Saturday 20 June 2015

ಜನಸೇವೆಗೆ ರಾಜಕೀಯವೇ ಬೇಕಾಗಿಲ್ಲ, ಹೀಗೂ ಮಾಡಬಹುದು!

ಬಿಹಾರ, ಪಾಟ್ನಾ!
ಹೀಗೆಂದ ತಕ್ಷಣ ನಮ್ಮ ಕಣ್ಮುಂದೆ ಲಾಲೂ ಪ್ರಸಾದ್ ಯಾದವ್, ರಾಬ್ಡಿದೇವಿಯ ಚಿತ್ರಗಳು ಬಂದು ನಿಲ್ಲುತ್ತವೆ. ಅದರ ಹಿಂದೆಯೇ, ಬಿಹಾರದ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿರುವ ಕಳ್ಳರು, ಸುಳ್ಳರು, ಕೊಲೆಗಡುಕರು, ಕ್ರಿಮಿನಲ್‌ಗಳ ಮುಖಗಳೂ ಮೆರವಣಿಗೆ ಹೊರಡುತ್ತವೆ. ಇದೇ ಕಾರಣಕ್ಕೆ ಬಿಹಾರವನ್ನು ‘ಗೂಂಡಾರಾಜ್ಯ’ ಎಂದು ಕರೆಯುವ ಪರಿಪಾಠವೂ ಇದೆ. ಬಿಹಾರ ಅಂದ್ರೆ ಎಲ್ಲ ಅಕ್ರಮ, ಅವ್ಯವಹಾರಗಳಿಗೆ ಪರ್ಯಾಯ ಪದವೆನ್ನುವಂತಾಗಿದೆ. ಆದರೆ, ಈಗ ಅದೇ ಪಾಟ್ನಾದಿಂದ ದೇವರಂಥ ವ್ಯಕ್ತಿಯೊಬ್ಬ ಎದ್ದು ಬಂದಿದ್ದಾನೆ.
ಅವನ ಹೆಸರು ಆನಂದಕುಮಾರ್.
ಇವತ್ತು ಪಾಟ್ನಾದ ಬಸ್‌ನಿಲ್ದಾಣ ಅಥವಾ ರೈಲು ನಿಲ್ದಾಣದಲ್ಲಿ ನಿಂತು- ನಾಲ್ಕು ಮಂದಿಯ ಮುಂದೆ ಆನಂದಕುಮಾರ್ ಅಂದು ನೋಡಿ; ಜನ ಕಣ್ಣರಳಿಸುತ್ತಾರೆ. ನಿಂತಲ್ಲೇ ಕೈಮುಗಿಯುತ್ತಾರೆ. ‘ಓಹ್, ನಿಮ್ಗೆ ಮೇಷ್ಟ್ರು ಬೇಕಿತ್ತಾ’ ಎನ್ನುತ್ತಾರೆ. ಮರುಕ್ಷಣದಲ್ಲೇ ಈ ಆನಂದಕುಮಾರ್ ಅವರ ವಿಳಾಸವನ್ನು ಹೇಳುತ್ತಾರೆ. ಆನಂತರವೂ ಒಂದೆರಡು ನಿಮಿಷ ಅಲ್ಲಿಯೇ ನಿಂತರೆ- ಆನಂದಕುಮಾರ್ ಅವರನ್ನು ಹೊಗಳುತ್ತ ಹೊಗಳುತ್ತಾ ಮೈಮರೆಯುತ್ತಾರೆ.
ಸ್ವಾರಸ್ಯವೇನೆಂದರೆ- ಹೀಗೆ ಎಲ್ಲರಿಂದಲೂ ಹೊಗಳಿಸಿಕೊಳ್ಳುವ ಆನಂದಕುಮಾರ್ ರಾಜಕಾರಣಿಯಲ್ಲ. ಹಣವಂತನಲ್ಲ. ಯೋಗ ಗುರುವಲ್ಲ. ಚಿತ್ರನಟನಲ್ಲ. ರಾಬ್ಡಿದೇವಿಯ ಮಾವನಲ್ಲ. ಲಾಲೂ ಪ್ರಸಾದನಿಗೂ ಅವನಿಗೂ ಸಂಬಂಧವಿಲ್ಲ. ನಿತೀಶ್‌ಕುಮಾರನ ನೆಂಟನೂ ಅಲ್ಲ.  ಅಸಲಿಗೆ, ರಾಜಕೀಯದ ನೆರಳನ್ನು ಆತ ತನ್ನೆಡೆಗೆ ಬಿಟ್ಟುಕೊಂಡವನಲ್ಲ. ಆತ ಪೊಲೀಸ್ ಅಧಿಕಾರಿಯಲ್ಲ, ಕರಾಟೆ ಮಾಸ್ಟರ್ ಕೂಡ ಅಲ್ಲ. ಜ್ಯೋತಿಷಿಯೂ ಅಲ್ಲ. ಬದಲಿಗೆ, ಒಬ್ಬ ಟ್ಯೂಶನ್ ಮಾಸ್ಟರ್!
ನಂಬಿ ಮಹಾರಾಯರೆ, ಈ ಟ್ಯೂಶನ್ ಮಾಸ್ಟರ್, ಇವತ್ತು ಬಿಹಾರದಲ್ಲಿ ದೊಡ್ಡದೊಂದು ಕ್ರಾಂತಿ ಉಂಟುಮಾಡಿದ್ದಾನೆ. ವಿದ್ಯಾರ್ಥಿಗಳ ಪಾಲಿಗೆ ರೋಲ್‌ಮಾಡೆಲ್ ಆಗಿದ್ದಾನೆ. ತೀರಾ ಕಡಿಮೆ ಹಣ ಪಡೆದು ಎಲ್ಲರಿಗೂ ಟ್ಯೂಶನ್ ಮಾಡುತ್ತ ಶೈಕ್ಷಣಿಕ ಕ್ರಾಂತಿಯ ಹರಿಕಾರ ಎನಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ಸೂಪರ್-೩೦ ಎಂಬ ಖಾಸಗಿ ಟ್ಯೂಶನ್ ಕೇಂದ್ರವನ್ನೂ ಆರಂಭಿಸಿದ್ದಾನೆ. ಆ ಕೇಂದ್ರದ ಮುಂದೆ ಆನೆಗಾತ್ರದ ಅಕ್ಷರದಲ್ಲಿ- ’ಇಲ್ಲಿ ಬಡವರ ಮಕ್ಕ ಳಿಗೆ ಉಚಿತವಾಗಿ ಪಾಠ ಹೇಳಲಾಗುವುದು’ ಎಂದು ಬೋರ್ಡ್ ಹಾಕಿದ್ದಾನೆ. ಅಷ್ಟೇ ಅಲ್ಲ, ನುಡಿದಂತೆಯೇ ನಡೆದುಕೊಂಡಿದ್ದಾನೆ.
ಈತನ ಬಳಿ ಟ್ಯೂಶನ್ ಹೇಳಿಸಿಕೊಂಡ ಹುಡುಗರು- ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯವರು ನಡೆಸುವ ಐಐಟಿ-ಜೆಇಇ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಪಡೆದಿದ್ದಾರೆ. ಕೆಲವರು ಐಎಎಸ್‌ನಲ್ಲೂ ಪಾಸಾಗಿದ್ದಾರೆ. ಒಂದಷ್ಟು ಮಂದಿ ಬ್ಯಾಂಕ್ ಪರೀಕ್ಷೆ ಬರೆದು ಮ್ಯಾನೇಜರ್‌ಗಳಾಗಿದ್ದಾರೆ. ಹೀಗೆ, ದೊಡ್ಡ ದೊಡ್ಡ ಸ್ಥಾನ ತಲುಪಿಕೊಂಡವರೆಲ್ಲ ಕ್ಷಣಕ್ಷಣಕ್ಕೂ ತಮ್ಮ ಗುರು ಆನಂದಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಗುರುಗಳಿಗೆ ಜೈ ಹೋ ಎಂದು ಸಂತೋಷದಿಂದ ಹೇಳಿದ್ದಾರೆ.
ಅಲ್ಲ, ಮೊನ್ನೆಮೊನ್ನೆಯವರೆಗೂ ರಕ್ತಸಿಕ್ತ ರಾಜಕಾರಣವನ್ನೇ ಉಸಿರಾಡುತ್ತಿದ್ದ ನಾಡು ಬಿಹಾರ. ಅಂಥ ಊರಿನಲ್ಲಿ ಆನಂದಕುಮಾರ್ ಥರದ ಜನ ಎದ್ದುನಿಲ್ಲಲು ಕಾರಣವಾದದ್ದು ಏನು? ಇಷ್ಟಕ್ಕೂ ಈ ಹುಡುಗ ಯಾರು? ಅವನ ಹಿನ್ನೆಲೆ ಏನು? ಅವನು ಟ್ಯೂಶನ್ ತರಗತಿ ಆರಂಭಿಸಲು ಕಾರಣವಾದರೂ ಏನು? ತೀರಾ ಬಡವರ ಮಕ್ಕಳಿಗೇ ಪಾಠ ಹೇಳುತ್ತೇನೆ ಎಂಬ ಆದರ್ಶದ ಹಂಬಲವಾದರೂ ಆ ಹುಡುಗನ ತಲೆಗೇರಿದ್ದೇಕೆ?
ಇಂಥ ಎಲ್ಲ ಕುತೂಹಲಗಳಿಗೂ ಇಲ್ಲಿ ಸ್ವಾರಸ್ಯಕರ ಉತ್ತರವಿದೆ.
ಈ ಆನಂದಕುಮಾರ್, ಬಿಹಾರದ ಒಂದು ಸಾಮಾನ್ಯ ಕುಟುಂಬದಿಂದ ಬಂದವನು. ಅವನ ತಂದೆ ಅಂಚೆ ಕಚೇರಿಯಲ್ಲಿ ಸೆಕೆಂಡ್ ಡಿವಿಜನ್ ಕ್ಲರ್ಕ್ ಆಗಿದ್ದ. ಬರುತ್ತಿದ್ದ ಸಂಬಳ ಹೊಟ್ಟೆ- ಬಟ್ಟೆಗೇ ಆಗಿಹೋಗುತ್ತಿತ್ತು. ಹಾಗಾಗಿ ಮಕ್ಕಳನ್ನು ಟ್ಯೂಶನ್‌ಗೆ ಕಳುಹಿಸುವ ಯೋಚನೆಯನ್ನೇ ಆನಂದ್‌ಕುಮಾರನ ತಂದೆ ಮಾಡಲಿಲ್ಲ. ಈ ಹುಡುಗ ಆನಂದ್, ಹಿಂದಿ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ. ಮನೆಯಲ್ಲಿ ಕಡುಬಡತನವಿತ್ತು ನಿಜ. ಆದರೆ, ಅದು ಈ ಹುಡುಗನ eನದಾಹಕ್ಕೆ ಅಡ್ಡಿಯಾಗಲಿಲ್ಲ. ಚಿಕ್ಕಂದಿನಲ್ಲಿಯೇ ಗಣಿತದತ್ತ ಆಕರ್ಷಿತನಾದ ಆನಂದಕುಮಾರ್, ಹೈಸ್ಕೂಲಿಗೆ ಬರುವ ವೇಳೆಗೆ ಕಾಲೇಜು ತರಗತಿಗಳ ಸಮಸ್ಯೆಗಳನ್ನೆಲ್ಲ ಬಿಡಿಸುವಷ್ಟು ಪ್ರಾವೀಣ್ಯ ಪಡೆದ. ಅಷ್ಟಕ್ಕೆ ಸುಮ್ಮನಾಗದೆ, ಗಣಿತ ಲೋಕದ ಪ್ರೊಫೆಸರ್‌ಗಳಿಗೇ ಸವಾಲು ಹಾಕುವಂತಿದ್ದ ಅವೆಷ್ಟೋ ಸಮಸ್ಯೆಗಳಿಗೆ ಉತ್ತರ ಕಂಡುಹಿಡಿದ. ಅವುಗಳನ್ನು ಇಂಗ್ಲೆಂಡಿನ ಮ್ಯಾಥಮೆಟಿಕಲ್ ಸ್ಪೆಕ್ಟ್ರಂ ಮತ್ತು ದಿ ಮ್ಯಾಥಮೆಟಿಕಲ್ ಗೆಜೆಟ್ ಪತ್ರಿಕೆಗಳಿಗೆ ಕಳಿಸಿಕೊಟ್ಟ.
ದಶಕಗಳ ಕಾಲದಿಂದಲೂ ಗಣಿತದ ಪ್ರೊಫೆಸರ್‌ಗಳಿಗೆ ಅರ್ಥವೇ ಆಗದಿದ್ದ ಸಮಸ್ಯೆಗಳನ್ನು, ಇನ್ನೂ ಮೀಸೆ ಚಿಗುರದ ಭಾರತದ ಹೈದನೊಬ್ಬ ಪರಿಹಾರ ಹುಡುಕಿದ್ದು ಕಂಡು ಅಮೆರಿಕ, ಇಂಗ್ಲೆಂಡಿನ ಪಂಡಿತರೆಲ್ಲ ಖುಷಿಯಾದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಈ ಹುಡುಗನಿಗೆ ಪ್ರವೇಶ ನೀಡಲೂ ಮುಂದಾಯಿತು. ಇನ್ನು ಕೆಲವೇ ವರ್ಷಗಳಲ್ಲಿ ನಾನೂ ಒಬ್ಬ ಗಣಿತದ ಪ್ರೊಫೆಸರ್ ಆಗುತ್ತೇನೆ ಎಂಬ ಖುಷಿಯಲ್ಲಿ ಈ ಆನಂದಕುಮಾರ್ ಪಾಸ್‌ಪೋರ್ಟ್, ವೀಸಾ ಮಾಡಿಸಿಕೊಳ್ಳಲು ಓಡಾಡತೊಡಗಿದ.
ಅಷ್ಟರಲ್ಲಿ ಆಗಬಾರದ ಅನಾಹುತವೊಂದು ಆಗಿಹೋಯಿತು. ಅದೊಂದು ದಿನ, ಕಚೇರಿಯಿಂದ ಮನೆಗೆ ಬಂದ ಆನಂದ್‌ಕುಮಾರನ ತಂದೆ, ಯಾಕೋ ಎದೆನೋವು ಎಂದು ಕುಸಿದು ಕೂತವರು ಮತ್ತೆ ಮೇಲೇಳಲಿಲ್ಲ!
ಅದುವರೆಗೂ ಕುಟುಂಬ ನಿರ್ವಹಣೆಗೆ ಆಧಾರವಾಗಿದ್ದುದೇ ತಂದೆಯ ಸಂಬಳ. ಅದೇ ಇಲ್ಲವೆಂದಮೇಲೆ, ಬದುಕಲು ಏನಾ ದರೂ ಮಾಡಲೇಬೇಕಿತ್ತು. ಈ ಸಂದರ್ಭದಲ್ಲಿ ಆನಂದಕುಮಾರ್, ಅನಿವಾರ್ಯವಾಗಿ ತನ್ನ ಉನ್ನತ ವ್ಯಾಸಂಗದ ಕನಸನ್ನು ಕೈಬಿಟ್ಟ. ಆನಂದ್‌ನ ತಾಯಿ, ಜೀವನ ನಿರ್ವಹಣೆಗೆಂದು ಹಪ್ಪಳ ತಯಾರಿಕೆಗೆ ನಿಂತಳು. ಬೆಳಗಿನಿಂದಲೂ ಮನೆಯಲ್ಲಿದ್ದುಕೊಂಡೇ ಗಣಿತದ ಸಮಸ್ಯೆಗಳನ್ನು ಬಿಡಿಸುತ್ತ, ಹೊಸ ಹೊಸ ಥಿಯರಿಗಳನ್ನು ಸೃಷ್ಟಿಸುತ್ತ ಕಾಲ ಕಳೆಯುತ್ತಿದ್ದ. ಸಂಜೆಯಾಗುತ್ತಿದ್ದಂತೆಯೇ ಮನೆಮನೆಯ ಬಾಗಿಲು ತಟ್ಟಿ ಹಪ್ಪಳ ಮಾರುತ್ತಿದ್ದ. ಹೀಗಿದ್ದಾಗಲೇ, ಹೀಗೆ ಮನೆಮನೆಗೂ ಹೋಗಿ ಹಪ್ಪಳ ಮಾರುವ ಬದಲು ಖಾಸಗಿಯಾಗಿ ಯಾಕೆ ಟ್ಯೂಶನ್ ಹೇಳಬಾರದು? ಹೇಗಿದ್ರೂ ನಿಂಗೆ ಗಣಿತ ಚೆನ್ನಾಗಿ ಗೊತ್ತಿದೆಯಲ್ಲ? ಅದೇ ವಿಷಯವನ್ನು ಯಾಕೆ ಹೇಳಿಕೊಡಬಾರದು ಎಂದು ಹಿತೈಷಿಯೊಬ್ಬರು ಸಲಹೆ ಮಾಡಿದರು. ಆಗ ಈ ಆನಂದಕುಮಾರ್‌ನ ವಯಸ್ಸೆಷ್ಟು ಗೊತ್ತೆ? ಬರೀ ೨೨ ವರ್ಷ. ಅಂದಹಾಗೆ, ಇದು 1995ರ ಮಾತು!
ಒಂದೆರಡು ದಿನ ಬಿಟ್ಟು ಯೋಚಿಸಿದಾಗ- ಹೌದಲ್ವಾ? ನಾನು ಹಾಗೇಕೆ ಮಾಡಬಾರದು ಎಂದು ಆನಂದ್‌ಕುಮಾರನಿಗೂ ಅನಿಸಿತು. ತಕ್ಷಣವೇ ೫೦೦ ರೂ. ಬಾಡಿಗೆಗೆ ಒಂದು ಪುಟ್ಟ ರೂಮ್ ಪಡೆದು ಅಲ್ಲಿ ಟ್ಯೂಶನ್ ಆರಂಭಿಸಿಯೇ ಬಿಟ್ಟ. ಗಣಿತದ ಮೇಲಿನ ಪ್ರೀತಿಯಿಂದ ತನ್ನ ಟ್ಯೂಶನ್ ಕೇಂದ್ರಕ್ಕೆ ಪ್ರಸಿದ್ಧ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಹೆಸರಿನಲ್ಲಿ- ‘ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮೆಟಿಕ್ಸ್’ ಎಂದು ಹೆಸರಿಟ್ಟ.
ಮೊದಲ ವರ್ಷ ಟ್ಯೂಶನ್‌ಗೆಂದು ಬಂದವರು ಇಬ್ಬರೇ ಇಬ್ಬರು. ಆ ವರ್ಷ ಅವರಿಬ್ಬರೂ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದರು. ಮರುವರ್ಷ, ಟ್ಯೂಶನ್‌ಗೆ ಬಂದವರ ಸಂಖ್ಯೆ ೨೫ ದಾಟಿತು. ಹಾಗೆ ಪಾಠ ಹೇಳಿಸಿಕೊಂಡವರೆಲ್ಲ ನೂರಕ್ಕೆ ತೊಂಬತ್ತಕ್ಕೂ ಹೆಚ್ಚು ಅಂಕ ಪಡೆದರು. ಪರಿಣಾಮ, ಮೂರು ವರ್ಷ ತುಂಬು ವುದರೊಳಗೆ, ಆನಂದಕುಮಾರ್ ಬಳಿ ಟ್ಯೂಶನ್‌ಗೆ ಬಂದವರ ಸಂಖ್ಯೆ 500ನ್ನು ದಾಟಿತು.
ಒಂದು ವರ್ಷ ಟ್ಯೂಶನ್ ಹೇಳಿಸಿಕೊಳ್ಳಲು 1500 ರೂ. ಶುಲ್ಕ ಎಂದು ಈ ವೇಳೆಗೆ ಆನಂದಕುಮಾರ್ ಪ್ರಕಟಿಸಿದ್ದ. ಅಷ್ಟು ದುಡ್ಡು ಕೊಡಲು ವಿದ್ಯಾರ್ಥಿಗಳೂ ಸಿದ್ಧರಾಗಿದ್ದರು. ಹೀಗಿದ್ದಾಗಲೇ, ಅದೊಂದು ದಿನ ಆನಂದ್ ಬಳಿಗೆ ಬಂದ ಒಬ್ಬ ಹುಡುಗ- ‘ಸಾರ್, ನಾನು ತುಂಬಾ ಬಡವರ ಮನೆಯ ಹುಡುಗ. ನನಗೆ ಓದುವ ಆಸೆಯಿದೆ. ದೊಡ್ಡ ಅಧಿಕಾರಿ ಆಗಬೇಕೆಂಬ ಹಂಬಲವಿದೆ. ಗಣಿತದಲ್ಲಿ ತುಂಬಾ ಆಸಕ್ತಿಯಿದೆ. ಆದರೆ, ಟ್ಯೂಶನ್‌ಗೆ ಕೊಡುವಷ್ಟು ಹಣವಿಲ್ಲ’ ಎಂದನಂತೆ.
‘ಆ ಹುಡುಗನ ಮಾತು ಕೇಳಿ ತುಂಬಾ ಬೇಸರವಾಯಿತು. ನನ್ನ ತಂದೆ ಆಕಸ್ಮಿಕವಾಗಿ ಸತ್ತುಹೋದಾಗ ನಾನು ಎದುರಿಸಿದ ಪರಿಸ್ಥಿತಿ ನೆನಪಾಯಿತು. ತುಂಬಾ ಬಡಕುಟುಂಬದಿಂದ ಬಂದ ಮೂವತ್ತು ಮಂದಿಗೆ ಉಚಿತವಾಗಿ ಊಟ, ವಸತಿ, ಟ್ಯೂಶನ್ ಹೇಳುವ ನಿರ್ಧಾರಕ್ಕೆ ನಾನು ಬಂದದ್ದೇ ಆಗ. ಈ ವಿಷಯವನ್ನು ಅಮ್ಮನಿಗೆ ಹೇಳಿದಾಗ- ‘ನಾನು ಆ ಮಕ್ಕಳಿಗೆ ಅಡುಗೆ ಮಾಡಿಕೊಡ್ತೇನೆ ಕಂದಾ’ ಎಂದಳು ಅಮ್ಮ. ಆ ವಿದ್ಯಾರ್ಥಿಗಳ ವಸತಿ ವ್ಯವಸ್ಥೆಯನ್ನು ನನಗೆ ಬಿಡು, ಆ ಜವಾಬ್ದಾರಿಯನ್ನು ನಾನು ತಗೋತೇನೆ ಎಂದು ವೃತ್ತಿಯಿಂದ ಸಂಗೀತಗಾರನಾಗಿರುವ ನಮ್ಮ ಅಣ್ಣ ಪ್ರಣವ್‌ಕುಮಾರ್ ಹೇಳಿದ. ಈ ಇಬ್ಬರ ಬೆಂಬಲದಿಂದ ನನ್ನ ಕೆಲಸ ಹಗುರಾಯಿತು. ಹೀಗೆ ಶುರುವಾದ ತರಗತಿಗೆ ಸೂಪರ್-30 ಎಂಬ ಹೆಸರು ಕೊಟ್ಟೆ ಎನ್ನುತ್ತಾನೆ ಆನಂದಕುಮಾರ್.
ನೀವು ಪಾಠ ಹೇಳುವುದರಲ್ಲಿ ಅಂಥದೇನಿದೆ ವಿಶೇಷ? ನಿಮ್ಮಲ್ಲಿ ಕಲಿತವರೆಲ್ಲ ಗಣಿತದಲ್ಲಿ ಪಂಡಿತರೇ ಆಗಿಬಿಡ್ತಾರಲ್ಲ? ಈ ಪವಾಡ ಹೇಗೆ ನಡೆಯುತ್ತೆ ಎಂದು ಪ್ರಶ್ನಿಸಿದರೆ ಆನಂದಕುಮಾರ್ ಹೇಳುವು ದಿಷ್ಟು- ‘ಗಣಿತ ಎಂದರೆ, ಹೆಚ್ಚುಕಮ್ಮಿ ಎಲ್ಲ ವಿದ್ಯಾರ್ಥಿಗಳಿಗೂ ಭಯ. ಆ ಭಯವನ್ನು ನಾವು ಮೊದಲ ದಿನವೇ ಹೋಗಲಾಡಿ ಸುತ್ತೇವೆ. ಕೂಡುವುದು, ಕಳೆಯುವುದು, ಗುಣಿಸುವುದು ಮತ್ತು ಭಾಗಿಸುವುದು ಇದಿಷ್ಟೇ ಗಣಿತ ಎಂದು ಒತ್ತಿ ಹೇಳುತ್ತೇವೆ. ಮುಖ್ಯವಾಗಿ, ಮೊದಲು ತುಂಬ ಸುಲಭವಾಗಿ ಅರ್ಥವಾಗುವ ಐವತ್ತರವತ್ತು ಸಮಸ್ಯೆಗಳನ್ನು ಬಿಡಿಸಿ, ನಂತರವಷ್ಟೇ ಕಷ್ಟದ ಸಮಸ್ಯೆಗಳಿಗೆ ಕೈಹಾಕುತ್ತೇವೆ. ಸಾಧ್ಯವಾದಷ್ಟೂ ವಿದ್ಯಾರ್ಥಿಗಳಿಗೆ ಹೋಂವರ್ಕ್ ನೀಡುವುದಿಲ್ಲ. ಎಲ್ಲ ಸಮಸ್ಯೆಗಳನ್ನೂ ತರಗತಿಯಲ್ಲೇ ಬಿಡಿಸುತ್ತೇವೆ. ಇದಿಷ್ಟೇ ನಮ್ಮ ಯಶಸ್ಸಿನ ಸೂತ್ರ…’
ಇವತ್ತು ಒಂದು ವಿಷಯಕ್ಕೆ ಭರ್ತಿ ಹತ್ತು ಸಾವಿರ ರೂ. ತಗೊಂಡು ಪಾಠ ಹೇಳುವ ಶಿಕ್ಷಕರಿದ್ದಾರೆ. ಟ್ಯೂಶನ್ ಮಾಫಿಯಾ ಕೂಡ ಎಲ್ಲ ನಗರಗಳಲ್ಲೂ ಇದೆ. ಹೀಗಿರುವಾಗ ಕಡಿಮೆ ಶುಲ್ಕ ಪಡೆಯುವುದರಿಂದ ನಿಮಗೆ ನಷ್ಟ ಆಗಿಲ್ಲವಾ? ಟ್ಯೂಶನ್ ಮಾಫಿ ಯಾದಿಂದ ಬೆದರಿಕೆ ಬಂದಿಲ್ಲವಾ ಎಂಬ ಪ್ರಶ್ನೆಗೆ ಆನಂದಕುಮಾರ್ ಹೇಳುತ್ತಾನೆ-
ಇವತ್ತು ಬಿಹಾರದಲ್ಲಿ ಟ್ಯೂಶನ್ ಕೇಂದ್ರಗಳನ್ನು ಹೆಸರಾಂತ ಕ್ರಿಮಿನಲ್‌ಗಳು ನಡೆಸುತ್ತಿದ್ದಾರೆ, ನಿಯಂತ್ರಿಸುತ್ತಿದ್ದಾರೆ. ನಾನು ತುಂಬಾ ಕಡಿಮೆ ಹಣಕ್ಕೆ ಟ್ಯೂಶನ್ ಮಾಡುತ್ತಿರುವುದರಿಂದ ಅವರ ವ್ಯಾಪಾರಕ್ಕೆ ಕೊಡಲಿಪೆಟ್ಟು ಬಿದ್ದಿದೆ. ಈ ಕಾರಣದಿಂದಲೇ ನನ್ನ ಮೇಲೆ ಹಲವರಿಗೆ ಸಿಟ್ಟಿದೆ. ಈಗಲೂ ನನಗೆ ದಿನಕ್ಕೆ ಎರಡಾದರೂ ಜೀವಬೆದರಿಕೆಯ ಕರೆಗಳು ಬರುತ್ತವೆ. ನನ್ನ ಮೇಲೆ ಒಂದೆರಡು ಬಾರಿ ಹಲ್ಲೆಯಾಗಿದೆ. ಒಮ್ಮೆ ಬಾಂಬ್ ದಾಳಿ ಕೂಡ ನಡೆದಿದೆ. ನನ್ನ ಬಳಿ ಪಾಠ ಹೇಳಿಸಿಕೊಂಡ ವಿದ್ಯಾರ್ಥಿಯೊಬ್ಬನಿಗೆ ಚೂರಿಯಿಂದ ಇರಿಯಲಾಗಿದೆ. ಇವೆಲ್ಲ ನನ್ನನ್ನು ಹೆದರಿಸುವ ತಂತ್ರಗಳೇ. ದೈವಕೃಪೆಯಿಂದ, ಎಲ್ಲ ಸಂದರ್ಭಗಳಲ್ಲೂ ನಾನು ಪ್ರಾಣಾಪಾಯ ದಿಂದ ಪಾರಾಗಿದ್ದೇನೆ. ಈಗ ಗನ್‌ಲೈಸೆನ್ಸ್ ಪಡೆದಿದ್ದೇನೆ. ಬೆಂಗಾವಲಿಗೆ ಅಂಗರಕ್ಷಕರನ್ನು ಇಟ್ಟುಕೊಂಡೇ ಓಡಾಡುತ್ತಿದ್ದೇನೆ. ಒಂದಂತೂ ನಿಜ, ದುಡ್ಡು ನನಗೆ ಮುಖ್ಯವಲ್ಲ. ಬಡವರ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಬೇಕು ಎಂಬುದು ನನ್ನ ಕನಸಾಗಿತ್ತು. ಅದನ್ನು ನನಸು ಮಾಡಿಕೊಂಡಿದ್ದೇನೆ. ಮೊನ್ನೆ ಮೊನ್ನೆಯವರೆಗೂ ಕ್ರೈಂ ಸಿಟಿ ಎಂದು ಕರೆಸಿಕೊಂಡಿದ್ದ ಪಾಟ್ನಾವನ್ನು ಈಗ ‘ಎಜುಕೇಷನ್ ಸಿಟಿ’ಎಂದು ಕರೆಯುವಂತೆ ಮಾಡಿದ್ದೇನೆ. ಇಂಥದೊಂದು ಅಪರೂಪದ ಬದಲಾವಣೆ ತಂದ ಹೆಮ್ಮೆ ನನಗಿದೆ…
ಈಗ ಏನಾಗಿದೆ ಗೊತ್ತೆ? ಪಾಟ್ನಾದ ಆ ಹಳ್ಳಿಹೈದನ ಯಶೋಗಾಥೆ ದೇಶದ ಗಡಿದಾಟಿ ಅಮೆರಿಕ ತಲುಪಿ ಅಲ್ಲೂ ಸುದ್ದಿಯಾಗಿದೆ. ಜಗತ್ತಿನ ಅತ್ಯುತ್ತಮ ಕೋಚಿಂಗ್ ತರಗತಿಗಳ ಪೈಕಿ ಆನಂದಕುಮಾರ್‌ನ ಸೂಪರ್-30 ಶಾಲೆಯೂ ಸ್ಥಾನ ಪಡೆದು ಕೊಂಡಿದೆ. ಅದನ್ನು ಭಾರತದ ಅತ್ಯುತ್ತಮ ಕೋಚಿಂಗ್ ಕ್ಲಾಸ್ ಎಂದೇ ಬಣ್ಣಿಸಲಾಗಿದೆ. ಈ ಅಪರೂಪದ ಸಾಧನೆಗೆ ಅಮೆರಿಕ ಸರಕಾರ ಒಂದು ವಿಶೇಷ ಪ್ರಶಸ್ತಿಯನ್ನೂ ನೀಡಿದೆ. ಒಬಾಮಾ ಅವರ ವಿಶೇಷ ಕಾರ್ಯದರ್ಶಿ ರಶೀದ್ ಹುಸೇನ್, ಈ ಪ್ರಶಸ್ತಿಯನ್ನು ಆನಂದಕುಮಾರ್‌ಗೆ ತಲುಪಿಸಿ ಬೆನ್ನುತಟ್ಟಿದ್ದಾರೆ. ಕೈ ಮುಗಿದಿದ್ದಾರೆ.
ಆ ಮಹಾರಾಯ ಒಬಾಮಾ ಅಷ್ಟಕ್ಕೇ ಸುಮ್ಮನಾಗಿಲ್ಲ. ಅಮೆರಿಕಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಗಣಿತದ ಹಲವು ಸಮಸ್ಯೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡುವಂತೆ ಅಮೆರಿಕದ ವಿಶ್ವವಿದ್ಯಾಲಯಗಳೂ ಆನಂದಕುಮಾರ್ ಅವರಿಗೆ ಆಹ್ವಾನ ನೀಡಿವೆ. ಅಮೆರಿಕದಲ್ಲಿ ಗಣಿತದ ಅಭ್ಯಾಸ ಮಾಡಬೇಕು ಎಂದುಕೊಂಡಿದ್ದ ಹುಡುಗ, ಇವತ್ತು ಅಲ್ಲಿನ ಅಧ್ಯಾಪಕರುಗಳಿಗೇ ಉಪನ್ಯಾಸ ನೀಡುವ ಮಟ್ಟ ತಲುಪಿಕೊಂಡಿದ್ದಾನೆ, ಕೇವಲ ಸ್ವಸಾಮರ್ಥ್ಯದಿಂದ!
ಇಂದು ಆನಂದನಿಂದಾಗಿ ಬಡಮಕ್ಕಳು ಉನ್ನತ ಹುದ್ದೆಗೇರು ವಂತಾಗಿದೆ. ಗಣಿತ ಸುಲಿದ ಬಾಳೆಹಣ್ಣಿನಂತಾಗಿದೆ. ಜನಸೇವೆ ಮಾಡಲು ರಾಜಕೀಯವೇ ಬೇಕಾಗಿಲ್ಲ. ದುರ್ದೈವವೆಂದರೆ ಜನ ಸೇವೆಯ ಹೆಸರಿನಲ್ಲಿ ರಾಜಕೀಯಕ್ಕೆ ಬರುವವರು ಟ್ಯೂಶನ್ ಹೇಳಿಸಿ ಕೊಂಡೂ ಎಲ್ಲಾ ವಿಷಯಗಳಲ್ಲೂ ಫೇಲಾದವರೇ. ಇರಲಿ ಬಿಡಿ.
ಆನಂದನಂಥವರು ಸ್ಫೂರ್ತಿಯ ಚಿಲುಮೆಯಾಗುತ್ತಾರೆ.

Thursday 18 June 2015

ದುಡ್ಡಿದ್ದೋರೆಲ್ಲ ಜುಗ್ಗರಲ್ಲ, ಖರ್ಚು ಮಾಡುವವರೆಲ್ಲ ಶ್ರೀಮಂತರಲ್ಲ!

ಒಮ್ಮೆ ಧೀರೂಭಾಯಿ ಅಂಬಾನಿ ಪಂಚತಾರಾ ಹೋಟೆಲ್ ಗೆ ಹೋಗಿದ್ದರಂತೆ. ವೇಟರ್ ಮೆನು ಕಾರ್ಡ್ ತಂದಿಟ್ಟನಂತೆ. ಅಂಬಾನಿ ಎಲ್ಲ ಐಟಮ್್ಗಳ ರೇಟುಗಳನ್ನು ಗಮನಿಸಿದರಂತೆ. ಯಾವ ಆಹಾರ ಪದಾರ್ಥಗಳ ಬೆಲೆಯೂ ಐನೂರು ರುಪಾಯಿಗಳಿಗಿಂತ ಕಡಿಮೆ ಇರಲಿಲ್ಲ. ಒಂದು ಕಪ್ ಚಹದ ಬೆಲೆ ಆರು ನೂರು ರುಪಾಯಿ ಎಂದು ಬರೆದಿತ್ತು. ಒಂದು ಚಪಾತಿ ಮತ್ತು ರೊಟ್ಟಿಗೆ ತಲಾ ನೂರೈವತ್ತು ರುಪಾಯಿ!
ಹೊಟ್ಟೆ ಹಸಿದಿತ್ತು. ಹಾಗಂತ ಕಿಸೆಯಲ್ಲಿ ಹಣ ಇರಲಿಲ್ಲ ಅಂತ ಅಲ್ಲ. ಸಾವಿರಾರು ಕೋಟಿ ರುಪಾಯಿಗಳ ಶ್ರೀಮಂತ. ಆದರೆ, ಜತೆಯಲ್ಲಿ ಯಾರೂ ಇರಲಿಲ್ಲ. ಯಾವ ಪ್ರತಿಷ್ಠೆ ಮೆರೆಯಬೇಕೂಂತ ಅಷ್ಟೆಲ್ಲ ಹಣ ಕೊಡಬೇಕು. ಇಷ್ಟೇ ಹಣದಲ್ಲಿ ವರ್ಷವಿಡೀ ಉಣಬಹುದಲ್ಲ, ಒಂದು ಕಪ್ ಚಹಕ್ಕೆ ಐನೂರು ರುಪಾಯಿ ಕೊಡುವುದಂದರೇನು, ವರ್ಷವಿಡೀ ಚಹ ಕುಡಿಯಬಹುದಲ್ಲ….
ಹೀಗೆಲ್ಲ ಯೋಚಿಸಿದ ಅಂಬಾನಿ ಹಿಂದೆ ಮುಂದೆ ನೋಡದೇ, ಹೋಟೆಲ್ ವೇಟರ ಮತ್ತು ಸುತ್ತಲಿನವರ ಪ್ರತಿಕ್ರಿಯೆಗೂ ಕಾಯದೇ ಹೊರ ನಡೆದು, ರಸ್ತೆ ಬದಿಯಲ್ಲಿ ತಮ್ಮ ಕಾರನ್ನು ನಿಲ್ಲಿಸಿ, ಹತ್ತು ರುಪಾಯಿಗೆ ಹೊಟ್ಟೆ ತುಂಬಾ ಊಟ ಮಾಡಿದರಂತೆ.
ಈ ಘಟನೆ ಬಗ್ಗೆ ಅಂಬಾನಿ ಹೀಗೆ ಹೇಳಿದರಂತೆ- “ನಾನು ಸ್ಟಾರ್ ಹೋಟೆಲ್ ಗಳಿಗೆ ಹೋಗಿಲ್ಲ ಅಂತಲ್ಲ. ಸಾಕಷ್ಟು ಸಲ ಹೋಗಿದ್ದೇನೆ. ನಮ್ಮ ಕಂಪನಿಯ ಹಲವಾರು ಔತಣಕೂಟಗಳನ್ನು ಅಲ್ಲಿ ಆಯೋಜಿಸಿದ್ದೇನೆ. ಅವೆಲ್ಲ ಅನಿವಾರ್ಯ. ಆದರೆ ನಾನೊಬ್ಬನೇ ಎಂದೂ ಅಲ್ಲಿಗೆ ಹೋಗಿ ಊಟ ಮಾಡಿಲ್ಲ. ಅಗತ್ಯ ಮತ್ತು ಅವಶ್ಯಕತೆ ಇದ್ದರೆ ಖರ್ಚು ಮಾಡಬಹುದು. ಹತ್ತು ರುಪಾಯಿಗೆ ಐನೂರು ರುಪಾಯಿ ಕೊಡುವಷ್ಟು ನಾನು ಶ್ರೀಮಂತನಿದ್ದಿರಬಹುದು. ಆದರೆ, ಅಷ್ಟು ಮೂರ್ಖನಲ್ಲ. ನಾನು ಅಂದು ಆ ಹೋಟೆಲ್್ನಿಂದ ಎದ್ದು ಬಂದ ಪ್ರಸಂಗಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿರಬಹುದು. ಅಂಬಾನಿ ಜುಗ್ಗ ಎನ್ನಬಹುದು, ನನಗೆ ಸ್ವಲ್ಪವೂ ವಿಷಾದವಿಲ್ಲ. ಇಂದಿಗೂ ಆ ನನ್ನ ನಿರ್ಧಾರದ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ. ಉಳಿಸಿದ ಹಣ ಗಳಿಸಿದ ಹಣಕ್ಕಿಂತ ಹೆಚ್ಚು ಎಂಬುದು ನನಗೆ ಚೆನ್ನಾಗಿ ಅರಿವಿಗೆ ಬಂದಿದೆ. ನಾನು ಸ್ಟಾರ್ ಹೋಟೆಲ್್ನಲ್ಲಿ ಊಟ ಮಾಡಿದ ಬಿಲ್ ಕೊಟ್ಟವರಿಗೆ ಮಾತ್ರ ನನ್ನ ಬಗ್ಗೆ ಮಾತಾಡಲು ನೈತಿಕ ಹಕ್ಕಿದೆ. ಸ್ಟಾರ್ ಹೋಟೆಲ್್ಗಳಲ್ಲಿ ಒಂದಕ್ಕೆ ನೂರು ತೆತ್ತು ಬರುವವರ ಬಗ್ಗೆ ನನಗೆ ವಿಷಾದವಿದೆ. ಈ ಕಾರಣಕ್ಕಾಗಿಯೇ ನಾನು ಅಂಥ ಹೋಟೆಲ್ ಗಳನ್ನು ಕಟ್ಟಲಿಲ್ಲ.’
ಇನ್ನೊಮ್ಮೆ ಅಂಬಾನಿ ತಮ್ಮ ಮಕ್ಕಳ ಒತ್ತಾಯಕ್ಕೆ ಸ್ಟಾರ್ ಹೋಟೆಲ್್ಗೆ ಹೋಗಿದ್ದರಂತೆ. ಊಟವಾದ ಬಳಿಕ ಅನಿಲ್ ಅಂಬಾನಿ ವೇಟರ್ ಗೆ ಎರಡು ನೂರು ರುಪಾಯಿ ಟಿಪ್ಸ್ ಇಟ್ಟರಂತೆ. ಇದನ್ನು ಗಮನಿಸಿದ ಧೀರೂಭಾಯಿ ಅಂಬಾನಿ “ಪರವಾಗಿಲ್ಲ, ನಿನ್ನ ಅಪ್ಪ ಶ್ರೀಮಂತ, ಹೀಗಾಗಿ ಅಷ್ಟು ಟಿಪ್ಸ್ ಇಟ್ಟಿದ್ದೀಯ. ಆದರೆ ನನ್ನ ಅಪ್ಪ ಅಂಥ ಶ್ರೀಮಂತನಲ್ಲ. ಹೀಗಾಗಿ ನಾನು ಅಷ್ಟು  ಟಿಪ್ಸ್ ಇಡುವುದಿಲ್ಲ’ ಎಂದರಂತೆ.
ದುಡ್ಡಿನ ಬಗ್ಗೆ ಜನರ ಅಭಿಪ್ರಾಯವೇನು ಎಂಬ ಬಗ್ಗೆ ಇತ್ತೀಚೆಗೆ ಪ್ರತಿಷ್ಠಿತ “ಫೋರ್ಬ್ಸ್್’ ಪತ್ರಿಕೆ ನಡೆಸಿದ ಸಂದರ್ಶನದ ವಿವರಗಳನ್ನು ಓದುತ್ತಿದ್ದೆ. ಹಣದ ಬಗ್ಗೆ ಒಬ್ಬೊಬ್ಬರ ಧೋರಣೆ ಒಂದೊಂದು ರೀತಿ. ಹಣ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಗುಣ, ವ್ಯಕ್ತಿತ್ವವನ್ನು ತಂದುಕೊಟ್ಟಿದೆ. ಅತಿ ಶ್ರೀಮಂತನಾದವನಿಗೂ, ಬಡವನಿಗೂ ಹೆಚ್ಚು ವ್ಯತ್ಯಾಸವಿಲ್ಲ ಎಂಬ ತತ್ವಜ್ಞಾನಿಯ ಮಾತು ಈ ಸಮೀಕ್ಷೆಯನ್ನು ಓದಿದಾಗ ನೆನಪಿಗೆ ಬರದೇ ಇರದು.
ಜಗತ್ತಿನ ಅತ್ಯಂತ ಶ್ರೀಮಂತ ವಾರೆನ್ ಬಫೆಟ್ ಇದ್ದಾನಲ್ಲ, ಅವನಿಗೆ ಸ್ವಂತ ಮನೆಯೆಂಬುದೇ ಇಲ್ಲ. ಆತ ಒಂದು ಮೊಬೈಲ್ ಫೋನನ್ನೂ ಇಟ್ಟುಕೊಂಡಿಲ್ಲ. ತನ್ನ ಕಾರನ್ನು ತಾನೇ ಡ್ರೈವ್ ಮಾಡುತ್ತಾನೆ. ಅಂದರೆ ಡ್ರೈವರ್್ಗಳನ್ನು ಇಟ್ಟುಕೊಂಡಿಲ್ಲ. ತಾನೆ ಸ್ವತಃ ಮಾಲ್್ಗೆ ಹೋಗಿ ಮನೆಗೆ ಬೇಕಾಗುವ ಸಾಮಾನುಗಳನ್ನು ಶಾಪಿಂಗ್ ಮಾಡುತ್ತಾನೆ. ಮನೆ ತುಂಬಾ ಆಳು-ಕಾಳುಗಳನ್ನು ಇಟ್ಟುಕೊಂಡಿಲ್ಲ. ಬಾಡಿಗೆ ಮನೆಯಲ್ಲಿ ಆತ ಎಲ್ಲ ರೀತಿಯ ತುಂಬು ನೆಮ್ಮದಿಯ ಜೀವನವನ್ನು ಕಾಣುತ್ತಿದ್ದಾನೆ.
ಇಂಥ ವಾರೆನ್ ಬಫೆಟ್ ಒಂದು ದಿನ ತಾನು ದುಡಿದ ಹಣದ ಬಹುಪಾಲನ್ನು “ತಗೊಳ್ಳಿ ಚಾರಿಟಿಗೆ. ನಾನು ದುಡಿದಿದ್ದನ್ನೆಲ್ಲ ಇದೋ ದೇಣಿಗೆ ಕೊಡುತ್ತಿದ್ದೇನೆ’ ಎಂದುಬಿಟ್ಟ. ಮರುದಿನದಿಂದ ಮತ್ತಷ್ಟು ಆಸ್ಥೆಯಿಂದ ದುಡ್ಡು ಗಳಿಸಲು ಕುಳಿತ. ಹೆಚ್ಚು ಹಣ ಗಳಿಸುವ ಹೊಸ ಹೊಸ ಮಾರ್ಗಗಳ ಬಗ್ಗೆ ಚಿಂತಿಸಲಾರಂಭಿಸಿದ. ದೇಣಿಗೆ ಕೊಡುವುದನ್ನೇ ಹವ್ಯಾಸ ಮಾಡಿಕೊಂಡ. ಇದು ಅವನಿಗೆ ಹೆಚ್ಚು ದುಡಿಯುವುದು ಹೇಗೆ ಎಂಬುದನ್ನು ಕಲಿಸಲಾರಂಭಿಸಿತು. ಇನ್ನು ವಾರೆನ್ ಬಫೆಟ್್ನನ್ನು ನೋಡಿದವರು ಅವನೇಕೆ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಲಿಲ್ಲ, ಅವನೇಕೆ ಭವ್ಯ ಬಂಗಲೆ ಕಟ್ಟಿಸಲಿಲ್ಲ, ನಾವೇ ಆಳು-ಕಾಳುಗಳನ್ನು ಇಟ್ಟುಕೊಳ್ತೇವೆ ಅವನಿಗೇನು ಧಾಡಿ ಎಂದರೆ ಅವರಿಗೆ ಏನೆನ್ನೋಣ?
ಹಣದ ಬಗ್ಗೆ ಎಲ್ಲರ ಧೋರಣೆಯೂ ಒಂದೇ ರೀತಿ ಇರುವುದಿಲ್ಲ. ಭಾರತ ಪತ್ರಿಕೋದ್ಯಮದ ಧೀಮಂತ ರಾಮನಾಥ ಗೋಯೆಂಕಾ ಅವರ ಜೀವನದ ಘಟನೆಯೊಂದನ್ನು ಇಲ್ಲಿ ಉಲ್ಲೇಖಿಸಬಹುದಾದರೆ, ಒಮ್ಮೆ ಹಬ್ಬದ ನಿಮಿತ್ತ ಗೋಯೆಂಕಾ ಅವರಿಗೆ ಅವರ ಸೊಸೆ ಖಾದಿ ಜುಬ್ಬಾ, ಧೋತಿಯನ್ನು ಉಡುಗೊರೆಯಾಗಿ ಕೊಟ್ಟರಂತೆ. ಇದಕ್ಕೆ ಪ್ರತಿಯಾಗಿ ರಾಮನಾಥ ಗೋಯೆಂಕಾ ಅವರು ಸೊಸೆಗೆ ಪತ್ರ ಬರೆದರಂತೆ- “ಹಬ್ಬದ ನಿಮಿತ್ತ ನನಗೆ ಉಡುಗೊರೆಯಾಗಿ ಧೋತಿ, ಜುಬ್ಬವನ್ನು ಕೊಟ್ಟಿದ್ದಕ್ಕೆ ನನಗೆ ಬಹಳ ಸಂತಸವಾಗಿದೆ. ಆದರೆ ಇನ್ನು ಮುಂದೆ ನನಗೆ ಇಂಥ ವಸ್ತ್ರವನ್ನು ಖಾದಿ ಭಂಡಾರದಲ್ಲಿ ಶೇ.30ರಷ್ಟು ರಿಯಾಯತಿ ದರದಲ್ಲಿ ಮಾರಾಟವಿದ್ದ ಸಂದರ್ಭದಲ್ಲಿ ಖರೀದಿಸಿ ಕೊಡಬಹುದು.’
ಹಣದ ಬಗ್ಗೆ ಅಂಥ ಧೋರಣೆ ತಳೆದಿದ್ದರು ಗೋಯೆಂಕಾ. ಹಣದ ಮಹತ್ವ ಗೊತ್ತಿದ್ದವರು, ಜೀವನದಲ್ಲಿ ಶಿಸ್ತನ್ನು ರೂಪಿಸಿಕೊಂಡವರು, ಜೀವನದಲ್ಲಿ ಪರಿಶ್ರಮದ ಅರಿವು ಇರುವವರು ಮಾತ್ರ ಇಂಥ ನಿಲುವು ತಾಳಲು ಸಾಧ್ಯ.
ಪತ್ರಕರ್ತೆ ಬಚಿ ಕರ್ಕಾರಿಯಾ “ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ಹಾಗೂ ಸಂಸ್ಥೆಯ ಅಂತರಂಗ ಪರಿಚಯಿಸುವ ಪುಸ್ತಕವೊಂದನ್ನು ಬರೆದಿದ್ದಾರೆ. ಅದರ ಹೆಸರು Behind the Times ಅಂತ. ಈ ಕೃತಿಯಲ್ಲಿ ಆ ಪತ್ರಿಕೆಯ ಮಾಲೀಕ ಸಮೀರ್ ಜೈನ್ ಕುರಿತು ಸ್ವಾರಸ್ಯವಾಗಿ ಬರೆದಿದ್ದಾರೆ.
ಸಮೀರ್ ಜೈನ್ ಎಷ್ಟು ಧಾರಾಳಿಯೋ, ಅಷ್ಟೇ ದುಂದು ವೆಚ್ಚವನ್ನು ಕಂಡರೆ ಆಗದವರು. ಅನಗತ್ಯವಾಗಿ ಒಂದು ರುಪಾಯಿ ಹೆಚ್ಚು ಖರ್ಚಾಗುವುದನ್ನು ಸಹಿಸದವರು. ಒಮ್ಮೆ ಸಮೀರ್್ಜೈನ್ ಅವರು ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಳ್ಳಲು ತಮ್ಮ ಜಾಹೀರಾತು ವಿಭಾಗದ ಮುಖ್ಯಸ್ಥೆ ಇಂದಿರಾ ಡೆಯಿಸ್ ಹಾಗೂ ಇತರರೊಂದಿಗೆ ವಿದೇಶಕ್ಕೆ ಹೋಗಿದ್ದರು. ತಾವು ತಂಗಿದ್ದ ಹೋಟೆಲ್್ನಲ್ಲಿ ಇಂದಿರಾ ಅವರು ರಿಸೆಪ್್ಶನ್ ಕೌಂಟರ್ ಬಳಿ ಹೋಗಿ ಮರುದಿನ ಆರು ಗಂಟೆಗೆ ತಮ್ಮನ್ನು ಎಬ್ಬಿಸುವಂತೆಯೂ, ಅದಾದ ಐದು ನಿಮಿಷದ ಬಳಿಕ ಬೆಡ್ ಟೀ ತರುವಂತೆಯೂ ಹೇಳಿದರು. ಅಲ್ಲಿಯೇ ಸನಿಹದಲ್ಲಿದ್ದ ಸಮೀರ್ ಜೈನ್ ಈ ಸಂಭಾಷಣೆಯನ್ನು ಕೇಳಿಸಿಕೊಂಡರು, ಇಂದಿರಾ ಹತ್ತಿರ ಹೋಗಿ  ತಮ್ಮ ಕೋಟಿನ ಜೇಬಿನಿಂದ ಏನನ್ನೋ ತೆಗೆದು ಅವಳ ಕೈಗೆ ಕೊಟ್ಟರು.
ನೋಡಿದರೆ ಎರಡು ಟೀ ಬ್ಯಾಗ್!
‘ಬೆಡ್ ಟೀ ಬದಲು ಬರೀ ಬಿಸಿ ನೀರನ್ನಷ್ಟೇ ತರಲು ಹೇಳಿ, ಈ ಟೀ ಬ್ಯಾಗ್ ಅದ್ದಿಕೊಳ್ಳಿ. ಅದಕ್ಯಾಕೆ ಸುಮ್ಮನೆ ಮುನ್ನೂರು-ನಾನೂರು ರುಪಾಯಿ ಖರ್ಚು ಮಾಡುತ್ತೀರಿ? ನಾನು ಸದಾ ಪಂಚತಾರಾ ಹೋಟೆಲ್್ನಲ್ಲಿ ಉಳಿದುಕೊಳ್ಳುವಾಗ ಟೀ ಬ್ಯಾಗನ್ನು ನನ್ನೊಂದಿಗೆ ಇಟ್ಟುಕೊಂಡಿರುತ್ತೇನೆ’ ಎಂದರು ಸಮೀರ್ ಜೈನ್. ಭಾರತದ ನಂ.1 ಪತ್ರಿಕಾ ಸಂಸ್ಥೆಯ, ಶ್ರೀಮಂತ ಮಾಲೀಕರು ರೂಪಿಸಿಕೊಂಡ ರೂಢಿಯಿದು.
ಇನ್ನೊಂದು ಸಂದರ್ಭ. ಸಮೀರ್ ಜೈನ್ ಅವರು ಪತ್ರಿಕೆಯ 175ನೇ ವಾರ್ಷಿಕೋತ್ಸವದ ನಿಮಿತ್ತ ಪಂಚತಾರಾ ಹೋಟೆಲ್್ನಲ್ಲಿ ಔತಣಕೂಟವನ್ನು ಏರ್ಪಡಿಸಿದ್ದರು. ಅವರ ಸಹದ್ಯೋಗಿಯೊಬ್ಬರು ಊಟ ಮಾಡುವಾಗ ಎರಡು-ಮೂರು ಸಲ ಪ್ಲೇಟನ್ನು ಬದಲಾಯಿಸಿದರು. ಇದನ್ನು ಗಮನಿಸಿದ ಸಮೀರ್ ಜೈನ್, “ನೋಡಿ, ಪಂಚತಾರಾ ಹೋಟೆಲ್್ನಲ್ಲಿ ಇಂಥ ಪಾರ್ಟಿಯಲ್ಲಿ ಎಷ್ಟು ಜನ ಊಟ ಮಾಡಿದ್ದಾರೆಂಬುದನ್ನು ಪ್ಲೇಟ್್ಗಳಿಂದ ಲೆಕ್ಕ ಹಾಕುತ್ತಾರೆ. ನೀವು ಊಟ ಮಾಡುವಾಗ ಪ್ರತಿಸಲ ಬೇರೆ ಬೇರೆ ಐಟೆಮ್್ಗಳನ್ನು ಹಾಕಿಕೊಳ್ಳುವಾಗ ಪ್ಲೇಟನ್ನು ಬದಲಿಸಿದರೆ, ಹೆಚ್ಚು ಜನ ಊಟ ಮಾಡಿದ್ದಾರೆಂದು ಹೆಚ್ಚು ಬಿಲ್ ಮಾಡುತ್ತಾರೆ. ಆದ್ದರಿಂದ ಒಂದೇ ಪ್ಲೇಟಿನಿಂದ ಊಟ ಮಾಡಿ’ ಎಂದು ಹೇಳಿದರು.
ಸಮೀರ್್ಜೈನ್ ಹಣ ಉಳಿಸುವ ಸಂಗತಿ ಬಂದಾಗ ಅವು ಎಷ್ಟೇ ಸಣ್ಣಪುಟ್ಟ ಅಂಶಗಳಾಗಿರಲಿ, ಅದನ್ನು ತಮ್ಮ ಸಹೋದ್ಯೋಗಿಗಳಿಗೆ ತಿಳಿಸದೇ ಬಿಡುತ್ತಿರಲಿಲ್ಲ. ಅಷ್ಟೇ ಅಲ್ಲ, ಅದನ್ನು ಭಾರತದಲ್ಲಿರುವ ತಮ್ಮ ಎಲ್ಲ ಆವೃತ್ತಿಗಳಲ್ಲೂ ಜಾರಿಗೆ ತರುತ್ತಾರೆ. ಒಮ್ಮೆ ಬಳಸಿದ ಕಾಗದ, ಲಕೋಟೆಗಳನ್ನು ಪುನಃ ಬಳಸುವಂತೆ ಸೂಚಿಸುತ್ತಾರೆ. ಒಂದೇ ಮಗ್ಗುಲಿಗೆ ಬಳಸಿದ ಕಾಗದವನ್ನು ಕಸದ ಬುಟ್ಟಿಗೆ ಎಸೆದಿದ್ದನ್ನು ಕಂಡರೆ ಸುಮ್ಮನೆ ಬಿಡುವುದಿಲ್ಲ. ಖಾಲಿಯಿರುವ ಮಗ್ಗುಲನ್ನು ಬಳಸಿ ಎಂದು ಸೂಚಿಸುತ್ತಾರೆ.
ಲೆಟರ್್ ಹೆಡ್ ನಲ್ಲಿ ಬರೆದಿದ್ದನ್ನು ನೇರವಾಗಿ ಫ್ಯಾಕ್ಸ್ ಮಾಡುವುದನ್ನು ಅವರು ಸಹಿಸುತ್ತಿರಲಿಲ್ಲ. ಹಾಗೆ ಮಾಡುವ ಬದಲು ಆ ಲೆಟರ್್ ಹೆಡ್ ಫೋಟೋಕಾಪಿ (ಜೆರಾಕ್ಸ್) ತೆಗೆದು ಫ್ಯಾಕ್ಸ್ ಮಾಡುವಂತೆ ಹೇಳುತ್ತಿದ್ದರು. ಕಾರಣ ಇಷ್ಟೆ. ಲೆಟರ್್ಹೆಡ್ ಬಳಸಿದ ಕಾಗದವನ್ನು ಫ್ಯಾಕ್ಸ್ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ, ಇದರಿಂದ ಫೋನ್್ಬಿಲ್ ಜಾಸ್ತಿಯಾಗುತ್ತದೆ. ಇದನ್ನು ತಪ್ಪಿಸಲು ಲೆಟರ್್ಹೆಡ್್ನ್ನು ಜೆರಾಕ್ಸ್ ಮಾಡಿ ಫ್ಯಾಕ್ಸ್ ಮಾಡುವಂತೆ ಹೇಳುತ್ತಿದ್ದರು.
‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಸಂಪಾದಕೀಯ ಮಂಡಳಿಯಲ್ಲಿ ಹಿರಿಯರಲ್ಲೊಬ್ಬರಾಗಿರುವ ಜಗ್ ಸುರಯ್ಯ ಇತ್ತೀಚೆಗೆ ತಾವು ಬರೆದ “JS and The Times of My Life’ ಪುಸ್ತಕದಲ್ಲೂ ಸಮೀರ್ ಜೈನ್ ಕುರಿತು ಪ್ರಸ್ತಾಪಿಸಿದ್ದಾರೆ. ಒಮ್ಮೆ ಜಗ್ ಸುರಯ್ಯ ಅವರು ತಮ್ಮ ಸ್ನೇಹಿತರೊಬ್ಬರ ಮನೆಯಲ್ಲಿ ರಾತ್ರಿ ಗುಂಡು ಪಾರ್ಟಿ ಮಾಡುತ್ತಿದ್ದರಂತೆ. ಆಗ ಅಲ್ಲಿಗೆ ಬರುವುದಾಗಿ ಸಮೀರ್ ಜೈನ್ ಅವರಿಂದ ಫೋನ್ ಬಂತಂತೆ. ಕೆಲಕ್ಷಣಗಳಲ್ಲಿ ತಮ್ಮ ಪತ್ನಿಯೊಂದಿಗೆ ಆಗಮಿಸಿದರಂತೆ. ಏಳೆಂಟು ಜನರಿದ್ದ ಆ ಪಾರ್ಟಿಯಲ್ಲಿ ಸಮೀರ್ ಒಂದು ಮೂಲೆಯಲ್ಲಿ ಕುಳಿತು ಎಲ್ಲರ ಹರಟೆಯನ್ನು ಕುತೂಹಲದಿಂದ ಆಲಿಸುತ್ತಿದ್ದರಂತೆ. ದಿಲ್ಲಿಯಲ್ಲಿ ಗುಂಡು ಹಾಕಲು ಪ್ರಶಸ್ತವಾದ ಹೊಸ ತಾಣಗಳ ಬಗ್ಗೆ ಚರ್ಚೆ ನಡೆಯುತ್ತಿತ್ತಂತೆ. ಆಗ ತಾನೆ ಆರಂಭವಾದ ಸ್ಪಾನಿಶ್ ರೆಸ್ಟೋರೆಂಟ್ ಬಹಳ ಚೆನ್ನಾಗಿದೆ. ಆದರೆ ಬಹಳ ದುಬಾರಿ’ ಎಂದು ಯಾರೋ ಹೇಳಿದಾಗ, “ವಿಶೇಷ ಸಂದರ್ಭದಲ್ಲಿ ಮಾತ್ರ ಹೋಗಬಹುದು’ ಎಂದು ಇನ್ಯಾರೋ ಹೇಳಿದರಂತೆ. ಆಗ ಸಮೀರ್ ಜೈನ್ ಮಧ್ಯಪ್ರವೇಶಿಸಿದಾಗ ಎಲ್ಲರೂ ಮೌನರಾಗಿ ಅವರ ಮಾತಿನೆಡೆ ಲಕ್ಷ್ಯವಿಟ್ಟರಂತೆ. “ಏನು ಹೇಳ್ತಾ ಇದ್ದೀರಾ ನೀವು? ನಿಮಗೆ ಹೆಚ್ಚು ಹಣ ತೆತ್ತು ದುಬಾರಿ ಹೋಟೆಲ್್ಗೆ ಹೋಗೊದಂದ್ರೆ ಇಷ್ಟಾನಾ?’ ಇದರಿಂದ ನಿಮಗೆ ಸಂತಸವಾಗುತ್ತದಾ?’ ಎಂದು ಕೇಳಿದರಂತೆ.
ಅದಕ್ಕೆ ಜಗ್ ಸುರಯ್ಯ “ಹೌದು. ನಮಗೆ ಹಣ ಖರ್ಚು ಮಾಡುವುದೆಂದರೆ ಬಹಳ ಇಷ್ಟ, ಅದೂ ವಿಶೇಷ ಸಂದರ್ಭದಲ್ಲಿ. ನಾವೇನು ಅಲ್ಲಿಗೆ ದಿನಾ ಹೋಗುವುದಿಲ್ಲವಲ್ಲ? ನಮಗೆ ಅಷ್ಟು ಹಣ ಖರ್ಚು ಮಾಡುವ ಸಾಮರ್ಥ್ಯವಿರುವಾಗ ಆಗೊಮ್ಮೆ ಈಗೊಮ್ಮೆ ಹೋಗುತ್ತೇವೆ. ಅದಕ್ಕಾಗಿಯೇ ನಮಗೆ ಅಂಥ ಸಂದರ್ಭಗಳು ವಿಶೇಷವೆನಿಸುತ್ತವೆ’ ಎಂದರಂತೆ.
ಅವರ ಮಾತಿಗೆ ತಲೆಯಾಡಿಸಿದ ಸಮೀರ್ ಜೈನ್ “ಓಹೋ ಹೌದಾ? ನಿಮಗೆ ಹಣ ಖರ್ಚು ಮಾಡುವುದೆಂದರೆ ಇಷ್ಟವಾ? ಇಂಟರೆಸ್ಟಿಂಗ್!’ ಎಂದು ಗಂಭೀರವಾಗಿ ಉದ್ಗಾರ ತೆಗೆದರಂತೆ.
ಸಮೀರ್ ಜೈನ್ ಯಾಕೆ ಯಶಸ್ವಿ ಪತ್ರಿಕಾ ಮಾಲೀಕರು ಎಂಬುದು ಈಗ ಅರ್ಥವಾಗಿರಲಿಕ್ಕೆ ಸಾಕು.
ನೀವು ಹೊಂದಿರುವ ಹಣದಿಂದ ನೀವು ಶ್ರೀಮಂತರಾಗುವುದಿಲ್ಲ. ನೀವು ಹಣಕ್ಕೆ ಕೊಡುವ ಮರ್ಯಾದೆಯಿಂದ ಮಾತ್ರ ಶ್ರೀಮಂತರಾಗುತ್ತೀರಿ. ಶ್ರೀಮಂತರಾಗುವವರಿಗೆ ಈ ಅರ್ಹತೆ ಬೇಕು.

Tuesday 16 June 2015

ಜಗತ್ತನ್ನೇ ಜಯಿಸಿದವ ಅವನ ಮುಂದೆ ಸಣ್ಣವನಾಗಿದ್ದ!


ಕಳೆದ ಕೆಲ ದಿನಗಳಿಂದ ಈ ಪ್ರಸಂಗ ಬಿಟ್ಟೂ ಬಿಡದೇ ನೆನಪಾಗುತ್ತಿದೆ. ಅಲೆಕ್ಸಾಂಡರ್್ನ ಜೀವನದಲ್ಲಿ ನಡೆದ ಘಟನೆಯಿದು. ಅದ್ಯಾಕೆ ಈ ಸಂದರ್ಭದಲ್ಲಿ ನೆನಪಾಗುತ್ತಿದೆ?
ಅಲೆಕ್ಸಾಂಡರ್ ನಿಧನನಾಗಿದ್ದ. ಆತನ ಪಾರ್ಥಿವ ಶರೀರವನ್ನು ಶವದ ಪೆಟ್ಟಿಗೆಯಲ್ಲಿ ಇಡಲಾಗಿತ್ತು. ಇಡೀ ಜಗತನ್ನು ಜಯಿಸುವೆ ಎಂದು ಬೀಗುತ್ತಿದ್ದ ಮತ್ತು ಆ ದಿಸೆಯಲ್ಲಿ ತುಸು ಯಶಸ್ವಿಯೂ ಆದ ಪರಮ ಪರಾಕ್ರಮಿಯ ತಣ್ಣನೆಯ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಅಲೆಕ್ಸಾಂಡರ್ ಅಂದ್ರೆ ಭೌತಿಕ ಉಪಭೋಗದ ಸಂಕೇತ. ಅತ್ಯುತ್ತಮವಾದುದು ಏನೇ ಕಾಣಲಿ, ಅದು ತನಗಿರಲಿ ಎಂದು ಹಪಹಪಿಸುವ ಮನಸ್ಸು ಅವನದು. ಅವನ ಆ ದಾಹಕ್ಕೆ ಅಂತ್ಯವೇ ಇರಲಿಲ್ಲ. ಪ್ರದೇಶ, ದೇಶ, ಉಪಖಂಡ, ಖಂಡಗಳನ್ನು ಒಂದಾದ ನಂತರ ಒಂದರಂತೆ ಗೆಲ್ಲುತ್ತಾ ಹೋದರೂ ಅವನ ಈ ಗೆಲ್ಲುವ, ಸಮರ ಸಾರುವ, ದೇಶವನ್ನು ಕೊಳ್ಳೆ ಹೊಡೆಯುವ ಹುಚ್ಚು ಕೋಡಿ ಮಾತ್ರ ಭೋರ್ಗರೆಯುತ್ತ ಹರಿಯುತ್ತಲೇ ಇತ್ತು. ಜಗತ್ತನ್ನೇ ಜಯಿಸಲು ಹೊರಟವನಿಗೆ ದೇಶ, ಖಂಡಗಳೆಲ್ಲ ಯಾವ ಲೆಕ್ಕ?
ಅಲೆಕ್ಸಾಂಡರ್್ನ ಶವ ತಣ್ಣಗೆ ಮಲಗಿತ್ತು…!
ಬಹಳ ವರ್ಷಗಳ ಕಾಲ ಅವನ ಸಹಾಯಕನಾಗಿದ್ದವ ಪಾರ್ಥೀವ ಶರೀರದ ಹತ್ತಿರ ಬಂದವನೇ ಶವದ ಪೆಟ್ಟಿಗೆಯನ್ನು ತಬ್ಬಿಕೊಂಡು ರೋಧಿಸಲಾರಂಭಿಸಿದ. ಅವನ ಸುತ್ತಲಿದ್ದವರು ಸಹ ಆ ಕರುಣಾಜನಕ ದೃಶ್ಯಕ್ಕೆ ಮೂಕಸಾಕ್ಷಿಗಳಾಗುತ್ತಾ ಕಣ್ಣೀರು ಸುರಿಸಿದರು. ಇನ್ನೇನು ಪಾರ್ಥೀವ ಶರೀರವನ್ನಿಟ್ಟ ಪೆಟ್ಟಿಗೆಯನ್ನು ಮೇಲೆತ್ತಿಕೊಂಡು ಅಂತ್ಯ ಸಂಸ್ಕಾರಕ್ಕೆ ಅಣಿಯಾಗಬೇಕೆಂದು ಎಲ್ಲರೂ ಸಿದ್ಧತೆ ಮಾಡುವಾಗ ಅಲೆಕ್ಸಾಂಡರ್್ನ ಸಹಾಯಕ ಪಕ್ಕದಲ್ಲಿದ್ದ ಜನರಲ್್ಗೆ ಹೇಳಿದ- “ದಯವಿಟ್ಟು ಅಲೆಕ್ಸಾಂಡರ್್ನ ಕೊನೆ ಆಸೆಯನ್ನು ಈಡೇರಿಸಬೇಕು. ಆತ ಸಾಯುವ ಕೆಲ ದಿನಗಳ ಮೊದಲು ಅದೇನು ಎಂಬುದನ್ನು ನನ್ನ ಮುಂದೆ ಅವರು ನಿವೇದಿಸಿಕೊಂಡಿದ್ದರು.”
“ಅದೇನು ಬೇಡಿಕೆ? ಹೇಳು, ಖಂಡಿತಾ ನೆರವೇರಿಸೋಣ” ಎಂದರು.
“ಅದೇನು ಅಂಥ ಮಹಾನ್ ಬೇಡಿಕೆಯೇನಲ್ಲ. ಈಗಲೇ ಈಡೇರಿಸುವಂಥದ್ದು” ಅಂದ.
ಅದಕ್ಕೆ ಜನರಲ್್ಗಳು “ಹೇಳು ಹೇಳು, ಪರವಾಗಿಲ್ಲ. ಜಗತ್ತನ್ನೇ ಗೆದ್ದವನ ಆಸೆಯನ್ನು ಈಡೇರಿಸದೇ ಇರುವುದುಂಟಾ?” ಎಂದರು.
“ಅಲೆಕ್ಸಾಂಡರ್ ಸಾಯುವುದಕ್ಕೆ ಕೆಲ ದಿನಗಳ ಮೊದಲು ಹೀಗೆ ಹೇಳಿದಾಗ ನನಗೂ ನಂಬಲಾಗಲಿಲ್ಲ. ಇದೆಂಥ ಬೇಡಿಕೆ ಎಂದು ನಾನೂ ಉದ್ಗಾರ ತೆಗೆದೆ. ಆದರೆ ಅದಕ್ಕೆ ಅಲೆಕ್ಸಾಂಡರ್ ಕೇಳಲಿಲ್ಲ. ಈಡೇರಿಸಲೇಬೇಕು ಅಂದ.” ಇಷ್ಟು ಹೇಳಿ ಸಹಾಯಕ ಅಲೆಕ್ಸಾಂಡರ್್ನ ಪಾರ್ಥೀವ ಶರೀರವನ್ನೇ ದಿಟ್ಟಿಸಿದ. ಆಗ ಯಾರೂ ಮಾತಾಡಲಿಲ್ಲ.
ತುಸು ಸಾವರಿಸಿಕೊಂಡ ಸಹಾಯಕ ಕೇಳಿದ- “ನಾನು ಸತ್ತಾಗ ನನ್ನ ಮೃತ ದೇಹವನ್ನು ಶವಪೆಟ್ಟಿಗೆಯಲ್ಲಿಟ್ಟು ಹೋಗುತ್ತೀರಲ್ಲಾ, ಆಗ ನನ್ನ ಎರಡೂ ಕೈಗಳು ಶವಪೆಟ್ಟಿಗೆ ಹೊರಗೆ ಚಾಚಿರಲಿ. ಯಾವುದೇ ಕಾರಣಕ್ಕೂ ಇಲ್ಲ ಎನ್ನಬೇಡಿ ಎಂದು ಅಲೆಕ್ಸಾಂಡರ್ ಹೇಳಿದ್ದಾನೆ. ದಯವಿಟ್ಟು ಇದನ್ನು ನೆರವೇರಿಸಬೇಕು.”
ಜನರಲ್್ಗಳು ಕಕ್ಕಾಬಿಕ್ಕಿಯಾದರು. ಇದೆಂಥ ಬೇಡಿಕೆ? ಶವ ಪೆಟ್ಟಿಗೆ ಹೊರಗೆ ಎರಡೂ ಕೈಗಳು ಚಾಚಬೇಕಂತೆ? ಇದನ್ನು ಈಡೇರಿಸುವುದಾದರೂ ಹೇಗೆ? ಎಂಬ ಪೀಕಲಾಟಕ್ಕೆ ಬಿದ್ದ ಜನರಲ್್ಗಳು ಧರ್ಮಗುರುಗಳನ್ನು ಸಂಪರ್ಕಿಸಿದರು. “ಇದು ಸಾಧ್ಯವೇ ಇಲ್ಲ, ಇದು ಸಂಪ್ರದಾಯ ವಿರೋಧಿ, ಧರ್ಮ ವಿರೋಧಿ. ಅದಕ್ಕಿಂತ ಹೆಚ್ಚಾಗಿ ಶವಕ್ಕೆ ಅವಮರ್ಯಾದೆ ಮಾಡಿದ ಹಾಗೆ. ಹಾಗೆ ಮಾಡಲು ಸಾಧ್ಯವಿಲ್ಲ” ಎಂದಾಗ ನಿಜಕ್ಕೂ ಧರ್ಮಸಂಕಟ ಎದುರಾಯಿತು.
ಅಲೆಕ್ಸಾಂಡರ್ ನ ಶವದ ಮುಂದೆ ಪಂಚಾಯತಿ!
ಆಗ ಅಲೆಕ್ಸಾಂಡರ್ ನ ಸಹಾಯಕ ಹೇಳಿದ- “ಈ ಎಲ್ಲ ಪ್ರಶ್ನೆಗಳು ಎದುರಾಗಬಹುದು ಎಂದು ಅಲೆಕ್ಸಾಂಡರ್ ಗೂ ಗೊತ್ತಿತ್ತು. ಅದಕ್ಕೆ ಅವನೇ ಸಮಜಾಯಿಷಿಯನ್ನೂ ಕೊಟ್ಟಿದ್ದಾನೆ. ಆದ್ದರಿಂದ ಅವನ ಬೇಡಿಕೆಯಂತೆ ಕೈಗಳನ್ನು ಹೊರಗಿಡುವುದು ಪಾರ್ಥೀವ ಶರೀರಕ್ಕೆ ಮಾಡುವ ಅವಮಾನವಲ್ಲ. ಅವನ ದೃಷ್ಟಿಯಿಂದಲೂ ಯೋಚಿಸಿ. ಈ ಅಲೆಕ್ಸಾಂಡರ್ ಇದ್ದಾನಲ್ಲ ಆತ ಕೊನೆಗೆ ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗಲಿಲ್ಲ ಎಂಬುದನ್ನು ಜನ ಕಣ್ಣಾರೆ ನೋಡಲಿ. ನಾನು ಬರುವಾಗ ಖಾಲಿ ಕೈಯಲ್ಲಿ ಬಂದೆ. ಹೋಗುವಾಗಲೂ ಹಾಗೇ ಹೋಗಲು ಬಯಸುತ್ತೇನೆ. ನಾನು ಬಂದಿದ್ದನ್ನು ಜನ ನೋಡಲಿಲ್ಲ. ಖಾಲಿ ಕೈಯಲ್ಲಿ ಹೋಗಿದ್ದನ್ನಾದರೂ ನೋಡಲಿ ಎಂಬುದು ಅವನ ಆಶಯವಾಗಿತ್ತು.
ಅನಂತರ ಅಲೆಕ್ಸಾಂಡರ್ ನ ಕೋರಿಕೆಯಂತೆ ಅವನ ಕೈಗಳನ್ನು ಶವಪೆಟ್ಟಿಗೆಯಿಂದ ಹೊರಗಿಟ್ಟೇ ಅಂತ್ಯಸಂಸ್ಕಾರ ಮಾಡಲಾಯಿತು!
ಅಲೆಕ್ಸಾಂಡರನಿಗೆ ಅಂಥ ಜರೂರೇನಿತ್ತು?
ಜಗತ್ತನ್ನೇ ಜಯಿಸ ಹೊರಟವನಿಗೆ ಎಲ್ಲವೂ ನಶ್ವರವಾಗಿತ್ತು, ಖಾಲಿಖಾಲಿಯಾಗಿತ್ತು. ತಾನು ಗಳಿಸಿದ್ದೆಲ್ಲ ನಿರರ್ಥಕ, ನಿಷ್ಪ್ರಯೋಜಕ ಎಂಬ ತೀರ್ಮಾನಕ್ಕೆ ಆತ ಬಂದಿದ್ದ. ಆತನಿಗೆ ಅದೆಂಥ ಅಪರಾಧ (Guilt) ಭಾವ ಕಾಡುತ್ತಿದ್ದೀರಬಹುದು? ಆತನಿಗೆ ತಾನು ಜೀವನವಿಡೀ ಸಾಧಿಸಿದ್ದಕ್ಕಿಂತ, ಪಡೆದುದಕ್ಕಿಂತ ಖಾಲಿಯಾಗಿರುವುದರಲ್ಲಿಯೇ ಅಂತಿಮ ಆನಂದ ಕಂಡಿದ್ದ. ತಾನು ಗಳಿಸಿದ್ದೆಲ್ಲವೂ ಶೂನ್ಯ ಎಂದು ಅವನಿಗೆ ಅನಿಸಿತ್ತು. ಶೂನ್ಯವೇ ಹಿತವೆನಿಸಿತ್ತು. ಅದನ್ನು ಇಡೀ ಜಗತ್ತಿನ ಜನ ನೋಡಲಿ ಎಂಬುದು ಆವನ ಆಶಯವಾಗಿತ್ತು.
ಸಾಯುವುದಕ್ಕಿಂತ ಕೆಲ ದಿನಗಳ ಮೊದಲು ತನ್ನ ಪರಮಾಪ್ತ ಜನರಲ್್ನನ್ನು ಕರೆದ ಅಲೆಕ್ಸಾಂಡರ್, “ನಾನು ದೇಶಗಳನ್ನು ಗೆಲ್ಲುವ ಭರದಲ್ಲಿ ನನ್ನನ್ನೇ ಕಳೆದುಕೊಂಡು ಬಿಟ್ಟೆ. ಅದೇ ಮಹಾನ್ ಸಾಧನೆ ಎಂದುಕೊಂಡು ಬಿಟ್ಟೆ. ಈಗ ಅನಿಸುತ್ತಿದೆ ನಾನು ನನ್ನ ಇಡೀ ಬದುಕನ್ನೇ ವೃಥಾ ವ್ಯರ್ಥಗೊಳಿಸಿಕೊಂಡು ಬಿಟ್ಟೆ. ದೇಶದೇಶಗಳನ್ನು ಜಯಿಸಿ ನಾನಾದರೂ ಈಗ ಏನು ಮಾಡಲಿ? ನನ್ನ ಅಹಂಕಾರಕ್ಕೆ ನಾನೇ ಬಲಿಯಾಗಿ ಬಿಟ್ಟೆನಾ ಎಂಬ ಭಯಂಕರ ಭಯ ನನ್ನನ್ನು ಕಾಡುತ್ತಿದೆ. ನನ್ನ ಬದುಕನ್ನು ಈ ಭಯ ಸುಡುತ್ತಿದೆ. ನಾನು ಸಾವರಿಸಿಕೊಳ್ಳಲಾಗದಷ್ಟು ಜರ್ಝರಿತನಾಗಿ ಬಿಟ್ಟಿದ್ದೇನೆ” ಎಂದು ತನ್ನ ಮನದಾಳದಲ್ಲಿ ಹೊತ್ತಿ ಉರಿಯುತ್ತಿದ್ದ ಭುಗಿಲನ್ನು ತೋಡಿಕೊಂಡಿದ್ದ.
ಅಲೆಕ್ಸಾಂಡರ್ ಕೊನೆ ಕೊನೆಗೆ ತನ್ನ ಸಾಧನೆಯನ್ನು ನೆನೆನೆನೆದು ಸಣ್ಣವನಾಗುತ್ತಿದ್ದ. ತನ್ನ ಆಪ್ತರ ಮುಂದೆ ಈ ನೋವನ್ನು ಹಂಚಿಕೊಳ್ಳುತ್ತಿದ್ದ. ಇದರಿಂದ ಹೊರಬರುವ ಮಾರ್ಗಗಳ ಬಗ್ಗೆ ಗಾಢವಾಗಿ ಚಿಂತಿಸುತ್ತಿದ್ದ.      ಎಂಥ ವಿಚಿತ್ರ ಅಂದ್ರೆ ಅಲೆಕ್ಸಾಂಡರನಿಗೆ ಸಮಯ ಸಿಕ್ಕಾಗಲೆಲ್ಲ ಡಿಯೋಜಿನಸ್ ಎಂಬ ಭಿಕ್ಷುಕನ ಜತೆ ಕಾಲ ಕಳೆಯಲು ಬಯಸುತ್ತಿದ್ದ. ಡಿಯೋಜಿನಸ್ ಅಲೆಕ್ಸಾಂಡರ್ ನ ವಾರಿಗೆಯವ. ಆತನಿಗೆ ಅವನದ್ದು ಎಂಬುದು ಏನೂ ಇರಲಿಲ್ಲ. ಆತ ಎಲ್ಲವನ್ನೂ ಬಿಟ್ಟಿದ್ದ. ಅವನ ಬಳಿ ಭಿಕ್ಷೆ ಬೇಡಲು ಒಂದು ಭಿಕ್ಷಾ ಪಾತ್ರೆಯಿತ್ತು. ಕೈಗಳಿರುವಾಗ ಆ ಪಾತ್ರೆಯೇಕೆ ಎಂದು ಅದನ್ನು ಬಿಸಾಡಿಬಿಟ್ಟ. ನೀರು ಕುಡಿಯಲು ಅವನ ಬಳಿ ಒಂದು ಪುಟ್ಟ ಲೋಟ ಇತ್ತು. ಒಂದು ದಿನ ಡಿಯೋಜಿನಸ್ ನದಿಯಲ್ಲಿ ನಾಯಿಯೊಂದು ನೀರು ಕುಡಿಯುವುದನ್ನು ನೋಡಿದ. ನಾಯಿಗೆ ನೀರು ಕುಡಿಯಲು ಲೋಟವಾಗಲಿ, ಪಾತ್ರೆಯಾಗಲಿ ಬೇಡ ಎಂತಾದರೆ ನನಗೇಕೆ ಬೇಕು ಎಂದು ತನ್ನ ಕೈಯಲ್ಲಿದ್ದ ಲೋಟವನ್ನು ಸಹ ಬಿಸಾಡಿ ಬಿಟ್ಟ. ಆಗ ಅವನ ಬಳಿ ಏನೇನೂ ಇರಲಿಲ್ಲ. ಅದು ತನ್ನ ಅತ್ಯಂತ ಸಂಭ್ರಮದ ಕ್ಷಣ ಅಂತ ಆತ ಹೇಳಿಕೊಂಡಿದ್ದ.
ಡಿಯೋಜಿನಸ್ ಬಗ್ಗೆ ಅಲೆಕ್ಸಾಂಡರ್ ಕಾಲಕಾಲಕ್ಕೆ ಸುದ್ದಿ ಬರುತ್ತಿದ್ದವು. ಅವನ ಬಗ್ಗೆ ತರೇಹವಾರಿ ಕತೆಗಳನ್ನು ಜನ ಹೇಳುತ್ತಿದ್ದರು. ಡಿಯೋಜಿನಸ್್ನನ್ನು ಒಮ್ಮೆ ಭೇಟಿಯಾಗಲೇಬೇಕು ಎಂದು ಅಲೆಕ್ಸಾಂಡರ್್ಗೆ ಅನಿಸಿತು. ಆದರೆ ಡಿಯೋಜಿನಸ್ ಅಲೆಗ್ಸಾಂಡರ್ ನನ್ನು ಭೇಟಿಯಾಗಲು ಅಂಥ ಆಸಕ್ತಿ ತೋರಲಿಲ್ಲ. ಇದರಿಂದ ಅಲೆಕ್ಸಾಂಡರ್ ಗೆ ಆತನಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿತು. ಇಡೀ ಜಗತ್ತನ್ನೇ ಜಯಿಸಿದವನು ತನ್ನನ್ನು ಕಾಣಲು ಮುಂದೆ ಬಂದರೆ, ನಿರ್ಲಕ್ಷಿಸುತ್ತಿದ್ದಾನಲ್ಲ ಎಂದು ಅವನಲ್ಲಿ ಬೆರಗು ಹುಟ್ಟಿತು. ಬಿಡಲಿಲ್ಲ ಕೊನೆಗೆ ಅಲೆಕ್ಸಾಂಡರ್ ಡಿಯೋಜಿನಸ್್ನನ್ನು ಭೇಟಿಯಾದ.
ಡಿಯೋಜಿನಸ್ ನನ್ನು ಭೇಟಿಯಾದಾಗ ಅವನ ಮೇಲೆ ತುಂಡು ಬಟ್ಟೆಯೂ ಇರಲಿಲ್ಲ. ಅವನದೆಂಬುದು ಏನೂ ಇರಲಿಲ್ಲ. ಆದರೆ ಅವನ ಮುಖದಲ್ಲಿ ಅದ್ಭುತ ಕಾಂತಿ, ಸಮಾಧಾನದ ಮುದ್ರೆ ನೆಲೆಸಿತ್ತು. ನೆಮ್ಮದಿ ಅವನ ಮನಸ್ಸಿನಲ್ಲಿ ಜೋಕಾಲಿಯಾಡುತ್ತಿದೆಯೆಂದು ಯಾರು ಬೇಕಾದರೂ ಹೇಳಬಹುದಿತ್ತು.
ಡಿಯೋಜಿನಸ್್ನನ್ನು ಭೇಟಿಯಾದ ಮರುಗಳಿಗೆಯಲ್ಲೇ ಅಲೆಕ್ಸಾಂಡರ್ ಗೆ ಅನಿಸಿತು, ನನ್ನಲ್ಲಿ ಯಾವುದು ಇಲ್ಲವೋ ಅವೆಲ್ಲವೂ ಇವನಲ್ಲಿದೆ. ಯಾಕೆಂದರೆ ನನ್ನಲ್ಲಿ ಇರುವ ಯಾವ ಸಂಗತಿಯೂ ಇವನಲ್ಲಿ ಇಲ್ಲ. ಹೀಗಾಗಿ ಈತ ಇಷ್ಟೊಂದು ನಿಶ್ಚಿಂತೆಯಿಂದ ಇದ್ದಾನೆ. ಅಲೆಕ್ಸಾಂಡರ್ ಬಂದ ಕೂಡಲೇ ಡಿಯೋಜಿನಸ್್ನಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಕಾರಣ ಅವನಿಗೆ ಅಲೆಕ್ಸಾಂಡರ್್ನಿಂದ ಆಗುವುದೇನೂ ಇರಲಿಲ್ಲ. ಹೀಗಾಗಿ ಆತ ಬರುತ್ತಿದ್ದಂತೆ ಡಿಯೋಜಿನಸ್ ತನ್ನ ಪಾಡಿಗೆ ನೆಲದ ಮೇಲೆ ಮಲಗಿಬಿಟ್ಟ. ತುಸು ಹೊತ್ತು ನಿದ್ದೆ ಹೋದ. ಅಲೆಕ್ಸಾಂಡರ್ ಅವನ ಪಕ್ಕದಲ್ಲಿಯೇ ಸುಮ್ಮನೆ ಕುಳಿತಿದ್ದ. ಅದಾದ ನಂತರ ಡಿಯೋಜಿನಸ್ ಪಕ್ಕದ ನದಿಗೆ ಹೋಗಿ ಬೊಗಸೆ ತುಂಬಾ ನೀರು ಕುಡಿದ. ಅಲ್ಲಿಯೇ ಸ್ನಾನ ಮಾಡಿದ. ಆನಂತರ ಅದೇ ನದಿ ತಟದ ಮರಳು ಹಾಸಿನ ಮೇಲೇ ಮಲಗಿ ಸೂರ್ಯನ ಶಾಖಕ್ಕೆ ಮೈಯೊಡ್ಡಿದ. ಆತನ ಮುಖದಲ್ಲಿ ಸಂತೃಪ್ತಿಯ ಭಾವ ಹಾಸಿತ್ತು.
ಇದನ್ನು ಕಂಡ ಅಲೆಕ್ಸಾಂಡರ್,”ಡಿಯೋಜಿನಸ್, ನಾನು ಅಲೆಕ್ಸಾಂಡರ್. ನಿನ್ನನ್ನು ನೋಡಲೆಂದೇ ಬಂದಿದ್ದೇನೆ. ಹೆಚ್ಚು ಕಮ್ಮಿ ಇಡೀ ಜಗತ್ತನ್ನೇ ಜಯಿಸಿದವನು ನಾನು. ನಿನಗೆ ನನ್ನಿಂದ ಏನಾಗಬೇಕು ಹೇಳು, ಈಗಲೇ ನಿನಗೆ ಎಲ್ಲವನ್ನೂ ಕರುಣಿಸುತ್ತೇನೆ’ ಎಂದ. ಅದಕ್ಕೆ ಡಿಯೋಜಿನಸ್ ಶಾಂತವಾಗಿ ಹೇಳಿದ-”ನಾನು ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಮಲಗಿದ್ದೇನೆ. ದಯವಿಟ್ಟು ನನ್ನ ಹಾಗೂ ಸೂರ್ಯನ ಮಧ್ಯೆ ನಿಲ್ಲದಿದ್ದರೆ ಅದೇ ನನಗೆ ನೀನು ಮಾಡುವ ಮಹದುಪಕಾರ’ ಎಂದವನೇ ಮಗ್ಗಲು ಬದಲಿಸಿ ಆ ಉಸುಕು ಹಾಸಿನ ಮೇಲೆ ಮಲಗಿಬಿಟ್ಟ.
ಆ ದಿನವಿಡೀ ಅಲೆಕ್ಸಾಂಡರ್ ಡಿಯೋಜಿನಸ್ ಪಕ್ಕದಲ್ಲೇ ಕುಳಿತು ಅವನ ಚಲನವಲನಗಳನ್ನೆಲ್ಲ ದಿಟ್ಟಿಸುತ್ತಿದ್ದ. ಒಂದು ಇರುವೆ, ಹುಳ ಹೋದರೆ ಹೇಗೆ ಗೊತ್ತಾಗುವುದಿಲ್ಲವೋ, ಅಲೆಕ್ಸಾಂಡರ್ ಸುತ್ತಮುತ್ತ ಸುಳಿದಾಡುತ್ತಿದ್ದುದು ಕೂಡ ಡಿಯೋಜಿನಸ್ ಗೆ ಗೊತ್ತಾಗಲಿಲ್ಲ. ಆತ ಒಮ್ಮೆಯೂ ಅಲೆಕ್ಸಾಂಡರ್ ನ ಕಡೆಗೆ ಗಮನವನ್ನು ಹರಿಸಲಿಲ್ಲ.
ಅಲೆಕ್ಸಾಂಡರ್ ಗೆ ಆ ಫಕೀರನ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿತು. ಅವನ ಗಮನ ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡಿ, ಕೊನೆಗೆ ಇನ್ನು ಪರೀಕ್ಷಿಸಿ ಫಲವಿಲ್ಲವೆಂದು ಭಾವಿಸಿದ. ಡಿಯೋಜಿನಸ್ ನ ಸಾಚಾತನ ಅವನಲ್ಲಿ ಅಸಾಧಾರಣ ಪರಿವರ್ತನೆಯನ್ನು ತಂದಿತು. ಜಗತ್ತಿನಲ್ಲಿ ಹೀಗೂ ಸಮಾಧಾನ, ಸಾರ್ಥಕ್ಯವಾಗಲು ಸಾಧ್ಯವಾ ಎಂದೆನಿಸಿತು.
ಡಿಯೋಜಿನಸ್್ನ ಮುಂದೆ ತಲೆಬಾಗಿ,”ಮುಂದಿನ ಜನ್ಮ ಎಂಬುದೇನಾದರೂ ಇದ್ದರೆ, ದೇವರೇ, ನನ್ನನ್ನು ಪುನಃ ಅಲೆಗ್ಸಾಂಡರ್ ನನ್ನಾಗಿ ಹುಟ್ಟಿಸಬೇಡ. ಡಿಯೋಜಿನಸ್್ನಾಗಿ ಹುಟ್ಟಿಸು ಎಂದು ಪ್ರಾರ್ಥಿಸುತ್ತೇನೆ’ ಎಂದು ವಿನಮ್ರನಾಗಿ ನುಡಿದ.
ಆಗ ಡಿಯೋಜಿನಸ್ ಜೋರಾಗಿ ನಕ್ಕು ಬಿಟ್ಟ.”ಅಲೆಕ್ಸಾಂಡರ್, ನಿನ್ನ ಆಸೆಯನ್ನು ಈಡೇರಿಸಿಕೊಳ್ಳಲು ಮುಂದಿನ ಜನ್ಮದವರೆಗೆ ಕಾಯಬೇಕಿಲ್ಲ. ಈಗಲೇ, ನಿಂತಲ್ಲೇ ಡಿಯೋಜಿನಸ್ ಆಗಬಹುದು. ಅಲೆಕ್ಸಾಂಡರ್ ಆಗುವುದು ಕಷ್ಟ. ಡಿಯೋಜಿನಸ್ ಆಗುವುದು ಭಲೇ ಸುಲಭ. ನೀನ್ಯಾಕೆ ಈ ಪಾಟಿ ಸಂಘರ್ಷಕ್ಕೆ ಬಿದ್ದಿದ್ದೀಯಾ?  ಈ ಹೋರಾಟ ಯಾರಿಗಾಗಿ ಎಂದು ಕೇಳಿದ. ಅದಕ್ಕೆ ಅಲೆಕ್ಸಾಂಡರ್ ಹೇಳಿದ- ಮೊದಲು ನಾನು ಮಧ್ಯ ಏಷ್ಯಾವನ್ನು ಗೆದ್ದೆ. ಆನಂತರ ಭಾರತವನ್ನು ಗೆದ್ದೆ. ಬಳಿಕ ಪೂರ್ವ ದೇಶಗಳು….’
‘ಅದಾದ ಬಳಿಕ ಮುಂದೇನು ಮಾಡ್ತೀಯಾ?’ ಎಂದು ಡಿಯೋಜಿನಸ್ ಕೇಳಿದ್ದಕ್ಕೆ ಅಲೆಕ್ಸಾಂಡರ್”ಇಡೀ ಜಗತ್ತನ್ನು ಗೆದ್ದು ವಿರಮಿಸಬೇಕೆಂದಿದ್ದೇನೆ’ ಎಂದ. ಅವನ ಮಾತಿಗೆ ಜೋರಾಗಿ ನಕ್ಕ ಡಿಯೋಜಿನಸ್”ಮುಠ್ಠಾಳ, ನನ್ನನ್ನು ನೋಡು, ನಾನು ಜಗತ್ತನ್ನು ಗೆಲ್ಲದೇ ಸುಖವಾಗಿ ವಿರಮಿಸುತ್ತಿದ್ದೇನೆ. ಬಾ, ನನ್ನ ಪಕ್ಕದಲ್ಲಿ ಬಂದು ಮಲಗು. ನದಿ ತಟ ಬಹಳ ವಿಶಾಲವಾಗಿದೆ. ಇಲ್ಲಿ ಯಾರೂ ಯಾರಿಗೆ ಉಪದ್ರವ ಕೊಡುವುದಿಲ್ಲ. ಇಲ್ಲಿ ಮಲಗಿ ನೋಡು. ನಿನಗೆ ಜಗತ್ತನ್ನೇ ಗೆಲ್ಲಬೇಕೆಂದು ಅನಿಸುವುದಿಲ್ಲ. ಮೈ ಚೆಲ್ಲಿದರೆ ಸುಖ ನಿದ್ದೆ ಆವರಿಸುತ್ತದೆ’ ಎಂದವನೇ ಎರಡೂ ಕೈಗಳನ್ನು ತಲೆದಿಂಬಾಗಿಸಿಕೊಂಡು ಮಲಗಿ ಬಿಟ್ಟ!
 
ಅಲೆಕ್ಸಾಂಡರ್ ಆತನೆದುರು ಸಣ್ಣವನಾಗಿಬಿಟ್ಟ.
ಅಲ್ಲಿಂದ ಹೊರಡುವ ಮುನ್ನ ಅಲೆಕ್ಸಾಂಡರ್ ಹೇಳಿದ-”ನೀನು ಹೇಳೋದು ಸತ್ಯ. ನಾನು ಮುಠ್ಠಾಳನೇ. ಆದರೆ ನಾನು ಜಗತ್ತನ್ನು ಗೆಲ್ಲಬೇಕು. ಗೆದ್ದು ಬಂದು ನಿನ್ನ ಪಕ್ಕ ಮಲಗುತ್ತೇನೆ.’
ಅದಕ್ಕೆ ಡಿಯೋಜಿನಸ್ ಹೇಳಿದ-”ನಿನ್ನಲ್ಲಿ ಅರಿವು ಮೂಡದಿದ್ದರೆ ನೀನು ವಾಪಸ್ ಬರಲಾರೆ. ನಿನ್ನಲ್ಲಿ ಅರಿವು ಮೂಡದಿದ್ದರೆ ನೀನು ಇಲ್ಲಿಂದ ಕದಲುತ್ತಿರಲಿಲ್ಲ. ನೀನಂತೂ ಇಲ್ಲಿಗೆ ಪುನಃ ಬರುವುದಿಲ್ಲವೆಂಬುದು ನನಗೆ ಖಾತ್ರಿಯಾಗಿದೆ.’
ಅಲೆಕ್ಸಾಂಡರ್ ವಾಪಸ್ ಬರಲಿಲ್ಲ. ಮನೆ ತಲುಪುವ ಮೊದಲೇ ನಿಧನನಾದ.