Thursday 18 June 2015

ದುಡ್ಡಿದ್ದೋರೆಲ್ಲ ಜುಗ್ಗರಲ್ಲ, ಖರ್ಚು ಮಾಡುವವರೆಲ್ಲ ಶ್ರೀಮಂತರಲ್ಲ!

ಒಮ್ಮೆ ಧೀರೂಭಾಯಿ ಅಂಬಾನಿ ಪಂಚತಾರಾ ಹೋಟೆಲ್ ಗೆ ಹೋಗಿದ್ದರಂತೆ. ವೇಟರ್ ಮೆನು ಕಾರ್ಡ್ ತಂದಿಟ್ಟನಂತೆ. ಅಂಬಾನಿ ಎಲ್ಲ ಐಟಮ್್ಗಳ ರೇಟುಗಳನ್ನು ಗಮನಿಸಿದರಂತೆ. ಯಾವ ಆಹಾರ ಪದಾರ್ಥಗಳ ಬೆಲೆಯೂ ಐನೂರು ರುಪಾಯಿಗಳಿಗಿಂತ ಕಡಿಮೆ ಇರಲಿಲ್ಲ. ಒಂದು ಕಪ್ ಚಹದ ಬೆಲೆ ಆರು ನೂರು ರುಪಾಯಿ ಎಂದು ಬರೆದಿತ್ತು. ಒಂದು ಚಪಾತಿ ಮತ್ತು ರೊಟ್ಟಿಗೆ ತಲಾ ನೂರೈವತ್ತು ರುಪಾಯಿ!
ಹೊಟ್ಟೆ ಹಸಿದಿತ್ತು. ಹಾಗಂತ ಕಿಸೆಯಲ್ಲಿ ಹಣ ಇರಲಿಲ್ಲ ಅಂತ ಅಲ್ಲ. ಸಾವಿರಾರು ಕೋಟಿ ರುಪಾಯಿಗಳ ಶ್ರೀಮಂತ. ಆದರೆ, ಜತೆಯಲ್ಲಿ ಯಾರೂ ಇರಲಿಲ್ಲ. ಯಾವ ಪ್ರತಿಷ್ಠೆ ಮೆರೆಯಬೇಕೂಂತ ಅಷ್ಟೆಲ್ಲ ಹಣ ಕೊಡಬೇಕು. ಇಷ್ಟೇ ಹಣದಲ್ಲಿ ವರ್ಷವಿಡೀ ಉಣಬಹುದಲ್ಲ, ಒಂದು ಕಪ್ ಚಹಕ್ಕೆ ಐನೂರು ರುಪಾಯಿ ಕೊಡುವುದಂದರೇನು, ವರ್ಷವಿಡೀ ಚಹ ಕುಡಿಯಬಹುದಲ್ಲ….
ಹೀಗೆಲ್ಲ ಯೋಚಿಸಿದ ಅಂಬಾನಿ ಹಿಂದೆ ಮುಂದೆ ನೋಡದೇ, ಹೋಟೆಲ್ ವೇಟರ ಮತ್ತು ಸುತ್ತಲಿನವರ ಪ್ರತಿಕ್ರಿಯೆಗೂ ಕಾಯದೇ ಹೊರ ನಡೆದು, ರಸ್ತೆ ಬದಿಯಲ್ಲಿ ತಮ್ಮ ಕಾರನ್ನು ನಿಲ್ಲಿಸಿ, ಹತ್ತು ರುಪಾಯಿಗೆ ಹೊಟ್ಟೆ ತುಂಬಾ ಊಟ ಮಾಡಿದರಂತೆ.
ಈ ಘಟನೆ ಬಗ್ಗೆ ಅಂಬಾನಿ ಹೀಗೆ ಹೇಳಿದರಂತೆ- “ನಾನು ಸ್ಟಾರ್ ಹೋಟೆಲ್ ಗಳಿಗೆ ಹೋಗಿಲ್ಲ ಅಂತಲ್ಲ. ಸಾಕಷ್ಟು ಸಲ ಹೋಗಿದ್ದೇನೆ. ನಮ್ಮ ಕಂಪನಿಯ ಹಲವಾರು ಔತಣಕೂಟಗಳನ್ನು ಅಲ್ಲಿ ಆಯೋಜಿಸಿದ್ದೇನೆ. ಅವೆಲ್ಲ ಅನಿವಾರ್ಯ. ಆದರೆ ನಾನೊಬ್ಬನೇ ಎಂದೂ ಅಲ್ಲಿಗೆ ಹೋಗಿ ಊಟ ಮಾಡಿಲ್ಲ. ಅಗತ್ಯ ಮತ್ತು ಅವಶ್ಯಕತೆ ಇದ್ದರೆ ಖರ್ಚು ಮಾಡಬಹುದು. ಹತ್ತು ರುಪಾಯಿಗೆ ಐನೂರು ರುಪಾಯಿ ಕೊಡುವಷ್ಟು ನಾನು ಶ್ರೀಮಂತನಿದ್ದಿರಬಹುದು. ಆದರೆ, ಅಷ್ಟು ಮೂರ್ಖನಲ್ಲ. ನಾನು ಅಂದು ಆ ಹೋಟೆಲ್್ನಿಂದ ಎದ್ದು ಬಂದ ಪ್ರಸಂಗಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿರಬಹುದು. ಅಂಬಾನಿ ಜುಗ್ಗ ಎನ್ನಬಹುದು, ನನಗೆ ಸ್ವಲ್ಪವೂ ವಿಷಾದವಿಲ್ಲ. ಇಂದಿಗೂ ಆ ನನ್ನ ನಿರ್ಧಾರದ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ. ಉಳಿಸಿದ ಹಣ ಗಳಿಸಿದ ಹಣಕ್ಕಿಂತ ಹೆಚ್ಚು ಎಂಬುದು ನನಗೆ ಚೆನ್ನಾಗಿ ಅರಿವಿಗೆ ಬಂದಿದೆ. ನಾನು ಸ್ಟಾರ್ ಹೋಟೆಲ್್ನಲ್ಲಿ ಊಟ ಮಾಡಿದ ಬಿಲ್ ಕೊಟ್ಟವರಿಗೆ ಮಾತ್ರ ನನ್ನ ಬಗ್ಗೆ ಮಾತಾಡಲು ನೈತಿಕ ಹಕ್ಕಿದೆ. ಸ್ಟಾರ್ ಹೋಟೆಲ್್ಗಳಲ್ಲಿ ಒಂದಕ್ಕೆ ನೂರು ತೆತ್ತು ಬರುವವರ ಬಗ್ಗೆ ನನಗೆ ವಿಷಾದವಿದೆ. ಈ ಕಾರಣಕ್ಕಾಗಿಯೇ ನಾನು ಅಂಥ ಹೋಟೆಲ್ ಗಳನ್ನು ಕಟ್ಟಲಿಲ್ಲ.’
ಇನ್ನೊಮ್ಮೆ ಅಂಬಾನಿ ತಮ್ಮ ಮಕ್ಕಳ ಒತ್ತಾಯಕ್ಕೆ ಸ್ಟಾರ್ ಹೋಟೆಲ್್ಗೆ ಹೋಗಿದ್ದರಂತೆ. ಊಟವಾದ ಬಳಿಕ ಅನಿಲ್ ಅಂಬಾನಿ ವೇಟರ್ ಗೆ ಎರಡು ನೂರು ರುಪಾಯಿ ಟಿಪ್ಸ್ ಇಟ್ಟರಂತೆ. ಇದನ್ನು ಗಮನಿಸಿದ ಧೀರೂಭಾಯಿ ಅಂಬಾನಿ “ಪರವಾಗಿಲ್ಲ, ನಿನ್ನ ಅಪ್ಪ ಶ್ರೀಮಂತ, ಹೀಗಾಗಿ ಅಷ್ಟು ಟಿಪ್ಸ್ ಇಟ್ಟಿದ್ದೀಯ. ಆದರೆ ನನ್ನ ಅಪ್ಪ ಅಂಥ ಶ್ರೀಮಂತನಲ್ಲ. ಹೀಗಾಗಿ ನಾನು ಅಷ್ಟು  ಟಿಪ್ಸ್ ಇಡುವುದಿಲ್ಲ’ ಎಂದರಂತೆ.
ದುಡ್ಡಿನ ಬಗ್ಗೆ ಜನರ ಅಭಿಪ್ರಾಯವೇನು ಎಂಬ ಬಗ್ಗೆ ಇತ್ತೀಚೆಗೆ ಪ್ರತಿಷ್ಠಿತ “ಫೋರ್ಬ್ಸ್್’ ಪತ್ರಿಕೆ ನಡೆಸಿದ ಸಂದರ್ಶನದ ವಿವರಗಳನ್ನು ಓದುತ್ತಿದ್ದೆ. ಹಣದ ಬಗ್ಗೆ ಒಬ್ಬೊಬ್ಬರ ಧೋರಣೆ ಒಂದೊಂದು ರೀತಿ. ಹಣ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಗುಣ, ವ್ಯಕ್ತಿತ್ವವನ್ನು ತಂದುಕೊಟ್ಟಿದೆ. ಅತಿ ಶ್ರೀಮಂತನಾದವನಿಗೂ, ಬಡವನಿಗೂ ಹೆಚ್ಚು ವ್ಯತ್ಯಾಸವಿಲ್ಲ ಎಂಬ ತತ್ವಜ್ಞಾನಿಯ ಮಾತು ಈ ಸಮೀಕ್ಷೆಯನ್ನು ಓದಿದಾಗ ನೆನಪಿಗೆ ಬರದೇ ಇರದು.
ಜಗತ್ತಿನ ಅತ್ಯಂತ ಶ್ರೀಮಂತ ವಾರೆನ್ ಬಫೆಟ್ ಇದ್ದಾನಲ್ಲ, ಅವನಿಗೆ ಸ್ವಂತ ಮನೆಯೆಂಬುದೇ ಇಲ್ಲ. ಆತ ಒಂದು ಮೊಬೈಲ್ ಫೋನನ್ನೂ ಇಟ್ಟುಕೊಂಡಿಲ್ಲ. ತನ್ನ ಕಾರನ್ನು ತಾನೇ ಡ್ರೈವ್ ಮಾಡುತ್ತಾನೆ. ಅಂದರೆ ಡ್ರೈವರ್್ಗಳನ್ನು ಇಟ್ಟುಕೊಂಡಿಲ್ಲ. ತಾನೆ ಸ್ವತಃ ಮಾಲ್್ಗೆ ಹೋಗಿ ಮನೆಗೆ ಬೇಕಾಗುವ ಸಾಮಾನುಗಳನ್ನು ಶಾಪಿಂಗ್ ಮಾಡುತ್ತಾನೆ. ಮನೆ ತುಂಬಾ ಆಳು-ಕಾಳುಗಳನ್ನು ಇಟ್ಟುಕೊಂಡಿಲ್ಲ. ಬಾಡಿಗೆ ಮನೆಯಲ್ಲಿ ಆತ ಎಲ್ಲ ರೀತಿಯ ತುಂಬು ನೆಮ್ಮದಿಯ ಜೀವನವನ್ನು ಕಾಣುತ್ತಿದ್ದಾನೆ.
ಇಂಥ ವಾರೆನ್ ಬಫೆಟ್ ಒಂದು ದಿನ ತಾನು ದುಡಿದ ಹಣದ ಬಹುಪಾಲನ್ನು “ತಗೊಳ್ಳಿ ಚಾರಿಟಿಗೆ. ನಾನು ದುಡಿದಿದ್ದನ್ನೆಲ್ಲ ಇದೋ ದೇಣಿಗೆ ಕೊಡುತ್ತಿದ್ದೇನೆ’ ಎಂದುಬಿಟ್ಟ. ಮರುದಿನದಿಂದ ಮತ್ತಷ್ಟು ಆಸ್ಥೆಯಿಂದ ದುಡ್ಡು ಗಳಿಸಲು ಕುಳಿತ. ಹೆಚ್ಚು ಹಣ ಗಳಿಸುವ ಹೊಸ ಹೊಸ ಮಾರ್ಗಗಳ ಬಗ್ಗೆ ಚಿಂತಿಸಲಾರಂಭಿಸಿದ. ದೇಣಿಗೆ ಕೊಡುವುದನ್ನೇ ಹವ್ಯಾಸ ಮಾಡಿಕೊಂಡ. ಇದು ಅವನಿಗೆ ಹೆಚ್ಚು ದುಡಿಯುವುದು ಹೇಗೆ ಎಂಬುದನ್ನು ಕಲಿಸಲಾರಂಭಿಸಿತು. ಇನ್ನು ವಾರೆನ್ ಬಫೆಟ್್ನನ್ನು ನೋಡಿದವರು ಅವನೇಕೆ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಲಿಲ್ಲ, ಅವನೇಕೆ ಭವ್ಯ ಬಂಗಲೆ ಕಟ್ಟಿಸಲಿಲ್ಲ, ನಾವೇ ಆಳು-ಕಾಳುಗಳನ್ನು ಇಟ್ಟುಕೊಳ್ತೇವೆ ಅವನಿಗೇನು ಧಾಡಿ ಎಂದರೆ ಅವರಿಗೆ ಏನೆನ್ನೋಣ?
ಹಣದ ಬಗ್ಗೆ ಎಲ್ಲರ ಧೋರಣೆಯೂ ಒಂದೇ ರೀತಿ ಇರುವುದಿಲ್ಲ. ಭಾರತ ಪತ್ರಿಕೋದ್ಯಮದ ಧೀಮಂತ ರಾಮನಾಥ ಗೋಯೆಂಕಾ ಅವರ ಜೀವನದ ಘಟನೆಯೊಂದನ್ನು ಇಲ್ಲಿ ಉಲ್ಲೇಖಿಸಬಹುದಾದರೆ, ಒಮ್ಮೆ ಹಬ್ಬದ ನಿಮಿತ್ತ ಗೋಯೆಂಕಾ ಅವರಿಗೆ ಅವರ ಸೊಸೆ ಖಾದಿ ಜುಬ್ಬಾ, ಧೋತಿಯನ್ನು ಉಡುಗೊರೆಯಾಗಿ ಕೊಟ್ಟರಂತೆ. ಇದಕ್ಕೆ ಪ್ರತಿಯಾಗಿ ರಾಮನಾಥ ಗೋಯೆಂಕಾ ಅವರು ಸೊಸೆಗೆ ಪತ್ರ ಬರೆದರಂತೆ- “ಹಬ್ಬದ ನಿಮಿತ್ತ ನನಗೆ ಉಡುಗೊರೆಯಾಗಿ ಧೋತಿ, ಜುಬ್ಬವನ್ನು ಕೊಟ್ಟಿದ್ದಕ್ಕೆ ನನಗೆ ಬಹಳ ಸಂತಸವಾಗಿದೆ. ಆದರೆ ಇನ್ನು ಮುಂದೆ ನನಗೆ ಇಂಥ ವಸ್ತ್ರವನ್ನು ಖಾದಿ ಭಂಡಾರದಲ್ಲಿ ಶೇ.30ರಷ್ಟು ರಿಯಾಯತಿ ದರದಲ್ಲಿ ಮಾರಾಟವಿದ್ದ ಸಂದರ್ಭದಲ್ಲಿ ಖರೀದಿಸಿ ಕೊಡಬಹುದು.’
ಹಣದ ಬಗ್ಗೆ ಅಂಥ ಧೋರಣೆ ತಳೆದಿದ್ದರು ಗೋಯೆಂಕಾ. ಹಣದ ಮಹತ್ವ ಗೊತ್ತಿದ್ದವರು, ಜೀವನದಲ್ಲಿ ಶಿಸ್ತನ್ನು ರೂಪಿಸಿಕೊಂಡವರು, ಜೀವನದಲ್ಲಿ ಪರಿಶ್ರಮದ ಅರಿವು ಇರುವವರು ಮಾತ್ರ ಇಂಥ ನಿಲುವು ತಾಳಲು ಸಾಧ್ಯ.
ಪತ್ರಕರ್ತೆ ಬಚಿ ಕರ್ಕಾರಿಯಾ “ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ಹಾಗೂ ಸಂಸ್ಥೆಯ ಅಂತರಂಗ ಪರಿಚಯಿಸುವ ಪುಸ್ತಕವೊಂದನ್ನು ಬರೆದಿದ್ದಾರೆ. ಅದರ ಹೆಸರು Behind the Times ಅಂತ. ಈ ಕೃತಿಯಲ್ಲಿ ಆ ಪತ್ರಿಕೆಯ ಮಾಲೀಕ ಸಮೀರ್ ಜೈನ್ ಕುರಿತು ಸ್ವಾರಸ್ಯವಾಗಿ ಬರೆದಿದ್ದಾರೆ.
ಸಮೀರ್ ಜೈನ್ ಎಷ್ಟು ಧಾರಾಳಿಯೋ, ಅಷ್ಟೇ ದುಂದು ವೆಚ್ಚವನ್ನು ಕಂಡರೆ ಆಗದವರು. ಅನಗತ್ಯವಾಗಿ ಒಂದು ರುಪಾಯಿ ಹೆಚ್ಚು ಖರ್ಚಾಗುವುದನ್ನು ಸಹಿಸದವರು. ಒಮ್ಮೆ ಸಮೀರ್್ಜೈನ್ ಅವರು ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಳ್ಳಲು ತಮ್ಮ ಜಾಹೀರಾತು ವಿಭಾಗದ ಮುಖ್ಯಸ್ಥೆ ಇಂದಿರಾ ಡೆಯಿಸ್ ಹಾಗೂ ಇತರರೊಂದಿಗೆ ವಿದೇಶಕ್ಕೆ ಹೋಗಿದ್ದರು. ತಾವು ತಂಗಿದ್ದ ಹೋಟೆಲ್್ನಲ್ಲಿ ಇಂದಿರಾ ಅವರು ರಿಸೆಪ್್ಶನ್ ಕೌಂಟರ್ ಬಳಿ ಹೋಗಿ ಮರುದಿನ ಆರು ಗಂಟೆಗೆ ತಮ್ಮನ್ನು ಎಬ್ಬಿಸುವಂತೆಯೂ, ಅದಾದ ಐದು ನಿಮಿಷದ ಬಳಿಕ ಬೆಡ್ ಟೀ ತರುವಂತೆಯೂ ಹೇಳಿದರು. ಅಲ್ಲಿಯೇ ಸನಿಹದಲ್ಲಿದ್ದ ಸಮೀರ್ ಜೈನ್ ಈ ಸಂಭಾಷಣೆಯನ್ನು ಕೇಳಿಸಿಕೊಂಡರು, ಇಂದಿರಾ ಹತ್ತಿರ ಹೋಗಿ  ತಮ್ಮ ಕೋಟಿನ ಜೇಬಿನಿಂದ ಏನನ್ನೋ ತೆಗೆದು ಅವಳ ಕೈಗೆ ಕೊಟ್ಟರು.
ನೋಡಿದರೆ ಎರಡು ಟೀ ಬ್ಯಾಗ್!
‘ಬೆಡ್ ಟೀ ಬದಲು ಬರೀ ಬಿಸಿ ನೀರನ್ನಷ್ಟೇ ತರಲು ಹೇಳಿ, ಈ ಟೀ ಬ್ಯಾಗ್ ಅದ್ದಿಕೊಳ್ಳಿ. ಅದಕ್ಯಾಕೆ ಸುಮ್ಮನೆ ಮುನ್ನೂರು-ನಾನೂರು ರುಪಾಯಿ ಖರ್ಚು ಮಾಡುತ್ತೀರಿ? ನಾನು ಸದಾ ಪಂಚತಾರಾ ಹೋಟೆಲ್್ನಲ್ಲಿ ಉಳಿದುಕೊಳ್ಳುವಾಗ ಟೀ ಬ್ಯಾಗನ್ನು ನನ್ನೊಂದಿಗೆ ಇಟ್ಟುಕೊಂಡಿರುತ್ತೇನೆ’ ಎಂದರು ಸಮೀರ್ ಜೈನ್. ಭಾರತದ ನಂ.1 ಪತ್ರಿಕಾ ಸಂಸ್ಥೆಯ, ಶ್ರೀಮಂತ ಮಾಲೀಕರು ರೂಪಿಸಿಕೊಂಡ ರೂಢಿಯಿದು.
ಇನ್ನೊಂದು ಸಂದರ್ಭ. ಸಮೀರ್ ಜೈನ್ ಅವರು ಪತ್ರಿಕೆಯ 175ನೇ ವಾರ್ಷಿಕೋತ್ಸವದ ನಿಮಿತ್ತ ಪಂಚತಾರಾ ಹೋಟೆಲ್್ನಲ್ಲಿ ಔತಣಕೂಟವನ್ನು ಏರ್ಪಡಿಸಿದ್ದರು. ಅವರ ಸಹದ್ಯೋಗಿಯೊಬ್ಬರು ಊಟ ಮಾಡುವಾಗ ಎರಡು-ಮೂರು ಸಲ ಪ್ಲೇಟನ್ನು ಬದಲಾಯಿಸಿದರು. ಇದನ್ನು ಗಮನಿಸಿದ ಸಮೀರ್ ಜೈನ್, “ನೋಡಿ, ಪಂಚತಾರಾ ಹೋಟೆಲ್್ನಲ್ಲಿ ಇಂಥ ಪಾರ್ಟಿಯಲ್ಲಿ ಎಷ್ಟು ಜನ ಊಟ ಮಾಡಿದ್ದಾರೆಂಬುದನ್ನು ಪ್ಲೇಟ್್ಗಳಿಂದ ಲೆಕ್ಕ ಹಾಕುತ್ತಾರೆ. ನೀವು ಊಟ ಮಾಡುವಾಗ ಪ್ರತಿಸಲ ಬೇರೆ ಬೇರೆ ಐಟೆಮ್್ಗಳನ್ನು ಹಾಕಿಕೊಳ್ಳುವಾಗ ಪ್ಲೇಟನ್ನು ಬದಲಿಸಿದರೆ, ಹೆಚ್ಚು ಜನ ಊಟ ಮಾಡಿದ್ದಾರೆಂದು ಹೆಚ್ಚು ಬಿಲ್ ಮಾಡುತ್ತಾರೆ. ಆದ್ದರಿಂದ ಒಂದೇ ಪ್ಲೇಟಿನಿಂದ ಊಟ ಮಾಡಿ’ ಎಂದು ಹೇಳಿದರು.
ಸಮೀರ್್ಜೈನ್ ಹಣ ಉಳಿಸುವ ಸಂಗತಿ ಬಂದಾಗ ಅವು ಎಷ್ಟೇ ಸಣ್ಣಪುಟ್ಟ ಅಂಶಗಳಾಗಿರಲಿ, ಅದನ್ನು ತಮ್ಮ ಸಹೋದ್ಯೋಗಿಗಳಿಗೆ ತಿಳಿಸದೇ ಬಿಡುತ್ತಿರಲಿಲ್ಲ. ಅಷ್ಟೇ ಅಲ್ಲ, ಅದನ್ನು ಭಾರತದಲ್ಲಿರುವ ತಮ್ಮ ಎಲ್ಲ ಆವೃತ್ತಿಗಳಲ್ಲೂ ಜಾರಿಗೆ ತರುತ್ತಾರೆ. ಒಮ್ಮೆ ಬಳಸಿದ ಕಾಗದ, ಲಕೋಟೆಗಳನ್ನು ಪುನಃ ಬಳಸುವಂತೆ ಸೂಚಿಸುತ್ತಾರೆ. ಒಂದೇ ಮಗ್ಗುಲಿಗೆ ಬಳಸಿದ ಕಾಗದವನ್ನು ಕಸದ ಬುಟ್ಟಿಗೆ ಎಸೆದಿದ್ದನ್ನು ಕಂಡರೆ ಸುಮ್ಮನೆ ಬಿಡುವುದಿಲ್ಲ. ಖಾಲಿಯಿರುವ ಮಗ್ಗುಲನ್ನು ಬಳಸಿ ಎಂದು ಸೂಚಿಸುತ್ತಾರೆ.
ಲೆಟರ್್ ಹೆಡ್ ನಲ್ಲಿ ಬರೆದಿದ್ದನ್ನು ನೇರವಾಗಿ ಫ್ಯಾಕ್ಸ್ ಮಾಡುವುದನ್ನು ಅವರು ಸಹಿಸುತ್ತಿರಲಿಲ್ಲ. ಹಾಗೆ ಮಾಡುವ ಬದಲು ಆ ಲೆಟರ್್ ಹೆಡ್ ಫೋಟೋಕಾಪಿ (ಜೆರಾಕ್ಸ್) ತೆಗೆದು ಫ್ಯಾಕ್ಸ್ ಮಾಡುವಂತೆ ಹೇಳುತ್ತಿದ್ದರು. ಕಾರಣ ಇಷ್ಟೆ. ಲೆಟರ್್ಹೆಡ್ ಬಳಸಿದ ಕಾಗದವನ್ನು ಫ್ಯಾಕ್ಸ್ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ, ಇದರಿಂದ ಫೋನ್್ಬಿಲ್ ಜಾಸ್ತಿಯಾಗುತ್ತದೆ. ಇದನ್ನು ತಪ್ಪಿಸಲು ಲೆಟರ್್ಹೆಡ್್ನ್ನು ಜೆರಾಕ್ಸ್ ಮಾಡಿ ಫ್ಯಾಕ್ಸ್ ಮಾಡುವಂತೆ ಹೇಳುತ್ತಿದ್ದರು.
‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಸಂಪಾದಕೀಯ ಮಂಡಳಿಯಲ್ಲಿ ಹಿರಿಯರಲ್ಲೊಬ್ಬರಾಗಿರುವ ಜಗ್ ಸುರಯ್ಯ ಇತ್ತೀಚೆಗೆ ತಾವು ಬರೆದ “JS and The Times of My Life’ ಪುಸ್ತಕದಲ್ಲೂ ಸಮೀರ್ ಜೈನ್ ಕುರಿತು ಪ್ರಸ್ತಾಪಿಸಿದ್ದಾರೆ. ಒಮ್ಮೆ ಜಗ್ ಸುರಯ್ಯ ಅವರು ತಮ್ಮ ಸ್ನೇಹಿತರೊಬ್ಬರ ಮನೆಯಲ್ಲಿ ರಾತ್ರಿ ಗುಂಡು ಪಾರ್ಟಿ ಮಾಡುತ್ತಿದ್ದರಂತೆ. ಆಗ ಅಲ್ಲಿಗೆ ಬರುವುದಾಗಿ ಸಮೀರ್ ಜೈನ್ ಅವರಿಂದ ಫೋನ್ ಬಂತಂತೆ. ಕೆಲಕ್ಷಣಗಳಲ್ಲಿ ತಮ್ಮ ಪತ್ನಿಯೊಂದಿಗೆ ಆಗಮಿಸಿದರಂತೆ. ಏಳೆಂಟು ಜನರಿದ್ದ ಆ ಪಾರ್ಟಿಯಲ್ಲಿ ಸಮೀರ್ ಒಂದು ಮೂಲೆಯಲ್ಲಿ ಕುಳಿತು ಎಲ್ಲರ ಹರಟೆಯನ್ನು ಕುತೂಹಲದಿಂದ ಆಲಿಸುತ್ತಿದ್ದರಂತೆ. ದಿಲ್ಲಿಯಲ್ಲಿ ಗುಂಡು ಹಾಕಲು ಪ್ರಶಸ್ತವಾದ ಹೊಸ ತಾಣಗಳ ಬಗ್ಗೆ ಚರ್ಚೆ ನಡೆಯುತ್ತಿತ್ತಂತೆ. ಆಗ ತಾನೆ ಆರಂಭವಾದ ಸ್ಪಾನಿಶ್ ರೆಸ್ಟೋರೆಂಟ್ ಬಹಳ ಚೆನ್ನಾಗಿದೆ. ಆದರೆ ಬಹಳ ದುಬಾರಿ’ ಎಂದು ಯಾರೋ ಹೇಳಿದಾಗ, “ವಿಶೇಷ ಸಂದರ್ಭದಲ್ಲಿ ಮಾತ್ರ ಹೋಗಬಹುದು’ ಎಂದು ಇನ್ಯಾರೋ ಹೇಳಿದರಂತೆ. ಆಗ ಸಮೀರ್ ಜೈನ್ ಮಧ್ಯಪ್ರವೇಶಿಸಿದಾಗ ಎಲ್ಲರೂ ಮೌನರಾಗಿ ಅವರ ಮಾತಿನೆಡೆ ಲಕ್ಷ್ಯವಿಟ್ಟರಂತೆ. “ಏನು ಹೇಳ್ತಾ ಇದ್ದೀರಾ ನೀವು? ನಿಮಗೆ ಹೆಚ್ಚು ಹಣ ತೆತ್ತು ದುಬಾರಿ ಹೋಟೆಲ್್ಗೆ ಹೋಗೊದಂದ್ರೆ ಇಷ್ಟಾನಾ?’ ಇದರಿಂದ ನಿಮಗೆ ಸಂತಸವಾಗುತ್ತದಾ?’ ಎಂದು ಕೇಳಿದರಂತೆ.
ಅದಕ್ಕೆ ಜಗ್ ಸುರಯ್ಯ “ಹೌದು. ನಮಗೆ ಹಣ ಖರ್ಚು ಮಾಡುವುದೆಂದರೆ ಬಹಳ ಇಷ್ಟ, ಅದೂ ವಿಶೇಷ ಸಂದರ್ಭದಲ್ಲಿ. ನಾವೇನು ಅಲ್ಲಿಗೆ ದಿನಾ ಹೋಗುವುದಿಲ್ಲವಲ್ಲ? ನಮಗೆ ಅಷ್ಟು ಹಣ ಖರ್ಚು ಮಾಡುವ ಸಾಮರ್ಥ್ಯವಿರುವಾಗ ಆಗೊಮ್ಮೆ ಈಗೊಮ್ಮೆ ಹೋಗುತ್ತೇವೆ. ಅದಕ್ಕಾಗಿಯೇ ನಮಗೆ ಅಂಥ ಸಂದರ್ಭಗಳು ವಿಶೇಷವೆನಿಸುತ್ತವೆ’ ಎಂದರಂತೆ.
ಅವರ ಮಾತಿಗೆ ತಲೆಯಾಡಿಸಿದ ಸಮೀರ್ ಜೈನ್ “ಓಹೋ ಹೌದಾ? ನಿಮಗೆ ಹಣ ಖರ್ಚು ಮಾಡುವುದೆಂದರೆ ಇಷ್ಟವಾ? ಇಂಟರೆಸ್ಟಿಂಗ್!’ ಎಂದು ಗಂಭೀರವಾಗಿ ಉದ್ಗಾರ ತೆಗೆದರಂತೆ.
ಸಮೀರ್ ಜೈನ್ ಯಾಕೆ ಯಶಸ್ವಿ ಪತ್ರಿಕಾ ಮಾಲೀಕರು ಎಂಬುದು ಈಗ ಅರ್ಥವಾಗಿರಲಿಕ್ಕೆ ಸಾಕು.
ನೀವು ಹೊಂದಿರುವ ಹಣದಿಂದ ನೀವು ಶ್ರೀಮಂತರಾಗುವುದಿಲ್ಲ. ನೀವು ಹಣಕ್ಕೆ ಕೊಡುವ ಮರ್ಯಾದೆಯಿಂದ ಮಾತ್ರ ಶ್ರೀಮಂತರಾಗುತ್ತೀರಿ. ಶ್ರೀಮಂತರಾಗುವವರಿಗೆ ಈ ಅರ್ಹತೆ ಬೇಕು.

No comments:

Post a Comment