IMPORTANT NOTICE

New official website is launched for Karada Community. Please visit www.karadavishwa.com for more details.

Friday, 5 June 2015

ದೇವರ ಮೇಲೆ ನಂಬಿಕೆ ಇದ್ದರೆ ತರ್ಕವನ್ನು ಗೌರವಿಸಬಾರದಾ?


ಬಾಳಿಗೊಂದು ನಂಬಿಕೆ ಇರಬೇಕು ಖರೆ. ಆ ಬಗ್ಗೆ ದೂಸರಾ ಮಾತೇ ಇಲ್ಲ. ಆದರೆ ನಾವು ಭಾರತೀಯರ ಮೇಲೆ ಒಂದು ಆರೋಪವಿದೆ. ಅದೆಂದರೆ, ನಮಗೆ ವೈಜ್ಞಾನಿಕ ಮನೋಭಾವ ಇಲ್ಲ ಅನ್ನೋದು. ಅಂದರೆ ನಾವೇನೋ ವಿಜ್ಞಾನ ಕ್ಷೇತ್ರದಲ್ಲಿ ಭಾರಿ ಹಿಂದುಳಿದುಬಿಟ್ಟಿದ್ದೇವೆ, ತಂತ್ರಜ್ಞಾನದಲ್ಲಿ ನಾವು ಗ್ರೇಸ್್ಮಾರ್ಕ್ ಪಡೆಯುವುದಕ್ಕೂ ತಡಬಡಾಯಿಸುತ್ತಿದ್ದೇವೆ ಎಂಬ ಚಿಂತನೆಯ ಮುನ್ನುಡಿಯೇನೂ ಇದಲ್ಲ. ಬದಲಿಗೆ ನಮ್ಮ ನಿತ್ಯಜೀವನದಲ್ಲಿ ನಾವು ವರ್ತಿಸುತ್ತಿರುವ ರೀತಿ-ನೀತಿ ಎಂಥಾದ್ದು ಎಂಬುದನ್ನು ಗಮನಕ್ಕೆ ತೆಗೆದುಕೊಂಡಾಗ ನಮ್ಮಲ್ಲಿ ವೈಜ್ಞಾನಿಕ ಮನೋಭಾವ ಕಮ್ಮಿ ಇದೆ ಎಂಬುದನ್ನು ಬಡಪೆಟ್ಟಿಗೆ ತಳ್ಳಿಹಾಕಲಿಕ್ಕಾಗುವುದಿಲ್ಲ.
ನಾವು ಕರಾರುವಾಕ್ಕಾಗಿ ಒಂದು ಯೋಚನಾ ಧಾಟಿಯನ್ನು ರೂಢಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದವರು. ಸಾವಿರಾರು ವರ್ಷಗಳಿಂದ ಯಾವುದನ್ನೋ ಮಾಡಿಕೊಂಡು ಬರಲಾಗುತ್ತಿದೆ ಎಂಬ ಕಾರಣಕ್ಕೆ ಅದನ್ನೇ ಮುಂದುವರಿಸಿಕೊಂಡು ಹೋಗುವ ನಮಗೆ ಅದರ ಕಾರಣವನ್ನು ಕೆದಕುವ, ಪ್ರಸ್ತುತತೆ ಇದೆಯಾ ಎಂದು ತರ್ಕಿಸುವ ಗುಣಗಳೇ ಇಲ್ಲ. ನಮ್ಮ ದೇಶ ವೈವಿಧ್ಯದ ಗೂಡು ಹಾಗೂ ಶ್ರೇಷ್ಠತೆಯ ನೆಲ. ತನ್ನಲ್ಲಿ ಅಸಾಧಾರಣ ಸಾಮರ್ಥ್ಯವನ್ನು ಹಿಡಿದಿಟ್ಟುಕೊಂಡಿರುವ ರಾಷ್ಟ್ರವಿದು. ಇದನ್ನು ನಾವು ಸರಿಯಾಗಿ ಬಳಸಿಕೊಂಡಿದ್ದೇ ಆದರೆ ನಮ್ಮ ಜೀವನದ ಗುಣಮಟ್ಟ ಹಾಗೂ ಬದುಕಿನ ಎಲ್ಲ ಆಯಾಮಗಳಲ್ಲಿ ಉತ್ಪಾದಕತೆ ಹೆಚ್ಚುವುದರಲ್ಲಿ ಸಂಶಯವಿಲ್ಲ. ಆದರೆ ಇವೆಲ್ಲ ಸಾಕಾರವಾಗಬೇಕು ಎಂದಾದರೆ ಮೂಲಭೂತವಾಗಿ ನಮ್ಮಲ್ಲಿ ಬೇಕಾಗಿರುವುದು ವೈಜ್ಞಾನಿಕ ದೃಷ್ಟಿಕೋನ. ನಂಬಿಕೆ ಮತ್ತು ತರ್ಕಗಳ ಪ್ರಶ್ನೆ ಬಂದಾಗ ನಾವು ಯಾವತ್ತೂ ಇಡಿ ಇಡಿಯಾಗಿ ನಂಬಿಕೆಯ ದಡಕ್ಕೆ ಆತುಕೊಳ್ಳುತ್ತ ಬಂದವರು. ಅದು ಸರ್ವನಾಶಕ್ಕೆ ಕಾರಣವಾಗಹೊರಟಿದೆ ಎಂಬ ಸೂಚನೆ ಸಿಕ್ಕರೂ ಅದನ್ನು ನಾವು ಬಿಡಲೊಲ್ಲೆವು. ನಂಬಿಕೆ ಹಾಗೂ ತರ್ಕಗಳೆರಡರ ಹದ ಮಿಳಿತ ಬೇಕು ಬದುಕಿಗೆ. ಯಾವುದಕ್ಕೆ ಅತಿಯಾಗಿ ತಗುಲಿಕೊಂಡರೂ ಅಪಸವ್ಯಗಳೇ ಎದುರಾಗುತ್ತವೆ. ತರ್ಕ ಹಾಗೂ ನಂಬಿಕೆಗಳ ವಿಷಯದಲ್ಲಿ ಹೀಗೊಂದು ಸಮತೂಕ ಸಾಧಿಸಿದಾಗಮಾತ್ರ ಜಗತ್ತು ನಮ್ಮನ್ನು ಗುರುತಿಸುತ್ತದೆ.ಸಮುದ್ರ ಮಧ್ಯದಲ್ಲಿ ಹಡಗೊಂದು ಮುರಿದುಹೋಯಿತು. ಎಲ್ಲರೂ ಬಚಾವಾಗುವುದಕ್ಕೆ ತಮ್ಮ ಹಾದಿ ಹುಡುಕತೊಡಗಿದರು. ಆ ಹಡಗಿನಲ್ಲಿ ಆಸ್ತಿಕನೊಬ್ಬನಿದ್ದ. ಆತ ಯಾವ ಗಾಬರಿಗೂ ಒಳಗಾಗದೇ ‘ದೇವರೇ, ನನ್ನನ್ನು ಕಾಪಾಡು’ ಎಂದು ಪ್ರಾರ್ಥನೆಯಲ್ಲಿ ತೊಡಗಿಕೊಂಡ. ಅಷ್ಟರಲ್ಲಿ ಮತ್ತೊಂದು ದೊಡ್ಡ ಹಡಗು ಸಾಗಿ ಬಂತು. ಹಡಗಿನ ಕ್ಯಾಪ್ಟನ್ ಇವನನ್ನು ಗುರುತಿಸಿ ಇವನತ್ತ ರಕ್ಷಣೆಯ ಹಗ್ಗ ಎಸೆದು ಹೇಳಿದ- ‘ಈ ಹಡಗಿಗೆ ಹತ್ತಿಕೋ..’ ಅದಕ್ಕೆ ಈ ಕಟ್ಟರ್ ಆಸ್ತಿಕ ಉತ್ತರಿಸಿದ- ‘ಇಲ್ಲ, ಇಲ್ಲ ನೀವು ಹೊರಡಿ. ನನಗೆ ದೇವರಲ್ಲಿ ಅಸೀಮ ನಂಬಿಕೆ. ಆತನೇ ಕಾಪಾಡುತ್ತಾನೆ. ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.’ ಆ ಹಡಗು ಮುಂದೆ ಹೋಯಿತು.
ನಂತರ ಮೀನುಗಾರರ ಸಣ್ಣ ದೋಣಿಯೊಂದು ಸಮೀಪ ಹೋಯಿತು. ಅಲ್ಲಿನವರೂ ಈ ವ್ಯಕ್ತಿಯನ್ನು ತಮ್ಮ ದೋಣೆಗೆ ದಾಟಿ ಬರುವಂತೆ ಹೇಳಿ ಸಹಾಯಕ್ಕೆ ಮುಂದಾದರು. ಇವನದು ಮತ್ತದೇ ಅಚಲ ಉತ್ತರ- ‘ದೇವರು ನನ್ನನ್ನು ಕಾಪಾಡುತ್ತಾನೆ.’ ಅವರೂ ಮುಂದೆ ಸಾಗಿದರು. ಹಡಗು ಮತ್ತಷ್ಟು ಮುಳುಗುತ್ತಾ ಬಂತು. ಆ ಸಮಯಕ್ಕೆ ಆಕಾಶದಲ್ಲಿ ಹೆಲಿಕಾಫ್ಟರ್ ಒಂದು ಗಿರ್ಕಿ ಹೊಡೆಯಿತು. ಅವರೂ ಮುಳುಗುತ್ತಿರುವ ಈತನಿಗೆ ಏಣಿ ಇಳಿಬಿಟ್ಟು ರಕ್ಷಿಸುವುದಕ್ಕೆ ಮುಂದಾದರು. ಈತನ ಉತ್ತರ – ‘ನೀವು ಹೊರಡಬಹುದು. ನನಗೆ ದೇವರಲ್ಲಿ ಅಚಲ ನಂಬಿಕೆ ಇದೆ. ಆತ ಕಾಪಾಡಿಯೇ ಕಾಪಾಡುತ್ತಾನೆ.’ ಬೇರೆ ದಾರಿಯಿಲ್ಲದೇ ಹೆಲಿಕಾಪ್ಟರ್ ಕೂಡ ದೂರವಾಯಿತು.
ಇತ್ತ ಹಡಗು ಮುಳುಗಿಹೋಗಿ ಈ ಆಸ್ತಿಕ ಸ್ವರ್ಗದಲ್ಲಿ ಕಣ್ಣು ತೆರೆದ. ಇವನೆದುರು ದೇವರು ಸಿಂಹಾಸನದಲ್ಲಿ ಪವಡಿಸಿದ್ದ. ಈತ ಕೇಳಿದ, ‘ದೇವರೇ, ನಾನು ಎಲ್ಲ ರೀತಿಯಲ್ಲೂ ನಿನ್ನ ಮೇಲೆ ನಂಬಿಕೆ ಇರಿಸಿದ್ದೆ. ಅದೇಕೆ ನೀನು ಕಾಪಾಡಲಿಲ್ಲ?’
ದೇವರು ಉತ್ತರಿಸಿದ- ‘ಅಲ್ಲಯ್ಯಾ, ನಿನ್ನನ್ನು ಕಾಪಾಡುವುದಕ್ಕೋಸ್ಕರ ನಾನು ಒಮ್ಮೆ ಹಡಗು, ಇನ್ನೊಮ್ಮೆ ಮೀನುಗಾರರ ದೋಣಿ, ಮತ್ತೊಮ್ಮೆ ಹೆಲಿಕಾಪ್ಟರ್ ಕಳುಹಿಸಿದೆ. ನನ್ನಿಂದ ಇನ್ನೂ ಏನು ನಿರೀಕ್ಷೆ ಮಾಡ್ತೀಯಾ?’
>>>
ಬಹುತೇಕ ನಾವೆಲ್ಲ ಈ ಕಟ್ಟರ್ ಆಸ್ತಿಕನಂತೆಯೇ ಬದುಕುತ್ತಿದ್ದೇವೆ. ದಿನನಿತ್ಯದ ಜೀವನದಲ್ಲಿ ಅದೇ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೇವೆ. ನಾವು ಭಾರಿ ದೈವಭೀರುಗಳು, ದೇವರಿಗೆ ಹೆದರುವವರು ಎಂದು ತೋರಿಸಿಕೊಳ್ಳುತ್ತೇವೆ. ಎಲ್ಲವನ್ನೂ ನಂಬಿಕೆಯ ಮೇಲೆ ಹೇರುತ್ತೇವೆ. ಆದರೆ ಕಾನೂನು- ನಿಯಮಗಳನ್ನು ಪಾಲಿಸುವ ವಿಷಯ ಬಂದಾಗ ನಮ್ಮದು ಘೋರ ಅಸಡ್ಡೆ. ನಮ್ಮನ್ನು ಸುರಕ್ಷಿತವಾಗಿ, ಕ್ಷೇಮವಾಗಿ ಇಡಪ್ಪಾ ಎಂದು ದೇವರನ್ನು ಅನುಕ್ಷಣವೂ ಬೇಡಿಕೊಳ್ಳುತ್ತೇವೆಯೇ ಸಿವಾಯ್, ಆ ನಿಯಮಗಳೂ ನಮ್ಮ ಸುರಕ್ಷತೆಗೆ ಇರುವುದು ಎಂಬುದನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ.
ರಸ್ತೆ ಮೇಲೆ ಸುಮ್ಮನೇ ಕಣ್ಣು ಹಾಯಿಸಿ. ಬೈಕು ಒಂದು ಹೋಗುತ್ತಿರುತ್ತದೆ. ಅದನ್ನು ಚಲಾಯಿಸುತ್ತಿರುವ ಅಪ್ಪನ ತಲೆಯಲ್ಲಿ ಹೆಲ್ಮೆಟ್ ಇದೆ. ಏಕಿದೆ ಅಂದರೆ, ಹಾಗಂತ ನಿಯಮವಿದೆ; ಪೊಲೀಸರು ನೋಡಿ ದಂಡ ಹಾಕಬಾರದಲ್ಲಾ ಎಂಬ ಒಂದೇ ಕಾರಣಕ್ಕೆ. ಆದರೆ ಹಿಂದೆ ಮಗುವನ್ನು ಹಿಡಿದು ಕುಳಿತ ಅಮ್ಮನ ತಲೆಗೆ ಶಿರಸ್ತ್ರಾಣವಿಲ್ಲ. ಅದಕ್ಕೂ ಕಾರಣ ಬಹಳ ಸುಲಭದ್ದು. ಹಿಂದೆ ಕುಳಿತವರು ಹೆಲ್ಮೆಟ್ ಧರಿಸಿರಬೇಕು ಎಂಬುದು ಕಾನೂನಿನಲ್ಲಿ ಕಡ್ಡಾಯ ಮಾಡಿಲ್ಲವಲ್ಲ! ಅಲ್ಲೇ ಬೈಕ್್ನ ನಡುಭಾಗದಲ್ಲಿ ಪೋರನೊಬ್ಬ ತೂರಿಕೊಂಡು ಕುಳಿತಿದ್ದಾನೆ. ಇನ್ನೊಬ್ಬನನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಪ್ರತಿಷ್ಠಾಪಿಸಲಾಗಿದೆ. ಇವರಿಬ್ಬರಿಗೂ ಹೆಲ್ಮೆಟ್ ಇಲ್ಲ. ಅವರ ಸುರಕ್ಷತೆಯ ಕತೆಯೇನು? ಕ್ಷಮಿಸಿ, ಹಾಗೆಲ್ಲ ಕೇಳಲೇಬಾರದು. ಅವರಿಗೆಲ್ಲ ಹೆಲ್ಮೆಟ್ ಕಡ್ಡಾಯ ಎಂಬ ನಿಯಮವಿಲ್ಲ.
ಕಾಯಿದೆಯ ಬಿಗಿ ಇಲ್ಲ ಎಂದಾದರೆ ಹೆಲ್ಮೆಟ್ ಧರಿಸಿ ಪ್ರಯಾಣ ಮಾಡುವವರ ಸಂಖ್ಯೆ ಶೇ. 20ರಷ್ಟೂ ಇರುವುದಿಲ್ಲ. ಬಹುಶಃ ಜಗತ್ತಿನಲ್ಲಿ ಹೆಲ್ಮೆಟ್ ಬಗ್ಗೆ ಇಷ್ಟು ಉಡಾಫೆ ಇಟ್ಟುಕೊಂಡಿರುವ ಮಂದಿ ನಾವು ಮಾತ್ರ ಆಗಿದ್ದಿರಬಹುದು.
ಬೈಕ್ ಹಿಂದೆ ಕುಳಿತವರಿಗೂ ಹೆಲ್ಮಟ್ ಕಡ್ಡಾಯ ಎಂಬ ನಿಯಮ ತರುವುದಕ್ಕೆ ಮುಂದಾದಾಗಲೆಲ್ಲ, ನಾವು ಸರ್ಕಾರದ ಆ ನಡೆಯ ವಿರುದ್ಧ ಭಾರಿ ಒಗ್ಗಟ್ಟಿನಲ್ಲಿ ಬೀದಿಗಿಳಿದು ಪ್ರತಿಭಟಿಸಿದ್ದೇವೆ! ನೋಡಿ, ನಮ್ಮ ಸ್ಥಳೀಯ ಆಡಳಿತ ಬಲವಂತವಾಗಿ ನಮ್ಮ ಮೇಲೆ ಹೆಲ್ಮೆಟ್ ಹೇರುತ್ತಿದೆ ಎಂದು ಆಕ್ಷೇಪಿಸುತ್ತ ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು ಹೂಡಿದ್ದೇವೆ. ಇಂಥ ಪ್ರತಿರೋಧಗಳಿಗೆ ಪೆಚ್ಚಾಗಿ ಕಾನೂನೇ ಹಿಂದೆ ಸರಿದಿದೆ. ಇದರ ಪರಿಣಾಮ ಆಗುತ್ತಿರುವುದೆಲ್ಲಿ? ರಸ್ತೆಗಳಲ್ಲಿ ಅಪಘಾತಗಳು ಹೆಚ್ಚಾಗಿವೆ. ತುರ್ತುಚಿಕಿತ್ಸೆಯ ಖರ್ಚುಗಳನ್ನು ಭರಿಸುವುದಕ್ಕೆ ಅಪಘಾತಕ್ಕೆ ಒಳಗಾದವನಿಗೆ ಸಾಧ್ಯವಾಗುತ್ತದೋ ಇಲ್ಲವೋ ಎಂಬ ಅನುಮಾನದಲ್ಲಿ ಆಸ್ಪತ್ರೆಗಳು ಅಂಥ ಪ್ರಕರಣಗಳನ್ನು ದಾಖಲಿಸಿಕೊಳ್ಳುವುದಕ್ಕೇ ಹಿಂದೆ-ಮುಂದೆ ನೋಡುತ್ತಿವೆ. ಅಪಘಾತಕ್ಕೀಡಾದವನು ಅರ್ಜಿ ತುಂಬುವ ಸ್ಥಿತಿಯಲ್ಲಿದ್ದಿರುವುದಿಲ್ಲ. ಕೆಲವೇ ಸಂವೇದನಾಶೀಲ ಅಧಿಕಾರಿಗಳು ಮಾತ್ರವೇ ಈ ಕಾಯಿದೆ ಚೌಕಟ್ಟನ್ನು ಮಾನವೀಯ ನೆಲೆಯಲ್ಲಿ ಪಕ್ಕ ಸರಿಸಿ, ಅಗತ್ಯ ಕ್ರಮಕ್ಕೆ ದಾರಿ ಮಾಡಿಕೊಡುತ್ತಾರೆ.
ಹೆಲ್ಮೆಟ್ ಧರಿಸುವುದರಿಂದ ಸುರಕ್ಷತೆ ಹೆಚ್ಚು ಎಂದು ನಿರೂಪಿಸುವ ಅಂಕಿ-ಅಂಶ, ಮಾಹಿತಿಗಳನ್ನೆಲ್ಲ ಎಷ್ಟೇ ಎದುರಿಗಿಟ್ಟರೂ ಆ ಮೂಲಕ ಜನರು ಹೆಲ್ಮೆಟ್ ಹಾಕಿಕೊಳ್ಳುವಂತೆ ಮಾಡಲಿಕ್ಕಾಗುವುದಿಲ್ಲ. ಕಾಯಿದೆ ಇರಲಿ, ಇಲ್ಲದಿರಲಿ ನೀವು ಬೈಕ್ ಚಲಾಯಿಸುವಾಗ ಹೆಲ್ಮೆಟ್ ಧರಿಸಿರಲೇ ಬೇಕು ಎಂದು ಕೆಲವೇ ಸಂಸ್ಥೆಗಳಷ್ಟೇ ತಮ್ಮ ಉದ್ಯೋಗಿಗಳಿಗೆ ಷರತ್ತು ವಿಧಿಸಿವೆ. ಜಗತ್ತಿನಾದ್ಯಂತ, ನಾಗರಿಕವಾಗಿ ಮುಂದುವರಿದಿವೆ ಎಂಬ ರಾಷ್ಟ್ರಗಳಲ್ಲೆಲ್ಲ ಹೆಲ್ಮೆಟ್ ಧಾರಣೆ ಕಡ್ಡಾಯವಾಗಿದೆ. ಅಲ್ಲೆಲ್ಲ ರಸ್ತೆಗಳು ಉತ್ತಮವಾಗಿವೆ, ಸಂಚಾರ ವ್ಯವಸ್ಥೆಯೂ ಅಚ್ಚುಕಟ್ಟಾಗಿದೆ. ಹಾಗಿದ್ದೂ ಅವರು ಬೈಕ್್ಗಳಿಗಷ್ಟೇ ಅಲ್ಲ, ಬೈಸಿಕಲ್ ಚಲಾಯಿಸುವಾಗಲೂ ಹೆಲ್ಮೆಟ್ ಕಡ್ಡಾಯ ಮಾಡಿಕೊಂಡಿದ್ದಾರೆ. ಕೇವಲ ಚಾಲಕನಿಗೆ ಮಾತ್ರವಲ್ಲದೇ ಸವಾರನಿಗೂ ಹೆಲ್ಮೆಟ್ ಧಾರಣೆ ಕಡ್ಡಾಯ. ಅದು ತಮ್ಮ ಲಾಭಕ್ಕಾಗಿಯೇ ಎಂದು ಅರ್ಥ ಮಾಡಿಕೊಂಡಿರುವ ಅಲ್ಲಿನ ಜನರೆಲ್ಲ ಗೊಂದಲಗಳಿಗೆ ಅವಕಾಶ ಮಾಡಿಕೊಡದೇ ನಿಯಮವನ್ನು ಪಾಲಿಸುತ್ತಾರೆ.
ಆದರೆ ನಮ್ಮಲ್ಲಿ? ರಸ್ತೆಯಲ್ಲಿ ಅಡ್ಡಡ್ಡ ಕಾರು ನಿಲ್ಲಿಸಿ ಕರ್ಕಶವಾಗಿ ಹಾರನ್ ಬಜಾಯಿಸುತ್ತಾರೆ. ಸಂಚಾರ ನಿಯಮಗಳು ಲೆಕ್ಕಕ್ಕೇ ಇಲ್ಲ. ಸಂಚಾರಸೂಚಿಯ ದೀಪಗಳಲ್ಲೂ ಅಸ್ತವ್ಯಸ್ತತೆ, ರಸ್ತೆಯಲ್ಲಿ ಯಮಪುರಿಯ ದಾರಿ ತೋರಿಸುವ ಹೊಂಡಗಳು, ಇವೆಲ್ಲದರ ನಡುವೆಯೇ ಹೆಲ್ಮೆಟ್್ರಹಿತ ಬೈಕ್ ಚಾಲನೆ. ಆಸ್ಟ್ರೇಲಿಯಾದಂಥ ರಾಷ್ಟ್ರ 1961ರಿಂದಲೇ ಹೆಲ್ಮೆಟ್ ಕಡ್ಡಾಯ ನೀತಿ ಅನುಸರಿಸಿಕೊಂಡು ಬಂದಿದೆ ಎಂಬುದು ಗೊತ್ತೇನು? ‘ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಜನರಿಗೇ ಹೆಲ್ಮೆಟ್ ಬೇಡ ಎಂದಿರುವಾಗ ಅದನ್ನು ಹೇರುವುದಕ್ಕೆ ಯಾವ ಸರ್ಕಾರಕ್ಕೆ ಅಧಿಕಾರವಿದೆ?’ ಎಂದೇ ನಾವು ಅಬ್ಬರಿಸುತ್ತೇವೆ!?
ಹಾಗಾದರೆ ನಮಗೆ ನಮ್ಮ ಸುರಕ್ಷತೆ ಬಗ್ಗೆ ಕಾಳಜಿಯೇ ಇಲ್ಲವೇಉಹುಂ. ಹಾಗೆ ಅಂದುಕೊಳ್ಳುವಂತೆಯೇ ಇಲ್ಲ! ಏಕೆಂದರೆ ವಾಹನ ಖರೀದಿಸುವಾಗಲೇ ನಮ್ಮ ಅದೃಷ್ಟ ಸಂಖ್ಯೆಯ ಲೆಕ್ಕಾಚಾರಗಳು ಶುರು. ಇದೇ ನಂಬರಿನಿಂದ ಶುರುವಾದರೆ, ಕೂಡಿಸಿ- ಕಳೆದರೆ ಇಂತಿಷ್ಟೇ ಸಂಖ್ಯೆ ಉತ್ತರವಾಗಿ ಬಂದರೆ ಆಯುಷ್ಯ ಪೂರ್ತಿ ಅದರಲ್ಲಿ ಆರಾಮ ಪ್ರಯಾಣ ಎಂದು ನಂಬುವವರು ನಾವು. ದೇವಸ್ಥಾನಕ್ಕೆ ಕೊಂಡೊಯ್ದು ಪೂಜೆ ಆದ ನಂತರವೇ ವಾಹನದ ಬಳಕೆ. ಯಾವತ್ತೂ ಅಪಘಾತಕ್ಕೆ ಈಡಾಗದಿರಲಿ ದೇವರೇ ಎಂಬ ಪ್ರಾರ್ಥನೆ. ಕಾರಿನ ಡ್ಯಾಶ್್ಬೋರ್ಡ್ ಮೇಲೆ ಗಣಪ. ಬೈಕ್್ನ ಮೂತಿಗೆ ಇಂಥಾ ದೇವರ ಆಶೀರ್ವಾದ ಎಂಬ ಒಕ್ಕಣೆ. ಎಲ್ಲವೂ ಸರಿ. ಆದರೆ ನಂತರ ಗಾಡಿಯ ಇನ್ಷೂರೆನ್ಸ್ ಕಂತನ್ನೇ ಕಟ್ಟುವುದಿಲ್ಲ. ನಿಯಮವಿದೆಯಲ್ಲಾ ಎಂಬ ಕಾರಣಕ್ಕೆ ವಿಮೆ ಮಾಡಿಸುವವರೇ ಅಧಿಕ. ಅವಘಡದ ಸಂದರ್ಭದಲ್ಲಿ ನಮಗೆ, ನಮ್ಮ ಕುಟುಂಬದವರಿಗೆ ರಕ್ಷಣೆಗೆ ಬರುವಂಥದ್ದು ಇದೇ ಎಂಬ ಸುರಕ್ಷತೆಯ ಅರಿವೇಕೆ ನಮ್ಮಲ್ಲಿ ಒಡಮೂಡುವುದಿಲ್ಲ? ನಮಗೆ ಸುರಕ್ಷತೆ ಬೇಕು. ಆದರೆ ನಾವು ಸುರಕ್ಷತೆಯ ಭಾರವನ್ನೆಲ್ಲಾ ದೇವರ ಮೇಲೆ ಹಾಕಿ ಹೆಲ್ಮೆಟ್ ಪಕ್ಕಕ್ಕೆ ಸರಿಸುತ್ತೇವೆ! ಹೆಲ್ಮೆಟ್ ಧರಿಸಿಯೂ ಅಪಘಾತದಲ್ಲಿ ಸತ್ತ ವ್ಯಕ್ತಿಯ ಯಾವುದಾದರೂ ಒಂದು ಉದಾಹರಣೆ ಇಟ್ಟುಕೊಂಡು, ‘ಹೆಲ್ಮೆಟ್ ಹಾಕಿದ ಮಾತ್ರಕ್ಕೆ ಬದುಕುಳಿಯುತ್ತೇವೆ ಅನ್ನೋದಕ್ಕೆ ಗ್ಯಾರಂಟಿ ಏನು? ಎಲ್ಲ ಆ ದೇವರಿಚ್ಛೆ’ ಎಂಬ ಅಸಡ್ಡಾಳ ವಾದ ನಮ್ಮದು.
ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್್ಬೆಲ್ಟ್ ಕಟ್ಟಿಕೊಳ್ಳುವುದರ ಬಗ್ಗೆಯೂ ನಮ್ಮ ನಿರ್ಲಕ್ಷ್ಯ ಕಣ್ಣಿಗೆ ರಾಚುವಂಥದ್ದೇ. ಕ್ಯಾಬ್್ಡ್ರೈವರ್್ಗಳು ಸೀಟ್್ಬೆಲ್ಟ್ ಧರಿಸಿ ಚಾಲನೆ ಮಾಡುವ ದೃಶ್ಯ ಕಾಣಸಿಗುವುದೇ ಅಪರೂಪ. ‘ನಿಯಮದ ಪ್ರಕಾರ ಅದೇನೂ ಕಟ್ಟುನಿಟ್ಟು ಅಲ್ಲ ಬಿಡಿ. ಇಷ್ಟಕ್ಕೂ ಅದನ್ನೆಲ್ಲ ಯಾರು ಗಮನಿಸುತ್ತಾರೆ?’ ಎಂಬ ಸಮಜಾಯಿಷಿ ನಮ್ಮ ಬಳಿ ಯಾವತ್ತೂ ಸಿದ್ಧ. ಡ್ಯಾಶ್್ಬೋರ್ಡ್ ಮೇಲೆ ಗಣಪತಿ ಇದ್ದ ಮೇಲೆ ಸೀಟ್್ಬೆಲ್ಟ್್ನ ಹರಕತ್ತೇನು ಎಂಬ ಲಹರಿ ನಮ್ಮದು.
ಇಷ್ಟೆಲ್ಲ ನ್ಯೂನತೆಗಳಿದ್ದೂ ಅವನ್ನು ಯಾರಾದರೂ ತೋರಿಸಿ, ನಿಮ್ಮ ನಡತೆ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಒಗ್ಗುವಂಥದ್ದಲ್ಲ ಎಂದರೆ ಸಿಡಿಸಿಡಿಯಾಗುತ್ತೇವೆ. ಸುಳ್ಳೇ ನಮ್ಮಲ್ಲೊಂದು ಸ್ವಾಭಿಮಾನ ಹೆಡೆ ಎತ್ತಿ ಬುಸುಗುಡುತ್ತದೆ. ಈಗ ಹೇಳಿ, ಮುಳುಗುತ್ತಿರುವ ಹಡಗಿನಲ್ಲಿ ಎಲ್ಲರ ಸಹಾಯಹಸ್ತಗಳನ್ನು ದೂರತಳ್ಳಿ ಭಜನೆ ಮಾಡುತ್ತಾ ಕುಳಿತು ನೆಗೆದುಬಿದ್ದ ಆ ಅಸಾಮಿ ನಮ್ಮದೇ ಪ್ರತಿನಿಧಿಯಂತೆ ಭಾಸವಾಗುತ್ತಿಲ್ಲವೇ?

Thursday, 4 June 2015

ಯಶಸ್ಸು ಗಳಿಸುವುದು ಕಷ್ಟವಲ್ಲ, ಆದರೆ ಇಟ್ಟುಕೊಳ್ಳುವುದು!


ಅನೇಕ ಮಂದಿ ಜೀವನದಲ್ಲಿ ಎಡವುತ್ತಾರೆ, ಸೋಲುತ್ತಾರೆ. ಹಾಗೆಂದು ಇವರು ಸಾಮಾನ್ಯರಲ್ಲ. ಅವರವರ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮೆರೆದವರೇ. ಯಶಸ್ಸಿನ ನೆತ್ತಿ ಮೇಲೆ ಗುದ್ದಿ ಗೆಲುವನ್ನು ಎದೆಗವಚಿಕೊಂಡವರೇ. ಇಂಥ ಯಶಸ್ವಿ ವ್ಯಕ್ತಿಗಳು ವೈಯಕ್ತಿಕ ಜೀವನದಲ್ಲಿ ಮುಗ್ಗರಿಸುತ್ತಾರೆ. ಬಾಳನ್ನು ಗಾಳುಮೇಳಾಗಿಸಿಕೊಂಡು ತೊಳಲಾಡುತ್ತಾರೆ. ಇಂಥವರ ಬಹಳ ದೊಡ್ಡ ದುರಂತವೇನೆಂದರೆ ಇವರಿಗೆ ತಮಗೆ ಒದಗಿ ಬಂದ ಯಶಸ್ಸನ್ನು ಹೇಗೆ ನಿಭಾಯಿಸಬೇಕೆಂಬುದು ಗೊತ್ತಿಲ್ಲದಿರುವುದು. ಯಶಸ್ಸೇ ಅವರಿಗೆ ಮುಳುವಾಗಿರುತ್ತದೆ. ಯಶಸ್ಸನ್ನು ಹೇಗೆ ಇಟ್ಟುಕೊಳ್ಳಬೇಕೆಂದು ಗೊತ್ತಿಲ್ಲದೇ, ತಲೆಯ ಕಿರೀಟವೇ ಭಾರವಾದಂತಾಗಿ ಇನ್ನಿಲ್ಲದ ಸಮಸ್ಯೆಗೆ ಈಡುಮಾಡಿಕೊಳ್ಳುತ್ತಾರೆ. ಹೀಗಾಗಿ ಯಶಸ್ಸು ಗಳಿಸಿ ಸೆಲಬ್ರೆಟಿಯಾದಷ್ಟೇ ಬೇಗ ನೇಪಥ್ಯಕ್ಕೆ ಸರಿದು ಬಿಡುತ್ತಾರೆ. ಯಶಸ್ಸು ಗಳಿಸುವುದು ಕಷ್ಟವಲ್ಲ. ಆದರೆ ಗಳಿಸಿದ ಯಶಸ್ಸನ್ನು ಇಟ್ಟುಕೊಳ್ಳುವುದಿದೆಯಲ್ಲ, ಅದು ಬಹಳ ಕಷ್ಟ. ಬೇಕಾದರೆ ನೋಡಿ, ಇದು ಸರಳ ಸಂಗತಿ ಎಂದೆನಿಸಬಹುದು. ಆದರೆ ಅನೇಕರ ಹೋರಾಟ ಇದರ ಬಗ್ಗೆಯೇ ನಡೆದಿರುತ್ತದೆ. ಯಶಸ್ಸು ಗಳಿಸಲು ಹಗಲಿರುಳು, ನಿದ್ದೆಗೆಟ್ಟು ದುಡಿಯುತ್ತಾರೆ. ಕೊನೆಗೆ ಅದನ್ನು ಇಟ್ಟುಕೊಳ್ಳಲು ಹಗಲಿರುಳು, ನಿದ್ದೆ ಬಿಟ್ಟು ದುಡಿಯುತ್ತಾರೆ. ಕೆಲವೇ ಕೆಲವು ಮಂದಿ ಎರಡರಲ್ಲೂ ಜಯಶಾಲಿಗಳಾಗುತ್ತಾರೆ. ಉಳಿದವರಿಗೇ ಯಶಸ್ಸೇ ಮುಳುವಾಗುತ್ತದೆ. ಹೀಗಾಗಿ ಯಶಸ್ಸಿನ ಭಾರಕ್ಕೆ ಕುಸಿಯುತ್ತಾರೆ.
 
ಇದರ ಬಗ್ಗೆಯೇ ಹೇಳಬೇಕು.
ಆ ಮನೆಯಲ್ಲಿದ್ದುದು ಅವರಿಬ್ಬರೇ-ಅಪ್ಪ ಮತ್ತು ಮಗಳು. ಅಪ್ಪನ ಹೆಸರು ಸ್ವಾಮಿನಾಥನ್, ಮಗಳ ಹೆಸರು ಸ್ವಾತಿ. ಅಮ್ಮನಿಲ್ಲದ ಕಾರಣಕ್ಕೆ ಆ ಹುಡುಗಿ ಅಪ್ಪನನ್ನು ತುಂಬಾ ಹಚ್ಚಿಕೊಂಡಿದ್ದಳು. ಒಂದಿಷ್ಟೂ ಸಂಕೋಚವಿಲ್ಲದೆ ಅಪ್ಪನೊಂದಿಗೆ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದಳು. ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ಯಾವ ತರಗತಿಗೆ ಚಕ್ಕರ್ ಹೊಡೆದೆ, ಯಾವ ಅಧ್ಯಾಪಕರನ್ನು ರೇಗಿಸಿದೆ, ಯಾವ ಹೋಟೆಲಿನಲ್ಲಿ ಮಸಾಲೆದೋಸೆ ತಿಂದೆ, ಸಿಟಿಬಸ್ ಕಂಡಕ್ಟರ್್ನನ್ನು ಹೇಗೆ ಯಾಮಾರಿಸಿ ದುಡ್ಡು ಉಳಿಸಿದೆ ಎಂಬುದನ್ನೆಲ್ಲ ತಂದೆಯೊಂದಿಗೆ ವರ್ಣಿಸಿ ಹೇಳುತ್ತಿದ್ದಳು.
ಮಗಳ ಇಂಥ ಸಾಹಸಗಳನ್ನೆಲ್ಲ ಸ್ವಾಮಿನಾಥನ್ ಹುಸಿನಗೆಯಿಂದಲೇ ಕೇಳುತ್ತಿದ್ದ. ಸುಳ್ಳು ಸುಳ್ಳೇ ಎಂದು ಗದರಿಸುತ್ತಿದ್ದ. ಅದು ಅಪ್ಪನ ಪ್ರೀತಿಯ ಇನ್ನೊಂದು ಮುಖ ಎಂದು ಸ್ವಾತಿಗೂ ಅರ್ಥವಾಗುತ್ತಿತ್ತು. ಹೀಗೆ, ಹರಟೆ ಹೊಡೆದುಕೊಂಡೇ ಸ್ವಾತಿ ಎಂಬಿಎ ಮುಗಿಸಿದ್ದಳು. ಒಂದು ಎಂಎನ್್ಸಿಯಲ್ಲಿ ದೊಡ್ಡ ಸಂಬಳದ ನೌಕರಿಯೂ ಸಿಕ್ಕಿತ್ತು. ಮೊದಲ ವರ್ಷ ಈ ಹುಡುಗಿ ತುಂಬ ಉತ್ಸಾಹದಿಂದ ಕೆಲಸ ಮಾಡಿದ್ದಳು. ತತ್ಫಲವಾಗಿ ‘ಬೆಸ್ಟ್ ಎಂಪ್ಲಾಯ್ ಆಫ್ ದ ಇಯರ್್’ ಪ್ರಶಸ್ತಿ ಅವಳಿಗೇ ಸಿಕ್ಕಿತ್ತು.
ಒಂದು ಶನಿವಾರದ ವೀಕೆಂಡ್ ಪಾರ್ಟಿಯಲ್ಲಿ ಪ್ರಶಸ್ತಿ ವಿತರಣೆಯೂ ಆಯಿತು. ಆ ಕಾರ್ಯಕ್ರಮಕ್ಕೆ ಮಗಳೊಂದಿಗೆ ಸ್ವಾಮಿನಾಥನ್ ಕೂಡ ಹೋಗಿಬಂದ. ಆತ ಗಮನಿಸಿದಂತೆ, ಸಹೋದ್ಯೋಗಿಗಳೊಂದಿಗೆ ಅವತ್ತು ಸ್ವಾತಿ ಸಂಭ್ರಮದಿಂದ ಬೆರೆಯಲಿಲ್ಲ. ಆಕೆಯ ಕಣ್ಣಲ್ಲಿ ಸಣ್ಣದೊಂದು ತಿರಸ್ಕಾರ ಕಾಣಿಸಿತು. ಮಾತಲ್ಲಿ ಉದಾಸೀನ ಭಾವವಿತ್ತು. ಇಂಥ ವರ್ತನೆಗೆ ಕಾರಣ ಏನಿರಬಹುದು ಎಂದು ಮತ್ತೆ ಮತ್ತೆ ಯೋಚಿಸಿದ ಸ್ವಾಮಿನಾಥನ್. ಅವನಿಗೆ ಏನೂ ಅರ್ಥವಾಗಲಿಲ್ಲ.
ಮರುದಿನ ಮುಂಜಾನೆ ಬಾಲ್ಕನಿಯಲ್ಲಿದ್ದ ಈಸಿಛೇರ್್ನಲ್ಲಿ ಕೂತು ಪೇಪರ್ ಕೈಗೆತ್ತಿಕೊಂಡ ಸ್ವಾಮಿನಾಥನ್. ಅದೇ ವೇಳೆಗೆ ಅಡುಗೆಮನೆಯಲ್ಲಿದ್ದ ಸ್ವಾತಿ, ತನ್ನ ಗೆಳತಿಗೆ ಪೋನ್್ನಲ್ಲಿ ಹೇಳುತ್ತಿದ್ದಳು- ‘ನಿನ್ನೆಯ ಕಾರ್ಯಕ್ರಮದಲ್ಲಿ ಮ್ಯಾನೇಜರ್್ಗಳ ಮಾತು ಕೇಳಿ ಮೈಯೆಲ್ಲ ಉರಿದುಹೋಯ್ತು. ಈಡಿಯಟ್್ಗಳು. ಏನಂತ ತಿಳ್ಕಂಡಿದಾರೆ ನನ್ನನ್ನ? ಬೆಸ್ಟ್ ಎಂಪ್ಲಾಯ್ ಪ್ರಶಸ್ತಿಗೆ ತುಂಬಾ ಸ್ಪರ್ಧೆ ಇತ್ತು ಅಂದ್ರು. ಆ ಮಾತೇ ಡಬ್ಬಾ ನೀನೇ ಹೇಳು: ನಂಗೆ ಸರಿಸಮನಾಗಿ ದುಡಿಯೋ ಮತ್ತೊಬ್ಬ ಎಂಪ್ಲಾಯ್ ಕಂಪನೀಲಿ ಇದ್ದಾನಾ? ನಿಜ ಹೇಳಬೇಕು ಅಂದ್ರೆ ಈ ಮ್ಯಾನೇಜರ್್ಗಳಿಗಿಂತ ನನಗೇ ಜಾಸ್ತಿ ಗೊತ್ತಿದೆ. ಅವರೆಲ್ಲ ವಾರಕ್ಕೊಮ್ಮೆ ಮೀಟಿಂಗ್ ಮಾಡೋದು, ಕಂಪನಿ ದುಡ್ಡಲ್ಲಿ ಈಟಿಂಗ್ ಮಾಡೋದು… ಇದಕ್ಕೇ ಲಾಯಕ್ಕು ವೇಸ್ಟ್ ಬಾಡಿಗಳು…..’
ಮಗಳ ಮಾತು ಕೇಳಿ ಸ್ವಾಮಿನಾಥನ್್ಗೆ ಬೇಜಾರಾಯಿತು. ಏಕೆಂದರೆ ಆತ ಮಗಳ ವಿಷಯದಲ್ಲಿ ತುಂಬಾ ಆಸೆಗಳನ್ನು ಇಟ್ಟುಕೊಂಡಿದ್ದ. ಮಗಳು ಚೆನ್ನಾಗಿ ಓದದಿದ್ದರೂ ಪರವಾಗಿಲ್ಲ. ಆಕೆ ಸೌಜನ್ಯದ ನಡವಳಿಕೆ ಹೊಂದಿರಬೇಕು. ಹಿರಿಯರ ವಿಷಯವಾಗಿ ಭಕ್ತಿ, ಗೌರವ ಹೊಂದಿರಬೇಕು ಎಂದು ಆಸೆಪಟ್ಟಿದ್ದ. ಆದರೆ ಈಗಿನ ಮಾತುಗಳನ್ನು ಕೇಳಿದರೆ, ತನ್ನ ನಂಬಿಕೆಗೆ ವಿರುದ್ಧ ದಿಕ್ಕಿನಲ್ಲಿ ಮಗಳು ಬೆಳೆಯುತ್ತಿದ್ದಾಳೆ ಎಂಬೊಂದು ಭಾವ ಸ್ವಾಮಿನಾಥನ್್ಗೆ ಬಂತು. ಆತ ತಕ್ಷಣವೇ ಒಂದು ನಿರ್ಧಾರಕ್ಕೆ ಬಂದು- ‘ಸ್ವಾತೀ, ಐದು ನಿಮಿಷ ಮಾತನಾಡಲಿಕ್ಕಿದೆ. ಇಲ್ಲಿ ಬರ್ತೀಯಾ?’ ಎಂದ.
ಟೀ ಕಪ್ ಜೊತೆಗೇ ಬಂದಳು ಸ್ವಾತಿ. ‘ಥ್ಯಾಂಕ್ ಯೂ’ ಎನ್ನುತ್ತಾ ಟೀ ಗುಟುಕರಿಸಿದ ಸ್ವಾಮಿನಾಥನ್ ಹೇಳಿದ- ಹೌದಲ್ವೇನಮ್ಮಾ, ನಿನ್ನೆಯ ಸಂಭ್ರಮ ಈಗಲೂ ನಿನ್ನ ಕಂಗಳಲ್ಲಿದೆ. ಬೆಸ್ಟ್ ಎಂಪ್ಲಾಯ್ ಅನ್ನಿಸಿಕೊಂಡ ಖುಷಿಗೆ ನಿನ್ನ ಮನಸ್ಸು ಜಿಂಕೆಯಾಗಿ ಕುಣೀತಿದೆ. ಎದೆಯೊಳಗೆ ಹೊಸ ಹಾಡು ಹುಟ್ಟಿದೆ. ಮುಂದಿನ ತಿಂಗಳುಗಳಲ್ಲಿ ಎಷ್ಟು ಸಂಬಳ ಹೆಚ್ಚಾಗಬಹುದು? ಯಾವತ್ತು ಪ್ರೊಮೋಷನ್ ಸಿಗಬಹುದು ಎಂದೂ ಈಗಲೇ ನೀನು ಯೋಚಿಸಿರುವಂತೆ ಕಾಣುತ್ತಿದೆ. ಅದೆಲ್ಲಾ ಓ.ಕೆ.
ಆದರೆ ಮಗಳೇ, ಈಗ ಕೆಲವೇ ನಿಮಿಷಗಳ ಹಿಂದೆ ನೀನು ಫೋನ್್ನಲ್ಲಿ ಮಾತಾಡಿದ ಧಾಟಿ ಹಾಗೂ ಅದರ ಅರ್ಥವಿತ್ತಲ್ಲ; ಅದು ಅಹಂಕಾರದ ಲಕ್ಷಣ. ನೀನು ಏನೇನಂದೆ ಗೊತ್ತಾ? ಮ್ಯಾನೇಜರ್್ಗಳನ್ನು ಈಡಿಯಟ್ಸ್ ಅಂದೆ. ಸಹೋದ್ಯೋಗಿಗಳನ್ನೆಲ್ಲ ವೇಸ್ಟ್ ಬಾಡಿಗಳು ಅಂದೆ. ಕಂಪನೀಲಿ ನಂಗೆ ಪ್ರತಿಸ್ಪರ್ಧಿಗಳೇ ಇಲ್ಲ ಅಂದೆ. ಇನ್ನೂ ಮುಂದುವರಿದು- ಮ್ಯಾನೇಜರ್್ಗಳಿಗೆ ಗೊತ್ತಿರುವಷ್ಟೇ ನನಗೂ ಗೊತ್ತಿದೆ ಅಂದೆ! ಕೇವಲ ಬೆಸ್ಟ್ ಎಂಪ್ಲಾಯ್ ಎಂಬ ಒಂದೇ ಒಂದು ಪ್ರಶಸ್ತಿ ಬಂದಿದ್ದಕ್ಕೆ ನೀನು ಹೀಗೆಲ್ಲಾ ಹಗುರವಾಗಿ ಮಾತಾಡಿಬಿಟ್ಟೆ ಅಲ್ವಾ? ಒಂದು ಸತ್ಯ ತಿಳ್ಕೊ. ನಿಮ್ಮ ಕಂಪನೀಲಿ ಮ್ಯಾನೇಜರ್್ಗಳು ಅಂತ ಇದ್ದಾರಲ್ಲ, ಅವರೆಲ್ಲ ಈ ಹಿಂದೆ ನಿನ್ನಂತೆಯೇ ನೌಕರರಾಗಿ ಸೇರಿದವರು. ಕಾಲಾಂತರದಲ್ಲಿ ಅವರೆಲ್ಲ ತುಂಬ ಶ್ರಮಪಟ್ಟು ಕಂಪನೀನ ಬೆಳೆಸಿದ್ದಾರೆ. ತಾವೂ ಬೆಳೆದಿದ್ದಾರೆ. ಅಂಥವರನ್ನು ನೀನು ಅಯೋಗ್ಯರು, ತಿಂಡಿಪೋತರು ಎಂದೆಲ್ಲಾ ಜರಿದೆಯಲ್ಲ ಸರೀನಾ…?’
ಅಪ್ಪನ ದನಿಯಲ್ಲಿ ಸಿಡಿಮಿಡಿಯಿಲ್ಲ. ಮಾತಿನಲ್ಲಿ ಸಿಟ್ಟಿಲ್ಲ. ಅದು ಟೀಕೆಯೂ ಅಲ್ಲ. ಅವನ ಮಾತಿನ ಹಿಂದಿರುವುದು ಮಗಳ ಮೇಲಿನ ಮಮತೆ ಎಂಬುದು ಸ್ವಾತಿಗೆ ತಕ್ಷಣ ಅರ್ಥವಾಯಿತು. ಆಕೆ ತಕ್ಷಣವೇ-ಸಾರಿ ಕಣಪ್ಪಾ, ಬಾಯಿಗೆ ಬಂದಂತೆ ಮಾತಾಡಿ ತಪ್ಪು ಮಾಡಿಬಿಟ್ಟೆ. ನನ್ನ ಮಾತು ಹಾಗೂ ವರ್ತನೆ ಹೇಗಿರಬೇಕು ಎಂಬುದನ್ನು ವಿವರಿಸಿ ಹೇಳಪ್ಪಾ’ ಅಂದಳು. ಸ್ವಾಮಿನಾಥನ್ ಮುಂದುವರಿಸಿದ.
ಗೆಲುವು ಅಥವಾ ಯಶಸ್ಸು ಎಂಬುದೇ ಹಾಗೆ. ಅದು ಎಂಥವರನ್ನೂ ಯಾಮಾರಿಸುತ್ತದೆ. ಅಹಂಕಾರ ತಲೆಗೇರುವಂತೆ, ನನಗೆ ಎಲ್ಲವೂ ಗೊತ್ತಿದೆ ಎಂದು ಬೀಗುವಂತೆ ಮಾಡಿಬಿಡುತ್ತದೆ. ಗೆಲುವು ಜೊತೆಯಾದ ನಂತರ ಎಷ್ಟೋ ಜನರ ತಲೆ ಹೆಗಲ ಮೇಲೇ ಇರುವುದಿಲ್ಲ. ಈ ಮಾತು ಜನಸಾಮಾನ್ಯರಿಗೆ ಮಾತ್ರವಲ್ಲ, ಸೆಲೆಬ್ರಿಟಿಗಳಿಗೂ ಅನ್ವಯಿಸುತ್ತದೆ. ಗೆಲುವಿನಲ್ಲಿ ಮೈಮರೆತವರು ನಾನು, ನನ್ನಿಷ್ಟ ಎಂಬಂತೆ ವರ್ತಿಸುತ್ತಾರೆ. ಕಿವಿಮಾತುಗಳನ್ನೂ, ಎಚ್ಚರಿಕೆಗಳನ್ನೂ ನಿರ್ಲಕ್ಷಿಸುತ್ತಾರೆ. ಒಂದೇ ಬಾರಿಗೆ ಆರು ಮೆಟ್ಟಿಲು ಹತ್ತಲು ಹೋಗುತ್ತಾರೆ. ಸಾಧ್ಯವಾಗದೆ ಜಾರಿ ಬೀಳುತ್ತಾರೆ. ಆ ಕ್ಷಣದವರೆಗೂ ಅವರೊಂದಿಗೇ ಇದ್ದ ಗೆಲುವು, ಒಂದೇ ನಿಮಿಷದಲ್ಲಿ ಬೇರೊಂದು ಕಡೆಗೆ ಹಾರಿಹೋಗುತ್ತದೆ. ಯಶಸ್ಸು ಕೈತಪ್ಪಿ ಹೋಯ್ತು ಎಂಬುದು ಗೊತ್ತಾದ ನಂತರ, ಬಿದ್ದವರ ಪಾಲಿಗೆ ಸಂಕಟವೇ ಸಂಗಾತಿಯಾಗುತ್ತದೆ. ಈ ಕ್ಷಣದಲ್ಲಿ ಗೆಲುವು ನಿನ್ನದಾಗಿದೆ ನಿಜ. ಹಾಗಂತ ಮೈಮರೆಯಬೇಡ. ಉಡಾಫೆಯಿಂದ ಮಾತಾಡಿ ಹತ್ತು ಮಂದಿಯ ಮಧ್ಯೆ ಗೌರವ ಕಳೆದುಕೊಳ್ಳಬೇಡ…’
ಅಪ್ಪನ ಕಾಳಜಿ ಕಂಡು ಸ್ವಾತಿಗೆ ಮನಸ್ಸು ಭಾರವಾಯಿತು. ಆಕೆ ಕಣ್ತುಂಬಿಕೊಂಡು ಹೇಳಿದಳು: ಅಪ್ಪಾ, ನನ್ನ ವರ್ತನೆಯಿಂದ ನಿಮಗೆ ತುಂಬಾ ಬೇಜಾರಾಯ್ತಾ?’
ಸ್ವಾಮಿನಾಥನ್ ಚಹಾದ ಕಡೆಯ ಗುಟುಕು ಚಪ್ಪರಿಸಿ ಹೇಳಿದ- ಕೆಲಸದ ವಿಷಯವಾಗಿ, ನಡವಳಿಕೆಯ ವಿಷಯವಾಗಿ  ‘ಛೆ ಛೆ, ಹಾಗೇನೂ ಇಲ್ಲ. ಒಂದು ಟೀಕೆ ಕೇಳಿಬಂದರೆ- ನೀನು ದೊಡ್ಡ ತಪ್ಪು ಮಾಡಿದೆ ಎಂದು ಅರ್ಥವಲ್ಲ. ತಪ್ಪು ಮಾಡೋದು ಎಲ್ಲರಲ್ಲೂ ಸಹಜ. ಅದನ್ನು ತಕ್ಷಣವೇ ತಿದ್ದಿಕೊಳ್ಳುವುದು ಜಾಣರ ಲಕ್ಷಣ. ಅಂಥ ಜಾಣೆಯ ಸಾಲಿಗೆ ನೀನು ಸೇರ್ಕೋಬೇಕು. ಕೆಲವರು ಮೊದಲು ಮುಗ್ಗರಿಸುತ್ತಾರೆ. ನಂತರ ಎದ್ದು ನಿಲ್ತಾರೆ. ಹಲವರು ಮೊದಲು ಸರಿಯಾಗಿ ನಿಂತಿದ್ದು, ನಂತರ ಮುಗ್ಗರಿಸಿಬಿಡ್ತಾರೆ! ಯಶಸ್ಸು ಎಂಬುದು ಮಾಯಾಜಿಂಕೆ. ಅದು ಹಗ್ಗದ ಮೇಲಿನ ನಡಿಗೆ. ಯಶಸ್ಸೆಂಬುದು ನಮ್ಮ ನಿರೀಕ್ಷೆಗಳನ್ನೆಲ್ಲ ನಿಜ ಮಾಡುವುದಿಲ್ಲ. ಆದರೆ ಜವಾಬ್ದಾರಿಯನ್ನು ಖಂಡಿತ ಹೆಚ್ಚಿಸುತ್ತೆ. ಭಾರತ ಕ್ರಿಕೆಟ್ ತಂಡದ ನಾಯಕನಾಗೋದು ಅಂದ್ರೆ ಕೇವಲ ಒಂದು ತಂಡವನ್ನು ಮುನ್ನಡೆಸುವುದು ಮಾತ್ರವಲ್ಲ, ಗೆಲ್ಲಲೇ ಬೇಕು ಎಂಬ ಈ ದೇಶದ ಕೋಟ್ಯಂತರ ಕ್ರೀಡಾಪ್ರೇಮಿಗಳ ನಿರೀಕ್ಷೆಯನ್ನು ನಿಜ ಮಾಡುವ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ. ಪ್ರಧಾನಮಂತ್ರಿ ಅನ್ನಿಸಿಕೊಂಡವನ ಬೆನ್ನ ಮೇಲೆ ಇಡೀ ದೇಶದ ಭವಿಷ್ಯ ನಿಂತಿರುತ್ತದೆ. ರಾಷ್ಟ್ರಪತಿ ಅನ್ನಿಸಿಕೊಂಡವರು ಎಲ್ಲ ರಾಜ್ಯಗಳ ಜನಪ್ರತಿನಿಧಿಗಳೂ ಒಪ್ಪುವಂತೆ ಆಡಳಿತ ನಿರ್ವಹಿಸುವ ಜವಾಬ್ದಾರಿಯನ್ನು ನಿಭಾಯಿಸುವುದು ಅಗತ್ಯವಾಗಿರುತ್ತದೆ.
ಶಿಕ್ಷಣದ ನಿಮಿತ್ತ, ನೌಕರಿಯ ನಿಮಿತ್ತ ಅಥವಾ ವಾಸ್ತವ್ಯದ ನಿಮಿತ್ತ ಒಂದು ಸ್ಥಳದಲ್ಲಿ ಉಳಿಬೇಕು ಅಂದರೆ, ಅಲ್ಲಿ ಬಾಂಧವ್ಯದ ಹೊಸ ಕೊಂಡಿಯೊಂದು ಅರಳಿಕೊಂಡಿತು ಎಂದೇ ಅರ್ಥ. ಈ ಸಂದರ್ಭದಲ್ಲಿ ಯಾರ್ಯಾರೋ ಪರಿಚಯವಾಗುತ್ತಾರೆ. ಅವರಿಂದ ಕಲಿಯುವುದು, ಕಲಿಯದಿರುವುದು ಎರಡೂ ಇರುತ್ತದೆ. ಈ ಸಂಬಂಧ ಎಂಬುದು ಒಂದು ರೀತಿಯಲ್ಲಿ ಬ್ಯಾಂಕ್ ಅಕೌಂಟ್ ಇದ್ದ ಹಾಗೆ. ಖಾತೆ ತೆರೆಯುವುದು ಸುಲಭ. ಆದರೆ ಅಕೌಂಟ್ ಕ್ಲೋಸ್ ಮಾಡುವುದು (ಸಂಬಂಧವನ್ನು ಕಡಿದುಕೊಳ್ಳುವುದು) ಕಷ್ಟ. ಕೆಲವೊಂದು ಸಂದರ್ಭದಲ್ಲಿ ನಾವೆಲ್ಲ ಅಂದಿರುತ್ತೇವೆ- ‘ನನಗೆ ಯಾರ ಸಹಾಯವೂ ಬೇಕಿಲ್ಲ. ನನ್ನ ಬದುಕನ್ನು ನಾನೊಬ್ಬನೇ ರೂಪಿಸಿಕೊಳ್ಳಬಲ್ಲೆ..’
ಆದರೆ ಕಣ್ಣೆದುರಿಗಿರುವ ವಾಸ್ತವವೇ ಬೇರೆ. ಏನೆಂದರೆ- ಬಹಳಷ್ಟು ಸಂದರ್ಭದಲ್ಲಿ ಎಲ್ಲರ ಬದುಕೂ ಇನ್ನೊಬ್ಬರ ಮೇಲೆ ಅವಲಂಬಿಸಿರುತ್ತದೆ. ಎಂಥ ಪ್ರಚಂಡ ವೈದ್ಯನಿಗೂ ನರ್ಸ್ ಸಹಾಯ ಬೇಕಾಗುತ್ತದೆ. ಕೋಟ್ಯಧಿಪತಿಗೆ ಅಕೌಂಟೆಂಟ್್ನ ನೆನಪಾಗುತ್ತದೆ. ಕಚೇರಿಯ ಒಳಗಿರುವಾತ ಜಿಲ್ಲಾಧಿಕಾರಿಯೇ ಆಗಿದ್ದರೂ, ಅದೇ ಕಚೇರಿಯ ಬೀಗ ತೆಗೆಯಲು ಅಟೆಂಡರ್್ನ ನೆರವು ಅಗತ್ಯವಿರುತ್ತದೆ. ನಾನು ಹೇಗೆ ಬದುಕಬೇಕು ಮತ್ತು ಹೇಗೆ ಬದುಕಬಾರದು ಎಂಬ ಮಾತಿಗೆ ಈಗಾಗಲೇ ಕತೆಯಾಗಿ ಹೋದವರ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಇಲ್ಲಿ ಗೆದ್ದವರೂ ಇದ್ದಾರೆ, ಬಿದ್ದವರೂ ಇದ್ದಾರೆ. ಇಬ್ಬರಿಂದಲೂ ಪಾಠ ಕಲಿಯಬಹುದಾಗಿದೆ…
ಹಾಗಂತ, ಖಂಡಿತ ನಾನು ನಿನ್ನನ್ನು ದೂರುತ್ತಿಲ್ಲ ಮಗಳೇ. ಇವತ್ತಿನ ಯಶಸ್ಸು ಖಂಡಿತ ನಿನ್ನದು ನಿಜ. ಆದರೆ ಆನಂತರ ನೀನು ವರ್ತಿಸಿದ ರೀತಿಯಿತ್ತಲ್ಲ; ಅದನ್ನು ಅರಗಿಸಿಕೊಳ್ಳಲು ನನ್ನಿಂದ ಸಾಧ್ಯವಾಗಿಲ್ಲ. ಒಂದು ಮಾತು ಅರ್ಥ ಮಾಡಿಕೊ. ಒಬ್ಬ ಪ್ರಚಂಡ ಕುಶಲಕರ್ಮಿಯ ಪರಿಶ್ರಮದಿಂದ ಮಾತ್ರ ಬಿದಿರು ಎಂಬ ಮರದ ತುಂಡು ಮಧುರ ನಾದ ಹೊರಡಿಸುವ ‘ಕೊಳಲು’ ಆಗುತ್ತದೆ. ನೀನು ಈಗ ‘ಬಿದಿರಿ’ನ ಲೆವಲ್್ನಲ್ಲಿದ್ದೀ. ಮುಂದೆ ಒಂದೊಂದೇ ಅನುಭವೀ ಮನಸ್ಸಿನ ಕೆಳಗೆ ನೀನು ಪಳಗಬೇಕು. ಯಶಸ್ಸಿನ ಗುಣ, ಅವಗುಣ, ಒಂದು ಗೆಲುವು ಜತೆಯಾದ ಸಂದರ್ಭದಲ್ಲೇ ಹೆಗಲೇರುವ ಜವಾಬ್ದಾರಿ…. ಇದೆಲ್ಲವನ್ನೂ ಅರ್ಥೈಸಿಕೊಳ್ಳಬೇಕು. ಹಿಮಾಲಯದೆತ್ತರ ಬೆಳೆದು ನಿಂತರೂ, ತಲೆ ಭುಜದ ಮೇಲೇ ಇರುವಂತೆ ನೋಡಿಕೊಳ್ಳಬೇಕು. ಅಂಥ ಸಂದರ್ಭದಲ್ಲಿ ಯಶಸ್ಸು ಎಂಬುದು ಸುದೀರ್ಘ ಕಾಲದವರೆಗೂ ನಮ್ಮ ಜತೆಗಿರುತ್ತದೆ. ಈ ಸೂಕ್ಷ್ಮ ನಿನಗೆ ಅರ್ಥವಾಗಬೇಕು. ಸ್ವಾಮಿನಾಥನ್ ಮಾತು ನಿಲ್ಲಿಸಿದ.
ಯಶಸ್ಸು ಬಂದಾಗ ಬೀಗಬಾರದು. ಹತ್ತಿದ ಏಣಿಯನ್ನು ಒದೆಯಬಾರದು. ಸಹೋದ್ಯೋಗಿಗಳನ್ನು ಜರಿಯಬಾರದು. ಅಹಂಕಾರದ ಕೈಗೆ ಬುದ್ಧಿ ಕೊಡಬಾರದು. ಸೌಜನ್ಯವನ್ನು ಎಂದೂ ಮರೆಯಬಾರದು ಎಂಬುದನ್ನು ತುಂಬ ಸರಳವಾಗಿ ಹೇಳಿದ್ದಕ್ಕೆ ಥ್ಯಾಂಕ್ಸ್ ಅಪ್ಪಾ. ಈಗಿನಿಂದಲೇ ನನ್ನ ನಡವಳಿಕೇನ ತಿದ್ದಿಕೊಳ್ತೇನೆ ಎಂದಳು ಸ್ವಾತಿ. ಇದುವರೆಗೂ ಎದುರಿನ ಮಾವಿನಮರದಲ್ಲಿ ಮೌನವಾಗಿ ಕುಳಿತಿದ್ದ ಎರಡು ಗಿಳಿಗಳು, ಇವರ ಮಾತು ಮುಗಿದ ತಕ್ಷಣ ತಾವೂ ಕಿಚಪಿಚ ಎನ್ನಲು ಶುರುಮಾಡಿದವು. ಪಕ್ಷಿಗಳ ಸಡಗರ, ಈ ಅಪ್ಪ-ಮಗಳ ಕಂಗಳಲ್ಲೂ ಪ್ರತಿಫಲಿಸಿತ್ತು…
ಜೀವನದಲ್ಲಿ ಯಶಸ್ಸನ್ನು ಇಟ್ಟುಕೊಳ್ಳುವುದು ಹೇಗೆ. ಅದನ್ನು ಸದಾ ನಿಮ್ಮ ಪರವಾಗಿಟ್ಟುಕೊಳ್ಳುವುದು ಹೇಗೆ, ಗಳಿಸಿದ ಯಶಸ್ಸನ್ನು ನಿಮಗೆ ವೈರಿಯಾಗದಂತೆ ಕಾಪಿಡುವುದು ಹೇಗೆ ಎಂಬುದನ್ನು ಇಷ್ಟು ಸರಳವಾಗಿ, ಪರಿಣಾಮಕಾರಿಯಾಗಿ ಹೇಳಲು ಯಶಸ್ವಿಯಾದ, ನನಗೆ ಬಹುಬೇಗ ಪ್ರಿಯರಾದ ಟಿ.ಟಿ. ರಂಗರಾಜನ್ ಅವರಿಗೆ ಒಂದು ಥ್ಯಾಂಕ್ಸನ್ನಾದರೂ ಹೇಳದಿದ್ದರೆ ಹೇಗೆ?
ಮುಂದಿನ ಸಲ ನಿಮಗೆ ಯಶಸ್ಸು ಬಂದಾಗ ಈ ಎಲ್ಲ ಮಾತುಗಳನ್ನು ನೆನಪಿಸಿಕೊಳ್ಳಿ. ನಿಮ್ಮ ಯಶಸ್ಸು ನಿಮ್ಮಲ್ಲೇ ಬೆಚ್ಚಗೆ ಭದ್ರವಾಗಿರುತ್ತದೆ.

Tuesday, 2 June 2015

ಗೆಲುವು ಆಕಸ್ಮಿಕವಾಗುವ ಬದಲು ಚಟವಾಗಲಿ!

ನೀವು ಯಾವುದೇ ಹೊಸ ಸಾಹಸಕ್ಕೆ ಅಣಿಯಾಗಿ, ನಿಮ್ಮ ಸ್ನೇಹಿತರ ಮುಂದೋ, ಸಂಬಂಧಿಕರ ಮುಂದೋ ನಿಮ್ಮ ಕನಸಿನ ಯೋಜನೆಯನ್ನು ಹಂಚಿಕೊಳ್ಳಿ. ಯಾರೂ ಅದನ್ನು ಪ್ರೋತ್ಸಾಹಿಸುವುದಿಲ್ಲ.  ‘ಎಲ್ಲಾ ಬಿಟ್ಟ ಬಂಗಿ ನೆಟ್ಟ ಅನ್ನೋ ಹಾಗೆ ಆಯ್ತಲ್ಲಾ? ನಿನ್ನ ಪಾಡಿಗೆ ನೀನು ಸುಮ್ಮನಿರಬಾರದಾ? ಅಂಥ ಸಾಹಸ ಮಾಡಿ ಯಾರೂ ಉದ್ಧಾರ ಆಗಿಲ್ಲ.’ ಅಂತಾನೇ ಎಲ್ಲರೂ ಹೇಳೋದು. ‘ಇದು ಗ್ರೇಟ್ ಐಡಿಯಾ, ಮುನ್ನುಗ್ಗು’ ಅಂತ ಯಾರೂ ಹೇಳುವುದಿಲ್ಲ.
ಇನ್ನು ಕೆಲವರು ಹೊಸ ಸಾಹಸಕ್ಕೇನೋ ಅಣಿಯಾಗುತ್ತಾರೆ. ಆದರೆ ಬೇರೆಯವರು ನಡೆದ ಹಾದಿಯಲ್ಲೇ ನಡೆಯುತ್ತಾರೆ. ಹೊಸ ಮಾರ್ಗ ಅರಸಲು, ಎಲ್ಲರೂ ತುಳಿದ ಹಾದಿ ಬಿಟ್ಟು ತಮ್ಮದೇ ದಾರಿ ನಿರ್ಮಿಸಲು ಬಯಸುವುದಿಲ್ಲ. ಅಂದರೆ ಹೊಸತಾಗಿ ಏನನ್ನೂ ಯೋಚಿಸುವುದಿಲ್ಲ. ಎಲ್ಲರೂ ದರ್ಶಿನಿ ಆರಂಭಿಸಿದರೆ ಇವರೂ ದರ್ಶಿನಿಯನ್ನೇ ತೆರೆಯುತ್ತಾರೆ. ಎಲ್ಲರೂ ಮಾಲ್ ಅನ್ನು ಕಟ್ಟಿದರೆ ಇವರೂ ಅದನ್ನೇ ಕಟ್ಟುತ್ತಾರೆ. ಯಾರೋ ಒಂದು ರೀತಿಯ ಸಿನಿಮಾ ನಿರ್ಮಿಸಿದರೆ ಇವರೂ ಅಂಥದೇ ಸಿನಿಮಾ ನಿರ್ಮಿಸುತ್ತಾರೆ. ಈ ಮಾತನ್ನು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸಬಹುದು. ಹೊಸತಾಗಿ ಯೋಚಿಸುವವರು ಮಾತ್ರ ಅಚ್ಚರಿ, ಸೋಜಿಗವನ್ನುಂಟು ಮಾಡಲು ಸಾಧ್ಯ. ಹೊಸ ದಾರಿ ಅರಸುವವರು ಹೊಸ ನೋಟವನ್ನು, ಹೊಸ ಊರನ್ನು ಕಾಣಲು ಸಾಧ್ಯ.
ಇದನ್ನು ಮಾಡದವರು ಜೀವನದಲ್ಲಿ ನಕಲು ಮಾಡುತ್ತಾರೆ, ಕಾಪಿ-ಪೇಸ್ಟ್ ಮಾಡುತ್ತಾರೆ, ಬೇರೆಯವರು ಹೋದ ದಾರಿಯಲ್ಲಿಯೇ ನಡೆಯುತ್ತಾರೆ. ಇಂಥವರು ಇದ್ದದ್ದನ್ನು ಮುನ್ನಡೆಸಿಕೊಂಡು ಹೋಗಬಲ್ಲರು. ಆದರೆ ಹೊಸತೇನನ್ನೂ ಸೃಷ್ಟಿಸಲಾರರು.
ಇನ್ನೊಂದು ರೀತಿ ಯೋಚನೆ ಮಾಡುವ ಮಂದಿಯಿರುತ್ತಾರೆ, ಅವರು ಸ್ಥಾಪಿತ ಯೋಚನೆಯಾಚೆ ತಮ್ಮನ್ನು ವಿಸ್ತರಿಸಿಕೊಳ್ಳಲು ಬಯಸುವುದಿಲ್ಲ. ‘ಮನುಷ್ಯನಿಗೆ ವಿಶ್ರಾಂತಿ ಅಗತ್ಯ, ಆದರೆ ನಿದ್ದೆಯ ಅಗತ್ಯ ಇಲ್ಲ’ ಅಂತ ಹೇಳಿ ಅವರು ‘ಇಲ್ಲ, ಇಲ್ಲ, ಮನುಷ್ಯನಿಗೆ ಕನಿಷ್ಠ ಎಂಟು ಗಂಟೆ ನಿದ್ದೆ ಬೇಕೇ ಬೇಕು’ ಅಂತ ವಾದಿಸುತ್ತಾರೆ. ಈ ವಿಷಯದಲ್ಲಿ ಅವರ ನಿಲುವನ್ನು ಬದಲಿಸಲು ಸಾಧ್ಯವೇ ಇಲ್ಲ. ಇವರು ಮಾತ್ರ ತಮ್ಮ ಅಭಿಪ್ರಾಯವನ್ನು ಬದಲಿಸಲಾರರು.
ಆದರೆ ಈ ಜಗತ್ತಿನಲ್ಲಿ ಸ್ಥಾಪಿತ ಅಭಿಪ್ರಾಯಕ್ಕೆ ಸವಾಲನ್ನು ಎಸೆದವರೇ ಸಾಧನೆಯ ಶಿಖರಕ್ಕೇರಿದವರು. ಅದು ಅರಿಸ್ಟಾಟಲ್ ಇರಬಹುದು, ನ್ಯೂಟನ್ ಇರಬಹುದು, ಕೋಪರ್್ನಿಕಸ್ ಇರಬಹುದು ಅಥವಾ ಸ್ಟೀವ್ ಜಾಬ್ಸ್ ಇರಬಹುದು, ಎಲ್ಲರೂ ಈ ಸಾಲಿಗೆ ಸೇರಿದವರೇ. ಭಿನ್ನವಾಗಿ ಯೋಚಿಸಿದವರೇ. ಅಪ್ಪ ನೆಟ್ಟ ಆಲದಮರಕ್ಕೆ ಜೋತುಬಿದ್ದಿದ್ದರೆ ಇವರು ಯಾರೆಂಬುದೇ ಗೊತ್ತಾಗುತ್ತಿರಲಿಲ್ಲ. ಇವರೆಲ್ಲ ಜೀವನದಲ್ಲಿ ರಿಸ್ಕ್ ತೆಗೆದುಕೊಂಡವರೇ. ಅಂಥ ರಿಸ್ಕ್ ತೆಗೆದುಕೊಳ್ಳದಿದ್ದರೆ ನಾವು ಇವರ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಿರಲಿಲ್ಲ.
ವಿ.ಅರ್.ಎಲ್ ಸಂಸ್ಥೆಯ ಮಾಲೀಕರಾದ ವಿಜಯ ಸಂಕೇಶ್ವರ ಅವರ ಬಗ್ಗೆ ಹೇಳಬೇಕು. ಕಾಲೇಜ್ ವಿದ್ಯಾಭ್ಯಾಸ ಮುಗಿದ ಬಳಿಕ ಅವರು ತಮ್ಮ ತಂದೆಯವರ ಪ್ರಿಂಟಿಂಗ್ ಪ್ರೆಸ್್ನಲ್ಲಿ ಪ್ರೂಫ್ ರೀಡರ್ ಆಗಿ ಸೇರಿಕೊಂಡರು. ಇವರ ತಂದೆಯವರಾದ ಬಸವೆಣ್ಣಪ್ಪ ಸಂಕೇಶ್ವರರು ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದ್ದರು. ಅವರು ಪ್ರಕಾಶಿಸಿದ ಭಾರಧ್ವಜ್ ಡಿಕ್ಷನರಿ ಇಲ್ಲದ ಕನ್ನಡ ಮನೆಗಳಿರಲಿಕ್ಕಿಲ್ಲ. ಅಲ್ಲಿ ವಿಜಯ ಸಂಕೇಶ್ವರರು ತಂದೆಯವರಿಗೆ ಸಹಾಯಕರಾಗಿ ಮತ್ತು ಕರಡು ತಿದ್ದುವವರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಪ್ರಾಯಶಃ ಅವರು ತಂದೆಯವರ ವೃತ್ತಿಯಲ್ಲಿ ಮುಂದುವರಿದಿದ್ದರೆ ಹೆಚ್ಚೆಂದರೆ ಒಬ್ಬ ಪ್ರಕಾಶಕರಾಗುತ್ತಿದ್ದರೇನೋ.
ಒಂದು ದಿನ ಅವರಿಗೆ ಅನಿಸಿತು. ತಾನು ಸ್ವಂತವಾಗಿ ಏನಾದರೂ ಸಾಧಿಸಬೇಕು, ತಂದೆಯವರ ನೆರಳನ್ನು ಬಿಟ್ಟು ಭಿನ್ನವಾಗಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದು. ಒಂದು ದಿನ ಏಕಾಏಕಿ ತಂದೆಯವರ ಪ್ರೆಸ್ಸನ್ನು ಬಿಟ್ಟು, ಸಾಲ ಮಾಡಿ ಒಂದು ಸೆಕೆಂಡ್ ಹ್ಯಾಂಡ್ ಟ್ರಕ್ಕನ್ನು ಖರೀದಿಸಿದರು. ಅದಕ್ಕೆ ಅವರೇ ಮಾಲೀಕರು ಮತ್ತು ಅವರೇ ಚಾಲಕರು! ‘ನಿನಗೆ ಟ್ರಕ್ ದಂಧೆಯಲ್ಲಿ ಏನು ಅನುಭವವಿದೆ? ಅದು ನಮ್ಮಂಥವರು ಮಾಡುವ ದಂಧೆಯಾ? ಇದೆಲ್ಲ ನಿನ್ನ ಕೈಹಿಡಿಯುವಂಥದ್ದಲ್ಲ. ಸುಮ್ಮನೆ ಕೈ ಸುಟ್ಟುಕೊಳ್ಳಬೇಡ.’ ಎಂದು ಅವರ ತಂದೆ ಪರಿಪರಿಯಾಗಿ ಹೇಳಿದರು. ಮನೆಯಲ್ಲಿದ್ದವರ್ಯಾರೂ ಅವರ ಈ ಹೊಸ ಮತ್ತು ಹುಚ್ಚು ಸಾಹಸವನ್ನು ಹುರಿದುಂಬಿಸಲಿಲ್ಲ.
ಆದರೆ ವಿಜಯ ಸಂಕೇಶ್ವರ ಅವರು ಕೇಳಲಿಲ್ಲ. ಕುಟುಂಬದಲ್ಲಿ ಯಾರೂ ಮಾಡದಿದ್ದರೇನಂತೆ, ನಾನು ಮಾಡುತ್ತೇನೆ ಎಂಬ ಛಲ ಮತ್ತು ಹಠದಿಂದ ಟ್ರಾನ್ಸ್್ಪೋರ್ಟ್ ದಂಧೆಯನ್ನು ಆರಂಭಿಸಿದರು. ಒಂದಿದ್ದ ಟ್ರಕ್ಕು ಎರಡಾಯಿತು, ಎರಡಿದ್ದಿದ್ದು ನಾಲ್ಕಾಯಿತು. ನಾಲ್ಕಿದ್ದದ್ದು ಹತ್ತಾಯಿತು. ಹತ್ತು ಇದ್ದಿದ್ದು ನೂರಾಯಿತು. ಇಂದು ಅವರು ಹತ್ತಿರ ಹತ್ತಿರ ನಾಲ್ಕು ಸಾವಿರ ಟ್ರಕ್ಕು ಮತ್ತು ಐನೂರಕ್ಕೂ ಹೆಚ್ಚು ಬಸ್ಸುಗಳನ್ನು ಹೊಂದಿದ್ದಾರೆ. ದೇಶದ ಹದಿನೆಂಟು ರಾಜ್ಯಗಳಲ್ಲಿ ತಮ್ಮ ವ್ಯಾಪಾರ-ವಹಿವಾಟು ಜಾಲವನ್ನು ಹೊಂದಿದ್ದಾರೆ. ನಮ್ಮ ದೇಶದಲ್ಲಿ ಖಾಸಗಿ ವಲಯದಲ್ಲಿ ಅತಿ ಹೆಚ್ಚು ವಾಹನಗಳನ್ನು ಹೊಂದಿದವರಲ್ಲಿ ಅಗ್ರಗಣ್ಯರಾಗಿದ್ದಕ್ಕೆ ಲಿಮ್ಕಾ ದಾಖಲೆ ಪುಸ್ತಕ ಇವರ ಹೆಸರನ್ನು ದಾಖಲಿಸಿಕೊಂಡಿದೆ.
ಬಹುತೇಕ ಸಂದರ್ಭಗಳಲ್ಲಿ ನಾವು ನಮ್ಮ ಸುತ್ತ ಸುರಕ್ಷ ವಲಯ (Comfort Zone) ವನ್ನು ನಿರ್ಮಿಸಿಕೊಳ್ಳುತ್ತೇವೆ. ತಪ್ಪೇನಿಲ್ಲ. ಆದರೆ ಅದರಿಂದ ಹೊರಬರುವುದೇ ಇಲ್ಲ. ಆ ವಲಯದ ಐಷಾರಾಮಕ್ಕೆ ಒಗ್ಗಿಕೊಂಡುಬಿಡುತ್ತೇವೆ. ಹೀಗಾಗಿ ಹೊಸ ಸಾಹಸಕ್ಕೆ ಮುಂದಾಗುವುದಿಲ್ಲ.
ನಾನು ಇತ್ತೀಚೆಗೆ ಕ್ಲಿಫ್ ಯಂಗ್ ಎಂಬ ಒಬ್ಬ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯಗಾಥೆ ಕುರಿತು ಓದುತ್ತಿದ್ದೆ. ಈತ ಆಸ್ಟ್ರೇಲಿಯಾದ ಆಲೂಗಡ್ಡೆ ರೈತ. ತನ್ನ ಅರವತ್ತೊಂದನೆ ವಯಸ್ಸಿನಲ್ಲಿ ಅವನಿಗೆ ಅನಿಸಿತು. ತಾನು ಇಲ್ಲಿಯವರೆಗಿನ ಬದುಕನ್ನು ಬರೀ ಅಲೂಗಡ್ಡೆ ಬೆಳೆಯುತ್ತಾ, ಅದರಲ್ಲಿ ಸುಖ ಕಾಣುತ್ತಾ, ಅದಷ್ಟೇ ಜೀವನವೆಂದು ಭಾವಿಸಿ ತನ್ನ ಇಡೀ ಯೌವನವನ್ನು ವ್ಯರ್ಥವಾಗಿ ಕಳೆದುಬಿಟ್ಟೆನಾ ಎಂದು ಅನಿಸಲಾರಂಭಿಸಿತು. ಆತ ಆ ಕ್ಷಣವೇ ನಿರ್ಧರಿಸಿದ. ಮುಂದಿನ ದಿನಗಳನ್ನಾದರೂ ಅತ್ಯಂತ ರೋಚಕವಾಗಿ ಕಳೆಯಬೇಕೆಂದು. ಇನ್ನು ಮಾಡುವ ಸಾಧನೆಯಿಂದ ಜನ ತನ್ನನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಆ ರೀತಿ ನನ್ನ ಸಾಧನೆಯಿರಬೇಕು ಎಂದು ತೀರ್ಮಾನಿಸಿದ.
ಇದಕ್ಕೆ ಕ್ಲಿಫ್ ಯಂಗ್ ಆಯ್ದುಕೊಂಡಿದ್ದು ಮ್ಯಾರಥಾನ್ ಓಟದ ಸ್ಪರ್ಧೆಯನ್ನು. 1983ರಲ್ಲಿ ಆತ ತನ್ನ ಅರವತ್ತೊಂದನೆಯ ವಯಸ್ಸಿನಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಿಂದ ಮೆಲ್ಬೋರ್ನ್ ತನಕ  875 ಕಿಮೀ ಉದ್ದದ ಅಲ್ಟ್ರಾ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲು ನಿರ್ಧರಿಸಿದ! ಆ ಸ್ಪರ್ಧೆಯ ಸಂಘಟಕರು ಅವನನ್ನು ಕೇಳಿದರು – ‘ಈ ವಯಸ್ಸಿನಲ್ಲಿ ಇಂಥ ದುಸ್ಸಾಹಸವೇ? ಸಾಮಾನ್ಯವಾಗಿ ಇಪ್ಪತ್ತರಿಂದ-ಮೂವತ್ತು ವರ್ಷ ವಯಸ್ಸಿನವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಆದರೆ ನಿಮ್ಮ ವಯಸ್ಸನ್ನು ನೋಡಿದರೆ ನಮಗೆ ಆತಂಕವಾಗುತ್ತದೆ. ನಿಮ್ಮ ಆರೋಗ್ಯಕ್ಕೆ ಏನಾದರೂ ಆದರೆ ಏನು ಗತಿ? ದಯವಿಟ್ಟು ಹಠ ಮಾಡಬೇಡಿ. ಈ ಸ್ಪರ್ಧೆ ನಿಮಗಲ್ಲ.’  ಅದಕ್ಕೆ ಕ್ಲಿಫ್ ಯಂಗ್ ಹೇಳಿದ – ‘ನಾನು ಒಬ್ಬ ಸಾಮಾನ್ಯ ರೈತ. ಜೀವನದಲ್ಲಿ ಹಿಂದೆಂದೂ ನಾನು ಇಂಥ ಸ್ಪರ್ಧೆಯಲ್ಲಿ ಭಾಗವಹಿಸಿಲ್ಲ ಅನ್ನೋದು ನಿಜ. ಇತ್ತೀಚೆಗೆ ನನ್ನ ಕುರಿಗಳೆಲ್ಲ ಕಾಣೆಯಾಗಿದ್ದವು. ನಾನು ಮೂರು ದಿನಗಳ ಕಾಲ ನಿದ್ದೆಯನ್ನೂ ಮಾಡದೇ ಓಡುತ್ತಾ ಇದ್ದೆ. ಆಗ ನನಗೆ ಅನಿಸಿತು, ನಾನು ಈ ಓಟದಲ್ಲಿ ಭಾಗವಹಿಸಬಹುದು ಅಂತ. ಅದಕ್ಕಿಂತ ಹೆಚ್ಚಾಗಿ ನಾನು ನನ್ನ ಜೀವನವನ್ನು ವ್ಯರ್ಥವಾಗಿ ಕಳೆದಿದ್ದೇನೆಂದು ನನಗೆ ಈಗ ಅನಿಸುತ್ತಿದೆ. ಇನ್ನು ಮುಂದಿನ ಜೀವನವನ್ನು ರೋಚಕವಾಗಿ ಕಳೆಯಬೇಕೆಂಬುದು ನನ್ನ ಇರಾದೆ. ಅದಕ್ಕಾಗಿ ಈ ಹುಚ್ಚು ಸಾಹಸಕ್ಕೆ ಅಣಿಯಾಗಿದ್ದೇನೆ. ದಯವಿಟ್ಟು ಇಲ್ಲ ಅಂತ ಹೇಳಬೇಡಿ.’
ಮ್ಯಾರಥಾನ್್ನಲ್ಲಿ ಭಾಗವಹಿಸಿದವರು ಪ್ರತಿದಿನ ಹದಿನಾರು ತಾಸು ಓಡಿ, ಎಂಟು ತಾಸು ನಿದ್ದೆ ಮಾಡುತ್ತಾರೆ. ಇದೇ ಕ್ರಮವನ್ನು ಐದು ದಿನಗಳ ಕಾಲ ಅನುಸರಿಸುತ್ತಾರೆ. ಆದರೆ ಕ್ಲಿಫ್ ಯಂಗ್  ಒಂದು ಗಂಟೆ ಸಹ ಮಲಗಲೇ ಇಲ್ಲ. ಸತತ ಮೂರು ದಿನಗಳ ಕಾಲ ಓಡಿದ. ಎಲ್ಲರಿಗಿಂತ ಒಂದೂವರೆ ದಿನ ಮುಂಚೆಯೇ ಗುರಿ ತಲುಪಿದ. ಮೂವತ್ತೈದು ತಾಸುಗಳ ಅಂತರದಲ್ಲಿ ಹಿಂದಿನ ದಾಖಲೆಯನ್ನು ಮುರಿದ.
ಈತನ ಜತೆ ಓಡಿದವರೆಲ್ಲ ಕ್ಲಿಫ್ ಅನ್ನು ಲಘುವಾಗಿ ಪರಿಗಣಿಸಿದ್ದರು. ಈ ಮುದುಕ ಹೆಚ್ಚೆಂದರೆ ಎರಡು ತಾಸು ಓಡಿ ಕಾಲು ಊದಿಸಿಕೊಂಡು ಸುಮ್ಮನೆ ಕುಳಿತುಕೊಳ್ಳಬಹುದು ಎಂದು ಪ್ರತಿಸ್ಪರ್ಧಿಗಳು ಭಾವಿಸಿದ್ದರು. ನಿದ್ದೆಯಿಲ್ಲದೇ ಎರಡು-ಮೂರು ದಿನ ಓಡುವುದು ಸಾಧ್ಯವಿದೆ ಎಂದಾಗ ಯಾರೂ ನಂಬಿರಲಿಲ್ಲ. ಹದಿನಾರು ತಾಸು ಓಡಿದ ಬಳಿಕ ಎಂಟು ತಾಸು ಮಲಗಲೇಬೇಕು ಎಂಬುದು ಎಲ್ಲರ ನಂಬಿಕೆಯಾಗಿತ್ತು. ಆದರೆ ಕ್ಲಿಫ್ ಅವೆಲ್ಲ ನಂಬಿಕೆಗಳನ್ನು ಮುರಿದ. ಅರವತ್ತು ದಾಟಿದವರೂ ಮ್ಯಾರಥಾನ್್ನಲ್ಲಿ ಭಾಗವಹಿಸಬಹುದು ಎಂಬುದನ್ನು ತೋರಿಸಿಕೊಟ್ಟ.
ಕ್ಲಿಫ್ ಬಗ್ಗೆ ಓದುವಾಗ ಆತ ಹೇಳಿದ ಒಂದು ಮಾತು – ‘ನಿಮಗೆ ಸಾಧನೆ ಮಾಡಬೇಕೆಂದೆನಿಸಿದಾಗ ಈಗ ಇರುವ ಸೂತ್ರಗಳ ಹಿಂದೆ ಹೋಗಬೇಡಿ. ನಿಮ್ಮ ಸೂತ್ರವೇನು ಎಂಬುದನ್ನು ನಿರ್ಧರಿಸಿ. ಅದೇನು ಎಂಬುದು ನಿಮಗೆ ಮಾತ್ರ ಗೊತ್ತಿರಲು ಸಾಧ್ಯ.’
ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಜಾಕ್ ಕೇನ್್ಫೀಲ್ಡ್್ನ ಸಂದರ್ಶನ ಓದುತ್ತಿದ್ದೆ. ಇವನ ಹೆಸರನ್ನು ಕೇಳಿದರೆ ತಟ್ಟನೆ ಇವನ್ಯಾರೆಂದು ಗೊತ್ತಾಗಲಿಕ್ಕಿಲ್ಲ. ಆದರೆ ಈತ ಬರೆದ ಪುಸ್ತಕಗಳ ಹೆಸರನ್ನು ಹೇಳಿದರೆ, ಸಂಶಯವೇ ಇಲ್ಲ, ನಿಮಗೆ ಗೊತ್ತಾಗುತ್ತದೆ. ಅಂದ ಹಾಗೆ ಈತ ಬರೆದ ಪುಸ್ತಕದ ಹೆಸರು  chicken soup for the soul.ಇಲ್ಲಿ ತನಕ ಈ ಪುಸ್ತಕದ ಎಷ್ಟು ಪ್ರತಿಗಳು ಜಗತ್ತಿನಾದ್ಯಂತ ಎಷ್ಟು ಮಾರಾಟವಾಗಿವೆ ಎಂಬುದು ಯಾರಿಗೂ ಗೊತ್ತಿಲ್ಲ. ಮಿಲಿಯನ್, ಬಿಲಿಯನ್ ಬಿಡಿ, ಗ್ಯಾಜಿಲಿಯನ್್ಗಳಲ್ಲಿ ಲೆಕ್ಕ ಹಾಕಬೇಕು. ಓದುಗರನ್ನು ತಟ್ಟನೆ ಆಕರ್ಷಿಸುವುದಕ್ಕೆ ಅದರ ಹೆಸರೂ ಒಂದು ಕಾರಣ. ಈ ಪುಸ್ತಕ ಬರೆದಾಗ ಅದಕ್ಕೆ ಹೆಸರೇನಿಡಬೇಕೆಂದು ಆತ ತಿಂಗಳುಗಟ್ಟಲೆ ತಲೆಕೆಡಿಸಿಕೊಂಡಿದ್ದನಂತೆ. ‘ಚಿಕನ್ ಸೂಪ್ ಫಾರ್ ದಿ ಸೋಲ್್’ ಎಂಬ ಹೆಸರಿನಲ್ಲಿ ಬೇರೆ ಬೇರೆ ವಿಷಯಗಳಿಗೆ ಸೇರಿದ ಅನೇಕ ಕೃತಿಗಳು ಹೊರಬಂದಿವೆ.
ಮೊದಲ ಬಾರಿಗೆ ಈ ಪುಸ್ತಕವನ್ನು ಬರೆದಾಗ ಯಾವ ಪ್ರಕಾಶಕನೂ ಅದನ್ನು ಪ್ರಕಟಿಸಲು ಮುಂದೆ ಬರಲಿಲ್ಲ. ಒಬ್ಬರು ಇಬ್ಬರಾಗಿದ್ದರೆ ಪರವಾಗಿರಲಿಲ್ಲ. ಜಾಕ್ ಸುಮಾರು 140 ಪ್ರಕಾಶಕರಿಗೆ ಹಸ್ತಪ್ರತಿಗಳನ್ನು ತೋರಿಸಿದ. ಅವರ್ಯಾರೂ ಈ ಪುಸ್ತಕದ ಬಗ್ಗೆ ಸ್ವಲ್ಪವೂ ಉತ್ಸಾಹ ತೋರಲಿಲ್ಲ. ಆದರೆ ಜಾಕ್ ಸುಮ್ಮನಾಗಲಿಲ್ಲ. ಬೇರೆಯವರಾಗಿದ್ದರೆ, ಪುಸ್ತಕದ ಹಸ್ತಪ್ರತಿಯನ್ನು ‘ತೂಕ’ಕ್ಕೆ ಹಾಕಿ ಕೈತೊಳೆದುಕೊಳ್ಳುತ್ತಿದ್ದರು. ಆದರೆ ಜಾಕ್್ಗೆ ತನ್ನ ಕೃತಿಯ ಬಗ್ಗೆ ವಿಶ್ವಾಸವಿತ್ತು. ಇಂಥದ್ದೊಂದು ಪ್ರಯತ್ನವನ್ನು ಯಾರೂ ಮಾಡಿಯೇ ಇಲ್ಲ ಎಂಬ ಬಗ್ಗೆ ಹೆಮ್ಮೆಯೂ ಇತ್ತು. ಹೀಗಾಗಿ ಆತ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ತನ್ನ ಯೋಚನೆ ಅರ್ಥವಾಗುವ ತನಕ ಈ ಸಮಸ್ಯೆ ಇದ್ದೇ ಇರುತ್ತದೆ, ಆನಂತರ ಎಲ್ಲ ಸರಿ ಹೋಗುತ್ತದೆ ಎಂದೇ ಆತ ಭಾವಿಸಿದ್ದ. ಹಾಗೇ ಆಯಿತು. ಆತನ ಎಣಿಕೆ ನಿಜವಾಗಿತ್ತು.
ಮೊದಲ ಕೃತಿಯ ಕೊನೆಯಲ್ಲಿ ಜಾಕ್ ಬರೆದಿದ್ದ- ‘ನಿಮ್ಮ ಬಳಿ ಬೇರೆಯವರೊಂದಿಗೆ ಹಂಚಿಕೊಳ್ಳುವ ಅದ್ಭುತವೆನಿಸುವ ಕತೆಗಳಿದ್ದರೆ, ಪ್ರಸಂಗಗಳಿದ್ದರೆ, ನೈಜ ಘಟನೆಗಳಿದ್ದರೆ ಅವುಗಳನ್ನೆಲ್ಲ ನಮಗೆ ಕಳಿಸಿಕೊಡಿ. ಅವನ್ನೆಲ್ಲ ಎರಡನೆ ಪುಸ್ತಕದಲ್ಲಿ ಸೇರಿಸುತ್ತೇನೆ.’
ಜಾಕ್ ಕನಸು -ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ದಿನಕ್ಕೆ 200ಕ್ಕೂ ಹೆಚ್ಚು ಕತೆಗಳು ಬರಲಾರಂಭಿಸಿದವು. ಅವುಗಳನ್ನೆಲ್ಲ ಸೇರಿಸಿ ‘ಚಿಕನ್ ಸೂಪ್ ಫಾರ್ ದಿ ಸೋಲ್್’ ಹೆಸರಿನಡಿಯಲ್ಲಿ ಪ್ರಕಟಿಸಲಾರಂಭಿಸಿದ. ಇಲ್ಲಿ ತನಕ ಇದೇ ಶೀರ್ಷಿಕೆಯಡಿಯಲ್ಲಿ ಇನ್ನೂರಕ್ಕೂ ಹೆಚ್ಚು ವಿಷಯಗಳ ಕುರಿತ ಪುಸ್ತಕಗಳು ಪ್ರಕಟವಾಗಿವೆ. ಒಂದೊಂದು ಪುಸ್ತಕ ಐದು-ಹತ್ತು ಕೋಟಿ ಪ್ರತಿಗಳು ಮಾರಾಟವಾಗಿವೆ. ಇಂದು ‘ಚಿಕನ್ ಸೂಪ್…’ ಕೇಳದವರಿಲ್ಲ.
‘ಸಾಧನೆ, ಯಶಸ್ಸಿನ ಮಜಾ ಏನೆಂಬುದು ಅದರ ರುಚಿ ಹತ್ತಿಸಿಕೊಂಡವರಿಗೆ ಮಾತ್ರ ಗೊತ್ತು. ನೀವು ಏನನ್ನೂ ಸಾಧಿಸದಿದ್ದಾಗ ಸಾಲ ಕೊಡಲು ಯಾವ ಬ್ಯಾಂಕೂ ಮುಂದೆ ಬರುವುದಿಲ್ಲ. ಒಮ್ಮೆ ನೀವು ಗೆಲ್ಲುವ ಕುದುರೆ ಎಂಬುದು ಗೊತ್ತಾದರೆ, ಸಾವಿರಾರು ಮಂದಿ ಸಾಲ ಕೊಡಲು, ನಿಮ್ಮ ಮೇಲೆ ಹಣ ಹೂಡಲು ಮುಂದೆ ಬರುತ್ತಾರೆ. ಗೆಲುವು ಆಕಸ್ಮಿಕವಾಗಬಾರದು. ಅದೊಂದು ಚಟವಾಗಬೇಕು. ಅದರ ಆನಂದವೇನೆಂಬುದನ್ನು ಅನುಭವಿಸಿದವನೇ ಬಲ್ಲ’ ಅಂತಾನೆ ಜಾಕ್.
ಹೌದು, ಗೆಲುವಿನಂಥ ಚಟ ಇನ್ನೊಂದಿಲ್ಲ. ಈ ‘ದುರಭ್ಯಾಸ’ವನ್ನು ರೂಢಿಸಿಕೊಳ್ಳಬೇಕು!