Saturday 15 August 2015

ನಮ್ಮ ಸುಖಕ್ಕಾಗಿ ತನ್ನ ಜೀವ ಕೊಡುವ ಯೋಧನ ಕಷ್ಟ ಕೇಳಿದ್ದೇವಾ?

ಒಂದು ಗಂಭೀರ ಪ್ರಶ್ನೆಯನ್ನು ಈ ಸಂದರ್ಭದಲ್ಲಿ ಕೇಳಲೇಬೇಕಾಗಿದೆ. ನಿಜಕ್ಕೂ ನಾವು ನಮ್ಮ ಸೈನಿಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆವಾ? ಅವರಿಗೆ ಸಿಗಬೇಕಾದ ಮರ್ಯಾದೆ ಸಿಗುತ್ತಿದೆಯಾ? ನಮ್ಮ ನೆಮ್ಮದಿ, ಮೋಜು, ತೆವಲು, ರಕ್ಷಣೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿರುವ, ನಮ್ಮ ಕುಟುಂಬದ ಒಳಿತಿಗಾಗಿ ತಮ್ಮ ಸಂಸಾರವನ್ನೇ ಪಣಕ್ಕಿಡುವ ಸೈನಿಕರ ಕ್ಷೇಮಕ್ಕಾಗಿ ನಾವು ಮಾಡುತ್ತಿರುವುದೇನು? ದೇಶ ರಕ್ಷಣೆಯ ಮುಂದೆ ಎಲ್ಲವೂ ಗೌಣ ಎಂದು ಭಾವಿಸಿರುವ ಸೈನಿಕರನ್ನು ನಾವು ಹೇಗೆ ನಡೆಸಿಕೊಳ್ಳುತ್ತಿದ್ದೇವೆ? ದೇಶ ರಕ್ಷಣೆಗಾಗಿ ಸರ್ವಸ್ವವನ್ನೂ ಧಾರೆಯೆರೆಯುವ, ಅದನ್ನೇ ತನ್ನ ಜೀವನದ ಪರಮ ಪವಿತ್ರ ಕಾರ್ಯ ಎಂದು ಭಾವಿಸಿರುವ ಸೈನಿಕನಿಗೆ ನಾವು ಎಷ್ಟು ಪ್ರೀತಿ ತೋರಿದ್ದೇವೆ? ಅವನ ಕೆಲಸವನ್ನು ಮೆಚ್ಚಿ ಮೈದಡವಿದ್ದೇವೆ? ಅವನ ಶ್ರಮ, ರಕ್ತ, ಕಣ್ಣೀರಿಗೆ ಯಾವ ಬೆಲೆಯಿದೆ?
ಈ ಪ್ರಶ್ನೆಯನ್ನು ಕೇಳಲೇ ಬೇಕಾಗಿದೆ.
ಈ ಜಗತ್ತಿನ ಅತ್ಯಂತ ಎತ್ತರದ ಮತ್ತು ದುರ್ಗಮವಾದ ಯುದ್ಧಭೂಮಿ ಎಂದು ಕರೆಯಿಸಿಕೊಳ್ಳುವ ಸಿಯಾಚಿನ್ ಪ್ರದೇಶವನ್ನೊಮ್ಮೆ ಸುಮ್ಮನೆ ಮಸ್ಸಿನಲ್ಲಿ ಕಲ್ಪಿಸಿಕೊಳ್ಳಿ. ಮತ್ತೇನೂ ಹೇಳೋದು ಬೇಡ, ನಮಗೆ ‘ಅರ್ಧ’ ದಿನ ಅಲ್ಲಿರಲು ಸಾಧ್ಯವಿಲ್ಲ. ಮೂಳೆಯ ಮೂಲೆ ಮೂಲೆ ಕೊರೆಯುವ ಮೈನಸ್ ಎಪ್ಪತ್ತು ಡಿಗ್ರಿ ಹವಾಮಾನವಿರುವ ಭೀಕರ ಚಳಿ, ಶೀತಗಾಳಿ, ಕೆಲ ಕಾಲ ಬರಿ ಮೈಯನ್ನು ಗಾಳಿಗೆ ಬಿಟ್ಟರೆ ಮರಗೆಟ್ಟು ಹೋಗುವಂಥ ವಿಷಮ ವಾತಾವರಣ, ಹಿಮ ಪರ್ವತದ ಹೊರತಾಗಿ ಮತ್ತೇನೂ ಕಾಣದ, ಪ್ರತಿದಿನ ಮಲ ಮೂತ್ರ ವಿಸರ್ಜನೆಗೂ ಹರಸಾಹಸ ಮಾಡಬೇಕಾದ ಪರಿಸ್ಥಿತಿಯಿರುವ ಸಿಯಾಚಿನ್ ಪ್ರದೇಶದಲ್ಲಿ ಯುದ್ಧ ಮಾಡುವ ಮಾತಿರಲಿ, ಅಲ್ಲಿ ಇರುವುದೇ ಒಂದು ದೊಡ್ಡ ಪವಾಡ. ಸಿಯಾಚಿನ್ ಪ್ರದೇಶವನ್ನು ‘ಕಿಲ್ಲಿಂಗ್ ಫೀಲ್ಡ್್’ ಎಂದು ಕರೆಯುವುದುಂಟು.
ಅಲ್ಲಿಗೆ ಭೇಟಿ ನೀಡಿದ ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಹೇಳಿದ್ದರು – ‘ಸಾಮಾನ್ಯ ಮನುಷ್ಯನಾದವನು ಸಿಯಾಚಿನ್್ನಲ್ಲಿ ಹತ್ತು ನಿಮಿಷ ಸಹ ಇರಲಾರ. ಇಂಥ ಪ್ರದೇಶದಲ್ಲಿ ನಮ್ಮ ಸೈನಿಕರು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದೇ ಒಂದು ವಿಸ್ಮಯ. ಯಾಕೆಂದರೆ ಕೆಲವರು ಇಲ್ಲಿ ಎರಡು-ಮೂರು ವರ್ಷಗಳಿಂದ ಇದ್ದಾರೆ. ಅವರ ಮನೋಸ್ಥೈರ್ಯಕ್ಕೆ ನಾನು ಮೂಕ ವಿಸ್ಮಿತನಾಗಿದ್ದೇನೆ. ನನಗೆ ಮನೆಯಲ್ಲಿ ಇರುವಾಗ ಸೈನಿಕರ ನೆನಪಾದರೆ ಏನೋ ಅಪರಾಧ ಭಾವ ಕಾಡುತ್ತಿತ್ತು. ನಾನು ಇಲ್ಲಿ ಇಷ್ಟೊಂದು ಆರಾಮಾಗಿದ್ದೇನೆ. ಆದರೆ ನಮ್ಮ ಸೈನಿಕರ ಪಾಡೇನು ಎಂಬುದನ್ನು ನೆನೆದಾಗ ಕುಬ್ಜನಾಗಿಬಿಡುತ್ತಿದ್ದೆ. ಹೀಗಾಗಿ ಆಗಾಗ ಕಾರ್ಗಿಲ್ ಮತ್ತು ಸಿಯಾಚಿನ್್ಗೆ ಹೋಗಿ ಬರುತ್ತಿದ್ದೆ’
ಸಿಯಾಚಿನ್ ಮೃತ್ಯು ಕಂದರವೇ. ಅಲ್ಲಿ ಸೈನಿಕರು ವೈರಿಗಳ ಜತೆ ಕಾದಾಡಿ ಮೃತಪಟ್ಟಿದ್ದಕ್ಕಿಂತ, ಭೀಕರ ಚಳಿ ಜತೆ ಹೋರಾಡಲಾಗದೇ ಸತ್ತಿದ್ದೇ ಹೆಚ್ಚು. ವೈರಿಗಳ ಜತೆ ಕಾದಾಡುವುದು ದೊಡ್ಡದಲ್ಲ. ಆದರೆ ‘ಅಗೋಚರ ಚಳಿ’ಯ ಜತೆ ಸೆಣಸುವುದೆಂತು?
ಸಿಯಾಚಿನ್್ನಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ಯೋಧರು ಜಗತ್ತಿನ ಎಂಥ ವಾತಾವರಣದಲ್ಲಾದರೂ ಬದುಕುತ್ತಾರೆ. ತಾಸಿಗೆ 160-180 ಕಿ.ಮಿ. ವೇಗದಲ್ಲಿ ಬೀಸುವ ಚಳಿಗಾಳಿ, ವರ್ಷವಿಡೀ ಸುರಿಯುವ ಮಂಜಿನಧಾರೆಗೆ ಎದೆಯೊಡ್ಡುವುದಿದೆಯಲ್ಲ, ಅದಕ್ಕೆ ಅಗಾಧ ಛಾತಿಯೇ ಬೇಕು. ಕಳೆದ ಹತ್ತು ವರ್ಷಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಸೈನಿಕರು ಫ್ರಾಸ್ಟ್್ಬೈಟ್, ಚಳಿ ಹೊಡೆತಕ್ಕೆ ಅಸು ನೀಗಿದ್ದಾರೆ.
ಭಾರತೀಯ ಸೇನೆಯಲ್ಲಿ ಸಿಯಾಚಿನ್ ಡ್ಯೂಟಿಗೆ ಸೈನಿಕನೊಬ್ಬನಿಗೆ ಬುಲಾವ್ ಬಂತೆಂದರೆ ಮೃತ್ಯುಲೋಕಕ್ಕೆ ಸೆಣೆಸಲು ಕರೆ ಬಂದಂತೆ. ಆದರೆ ನಮ್ಮ ಸೈನಿಕರು ಅದೆಂಥ ಕಠಿಣತಮ ಮಾನಸಿಕ ಸ್ಥಿತಿ, ಛಲ, ಪ್ರೇರಣೆ, ಹೋರಾಟ, ತ್ಯಾಗ, ಬಲಿದಾನ, ದೇಶಪ್ರೇಮಕ್ಕೆ ತಮ್ಮನ್ನು ಅರ್ಪಿಸಿಕೊಂಡಿರುತ್ತಾರೆಂದರೆ, ಯಾರೂ ಸಹ ಒಲ್ಲೆ ಎನ್ನುವುದಿಲ್ಲ. ಬೆಂಗಳೂರಿನ ವಿಧಾನಸೌಧದಲ್ಲೋ, ಎಂಎಸ್ ಬಿಲ್ಡಿಂಗ್್ನಲ್ಲೋ ಕೆಲಸ ಮಾಡುವ ಸರ್ಕಾರಿ ನೌಕರ ಅಥವಾ ಪತ್ರಿಕಾಲಯದಲ್ಲಿ ಕೆಲಸ ಮಾಡುವ ವರದಿಗಾರರನ್ನು ಬೀದರಕ್ಕೋ, ಗುಲ್ಬರ್ಗಕ್ಕೋ ವರ್ಗ ಮಾಡಿ, ವಿಲಿವಿಲಿ ಅಂತ ಒದ್ದಾಡಿ ಬಿಡುತ್ತಾರೆ. ನೌಕರಿಯನ್ನಾದರೂ ಬಿಟ್ಟೇವು ಆದರೆ ಬೆಂಗಳೂರು ಬಿಡಲೊಲ್ಲೆವು ಅಂತಾರೆ. ಸರ್ಕಾರಿ ವೈದ್ಯರನ್ನು ಪಕ್ಕದ ಹಳ್ಳಿಗೆ ಕಳಿಸಿಬಿಡಿ ನೋಡೋಣ.
ಆದರೆ ವೀರಯೋಧನನ್ನು ಲಡಾಕ್್ಗೋ, ಕಾರ್ಗಿಲ್್ಗೋ, ಸಿಯಾಚಿನ್್ಗೋ ಕಳಿಸಿ, ಮದುವೆಯಾದ ಮಾರನೇ ದಿನವೇ ಅಲ್ಲಿಗೆ ಹೊರಡಿ ಎನ್ನಿ, ‘ಇಲ್ಲ’ ಅಂದ್ರೇ ಕೇಳಿ. ಮರು ಮಾತಿಲ್ಲದೇ, ತುಟಿಪಿಟಿಕ್ಕೆನ್ನದೇ ಮಣಭಾರದ ಟ್ರಂಕ್ ಕಟ್ಟುತ್ತಾರೆ. ಜೀವದ ಹಂಗು ತೊರೆದು ಸೆಣೆಸಲು ಸಿದ್ಧರಾಗಿ ನಿಂತಿರುತ್ತಾರೆ. ನೌಕರಿ ಮಾಡಬೇಕಲ್ಲಪ್ಪಾ ಎಂಬ ಭಾವನೆಯಿಂದಲ್ಲ.
ದೇಶಪ್ರೇಮ, ದೇಶ ರಕ್ಷಣೆಗಾಗಿ! ಅದಕ್ಕಾಗಿ ಎಂಥ ಅಪಾಯ ಎದುರಿಸಲು ರೆಡಿ. ಇಂಥ ಸೈನಿಕರನ್ನ್ನುನಾವು ಹೇಗೆ ನಡೆಸಿಕೊಳ್ಳುತ್ತಿದ್ದೇವೆ? ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಕಾರ್ಗಿಲ್ ಯುದ್ಧದ ದಿನಗಳನ್ನು ಒಮ್ಮೆ ನೆನಪಿಸಿಕೊಂಡರೆ ಆ ಸಮಯಕ್ಕೆ ನಮ್ಮ ಮೈಯಲ್ಲಿ ಅದೆಂಥಾ ಉತ್ಕರ್ಷ ಭೋರ್ಗರೆದಿತ್ತು ಎಂಬುದೂ ನೆನಪಿಗೆ ಬರುತ್ತದೆ. ಆಗಷ್ಟೇ ಟಿವಿ ಪತ್ರಿಕೋದ್ಯಮವೂ ತಲೆ ಎತ್ತಿತ್ತು. ಹಿಂದೆಂದೂ ಇರದ ರೀತಿಯಲ್ಲಿ ಅದು ಯುದ್ಧವನ್ನು ಸೀದಾ ನಮ್ಮ ಮನೆಯ ಜಗುಲಿಗೇ ತಂದಿರಿಸಿತ್ತು. ಪ್ರತಿ ಭಾರತೀಯನ ಎದೆಯಲ್ಲೂ ದೇಶಪ್ರೇಮದ ಡಮರು ನಾದ. ಆದರೆ, ಸಮರ ಮುಗಿದು ವರ್ಷಗಳು ಕಳೆಯುತ್ತಲೇ ನಮ್ಮ ಸ್ಮೃತಿ ಖಜಾನೆ ನಿಧಾನಕ್ಕೆ ಮುಸುಕು ಎಳೆದುಕೊಳ್ಳತೊಡಗಿತು. ನಮಗೆ ಚರ್ಚಿಸುವುದಕ್ಕೆ ಕೂಗಾಡುವುದಕ್ಕೆ ಬೇರೆ ವಿಷಯಗಳು ಸಿಕ್ಕವು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ಕೆಲದಿನಗಳವರೆಗೆ ನೆನಪಿಸಿಕೊಂಡೆವು. ಕೊನೆಗೆ ಆಗೀಗ ಅವರ ಹೆಸರು ಪ್ರಸ್ತಾಪವಾಗುವ ಹಂತಕ್ಕೆ ಹೋಗಿ ನಿಧಾನಕ್ಕೆ ಎಲ್ಲವೂ ಮಸುಕಾಯಿತು. ವಿಕ್ರಂ ಬಾತ್ರಾ, ಸೌರಭ್ ಕಾಲಿಯಾ ಹೀಗೆ ಮಹಾಶೌರ್ಯ ಮೆರೆದವರನ್ನು ಈಗಲೂ ನೆನಪಿಸಿಕೊಳ್ಳುತ್ತಿದ್ದೇವೆ. ಅವರನ್ನು ಮರೆಯಬಾರದು ಕೂಡ. ಆದರೆ ಹೋರಾಡಿ ಗಾಯಗೊಂಡು, ಕೈ-ಕಾಲು ಕಳೆದುಕೊಂಡ ಯೋಧರ ಸಂಖ್ಯೆಯೂ ದೊಡ್ಡದು. ಅವರೆಲ್ಲ ನಮ್ಮ ಅಂದಾಜಿಗೆ ನಿಲುಕಲೇ ಇಲ್ಲ. ಇವತ್ತಿಗೆ ಅವರೆಲ್ಲರ ಸ್ಥಿತಿ ಏನೆಂಬ ಬಗ್ಗೆ ಯಾರಿಗೂ ದರಕಾರವಿಲ್ಲ.
ಕಾರ್ಗಿಲ್ ವಿಜಯೋತ್ಸವ ಎಂಬುದು ನಮಗೆ ನವರಾತ್ರಿ- ದೀಪಾವಳಿಗಳಂತೆ ಒಂದು ಹಬ್ಬವಾಗಬೇಕಿತ್ತು. ಯುದ್ಧದ ಕಾವು ಎದ್ದಿದ್ದ ದಿನಗಳಲ್ಲಿ ಯೋಧರನ್ನು ಕೊಂಡಾಡಿದ್ದಷ್ಟೇ ದೇಶಪ್ರೇಮವಾಗುವುದಿಲ್ಲ. ನಮ್ಮ ನೆಚ್ಚಿನ ನಟನ ಚಿತ್ರ ಬಿಡುಗಡೆಯಾದ ದಿನದಂದೂ ಆತನ ಕಟೌಟ್ ಏರಿಸಿ ತೋರಿಸುತ್ತೇವೆ. ಕಾರ್ಗಿಲ್್ನ ಕದನಕ್ಕೆ, ಅದರಲ್ಲಿ ನಮ್ಮ ಯೋಧರ ವಿಜಯಕ್ಕೆ ದಶಕಗಳ ಪ್ರಾಯವೇ ಸಂದಿದ್ದರೂ ಪ್ರಾರಂಭಿಕ ಪ್ರಶಂಸೆಗಳನ್ನು ಮೀರಿದ ಕೃತಜ್ಞತಾಪೂರ್ವಕ ಆರಾಧನೆಯೊಂದು ನಮ್ಮಲ್ಲಿ ನೆಲೆಗೊಳ್ಳಲೇ ಇಲ್ಲ. ಸರ್ಕಾರದ ಮಟ್ಟದಲ್ಲಂತೂ ಈ ವಿಜಯದ ನೆನಪು ಅಪ್ರಸ್ತುತವಾಗುವುದು ಅವಶ್ಯವಿತ್ತು! ಏಕೆಂದರೆ ಎನ್್ಡಿಎ ಸರ್ಕಾರದ ಅವಧಿಯಲ್ಲಿ ಈ ಸಮರ ನಡೆದಿದ್ದರಿಂದ ಅದರ ಗೆಲುವನ್ನು ವರ್ಷಕ್ಕೊಮ್ಮೆ ಅದ್ಧೂರಿಯಾಗಿ ನೆನಪಿಸಿಕೊಂಡಿದ್ದೇ ಆದರೆ ಅದರ ಶ್ರೇಯಸ್ಸನ್ನು ತಮ್ಮ ಪ್ರತಿಪಕ್ಷಗಳಿಗೆ ಸಲ್ಲಿಸಿದಂತಾಗುತ್ತಲ್ಲ ಎಂಬುದು ಕಳೆದೆರಡು ಅವಧಿಗಳಿಗೆ ದೇಶವನ್ನು ಆಳುತ್ತಿರುವ ಯುಪಿಎ ಕೂಟದ ಚಿಂತನೆ! ಇವರ ರಾಜಕೀಯ ವರಸೆಗಳು ಏನೇ ಇದ್ದಿರಲಿ, ನಾವು ಈ ವಿಜಯದ ಸಂಭ್ರಮವನ್ನು ಕಾಪಿಟ್ಟುಕೊಳ್ಳೋಣ ಎಂಬ ತೀವ್ರತೆ ಪ್ರಜೆಗಳಾದ ನಮ್ಮಲ್ಲೂ ಉಳಿಯಲಿಲ್ಲ ಎಂಬುದೇ ದುರಂತ.
ಈ ಹಿಂದಿನ ಸಮರಗಳ ಬಗ್ಗೆ ಹಿರಿಯರ ಬಾಯಲ್ಲಿ ಕೇಳಿ ತಿಳಿದ, ಪುಸ್ತಕಗಳಲ್ಲಿ, ವರದಿಗಳಲ್ಲಿ ಓದಿಕೊಂಡ ಅನುಭವಗಳಷ್ಟೇ ಇದ್ದವು. ಆದರೆ, ಕಾರ್ಗಿಲ್್ನ ಸಮರ ಮೊದಲೇ ಹೇಳಿದಂತೆ ನೇರವಾಗಿ ನಮ್ಮ ಮನೆಯ ಜಗುಲಿಯಲ್ಲೇ ಅನಾವರಣಗೊಂಡಿತ್ತು. ಈ ದೇಶದ ಯುವಕರನ್ನು ಅದು ನೇರವಾಗಿ ತಾಗಿತ್ತು. ಅಷ್ಟಾಗಿಯೂ ಇಂದು ಯಾವ ಹುಡುಗ-ಹುಡುಗಿಯ ಕೊಠಡಿಯಿಂದಲೂ ಶಾರುಖ್, ಸಲ್ಮಾನ್, ಐಶ್ವರ್ಯಾ, ಧೋನಿ, ಸಚಿನ್, ಯುವರಾಜ್, ಗಂಭೀರ್ ಇವರುಗಳು ನಿವೃತ್ತಿ ಪಡೆದಿಲ್ಲ. ಕಣ್ಣೆದುರು ಕಾರ್ಗಿಲ್ ಕದನ ತೆರೆದುಕೊಂಡಿತು ಎಂಬ ಅಚ್ಚರಿ ಆ ಕ್ಷಣಕ್ಕೆ ಸದ್ದು ಮಾಡಿತಾದರೂ ಯಾರ ಮನೆ ಗೋಡೆಯನ್ನೂ ವಿಕ್ರಂ ಬಾತ್ರಾ, ಸೌರಭ್ ಕಾಲಿಯಾ, ಅಂಜು ನಯ್ಯರ್್ರಂಥ ವೀರರು ಆಕ್ರಮಿಸಿಕೊಳ್ಳಲಿಲ್ಲ. ಪರ್ವತ ಶ್ರೇಣಿಯೊಂದನ್ನು ಗೆದ್ದುಕೊಂಡ ಬೆನ್ನಲ್ಲೇ, ಇದು ಆರಂಭವಷ್ಟೇ ಇನ್ನೂ ಗೆಲ್ಲಬೇಕಿದೆ ಎಂಬ ಅರ್ಥದಲ್ಲಿ ‘ಯೇ ದಿಲ್ ಮಾಂಗೇ ಮೋರ್್’ ಎಂದು ಅವಾಜು ಹಾಕಿದ್ದ ವಿಕ್ರಂ ಬಾತ್ರಾ. ಮಾತಿನಂತೆ ನಡೆದು ಪ್ರಾಣವನ್ನೂ ಕೊಟ್ಟ. ನಾವು ಆ ಕ್ಷಣಕ್ಕೆ ಭಾವುಕರಾಗಿ ನಂತರ ತಮಾಷೆ ಮುಗಿಯಿತೆಂಬಂತೆ ಪೆಪ್ಸಿ ಹೀರಿಕೊಂಡು ‘ದಿಲ್ ಮಾಂಗೆ ಮೋರ್್’ ಎಂಬ ನಮ್ಮ ಬಣ್ಣದ ಲೋಕದಲ್ಲಿ ಕಳೆದು ಹೋದೆವು.
ಹಾಗಾದರೆ ನಮ್ಮ ದೇಶಪ್ರೇಮದ ಗ್ರಹಿಕೆಯಲ್ಲೇ ದೋಷವಿದೆಯಾ? ಕಾರ್ಗಿಲ್್ನ ವೀರೋತ್ಕರ್ಷ ಯುವಕರನ್ನು ಸೇನೆ ಸೇರುವುದಕ್ಕೆ ಇಡಿ ಇಡಿಯಾಗಿ ಪ್ರೇರೇಪಿಸಲೇ ಇಲ್ಲ. ಇದು ಸರ್ಕಾರ- ಸಮಾಜಗಳ ಒಟ್ಟಾರೆ ವೈಫಲ್ಯವೆಂದೇ ಹೇಳಬೇಕು. ಏಕೆಂದರೆ ದೇಶಸೇವೆ ಎಂಬುದು ನಮ್ಮಲ್ಲಿ ಆಕರ್ಷಣೆಯೇ ಅಲ್ಲ. ಸಾಫ್ಟ್್ವೇರ್ ಉದ್ಯೋಗಿಯಾಗಿದ್ದೇನೆ, ಬಿಸಿನೆಸ್ ಮಾಡುತ್ತಿದ್ದೇನೆ, ಟಿವಿಲೀ ಬರ್ತೇನೆ ಅಂತೆಲ್ಲ ಹೇಳಿಕೊಂಡಂತೆ ಯೋಧನಾಗಿದ್ದೇನೆ ಅನ್ನುವುದು, ಸೇನೆಯಲ್ಲಿ ಸೇವೆಯನ್ನು ಹೇಳಿಕೊಳ್ಳುವ ಕಾಯಕವನ್ನಾಗಿ ರೂಪಿಸುವುದಕ್ಕೆ ಸೋತಿದ್ದೇವೆ. ಇಲ್ಲಿ ಯೋಧರ ಕೈಗೆ ನೀಡುವ ಬಂದೂಕುಗಳು, ಅವರ ಸಾರಿಗೆಗೆ ಬಳಸುವ ವಾಹನಗಳು ಇಂಥ ಅಗತ್ಯಗಳ ಪೂರೈಕೆಯಲ್ಲೂ ಭ್ರಷ್ಟಾಚಾರ ನಡೆಯುತ್ತದೆ. ಸಾಲದ್ದಕ್ಕೆ ಯೋಧ ತನ್ನ ಪ್ರಾಣ ಒತ್ತೆ ಇಟ್ಟು ಗೆದ್ದುಕೊಂಡ ನೆಲವನ್ನು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ರಾಜಕಾರಣಿಗಳು ಮತ್ತು ಅಧಿಕಾರಿಗಳು ಶಾಂತಿ ಒಪ್ಪಂದ ಎಂಬ ನೆಪದಲ್ಲಿ ಬಿಟ್ಟುಕೊಡುತ್ತಾರೆ. ದೇಶಕ್ಕಾಗಿ ತ್ಯಾಗ ಮಾಡಿದವನನ್ನು ಆತನಿಗೆ ತಾನು ಮಾಡಿದ ತ್ಯಾಗ ಸಾರ್ಥಕ ಎಂಬಂತೆ ನಡೆಸಿಕೊಳ್ಳುವ ಜಾಯಮಾನವೇ ನಮ್ಮದಲ್ಲ. ಅವರ ಕುಟುಂಬದ ಬೇಕು- ಬೇಡಗಳನ್ನು ವಿಚಾರಿಸಿಕೊಳ್ಳುವ ಕೆಲಸ ಸರಿಯಾಗಿ ಆಗುವುದಿಲ್ಲ. ಗಾಯಗೊಂಡ ಯೋಧರಿಗೆ ಸರ್ಕಾರಿ ಕೆಲಸ ಕೊಡುತ್ತೇವೆ ಎಂಬ ಘೋಷಣೆಯೇನೋ ಆಗುತ್ತದೆ, ಅದಕ್ಕೆ ಚಪ್ಪಾಳೆಯೂ ಸಂದಾಯವಾಗುತ್ತದೆ. ಆದರೆ, ಆ ಯೋಧ ಘೋಷಣೆಯಾಗಿದ್ದನ್ನು ತನಗೆ ದಕ್ಕಿಸಿಕೊಳ್ಳುವುದಕ್ಕೆ ಕಚೇರಿಯಿಂದ ಕಚೇರಿಗೆ ಅಲೆಯುತ್ತ ಬಸವಳಿದು ಹೋಗುತ್ತಾನೆ. ಐದು- ಹತ್ತು ವರ್ಷಗಳೇ ಸಂದರೂ ಅವನ ಉದ್ಯೋಗ ಭರವಸೆ ಈಡೇರುವುದಿಲ್ಲ. ಇನ್ನು, ಮೃತ ಯೋಧರ ಕುಟುಂಬಗಳಿಗೆ ನೀಡುವ ಭರವಸೆಗಳ ಕತೆಯೂ ಇದೇ.
ಇವೆಲ್ಲದರ ಪರಿಣಾಮ ಸಮಾಜದ ಸಂವೇದನೆಗೂ ತಾಗದೇ ಇರುವುದಿಲ್ಲ. ಅಷ್ಟೆಲ್ಲ ಹೋರಾಡಿ, ತಮ್ಮ ಸರ್ವಸ್ವವನ್ನೂ ದೇಶಕ್ಕೆ ಅಂತ ಎತ್ತಿಟ್ಟು ಕಾದಾಡುವ ಯೋಧನ ಗತಿ ಹೀಗೆ ಅನ್ನುವುದಾದರೆ ಯಾವ ಪುರುಷಾರ್ಥಕ್ಕಾಗಿ ಮಿಲಿಟರಿ ಸೇರಬೇಕು ಎಂದು ಯುವಕರು ಅಂದುಕೊಂಡರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ.
ದೇಶ ಕಾಳಜಿಗೆ ಕೆಲಸ ಮಾಡುತ್ತೇನೆ ಅಂತ ಹೊರಡುವ ಎಲ್ಲರಿಗೂ ಸಾಮಾನ್ಯವಾಗಿ ಇದೇ ಗತಿ ಎಂಬ ಉದಾಹರಣೆಗಳೇ ನಮ್ಮ ಕಣ್ಣ ಮುಂದೆ ಸುಳಿದಾಡುತ್ತವೆ. ಮೊನ್ನೆ ಪಾಕಿಸ್ತಾನದ ಜೈಲಿನಿಂದ ಬಿಡುಗಡೆ ಹೊಂದಿದ ಸುರ್ಜೀತ್ ಸಿಂಗ್ ಕತೆಯನ್ನೇ ಗಮನಿಸಿ. ‘ತಾನು ಗೂಢಚಾರಿಕೆಗೆ ಎಂದೇ ಪಾಕಿಸ್ತಾನದ ಒಳಗೆ ನುಸುಳಿದ್ದು. ಆದರೆ ನನ್ನನ್ನು ಹಾಗೆ ಕಳುಹಿಸಿದ ಸರ್ಕಾರ ಮಾತ್ರ ನನ್ನ ಬಿಡುಗಡೆಗಾಗಲೀ, ನನ್ನ ಕುಟುಂಬದ ಹಿತ ಕಾಯುವುದಕ್ಕಾಗಲೀ ಏನೂ ಮಾಡಲಿಲ್ಲ’ ಎಂದುಬಿಟ್ಟ ಸುರ್ಜೀತ್. ನಿಜ, ಆತನ ಆ ಹೇಳಿಕೆ ಜಾಗತಿಕ ವೇದಿಕೆಯಲ್ಲಿ ಭಾರತಕ್ಕೆ ಒಂದಿಷ್ಟು ಮುಜುಗರ ಉಂಟುಮಾಡಿದೆ. ಈಗಲೂ ಅಧಿಕೃತವಾಗಿ ನಾವು ಆತನನ್ನು ಗೂಢಚಾರ ಎಂದು ಒಪ್ಪಿಕೊಳ್ಳುವುದಕ್ಕಾಗುವುದಿಲ್ಲ. ಆದರೆ ಆತನ ದನಿಯಲ್ಲಿ ವ್ಯಕ್ತವಾದ ಹತಾಶೆಯನ್ನು ಗಮನಿಸಿ. ಯುವಕನಾಗಿ ಪಾಕ್ ನೆಲದಲ್ಲಿ ಕಾಲಿಟ್ಟಿರುವ ಆತ ಮರಳಿ ಬರುತ್ತಿರುವುದು ಮುದುಕನಾಗಿ. ನಮ್ಮ ಮೇಲೆ ಧಾಳಿ ಮಾಡಿದ ಉಗ್ರರಿಗೇ ರಾಜಾತಿಥ್ಯ ನೀಡುವ ನಾವು, ಅಂಥ ಕಾಳಜಿಯ ಸ್ವಲ್ಪ ಭಾಗವನ್ನಾದರೂ ದೇಶದ ಹಿತಾಸಕ್ತಿ ಕಾಯುವುದಕ್ಕೆ ಹೋದ ಇಂಥವರ ಕುಟುಂಬಗಳನ್ನು ನೋಡಿಕೊಳ್ಳುವುದಕ್ಕೆ ನೀಡಿದ್ದೇ ಆದಲ್ಲಿ ಖಂಡಿತ ಸುರ್ಜೀತ್ ಬಾಯಿಂದ ಆ ಮಾತುಗಳು ಹೊರಡುತ್ತಿರಲಿಲ್ಲ.
ಪಾಕಿಸ್ತಾನಕ್ಕೆ ಯುದ್ಧ ಕೈದಿಯಾಗಿ ಸೆರೆಯಾದ ವಿಜಯ್ ತಂಬೆ ಬಿಡುಗಡೆ ಇನ್ನೂ ಸಾಧ್ಯವಾಗಿಲ್ಲ. ಅವರು ಪಾಕಿಸ್ತಾನದ ಯಾವ ಜೈಲಿನಲ್ಲಿದ್ದಾರೆ ಎಂಬುದೂ ಗೊತ್ತಿಲ್ಲ. ಕಳೆದ ನಲವತ್ತು ವರ್ಷಗಳಿಂದ ಪತ್ನಿ ದಮಯಂತಿ ತಂಬೆ ಗಂಡನ ಆಗಮನ ನೋಡುತ್ತಿದ್ದಾಳೆ. ಅವರಂತೆ ಎಷ್ಟೋ ಭಾರತೀಯರು ಕೈದಿಗಳಾಗಿ ಕೊಳೆಯುತ್ತಿದ್ದಾರೆ. ಬಾಂಗ್ಲಾದೇಶದ ಯುದ್ಧದಲ್ಲಿ ಭಾರತ ಸೇನೆಗೆ ಸೆರೆ ಸಿಕ್ಕಿದ್ದ 93 ಸಾವಿರ ಪಾಕ್ ಯೋಧರನ್ನು ಕದನ ಮುಗಿಯುತ್ತಿದ್ದಂತೆ ಬಿಡುಗಡೆ ಮಾಡಲಾಗಿತ್ತು. ಆ ಔದಾರ್ಯದ ಚೂರುಭಾಗವನ್ನೂ ಪಾಕಿಸ್ತಾನ ತೋರಿಸುತ್ತಿಲ್ಲ. ನಮಗೂ ಸಹ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಮ್ಯಾಚ್ ಆಡುವುದರಲ್ಲಿ ಇರುವ ಆಸಕ್ತಿ ಇವರೆಲ್ಲರ ಬಿಡುಗಡೆಗೆ ನಿರಂತರ ಪ್ರಯತ್ನ ಮಾಡುವುದರಲ್ಲಿಲ್ಲ.
ನಮ್ಮ ವ್ಯವಸ್ಥೆಯಿಂದ ದೇಶಪ್ರೇಮ ಹೊರಹೊಮ್ಮುವುದಕ್ಕೆ ಅಡ್ಡಿಯಾಗುತ್ತಿರುವುದಾದರೂ ಏನು ಎಂಬುದನ್ನು ಕಾರ್ಗಿಲ್್ನ ಹುತಾತ್ಮ ಯೋಧ, ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರ ಪಡೆದ ಕ್ಯಾಪ್ಟನ್ ಅಂಜು ನಯ್ಯರ್ ಅವರ ತಂದೆಯ ಮಾತುಗಳನ್ನು ಕೇಳಿಸಿಕೊಂಡಾಗ ಸ್ಪಷ್ಟವಾಗುತ್ತದೆ. ಕಾರ್ಗಿಲ್ ಸಮರ ಅಂತ್ಯಗೊಂಡು ಪುತ್ರಶೋಕ ಹಾಗೂ ಮಗನ ತ್ಯಾಗದ ಹೆಮ್ಮೆಯನ್ನು ಅನುಭವಿಸುತ್ತಿರುವಾಗಲೇ ಅವರು ಹೇಳಿದ್ದರು- ‘ಆತ ‘ಯುದ್ಧರೀತಿ’ಯ ವಾತಾವರಣದಲ್ಲಿ ಸಾಯಬೇಕಿರಲಿಲ್ಲ. ಸಾವಿನಂಥ ಸ್ಥಿತಿ ಎಂಬುದಿಲ್ಲ. ಒಂದೋ ಸಾವು ಇಲ್ಲವೇ ಬದುಕು. ಹಾಗೆಯೇ ನಿರ್ಣಾಯಕ ಗಳಿಗೆಯಲ್ಲಿ ಯುದ್ಧ ಇಲ್ಲವೇ ಶಾಂತಿ ಎಂಬ ಸ್ಪಷ್ಟ ಧೋರಣೆ ಇರಬೇಕು. ನಮ್ಮ ದೇಶಕ್ಕೆ ಇಷ್ಟು ಸುಲಭವಾಗಿ ಒಳನುಗ್ಗುತ್ತಿರುವ ಉಗ್ರರನ್ನು ಹಿಡಿದು ಶಿಕ್ಷಿಸುವುದಕ್ಕೆ ಸರ್ಕಾರಕ್ಕೆ ಆಗುವುದಿಲ್ಲವೇ?’ ಇವರ ಮಾತನ್ನೇ ಮುಂದುವರಿಸುತ್ತ ಅವರ ಸಂಬಂಧಿಯೊಬ್ಬರು ಹೇಳಿದ್ದರು- ‘ಅಂಜು ನಯ್ಯರ್ ಬಲಿದಾನಕ್ಕೆ ನಮಗೆ ಹೆಮ್ಮೆಯಿದೆ. ಆದರೆ ಯಕಶ್ಚಿತ್ ಒಳನುಸುಳುಕೋರರಿಂದ ಸಮರಸದೃಶ ಸ್ಥಿತಿ ಉಂಟಾಗಿ ಪ್ರಾಣ ತೆರಬೇಕಾಯ್ತಲ್ಲ ಎಂಬ ಕಟು ವಾಸ್ತವ ನಮ್ಮ ದುಃಖವನ್ನು ಹೆಚ್ಚಿಸಿದೆ’.
ಈ ಎಲ್ಲ ಗೋಜಲುಗಳು ಎದುರು ನಿಂತಾಗ ಸಾಂತ್ವನ ಹೇಳುವುದು ಇಸ್ರೇಲ್ ಮಾದರಿ. ಆ ದೇಶದಲ್ಲಿ ಪ್ರತಿಯೊಬ್ಬರೂ ನಿಯಮಿತ ಅವಧಿಗೆ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಅದನ್ನು ತಮ್ಮ ಆದ್ಯ ಕರ್ತವ್ಯವೆಂದೂ, ಹೆಮ್ಮೆಯೆಂದೂ ಭಾವಿಸುತ್ತಾರೆ. ಕಾರ್ಗಿಲ್ ವಿಜಯ ದಿನದ ಈ ಅಭಿಮಾನದ ಗಳಿಗೆಯಲ್ಲಾದರೂ ನಮ್ಮಲ್ಲಿ ಅಂಥದೊಂದು ದೇಶಾಭಿಮಾನದ ಒರತೆ ಹನಿಯಲಿ ಅಲ್ಲವೇ?

Tuesday 11 August 2015

ಭಾರತೀಯ ಚಿಂತನೆಗಳು ಜಗವನ್ನೆ ಆಳಲಾರಂಭಿಸಿವೆ…!

ರಮಣ ಮಹರ್ಷಿಗಳ ಬದುಕಿನ ಈ ಘಟನೆ ಬಲು ಜನಜನಿತ. ಅದೊಮ್ಮೆ ಅವರು ಭಕ್ತರೊಂದಿಗೆ ಮಾತಾಡುತ್ತ ಕುಳಿತಿದ್ದರು. ಅವರ ತೋಳಿನ ಹುಣ್ಣಿಗೆ ಚಿಕಿತ್ಸೆ ನೀಡಲೆಂದು ಅದೇ ಹೊತ್ತಿಗೆ ವೈದ್ಯರು ಬಂದರು. ಚಿಕಿತ್ಸೆ ಸಮಯದಲ್ಲಿ ತೀವ್ರ ನೋವು ಉಂಟಾಗುತ್ತದೆಯಾದ್ದರಿಂದ ಅರೆವಳಿಕೆ ಮದ್ದು ಕೊಡುವುದು ಒಳ್ಳೆಯದೆಂದು ವೈದ್ಯರ ಅಭಿಮತ. ರಮಣರು ನಿರಾಕರಿಸಿದರು.

ramana01

“ತೋಳಿನಿಂದ ಮನಸ್ಸನ್ನು ತೆಗೆದುಬಿಡುತ್ತೇನೆ. ಆಮೇಲೆ ಏನು ಬೇಕಾದರೂ ಮಾಡಿಕೊಳ್ಳಿ” ಎಂದು ಒಂದು ನಿಮಿಷ ಕಣ್ಮುಚ್ಚಿ ತೆರೆದರು. ಭಕ್ತರೊಂದಿಗೆ ಮಾತುಕತೆ ಮುಂದುವರೆಯಿತು. ಅತ್ತ ವೈದ್ಯರು ತಮ್ಮ ಉಪಚಾರ ಶುರು ಮಾಡಿದರು. ರಮಣರ ಮುಖದಲ್ಲಿ ಒಂದು ಗುಲಗಂಜಿಯಷ್ಟೂ ನೋವು ಕಾಣಿಸಲಿಲ್ಲ. ಎಲ್ಲ ಮುಗಿಯಿತೆಂದು ವೈದ್ಯರು ಹೇಳಿದ ಮೇಲೆ ರಮಣರು ನಕ್ಕು ನಮಸ್ಕರಿಸಿದರು, ಅಷ್ಟೆ.

ಮೊದಲೆಲ್ಲ ಇದು ಭಕ್ತರ ಕಪೋಲಕಲ್ಪಿತ ಕತೆ ಎಂದು ನಾನು ಭಾವಿಸಿದ್ದೆ. ನನಗೆ ಗೊತ್ತು, ನಿಮ್ಮಲ್ಲನೇಕರು ಈ ಕಥೆ ಓದುತ್ತ ಮೂಗು ಮುರಿದಿರುತ್ತೀರಿ. ಆದರೆ ಹಿಮಾಲಯದ ಪರ್ವತಗಳಲ್ಲಿ ಕೊರೆವ ಚಳಿಯಲ್ಲಿ ಮಂಜಿನ ರಾಶಿಯ ನಡುವೆ ನಗುನಗುತ್ತ ಕೌಪೀನದಲ್ಲಿ ಕುಳಿತಿರುವ ಸಾಧುಗಳನ್ನು ಕಂಡ ಮೇಲೆ ಈ ಪ್ರಕ್ರಿಯೆ ಸಾಧ್ಯವೆನ್ನಿಸಿತ್ತು. ನಾನು – ನೀವು ನಂಬುವುದನ್ನು ಬಿಡಿ. ಪಶ್ಚಿಮದ ಅನೇಕ ವಿಜ್ಞಾನಿಗಳು ಇಂದು ನಂಬಲು ಶುರು ಮಾಡಿದ್ದಾರೆ. ಮೆದುಳಿನ ಅಧ್ಯಯನದ ವಿಜ್ಞಾನ ಬೆಳೆದಂತೆಲ್ಲ ಭಾರತೀಯ ಚಿಂತನೆಗಳು ಜಗತ್ತನ್ನು ಆಳಲಾರಂಬಿಸಿವೆ.
ಹಾಗೆ ನೋಡಿದರೆ ಅಮೆರಿಕಾ – ಯುರೋಪಿನ ಬುದ್ಧಿವಂತ ವರ್ಗದ ಬುಡವನ್ನು ಮೊದಲ ಬಾರಿಗೆ ತೀವ್ರವಾಗಿ ಅಲುಗಾಡಿಸಿದವರು ಸ್ವಾಮಿ ವಿವೇಕಾನಂದರೇ. ನಿಕೊಲಸ್ ಟೆಸ್ಲಾರಂತಹ ವಿಜ್ಞಾನಿಗಳ ಮೇಲೆ ಅವರ ಪ್ರಭಾವ ಹೇಳತೀರದಷ್ಟು. ಇನ್ನು, ನಮ್ಮ ಕಾಲದಲ್ಲಿ ವೈಜ್ಞಾನಿಕ ಲೋಕದ ದೃಷ್ಟಿಕೋನ ಬದಲಾಯಿಸಿದವರು ದಲೈ ಲಾಮಾ.
ಹೌದು. ಸುಮಾರು 2 ದಶಕಗಳ ಹಿಂದಿನ ಮಾತು. ನರ ವಿಜ್ಞಾನಿ ರಿಚರ್ಡ್ ಡೇವಿಡ್ಸನ್ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ದಲೈ ಲಾಮಾರನ್ನು ಭೇಟಿಯಾಗಿದ್ದ. ಅದುವರೆಗೂ ಆತನಿಗೆ ಸಮಸ್ಯೆಗಳಿಗೆ ಮೆದುಳು ಪ್ರತಿಕ್ರಿಯಿಸುವ ರೀತಿಯ ಬಗ್ಗೆ ಬಲವಾಗಿ ಗೊಂದಲಗಳಿದ್ದವು. ದಲೈಲಾಮಾ ಮೊದಲ ಭೇಟಿಯಲ್ಲೇ ಅವನನ್ನು ಪ್ರಶ್ನಿಸಿದರು. “ಆಧುನಿಕ ನರವಿಜ್ಞಾನ ಬಳಸಿ ಮಾನವನ ದುಗುಡ, ದುಃಖ, ಕೋಪ, ಖಿನ್ನತೆಯನ್ನೆಲ್ಲ ಅಧ್ಯಯನ ಮಾಡುತ್ತಿದ್ದೀರಿ. ನೀವೇಕೆ ಕರುಣೆ, ದಯೆಗಳನ್ನೂ ಪರೀಕ್ಷೆಗೆ ಒಳಪಡಿಸಬಾರದು?” ಡೇವಿಡ್ಸನ್ ಗೊಂದಲಕ್ಕೀಡಾದ. ಕರುಣೆ – ದಯೆಗಳು ಪಶ್ಚಿಮಕ್ಕೆ ಗಮನಿಸಬೇಕಾದ ಅಂಶವೆನ್ನಿಸಿರಲಿಲ್ಲ. ಆದರೆ ಭಾರತ ಮೂಲದ ಚಿಂತನೆಯ ಪ್ರಕಾರ ಇತರರನ್ನು ಪ್ರೀತಿಯಿಂದ ಕಂಡರೆ ದುಗುಡ, ದುಃಖ, ಕೋಪಗಳೆಲ್ಲ ಮರೆಯಾಗುತ್ತವೆ. ಇದನ್ನೇ ಹೇಳುವ ಪ್ರಯತ್ನ ಮಾಡಿದ್ದರು ದಲೈ ಲಾಮಾ!
ಭಾರತದ ಬುದ್ಧಿಜೀವಿಗಳೋ, ಮಾಧ್ಯಮದವರೋ ಆಗಿದ್ದರೆ ದಲೈ ಲಾಮಾರನ್ನು ಆಡಿಕೊಂಡು ನಕ್ಕುಬಿಡುತ್ತಿದ್ದರೇನೋ. ಡೇವಿಡ್ಸನ್ ಹಾಗೆ ಮಾಡಲಿಲ್ಲ. ತನ್ನ ಪ್ರಯೋಗ ಶಾಲೆಗೆ ಧ್ಯಾನದಲ್ಲಿ ಸಾಕಷ್ಟು ಮುಂದುವರೆದ ಬುದ್ಧ ಸನ್ಯಾಸಿಗಳನ್ನು ಕರೆದೊಯ್ದು ಅಧ್ಯಯನ ಶುರು ಮಾಡಿದ. 34 ಸಾವಿರ ಗಂಟೆಗಳಷ್ಟು ಕಾಲ ಮನಸ್ಸನ್ನು ಕೇಂದ್ರೀಕರಿಸುವ ತರಬೇತಿ ಪಡೆದುಕೊಂಡ ಸಿದ್ಧರಿವರು. ಬೇಕಾದಾಗ ಮನಸ್ಸನ್ನು ಬೇಕಾದೆಡೆ ಕೇಂದ್ರೀಕರಿಸಿಕೊಳ್ಳುವುದಷ್ಟೇ ಅಲ್ಲ, ಚಿಟಿಕೆ ಹೊಡೆಯುವಷ್ಟರಲ್ಲಿ ಮನಸ್ಸು 17 ಬೇರೆ ಬೇರೆ ವಸ್ತುಗಳ ಮೇಲೆ ಕೇಂದ್ರೀಕರಿಸಬಲ್ಲ ಶಕ್ತಿ ಇವರಿಗಿತ್ತು.
ಈ ಎಂಟು ಜನರ ಮೆದುಳನ್ನು ಅಧ್ಯಯನ ಮಾಡಿದಾಗ ದೇಹ ಮತ್ತು ಮಿದುಳಿನ ನಡುವಿನ ಹೊಂದಾಣಿಕೆಗಳು ನಡೆಯುವ ಸ್ಥಳ ಜಾಗೃತವಾಗಿರುವುದು ಕಂಡುಬಂತು. ಅಷ್ಟೇ ಅಲ್ಲ, ಧ್ಯಾನಸಿದ್ಧರ ಮೆದುಳಿನ ಕೆಲವು ವಿಕಿರಣಗಳು ಅವರಿಗೆ ಎಲ್ಲ ಸಮಸ್ಯೆಗಳನ್ನು ಎದುರಿಸಬಲ್ಲ ಸ್ಥಿತಿಸ್ಥಾಪಕತ್ವ ಗುಣ ತಂದುಕೊಟ್ಟಿತು. ಅವರ ಅಚ್ಚರಿಗೆ ಕಾರಣವಾದ ಮತ್ತೊಂದು ಸಂಗತಿ ಎಂದರೆ, ಒಂದು ವಾರ ಕಾಲ ಧ್ಯಾನ ಅಭ್ಯಾಸ ಮಾಡಿದವರ ದೇಹದ ರೋಗನಿರೋಧಕ ಶಕ್ತಿಯೂ ವೃದ್ಧಿಯಾಗಿತ್ತು.
ಧ್ಯಾನವೆನ್ನೋದು ಎಲ್ಲರನ್ನೂ ಕರುಣೆಯಿಂದ ನೋಡುವ ಪ್ರಕ್ರಿಯೆ ಎಂದರಿತ ಡೇವಿಡ್ಸನ್ ಒಂದು ಹಂತದಲ್ಲಂತೂ ಕರುಣೆಯ ತರಬೇತಿ ಶಿಬಿರ ಆಯೋಜಿಸುವ ಚಿಂತನೆ ಮಾಡಿಬಿಟ್ಟಿದ್ದ!
ನಮ್ಮ ಪ್ರಾಚೀನ ಋಷಿಗಳ ಚಿಂತನೆಗಳು ಈಗ ಮತ್ತೆ ಜೀವಂತಗೊಂಡಿದ್ದವು. “ಭಗವಂತ ಪ್ರತಿಯೊಬ್ಬ ಜೀವಿಯಲ್ಲೂ ವಾಸಿಸಿದ್ದಾನೆ. ಹೀಗಾಗಿ ‘ಜೀವದಯೆ’ ಇಡಬೇಕು” ಎಂಬುದು ವೈಷ್ಣವ ಸಿದ್ಧಾಂತದ ಮೂಲ ಚಿಂತನೆ. ಅದನ್ನೂ ಬಿಡಿ. “ಸರ್ವೇ ಭವನ್ತು ಸುಖಿನಃ” ಪ್ರಾರ್ಥನೆ ನಮ್ಮ ಮೂಲ ಮಂತ್ರ. ಸಕಲ ಜೀವಜಂತುಗಳೂ ಸುಖವಾಗಿ , ಆರೋಗ್ಯವಾಗಿರುವಂತೆ ಪ್ರಾರ್ಥಿಸುವ ಪರಂಪರೆ ನಮ್ಮದು. ಹೀಗಾಗಿ ದಯೆ, ಕರುಣೆ ಈ ನಾಡಿನ ಪ್ರತಿಯೊಬ್ಬರ ನರನಾಡಿಯಲ್ಲಿಯೂ ಸಹಜವಾಗೇ ಹರಿಯುತ್ತಿದೆ. ಅದು ನಮ್ಮ ಪಾಲಿಗೆ ನಿತ್ಯಧ್ಯಾನ.
ಆದರೆ ವಿಷಯ ಅದಲ್ಲ. ಡೇವಿಡ್ಸನ್ನನ ಪ್ರಯೋಗಗಳ ನಂತರ ವಿಜ್ಞಾನ ಲೋಕ ಅಚ್ಚರಿಗೆ ಬಿತ್ತು. ಮೆದುಳಿನ ಸಂದೇಶವಾಹಕವಾದ ಅತ್ಯಂತ ಸೂಕ್ಷ್ಮ ಘಟಕ ನ್ಯೂರಾನುಗಳ ಕುರಿತಂತೆ ವಿಸ್ತøತ ಅಧ್ಯಯನ ಶುರುವಾಯ್ತು. ಒಂದೇ ಆಲೋಚನೆಗೆ ಕಾರಣವಾಗುವ ನ್ಯೂರಾನುಗಳು ಒಂದಕ್ಕೊಂದು ಬೆಸೆದುಕೊಳ್ಳುವ, ಗಟ್ಟಿಯಾಗುವ, ಆಗಾಗ ಪ್ರಭಾವಿಯಾಗುವ ಪ್ರಕ್ರಿಯೆಯೂ ಬೆಳಕಿಗೆ ಬಂತು. ವೈದ್ಯಲೋಕ ಅದನ್ನು ನ್ಯೂರಾನ್ಸ್ ಫೈರ್ ಟುಗೆದರ್ ವೈರ್ ಟುಗೆದರ್ ಅನ್ನುತ್ತದೆ. ಅರ್ಥವಾಗುವಂತೆ ಹೇಳಬೇಕೆಂದರೆ, ನಿಮಗೆ ಆರೋಗ್ಯ ಸರಿಯಿಲ್ಲ ಎಂದುಕೊಳ್ಳಿ. ಮಿತ್ರರೊಬ್ಬರು ಬಂದು ನಿಮಗೆ ಯಾರೋ ಮಾಟ ಮಂತ್ರ ಮಾಡಿಸಿರಬಹುದು ಅನ್ನುತ್ತಾರೆ. ನೀವು ಅದನ್ನು ತೀವ್ರವಾಗಿ ನಂಬದಿದ್ದರೂ ಧಿಕ್ಕರಿಸುವುದೂ ಇಲ್ಲ. ಒಂದಷ್ಟು ನ್ಯೂರಾನುಗಳು ಈಗ ಒಟ್ಟಾದವು. ಕೆಲವು ದಿನಗಳ ನಂತರ ಅಂಗಡಿಯಲ್ಲಿ ವ್ಯಾಪಾರ ಸ್ವಲ್ಪ ಕಡಿಮೆ ಆಯಿತು ಅಂದುಕೊಳ್ಳಿ. ಮಂತ್ರ ಮಾಡಿಸಿರಬಹುದು ಅನ್ನುವ ಭಾವನೆಯ ನ್ಯೂರಾನುಗಳು ಮತ್ತಷ್ಟು ಬಲವಾದವು. ಈಗ ನೀವು ಸಆಗುತ್ತಿರುವ ವಾಹನ ಅವಘಡಕ್ಕೆ ತುತ್ತಾಗಿಬಿಟ್ಟರಂತೂ ಮುಗಿದೇಹೋಯ್ತು. ಮಂತ್ರ ಮಾಡಿಸಿದ್ದಾರೆಂಬ ಯೋಚನೆಯ ನ್ಯೂರಾನುಗಳು ಹಗ್ಗದಂತೆ ಹೊಸೆದುಕೊಂಡುಬಿಡುತ್ತವೆ. ಅಲ್ಲಿಂದಾಚೆಗೆ ಕಂಡವರನ್ನೆಲ್ಲ ಅನುಮಾನದಿಂದ ನೋಡುವ ಪ್ರವೃತ್ತಿ ಶುರುವಾಗುತ್ತದೆ. ಮನಸ್ಸು ಖಿನ್ನತೆಗೆ ಒಳಗಾಗಿಬಿಡುತ್ತದೆ. ಈ ಸ್ಥಿತಿಯಿಂದ ಮರಳಿ ತರುವ ಮಾರ್ಗ ಯಾವುದು? ಯಾವ ಮಾತ್ರೆಗಳೂ ಹಗ್ಗವಾಗಿರುವ ನ್ಯೂರಾನುಗಳನ್ನು ಸಡಿಲಿಸಲಾರವು. ಇರುವುದು ಒಂದೇ ಮಾರ್ಗ. ಯಾವ ಮಾರ್ಗದಲ್ಲಿ ನ್ಯೂರಾನುಗಳು ಬೆಸೆದಿವೆಯೋ ಅದಕ್ಕೆ ಪರ್ಯಾಯವಾದ ಮತ್ತೊಂದು ಧನಾತ್ಮಕ ಮಾರ್ಗ ಹುಡುಕುವ ಚಿಂತನೆ ಮಾತ್ರ! ನ್ಯೂರೋ ಪ್ಲಾಸ್ಟಿಸಿಟಿಯೇ ಮೊದಲಾದ ಹೊಸ ಪದಗಳು ವಿಜ್ಞಾನಿಗಳ ಬಾಯಲ್ಲಿ ಹರಿದಾಡಿದವು. ಅಧ್ಯಯನ ಮುಂದುವರೆದಂತೆಲ್ಲ ಭಾರತೀಯ ಚಿಂತನೆಗಳು ಬಲವಾಗಿ ಬೇರುಬಿಡುತ್ತ ನಡೆದವು. ಈ ಹಿಂದೆ ಬೌದ್ಧ ಭಿಕ್ಷುಗಳು ಚೀನಾದ ದಬ್ಬಾಳಿಕೆಯ ವಿರುದ್ಧದ ಕದನದ ಕಾವನ್ನು ಉಳಿಸಲು ತಾವೇ ಬೆಂಕಿ ಇಟ್ಟುಕೊಂಡು ಉರಿದು ಬೂದಿಯಾಗಿಬಿಡುವುದನ್ನು ಅವರು ಗಮನಿಸಿದ್ದರು. ದೇಹ ಉರಿದುಹೋಗುವಾಗಲೂ ಅವರ ಮುಖ ಮಾತ್ರ ಮಂದಸ್ಮಿತವಾಗಿಯೇ ಇರುತ್ತಿದ್ದುದು ಅವರ ಅಚ್ಚರಿಗೆ ಕಾರಣವಾಗಿತ್ತು. ಈಗ ಎಲ್ಲವೂ ನಿಚ್ಚಳವಾಯ್ತು. ಬೆಂಕಿಯ ಕಾವನ್ನು ಚರ್ಮ ಸುಡುತ್ತಿರುವ ಸಂವೇದನೆಯನ್ನೂ ಮೆದುಳಿಗೊಯ್ಯುವ ನರಗಳನ್ನು ಮಾನಸಿಕವಾಗಿ ನಿಸ್ತಂತುಗೊಳಿಸಿಕೊಂಡರಾಯ್ತು. ಕೇಳುವುದಕ್ಕೆ ಸುಲಭವೆನಿಸಬಹುದು, ಆಚರಣೆ ಕಷ್ಟಸಾಧ್ಯ. ನಿರಂತರ ಸಾಧನೆ ಬೇಕು. ಇದನ್ನೇ ಅಂದು ರಮಣರು ಮಾಡಿದ್ದು. ವಿಜ್ಞಾನ ಲೋಕ ಇದಕ್ಕೆ ಒಪ್ಪಿಗೆಯ ಮುದ್ರೆ ಹಾಕುವುದು ಅನಿವಾರ್ಯವಾಯ್ತು.

dalai-lama-climate-changeಧ್ಯಾನ ಮಾಡುವ ಸನ್ಯಾಸಿಗಳನ್ನು ಮತ್ತಷ್ಟು ಅಧ್ಯಯನಕ್ಕೆ ಒಳಪಡಿಸಲಾಯಿತು. ಮನಸ್ಸನ್ನು ಸತತವಾಗಿ ನಿಯಂತ್ರಣಕ್ಕೊಳಪಡಿಸಿ ಬೇಕಾದಂತೆ ದುಡಿಸಿಕೊಳ್ಳಬಹುದೆಂದು ವಿಜ್ಞಾನಿಗಳು ಈಗ ನಂಬಲಾರಂಭಿಸಿದರು. ಇದು ಪರಿಣಾಮಕಾರಿ ಔಷಧ ಎಂದು ಹೇಳಿ ಔಷಧದ ಅಂಶವೇ ಇಲ್ಲದ ಮಾತ್ರೆಗಳನ್ನು ರೋಗಿಗಳಿಗೆ ಕೊಟ್ಟು ಬೇಕಾದ ಫಲಿತಾಂಶವನ್ನೆ ಪಡೆಯಲಾಯಿತು. ಈ ಪ್ರಯೋಗ ಮೊಣಕಾಲಿನ ಚಿಪ್ಪಿನ ಶಸ್ತ್ರಚಿಕಿತ್ಸೆಯ ಮೇಲೂ ಯಶಸ್ವಿಯಾಗಿ ಆಯಿತೆಂದು ಅಮೆರಿಕಾದಿಂದ ಮರಳಿ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ನರ ವಿಜ್ಞಾನಿ ಉಷಾ ವಸ್ತಾರೆ ಹೇಳಿದ್ದು ನನಗೆ ನೆನಪಿದೆ. ಅಂದಮೇಲೆ, ಮನಸ್ಸನ್ನು, ಆ ಮೂಲಕ ಮೆದುಳನ್ನು ನಿಯಂತ್ರಿಸಿ ಏನನ್ನು ಬೇಕಾದರೂ ಸಾಧಿಸಿಕೊಳ್ಳುವ ನಮ್ಮ ಚಿಂತನೆ ಸತ್ಯವಾಯಿತು. ಈ ಹಿನ್ನೆಲೆಯಲ್ಲಿಯೇ ನಮ್ಮಲ್ಲಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಯಮದ ಪಾಠ ಹೇಳಿಕೊಡುವುದು. “ಸ್ನಾನ ಮಾಡದೆ ತಿಂಡಿ ತಿನ್ನಲಾಗದು; ಹಬ್ಬದ ದಿನಗಳಲ್ಲಿ ಪೂಜೆ ಇಲ್ಲದೆ ಊಟವಿಲ್ಲ, ಭಗವಂತನಿಗೆ ನೈವೇದ್ಯವಿಲ್ಲದೆ ಸಿಹಿಯನ್ನು ಮುಟ್ಟುವಂತೆಯೂ ಇಲ್ಲ”. ಈ ಎಲ್ಲ ಚೌಕಟ್ಟು ಬೇಕಾದ ನ್ಯೂರಾನುಗಳನ್ನು ಹೊಸೆದು ಹಗ್ಗ ಮಾಡುವ ಪ್ರಯತ್ನವಲ್ಲದೆ ಮತ್ತೇನೂ ಅಲ್ಲ. ಹೀಗೆ ಮಾಡುವಾಗ ಅದು ಒರಟಾದ ಪಾಠವಾಗಿ ಹಠಯೋಗವಾಗದೆ, ಪ್ರೇಮದ ನಿವೇದನೆಯಾಗಲೆಂದೇ ಭಗವಂತನನ್ನು ಎದುರಿಗಿಟ್ಟು ಭಕ್ತಿಯ ಆಚರಣೆ ಮಾಡಿಸೋದು.
ಕಳೆದ ಹತ್ತಾರು ಸಾವಿರ ವರ್ಷಗಳಲ್ಲಿ ಋಷಿ ಮುನಿಗಳು, ಸಂತರೆಲ್ಲ ಸೇರಿ ಸಾಮಾನ್ಯ ಮನುಷ್ಯರೂ ಆಚರಿಸಿ ಫಲಿತಾಂಶ ಪಡೆಯಬಹುದಾದ ವ್ಯವಸ್ಥೆ ರೂಪಿಸಿಕೊಟ್ಟರಲ್ಲ, ಅದಕ್ಕೇ ಇಲ್ಲಿ ಮಾನಸಿಕ ಖಿನ್ನತೆಗೊಳಗಾದವರು ಕಡಿಮೆ ಕಾಣುತ್ತಿದ್ದುದು. ನೈತಿಕ ಪ್ರಜ್ಞೆ ಅತ್ಯುಚ್ಚ ಮಟ್ಟದಲ್ಲಿ ಇದ್ದುದರಿಂದ ವ್ಯಕ್ತಿ ಸ್ವಲ್ಪ ಜಾರಿದರೂ ಅವನನ್ನು ಪರಿಹಾರ ಮಾರ್ಗಗಳ ಮೂಲಕ ಮೇಲೆತ್ತಿ ಮನಸ್ಸಿನ ಸ್ತಿಮಿತ ಕಾಯ್ದುಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿತ್ತು. ವಿಜ್ಞಾನ ನ್ಯೂರಾನುಗಳ ಬಗ್ಗೆ ಮಣಗಟ್ಟಲೆ ಹೇಳಬಹುದು; ಆದರೆ ಸೂಕ್ತ ನ್ಯೂರಾನುಗಳನ್ನು ಒಂದಕ್ಕೊಂದು ಜೋಡಿಸಲು ಧರ್ಮ ಮಾರ್ಗವೇ ಬೇಕು!
ಅದು ಬಿಡಿ. ನರವಿಜ್ಞಾನಿಗಳ ಸಂಶೋಧನೆ ಮುಂದುವರೆಯುತ್ತ ಹೋದಂತೆ ಭಾವಸಮಾಧಿಯ ಕಲ್ಪನೆಗಳೂ ನಿಚ್ಚಳಗೊಂಡವು. ರಾಮಕೃಷ್ಣ ಪರಮಹಂಸರಂತಹ ಮಹಾಮಹಿಮರು ಯಾವ ಮಟ್ಟಕ್ಕೇರುತ್ತಿದ್ದರು ಅಂರೆ, ಎದುರಿಗಿನ ವ್ಯಕ್ತಿ ತಾನೇ ಆಗಿ, ಅವರ ರೋಗ ರುಜಿನಗಳನ್ನೂ ಸ್ವೀಕರಿಸಬಲ್ಲವರಾಗಿಬಿಡುತ್ತಿದ್ದರು. ಕೆಲವೊಮ್ಮೆ ಅವರು ತದೇಕಚಿತ್ತರಾಗಿ ಹುಲ್ಲನ್ನು ನೋಡುತ್ತ ನಿಂತರೆ ತಾನೇ ಹುಲ್ಲಿನ ಹಾಸಾಗಿಬಿಡುತ್ತಿದ್ದರು. ಯಾರಾದರೂ ಹುಲ್ಲಿನ ಮೇಲೆ ನಡೆದುಕೊಂಡು ಹೋದರೆ ತಮ್ಮ ಎದೆಯ ಮೇಲೆ ಕಾಲಿಟ್ಟಷ್ಟು ವೇದನೆ ಅವರಿಗಾಗುತ್ತಿತ್ತು. ಭಾರತೀಯರು ನಾವಿಂದು ಇದನ್ನು ಭಕ್ತಿ – ಶ್ರದ್ಧೆ ಎಂದು ತೇಲಿಸಿಬಿಡುತ್ತೇವೇನೋ? ಆದರೆ ಪಶ್ಚಿಮದ ವಿಜ್ಞಾನಿಗಳು ಇದನ್ನು ಮಿರರ್ ನ್ಯೂರಾನ್ ಅಂತಾರೆ.
ಯಾರಾದರೂ ಅಪಘಾತದಲ್ಲಿ ಕಾಲು ಮುರಿದುಕೊಂಡು ಬಿದ್ದಿದ್ದರೆ, ಒಂದು ಕ್ಷಣ ನಮ್ಮ ಕಾಲು ಮುರಿದುಕೊಂಡು ನೋಯುತ್ತಿದೆಯೇನೋ ಅನ್ನಿಸುತ್ತದೆಯಲ್ಲ, ಅದು ಇದೇ ಮಿರರ್ ನ್ಯೂರಾನುಗಳ ಕಾರಣದಿಂದ. ಮನುಷ್ಯ ಹೆಚ್ಚುಹೆಚ್ಚು ಕರುಣಾಮಯಿಯಾದಷ್ಟೂ ಅವನ ಮೆದುಳಿನಲ್ಲಿ ಈ ನ್ಯೂರಾನುಗಳ ಕನ್ನಡಿ ಹೆಚ್ಚು ಹೆಚ್ಚು ಸ್ಫುಟವಾಗಿರುತ್ತದೆ. ತಾಯಿಗೆ ಮಗನ ಮೇಲಿನ ಮಮತೆ ಅದೆಷ್ಟೆಂದರೆ, ಆತನ ಎಲ್ಲ ನೋವುಗಳನ್ನೂ ತಾನೇ ಅನುಭವಿಸುತ್ತಾಳೆ. ಅದಕ್ಕೇ ನಮ್ಮ ಪರಂಪರೆ ಆಕೆಗೆ ಉನ್ನತ ಸ್ಥಾನ ಕೊಟ್ಟಿರೋದು. ಇನ್ನು ಮೇಲೆ ಅಮ್ಮನೊಂದಿಗೆ ಕರುಳ ಸಂಬಂಧ ಅನ್ನೋದರ ಜೊತೆಗೆ ಮಿರರ್ ನ್ಯೂರಾನುಗಳ ಸಂಬಂಧವನ್ನೂ ಹೇಳಬಹುದು!
ದಲೈ ಲಾಮಾರ ಒಂದು ಸವಾಲು ವಿಜ್ಞಾನಿಗಳ ಆಲೋಚನೆಯ ದಿಕ್ಕನ್ನೇ ಬದಲಿಸಿಬಿಟ್ಟಿತ್ತು. 2005ರಲ್ಲಿ ನರ ವಿಜ್ಞಾನಿಗಳ ಸಮಾವೇಶ ನಡೆದಾಗ ಅವರನ್ನು ಉಪನ್ಯಾಸಕ್ಕಾಗಿ ಆಹ್ವಾನಿಸಲಾಗಿತ್ತು. ಕೆಲವು ವಿಜ್ಞಾನಿಗಳು ಧಾರ್ಮಿಕ ಮುಖಂಡರನ್ನು ವಿಜ್ಞಾನದ ಅಧಿವೇಶನಕ್ಕೆ ಕರೆಯುವುದನ್ನು ವಿರೋಧಿಸಿದ್ದರು, ರಾದ್ಧಾಂತವೆಬ್ಬಿಸಿದ್ದರು. ಉಳಿದವರು ತಲೆ ಕೆಡಿಸಿಕೊಳ್ಳಲಿಲ್ಲ. ದಲೈ ಲಾಮಾ ತಮ್ಮ ಭಾಷಣದಿಂದ ರಂಗು ತುಂಬಿದ್ದಲ್ಲದೆ, ಪೂರ್ವದ ಚಿಂತನೆಯ ಮತ್ತೊಮ್ಮೆ ಜಗತ್ತನ್ನೆ ಆಳುವುದಕ್ಕೆ ವೇದಿಕೆ ರೂಪಿಸಿಕೊಟ್ಟರು.
ಹಾಗೆ ನೋಡಿದರೆ, ದಲೈ ಲಾಮಾಗೆ ಹುಟ್ಟಿಕೊಂಡ ಪ್ರಶ್ನೆ ಹೊಚ್ಚ ಹೊಸತೇನಲ್ಲ. ಚಕ್ರವರ್ತಿಯಾಗುವ ಎಲ್ಲ ಭಾಗ್ಯವನ್ನು ಪಡಕೊಂಡು ಬಂದಿದ್ದ ಬುದ್ಧ ವೃದ್ಧ, ರೋಗಿ, ಶವಗಳನ್ನು ನೋಡಿದನಲ್ಲ; ಅಂದೇ ಇವೆಲ್ಲವುಗಳಿಂದಲೂ ಪಾರಾಗುವ ಮಾರ್ಗ ಹುಡುಕಿಕೊಂಡು ವೈಭೋಗದ ಅರಮನೆ ಬಿಟ್ಟು ನಡೆದಿದ್ದ. ಅತ್ಯಂತ ಕಠಿಣ ತಪಸ್ಸು ಮಾಡಿ ದೇಹ ದಂಡಿಸಿ ಮೂಳೆ ಚಕ್ಕಳವಾದ. ಕೊನೆಗೆ ಭೋಗದ ಮತ್ತು ಹಠಯೋಗದ ನಡುವಿನ ಯೋಗ ಮಾರ್ಗ ಅರಸಿದ. ಇದೂ ಹೊಸತಾದುದೇನೂ ಆಗಿರಲಿಲ್ಲ. ಸ್ವತಃ ಬುದ್ಧನೇ ಹೇಳಿದ, “ನನ್ನಂತಹ ಬುದ್ಧರು ಹಿಂದೆಯೂ ಇದ್ದರು, ಮುಂದೆಯೂ ಬರುವರು”.
ಪತಂಜಲಿಯ ಯೋಗಸೂತ್ರಗಳು ಚಿತ್ತನಿಗ್ರಹದ ಬಗ್ಗೆಯೇ ಹುಟ್ಟಿಕೊಂಡ ವಿಜ್ಞಾನ. ಹಾಗಂತ ಪತಂಜಲಿಯೇ ಯೋಗದ ಜನಕನೇನು? ಖಂಡಿತ ಅಲ್ಲ. ಮಹಾಭಾರತದಲ್ಲಿ ಕೆಲವೆಡೆ ಸನತ್ಕುಮಾರ ಋಷಿ, ಜೈಗೀಷವ್ಯ ಋಷಿಗಳ ಕುರಿತಂತೆಯೂ ಉಲ್ಲೇಖವಿದೆ. ಅಲ್ಲಿಗೂ ನಿಲ್ಲದೆ ಭಾರತೀಯ ಪರಂಪರೆ ಎಲ್ಲ ವಿದ್ಯೆಗಳೂ ಸಾಕ್ಷಾತ್ ಪರಬ್ರಹ್ಮ ಮುಖಿಯೆಂದೇ ಒಪ್ಪುತ್ತವೆ. ಹೀಗಾಗಿ ಪರಬ್ರಹ್ಮನಿಂದ ಶುರು ಮಾಡಿ ದಲೈ ಲಾಮಾವರೆಗೆ ನಿರಂತರವಾಗಿ ಹರಿದು ಬಂದ ಯೋಗಪ್ರವಾಹ ಇದು. ಈ ಕುರಿತ ಒಂದು ಜಿಜ್ಞಾಸೆಯೇ ಪಶ್ಚಿಮದ ವಿಜ್ಞಾನಿಗಳ ತಲೆ ಇಷ್ಟು ಕೆಡಿಸಿರಬಹುದಾದರೆ, ಇನ್ನು ಪೂರ್ಣ ಭಾರತದ ಯೋಗವಿಜ್ಞಾನ ಅದೆಂತಹ ಬದಲಾವಣೆ ತರಬಲ್ಲದು! ಅನೇಕ ಬಾರಿ ಯೋಚಿಸಿಯೇ ರೋಮಾಂಚಿತನಾಗಿಬಿಡುತ್ತೇನೆ!

Wednesday 5 August 2015

ಆಲೋಚನೆಗಳ ಹಿಂದಿನ ಚಿತ್ತ ವಿಚಿತ್ರ

ನಾನು ಖಂಡಿತವಾಗಿ ವಿಜ್ಞಾನದ ವಿರೋಧಿಯಲ್ಲ. ಆದರೆ ಎಲ್ಲ ಪ್ರಶ್ನೆಗೂ ಭೌತಿಕ ವಿಜ್ಞಾನ ಉತ್ತರಿಸಬಲ್ಲದು ಎಂಬುದನ್ನು ಒಪ್ಪಲಾರೆ ಅಷ್ಟೇ. ಮತ್ತೆ ಮತ್ತೆ ಒತ್ತಿ ಹೇಳುತ್ತೇನೆ; ಯಾವ ಪ್ರಶ್ನೆಗೆ ವಿಜ್ಞಾನ ಉತ್ತರಿಸುವುದನ್ನು ನಿಲ್ಲಿಸುವುದೋ, ಅಲ್ಲಿಂದಾಚೆಗೆ ಅಧ್ಯಾತ್ಮ ಶುರುವಾಗುತ್ತದೆ.
ಸುಮ್ಮನೆ ಚರ್ಚೆ ಯಾಕೆ? ಸೈನಿಕರಾಗಿದ್ದ ಹಜಾರೆ, ಜೀವನದಲ್ಲಿ ನೊಂದು ಬೆಂದು ಆತ್ಮಹತ್ಯೆಯ ತಯಾರಿಯಲ್ಲಿದ್ದಾಗ ವಿವೇಕಾನಂದರ ಮಾತಿನ ಸಾಲುಗಳಿಂದ ಪ್ರಭಾವಿತರಾಗಿ ಬದುಕು ಬದಲಿಸಿಕೊಂಡರು – ಹಾಗಂತೆ ಓದಿದ್ದೇವೆ, ಅಣ್ಣಾ ಬಾಯಿಂದಲೂ ಕೇಳಿದ್ದೇವೆ. ಈಗ ಹೇಳಿ. ಅಣ್ಣಾ ವಿವೇಕಾನಂದರಿಂದ ಪ್ರಭಾವಿತರಾದ ದಿನ ವೈಜ್ಞಾನಿಕವಾಗಿ ಆದದ್ದೇನು? ಅಣ್ಣಾ ದೇಹದಲ್ಲಿ ಆಮ್ಲಜನಕ ಹೆಚ್ಚಾಯ್ತೆ? ಜಲಜನಕವೋ? ಪ್ರಭಾವವಾಗಿದ್ದು ಇಂದ್ರಿಯಗಳ ಮೇಲೋ, ದೇಹದ ಮೇಲೋ, ರಕ್ತ – ಮೂಳೆ, ಮಾಂಸಗಳ ಮೇಲೋ? ಮನಸ್ಸು ಅಂದೀರಿ ಜೋಕೆ! ಅದು ಕಣ್ಣಿಗೆ ಕಾಣದಿರುವುದರಿಂದ ಮೂಸಿ ನೋಡಲು, ಸ್ಪಶರ್ಿಸಲು ಸಾಧ್ಯವಿಲ್ಲದಿರುವುದರಿಂದ ವೈಜ್ಞಾನಿಕವಾಗಿ ಅದು ಇಲ್ಲ! ಅದು ಬಿಡಿ. ತೂಕ ನೋಡುವ ಯಂತ್ರದಲ್ಲಿ ನಿಮ್ಮ ದೇಹದ ತೂಕ ಲೆಕ್ಕ ಹಾಕಿ. ಈಗ ಮನಮೋಹಿಸುವ ಹಾಡೊಂದನ್ನು ಕೇಳಿ. ಐದಾರು ನಿಮಿಷ ಮೈಮರೆತ ನೀವು ಯಾವುದೋ ಲೋಕದಲ್ಲಿ ತೇಲಾಡಿಬಿಡುತ್ತೀರಿ. ಈಗ ಮತ್ತೆ ನಿಮ್ಮ ತೂಕ ಲೆಕ್ಕ ಹಾಕಿ. ಬದಲಾಗುವುದೇನು? ನಿಮ್ಮ ದೇಹದಲ್ಲಿನ ರಕ್ತ, ಮೂಳೆ, ಮಾಂಸಗಳ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬರುವುದೇನು? ಮತ್ತೆ ಐದಾರು ನಿಮಿಷಗಳಲ್ಲಿ ನಿಮ್ಮೊಳಗೆ ಬದಲಾವಣೆಯಾಗಿದ್ದು ವಾಸ್ತವವಾಗಿ ಏನದು? ಹಾ! ಸರಿಯಾಗಿ ಯೋಚಿಸಿದರಿ. ಇಲ್ಲಿಂದಾಚೆಗೇ ಅಧ್ಯಾತ್ಮದ ಪರಿಧಿ.086ea18ಪಂಚೇಂದ್ರಿಯಗಳ ಸಾಮರ್ಥ್ಯಕ್ಕೆ ನಿಲುಕದ ಅನೇಕ ಸಂಗತಿಗಳು ನಿತ್ಯವೂ ನಮ್ಮೆದುರಿಗೆ ನಡೆದೇ ಇರುತ್ತವೆ. ಅವುಗಳನ್ನು ಗಮನಿಸುವಲ್ಲಿ ನಾವು ಎಡವುತ್ತೇವೆ ಅಷ್ಟೆ. ವಾಸ್ತವವಾಗಿ ನಮ್ಮಲ್ಲಿ ಆಲೋಚನೆಗಳು ಹುಟ್ಟುತ್ತವಲ್ಲ, ಅದಾದಮೇಲೆ ಮೆದುಳಿನ ಯಾವಯಾವ ಭಾಗದಲ್ಲಿ ಯಾವಯಾವ ಬಗೆಯ ಕ್ರಿಯೆಗಳು ಜರುಗುತ್ತವೆಂಬ ವಿಸ್ತಾರವಾದ ಅಧ್ಯಯನವನ್ನು ಮಾಡಿದ್ದಾರೆ. ಆದರೆ ಮೂಲಭೂತವಾದ ಆಲೋಚನೆಗಳು ಹೇಗೆ ಹುಟ್ಟುತ್ತವೆ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ.
ವಿಜ್ಞಾನಿಗಳು ಇನ್ನೂ ತಿಣುಕಾಡುತ್ತಿದ್ದಾರೆ. ಹಾಗೇ ಸುಮ್ಮನೆ ಒಮ್ಮೆ ಕಣ್ಮುಚ್ಚಿ ಕುಳಿತು ನೋಡಿ. ಬಗೆಬಗೆಯ ಆಲೋಚನೆಯ ಬುಗ್ಗೆಗಳು ನಿಮ್ಮೊಳಗೆ ಏಳುವುದನ್ನು ಗಮನಿಸಿ. ಎಲ್ಲಿ ಅಡಗಿಕೊಂಡಿದ್ದವು ಅವು? ಒಳಿತು, ಕೆಡುಕು, ಅತಿ ಕೆಡುಕು ಎಲ್ಲ ಬಗೆಯ ಚಿಂತನಾತರಂಗಗಳ ಪ್ರವಾಹ. ಅವುಗಳಿಗೆ ಹೀಗೇ ಉತ್ಪಾದನೆಯಾಗಬೇಕೆಂಬ ಕ್ರಮವಿಲ್ಲ. ಮೇಲ್ನೋಟಕ್ಕೆ ಕಾಣುವ ನಿಮ್ಮ ವ್ಯಕ್ತಿತವಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಮತ್ತೆ ಈ ಚಿಂತನೆಗಳ ಉತ್ಪಾದನೆಯ ಕಾರ್ಖಾನೆ ಅದಾವುದು? ಈ ಚರ್ಚೆ ಅದೇಕೆ ಮುಖ್ಯವೆಂದರೆ, ಈ ಕಾರ್ಖಾನೆಯ ಉತ್ಪನ್ನದ ಗುಣಮಟ್ಟದ ಆಧಾರದ ಮೇಲೆಯೇ, ವ್ಯಕ್ತಿಯ ಗುಣಮಟ್ಟ ನಿರ್ಧಾರವಾಗುತ್ತದೆ.

ನೀವು ಯಾವಾಗಲಾದರೂ ‘ಚಿತ್ತ’ ಎನ್ನು ಪದವನ್ನು ಕೇಳಿದ್ದೀರಾ? ಇದು ಮನಸಿಗಿಂತ ಸ್ವಲ್ಪ ಸೂಕ್ಷ್ಮವಾದುದು. ಆಲೋಚನೆಗಳು ಹುಟ್ಟುವ ಮತ್ತು ಪರ್ಯವಸಾನಗೊಳ್ಳುವ ತಾಣವಿದು. ಚಿತ್ತ ಒಂದು ರೀತಿ ಸಿಡಿ ತಟ್ಟೆಯಿದ್ದಂತೆ. ಅದು ಹಿಂದಿನ ಜನ್ಮಗಳಿಂದ ಬಂದ ಅನುಭವದ ಎಲ್ಲ ಅಂಶಗಳನ್ನು ದಾಖಲಿಸಿಟ್ಟುಕೊಂಡಿದೆ. ಅಷ್ಟೇ ಅಲ್ಲ, ಈಗಿನ ಸಂಗತಿಗಳನ್ನೂ ದಾಖಲಿಸುತ್ತಲೇ ಹೋಗುತ್ತದೆ. ಕಂಪ್ಯೂಟರಿನ ದೃಷ್ಟಿಯಿಂದ ಇದು ‘ರೀಡ್ ಓನ್ಲಿ ಮೆಮೊರಿ’ಯಂತೆ. ಇಲ್ಲಿ ದಾಖಲು ಮಾಡಬಹುದು, ದಾಖಲಾಗಿದ್ದನ್ನು ಓದಬಹುದು, ಆದರೆ ಅಳಿಸುವುದು ಸಾಧ್ಯವಿಲ್ಲ. ಇದಕ್ಕಿಂತಲೂ ಸ್ಥೂಲಮಟ್ಟದ ಮನಸ್ಸು ಇಲ್ಲಿ ದಾಖಲಾಗಿದ್ದನ್ನು ಓದುತ್ತದೆ. ಮೆದುಳಿಗೆ ಮುಟ್ಟಿಸುವ ಕೆಲಸ ಮಾಡುತ್ತದೆ. ಇಲ್ಲಿ ಮನಸ್ಸು ರ್ಯಾಂಡಮ್ ಅಕ್ಷೆಸ್ ಮೆಮೊರಿ ಇದ್ದಂತೆ. ಅದು ಬರೆಸಿಕೊಂಡಷ್ಟೆ ವೇಗವಾಗಿ ಅಳಿಸಿಕೊಂಡೂ ಬಿಡುತ್ತದೆ. ಅದಕ್ಕೇ ನಮ್ಮ ಪೂರ್ವಜರು ಈ ಮನಸ್ಸನ್ನು ಚಂಚಲ ಎಂದಿದ್ದು, ಮರ್ಕಟಕ್ಕೆ ಹೋಲಿಸಿದ್ದು.
ಹೀಗೆ ಮನಸ್ಸು ಚಿತ್ತದ ಬತ್ತಳಿಕೆಯಿಂದ ಬಾಣಗಳನ್ನು ಮೊಗೆಮೊಗೆದು ಹುಚ್ಚಾಪಟ್ಟೆ ಮೆದುಳಿನತ್ತ ಎಸೆಯುತ್ತಿದ್ದರೆ ಪಂಚೇಂದ್ರಿಯಗಳು ಅದಕ್ಕೆ ಪೂರಕವಾಗಿ ಚಟುವಟಿಕೆಗಳನ್ನು ಹೊರಜಗತ್ತಿನಲ್ಲಿ ಮಾಡುತ್ತ ಹೋಗುತ್ತವೆ. ಮತ್ತೆ ಈ ಕ್ರಿಯೆಗಳೆಲ್ಲ ಚಿತ್ತದಲ್ಲಿ ಅಚ್ಚೊತ್ತಿಕೊಳ್ಳುತ್ತವೆ. ಇವು ಮತ್ತಷ್ಟು ಆಲೋಚನೆಗಳಿಗೆ ಕಾರಣವಾಗುತ್ತವೆ. ಎಲ್ಲ ಆಧ್ಯಾತ್ಮಿಕ ಪ್ರವಚನಗಳೂ ಜನನ ಮರಣ ಚಕ್ರದಿಂದ ಪಾರಾಗುವ ಕುರಿತಂತೆ ಮಾತಾಡುತ್ತವಲ್ಲ, ಅದರಲ್ಲಿ ಚಿತ್ತದಲ್ಲಿ ದಾಖಲಾಗದಂತೆ ತಡೆಯುವುದೂ ಒಂದು! ಇದಕ್ಕಾಗಿಯೇ ಬಗೆಬಗೆಯ ಸಾಧನೆಗಳು ರೂಪುಗೊಂಡಿರೋದು. ಚಿತ್ತದಿಂದ ಉಮ್ಮಳಿಸಿದ ಚಿಂತನೆಯನ್ನು ಮನಸ್ಸು ಮೆದುಳಿನತ್ತ ಎಸೆಯುತ್ತಲ್ಲ, ಆಗ ನಾವು ಮಾಡುವ ಕೆಲಸವನ್ನು ಪ್ರಯತ್ನಪೂರ್ವಕವಾಗಿ ನಿಯಂತ್ರಿಸಿದರೆ ಅದು ಕರ್ಮಯೋಗವಾಗಿಬಿಡುತ್ತದೆ. ಆಲೋಚನೆಯ ಮೂಲವನ್ನು ಹುಡುಕುತ್ತ ಅದರ ವಿಶ್ಲೇಷಣೆಗೆ ನಿಂತರೆ, ಅದು ಜ್ಞಾನಯೋಗ. ಚಿಂತನೆಗಳು ಮನಸ್ಸಿಗೆ ಬರದಂತೆ ಮನಸ್ಸನ್ನು ಶೂನ್ಯವಾಗಿಸುವ ಪ್ರಯತ್ನವಿದೆಯಲ್ಲ, ಅದನ್ನು ಧ್ಯಾನದ ರಾಜಮಾರ್ಗ, ರಾಜಯೋಗ ಅಂತಾರೆ ಅಷ್ಟೆ.
ಮನಸ್ಸನ್ನು ನಿಯಂತ್ರಿಸೋದೇ ಎಲ್ಲ ಯೋಗದ ಮೂಲ. ಇನ್ನೂ ಸ್ಪಷ್ಟಪಡಿಸಬೇಕೆಂದರೆ, ಯೋಗ ‘ಚಿತ್ತವೃತ್ತಿಗಳ ನಿರೋಧ’. ಹಾಗಂತ ಹೇಳುತ್ತೆ ಪತಂಜಲಿಯ ಸೂತ್ರ. ಚಿತ್ತದಲ್ಲಿ ಬಗೆಬಗೆಯ ಬುಗ್ಗೆಗಳು ಏಳದಂತೆ ನೋಡಿಕೊಂಡರಾಯ್ತು. ಹಾಗಾಗಬೇಕೆಂದರೆ ಮನಸ್ಸು ಹಿಡಿತಕ್ಕೆ ಬರಲೇಬೇಕು. ಅದಕ್ಕೆ ಕಠೋಪನಿಷತ್ತಿನಲ್ಲಿ ಯಮ ನಚಿಕೇತನಿಗೆ ಹೇಳುವ ಬೋಧೆಯಲ್ಲಿ ದೇಹವೆಂಬ ರಥದ ಸಾರಥಿಯಾಗಿ ಬುದ್ಧಿಯನ್ನು ಸಂಕೇತಿಸಿದರೆ, ಮನಸ್ಸನ್ನು ಲಗಾಮಿನಂತೆ ಚಿತ್ರಿಸುತ್ತಾನೆ. ಅರ್ಥ ಬಲು ಸ್ಪಷ್ಟ. ಬುದ್ಧಿಯ ಅಡಿ ಮನಸ್ಸಿದ್ದರೆ ಬದುಕು ಸುಂದರ; ಮನಸ್ಸು ಹೇಳಿದಂತೆ ಬುದ್ಧಿ ಕೇಳಿದರೆ ಬಲು ದುರ್ಭರ.

ನೀವು ಜಗತ್ತಿನ ಯಾವ ಮತಪಂಥಗಳನ್ನೆ ಗಮನಿಸಿ, ಅವುಗಳ ಮೂಲ ವ್ಯತ್ಯಾಸ ಇರುವುದು ಚಿತ್ತದ ಅಲೆಗಳ ಬಿಂಬವಾದ ಮನಸ್ಸನ್ನು ಸಂಭಾಳಿಸುವ ರೀತಿಯಲ್ಲೇ. ಭಕ್ತಿ ಮಾರ್ಗದ ಮೂಲಕ ಮನಸ್ಸನ್ನು ಎತ್ತರಕ್ಕೇರಿಸುವ ಹಾದಿ ತೋರುತ್ತದೆ. ಇನ್ನೂ ಕೆಲವು ಪಂಥಗಳು ಭಗವಂತ – ಭಕ್ತರಲ್ಲಿ ಭೇದವೇ ಇಲ್ಲವೆನ್ನುತ್ತ ಉನ್ನತ ಆಲೋಚನೆಗಳಿಗೆ ಪ್ರೇರೇಪಿಸುತ್ತವೆ. ಈ ಮೂಲ ಸತ್ವವನ್ನು ಮರೆತವರು ತಾವು ಹಿಡಿದ ಹಾದಿಯೇ ಶ್ರೇಷ್ಠ ಎನ್ನು ಜಿದ್ದಿಗೆ ಬಿದ್ದರು.
ಬೇರೆ ಮಾರ್ಗದಲ್ಲಿದ್ದವರನ್ನು ಹೀಯಾಳಿಸಿದರು. ಕೆಲವು ಮತಗಳಂತೂ ತಾವು ಶ್ರೇಷ್ಠ ಎನ್ನುವುದಕ್ಕಾಗಿ ಇತರರನ್ನು ಕೊಲ್ಲುವುದಕ್ಕೂ ಹಿಂದೆ ಮುಂದೆ ನೋಡಲಿಲ್ಲ. ಜಗತ್ತನ್ನು ಆವರಿಸುತ್ತಿರುವ ಅನೇಕ ಪಂಥಗಳು ಇಂಥವೇ.
ಒಟ್ಟಾರೆಯಾಗಿ ಒಂದಂತೂ ಸತ್ಯ. ಎಲ್ಲ ಮತಗಳೂ ಹುಟ್ಟಿರೋದು ಆಯಾ ಮತಗಳ ಮೂಲ ಪುರುಷರ ಚಿಂತನೆಗಳ ಕಾರಣದಿಂದಾಗಿಯೇ. ಮತ್ತು ಈ ಚೀಮತನೆಗಳ ಮೂಲ ಸ್ರೋತ ಚಿತ್ತವೇ! ಈ ಚಿತ್ತ ಸದಾ ಕಾಲ ತನ್ನನ್ನು ಓದುವಂತೆ ಮನಸ್ಸಿಗೆ ಪ್ರಚೋದನೆ ಕೊಡುತ್ತಲೇ ಇರುತ್ತದೆ. ಆದರೆ ನಾವು ಎಚ್ಚರವಾಗಿದ್ದಾಗ, ಐದೂ ಇಂದ್ರಿಯಗಳೂ ಕೆಲಸ ಮಾಡುತ್ತವಾದ್ದರಿಂದ ಮನಸ್ಸು ಆಗ ಹೊರಗಣ ಕೃತಿಗಳನ್ನು ಚಿತ್ತದಲ್ಲಿ ದಾಖಲಿಸುತ್ತಿರುತ್ತದೆ. ಒಮ್ಮೆ ಕಣ್ಮುಚ್ಚಿ ಕುಳಿತೊಡನೆ ಹಳೆಯದ್ನು ಕೆದುಕಲು ಶುರು ಮಾಡುತ್ತದೆ. ಅದಕ್ಕೇ ನಿದ್ದೆಯಲ್ಲೂ ಸ್ವಪ್ನಗಳು ನಮ್ಮನ್ನು ಕಾಡೋದು. ಹೀಗೆ ಜಾಗೃತಾವಸ್ಥೆ ಮತ್ತ ಸ್ವಪ್ನವಸ್ಥೆಯಲ್ಲಿ ಕಂಡ ಸತ್ಯಗಳನ್ನು ಸಮಾಜಕ್ಕೆ ಮುಟ್ಟಿಸಿ ಕೆಲವರು ಪಂತಗಳನ್ನು ಸ್ಥಾಪಿಸಿದರೆ, ಭಾರತೀಯ ಋಷಿಗಳುಇವೆರಡನ್ನೂ ಮೀರಿ ಸುಷುಪ್ತಿಯ ಅವಸ್ಥೆಗೇರಿದರು. ಅಲ್ಲಿ ಮನಸ್ಸನ್ನು ಇಲ್ಲವಾಗಿಸಿ ಚಿತ್ತಾಕಾಶದಲ್ಲಿಯೇ ವಿಹರಿಸಿದರು. ಆಗ ಅವರಿಗೆ ಅನೇಖ ಶಾಶ್ವತ ಸತ್ಯಗಳು ಗೋಚರವಾದವು. ಅದನ್ನು ಸಮಾಝದ ಮುಂದಿರಿಸಿದರು. ಹೀಗೆ ಚಿತ್ತಾಕಾಶದೊಂದಿಗೆ ಒಂದಾದಾಗ ಗೋಚರಿಸಿದ ಸತ್ಯವಾದ್ದರಿಂದ, ಋಷಿಗಳು ಎಂದಿಗೂ ಮಂತ್ರಗಳನ್ನು ಕಂಡುಹಿಡಿದೆ ಎನ್ನಲಿಲ್ಲ, ಬದಲಿಗೆ ‘ದರ್ಶನವಾಯ್ತು’ ಎಂದರು. ಈ ದರ್ಶನದ ವೇಳೆಗೆ ಮನಸ್ಸು ಇಲ್ಲವಾಗಿದ್ದರಿಂದ, ಅಸ್ತಿತ್ವದ ಭಾವನೆಯೇ ಲಯವಾಗಿತ್ತು. ಹೀಗಾಗಿಯೇ ಅವರು ಕಂಡುಕೊಂಡ ಸತ್ಯಗಳ ಸಂಕಲನ ‘ವೇದ’ ಅಪೌರುಷೇಯವಾಯಿತು.

ಚಿತ್ತದಿಂದ ಹೊರಟ ಪ್ರತಿಯೊಂದು ಆಲೋಚನೆಗೂ ಅಪಾರವಾದ ಶಕ್ತಿ ಇದೆ. ಆಡಿದ ಮಾತಿಗಿಂತ ಹೆಚ್ಚು ಶಕ್ತಿಶಾಲಿ ಆಡದ ಆಲೋಚನೆಯೇ. ಸ್ವಾಮಿ ವಿವೇಕಾನಂದರಂತೂ ನೀವು ಗುಹೆಯೊಂದರಲ್ಲಿ ಕುಳಿತು ಬಲವಾದ ಚಿಂತನೆಯೊಂದನ್ನು ಹೊರಹಾಕಿ. ಅದು ಆ ಗುಹೆಯ ಗೋಡೆಗಳನ್ನೂ ಮುರಿದುಕೊಂಡು ಜಗತ್ತನ್ನು ಆವರಿಸುತ್ತದೆ ಎನ್ನುತ್ತಾರೆ. ಬಹುಶಃ ನಮ್ಮಿಂದ ಹೊರಬಿದ್ದ ಚಿಂತನೆ ವಿಜ್ಞಾನ ಇನ್ನೂ ಗುರುತಿಸಲಾಗದ ಯಾವುದೋ ಬಗೆಯ ವಿಕಿರಣವಿರಬೇಕು. ಅದು ವಿದ್ಯುತ್ ಕಿರಣಗಳಿಗಿಂತಲೂ ಕಾಂತೀಯ ಕಿರಣಗಳಿಗಿಂತಲೂ ಬಲಾಢ್ಯವಾದುದೇ ಆಗಿರಬೇಕು. ಮನಸ್ಸು ಎಷ್ಟು ಶುದ್ಧವೋ ಅಷ್ಟು ಗಟ್ಟಿಯಾದ ಆಲೋಚನೆ. ಆಲೋಚನೆ ಎಷ್ಟು ಗಟ್ಟಿಯೋ ಅಷ್ಟು ದೀರ್ಘಕಾಲ ಬಾಳಿಕೆ ಮತ್ತು ಸುದೀರ್ಘ ದೂರ ಪಯಣ ಅದರದ್ದು. ಹೀಗಾಗಿಯೇ ಉಪನಿಷತ್ ಕಾಲದ ಋಷಿ ಹೇಳಿದ ವಾಕ್ಯವೊಂದು ಜರ್ಮನಿಯ ತತ್ತ್ವಶಾಸ್ತ್ರಜ್ಞ ಶೋಫನ್ ಹೋವರ್ನನ್ನು ಅಲುಗಾಡಿಸಬಲ್ಲದು. ಹಾಗೆ ನೋಡಿದರೆ ನಮ್ಮ ಸುತ್ತಲೂ ಮೊಬೈಲ್ ಸಂದೇಶ ಹೊರುವ ಸಿಗ್ನಲ್ಗಳು ಎಷ್ಟಿವೆಯೋ ಅದ್ಕಿಂತಲೂ ಸಾವಿರಾರು ಹೆಚ್ಚುಪಟ್ಟು ಚಿಂತನೆಯ ತರಂಗಗಳು ಸುತ್ತುತ್ತಿವೆ. ಇದರಲ್ಲಿ ಋಷಿಗಳ ಕಾಲದ ಆಲೋಚನೆಗಳಿವೆ, ಆಧುನಿಕ ಸುಧಾರಕರ ಆಲೋಚನೆಗಳಿವೆ. ಕೊನೆಗೆ ನಮ್ಮ ಪರಿಚಿತರ, ಗುರುತೇ ಇಲ್ಲದವರ ಚಿಂತನೆಗಳೂ ಸೇರಿಕೊಂಡಿವೆ. ಮನಸ್ಸು, ಚಿತ್ತ ಮತ್ತು ಈ ಸಂಜ್ಞೆಗಳನ್ನು ಬೆಸೆದರೆ ನೀವು ಊಹಿಸಲೂ ಸಾಧ್ಯವಿಲ್ಲದ ಹೊಸಹೊಸ ಆಲೋಚನೆಗಳು ನಿಮ್ಮೊಳಗಿಂದ ಉಮ್ಮಳಿಸಿಬರುತ್ತವೆ. ಕೆಲವೊಮ್ಮ ಗಣಿತದ ಸಮಸ್ಯೆಗೆ ಪರಿಹಾರ ಸಿಗದೆ ತಿಣುಕಾಡುತ್ತಿರುವಾಗ ಇದ್ದಕ್ಕಿದ್ದಂತೆ ಉತ್ತರ ಹೊಳೆಯುವ ಐಂದ್ರಜಾಲಿಕ ಪ್ರಕ್ರಿಯೆ ಗಮನಿಸಿದ್ದೀರ? ಉತ್ತರ ಅದೆಲ್ಲಿತ್ತು? ಮತ್ತದು
ತತ್ ಕ್ಷಣಕ್ಕೆ ಹೊಳೆದದ್ದು ಯಾಕೆ ಎಂಬುದಕ್ಕೆ ಉತ್ತರ ಏಕಾಗ್ರಗೊಂಡ ಮನಸ್ಸು ಮಾತ್ರ.

ಇದೊಂದು ರೀತಿ ರೇಡಿಯೋ ಟ್ಯೂನಿಂಗ್ ಇದ್ದಂತೆ. ರೇಡಿಯೋ ಸಂಕೇತಗಳನ್ನು ಟ್ಯೂನ್ ಮಾಡಿಕೊಂಡು ಬೇಕಾದ ಸಂಗೀತವನ್ನು ಕೇಳುವುದಿಲ್ಲವೆ? ಹಾಗೆ. ದೇಹವೇ ರೇಡಿಯೋ ಆದರೆ, ಮನಸ್ಸು ಟ್ಯೂನರ್. ಸುತ್ತಲೂ ಚದುರಿರುವ ಆಲೋಚನೆಗಳ ತರಂಗಗಳನ್ನು ಟ್ಯೂನ್ ಮಾಡಿ ಒಳಗೆಳೆದುಕೊಳ್ಲಬಹುದು. ಮನಸ್ಸು ಶೂನ್ಯಕ್ಕೆ ಹತ್ತಿರ ಹೋದಷ್ಟೂ ನಮ್ಮಲ್ಲಿ ಹುಟ್ಟುವ ಆಲೋಚನೆಗಳು ಘನವಾಗುತ್ತ ಸಾಗುತ್ತವೆ. ನಮ್ಮ ಸನಾತನ ಧರ್ಮದ ಉಗಮದ ಕಲ್ಪನೆ ಹೀಗೇ. ಸೃಷ್ಟಿಯ ಆದಿಯಲ್ಲಿ ಹುಟ್ಟಿಕೊಂಡ ಶಬ್ದವನ್ನು ಋಷಿಗಳು ಹೀಗೇ ಗ್ರಹಿಸಿದ್ದು. ವೇದಗಳ ಗ್ರಹಿಕೆಯ ಮಾರ್ಗವೂ ಇದೇ ಎನ್ನಲಾಗುತ್ತದೆ. ಹೀಗೆ ತನ್ನರಿವು ಕಳೆದುಕೊಂಡ ಮೇಲೆ ದರ್ಶನ ಪಡಕೊಂಡ ಶ್ರೇಷ್ಠ ವಿಚಾರಗಳಾದ್ದರಿಂದ ವೇದಗಳ ಮಾತು ಇಂದಿಗೂ ಸತ್ಯವಾಗಿವೆ. ಹೀಗೆ ಯಾವ ಮತವು ಶಾಶ್ವತ
ಸತ್ಯವನ್ನು ಪ್ರತಿಪಾದಿಸುವುದೋ ಅದು ‘ಧರ್ಮ’ವಾಗುತ್ತದೆ ಮತ್ತು ವಿಶ್ವಗುರು ಯೋಗ್ಯತೆ ಪಡೆದುಕೊಳ್ಳುತ್ತದೆ.

ಈಗ ಒಂದು ಪುಟ್ಟ ಪ್ರಯೋಗ ಮಾಡಿ. ಕಣ್ಮುಚ್ಚಿ ಕುಳಿತುಕೊಳ್ಳಿ. ನಿಮ್ಮ ಪ್ರಯತ್ನವೇ ಇಲ್ಲದೆ ಹುಟ್ಟುವ ಆಲೋಚನೆಯ ತರಂಗಗಳನ್ನು ಗಮನಿಸಿ. ಅವು ಸಾಗುವ ಹಾದಿಯ ಅವಲೋಕನ ಮಾಡಿ. ನೀವು ಅವುಗಖನ್ನು ತಡೆಯಲು ಪ್ರಯತ್ನಿಸಿದಷ್ಟೂ ಅವು ಹೆಚ್ಚುಹೆಚ್ಚು ಗೊಂದಲ ಎಬ್ಬಿಸುವುದನ್ನು ಕಾಣುವಿರಿ. ಅಷ್ಟೇ ಅಲ್ಲ, ಒಂದು ಆಲೋಚನೆ ಮತ್ತೊಂದಕ್ಕೆ ಬೆಸೆದುಕೊಳ್ಳುತ್ತಾ ಇದು ಸರಪಳಿಯಾಗುವುದು ನಿಮ್ಮ ಅನುಭವಕ್ಕೆ ಬರುತ್ತದೆ. ಈಗ ಸ್ವಲ್ಪ ಹೊತ್ತಿನ ಬಳಿಕ ಇದು ಹುಟ್ಟುತ್ತಿರುವುದು ಎಲ್ಲಿ ಎಂದು ಹುಡುಕಾಟ ಶುರು ಮಾಡಿ. ಈಗ ಮನಸ್ಸನ್ನು ದಾಟಿ ಹೋಗುವ ಪ್ರಯತ್ನ ಶುರುವಾಗುತ್ತದೆ. ನೀವು ಏಕಾಗ್ರರಾಗಲು
ಸಾಧ್ಯವಾದಷ್ಟೂ ವಿಶ್ವಚಿತ್ತ ನಿಮ್ಮೆದುರು ತೆರೆದುಕೊಳ್ಳುತ್ತದೆ. ನೀವು ಅವಾಕ್ಕಾಗೋದು ಖಚಿತ.
ಊಹೂಂ.. ಈ ಎಲ್ಲ ಪ್ರಯೋಗಗಳಿಗೂ ನೀವೇ ಪ್ರಯೋಗಾಲಯ. ನಿಮಗಾಘುವ ಬಗೆಬಗೆಯ ಅನುಭೂತಿಯನ್ನು ನೀವು ಯಾರಿಗೂ ವಿವರಿಸಲಾರಿರಿ. ಈ ಕಾರಣಕ್ಕೆ ಇದು ಸುಳ್ಳೆಂದು ನೀವು ವಾದಿಸುವುದೂ ಆಗದು. ವಿಜ್ಞಾನಕ್ಕೆ ಇವುಗಳನ್ನು ಸಾಧಿಸುವುದು ಸಾಧ್ಯವಾಗದು. ಜಗತ್ತಿನ ಸೂಕ್ಷ್ಮ ಮನಸ್ಸಿನ ವಿಜ್ಞಾನಿಗಳನೇಕರು ಇಂದು ಇದಕ್ಕಾಗಿ ತಿಣುಕಾಡುತ್ತಿದ್ದಾರೆ. ನರವಿಜ್ಞಾನವಂತೂ ಭಾರತೀಯ ಚಿಂತನೆಗಳತ್ತ ವಾಲಿಬಿಟ್ಟಿದೆ. ಅದರ ಆಧಾರದ ಮೇಲೆ ಪೂರ್ಣ
ಜಗತ್ತು ಭಾರತಕ್ಕೆ ನತಮಸ್ತಕವಾಗುವ ದಿನ ದೂರವಿಲ್ಲ.