. ಜೀವನದ ಪ್ರಮುಖ ಗುರಿಯಾದ ಕ್ರಿಕೆಟಿನಲ್ಲಿ ಭಾರತವನ್ನು ಪ್ರತಿನಿಧಿಸಬೇಕೆನ್ನುವ ಕನಸು ಆಗೀಗ ಕಣ್ಣಮುಂದೆ ಬಂದು ಹೋಗುತ್ತಿತ್ತು. ಅದನ್ನು ನನಸಾಗಿಸಲು ದೃಢ ನಿರ್ಧಾರ‌ ಮಾಡಿಯೇ ಬಿಟ್ಟ!

'ವರುಷಗಳು ಕಳೆದು ಜೀವನ ಒಂದಷ್ಟು ಸುಧಾರಿಸಿದೆ, ಅಮ್ಮ ತನ್ನನ್ನು ತಾನು ನಿಭಾಯಿಸುವಷ್ಟು ಗಟ್ಟಿಯಾಗಿದ್ದಾಳೆ' ಎಂದೆನಿಸಿದಾಗ, ಒಂದು ಮುಂಜಾನೆ ಆಕೆಯ ಕಾಲಿಗೆರಗಿ 'ನನ್ನನ್ನು ನೀನು ಮುಂದೊಂದು ದಿನ ಟೀವಿಯಲ್ಲಿ ಕಾಣುವಿಯಂತೆ, ಆಗ ನಿನಗೊಂದು ಹೊಸತೊಂದು ಟೀವಿ ತಂದು ಕೊಡುವೆ. ಆಶೀರ್ವಾದ ಮಾಡು' ಎಂದು ಹೇಳಿ ಅಮ್ಮನ ಉತ್ತರಕ್ಕೂ ಕಾಯದೆ ಬಡ್ಡಿಯಿಂದ ದುರ್ಗಾಪುರ ನಗರಕ್ಕೆ ಬಂದನು. ತನ್ನ 'ರೋಲ್ ಮಾಡೆಲ್' ಮಹಮ್ಮದ್ ಶಮಿ ಉತ್ತರ ಪ್ರದೇಶದ ಅಮ್ರೋಹಾದಿಂದ ಕೋಲ್ಕತ್ತಾಗೆ ಬಂದಿದ್ದು ನೆನಪು ಮಾಡಿಕೊಳ್ಳುತ್ತಾ ತಾನೂ ಮಯೂರಾಕ್ಷಿ ಎಕ್ಸ್'ಪ್ರೆಸ್ ರೈಲನ್ನೇರಿ ದುರ್ಗಾಪುರದಿಂದ ಕೊಲ್ಕತ್ತಾದಲ್ಲಿ ಬಂದಿಳಿದಾಗ ಕೆಲವೇ ನೂರರ ನೋಟುಗಳು ಮತ್ತು ಕ್ರಿಕೆಟ್ ಆಟದ ಮಹತ್ವಾಕಾಂಕ್ಷೆ ಮಾತ್ರ ಆಕಾಶನಲ್ಲಿತ್ತು. ಅಲ್ಲಿ ಜೀವನದ ಅತಿ ಕಷ್ಟಗಳನ್ನು ಎದುರಿಸುತ್ತಾ, ಜೀವನ ತುಂಬಾ ಕ್ಲಿಷ್ಟಕರವಾಗಿ ಸಾಗುತ್ತಿತ್ತು. ಇದೆಲ್ಲ ಬಿಟ್ಟು ಊರಿಗೆ ವಾಪಸಾಗುವ‌ ಯೋಚನೆ ಬಂದಾಗೆಲ್ಲ 'ಅದು ಏನಾದರೂ ಆಗಲಿ. ವಾಪಸಾಗುವ ಮಾತೇ ಇಲ್ಲ, ಇಲ್ಲೇ ಬದುಕು ಮತ್ತು ಕ್ರಿಕೆಟ್ ಕನಸು ನನಸಾಗಿಸುವೆ' ಎಂದು ಪ್ರತಿದಿನ ತನಗೆ ತಾನೇ ಹೇಳಿಕೊಂಡು ಆತ್ಮವಿಶ್ವಾಸ ಗಟ್ಟಿ ಮಾಡುತ್ತಿದ್ದನು. ಅಲ್ಲೇ ಒಂದು ಸಣ್ಣ ರೂಮು ಬಾಡಿಗೆಗೆ ಪಡೆದು ಒಂದಷ್ಟು ಕೆಲಸ ಮಾಡಿಕೊಂಡು, ಟೆನಿಸ್ ಬಾಲ್ ಪಂದ್ಯಾವಳಿಗಳಲ್ಲಿ ಆಡಿ ಒಂದಷ್ಟು ದುಡ್ಡು ಸಂಪಾದಿಸಿ ಜೀವನ ಕುಂಟುತ್ತಾ ಸಾಗುತ್ತಿತ್ತು.‌ ಸ್ಥಳೀಯ ಕ್ರಿಕೆಟ್ ಸಂಸ್ಥೆಯಲ್ಲಿ ದಿನವೂ ಬೌಲಿಂಗ್ ಪ್ರಾಕ್ಟೀಸ್ ಜಾರಿಯಲ್ಲಿಟ್ಟು ಹಗಲು ರಾತ್ರಿ ಶ್ರಮ ಪಡುತ್ತಿದ್ದನು.

ಈ ನಡುವೆ ಈತನ ಪ್ರತಿಭೆ ನೋಡಿದ ಅದ್ಯಾರೋ ಮಹಾನುಭಾವರು, 23 ವರ್ಷಕ್ಕಿಂತ ಕಿರಿಯರ ಬಂಗಾಳ ತಂಡದಲ್ಲಿ ಆಡಲು ಅವಕಾಶ ಕೊಟ್ಟರು, ಭಾಗ್ಯದ ಮೊದಲ ಬಾಗಿಲು ನಿಧಾನವಾಗಿ ತೆರೆಯಿತು! ಅಂದೇ ಸಾಲ ಮಾಡಿ, ಗೆಳೆಯರಲ್ಲಿ ಹೇಳಿ ಸಣ್ಣದೊಂದು ಟೀವಿಯನ್ನು ಊರಿನ ಮನೆಯಲ್ಲಿ ಅಮ್ಮನಿಗಾಗಿ ಖರೀದಿ ಮಾಡಿದ. ಮಗನನ್ನು ಟೀವಿಯಲ್ಲಿ ನೋಡಿ ಅಮ್ಮನ ಕಣ್ಣು-ಹೃದಯ ತುಂಬಿ ಬಂತು! ಕಠಿಣ ಪರಿಶ್ರಮ ಮತ್ತು ಒಳ್ಳೆಯ ಪ್ರದರ್ಶನದ ಫಲವಾಗಿ ಬಂಗಾಳ ರಣಜಿ ತಂಡದಲ್ಲಿ ಸ್ಥಾನ ದೊರಕಿತು. ಒಂದೆರಡು ಸ್ಥಿರ ಪ್ರದರ್ಶನಗಳ ಪರಿಣಾಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಆಟಗಾರನಾಗಿ ಭಡ್ತಿ ಸಿಕ್ಕಿತು. ಮನೆಯಲ್ಲೀಗ ದೊಡ್ಡ ಪರದೆಯ ಎಲ್ಇಡಿ ಟೀವಿ ಬಂತು! ದೇಶಕ್ಕೆ ಆಡುವ ತುಡಿತ ಮತ್ತೂ ಜಾಸ್ತಿಯಾಯಿತು.

ಆ ದಿನ ಅದೃಷ್ಟದ ಬಾಗಿಲು ತೆರೆದೇ ಬಿಟ್ಟಿತು ನೋಡಿ! 2024ರಲ್ಲಿ ರಾಂಚಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ಭಾರತದ ಕ್ಯಾಪ್ ಧರಿಸಿ ಆಕಾಶ್ ದೀಪ್ ಮೈದಾನಕ್ಕಿಳಿದ. ವಿಐಪಿ ಗ್ಯಾಲರಿಯಲ್ಲಿ ಕುಳಿತು ಜಗನ್ನಾಥನನ್ನು ಸ್ಮರಿಸುತ್ತಾ ಆತನ ತಾಯಿ ಮಗನ ಆಟ ನೋಡುತ್ತಾ ಆನಂದದಿಂದ ಕಣ್ಣೀರಾದರು. ಒಂದು ಪಕ್ವ ಅವಕಾಶಕ್ಕಾಗಿ ಕಾದು ಕುಳಿತಿದ್ದವನು ಅವಕಾಶ ಸಿಕ್ಕಾಕ್ಷಣ ಹಸಿದ ಹೆಬ್ಬುಲಿಯಂತಾಗಿ ಉತ್ತಮ ಪ್ರದರ್ಶನ ನೀಡತೊಡಗಿದನು. ಟೆನಿಸ್ ಬಾಲ್ ಆಡುತ್ತಿದ್ದ ಆಕಾಶ್ ದೀಪ್ ಅಂತಾರಾಷ್ಟ್ರೀಯ ಆಟಗಾರನಾಗಿ ಗುರುತಿಸಿಕೊಂಡನು. ಇದಲ್ಲವೇ ಸಾಧನೆ!?

ಈಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಜಾಗ ಸಿಗದೇ ಬೆಂಚು ಬಿಸಿ ಮಾಡಿದನು. ಎರಡನೆಯ ಟೆಸ್ಟ್ ಪಂದ್ಯದಿಂದ ಭುಮ್ರಾ ಹೊರಗುಳಿದ ಹಿನ್ನೆಲೆಯಲ್ಲಿ ಛಾನ್ಸ್ ಸಿಕ್ಕಿತು. ಎದುರಾಳಿ ತಂಡದ ಬ್ಯಾಟಿಂಗ್ ಬುಡವನ್ನು ಎರಡೂ ಇನ್ನಿಂಗ್ಸ್ ಗಳಲ್ಲಿ ಅಲುಗಾಡಿಸಿ, ಪಂದ್ಯವೊಂದರಲ್ಲಿ ಹತ್ತು ವಿಕೆಟ್ ಗಳಿಸಿ ಪಂದ್ಯದ ಗೆಲುವಿನ ರೂವಾರಿ ಬೌಲರ್ ಎನಿಸಿಕೊಂಡನು. 'ಎಡ್ಜ್'ಬಾಸ್ಟನ್ ಕ್ರೀಡಾಂಗಣದಲ್ಲಿ ಟೆಸ್ಟ್ ಗೆದ್ದ ಏಪ್ಯಾದ ಮೊದಲ ತಂಡ' ಎನ್ನುವ ಗರಿಮೆಗೆ ಭಾರತ ಪ್ರಾಪ್ತವಾಗುವುದರಲ್ಲಿ ಬಹುಪಾಲು ಕೊಡುಗೆ ನೀಡಿದವನು ಈ ಆಕಾಶ್ ದೀಪ್. ಪಂದ್ಯ ಗೆದ್ದ ಸ್ಮರಣಾರ್ಥವಾಗಿ ಒಂದು ವಿಕೆಟ್ ಮತ್ತು ಬಾಲನ್ನು ಕೈಯಲ್ಲಿ ಹಿಡಿದುಕೊಂಡು ಮೈದಾನದಿಂದ ಪೆವಿಲಿಯನ್'ನತ್ತ ಸಾಗುವಾಗ ಒಬ್ಬ ಶ್ರೇಷ್ಠ ಬೌಲರ್, ಹೋರಾಟಗಾರ ಕಾಣುತ್ತಿದ್ದ. What a journey!

ತಾನು ಪಡೆದ ಹತ್ತು ವಿಕೆಟ್ ಗೊಂಚಲಿನ ಸಾಧನೆಯನ್ನು ಕ್ಯಾನ್ಸರಿನಿಂದ ಬಳಲುತ್ತಿರುವ ತನ್ನ ಸಹೋದರಿಗೆ ಅರ್ಪಿಸುವುದರ ಮೂಲಕ ಮತ್ತೂ‌ ಹೆಚ್ಚಿನ ಗೌರವ, ಅಭಿಮಾನ ಸಂಪಾದಿಸಿಕೊಂಡನು. ಮಗನ ಈ ಸಾಧನೆ ನೋಡಿ, 'ಕ್ರಿಕೆಟ್ ಆಡಬೇಡ' ಎಂದು ಅಂದು ಸಿಟ್ಟಾಗಿದ್ದ ಅಪ್ಪ ಖಂಡಿತಾ ಅವರಿರುವಲ್ಲಿಂದಲೇ ಹರಸಿ ಸಂತಸ ಪಡುತ್ತಿರಬಹುದು. 'ಮಹಮ್ಮದ್ ಶಮಿ, ಭುಮ್ರಾ ನಂತರ ಭಾರತದ‌‌ ವಿಶ್ವಾಸಾರ್ಹ,‌ ಯಾವುದೇ ಸಂದರ್ಭದಲ್ಲೂ ವಿಕೆಟ್ ತೆಗೆಯುವ ಸಾಮರ್ಥ್ಯ ಇರುವ ವೇಗದ ಬೌಲರ್ ಯಾರು?' ಎನ್ನುವ ಪ್ರಶ್ನೆಗಳಿಗೆ ತನ್ನ ಸ್ಥಿರ ಪ್ರದರ್ಶನದ‌ ಮೂಲಕ ಉತ್ತರ ಕೊಟ್ಟಿದ್ದಾನೆ ಆಕಾಶ್ ದೀಪ್. ಈ ಸರಣಿಯ ಉಳಿದ ಮೂರು ಪಂದ್ಯಗಳಲ್ಲಿ ಅವಕಾಶ ಪಡೆದು ಆತ ಉತ್ತಮ ಪ್ರದರ್ಶನ ನೀಡಿ ಭಾರತ ಟೆಸ್ಟ್ ಸರಣಿ ಗೆಲ್ಲಲಿ. ಮುಂದಿನ ಕನಿಷ್ಠ ಒಂದು ದಶಕ ಆಕಾಶ್ ದೀಪ್ ತನ್ನ ಸಾಮರ್ಥ್ಯ ಮತ್ತು ಶ್ರೇಷ್ಠ ಪ್ರದರ್ಶನದಿಂದ ಮತ್ತೂ ಉತ್ತುಂಗಕ್ಕೇರಲಿ. ಭಾರತದ ಟೆಸ್ಟ್ ಕ್ರಿಕೆಟಿನಲ್ಲಿ 'ಭರವಸೆಯ ನಾಳೆಗಳು ನಮದೆನಿಸಿವೆ'.

8-7-2025ರ ವಿಶ್ವವಾಣಿಯಲ್ಲಿ ರವೀ ಸಜಂಗದ್ದೆ ಅಂಕಣ ಬರಹ

https://epaper.vishwavani.news/share/a7e374cb-6fb5-427d-8f04-ccdc1c7f84fd